ಎರಡು ಬೇರೆ ಬೇರೆ ಸಂಸ್ಕೃತಿಯಿಂದ ಬಂದ ನನ್ನ ತಾಯಿ ಹಾಗೂ ತಂದೆ ವಿವಾಹವಾದಾಗ, ಅವರು ಎಲ್ಲವನ್ನೂ ತೊರೆದು ತಮ್ಮ ಕುಟುಂಬ ನೆಲೆಯಾಗಿಸಿಕೊಳ್ಳಲು ಬಹಳಷ್ಚು ತೊಂದರೆಗಳನ್ನು ಎದುರಿಸಬೇಕಾಯಿತು......''
ಅದು 1975ರ ಮಾತು. ಆಗ ಸಂಧ್ಯಾ ಸಿನ್ಹಾ ಬಿಹಾರದಲ್ಲಿ ವಾಸಿಸುತ್ತಿದ್ದರು ಮತ್ತು ಎ.ಎ.ಎಸ್ನ ಸಿದ್ಧತೆ ನಡೆಸಿದ್ದರು. ಆಗ ಅವರ ತಾಯಿ ಸಂಧ್ಯಾಗೆ ಹೇಳಿದ್ದೇನೆಂದರೆ, ``ನೀನು ಐಎಎಸ್ ಅಧಿಕಾರಿ ಆಗುವ ಬದಲು ವಿಕಲಚೇತನರಿಗಾಗಿ ಏನನ್ನಾದರೂ ಮಾಡು,'' ಎಂದು ಸಲಹೆ ನೀಡಿದರು. ಅಂದಹಾಗೆ ಸಂಧ್ಯಾ ಅವರ ಅಮ್ಮ ಓರ್ವ ವಿಕಲಚೇತನರಾಗಿದ್ದರು. ಅವರು ಲಾಹೋರ್ ನ ಸೇಂಟ್ ಮೇರಿಯಲ್ಲಿ ಓದಿದ್ದರು. ಆದರೆ ದೈಹಿಕವಾಗಿ ನಿಶ್ಶಕ್ತರಾಗಿದ್ದರಿಂದ ಅವರಿಗೆ ಶಿಕ್ಷಕಿಯ ನೌಕರಿ ಸಿಗಲಿಲ್ಲ. ಅವರ ಅರ್ಧ ದೇಹ ಲಕ್ವಾಗ್ರಸ್ತವಾಗಿತ್ತು. ಆದರೂ ಅವರು ಬಹಳ ಪ್ರಯತ್ನಪಟ್ಟು 3 ಮಕ್ಕಳನ್ನು ಬೆಳೆಸಿ, ಓದಿಸಿದರು. ಮೂವರು ದೊಡ್ಡವರಾದಾಗ ಅವರು ತಮ್ಮ ನೋವನ್ನು ಮಕ್ಕಳ ಮುಂದೆ ಹಂಚಿಕೊಂಡರು.
ಸಂಧ್ಯಾರಿಗೆ ಅವರ ಅಮ್ಮ, ``ನೀನು ಯಾವುದೋ ಒಂದು ಉದ್ಯೋಗ ಪಡೆಯಬೇಕು ಎಂದುಕೊಂಡಿರುವೆ. ನಾನು ಬಯಸುವುದೇನೆಂದರೆ, ನೀನು ನಮ್ಮಂಥವರಿಗಾಗಿ ಏನನ್ನಾದರೂ ಮಾಡು. ಯಾರು ಓದಿದ್ದಾರೊ, ಧೈರ್ಯ ಹೊಂದಿದ್ದಾರೊ, ಆದರೆ ವಿಕಲ ಚೇತನರಾಗಿರುವ ಕಾರಣದಿಂದ ಅವರಿಗೆ ಅವಕಾಶ ಸಿಕ್ಕಿರಲಿಕ್ಕಿಲ್ಲ. ಅಂಥವರಿಗಾಗಿ ಏನನ್ನಾದರೂ ಮಾಡು. ನಮ್ಮ ದೇಹವೇನೊ ಡ್ಯಾಮೇಜ್ ಆಗಿದೆ. ಅದಕ್ಕೆ ಮೇಲಾಗಿ ಸಮಾಜದ ವ್ಯಂಗ್ಯದ ಮಾತುಗಳಿಂದ ಮನಸ್ಸು ಕೂಡ ಘಾಸಿಯಾಗುತ್ತದೆ. ಹೀಗಾಗಿ ನಾವು ಎಲ್ಲಿಯೇ ಹೋಗಬೇಕೆಂದರೂ ಹಿಂದೇಟು ಹಾಕುತ್ತೇವೆ. ಅಂಥವರಿಗಾಗಿ ನೀನು ಮುಂದೆ ಬರಬೇಕು,'' ಎಂದು ಹೇಳಿದರು.
ಸಂಧ್ಯಾರ ಯುವ ಮನಸ್ಸಿನ ಮೇಲೆ ಆ ಮಾತುಗಳು ಗಾಢ ಪರಿಣಾಮ ಬೀರಿದವು. ನಿಜ ಹೇಳಬೇಕೆಂದರೆ, ಆ ದಿನಗಳಲ್ಲಿ ವಿಕಲಚೇತನರಿಗಾಗಿ ಯಾವುದೇ ಸೌಲಭ್ಯಗಳಿರಲಿಲ್ಲ. ಅವರು ಬಾಲ್ಯದಿಂದಲೇ ಅಮ್ಮನ ಕಷ್ಟ ಕಾರ್ಪಣ್ಯಗಳನ್ನು ಕಂಡಿದ್ದರು. ಅಮ್ಮನ ಹೇಳಿಕೆಯ ಮೇರೆಗೆ ಅಂಥ ಜನರಿಗಾಗಿ ಕೆಲಸ ಮಾಡಲು ಸಂಧ್ಯಾ ಮನಸ್ಸಲ್ಲಿಯೇ ನಿರ್ಧರಿಸಿದರು. ಆ ಬಳಿಕ ಆ ಕೆಲಸದಲ್ಲಿಯೇ ತೊಡಗಿಕೊಂಡರು.
``ನನ್ನ ಅಮ್ಮ ಹಾಗೂ ಅಪ್ಪ ನನಗೆ ಪ್ರೇರಣೆ ಆಗಿದ್ದಾರೆ. ಅಮ್ಮ ವಿಕಲಚೇತನ ಮಹಿಳೆ. ಅಪ್ಪ ರಾವ್ ಬಹಾದ್ದೂರ್ ಸಾಹೇಬರ ಮಗ. ನನ್ನ ತಾಯಿಯ ತಂದೆ ಸಾಕಷ್ಟು ಓದಿದವರಾಗಿದ್ದರು. ಅವರು ಪಟಿಯಾಲಾ ಮಹಾರಾಜರ ಬಳಿ ಚೀಫ್ ಎಂಜಿನಿಯರ್ ಆಗಿದ್ದರು. ಅವರು ಬಾಕ್ರಾ ನಂಗಾಲ್ ಡ್ಯಾಮ್ ಚೀಫ್ ಎಂಜಿನಿಯರ್ ಆಗಿ ಡ್ಯಾಮ್ ಗೆ ಅಂತಿಮ ರೂಪ ಕೊಟ್ಟಿದ್ದರು. ನನ್ನ ತಂದೆ ಬಿಹಾರದ ಜಮೀನುದಾರರೊಬ್ಬರ ಮಗನಾಗಿದ್ದು, ಅವರಿಗೆ ರಾವ್ ಬಹಾದ್ದೂರ್ ಬಿರುದು ಸಿಕ್ಕಿತ್ತು. ಓದು ಬರಹದಲ್ಲಿ ಅವರಿಗೂ ಆಸಕ್ತಿ ಇರಲಿಲ್ಲ ಎರಡು ವಿಭಿನ್ನ ಸಂಸ್ಕೃತಿಯ ಹಿನ್ನೆಲೆಯಿಂದ ಬಂದ ನನ್ನ ತಂದೆ ಹಾಗೂ ತಾಯಿ, ವಿವಾಹವಾದಾಗ, ಎಲ್ಲವನ್ನೂ ಬಿಟ್ಟುಕೊಟ್ಟು ತಮ್ಮ ಕುಟುಂಬ ನೆಲೆ ಕಂಡುಕೊಳ್ಳಲು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗಿ ಬಂತು.''
ಹೊಸ ಜೀವನದ ಆರಂಭ
ಸಂಧ್ಯಾ 7ನೇ ತರಗತಿಯಲ್ಲಿದ್ದಾಗ `ಫಾದರ್ ಡೆಮಿಯನ್' ಎಂಬ ನಾಟಕ ನೋಡಿದ್ದರು. ಅದರಲ್ಲಿ ಡೆಮಿಯನ್ ಕುಷ್ಠರೋಗಿಗಳ ಸೇವೆಯಲ್ಲಿ ನಿರತರಾದ ವ್ಯಕ್ತಿ. ಕುಷ್ಠರೋಗಿಗಳ ಮಧ್ಯೆ ಇದ್ದೂ ಇದ್ದೂ ಅವರೇ ಕುಷ್ಠರೋಗಿಯಾಗಿ ತೀರಿಕೊಂಡರು. ಆದರೆ ಹಲವು ರೋಗಿಗಳ ಜೀವನ ಸುಧಾರಣೆ ಆಯಿತು. ಈ ನಾಟಕ ಸಂಧ್ಯಾ ಮನಸ್ಸಿನ ಮೇಲೆ ಎಂತಹ ಪರಿಣಾಮ ಬೀರಿತೆಂದರೆ, ಅವರು ಕುಷ್ಠರೋಗಿಗಳಿರುವ ಕಡೆ ಹೋಗಿ ಕೆಲಸ ಮಾಡಿದರು. ಗಯಾದ ಒಂದು ಹಳ್ಳಿಗೆ ಹೋಗಿ ಕೆಲಸ ಮಾಡುತ್ತಿರುವ ಬಗ್ಗೆ ಮನೆಯಲ್ಲಿ ಹೇಳಿದಾಗ, ಸಂಧ್ಯಾರನ್ನೇ ಪ್ರತ್ಯೇಕವಾಗಿ ಇಡಲಾರಂಭಿಸಿದರು.