ರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗಿದ್ದ ಕಥಾಸ್ಪರ್ಧೆಯಲ್ಲಿ ಈ ಸಲ ನಿರ್ಣಾಯಕ ಮಂಡಳಿ ಅರುಣ್ ಕುಮಾರ್ನ ಕಥೆಯನ್ನು ಪ್ರಶಸ್ತಿ ಪುರಸ್ಕಾರಕ್ಕೆ ಅರ್ಹ ಕಥೆ ಎಂದು ಏಕಮತದಿಂದ ಆವರಿಸಿತು. ಮೊದಲ ಬಹುಮಾನಕ್ಕಾಗಿ ಆರಿಸಲಾಗಿದ್ದ ಈ ಕಥೆ, ಒಂದು ಅನಾಥ ಮಗುವಿನ ಕುರಿತದ್ದಾಗಿತ್ತು. ಬಾಲ್ಯದಲ್ಲಿಯೇ ತಾಯಿ ತಂದೆಯರನ್ನು ಕಳೆದುಕೊಂಡು ಅನಾಥವಾದ ಆ ಮಗು, ಜೀವನದ ಹಲವಾರು ಹೊಡೆತಗಳಿಗೆ ಸಿಲುಕಿ, ಹಂತ ಹಂತವಾಗಿ ಮೆಟ್ಟಿಲೇರಿ, ವ್ಯಾಪಾರದಲ್ಲಿ ಹೆಸರು ಗಳಿಸಿ, ರಾಜಕೀಯಕ್ಕಿಳಿದು ಕೊನೆಗೆ ಪ್ರಧಾನಮಂತ್ರಿ ಆಗುವ ಯಶಸ್ವೀ ಕಥಾಹಂದರ ಹೊಂದಿತ್ತು.
ತೀರ್ಪುಗಾರರಲ್ಲಿ ಒಬ್ಬರಾಗಿದ್ದ ಮಾಧವಿ ಈ ಕಥೆಯನ್ನು ಶಿಫಾರಸ್ಸು ಮಾಡಿದಾಗ, ಇತರರೂ ಮಂಡಳಿಯಲ್ಲಿ ಒಪ್ಪಿದರು. ಮಾಧವಿ ಸಹ 3 ವರ್ಷಗಳ ಹಿಂದೆ ಇದೇ ಪ್ರಶಸ್ತಿಗೆ ಈ ಸಂಸ್ಥೆಯಿಂದಲೇ ಆಯ್ಕೆಯಾಗಿದ್ದಳು. ಈ ಕಥೆಯನ್ನು ಓದಿ ಬಹಳ ಪ್ರಭಾವಿತಳಾದ ಆಕೆ, ಅದನ್ನು ಬರೆದಿದ್ದ ಲೇಖಕನ ಹೆಸರು ಓದಿದಾಗ ಬಹಳ ವಿಚಲಿತಳಾದಳು. ಅರುಣ್ ಕುಮಾರ್..... ಹೆಸರೇನೋ ಅದೇ..... ಇವನು ಅವನಲ್ಲ ತಾನೇ? ಅವಳ ಮನದಲ್ಲಿ ಒಮ್ಮೆಲೇ ಹಲವಾರು ದ್ವಂದ್ವಗಳು ಶುರುವಾದವು.
``ಸಾರ್......'' ಅವಳು ನಿರ್ಣಾಯಕ ಮಂಡಳಿಯ ಹಿರಿಯ ಲೇಖಕ ನಿಶಾಂತ್ರನ್ನು ಸಂಪರ್ಕಿಸಿ ಹೇಳಿದಳು, ``ಈ `ಪ್ರಗತಿ' ಕಥೆ ಏನೋ ಚೆನ್ನಾಗಿದೆ. ನಾನು ಈ ಕಥೆಯ ಲೇಖಕರ ಫೋಟೋ ನೋಡಬಹುದೇ?''
``ಅದು ಹಾಗಲ್ಲ ಮಾಧವಿ, ನಿನಗೆ ಗೊತ್ತಿರುವಂತೆ ಈ ಕಥಾ ಸ್ಪರ್ಧೆಗೆ ಯಾರೂ ಫೋಟೋ ಕಳಿಸುವ ಹಾಗಿಲ್ಲ ಅಂತ ಮೊದಲೇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಇಲ್ಲದಿದ್ದರೆ ಓದುಗರು ನಿರ್ಣಾಯಕ ಮಂಡಳಿಯ ಆಯ್ಕೆ ವಿಧಾನದ ಪಾರದರ್ಶಿಕತೆಯ ಬಗ್ಗೆ ಸಂದೇಹಪಟ್ಟು ತಮ್ಮವರಿಗೇ ಪುರಸ್ಕಾರ ಕೊಟ್ಟುಕೊಂಡಿದ್ದಾರೆ ಎಂದು ಆರೋಪಿಸುತ್ತಾರೆ.''
``ಓಹ್ ಸಾರಿ..... ನಾನು ಆ ಪಾಯಿಂಟ್ ಮರೆತಿದ್ದೆ......'' ಎಂದು ತನ್ನ ಮಾತನ್ನು ಸಮರ್ಥಿಸಿಕೊಂಡಳು.
``ಆದರೆ ಏನು ವಿಷಯಮ್ಮ?'' ಅವರು ಕೇಳಿದರು.
``ಅಂಥ ಮುಖ್ಯವೇನೂ ಇಲ್ಲ...... ಸುಮ್ಮನೇ ಹಾಗೇ ಕೇಳಿದೆ.''
ಮಾಧವಿ ಮನೆಗೇನೋ ಬಂದಳು, ಆದರೆ ಅರಿಯದ ಒಂದು ಹೊರೆ ಅವಳ ಹೆಗಲಿಗೇರಿತ್ತು. ಅವಳು ಅದನ್ನು ಇಳಿಸಿ ಹೊರಗೆಸೆಯಲು ನೋಡಿದಳು, ಆದರೆ ಆ ಹೊರೆಯನ್ನು ಅಷ್ಟು ಸುಲಭವಾಗಿ ಇಳಿಸಲಾದೀತೇ? ಅವಳು ಮನೆಗೆ ಬಂದ ತಕ್ಷಣ ಮಗಳು ಅಖಿಲಾ ಅವಳನ್ನಪ್ಪಿ ಮುದ್ದಿಸಿದಳು. ಆದರೆ ಇಂದು ಮಾಧವಿಯ ಮನ ಕದಡಿತ್ತು. ಇಷ್ಟು ದಿನ ಮನದೊಳಗೇ ಅಡಗಿದ್ದ ಬೇಗುದಿಯನ್ನು ಈ ಹೆಸರು ಬಂದು ಮತ್ತೆ ಭುಗಿಲ್ ಎಂದು ಕೆಣಕಬೇಕೇ?
ಮಾಧವಿ ಆ ಪ್ರಸಂಗವನ್ನು ಬಲವಂತಾಗಿ ಮರೆತಿದ್ದಳು.... ಆ ಪ್ರಸಂಗದ ಪ್ರತಿ ಮಾತನ್ನೂ ಮರೆತಿದ್ದಳೆಂದೇ ಹೇಳಬೇಕು. ಇಂದು ಈ ಹೆಸರು ಆ ಕಹಿ ಪ್ರಸಂಗವನ್ನು ಕೆದಕಿ ಅವಳ ದುಗುಡ ಹೆಚ್ಚಿಸಿತು. ಅವಳಿಗೆ ಕ್ರಮೇಣ ತಲೆನೋವು ಹೆಚ್ಚಾಯಿತು. ಯಾವುದೋ ಅರಿಯದ ನೋವು ಎದೆಯನ್ನು ಹಿಂಡತೊಡಗಿತು. ಭೂತಕಾಲ ಧುತ್ತೆಂದು ತನ್ನ ಮುಂದೆ ಪ್ರಕಟಗೊಂಡಂತೆ ಅನ್ನಿಸಿತು. ಆ ಗತಕಾಲವನ್ನು ಅವಳೆಂದೂ ವರ್ತಮಾನದಲ್ಲಿ ನೆನೆಯಲು ಬಯಸುತ್ತಲೇ ಇರಲಿಲ್ಲ. ಬೇಡವೆಂದರೂ ಆ ದೃಶ್ಯಗಳು ತೆರೆತೆರೆಯಾಗಿ ಅವಳ ಮಾನಸಿಕ ಪಟಲದ ಮೇಲೆ ಅಚ್ಚೊತ್ತತೊಡಗಿದವು.