ಆ ರಾತ್ರಿ ಗೀತಾ ಬಹಳ ಖುಷಿಯಾಗಿದ್ದಳು. ಅವಳು ಅಂದು ವಾಪಸ್ಸು ಮನೆಗೆ ಮರಳಿದಾಗ, ಹಿಂದಿನ ಎಲ್ಲಾ ನೆನಪುಗಳ ಅಲೆಗಳಲ್ಲಿ ಕೊಚ್ಚಿಹೋಗಿದ್ದಳು. ಹೀಗಾಗಿ ಅಂದು ಅವಳ ಬಳಿಯಿಂದ ನಿದ್ದೆ ಮಾರು ದೂರ ಹಾರಿಹೋಗಿತ್ತು. ಅವಳಿಗೆ ಎಲ್ಲೆಲ್ಲೂ ಸಮೀರನೇ ಕಂಡುಬರುತ್ತಿದ್ದ.  `ಬಾನಲ್ಲೂ ನೀನೇ ಭುವಿಯಲ್ಲೂ ನೀನೇ…..’ ಎನ್ನುತ್ತಾ ಎಲ್ಲಾ ಜಾಗದಲ್ಲೂ ಅವನನ್ನೇ ನೆನಪಿಸಿಕೊಳ್ಳುತ್ತಾ ತನ್ನಲ್ಲೇ ತಾನು ಕರಗಿಹೋದಳು…..ಮೊದಲ ಸಲ ಅವನನ್ನು ಭೇಟಿಯಾದಾಗ, ಅವನ ಮೋಹಕ ರೂಪಕ್ಕೆ ಮನಸೋತಳು. `ಲವ್ ಅಟ್‌ ಫಸ್ಟ್ ಸೈಟ್‌’ ಎಂಬುದು ಬಹುಶಃ ಇದಕ್ಕೆ ಇರಬೇಕೇನೋ…… ಸಮೀರ್‌ ಎಂ.ಟೆಕ್‌ ಫೈನಲ್ ಇಯರ್‌ ವಿದ್ಯಾರ್ಥಿ. ಗೀತಾ ಫೈನಲ್ ಆರ್ಟ್ಸ್ ವಿದ್ಯಾರ್ಥಿನಿ. ಇಬ್ಬರೂ ಅರಿಯದ ಆಕರ್ಷಣೆಯಲ್ಲಿ ಪರಸ್ಪರ ಹತ್ತಿರ ಸೆಳೆಯಲ್ಪಡುತ್ತಿದ್ದರು. ಇಬ್ಬರೂ ಪ್ರತಿ ದಿನ ಭೇಟಿ ಆಗುತ್ತಿದ್ದರು. ಪ್ರೇಮ ಸಾಗರದಲ್ಲಿ ಮುಳುಗಿದ ಇಬ್ಬರಿಗೂ ಪರಸ್ಪರರನ್ನು ಬಿಟ್ಟು ಬದುಕುವುದು ದುಸ್ತರ ಎನಿಸಿತು.ಗೀತಾಳ ಸ್ನಿಗ್ಧ ಸೌಂದರ್ಯ ಹಾಗೂ ಮಧುರ ಸ್ವಭಾವದಿಂದ ಸಮೀರ್‌ ಅವಳೆಡೆ ಮುಗ್ಧನಾಗಿದ್ದ. ಗೀತಾ ಅಂತೂ ಬಹು ಬೇಗ ಸಮೀರನ ಆರಾಧಕಿ ಆದಳು. ಅವಳು ತನ್ನ ಕನಸಿನ ರಾಜಕುಮಾರನ ಬಗ್ಗೆ ನೆನಪಿಸಿಕೊಂಡಾಗೆಲ್ಲ ಅವಳಿಗೆ ಸಮೀರನ ಮುಖವೇ ಕಾಣಿಸುತ್ತಿತ್ತು.

ಗೀತಾ ಸಮೀರನನ್ನು ಪ್ರತಿ ದಿನ ಭೇಟಿ ಆಗುವಳು. ಒಂದು ದಿನ ಗೀತಾ ಸಮೀರನ ಪ್ರೇಮದಲ್ಲಿ ಕೊಚ್ಚಿ ಹೋಗಿ ಎಲ್ಲಾ ಸೀಮಾರೇಖೆ ದಾಟಿ ಸಮಾಗಮದಲ್ಲಿ ತೇಲಿಹೋದಳು. ಆದರೆ ಇಬ್ಬರೂ ತಿಳಿವಳಿಕೆ ಉಳ್ಳವರು, ಹೀಗಾಗಿ ಸಂಪೂರ್ಣ ಎಚ್ಚರಿಕೆ ವಹಿಸಿದ್ದರು.

ಗೀತಾಳ ಪ್ರೇಮ ತರಂಗದಲ್ಲಿ ಮಿಂದೆದ್ದ ಬಣ್ಣಬಣ್ಣದ ಗಾಳಿಪಟ ಆಕಾಶದ ಎತ್ತರದಲ್ಲಿ ಹಾರಾಡುತ್ತಿತ್ತು. ಹೀಗೆ ಇರಲು ಒಂದು ದಿನ ಆ ಗಾಳಿಪಟ ಸೂತ್ರ ಕಳಚಿಕೊಂಡು ಧಡ್‌ ಎಂದು ಬಂದು ನೆಲಕ್ಕೆ ಬಡಿಯಿತು. ನಡೆದದ್ದು ಇಷ್ಟೇ, ಸ್ನಾನ ಮಾಡುವಾಗ ಗೀತಾಳಿಗೆ ಕನ್ನಡಿಯಲ್ಲಿ ತನ್ನ ಬೆಂಭಾಗದಲ್ಲಿ ಒಂದು ಬಿಳಿಯ ಕಲೆ ಕಾಣಿಸಿಕೊಂಡಿತು.

ಅದನ್ನು ನೋಡಿ ಅವಳು ಬಹಳ ಗಾಬರಿಗೊಂಡಳು. ಇದು ಕ್ರಮೇಣ ಹರಡುತ್ತಾ ಹೆಚ್ಚಾದರೆ ಮುಂದೆ ವೈಟ್‌ ಪ್ಯಾಚೆಸ್‌, ತೊನ್ನು  (ಲ್ಯುಕೊಡರ್ಮಾ) ರೋಗವಾಗಿ ಕಾಡಿದರೆ ಏನು ಗತಿ? ಸಮೀರನ ನೆನಪಾಗುತ್ತಿದ್ದಂತೆ ಅವಳು ಕಾಣುತ್ತಿದ್ದ ಮಧುರ ಕನಸು ಗಾಜಿನ ತರಹ ಛಿದ್ರಛಿದ್ರವಾಯಿತು. ಅವಳು ತನ್ನ ತಾಯಿ ರತ್ನಮ್ಮನಿಗೆ ಆ ಕುರಿತು ಅಳುತ್ತಲೇ ಹೇಳಿದಳು, “ನೋಡಮ್ಮ….. ನನ್ನ ಬೆನ್ನಲ್ಲಿ ಇದೆಂಥ ಬಿಳಿ ಕಲೆ ಹರಡಿಕೊಳ್ಳುತ್ತಿದೆ….” ಅದನ್ನು ನೋಡುತ್ತಲೇ ಆಕೆ ಸಹ ಬಹಳ ಕಳವಳಗೊಂಡರು.

ಆಕೆ ತಮ್ಮ ಗೆಳತಿ ಬಳಿ ಈ ಕುರಿತು ಹೇಳಿದಾಗ, ಅವರು ಯಾರೋ ದೂರದ ಮಠದಲ್ಲಿದ್ದ ಬಾಬಾ ಬಳಿ ಹೋಗಲು ತಿಳಿಸಿದರು. “ನಡಿ ಗೀತಾ,  ನಿನ್ನನ್ನು ಆ ಬಾಬಾ ಬಳಿ ಕರೆದುಕೊಂಡು ಹೋಗ್ತೀನಿ. ಕೆಲವು ವಾರಗಳ ಹಿಂದೆ ನನ್ನ ಗೆಳತಿ ಸುಜಾತಾಳ ಸೋದರ ಸೊಸೆಗೂ ಹೀಗೆ ಆಗಿತ್ತು. ಅವರು ಆ ಬಾಬಾ ಬಳಿ ಹೋಗಿ ಆಶೀರ್ವಾದ ಪಡೆದದ್ದರಿಂದ ಕೆಲವೇ ದಿನಗಳಲ್ಲಿ ಕಲೆ ಕಾಣದಂತೆ ಕಣ್ಮರೆ ಆಯಿತಂತೆ!”

ಅಮ್ಮನ ಇಂಥ ಮಾತುಗಳಿಂದ ಗೀತಾ ಬಹಳ ನಿರಾಸೆಗೊಂಡಳು. “ಅಮ್ಮ, ನೀನೂ ಒಬ್ಬ ವಿದ್ಯಾವಂತೆಯಾಗಿ ಇದೆಂಥ ಮಾತನಾಡುತ್ತಿರುವೆ? ಇಂಥ ಬಾಬಾ, ಸ್ವಾಮಿಗಳು ಜನರ ಶ್ರದ್ಧಾಭಕ್ತಿ ಗಮನಿಸಿ ಅವರನ್ನು ಮಾನಸಿಕ ರೂಪದಲ್ಲಿ ಕುಗ್ಗಿಸಿ ತಮ್ಮ ಗುಲಾಮರಾಗಿಸುತ್ತಾರೆ ಅಷ್ಟೇ, ಅಂಥವರಿಂದ ಇದೆಲ್ಲ ಸರಿಹೋಗೋಲ್ಲ ಬಿಡು!”

ಇದನ್ನು ಕೇಳಿಸಿಕೊಂಡ ರತ್ನಮ್ಮನಿಗೆ ಕೆಂಡದಂಥ ಸಿಟ್ಟು ಬಂತು, “ಆಹಾ, ನಿಮ್ಮ ಹೊಸ ತಲೆಮಾರಿನವರಿಗೆ ಸದಾ ಇದೇ ಬುದ್ಧಿ….. ಮಕ್ಕಳ ತರಹ ಹಠ ಮಾಡಬೇಡ, ಆ ಬಾಬಾ ಮಂತ್ರಕ್ಕೆ ಎಂಥ ಶಕ್ತಿ ಇದೆ ಎಂದು ನಿನಗೇನಮ್ಮ ಗೊತ್ತು? ನಡಿ, ಈಗಲೇ ಹೋಗಿ ಬಂದುಬಿಡೋಣ!”

ತನಗೆ ಇಷ್ಟವಿಲ್ಲದಿದ್ದರೂ ತಾಯಿಯ ಸಮಾಧಾನಕ್ಕಾಗಿ ಗೀತಾ ಆ ಬಾಬಾ ಬಳಿ ಹೋದಳು. ಅವರ ಬಳಿ ತಮ್ಮ ರೋಗಗಳಿಗೆ ಪರಿಹಾರ ಕಂಡುಕೊಳ್ಳಲು ಬಹಳಷ್ಟು ಭಕ್ತರು ಬಂದಿದ್ದರು. ಕಪ್ಪು ವಸ್ತ್ರ ಧರಿಸಿದ್ದ ಆ ಬಾಬಾ ಸ್ವಲ್ಪ ಹೊತ್ತಿಗೆ ಭಕ್ತರ ಮುಂದೆ ವೇದಿಕೆ ಮೇಲೆ ಕಾಣಿಸಿಕೊಂಡು, “ಜೈ ಮಾತಾ ಕಾಳಿ…. ಜೈ ಮಾತಾ ಕಾಳಿ!” ಎಂದು ಏನೇನೋ ಮಂತ್ರ ಓದತೊಡಗಿದರು. ಆಗ ಭಕ್ತರು ಸಹ “ಜೈ ಮಾತಾ ಕಾಳಿ!” ಎನ್ನುತ್ತಾ ಅವರ ಮಾತುಗಳಿಗೆ ಜೈ ಜೈಕಾರ ಹಾಕತೊಡಗಿದರು. ಆಗ ಬಲು ವಿಚಿತ್ರ ವಿಧಾನದಲ್ಲಿ ಆ ಬಾಬಾ ಭಕ್ತ ಗಣದ ಚಿಕಿತ್ಸೆಗೆ ಆರಂಭಿಸಿದರು.

ಒಬ್ಬ ಹೆಂಗಸಿಗೆ ಮೂತ್ರ ವಿಸರ್ಜನೆ ಆಗದೆ ಕಿಡ್ನಿಯಲ್ಲಿ ಕಲ್ಲುಗಳಾಗಿದ್ದವು. ಬಾಬಾ ಏನೇನೋ ಮಂತ್ರ ಹೇಳುತ್ತಾ, ಆ ಹೆಂಗಸಿನ ಹೊಟ್ಟೆಯಿಂದ ಒಂದೇ ಕ್ಷಣದಲ್ಲಿ ಕಲ್ಲು ಹೊರ ತೆಗೆಸುತ್ತೇನೆ ಎಂದರು. ಇದನ್ನೆಲ್ಲ ನೋಡಿ ಗೀತಾ ಗಾಬರಿಗೊಂಡಳು. ಇವಳ ಸರದಿ ಬಂದಾಗ ಬಾಬಾ ಅವಳು ಹೊದ್ದ ದುಪಟ್ಟಾ ತೆಗೆಸಿ, ಸೊಂಟದ ಬಳಿಯ ಕುರ್ತಾ ಸಡಿಲಿಸಿ, ನವಿಲುಗರಿಯಿಂದ ಅಲ್ಲೆಲ್ಲ ಬೂದಿಯಿಂದ ಸ್ಪರ್ಶಿಸಲು ಏನೇನೋ ಮಂತ್ರ ಓದಿದರು.

ಗೀತಾಳನ್ನೇ ದಿಟ್ಟಿಸುತ್ತಾ, “ಈ ಬಿಳಿ ಕಲೆ ಯಾವುದೋ ಪರಲೋಕದ ದುಷ್ಟ ಶಕ್ತಿಯ ಪ್ರಕೋಪ! ಇದಕ್ಕಾಗಿ ದೊಡ್ಡ ಉಪಾಯವನ್ನೇ ಮಾಡಬೇಕು….”

“ನಾವು ಏನು ಮಾಡಬೇಕೆಂದು ಹೇಳಿ ಬಾಬಾ,” ರತ್ನಮ್ಮ ವಿನಮ್ರರಾಗಿ ಕೇಳಿದರು.

ಬಾಬಾ ಗೀತಾ ಕೈಗೆ ಒಂದು ಕೆಂಪು ವಸ್ತ್ರದ ಗಂಟು ಕೊಡುತ್ತಾ ಹೇಳಿದರು, “ಏ ಹುಡುಗಿ….. ಈ ಗಂಟನ್ನು ಸದಾ ನಿನ್ನ ತಲೆದಿಂಬಿನಡಿ ಇಟ್ಟುಕೊ. ಪ್ರತಿ ಶನಿವಾರ ಒಂದು ಕಪ್ಪು ನಾಯಿಗೆ ಮರೆಯದೆ ಒಂದು ಜಹಾಂಗೀರು ತಿನ್ನಿಸಬೇಕು!”

ಆಗಲಿ ಎಂಬಂತೆ ರತ್ನಮ್ಮ ತಲೆ ಆಡಿಸಿದರು. ಒಂದು ಸಣ್ಣ ಬಟ್ಟಲಲ್ಲಿ ಯಾವುದೋ ಕಷಾಯ ನೀಡುತ್ತಾ, “ಈಗಲೇ ಇದನ್ನು ಕುಡಿದು ಒಳಗಿನ ಕುಟೀರದಲ್ಲಿನ ಕಲ್ಲುಹಾಸಿನ ಮೇಲೆ ಮಲಗು…. ಆ ಭಾಗಕ್ಕೆ ದಿವ್ಯ ಗಂಧದ ಲೇಪನವಾಗಬೇಕು!” ಎಂದರು.

ರತ್ನಮ್ಮ ಸಹ ಮಗಳ ಜೊತೆ ಕುಟೀರದ ಒಳಗೆ ಹೋಗಲು ಯತ್ನಿಸಿದಾಗ ಆ ಬಾಬಾ ತಡೆಯುತ್ತಾ, “ನೀನಲ್ಲಮ್ಮ….. ರೋಗಿ ಮಾತ್ರ ಒಳಗೆ ಹೋಗಬೇಕು,” ಎಂದರು.

ಆ ಕುಟೀರದ ಒಳಗಿನ ವಾತಾವರಣ ಕಂಡು ಗೀತಾ ಬಹಳ ಹೆದರಿದಳು. ಅವಳು ಅಲ್ಲಿಂದ ಎದ್ದು ಹೊರಗಿನ ಬಾಗಿಲ ಕಡೆ ಓಡತೊಡಗಿದಳು. ಅವಳ ಹಿಂದೆಯೇ ತಾಯಿ ಸಹ ಓಡೋಡಿ ಬಂದರು. ಬಾಬಾ ಶಿಷ್ಯರು, “ಇರಿ…. ಇರಿ….. ಓಡಬೇಡಿ…. ಓಡಬೇಡಿ…..!” ಎಂದು ಕಿರುಚಿದರು.

ಗೀತಾ ಹಿಸ್ಟೀರಿಯಾ ಹಿಡಿದವಳಂತೆ ಅರಚಿದಳು, “ನನಗೆ ಬೇಕಿಲ್ಲ ಇಂಥ ಢೋಂಗಿ ಬಾಬಾ ಚಿಕಿತ್ಸೆ! ಇಂಥ ಪಾಪಿಷ್ಟರ ಕುಕೃತ್ಯಗಳ ಬಗ್ಗೆ ಕೆಟ್ಟ ಸುದ್ದಿಗಳನ್ನು ಕೇಳಿಯೂ ಇಲ್ಲೇ ಇರಬೇಕು ಅಂತೀಯೇನಮ್ಮ…. ನಡಿ ಬೇಗ ನಡಿ!” ಎಂದು ಚೀರಾಡಿದಳು.

ಅಂತೂ ಇಂತೂ ಹೇಗೋ ಅಲ್ಲಿಂದ ತಪ್ಪಿಸಿಕೊಂಡು, ಅಮ್ಮನ ಕೈ ಹಿಡಿದೆಳೆದು ಒಂದು ಆಟೋ ಹತ್ತಿ ಮನೆ ಸೇರಿದಳು. ವಿಷಯ ತಿಳಿದ ಅವಳ ತಂದೆ ದಿನೇಶ್‌ ಪತ್ನಿ ರತ್ನಾ ಮೇಲೆ ರೇಗಾಡಿದರು.

“ರತ್ನಾ ಇದೆಂಥ ಕೂಪಮಂಡಕೂವಾಗಿದ್ದಿ ನೀನು? ಈ ಬಾಬಾ, ಅಘೋರಿಗಳು ತಂತ್ರಮಂತ್ರಗಳ ಹೆಸರಿನಲ್ಲಿ ಮುಗ್ಧ ಜನರ ಭಕ್ತಿಯನ್ನು ತಮ್ಮ ಅಸ್ತ್ರವಾಗಿಸಿಕೊಂಡು ಲೂಟಿ ಮಾಡುತ್ತಾರೆ.

vishwash-story2

“ತಮ್ಮ ಕಷ್ಟ ಪರಿಹಾರವಾದರೆ ಸಾಕೆಂದು ಹತಾಶರಾದ ಜನ ಅವರು ಹೇಳಿದ್ದಕ್ಕೆಲ್ಲ ಕೋಲೆಬಸವನಂತೆ ತಲೆ ಆಡಿಸುತ್ತಾರೆ. ನಮ್ಮ ಮಗು ಆ ಕುಟೀರದ ಒಳಹೋಗಿದ್ದರೆ, ಆ ಪಾಪಿಷ್ಟರು ಏನು ಮಾಡಿಬಿಡುತ್ತಿದ್ದಾರೋ ಏನೋ….. ಆ ಪಾಪಿಷ್ಟ ಮಂದಿ ನಿನ್ನಂಥ ಮುಗ್ಧ ಭಕ್ತರನ್ನು ಲೂಟಿ ಮಾಡಲೆಂದೇ ಹೀಗೆಲ್ಲ ಆಡುತ್ತಾರೆ. ಗೀತಾ, ನಡೆಯಮ್ಮ….. ನಾಳೆ ನಿನ್ನನ್ನು ಸ್ಕಿನ್‌ ಸ್ಪೆಷಲಿಸ್ಟ್ ಹತ್ತಿರ ಕರೆದುಕೊಂಡು ಹೋಗ್ತೀನಿ,” ಎಂದು ಮಗಳ ತಲೆ ಸವರಿ ಧೈರ್ಯ ತುಂಬಿದರು.

ಮಾರನೇ ದಿನ ದಿನೇಶ್‌ ಮಗಳನ್ನು ನಗರದ ಖ್ಯಾತ ಚರ್ಮ ತಜ್ಞೆಯೊಬ್ಬರ ಬಳಿ ಕರೆತಂದರು. ಅವಳನ್ನು ಪರೀಕ್ಷಿಸಿದ ಆಕೆ, “ಇದು ತೊನ್ನು (ಲ್ಯುಕೋಡರ್ಮಾ) ರೋಗದ ಆರಂಭಿಕ ಲಕ್ಷಣ. ಸೂಕ್ತ ಸಮಯಕ್ಕೆ ಬಂದಿದ್ದೀರಿ. ಸಕಾಲಿಕ ಚಿಕಿತ್ಸೆಯಿಂದ ಇದು ಖಂಡಿತಾ ಗುಣವಾಗುತ್ತದೆ. ಇಲ್ಲದಿದ್ದರೆ ಇದು ದೇಹಾದ್ಯಂತ ಹರಡಿಕೊಂಡು ಚರ್ಮ ಪೂರ್ತಿ ಬೆಳ್ಳಗೆ ಬಿಳಚಿಕೊಳ್ಳುತ್ತದೆ,” ಎಂದು ಎಚ್ಚರಿಸಿದರು.

ಗೀತಾ ದೃಢ ವಿಶ್ವಾಸದಿಂದ, ಮನೋಬಲ ಒಟ್ಟುಗೂಡಿಸಿಕೊಂಡು ಅವರ ಬಳಿ ಚಿಕಿತ್ಸೆ ಪಡೆದಳು. ಆದರೆ ಇದನ್ನು ಸಮೀರನ ಬಳಿ ಹೇಗೆ ಹೇಳಿಕೊಳ್ಳುವುದೋ ತಿಳಿಯದೆ ಚಡಪಡಿಸಿದಳು. ತನ್ನ ಈ ಬಿಳಿ ಕಲೆಯ ರೋಗದ ಬಗ್ಗೆ ತಿಳಿದು ಅವನು ಮದುವೆ ಬೇಡ ಎಂದುಬಿಟ್ಟರೆ? ಈ ಕಲ್ಪನೆಯಿಂದಲೇ ಅವಳು ನಡುಗಿದಳು. ಆದರೆ ಮದುವೆಯಾದ ಮೇಲೆ ಒಂದಲ್ಲ ಒಂದು ದಿನ ಅವನಿಗೆ ತನ್ನ ಈ ರೋಗದ ಬಗ್ಗೆ ಖಂಡಿತಾ ಗೊತ್ತಾಗುತ್ತದೆ. ಆಗ ಪರಿಣಾಮ ಏನಾಗಬಹುದು? ಇಂಥದೇ ಯೋಚನೆಗಳಿಂದ ಕುಗ್ಗಿಹೋದ ಗೀತಾ ದಿನೇ ದಿನೇ ಮನೋವ್ಯಥೆಗೆ ಈಡಾಗತೊಡಗಿದಳು. ಅವಳ ಮನಸ್ಸು ಮತ್ತು ವಿವೇಕ ಎರಡೂ ಬೇರೆ ಸಲಹೆಗಳನ್ನೇ ನೀಡುತ್ತಿದ್ದ. ಏನೇ ಆಗಲಿ, ತಾನು ಸಮೀರನನ್ನು ಕಳೆದುಕೊಳ್ಳಬಾರದೆಂದು ಮನಸ್ಸಿನ ಸಲಹೆ ಮೇರೆಗೆ ಈ ವಿಷಯ ಮುಚ್ಚಿಟ್ಟೇ ಮದುವೆ ಆಗಬೇಕೆಂದು ನಿರ್ಧರಿಸಿದಳು. ಆದರೆ ಅವಳ ವಿವೇಕ, ಇದು ತಪ್ಪು….. ಇವರು ವಿಷಯ ತಿಳಿಸಿ ಬಂದದ್ದನ್ನು ಎದುರಿಸು ಎಂದು ಧೈರ್ಯ ಹೇಳುತ್ತಲೇ ಇತ್ತು.

ಏನೇ ಆದರೂ ಅವಳ ಮನಸ್ಸು ವಿವೇಕದ ಹಿತನುಡಿ ಕೇಳಲು ತಯಾರಿರಲಿಲ್ಲ. ಸಮೀರನಿಂದ ತಾನು ಈ ಬಿಳಿ ಕಲೆ ವಿಷಯ ಮುಚ್ಚಿಡುವುದು ದೊಡ್ಡ ದ್ರೋಹವಾದೀತು ಎಂದು ವಿವೇಕ ಮತ್ತೆ ಮತ್ತೆ ಎಚ್ಚರಿಸಿತು. ಮದುವೆಯಂಥ ಪವಿತ್ರ ಬಂಧನಕ್ಕೆ ನಂಬಿಕೆಯೇ ಭದ್ರ ಬುನಾದಿ. ಆ ಅಡಿಪಾಯವೇ ಸರಿ ಇಲ್ಲದಿದ್ದರೆ, ಮದುವೆ ಯಾವ ಆಧಾರದ ಮೇಲೆ ನಿಂತೀತು? ಏನೇ ಆಗಲಿ, ಬಂದದ್ದನ್ನು ಎದುರಿಸುವೆ, ಸಮೀರನಿಂದ ಸತ್ಯ ಮುಚ್ಚಿಡುವುದಿಲ್ಲ ಎಂದೇ ನಿರ್ಧರಿಸಿದಳು.

ಈ ಮಧ್ಯೆ ಒಮ್ಮೆ ಸಮೀರನಿಂದ ಕರೆ ಬಂತು, “ನಾಳೆ ಜಯನಗರದ ಹೊಸ ರೆಸ್ಟೋರೆಂಟ್‌ಗೆ ಹೋಗೋಣ…… ರೆಡಿ ಇರು,” ಎಂದು ಸಮಯದ ಬಗ್ಗೆ ತಿಳಿಸಿದ. ಅವನ ಮಾತು ಬೇಡವೆನ್ನಲಾಗದೆ ಹಿಗ್ಗಿನಿಂದ ಅವಳು ಒಪ್ಪಿದಳು.

ಮಾರನೇ ದಿನ ಯೂನಿರ್ಸಿಟಿ ಕ್ಲಾಸ್‌ ಮುಗಿಸಿಕೊಂಡು ಇಬ್ಬರೂ ಆ ಹೊಸ ರೆಸ್ಟೋರೆಂಟ್‌ ಬಳಿ ಬಂದರು. ಇವರು ಜ್ಞಾನಭಾರತಿ ಕ್ಯಾಂಪಸ್‌ನಿಂದ ಅಲ್ಲಿಗೆ ಹೋಗುವಷ್ಟರಲ್ಲಿ ಸಂಜೆ ತಡವಾಗಿತ್ತು. ಸಂಜೆ ಕತ್ತಲಾವರಿಸಿ ಎಲ್ಲೆಲ್ಲೂ ವಿದ್ಯುದ್ದೀಪ ಬೆಳಗುತ್ತಿತ್ತು. ಇಡೀ ವಾತಾವರಣದಲ್ಲಿ ಒಂದು ಹೊಳಪಿತ್ತು.

ಅವರು ಮೂಲೆಯ ಒಂದು ಮೇಜಿನ ಬಳಿ ಬಂದರು. ತಾನು ತಂದಿದ್ದ ಬೊಕೆಯನ್ನು ಅವಳಿಗೆ ನೀಡಿದ ಸಮೀರ್‌, ಮಂಡಿಯೂರಿ ಅವಳಿಗೆ ಪ್ರಪೋಸ್‌ ಮಾಡಲು ತಯಾರಾದ. ಅಷ್ಟರಲ್ಲಿ ಗೀತಾ ಒಂದು ಕ್ಷಣ ಇರುವಂತೆ ತಡೆಯುತ್ತಾ, “ಸಮೀರ್‌, ನಾನು ನಿನಗೊಂದು ವಿಷಯ ತಿಳಿಸಬೇಕು,” ಎಂದು ತಡವರಿಸಿದಳು.

ಅವಳ ಹೃದಯದಲ್ಲಿ ಅದಾಗಲೇ ಅವಲಕ್ಕಿ ಕುಟ್ಟಲಾರಂಭಿಸಿತ್ತು. ಅವಳು ಹೇಗೋ ಮಾಡಿ ಮನಸ್ಸನ್ನು ಗಟ್ಟಿ ಮಾಡಿಕೊಂಡು ಸತ್ಯ ತಿಳಿಸಲು ಮುಂದಾದಳು. ಸಮೀರನ ಉತ್ತರ ಏನೇ ಇರಲಿ, ಅದನ್ನು ತಾನು ಎದುರಿಸಲು ಸಿದ್ಧಳಾದಳು. ನಂತರ ಅವನ ಕೈಗಳನ್ನು ಹಿಡಿದುಕೊಂಡು ಅವಳು ನಿಧಾನವಾಗಿ ತನ್ನ ಸಮಸ್ಯೆಯ ಬಗ್ಗೆ ಹೇಳಿಕೊಂಡಳು.

ಅದನ್ನು ಕೇಳಿ ಸಮೀರ್‌ ಸ್ವಲ್ಪ ವಿಚಲಿತನಾಗದೆ, “ನಾನು ಎಲ್ಲಾ ಸಂದರ್ಭದಲ್ಲೂ ಸದಾ ನಿನ್ನ ಜೊತೆಗಿರುತ್ತೇನೆ ಗೀತಾ. ನೀನು ನನ್ನ ಜೀವದಲ್ಲಿ ಜೀವವಾಗಿ ಬೆರೆತಿರುವೆ….. ಹೇಳು, ನನ್ನನ್ನು ಮದುವೆ ಆಗ್ತೀಯಾ?” ಎಂದು ಕೇಳಿದ.

ಗೀತಾಳ ಕಣ್ಣಿನಿಂದ ಆನಂದಬಾಷ್ಪ ಧಾರಾಳ ಸುರಿಯಿತು. ಅವಳ ಮನದಲ್ಲಿ ಎದ್ದಿದ್ದ ಪ್ರವಾಹ ಶಾಂತವಾಗಿತ್ತು. ಅವಳ ಎಲ್ಲಾ ಸಂದೇಹಗಳೂ ದೂರವಾಗಿದ್ದವು. ಅವಳಿಗೆ ಅವನ ಪವಿತ್ರ ಪ್ರೇಮದ ಕುರಿತು ಸಂಪೂರ್ಣ ವಿಶ್ವಾಸ ಮೂಡಿಬಂದಿತು.

ಇಂಥದೇ ಮಧುರಾತಿ ಮಧುರ ನೆನಪುಗಳ ಅಲೆಯಲ್ಲಿ ತೇಲಿ ಹೋದ ಗೀತಾ ಅದಾವಾಗ ನಿದ್ದೆಗೆ ಜಾರಿದಳೋ ತಿಳಿಯಲೇ ಇಲ್ಲ. ಮಾರನೇ ಬೆಳಗ್ಗೆ ಅಮ್ಮ ಅವಳನ್ನು ಎಬ್ಬಿಸುವಷ್ಟರಲ್ಲಿ  8 ಗಂಟೆ ಆಗಿತ್ತು. ?

“ಏಳಮ್ಮ …. ಕ್ಲಾಸಿಗೆ ತಡವಾಗುತ್ತೆ,” ಎಂದರು.

ಗೀತಾಳ ಮುಖದಲ್ಲಿ ಅಂದು ಅದ್ಭುತ ಕಳೆ ತುಂಬಿಕೊಂಡಿತ್ತು, “ಅಮ್ಮಾ, ನನ್ನ ಬಳಿ ಕುಳಿತುಕೊ,” ಎಂದು ಅಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವರ ಮಡಿಲಲ್ಲಿ ತಲೆ ಇರಿಸುತ್ತಾ, “ಅಮ್ಮಾ, ನಾನು ನಿನಗೇನೋ ಹೇಳಬೇಕು,” ಎಂದಳು.

ಅಮ್ಮ ಅವಳ ತಲೆಗೂದಲು ತೀಡುತ್ತಾ, “ಏನಮ್ಮ, ಅದು ವಿಷಯ?” ಎಂದು ಪ್ರೀತಿಯಿಂದ ಕೇಳಿದರು.

“ಅಮ್ಮ ನನ್ನ ಸೀನಿಯರ್‌ ಸಮೀರ್‌ ನಿನಗೆ ಗೊತ್ತು. ನಾವಿಬ್ಬರೂ ಬಹಳ ಪ್ರೀತಿಸುತ್ತೇವೆ. ನಾನು ಅವರನ್ನೇ ಮದುವೆ ಆಗ್ತೀನಿ,” ಎಂದಳು.

“ಅದೆಲ್ಲ ಸರಿಯಮ್ಮ, ನೀನು ಅವನಿಗೆ ನಿನ್ನ ಸಮಸ್ಯೆ ಬಗ್ಗೆ ಹೇಳಿದ್ದೀಯಾ? ಇದು ಅವನಿಗೆ ಗೊತ್ತು ತಾನೇ?”

“ಹೌದಮ್ಮ….. ನಾನು ಅವರಿಗೆ ಎಲ್ಲಾ ತಿಳಿಸಿದ್ದೇನೆ.”

ಇದಾದ ಮೇಲೆ ಗೀತಾಳ ತಾಯಿ ತಂದೆ ಸಮೀರನ ಮನೆಗೆ ಸಂಬಂಧ ಬೆಳೆಸಲು ಹೊರಟರು. ಎಲ್ಲರ ಒಪ್ಪಿಗೆ, ಹಿರಿಯರ ಆಶೀರ್ವಾದದೊಂದಿಗೆ ಗೀತಾ ಸಮೀರರ ವಿವಾಹ ನಡೆಯಿತು. ಮನದಲ್ಲಿ ಮರೆಯಾಗಿದ್ದ ಪ್ರೇಮ, ಇದೀಗ ಹೊರ ಪ್ರಪಂಚಕ್ಕೆ ಪತಿ ಎದುರು ತೆರೆದ ಮನದಿಂದ ಅದನ್ನು ಹಂಚಿಕೊಂಡಳು.

ಪ್ರಸ್ತದ ಕೋಣೆಯಲ್ಲಿ ಪತಿಗಾಗಿ ಕಾಯುತ್ತಿದ್ದ ಅವಳನ್ನು ಗೆಳತಿಯರೆಲ್ಲ ಛೇಡಿಸಿ ಬೀಳ್ಕೊಂಡರು. ಸ್ವಲ್ಪ ಹೊತ್ತಿಗೆ ನಿರೀಕ್ಷೆಯ ಕ್ಷಣಗಳು ಮುಗಿದು, ಸಮೀರ್‌ ಕೋಣೆಯ ಒಳ ಬಂದಿದ್ದ. ಇಬ್ಬರೂ ಪ್ರೇಮದ ಸರಸ ಸಲ್ಲಾಪದಲ್ಲಿ ಮುಳುಗಿಹೋದರು.

“ನನ್ನ ಈ ಬಿಳಿ ಕಲೆಯೊಂದಿಗೆ ನನ್ನನ್ನು ಒಪ್ಪಿಕೊಂಡು ನೀನು ನನ್ನ ಬಾಳು ಬೆಳಗುವಂತೆ ಮಾಡಿದೆ,” ಗೀತಾ ಸಮೀರನ ಎದೆಗೊರಗುತ್ತಾ ಹೇಳಿದಳು.

“ಆ ದಿನ ನೀನು ಬಳ್ಳಿ ಮರ ಬಳಸುವಂತೆ ನನ್ನನ್ನು ಅಪ್ಪಿದ ಮಧುರ ಘಳಿಗೆ ನೆನಪಿದೆಯೇ?” ಸಮೀರ್‌ ಕೇಳಿದ. ಅವನ ಮಾತುಗಳಿಂದ ಅವಳು ನಾಚಿ ನೀರಾದಳು.

“ಆ ದಿನವೇ ನಾನು ಅದನ್ನು ಗುರುತಿಸಿದ್ದೆ. ನಿನ್ನ ಮುಗ್ಧತೆ, ಮನೋಹರ ಸ್ವಭಾವ ನನ್ನ ಹೃದಯ ಗೆದ್ದಿತ್ತು!” ಅವನ ಮಾತುಗಳಿಗೆ ಅವಳ ಮಂದಹಾಸವೇ ಉತ್ತರವಾಯಿತು.

“ಆ ಮಾತು ನಿನ್ನಿಂದ ತಾನಾಗಿ ಬರಲಿ ಎಂದು ಕಾದಿದ್ದೆ. ನಿನ್ನ ಪ್ರಾಮಾಣಿಕತೆ ನನ್ನ ಮನ ಗೆದ್ದಿತು. ಪ್ರೇಮಕ್ಕೆ ಎಂದೂ ಸೋಲಿಲ್ಲ ಎಂಬುದನ್ನು ನಿರೂಪಿಸಿದೆ. ಐ ಲವ್ ಯೂ!” ಗೀತಾಳ ಮನ ಹಕ್ಕಿಯಂತೆ ಹಾರಿತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ