ಯಾವುದೇ ಒಂದು ದೇಶದ ಪ್ರಗತಿಗೆ ಆ ದೇಶದ ಪ್ರಜೆಗಳು ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತಾರೆ, ಹಾಗಾಗಿ ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎನ್ನುವ ಮಾತೂ ಸಹಾ ಪ್ರಚಲಿತದಲ್ಲಿದ್ದು, ಹಾಗಾಗಿ ಅಂತಹ ಮಕ್ಕಳಿಗೆ ಉತ್ತಮವಾದ ಶಿಕ್ಷಣದ ಜೊತೆ ಒಳ್ಳೆಯ ಸಂಸ್ಕಾರವನ್ನೂ ನೀಡುವುದು ಶಿಕ್ಷಣ ಸಂಸ್ಥೆಯ ಕರ್ತವ್ಯವಾಗಿರುತ್ತದೆ ಎಂದರೂ ತಪ್ಪಾಗದು. ದುರಾದೃಷ್ಟವಷಾತ್ ಪ್ರಸ್ತುತ ದೇಶದಲ್ಲಿ ಶಿಕ್ಷಣ ಸಂಸ್ಥೆಗಳೇ ವ್ಯಾಪಾರ ಕೇಂದ್ರಗಳಾಗಿರುವಾಗ 50ರ ದಶಕದಲ್ಲಿ ಸಮಾಜದ ಎಲ್ಲಾ ಸ್ಥರದ ಮಕ್ಕಳಿಗೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣದ ಹೊತೆಗೆ ಒಳ್ಳೆಯ ಸಂಸ್ಕಾರ ಮತ್ತು ಜೀವನದ ಮೌಲ್ಯಗಳನ್ನು ಕಲಿಸಿಕೊಡುವ ಸಲುವಾಗಿ ಮಲ್ಲೇಶ್ವರಂ ಶಿಶುವಿಹಾರವನ್ನು ಸ್ಥಾಪಿಸಿದ ಶ್ರೇಷ್ಠ ಶಿಕ್ಷಣ ತಜ್ಞೆ ಶ್ರೀಮತಿ ಬಿ.ಕೆ. ತಿರುಮಲಮ್ಮ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
1932 ರಲ್ಲಿ ಕಾವೇರಿ ನದಿಯ ಅಡ್ಡಲಾಗಿ ಕನ್ನಂಬಾಡಿಯಲ್ಲಿ ಶ್ರೀ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಿಸಿ, ಅಲ್ಲಿಂದ ಮಂಡ್ಯ ಜಿಲ್ಲೆಯ ಕಾಳೇನಹಳ್ಳಿಯ ಹುಲಿಕೆರೆ ಎಂಬ ಸಣ್ಣ ಗ್ರಾಮಕ್ಕೆ ಕೃಷಿ ಚಟುವಟಿಕೆಗಾಗಿ ನೀರನ್ನು ಹರಿಸಲು ಯೋಜಿಸಿದಾಗ, ಮಧ್ಯೆ ಅಡ್ಡ ಬಂದ ಗುಡ್ಡಕ್ಕೆ ಸುರಂಗವನ್ನು ಕೊರೆಯಲು ಸ್ಥಳೀಯರಿಂದ ಆಗದು ಎಂದು ಭಾವಿಸಿ ದೂರದ ಅಫ್ಘಾನಿಸ್ಥಾನದಿಂದ ಘಟಾನುಘಟಿ ಕೂಲಿ ಆಳುಗಳನ್ನು ಕರೆಸಿ, ಸುರಂಗವನ್ನು ಕೊರೆಸಲು ವಿನ್ಯಾಸ ಗೊಳಿಸಿದವರು ಸರ್ ಎಂ ವಿಶ್ವೇಶ್ವರಯ್ಯನವರು, ಅ ಯೋಜನೆಯ ಸಂಪೂರ್ಣ ಜವಾಬ್ಧಾರಿಯನ್ನು ಶ್ರೀ. ಬಿ ಕೃಷ್ಣಸ್ವಾಮಿ ಅಯ್ಯಂಗಾರ್ ಎಂಬ ಎಂಜಿನಿಯರ್ ಅವರಿಗೆ ವಹಿಸುತ್ತಾರೆ, ವಿಶ್ವೇಶ್ವರಯ್ಯನವರ ಮಾರ್ಗದರ್ಶನ ಮತ್ತು ಕೃಷ್ಣಸ್ವಾಮಿ ಐಯ್ಯಂಗಾರರ ದಕ್ಷ ನಿರ್ವಹಣೆಯಿಂದಾಗಿ ಹುಲಿಕೆರೆ ಸುರಂಗ ಮಾರ್ಗ ಅತ್ಯಂತ ಯಶಸ್ವಿಯಾಗಿ ನಿರ್ಮಾಣ ಗೊಂಡು ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸಲು ಸಹಾಯಕಯವಾಗುತ್ತದೆ. ಮುಂದೆ ಕೃಷ್ಣಸ್ವಾಮಿ ಅಯ್ಯಂಗಾರ್ ಕನ್ನಂಬಾಡಿಯ ಅಣಕಟ್ಟೆಯ ಎದುರುಗಿರುವ ಬೃಂದಾವನ ಉದ್ಯಾನವನದ ಉಸ್ತುವಾರಿ ವಹಿಸಿದ ನಂತರ ಬೆಂಗಳೂರಿನ UVCE ಪ್ರಾಂಶುಪಾಲರಾಗಿ ನಿವೃತ್ತರಾದರೂ ಜನರಿಂದ ಅವರು ಹುಲಿಕೆರೆ ಕೃಷ್ಣಸ್ವಾಮಿ ಅಯ್ಯಂಗಾರ್ ಎಂದೇ ಗುರುತಿಸಲ್ಪಡುತ್ತಾರೆ. ಇಂತಹ ಕೃಷ್ಣಸ್ವಾಮಿ ಅಯ್ಯಂಗಾರ್ ಮತ್ತು ಶ್ರೀಮತಿ ಲಕ್ಷ್ಮಮ್ಮ ದಂಪತಿಗಳ ಸುಪುತ್ರಿಯೇ ಬಿ.ಕೆ.ತಿರುಮಲಮ್ಮ.
ತಿರುಮಲಮ್ಮನವರ ತಂದೆ ಅಂದಿನ ಕಾಲದಲ್ಲೇ ಇಂಜೀನಿಯರ್ ಆಗಿದ್ದರೂ ತಾಯಿಯವರು ಶಾಲೆಗೆ ಹೋಗಿ ಕಲಿತಿರಲಿಲ್ಲವಾದರೂ. ಅವರ ಮನೆಯಲ್ಲೇ ಆವರ ಮಾತೃಭಾಷೆ ತಮಿಳಿನ ಜೊತೆ, ಕನ್ನಡ, ಸಂಸ್ಕೃತ ಭಾಷೆಗಳ ಮೇಲೆ ಒಳ್ಳೆಯ ಹಿಡಿತವನ್ನು ಹೊಂದಿದ್ದಿದ್ದಲ್ಲದೇ, ಅನೇಕ ಶ್ಲೋಕಗಳು, ಸುಭಾಷಿತಗಳು, ಪೌರಾಣಿಕ ಕಥೆಗಳ ಜೊತೆಗೆ ಸಾಂಪ್ರದಾಯಿಕ ಹಾಡು ಹಸೆಗಳನ್ನು ಕಲಿತ ಸಂಸ್ಕಾರವಂತರಾಗಿದ್ದರು. ಇಂತಹ ಸಂಪ್ರದಾಯಸ್ಥರ ಮನೆಯಲ್ಲಿ ಜನಿಸಿದ ತಿರುಮಲಮ್ಮನವರ ಕುಟುಂಬ ಹುಲಿಕೆರೆಯಲ್ಲಿದ್ದಾಗ ಅಲ್ಲಿ ಒಳ್ಳೆಯ ಶಾಲೆ ಇರಲಿಲ್ಲವಾದ ಕಾರಣ, ಮನೆಯೇ ಮೊದಲ ಪಾಠ ಶಾಲೆ, ತಂದೆ ತಾಯಿಯರೇ ಮೊದಲ ಗುರು ಎನ್ನುವಂತೆ ಮನೆಯಲ್ಲಿಯೇ ಉತ್ತಮ ಶಿಕ್ಷಣ ದೊರೆತ ಕಾರಣ, ಆಕೆ ಯಾವುದೇ ಪ್ರಾಥಮಿಕ ಶಾಲೆಗೆ ಹೋಗದೆ, ಸೂಕ್ತವಯಸ್ಸಿನಲ್ಲಿ ನೇರವಾಗಿ 7ನೇ ತರಗತಿಯ ಪರೀಕ್ಷೆಯನ್ನು ಬರೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಾರೆ.

7ನೇ ತರಗತಿಯನ್ನು ಮುಗಿಸಿದ ನಂತರ ಹೆಚ್ಚಿನ ವಿದ್ಯಾಭ್ಯಾಸ ಮುಂದುವರೆಸಲಾಗಲಿಲ್ಲ ಅದಾದ ನಾಲ್ಕು ವರ್ಷಗಳ ನಂತರ ಅವರ ಕುಟಂಬ ಬೆಂಗಳೂರಿಗೆ ಸ್ಥಳಾಂತರವಾದಾಗ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿ ಕಾಲೇಜಿಗೆ ಸೇರಿ ವಿಜ್ಞಾನದಲ್ಲಿ ಪದವಿಯನ್ನು ಪಡೆಯುತ್ತಿದ್ದಂತೆಯೇ ಅವರಿಗೆ ಮದುವೆಯಾಗಿ ಒಂದು ಮಗುವೂ ಸಹ ಆಗುತ್ತದೆ. ದುರಾದೃಷ್ಟವಷಾತ್, ಪತಿ ಮತ್ತು ಮಗುವನ್ನು ಅತ್ಯಂತ ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡ ತಿರುಮಲಮ್ಮನವರು ವಿಧವೆಯಾಗುತ್ತಾರೆ. ಹೀಗೆ ವಿಧವೆಯಾಗಿ ಮನೆಯಲ್ಲಿ ಸುಮ್ಮನೇ ತಮ್ಮ ಮಗಳು ಕುಳಿತುಕೊಳ್ಳುವುದನ್ನು ಇಚ್ಚಿಸದ ಅವರ ತಂದೆಯವರು ಸುಮಾರು ಹತ್ತು ವರ್ಷಗಳ ನಂತರ ಮತ್ತೆ ಶಿಕ್ಷಣವನ್ನು ಮುಂದುವರೆಸಲು ಸೂಚಿಸಿದಾಗ ತಿರುಮಲಮ್ಮನವರು BEd. ಮುಗಿಸಿ ಮಲ್ಲೇಶ್ವರ 15ನೇ ಅಡ್ಡರಸ್ತೆಯಲ್ಲಿರುವ ಹಿಮಾಂಶು ಶಿಶು ವಿಹಾರದಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿ ತಮ್ಮ ಕಾರ್ಯಕ್ಷಮತೆಯಿಂದ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಭಡ್ತಿ ಮೇಲೆ ಭಡ್ತಿ ಪಡೆದು 1949 ರಿಂದ 1953 ರವರೆಗೆ ಪ್ರಾಂಶುಪಾಲರಾಗಿದ್ದಾಗಲೇ, ಉತ್ತಮ ಮೌಲ್ಯಾಧಾರಿತ ಸಂಸ್ಕಾರ ಸಂಪ್ರದಾಯಿಕ ಶಿಶುವಿಹಾರವನ್ನೇಕೆ ಆರಂಭಿಸಬಾರದು? ಎಂಬ ಆಲೋಚನೆ ಮೂಡುತ್ತದೆ.





