ಅದಾಗಲೇ ಸಂಜೆ ಮಬ್ಬುಗತ್ತಲೆ ಆವರಿಸತೊಡಗಿತು. ಚಳಿಗಾಲದ ದಿನಗಳು, ಹೀಗಾಗಿ 6 ಗಂಟೆಗೆ ಕತ್ತಲೆ ಎನಿಸುತ್ತಿತ್ತು. ಆಫೀಸಿನಲ್ಲಿ ದುಡಿದು ದಣಿದುಹೋದ ರಾಗಿಣಿ ಮನೆಯತ್ತ ನಡೆದಳು. ಅವಳು ಒಳಗೆ ಬರುತ್ತಿದ್ದಂತೆಯೇ ಅವಳ ಮಕ್ಕಳಾದ ಆಶಾ ಉಷಾ ಓಡಿಬಂದು ಅಮ್ಮಾ.....ಅಮ್ಮಾ ಎನ್ನುತ್ತಾ ಅವಳ ಕಾಲು ಕಟ್ಟಿಕೊಂಡರು. ಉಷಾ ಯಾಕೋ ಬಿಕ್ಕಳಿಸುತ್ತಿದ್ದಳು.
``ಯಾಕಮ್ಮಾ..... ಏನಾಯ್ತು?''
``ಅಮ್ಮಾ..... ಇಲ್ಲಿ ಎಲ್ಲರೂ ನಮ್ಮನ್ನು ನೋಡಿ, ಪಾಪದ..... ಮುಂಡೇವು ಎನ್ನುತ್ತಾ ಮರುಕ ತೋರಿಸುತ್ತಾರೆ. ಇವತ್ತು ಅಜ್ಜಿಯನ್ನು ನೋಡಲು ಒಬ್ಬ ಆಂಟಿ ಬಂದಿದ್ದರು. ಅವರು ನನ್ನನ್ನು ಮುದ್ದಿಸುತ್ತಾ, ಕಣ್ಣೀರು ಸುರಿಸುತ್ತಾ, `ಅಯ್ಯೋ ಪಾಪ.... ತಂದೆ ಇಲ್ಲದ ಈ ಮಕ್ಕಳನ್ನು ಮುಂದೆ ಯಾರು ಮದುವೆಯಾಗುತ್ತಾರೋ ಏನೋ?' ಅಮ್ಮ, ನಮಗೆ ಅಪ್ಪ ಇದ್ದಾರೆ. ಆದರೆ ಅವರೇಕೆ ಹಾಗೆ ಹೇಳುತ್ತಿದ್ದರು?'' ಎಂದು ಮುಗ್ಧವಾಗಿ ಕೇಳಿದಳು.
8 ವರ್ಷದ ಪುಟ್ಟ ಮಗಳು ಹಾಗೆ ಕೇಳಿದರೆ ರಾಗಿಣಿ ಮಗಳಿಗೆ ಏನೆಂದು ವಿವರಿಸಲು ಸಾಧ್ಯ? ಮಗಳನ್ನು ವಾತ್ಸಲ್ಯದಿಂದ ಅಪ್ಪಿಕೊಳ್ಳುತ್ತಾ ಹೇಳಿದಳು, ``ಇಂಥ ಮಾತುಗಳಿಗೆ ಕಿವಿ ಕೊಡಬೇಡ ಮಗು. ನೀನು ನನ್ನ ಮುದ್ದಿನ ರಾಜಕುಮಾರಿ ಅಲ್ವಾ?'' ಎನ್ನುತ್ತಾ ಪರ್ಸ್ನಲ್ಲಿದ್ದ ಚಾಕಲೇಟ್ ತೆಗೆದು ಮಗಳಿಗೆ ಕೊಟ್ಟಳು.
ಉಷಾ ಸಂಭ್ರಮದಿಂದ ಅದನ್ನು ಪಡೆದು ಆಡಲು ಹೋದಳು. ಚಿಕ್ಕವಳು ಉಷಾ ಏನೋ ಸಮಾಧಾನಗೊಂಡು ಹೋದಳು. ಆದರೆ ದೊಡ್ಡವಳು 10 ವರ್ಷದ ಆಶಾಳಿಗೆ ಕೆಲವು ವಿಷಯಗಳು ಅರ್ಥವಾಗುತ್ತಿತ್ತು. ಇನ್ನು ಮುಂದೆ ಪಪ್ಪ ಜೊತೆ ನಮ್ಮ ಸಂಬಂಧ ಮುಗಿಯಿತು ಎಂದೇ ತಿಳಿಯಬೇಕೆಂದು ಗೊತ್ತಾಯಿತು. ಹೀಗಾಗಿ ಯಾರಾದರೂ ಅವಳನ್ನು ಪಾಪದವಳು ಅಥವಾ ಅವಳ ತಾಯಿ ಮಕ್ಕಳಿಗೆ ತಂದೆ ಇಲ್ಲದಂತೆ ಮಾಡಿದಳು ಎಂದರೆ ಜಗಳಕ್ಕೆ ಸಿದ್ಧಳಾಗುತ್ತಿದ್ದಳು.
ಈ ಕಾರಣದಿಂದ ಎಲ್ಲರೂ ಅವಳ ವಿರುದ್ಧ ದೂರು ಹೇಳುತ್ತಿದ್ದರು. ``ರಾಗಿಣಿ, ನಿನ್ನ ಹಿರಿ ಮಗಳಿಗೆ ಸ್ವಲ್ಪ ಸರಿಯಾಗಿ ಬುದ್ಧಿ ಕಲಿಸು. ಎಲ್ಲರೊಂದಿಗೂ ಜಗಳ ಆಡಲು ಸಿದ್ಧಳಾಗುತ್ತಾಳೆ,'' ಎನ್ನುತ್ತಿದ್ದರು.
ಆಗಾಗ ರಾಗಿಣಿ ಆಶಾಳಿಗೆ ಹೇಳುತ್ತಿದ್ದುದುಂಟು, ``ಮಗು, ಈ ಜನರ ಜೊತೆ ಅನಗತ್ಯವಾಗಿ ವಾದ ಮಾಡಲು ಹೋಗಬೇಡ...... ನೀನು ಆ ಜಾಗದಿಂದ ತಕ್ಷಣ ಬೇರೆ ಕಡೆ ಹೋಗಿಬಿಡು.''
ಆದರೆ ಆಶಾ ಪ್ರತಿ ದಿನ ಯಾರಾದರೊಬ್ಬರ ಜೊತೆ ಈ ವಿವಾದಕ್ಕೆ ಸಿಲುಕದೆ ಬರುತ್ತಿರಲಿಲ್ಲ. ಒಮ್ಮೆ ಮನೆಯಲ್ಲಿ, ಒಮ್ಮೆ ಶಾಲೆಯಲ್ಲಿ ಇಂಥ ಘಟನೆಗಳು ಮರುಕಳಿಸುತ್ತವೆ ಇದ್ದವು.
ಊಟ ಆದ ನಂತರ ತಾಯಿ ಜಾನಕಮ್ಮ ಯಾರೊಂದಿಗಾದರೂ ಹರಟೆಗೆ ಕೂರುತ್ತಾರೆ ಎಂದು ರಾಗಿಣಿಗೆ ಚೆನ್ನಾಗಿ ಗೊತ್ತಿತ್ತು. ಬಂದವರು ಆ ಮಕ್ಕಳನ್ನು ಉದ್ದೇಶಿಸಿ ಏನಾದರೊಂದು ಹೇಳದೆ ಇರುತ್ತಿರಲಿಲ್ಲ. ``ಅಲ್ಲಾ ಜಾನಕಮ್ಮ, ಈ ವಯಸ್ಸಾದ ಕಾಲದಲ್ಲಿ ನಿಮಗೆಂಥ ಕಷ್ಟ ಬಂತು ನೋಡ್ರಿ...... ರಾಗಿಣಿ ಏನೋ ಬೆಳಗಾದರೆ ನೀಟಾಗಿ ಡ್ರೆಸ್ ಮಾಡಿಕೊಂಡು ಆಫೀಸಿಗೆ ಹೊರಟುಬಿಡ್ತಾಳೆ. ಆದರೆ ಜಾನಕಮ್ಮ ಇಡೀ ದಿನ ಈ ಮೊಮ್ಮಕ್ಕಳಿಗಾಗಿ ಬೇಯಿಸೋದೇ ಆಯ್ತು. ಅವರಿಗೆ ತಿಂಡಿ ಮಾಡು, ಬಾಕ್ಸ್ ರೆಡಿ ಮಾಡಿ ಶಾಲೆಗೆ ಕಳುಹಿಸು, ಬಂದ ಮಕ್ಕಳಿಗೆ ಊಟ ಬಡಿಸು, ಮಕ್ಕಳನ್ನು ಸುಧಾರಿಸು ಇದೇ ಆಯಾ ಕೆಲಸ ಆಗೋಯ್ತು ರೀ ಪಾಪ.....''





