
ಫೆಬ್ರವರಿ 14 ಎಂದ ತಕ್ಷಣ ಇಂದಿನ ಯುವ ಜನಾಂಗಕ್ಕೆ ನೆನಪಿಗೆ ಬರುವುದೇ ಪ್ರೇಮಿಗಳ ದಿನ ಹಾಗಾಗಿ ಗುಲಾಬಿ ಹಿಡಿದು ತಮ್ಮ ಪ್ರೇಮಿಗಳಿ ಸೆರಗು ಸುತ್ತುವುದರಲ್ಲೇ ಸಮಯ ಕಳೆಯುತ್ತಿದ್ದರೆ, ನಿಜವಾದ ಭಾರತೀಯರಿಗೆ ಮಾತ್ರಾ ಈ ದಿನ ಅತ್ಯಂತ ಕರಾಳ ದಿನವಾಗಿದ್ದು, 2019ರಂದು ಇದೇ ದಿನ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದ ವಾಹನಕ್ಕೆ ಪುಲ್ವಾಮಾ ಜಿಲ್ಲೆಯ ಅವಂತಿಪುರದ ಬಳಿಯ ಲೆಥೋರ್ ಪುರದಲ್ಲಿ ಆತ್ಮಹತ್ಯಾ ಬಾಂಬರ್ ವಾಹನದಿಂದ ನಡೆಸಿದ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಮಂದಿ ಹುತಾತ್ಮರಾದ ದಿನವಾದ ಕಾರಣ, ಅದು ನೈಜ ಭಾರತೀಯರಿಗೆ ದೇಶಪ್ರೇಮಿಗಳ ದಿನವಾಗಿದೆ ಎಂದರೂ ತಪ್ಪಾಗದು.
2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಕಾಶ್ಮೀರದ ಉಗ್ರಗಾಮಿಗಳು ಮತ್ತು ಅವರನ್ನು ಬೆಂಬಲಿಸುತ್ತಿದ್ದ ಹುರಿಯತ್ ಕಾನ್ಫರೆನ್ಸ್ ನಾಯಕರ ಓಲೈಕೆಯನ್ನು ನಿಲ್ಲಿಸಿದ್ದೇ ಪಾಕೀಸ್ಥಾನಿ ಉಗ್ರಗಾಮಿಗಳ ಕಿಚ್ಚನ್ನು ಹೆಚ್ಚಿಸಿ, 2015ರ ಆರಂಭದಲ್ಲಿ, ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಭಾರತೀಯ ಭದ್ರತಾ ಪಡೆಗಳ ವಿರುದ್ಧ ಆತ್ಮಹತ್ಯೆ ದಾಳಿ ನಡೆಸಿದ್ದಲ್ಲದೇ, ಜುಲೈ 2015 ರಲ್ಲಿ, ಗುರದಾಸ್ ಪುರದಲ್ಲಿ ಬಸ್ ಮತ್ತು ಪೊಲೀಸ್ ಠಾಣೆಯ ಮೇಲೆ ಮೂರು ಮುಸುಕುಧಾರಿ ಬಂದೂಕುದಾರಿಗಳು ದಾಳಿ ಮಾಡಿದ್ದರು. 2016 ರ ಆರಂಭದಲ್ಲಿ 4-6 ಬಂದೂಕುದಾರಿಗಳು ಪಠಾನ್ ಕೋಟ್ ಏರ್ ಫೋರ್ಸ್ ಸ್ಟೇಷನ್ ಮೇಲೆಯೂ ಆಕ್ರಮಣ ಮಾಡಿದ್ದರು . ಫೆಬ್ರವರಿ ಮತ್ತು ಜೂನ್ 2016 ರಲ್ಲಿ, ಉಗ್ರಗಾಮಿಗಳು ಕ್ರಮವಾಗಿ 9 ಮತ್ತು 8 ಭದ್ರತಾ ಸಿಬ್ಬಂದಿಗಳನ್ನು ಪಾಂಪೋರ್ನಲ್ಲಿ ಕೊಂದಿದ್ದರು. ಸೆಪ್ಟೆಂಬರ್ 2016 ರಲ್ಲಿ, ನಾಲ್ಕು ಆಕ್ರಮಣಕಾರರು ಉರಿ ಯಲ್ಲಿ ಭಾರತೀಯ ಸೈನ್ಯದ ಬ್ರಿಗೇಡ್ ಪ್ರಧಾನ ಕಾರ್ಯಾಲಯದಲ್ಲಿ 19 ಸೈನಿಕರನ್ನು ಕೊಂದ್ದಿದ್ದರು. 2017ರ ಡಿಸೆಂಬರ್ 31 ರಂದು, ಲೆಥ್ಪಾರದಲ್ಲಿನ ಕಮಾಂಡೋ ತರಬೇತಿ ಕೇಂದದಲ್ಲಿ ಉಗ್ರಗಾಮಿಗಳು 5 ಭದ್ರತಾ ಸಿಬ್ಬಂದಿಯನ್ನು ಕೊಲ್ಲುವ ಮೂಲಕ ಪದೇ ಪದೇ ಭಾರತೀಯ ಸೈನಿಕರ ಮೇಲೆ ಧಾಳಿ ನಡೆಸಿ ಸಣ್ಣ ಪ್ರಮಾಣದಲ್ಲಿ ಆತಂಕವನ್ನು ಉಂಟು ಮಾಡುತ್ತಲೇ ಇದ್ದರು.

ಆದರೆ 2019 ರ ಫೆಬ್ರುವರಿ 14 ರಂದು, ಜಮ್ಮುವಿನಿಂದ ಶ್ರೀನಗರಕ್ಕೆ 2,500 ಕ್ಕಿಂತ ಹೆಚ್ಚು ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ಸಿಬ್ಬಂದಿಗಳು 78 ವಾಹನಗಳಲ್ಲಿ ಪ್ರಯಾಣಿಸುತಿದ್ದ ವಿಷಯವನ್ನು ಅರಿತ ಉಗ್ರಗಾಮಿಗಳ ತಂಡ ಮಧ್ಯಾಹ್ನ ಸುಮಾರು 3:15ಕ್ಕೆ ಅವಾಂತಿಪುರ ಬಳಿಯ ಲೆತ್ಪೊರ ದಲ್ಲಿ ಸಾಲು ಸಾಲಾಗಿ ಭದ್ರತಾ ಸಿಬ್ಬಂದಿಗಳು ಹೋಗುತ್ತಿದ್ದ ವಾಹನಕ್ಕೆ ಸ್ಪೋಟಕಗಳನ್ನು ಹೊತ್ತಿದ್ದ ಮಾರುತಿ ಇಕೋ ಕಾರೊಂದು ಏಕಾಏಕೀ ಎಲ್ಲಾ ಭದ್ರತೆಗಳನ್ನು ವಿಭಜಿಸಿಕೊಂಡು ಏಕಾ ಏಕಿ ಗುದ್ದಿದಾಗ ಅದರಲ್ಲಿದ್ದ ಬಾಂಬ್ ಗಳು ಸ್ಪೋಟಗೊಂಡು, 76ಬೆಟಾಲಿಯನ್ ನ 40 ಮೀಸಲು ಪಡೆಯ ಯೋಧರು ಹುತಾತ್ಮರಾದರು.

ಅಚಾನಕ್ಕಾಗಿ ಈ ಪರಿಯ ಯೋಧರನ್ನು ಕಳೆದುಕೊಂಡಿದ್ದಕ್ಕೆ ಇಡೀ ದೇಶವೇ ಒಂದು ಕ್ಷಣ ಧಿಗ್ಭ್ರಮೆಗೆ ಒಳಗಾಗಿದ್ದಲ್ಲದೇ, ಈ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಪಕ್ಷಭೇದ ಮರೆತು ರಾಜಕೀಯ ನಾಯಕರು, ಸಮಾಜದ ಗಣ್ಯರು ಈ ಘಟನೆಯನ್ನು ಖಂಡಿಸಿದ್ದರು.

ಪ್ರಧಾನಿ ನರೇಂದ್ರ ಮೋದಿಯವರಂತೂ ಈ ದಾಳಿಯನ್ನು ಬಲವಾಗಿ ಖಂಡಿಸಿದ್ದಲ್ಲದೇ, ಈ ದಾಳಿ ನನ್ನ ಹೃದಯದ ರಕ್ತವನ್ನು ಕುದಿಸಿದೆಯಲ್ಲದೇ, ನಾವೂ ಸಹಾ ಅದೇ ರೀತಿಯ ಪ್ರತಿ ದಾಳಿ ಮಾಡಬೇಕೆಂಬ ಆಕ್ರೋಶ ಹೆಚ್ಚುತ್ತಿದೆ ಎಂದಿದ್ದಲ್ಲದೇ, ನಮ್ಮ ಯೋಧರನ್ನು ಕಳೆದುಕೊಂಡ ದುಃಖದ ಕಣ್ಣೀರಿಗೆ ಪ್ರತೀಕಾರವನ್ನು ಖಂಡಿತವಾಗಿಯೂ ತೀರಿಸುತ್ತೇವೆ ಎಂದಿದ್ದರು. ಆದಾದ ನಂತರ ಉಗ್ರಗಾಮಿಗಳು ಮತ್ತು ಶತ್ರುಗಳ ಜೊತೆ ಪ್ರತೀಕಾರ ತೀರಿಸಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು ಮಹತ್ತರವಾದ ಬದಲಾವಣಿಯಾಗಿತ್ತು.





