ವ್ಯಂಗ್ಯ – ಕಲ್ಪನಾ ಪ್ರಭಾಕರ್ ಹೆಗಡೆ
ಬೆಂಗಳೂರಿನಂಥ ಮಹಾನಗರಿಯಲ್ಲಿ ಬಾಡಿಗೆ ಮನೆ ಹುಡುಕಿ, ಅದರಲ್ಲಿ ವಾಸಿಸುವುದು ಎಂಥ ಕಷ್ಟಕರ ಎಂಬುದನ್ನು ಅನುಭವಿಸಿಯೇ ತಿಳಿಯಬೇಕಲ್ಲವೇ….?
ಸೂರು, ಗೃಹ, ನಿಲಯ, ಗೂಡು, ಆಲಯ ಎಂದೆಲ್ಲ ಕರೆಯಿಸಿಕೊಳ್ಳುವ `ಮನೆ’ ಮನುಷ್ಯನ ಕನಿಷ್ಠ ಅವಶ್ಯಕತೆಗಳಲ್ಲಿ ಒಂದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಕೇವಲ ಮನುಷ್ಯನಿಗೆ ಮಾತ್ರವಲ್ಲ ಪ್ರಾಣಿ, ಪಕ್ಷಿಗಳಿಗೂ ತಮ್ಮ ರಕ್ಷಣೆ, ವಿಶ್ರಾಂತಿಗೋಸ್ಕರ ಮನೆ ಅಥವಾ ಗೂಡಿನ ಅವಶ್ಯಕತೆ ಇದ್ದೇ ಇದೆ. ಇದು ಸ್ವಂತದ್ದೂ ಇರಬಹುದು ಅಥವಾ ಬಾಡಿಗೆಯದ್ದೂ ಇರಬಹುದು. ಎಲ್ಲರಿಗೂ ಸ್ವಂತ ಮನೆಯಲ್ಲೇ ವಾಸಿಸಬೇಕೆಂದರೆ ಅದು ಅಸಾಧ್ಯವಾದದ್ದು. ಹಣ ಜಾಗ ಎಂದೆಲ್ಲ ಅನುಕೂಲ, ಸಾಧ್ಯಗಳು ಇರಬೇಕಾಗುತ್ತದೆ. ಇಂತಹ ಸಮಯದಲ್ಲಿ ಬೇರೆಯವರು ಕಟ್ಟಿದ ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳುವುದು ಅನಿವಾರ್ಯ.
ಮೊನ್ನೆ ನನ್ನ ಗೆಳತಿ ಫೋನ್ ಮಾಡಿದ್ದಳು. ಮಾತಾಡ್ತಾ, “ಈ ಬೆಂಗಳೂರು ಪೇಟೇಲಿ ಬಾಡಿಗೆ ಮನೇಲಿ ಇದ್ದು ಇದ್ದು ಬೇಸರ ಬಂದಿದೆ. ಈ ಓನರದ್ದು ತುಂಬಾ ಕಿರಿಕಿರಿ, ವರ್ಷ ವರ್ಷ ಬಾಡಿಗೆ ಏರಿಸ್ತಾರೆ. ವಾಟರ್ ಬಿಲ್ಲು, ಕರೆಂಟ್ ಬಿಲ್ಲು ಎಲ್ಲಾ ನಾವೇ ತುಂಬ್ಕೊಳ್ಳೋದು, ಮನೆಗೆ ಯಾರಾದ್ರೂ ಗೆಸ್ಟ್ ಬರೋ ಹಾಗಿಲ್ಲ ಓರೆಗಣ್ಣಿನಿಂದ ನೋಡ್ತಾರೆ, ಬೇಸಿಗೆ ಬರುವ ಮೊದಲೇ `ನೀರನ್ನು ಹದವಾಗಿ ಖರ್ಚು ಮಾಡ್ರೀ’ ಅಂತ ಶುರು ಮಾಡ್ತಾರೆ.
“ಈಗೀಗ ಎದುರು ಬಂದಾಗ ಹೇಳೋದಕ್ಕೆ ಸಂಕೋಚವಾಗುತ್ತೆ ಅಂತ ಮೊಬೈಲ್ ನಲ್ಲಿ ಮೆಸೇಜ್ ಕಳಿಸೋಕೆ ಶುರು ಹಚ್ಚಿದ್ದಾರೆ. ಚಿಕ್ಕ ಸದ್ದಾದ್ರೂ ಕಿವಿ ನೆಟ್ಟಗೆ ಮಾಡಿ ಕೇಳ್ತಾರೆ, ಗೋಡೆಗೆ ಮೊಳಳೆ ಹೊಡೆಯೋ ಹಾಗಿಲ್ಲ, ಎಲ್ಲದಕ್ಕೂ ತಕರಾರು. ಅದ್ಕೇ ಚಿಕ್ಕದಾದ್ರೂ ಸರಿ, ಸಾಲವಾದ್ರೂ ಸರಿ ಪುಟ್ಟದಾದ ಪುಟ್ಟದಾದ ಒಂದು ಸೈಟು ನೋಡ್ತಾ ಇದ್ದೀವಿ ಕಣೇ….
“ಒಂದು ಸ್ವಂತ ಮನೆ ಮಾಡ್ಕೋಬೇಕು, ಗಂಜೀ ಉಂಡ್ರೂ ಗಂಡನ ಮನೆ ಲೇಸು ಅನ್ನೋ ಗಾದೆ ಹಾಂಗೇ ಚಿಕ್ಕದಾದ್ರೂ ಸರಿ ನಮ್ಮದೂ ಅಂತ ಸ್ವಂತ ಮನೆ ಇರ್ಬೇಕು, ನೆಮ್ಮದಿಯಿಂದ ಇರೋದಕ್ಕೆ ಆಗುತ್ತೆ,” ಎಂದಿದ್ದಳು.
ನನಗೂ ಅವಳು ಹೇಳಿದ್ದು ಸರಿ ಎನಿಸಿತು.
ಅವರವರ ಸಮಸ್ಯೆ ಅವರಿಗೇ ಗೊತ್ತು. ಆದರೂ ನನಗೆ ತೋಚಿದಂತೆ, “ನೀವು ಹೇಳಿದ್ದು ಹೌದು ಕಣೇ…. ಆದ್ರೆ ಎಲ್ಲರಿಗೂ ನಿಂತ ಕೈಗೆ ಸೈಟು ಮನೆ ಮಾಡ್ಕೋಳ್ಳೋಕೆ ಆಗಲ್ವಲ್ಲಾ….. ನಾವು ಮನುಷ್ಯರಾಗದೇ ಹಕ್ಕಿ ಪಕ್ಷಿಗಳಾಗಿದ್ರೆ ಎಷ್ಟು ಒಳ್ಳೆಯದಿತ್ತು. “ಕಸಕಡ್ಡಿ ಎಲ್ಲಾ ತಂದು ಹೋದಲ್ಲೆಲ್ಲಾ ಒಂದು ಪುಟಾಣಿ ಗೂಡು ಕಟ್ಕೊಂಡು ಇರಬಹುದಿತ್ತು….. ಎಲ್ಲದಕ್ಕೂ ಕಾಲ ಕೂಡಿ ಬರಬೇಕಲ್ಲಾ….. ಆಗುತ್ತೆ ಬಿಡು,” ಎಂದು ಸಮಾಧಾನ ಮಾಡಿದ್ದೆ.
ಅದೇ ಕ್ಷಣದಲ್ಲೇ ನಾವು ಹಳ್ಳಿಯಲ್ಲಿದ್ದರು. ಪುಣ್ಯವಂತ್ರು ಎಲ್ಲರಿಗೂ ಹೊಲ ತೋಟ ಇಲ್ಲದೇ ಇದ್ರೂ ನಮ್ದೂ ಅಂತ ಒಂದು ಚಿಕ್ಕ ಮನೆಯಾದ್ರೂ ಇರುತ್ತೆ ಎನಿಸಿತು.
ಈಗೆಲ್ಲಾ ಸಿಟಿಯಲ್ಲಿ ಒಂದು ದೊಡ್ಡ ಬಿಲ್ಡಿಂಗ್ ಕಟ್ಟಿ ಬಾಡಿಗೆಗೆ ಕೊಟ್ಟುಬಿಟ್ರೆ ಅದೊಂದು ಫಲ ಕೊಡುವ ಮರದ ಇದ್ದ ಹಾಗೆ ಅನ್ನೋದಕ್ಕಿಂತ ದುಡ್ಡಿನ ಗಿಡ ನೆಟ್ಟ ಹಾಗೆ ಎಂದರೆ ಸರಿ ಹೊಂದುತ್ತೆ. ತಿಂಗಳು ತಿಂಗಳು ದುಡ್ಡು ಬೆಳೆಯುತ್ತಿರುತ್ತದೆ. ಬ್ಯಾಂಕಿನಲ್ಲಿ ಹಣ ಇಟ್ಟು ಪ್ರತಿ ತಿಂಗಳೂ ಇಂಟ್ರೆಸ್ಟ್ ತಗೊಂಡಂತೆ. ಅದಕ್ಕೇ ಇತ್ತೀಚೆಗೆ ಜನರಿಗಿಂತ ಮನೆಗಳೇ ಜಾಸ್ತಿ ಕಾಣುತ್ತವೆ. ಕೆಲವರಿಗೆ ಇದೊಂದು ಸಾಧನೆಯ ಕೆಲಸ ಹೌದು. ಅದ್ಕೇ ಅಲ್ವೇ ಒಂದು ಸ್ವಂತ ಮನೆಗೋಸ್ಕರ ನಗರದ ಜನರು ಹಗಲು ರಾತ್ರಿ ಲೆಕ್ಕಿಸದೆ ಕೆಲಸ ಮಾಡ್ತಾರೆ, ಏನೆಲ್ಲಾ ಕಷ್ಟಪಡ್ತಾರೆ.
ಈ ನಗರಗಳಲ್ಲಿ ಮನೆಗಳನ್ನೇನೋ ಕಟ್ಟಿ ಬಾಡಿಗೆಗೆ ಕೊಟ್ಟು ಬಿಡುತ್ತಾರೆ. ಆದರೆ ಅಲ್ಲಿ ಕುಡಿಯುವ ನೀರು ಹೋಗಲಿ ಸ್ನಾನ ಪಾತ್ರೆ ತೊಳೆಯುವುದಕ್ಕೂ ನೀರು ಇರುವುದಿಲ್ಲ. ಸಾರ್ವಜನಿಕ ನೀರನ್ನೇ ಅವಲಂಬಿಸಬೇಕಾಗುತ್ತೆ. ನಾನು ಬೆಂಗಳೂರಿನಲ್ಲಿ ಇದ್ದಾಗ ಬಾಡಿಗೆ ಮನೆಯಲ್ಲಿದ್ದೆ. ಮನೆ ಪುಟ್ಟದಾಗಿದ್ದರೂ ಚೆನ್ನಾಗಿತ್ತು. ಬಾಡಿಗೆಯೂ ಸ್ವಲ್ಪ ಕಡಿಮೆ ಇದ್ದುದರಿಂದ ಒಪ್ಪಿಕೊಂಡಿದ್ದೆ. ಆದರೆ ಅಲ್ಲಿ ಸಾರ್ವಜನಿಕ ನೀರನ್ನೇ ಅವಲಂಬಿಸಬೇಕಾಗಿತ್ತು. ಓನರ್ ಮನೆಯರದ್ದು ಬೋರ್ ಕೂಡ ಇರಲಿಲ್ಲ.
ಮುಂಜಾನೆ ಮೂರು ಗಂಟೆಗೆಲ್ಲಾ ಎದ್ದು ಸಾರ್ವಜನಿಕ ನೀರಿನ ಟ್ಯಾಂಕ್ ಹತ್ತಿರ ಬಿಂದಿಗೆ ಇಟ್ಟು ಬರಬೇಕಿತ್ತು. ನನ್ನ ಮನೆಯಿರುವುದು ಮೂರನೇ ಮಹಡಿಯಲ್ಲಿ. ಲಿಫ್ಟ್ ನ ವ್ಯವಸ್ಥೆಯೇನೂ ಇರಲಿಲ್ಲ. ನೀರಿನ ಬಿಂದಿಗೆ ಹಿಡಿದು ಮೆಟ್ಟಿಲು ಹತ್ತಿ ಹೋಗಬೇಕಿತ್ತು. ನೀರು ಬರುವುದು ಮುಂಜಾನೆ 7 ಗಂಟೆಗೆ. ಅಷ್ಟರಲ್ಲಿ ಮಧ್ಯದಲ್ಲಿ ನಾಲ್ಕು ಸಲ ಕೆಳಗಡೆ ಬಂದು ಬಿಂದಿಗೆ ಇದೆಯೋ ನೋಡಿ ಹೋಗುತ್ತಿದ್ದೆ. ಏಕೆಂದರೆ ಅಕ್ಕಪಕ್ಕದ ಮನೆಯವರು ಮಧ್ಯದಲ್ಲಿ ಬಂದು ತಮ್ಮ ಬಿಂದಿಗೆಯನ್ನು ತೂರಿಸಿ ಹೋಗಿಬಿಡುತ್ತಿದ್ದರು. ನಾವು ಮೊದಲು, ತಾವು ಮೊದಲು ಎಂದು ನೀರಿಗಾಗಿ ದಿನ ಜಗಳವಂತೂ ಇದ್ದೇ ಇರುತ್ತಿತ್ತು.
ಒಮ್ಮೆ ಏನಾಯಿತೆಂದರೆ ನೀರಿನ ಪೈಪ್ ಒಡೆದಿದ್ದರಿಂದ ಅದರ ರಿಪೇರಿ ಸಲುವಾಗಿ ಮೂರು ದಿನವಾದರೂ ನೀರೇ ಬಿಟ್ಟಿರಲಿಲ್ಲ. ಮನೆಯಲ್ಲಿದ್ದ ನೀರೆಲ್ಲ ಖಾಲಿಯಾಗಿತ್ತು. ಕುಡಿಯುವುದಕ್ಕೂ ನೀರಿಲ್ಲದೆ ಪಕ್ಕದ ಮನೆಯವರ ಜೊತೆ ಎರಡು ಬಿಂದಿಗೆ ನೀರಿಗಾಗಿ ಎರಡು ಕಿ.ಮೀ. ನಡೆದು ಹೋಗಿದ್ದೆ. ಆವಾಗಿನಿಂದ ಬಾಡಿಗೆ ಮನೆ ಹುಡುಕುವಾಗ ಮೊದಲು ನೀರಿನ ವ್ಯವಸ್ಥೆಯ ಬಗ್ಗೆ ಮಾತಾಡಿಕೊಂಡೇ ಒಪ್ಪಿಕೊಳ್ಳುವುದು ರೂಢಿಯಾಯ್ತು.
ನಮ್ಮೂರಿನಲ್ಲಿ ಒಂದು ಕುಟುಂಬ ಹೊರದೇಶದಲ್ಲಿತ್ತು. ಅವರಿಗೋ ಹಣ ಎಲ್ಲಿಡಬೇಕು ಅನ್ನೋದೇ ಸಮಸ್ಯೆ. ಊರಲ್ಲಿ ಪಿತ್ರಾರ್ಜಿತವಾಗಿ ಬಂದ ಮನೆ ಇದ್ರೂ, ಅವರಿಗೆ ರಿಟೈರ್ಡ್ ಆದ ಮೇಲೆ ಉಳಿಯಲಿಕ್ಕೆ ಅಂತ ಹಳ್ಳಿಗೆ ಸಮೀಪದ ನಗರದಲ್ಲೊಂದು ಸೈಟ್ ಖರೀದಿಸಿ ಸ್ವಂತ ಮನೆ ಮಾಡಿ ಬಾಡಿಗೆಗೆ ಕೊಟ್ಟಿದ್ದರು. ಮಕ್ಕಳಿಬ್ಬರೂ ನೌಕರಿ ಹಿಡಿದು ಸ್ವಂತ ಮನೆ ಕಟ್ಟಿದ್ದರು. ಆದರೆ ಕೊನೆಗಾಲದವರೆಗೂ ಅವರು ಮಾತ್ರ ಉಳಿದುಕೊಂಡಿದ್ದು ಬಾಡಿಗೆ ಮನೆಯಲ್ಲೇ.
ಇತ್ತೀಚೆಗೆ ನಮ್ಮ ಪರಿಚಯದವರೊಬ್ಬರದು ಚಿಕ್ಕ ನೌಕರಿ. ಬಾಡಿಗೆ ಮನೆ, ಅವರ ನೌಕರಿ ಹಣದಿಂದಲೇ ಮಕ್ಕಳ ಓದು, ಕುಟುಂಬ ನಿರ್ವಹಣೆ ಎಲ್ಲವೂ ನಡೆಯಬೇಕು. ಆದರೂ ಅವರು ಕಷ್ಟಪಟ್ಟು ಹಣ ಉಳಿಸಿ ಬ್ಯಾಂಕ್ ನಲ್ಲಿ ಕೂಡಿಟ್ಟು, ಸ್ವಂತ ಮನೆ ಕಟ್ಟಿ ಗೃಹಪ್ರವೇಶ ಮಾಡಿ ಒಂದೆರಡು ತಿಂಗಳು ವಾಸ ಮಾಡಿದ್ದರು. ಆದರೆ ಅವರ ಅದೃಷ್ಟ ನೋಡಿ, ಹೊಸ ಮನೆಗೆ ಬಂದಾಗಿನಿಂದಲೂ ಅವರಿಗೆ ಒಂದಲ್ಲಾ ಒಂದು ಸಮಸ್ಯೆ ಬಂದು, ಕೊನೆಗೆ ಮನೆಯ ವಾಸ್ತು ಸರಿ ಇಲ್ಲವೆಂಬ ಕಾರಣಕ್ಕೆ ಪುನಃ ಬಾಡಿಗೆ ಮನೆಗೇ ಬರುವಂತಾಯಿತು.
ಇದೇ ತರಹ ನನ್ನ ಸ್ನೇಹಿತೆಯ ಅಣ್ಣನಿಗೆ ಬಿಸ್ ನೆಸ್ ಕೈ ಹಿಡಿದು ಒಳ್ಳೆಯ ಲಾಭ ಬರುತ್ತಿತ್ತು. ಧೈರ್ಯ ಮಾಡಿ ಬ್ಯಾಂಕಿನಲ್ಲಿ ಲೋನ್ ತೆಗೆದು ಒಂದು ಚೆಂದದ ಮನೆ ಕಟ್ಟಿದ. ಒಂದು ವರ್ಷ ಕಳೆದಿರಬಹುದು ಪಾಪ ಆ್ಯಕ್ಸಿಡೆಂಟ್ ನಲ್ಲಿ ತೀರಿಕೊಂಡ. ಆಮೇಲೆ ಲೋನಿನ ಕಂತನ್ನು ತುಂಬುವುದಕ್ಕೆ ಕಷ್ಟವಾಗಿ ಮನೆಯನ್ನೇ ಮಾರಬೇಕಾಯ್ತು. ಕೆಲವೊಮ್ಮೆ ಹೀಗೆ ನಮಗೆ ಸ್ವಂತ ಮನೆಯ ಯೋಗವಿಲ್ಲದೇ ಇದ್ದರೆ ಕಟ್ಟಿದ ಮನೆಯನ್ನೂ ಬಿಡುವ ಪ್ರಸಂಗ ಬಂದೊದಗುತ್ತದೆ.
ಇತ್ತೀಚೆಗೆ ನನ್ನ ತಂಗಿಯ ಮನೆಗೆ ಹೋಗಿದ್ದೆ. ಅವಳೋ ನಗರದಲ್ಲಿ ಎರಡು ಬೆಡ್ ರೂಮಿನ ಒಂದು ಮನೆ ಕಟ್ಟಿದ್ದಳು. ಮೇಲ್ಗಡೆಯೂ ಅಷ್ಟೇ ದೊಡ್ಡ ಮನೆ ಕಟ್ಟಿ ಬಾಡಿಗೆಗೆ ಕೊಟ್ಟಿದ್ದಳು. ಈ ಸಲ ಹೋದಾಗ ಬಾಡಿಗೆ ಮನೆಯವರ ಸದ್ದಿರಲಿಲ್ಲ.
“ನಿಮ್ಮ ಬಾಡಿಗೆ ಮನೆಯವರು ಮನೆ ಖಾಲಿ ಮಾಡಿದ್ರಾ….” ಎಂದು ಕೇಳಿದೆ. “ಇಲ್ಲಾ ನಾವೇ ಮನೆ ಖಾಲಿ ಮಾಡಿಸಿದ್ವಿ,” ಎಂದಳು.
“ಯಾಕೆ ಏನಾಯ್ತು…..?” ಕೇಳಿದೆ.
“ಅದೇನು ಕೇಳ್ತೀಯಾ ಮಾರಾಯ್ತಿ…..” ಎನ್ನುತ್ತಾ ಕಥೆ ಶುರು ಹಚ್ಚಿದಳು.
ಇವರ ಮನೆಯಲ್ಲಿ ಬಾಡಿಗೆ ಬಂದವರು ಪ್ರಾಯದ ಗಂಡಹೆಂಡತಿ. ಆಗಷ್ಟೇ ಮದುವೆಯಾಗಿ ಎರಡು ವರ್ಷ ಆಗಿತ್ತಂತೆ. ಗಂಡನದೋ ಸಣ್ಣ ಹೋಟೆಲ್ ಬಿಸ್ ನೆಸ್. ಹಳ್ಳೀಲಿ ಬೇಕಾದಷ್ಟು ಆಸ್ತಿಪಾಸ್ತಿ ಮನೆ ಎಲ್ಲಾ ಇದೆಯಂತೆ. ಆದ್ರೆ ಇವರಿಗೋ ಬಿಸಿ ರಕ್ತ. ಫೋಟೇಲಿ ಏನೋ ಸಾಧನೆ ಮಾಡ್ತೀವಿ ಅಂತ, ಪಿಜ್ಜಾ ಬರ್ಗರ್ ಅದೂ ಇದೂ ಅಂತ ಪ್ರಾಯದವರಿಗೆ ತಿನ್ನೋಕೆ ಮಾಡುವ ಕೆಲಸ. ಗಂಡ ಮುಂಜಾನೆ ಸಂಜೆ ಹೊತ್ತು ಹೆಂಡತಿ ಅವನ ಸಹಾಯಕ್ಕೆ ಅಂತ ಹೋಗ್ತಾ ಇದ್ಲು. ಬರೋದು ರಾತ್ರಿ 11-12 ಗಂಟೆಗೆ. ಬಂದ ಮೇಲೆ ಮಾತು ಜಗಳ ಅದು ಇದೂ ಅಂತ 12 ಗಂಟೆಯಾದ್ರೂ ಮಲಗಲ್ಲ. ಕೆಲವೊಮ್ಮೆ ಅವರ ಸ್ನೇಹಿತರೂ ಬರುತ್ತಿದ್ದರಂತೆ, ಮೊಬೈಲ್ ನಲ್ಲಿ ಅದೋನೇ ಪಬ್ ಜಿ ಆಡೋದು. ಅವರ ಗಲಾಟೆ, ಧಡಾಬಢಾ ಸದ್ದಿಗೆ ಕೆಳಗಡೆ ಮಲಗಿದವರಿಗೆ ನಿದ್ದೆಯಿಲ್ಲ. ಮನೆ ನೋಡಿದ್ರೆ ಗೊಬ್ಬರದ ಗುಂಡಿ, 8-10 ದಿನವಾದರೂ ಕ್ಲೀನ್ ಮಾಡಲ್ಲ. ಟಾಯ್ಲೆಟ್ ಬಣ್ಣಗೆಟ್ಟಿದೆ. ಕೈ ತೊಳೆಯುವ ಬೇಸಿನ್ನು ಕರೀ ಕಬ್ಬಿಣದ ತೊಟ್ಟಿಯಾಗಿತ್ತಂತೆ.
ಅದೇನೋ ಚೀಟಿ ತಿಂದು ಉಗುಳೋದು, ಬೇಸಿನ್ನು ಕೆಂಪು ಕಲೆಯಿಂದ ತುಂಬಿದೆ. ಇದೂ ಸಾಲ್ದು ಅಂತ ಗಂಡನಿಗೆ ಆಗಾಗಾ ಸಿಟ್ಟು ಬರೋದಂತೆ. ಹಾಗೆ ಸಿಟ್ಟು ಬಂದ್ರೆ ಕಣ್ಣಿಗೆ ಕಂಡಿದ್ದು, ಕೈಗೆ ಸಿಕ್ಕಿದ್ದು ತಗೊಂಡು ಕುಟ್ಟೋದಂತೆ, ಗ್ರಾನೈಟ್ ಹಾಕಿದ ಹೊಸ ಮನೆ ಗ್ಯಾಸ್ ಕಟ್ಟೆಯೆಲ್ಲಾ ಒಡೆದು ಹೋಗಿದೆಯಂತೆ.
`ಬಾಡಿಗೆಯೇನೂ ಜಾಸ್ತಿ ಮಾಡಲ್ಲ. ದಯವಿಟ್ಟು ಮನೆ ಕ್ಲೀನ್ ಇಟ್ಕೊಳ್ಳಿ, ಎಲ್ಲಾ ದುಬಾರಿ ಐಟಮ್ ಗಳು ಪದೇ ಪದೇ ಹಾಕ್ಸೋಕೆ ಆಗಲ್ಲ. ಅದ್ರಲ್ಲೂ ಸಣ್ಣಪುಟ್ಟ ರಿಪೇರಿ ಕೆಲಸಕ್ಕೆ ಯಾರೂ ಬರಲ್ಲ,’ ಎಂದು ತಂಗಿ ಗಂಡ ಕೇಳಿಕೊಂಡಿದ್ದಕ್ಕೆ, ತೋಳು ಮಡಚಿಕೊಂಡು ಇವರಿಗೇ ಹೊಡೆಯುವುದಕ್ಕೆ ಬಂದನಂತೆ ಆ ಮಹಾಶಯ. ಪುಣ್ಯಕ್ಕೆ ಪಕ್ಕದ ಮನೆಯವರು ಬಂದು ಬಿಡಿಸಿದ್ರಂತೆ. ಅದಕ್ಕೆ ಬಾಡಿಗೆ ಬರದಿದ್ದರೂ ಅಡ್ಡಿಯಿಲ್ಲ ಇಂಥವರ ಸಹವಾಸವೇ ಬೇಡ ಅಂತ ಮನೆ ಖಾಲಿ ಮಾಡ್ಸಿದ್ವಿ ಎಂದು ತಂಗಿ ಗೋಳು ಹೇಳಿಕೊಂಡಳು.
ಬಾಡಿಗೆ ಮನೆ ಹುಡುಕೋದು ಏನು ಸುಲಭದ ಕೆಲಸವಲ್ಲ ಬಿಡಿ. ದಲ್ಲಾಳಿಗಳಿಗೆ ಹೇಳಿದರೆ ಅವರು ಕೇಳಿದಷ್ಟು ಹಣ ಕೊಡಬೇಕು. ಅದೂ ಅಲ್ದೆ ಬೆಂಗಳೂರಿನಂಥ ನಗರದಲ್ಲಿ ಶಾಸ್ತ್ರ ಸಂಪ್ರದಾಯ ಜಾಸ್ತಿ. ಬ್ಯಾಚುಲರ್ಸ್ ಗೆ ಮನೆ ಕೊಡುವಾಗ ಅನುಮಾನ ಪಡ್ತಾರೆ. ಕೆಲವರಂತೂ ಕೊಡೋದೇ ಇಲ್ಲ. ಬ್ಯಾಚುಲರ್ಸ್ ಮನೆಯನ್ನು ಬೇಕಾಬಿಟ್ಟಿ ಇಟ್ಕೋತಾರೆ. ಫ್ರೆಂಡ್ಸು ಪಾರ್ಟಿ ಅದೂ ಇದೂ ಅಂತ ಗಬ್ಬು ಎಬ್ಬಿಸ್ತಾರೆ. ಇನ್ನು ಹೆಣ್ಣು ಮಕ್ಕಳೇನಾದರೂ ಬಾಡಿಗೆಗೆ ಬಂದ್ರೆ ಜವಾಬ್ದಾರಿ ಜಾಸ್ತಿ. ಮನೆಗೆ ಯಾರು ಬರ್ತಾರೆ ಹೋಗ್ತಾರೆ, ಎಷ್ಟೊತ್ತು ಇರ್ತಾರೆ ಅಂತೆಲ್ಲಾ ಗಮನಿಸ್ತಾನೇ ಇರಬೇಕಾಗುತ್ತೆ. ನಾಳೆ ಏನಾದ್ರೂ ಹೆಚ್ಚು ಕಡಿಮೆಯಾದ್ರೆ…. ಅನ್ನೋ ಹೆದರಿಕೆ ಬೇರೆ. ಅದಕ್ಕೆ ಇದ್ಯಾವ ಉಸಾಬರಿಯೂ ಬೇಡ ಅಂತ ಮನೆ ಕೊಡೋದಿಲ್ಲ ಅಂದುಬಿಡ್ತಾರೆ. ಇನ್ನು ಕೆಲವು ಕಡೆ ಮನೆ ಬಾಡಿಗೆಗೆ ಕೊಡ್ತೀರಾ ಎಂದು ಕೇಳಿದ್ರೆ ವೆಜ್ಜೋ, ನಾನ್ ವೆಜ್ಜೋ ಅಂತ ಕೇಳ್ತಾರೆ. ಓನರ್ ಗಳು ನಾನ್ ವೆಜ್ಜಾದರೆ, ವೆಜ್ ನವರಿಗೆ ಬಾಡಿಗೆ ಕೊಡುವುದಕ್ಕೆ ಅನುಮಾನ ಪಡ್ತಾರೆ. ಏಕೆಂದರೆ ನಾನ್ ವೆಜ್ಜಿನ ವಾಸನೆ ಬಂದರೆ ಬಾಡಿಗೆಯವರು ಮೂಗು ಮುರಿಯುತ್ತಾರೆ. ಪಾಪ ಅವರಿಗೆ ಅದರ ಅನುಭವ ಇರಲ್ಲ ನೋಡಿ. ಓನರ್ ವೆಜ್ ನವರಾದರೆ ನಾನ್ ವೆಜ್ ನವರಿಗೆ ಬಾಡಿಗೆಗೆ ಕೊಡುವುದೇ ಇಲ್ಲ. ಇನ್ನು ಈ ಬೆಂಗಳೂರಿನಲ್ಲಿ ಅಣ್ಣತಂಗಿ ಸೇರಿ ರೂಮೋ, ಮನೆಯೋ ಮಾಡೋ ಹಾಗಿಲ್ಲ. ಮೊನ್ನೆ ಹಾಗೆ ಆಯ್ತು ನೋಡಿ. ನನ್ನ ಮಗನಿಗೆ ಹೊಸದಾಗಿ ಕೆಲಸ ಸಿಕ್ಕಿತ್ತು. ಅವನ ಆಫೀಸಿನ ಹತ್ತಿರವೇ ನನ್ನ ಅಕ್ಕನ ಮಗಳ ಆಫೀಸು ಕೂಡ ಇತ್ತು. ಬೆಂಗಳೂರಿನಲ್ಲಿ ಮಾರು ಮಾರಿಗೂ ಪೀಜಿಗಳಿದ್ದರೂ, ಅವರು ಮಾಡುವ ಊಟ ತಿಂಡಿಗಳು ಇವರಿಗೆ ಒಗ್ಗಬೇಕಲ್ಲಾ…. ಹಾಸ್ಟೆಲ್ ಪೀಜಿಗಳಲ್ಲೆಲ್ಲ ತುಂಬಾ ಜನರಿಗೆ ಅಡುಗೆ ಮಾಡಬೇಕಾಗುತ್ತೆ. ಆದ್ದರಿಂದ ರುಚಿ ಶುಚಿ ಎರಡೂ ದೂರವೇ.
ಆದ್ದರಿಂದ ಇಬ್ಬರೂ ಸೇರಿ ಸಿಂಗ್ ಬೆಡ್ ರೂಮಿನ ಬಾಡಿಗೆಮನೆ ಮಾಡಿದ್ರಾಯ್ತು, ಸ್ವಂತ ಅಡುಗೆ ಮಾಡ್ಕೋಬಹುದು ಅಂತ ಆಲೋಚನೆ ಮಾಡಿ ಶನಿವಾರ, ಭಾನುವಾರ ಮನೆ ಹುಡುಕುವ ಕೆಲ್ಸ ಮಾಡಿದ್ರು. ಆದ್ರೆ ಪಾಪ ಸುಡೋ ಬಿಸಿಲಲ್ಲಿ ಓಣಿ ಓಣಿ ಅಲೆದ್ರೂ ಯಾರೂ ಬಾಡಿಗೆಗೆ ಮನೆ ಕೊಡದೇ ಇಬ್ರೂ ಬೇರೆ ಬೇರೆಯಾಗಿಯೇ ರೂಮ್ ಮಾಡಿಕೊಂಡರು.
ಇನ್ನು ಈ ಬೆಂಗಳೂರಿನರಿಗೆ ಆಷಾಢ ಮಾಸ ನಿಷಿದ್ಧ. ಬಾಡಿಗೆ ಮನೆಯವರಿಗೆ ಖಾಲಿ ಮಾಡೋಕೂ ಬಿಡಲ್ಲ, ಮನೆಗೆ ಬರೋದಕ್ಕೂ ಬಿಡಲ್ಲ. ಏನೇ ಒಳ್ಳೆಯ ಕೆಲಸವಿದ್ದರೂ ಈ ಒಂದು ತಿಂಗಳು ಮುಂದಕ್ಕೆ ಹಾಕಿಬಿಡುತ್ತಾರೆ.
ಇನ್ನೂ ಕೆಲವೊಮ್ಮೆ ಈ ಬಾಡಿಗೆ ಮನೆ ತುಂಬಾ ಮಜಾ ಕೊಡುತ್ತೆ. ಒಂದೇ ಅಪಾರ್ಟ್ ಮೆಂಟ್ ನಲ್ಲಿ ಅಥವಾ ವಠಾರದಲ್ಲಿ ಬಾಡಿಗೆಗೆ ಇದ್ದರಂತೂ ಸಂಜೆಯ ಹೊತ್ತು ಹೊರಗಡೆ ಬಂದು ಕಟ್ಟೆ ಪುರಾಣ ಹೊಡೋದು, ಸುಖ ದುಃಖ ಹಂಚಿಕೊಳ್ಳೋದು… ಒಬ್ಬರಿಗೊಬ್ಬರು ಸಹಾಯ ಮಾಡೋದು ಎಲ್ಲಾ ಮಜವಾಗೇ ಇರುತ್ತೆ. ಮೊನ್ನೆ ನಮ್ಮ ಪಕ್ಕದ ಮನೆಯವರು ಹೇಳ್ತಾ ಇದ್ರು, ಅವರು ಬಾಡಿಗೆ ಮನೆಯಲ್ಲೇ ಇದ್ರೂ ಟೆರೇಸ್ ಮೇಲೆ ಹೂವಿನ ಗಿಡ, ತರಕಾರಿ ಗಿಡಗಳನ್ನೆಲ್ಲಾ ಬೆಳೆಸಿದ್ದಾರಂತೆ. `ನೀವು ಈಗ ಊರಿಗೆ ಬಂದಿರೋದ್ರಿಂದ ಗಿಡಗಳಿಗೆ ಯಾರು ನೀರು ಹಾಕ್ತಾರೆ…. ಕೆಲಸದವ್ರಿಗೆ ಹೇಳ್ತೀರಾ…?’ ಎಂದು ಕೇಳಿದ್ದಕ್ಕೆ `ಕೆಲಸದವ್ರಿಗೆ ಹೇಳಬೇಕೆಂದಿದ್ವಿ. ಆದ್ರೆ ನಮ್ಮ ಓನರ್ ಸಹ ಅಲ್ಲೇ ಇರೋದ್ರಿಂದ `ಅಯ್ಯೋ ಗಿಡಗಳಿಗೆ ನಾವೇ ನೀರು ಹಾಕ್ತೀವಿ. ನೀವು ನಿಶ್ಚಿಂತೆಯಿಂದ ಹೋಗಿಬನ್ನಿ,’ ಎಂದು ಕಳ್ಸಿದ್ರಂತೆ. ನಾವು ಅವರಿಗೆ ಅನಾನುಕೂಲವಾದಾಗ ಊರಿಂದ ಬಂದ ದಿವಸಗಳಲ್ಲಿ ನಮ್ಮ ಮನೇಲಿ ಮಾಡಿದ ಸಾಂಬಾರು, ಅದೂ ಇದೂ ಅಂತ ಕೊಡ್ತೀವಿ. ಅವ್ರು ಕೂಡ ಮನೇಲಿ ಏನೇ ವಿಶೇಷ ಅಡುಗೆ ಮಾಡಿದ್ರೂ ನಮಗೆ ಕೊಡ್ತಾರೆ. ನಮಗೆ ತೊಂದರೆ ಆದಾಗ ಅರ್ಧ ರಾತ್ರೀಲೀ ಕರೆದರೂ ಬೇಸರ ಇಲ್ದೇ ಬರ್ತಾರೆ,’ ಎಂದು ಖುಷಿಯಿಂದ ಹೇಳಿದರು.
“ಹೌದು ಮನೆ ಬಾಡಿಗೆಯದ್ದಾಗಲೀ, ಸ್ವಂತದ್ದಾಗಲೀ ಒಬ್ಬರಿಗೊಬ್ಬರು ಕಷ್ಟಸುಖಕ್ಕೆ ಆತುಕೊಳ್ಳಬೇಕಲ್ವಾ,” ಎಂದು ನಾನು ಖುಷಿಯಿಂದ ಹೇಳಿದೆ.
ಆದರೆ ಕೆಲವೊಮ್ಮೆ ಇನ್ನೊಂದು ತರಹದ ಸಮಸ್ಯೆನೂ ಆಗಿಬಿಡುತ್ತೇರಿ. ಇತ್ತೀಚೆಗೆ ನಮ್ಮ ದೂರದ ಸಂಬಂಧಿಕರೊಬ್ಬರು ದೊಡ್ಡ ಮನೆ ಕಟ್ಟಿದ್ದರು. ಮಹಡಿ ಮೇಲೆ ಒಂದು ಮನೆ ಮಾಡಿ, ಫ್ಯಾಮಿಲಿಗೆ ಒಂದು ಕಡೆ ಬಾಡಿಗೆಗೆ ಕೊಟ್ಟು, ಇನ್ನೊಂದು ಕಡೆ ಮನೆ ಓನರ್ ತಮ್ಮ ಆಫೀಸ್ ಮಾಡಿಕೊಂಡರು. ಬಾಡಿಗೆ ಮನೆಗೆ ಬಂದರು ಎಳೇ ವಯಸ್ಸಿನ ದಂಪತಿಗಳು. ಇವರಿಗೊಬ್ಬ ಪುಟ್ಟ ಮಗನಿದ್ದ. ಆ ಮಗು ಈ ಓನರ್ ಮತ್ತು ಅವರ ಹೆಂಡತಿ, ಮಕ್ಕಳನ್ನು ತುಂಬ ಹಚ್ಚಿಕೊಂಡಿತ್ತು.
ಮನೆ ಮಾಲೀಕರ ಮಕ್ಕಳಿಬ್ಬರೂ ಹೈಸ್ಕೂಲ್ ನಲ್ಲಿ ಓದುತ್ತಿದ್ದರು. ಆಗಾಗ ಆ ಪುಟ್ಟ ಮಗುವಿನ ಊಟ, ತಿಂಡಿ ಎಲ್ಲ ಇವರ ಮನೆಯಲ್ಲೇ ನಡೆಯುತ್ತಿತ್ತು. ಮಗು ಪ್ರೀತಿಯಿಂದ ಓನರ್ ರನ್ನು `ಅಂಕಲ್’ ಎಂದು ಕರೆಯುತ್ತಿತ್ತು. ಒಂದು ದಿನ ಚಿಕ್ಕ ಮಗುವಿನ ಹುಟ್ಟುಹಬ್ಬ. ಆ ದಿನ ಈ ಓನರ್ ಅಂಕಲ್ ಪ್ರೀತಿಯಿಂದ ಆ ಮಗುವಿಗೊಂದು ಡ್ರೆಸ್ ತಂದುಕೊಟ್ಟರು. ಇದರಿಂದ ಮಾಲೀಕರ ಪತ್ನಿಗೆ ಕೋಪ ಬಂದಿತು. ತನ್ನ ಗಂಡ ತಮ್ಮ ಮಕ್ಕಳಿಗೆ ತರುವಾಗ ಲೆಕ್ಕಾಚಾರ ಮಾಡುವ ಬಾಡಿಗೆಯವರ ಮಗುವಿಗೆ ದಬಾರಿ ಡ್ರೆಸ್ ತಂದುಕೊಡುತ್ತಿದ್ದಾನಲ್ಲ ಎಂದು ಮಾಲೀಕರ ಪತ್ನಿಗೆ ಕೋಪ.
ಇಷ್ಟೇ ಆದರೆ ಸುಮ್ಮನಿರಬಹುದಿತ್ತು. ಈ ಬಾಡಿಗೆ ಮನೆಯವಳ ಗಂಡ ಮುಂಜಾನೆ ಹೋದರೆ ತಡ ರಾತ್ರಿ ಮನೆಗೆ ಬರುತ್ತಿದ್ದ. ಮನೆ ಮಾಲೀಕರು ಮಹಡಿಯ ಮೇಲಿನ ಇನ್ನೊಂದು ರೂಮಿನಲ್ಲಿ ಅವರ ಆಫೀಸು ಎರಡೂ ಅಕ್ಕಪಕ್ಕವೇ ಇರುವುದಲ್ಲವೇ…? ಮಗುವಿನ ಹೆಳವೆಯಲ್ಲಿ ತಾಯಿಯ ಸಲುಗೆಯೂ ಬೆಳೆದಿತ್ತು. ಮಗುವಿನ ತಾಯಿ ಟೀ, ಕಾಫಿ ಮಾಡಿದಾಗ ಕೊಡುವುದು, ಈ ಅಂಕಲ್ ಮಗುವನ್ನು ಮುದ್ದು ಮಾಡುವುದು, ತಮಾಷೆ ನಗು ಎಂದು ನಡೆಯುತ್ತಿತ್ತು. ಇದನ್ನು ನೋಡಿದ ಮಾಲೀಕನ ಹೆಂಡತಿಗೆ ಗಂಡನ ಮೇಲೆ ಅನುಮಾನ ಬಂದು ಮನೆಯಲ್ಲಿ ಕುರುಕ್ಷೇತ್ರವೇ ನಡೆದುಹೋಯ್ತು. ಕೊನೆಗೆ ಯಾವ ಉಸಾಬರಿಯೂ ಬೇಡೆವೊಂದು ಬಾಡಿಗೆ ಮನೆಯವರನ್ನು ಬಿಡಿಸಿಬಿಟ್ಟರು. ನಂತರದ ದಿನಗಳಲ್ಲಿ ಪುನಃ ಬೇರೆಯವರು ಮನೆಯನ್ನು ಬಾಡಿಗೆಗೆ ಕೇಳಿದಾಗ ಮನೆಯೊಡತಿಗೆ ದೊಡ್ಡ ಸಮಸ್ಯೆಯಾಯ್ತು. ಬಾಡಿಗೆಯವನ ಹೆಂಡತಿ ಪ್ರಾಯದವಳಾಗಿದ್ದರೆ ಗಂಡನನ್ನು ಕಾಯಬೇಕು. ಪ್ರಾಯದ ಗಂಡು ಮಕ್ಕಳಿದ್ದರೆ ಮಗಳನ್ನು ಕಾಯಬೇಕು, ಪ್ರಾಯದ ಹೆಣ್ಣುಮಕ್ಕಳಿದ್ದರೆ ಮಗನನ್ನು ಕಾಯಬೇಕು. ವಯಸ್ಸಾದರು ಬಂದರೆ ಮೇಲ್ಗಡೆ ಹತ್ತಿ ಇಳಿಯುವುದು ಕಷ್ಟ. ಜವಾಬ್ದಾರಿ ಜಾಸ್ತಿ, ಅಂತೂ ಕೊನೆಗೆ ಮನೆಯನ್ನು ಬಾಡಿಗೆ ಕೊಡುವುದೇ ಬೇಡವೆಂಬ ತೀರ್ಮಾನ ಮಾಡಬೇಕಾಯ್ತು.
ಇನ್ನೂ ಕೆಲವು ಕಡೆ ಮನೆ ಮಾಲೀಕರದ್ದು ಇನ್ನೊಂದು ತರಹದ ಸಮಸ್ಯೆ. ಮೊದಲು ಕರಾರು ಪತ್ರಗಳನ್ನು ಕೊಡುವಾಗ ದೊಡ್ಡ ದೊಡ್ಡ ಕಂಡೀಶನ್ ಹಾಕಿರ್ತಾರೆ. ತಿಂಗಳು ಬಾಡಿಗೆ ಎಣಿಸುವಾಗ ಒಂದು ದಿನ ಲೇಟವಾದರೂ ಅನುಮಾನದ ಕಣ್ಣಲ್ಲಿ ನೋಡ್ತಾರೆ. ಆದರೆ ಮನೆ ಬಿಡುವಾಗ ಅಡ್ವಾನ್ಸ್ ಕೇಳಿದರೆ ನಾಳೆ ನಾಳೆ ಎಂದು ಹೇಳುತ್ತಲೇ ಇರುತ್ತಾರೆ.
ಕೆಲವೊಮ್ಮೆ ಈ ಮನೆ ಮಾಲೀಕರು ಬಾಡಿಗೆಯವರು ತಾವು ಹೇಳಿದಂತೆ ಕೇಳಬೇಕೆಂದು ಬಯಸುತ್ತಾರೆ. ದರ್ಪದಲ್ಲಿ ಮಾತಾಡುತ್ತಾರೆ. ನಮ್ಮ ಪರಿಚಯದವರೊಬ್ಬರ ಮನೆಗೆ ಹೋದಾಗ ಅವರು ಮೇಲ್ಗಡೆ ಮನೆಯಲ್ಲಿದ್ದು ಕೆಳಗಡೆ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು. ಸುಮ್ಮನೆ ಕುತೂಹಲಕ್ಕೆಂದು, “ಸರ್, ಅದೇನು ಎಲ್ಲಾ ಓನರ್ ಗಳೂ ಕೆಳಗಡೆ ಉಳಿದು ಮೇಲ್ಗಡೆ ಬಾಡಿಗೆಗೆ ಕೊಡ್ತಾರೆ, ಆದ್ರೆ ನೀವು ಅದಕ್ಕೆ ವಿರುದ್ಧವಾಗಿ ಮೇಲ್ಗಡೆ ನೀವಿದ್ದು, ಕೆಳಗಡೆ ಬಾಡಿಗೆಗೆ ಕೊಟ್ಟಿದ್ದೀರಲ್ಲಾ….?” ಎಂದು ಪ್ರಶ್ನಿಸಿದೆ.
ಅದಕ್ಕವರು, “ಬಾಡಿಗೆಯರು ಯಾವಾಗಲೂ ನಮ್ಮ ಅಂಡರ್ ಇರಬೇಕು. ನಾವು ಅವರ ಅಂಡರ್ ಇರಬಾರದು,” ಎಂದರು. ನಾನು ಒಂದು ಕ್ಷಣ ಆಶ್ಚರ್ಯದಿಂದ ಅವರ ಮುಖ ನೋಡಿ, “ಸರ್ ಇವತ್ತಿನ ದಿವಸ ಯಾವ ವ್ಯಕ್ತಿಯೂ ಯಾರ ಅಂಡರ್ ಇರುವುದಕ್ಕೆ ಇಷ್ಟಪಡೋದಿಲ್ಲಾ. ಅಧಿಕಾರ, ಅಹಂಕಾರಗಳು ಮೊದಲಾಯ್ತು. ಬದುಕಿನಲ್ಲಿ ಅವಲಂಬನೆ ಅವಶ್ಯಕತೆ ಎಲ್ಲರಿಗೂ ಅನಿವಾರ್ಯ. ನಾವು ಪರಸ್ಪರ ಸಹಕಾರ ಪ್ರೀತಿ ವಿಶ್ವಾಸದಿಂದ ಬದುಕಬೇಕಷ್ಟೆ,” ಎಂದೆ. ಅದಕ್ಕವರು ಒಪ್ಪಿಕೊಂಡು ತಲೆದೂಗಿದರು.
ಹೀಗೆ ಯೋಚನ ಮಾಡಿ ನೋಡಿದರೆ ನಾವೆಲ್ಲರೂ ಭೂತಾಯಿಯ ಮಡಿಲಲ್ಲಿ ಬಾಡಿಗೆದಾರರೇ ಅಲ್ಲವೇ. ಅದಕ್ಕೆ `ದೇವರ ಮನೆಯಿದು ಈ ಜಗವೆಲ್ಲಾ…. ಬಾಡಿಗೆದಾರರು ನಾವುಗಳೆಲ್ಲಾ….’ ಎಂದಿದ್ದಾರೆ ಕವಿಯೊಬ್ಬರು. ಇದು ಎಷ್ಟು ಸತ್ಯ ಅಲ್ವಾ….? ಈ ಬದುಕಲ್ಲಿ ಯಾರೂ, ಯಾವುದೂ ಶಾಶ್ವತವಲ್ಲ. ಇವೆಲ್ಲಾ ಸತ್ಯದ ಅರಿವಿದ್ದರೂ ಭೂಮಿಯ ಮೇಲೆ ಇರೋತನಕ ನಾನು, ನನ್ನದು ಎಂಬ ಪಾಶ ಇದ್ದಿದ್ದೇ. ಏನಂತೀರಾ…..?





