ಸ್ಯಾಂಡಲ್ವುಡ್ ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ ವಿರುದ್ಧ 3.85 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದೆ. ಈ ಸಂಬಂಧ ನಟ ಭಾಸ್ಕರ್ ಶೆಟ್ಟಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಈ ಪ್ರಕರಣ ಸಂಬಂಧ ವಾಸುದೇವರೆಡ್ಡಿ, ಭಾಸ್ಕರ್ ಶೆಟ್ಟಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಎಂಬುವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ʻಫೀನಿಕ್ಸ್’ ಸಿನಿಮಾ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಒಟ್ಟು 3 ಕೋಟಿ 85 ಲಕ್ಷ ಹಣ ಪಡೆದು, ಹಣ ವಾಪಸ್ ನೀಡದೇ ವಂಚಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಹಣ ವಾಪಸ್ ಕೇಳಲು ಮನೆಗೆ ತೆರಳಿದ್ದ ಸಂದರ್ಭದಲ್ಲಿ ದೂರುದಾರರಿಗೆ ಬೆದರಿಕೆ ಕೂಡ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ದೂರಿನ ಪ್ರಕಾರ, ಭಾಸ್ಕರ್ ಅವರು ಈ ಹಿಂದೆ ನಟ ದರ್ಶನ್ ಅವರ 'ಯೋಧ' ಚಿತ್ರದಲ್ಲಿ ಓಂ ಪ್ರಕಾಶ್ ರಾವ್ ಅವರೊಂದಿಗೆ ಕೆಲಸ ಮಾಡಿದ್ದರು. 'ಫೀನಿಕ್ಸ್' (Phoenix) ಸಿನಿಮಾ ನಿರ್ಮಾಣಕ್ಕಾಗಿ ಈ ಹಣವನ್ನು ಕೋರಲಾಗಿತ್ತು ಎಂದು ವರದಿಯಾಗಿದೆ. ಈ ಹಣವನ್ನು ಕೇವಲ ವೈಯಕ್ತಿಕ ಸಾಲವಾಗಿ ಪಡೆದಿರಲಿಲ್ಲ; ಬದಲಿಗೆ, ಆ ಚಿತ್ರದ ನಿರ್ಮಾಣಕ್ಕೆ ಆರ್ಥಿಕ ಬೆಂಬಲ ನೀಡುವಂತೆ ಭಾಸ್ಕರ್ ಅವರನ್ನು ಕೋರಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 3.85 ಕೋಟಿ ರೂ.ಗಳಷ್ಟು ವಂಚನೆ ನಡೆದಿದೆ ಎನ್ನಲಾಗಿದೆ.
ಭಾಸ್ಕರ್ ಶೆಟ್ಟಿ ಅವರಿಂದ 40 ಲಕ್ಷ ರೂ.ಗಳನ್ನು ಪಡೆಯಲಾಗಿತ್ತು ಮತ್ತು ವಾಸುದೇವ ಎಂಬುವವರಿಂದ 3 ಕೋಟಿ ರೂ.ಗಿಂತ ಹೆಚ್ಚಿನ ಹಣ ಪಡೆಯಲಾಗಿತ್ತು. ಈ ಹಣ ವಾಪಸ್ ಕೇಳಿದಾಗ ಅದನ್ನು ಮರುಪಾವತಿಸಿದೆ, ವಂಚಿಸಿದ್ದಾರೆ ಎಂದು ದೂರಿದ್ದಾರೆ.
ಹಣ ಮರುಪಾವತಿಯ ಬಗ್ಗೆ ವಿಚಾರಿಸಲು ನಿರ್ದೇಶಕರ ನಿವಾಸಕ್ಕೆ ಹೋದಾಗ ತಮ್ಮನ್ನು ನಿಂದಿಸಿ, ಅವಮಾನಿಸಲಾಯಿತು ಎಂದೂ ಅವರು ಆರೋಪಿಸಲಾಗಿದೆ.
ಈ ಕುರಿತು ಮಾತನಾಡಿರುವ ನಿರ್ದೇಶಕ ಓಂ ಪ್ರಕಾಶ್ ರಾವ್, “ನಾನು ದುಡ್ಡು ತಕ್ಕೊಂಡು, ಸಾಲ ಮಾಡಿ ಸಿನಿಮಾ ಮಾಡುವವನು, ಅಡ್ಜಸ್ಟ್ಮೆಂಟ್ ಎನ್ನುವುದು ನನ್ನ ಜೀವನದಲ್ಲೇ ಇಲ್ಲ. ನನಗೆ ಸಿನಿಮಾ ಮೇಲೆ ಅಪಾರ ಪ್ರೀತಿಯಿದೆ. ಅದಕ್ಕಾಗಿ ನಾನು ಈ ರೀತಿ ಇದ್ದೇನೆ” ಎಂದಿದ್ದಾರೆ.
ಈ ಚಿತ್ರಕ್ಕೆ ನಾನು ನಿರ್ಮಾಪಕ. ನಾನು ಕಷ್ಟಪಟ್ಟು, ನನ್ನ ಸ್ನೇಹಿತರ ವಲಯದಿಂದ ದುಡ್ಡು ತೆಗೆದುಕೊಂಡು ಬಂದಿದ್ದೇನೆ. ಇದರಲ್ಲಿ ನನ್ನ ಹೆಂಡತಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಅವರ ಅಕೌಂಟ್ ಹಣ ಹಾಕಿದ್ದಾರೆ. ಅದನ್ನು ನಾನೇ ಹಾಕಿಸಿದ್ದು, ಅದಕ್ಕೆ ನಾನೇ ಹೊಣೆ. ನನ್ನ ಹೆಂಡತಿ ಮತ್ತು ಮಗ ಇದಕ್ಕೆ ಕಾರಣವಲ್ಲ. ನಾನು ಸಿನಿಮಾ ಮಾಡೇ ಮಾಡುತ್ತೇನೆ. ಎಲ್ಲಾ ಸರಿಯಾಗಬೇಕು ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.





