ಉತ್ತರ ಕರ್ನಾಟಕದಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಅಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ರಂಗಭೂಮಿಯಿರಲಿ, ಸಂಗೀತ ಕ್ಷೇತ್ರವಿರಲಿ, ಜಾನಪದವಿರಲಿ, ಅಲ್ಲಿಯ ಜನ ಒಂದಲ್ಲ ಒಂದು ಹವ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ನಟಿ, ವಸ್ತ್ರವಿನ್ಯಾಸಕಿ ಅಪೇಕ್ಷಾ ಪುರೋಹಿತ್ ಉತ್ತರ ಕರ್ನಾಟಕದ ಪ್ರತಿಭೆ. ಬಾಗಲಕೋಟೆಯಿಂದ ಬಂದಂಥ ಕಲಾವಿದೆ. ನಟನೆಯನ್ನು ಆರಿಸಿಕೊಂಡವರಲ್ಲ. ಅದಾಗಿ ಒಲಿದು ಬಂದದ್ದು ಅಂತಾನೇ ಹೇಳಬಹುದು, ಅಪೇಕ್ಷಾ ಪ್ರಶಸ್ತಿ ವಿಜೇತ, ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರ ಪತ್ನಿ.
ಅಪೇಕ್ಷಾ ಪುರೋಹಿತ್ರನ್ನು ಮಾತನಾಡಿಸಿದಾಗ, ಆಗಷ್ಟೇ ಪತಿ ಪವನ್ರನ್ನು ಸಿಂಗಪೂರಿಗೆ ಬೀಳ್ಕೊಟ್ಟಿದ್ದರು.
“ಹೌದು ಈಗಷ್ಟೇ ಸಿಂಗಪೂರಿಗೆ `ರೇಮೊ’ ಚಿತ್ರದ ನಿಮಿತ್ತ ಹೊರಟಿದ್ದಾರೆ,” ಎನ್ನುತ್ತಾ ತಮ್ಮ ಬಗ್ಗೆ ಹೇಳುತ್ತಾ ಹೋದರು. ನಾನು ಬಾಗಲಕೋಟೆಯಿಂದ ಬೆಂಗಳೂರಿಗೆ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡುವ ಸಲುವಾಗಿ ಬಂದದ್ದು. ಬೇಸಿಕಲಿ ನಾನು ಕ್ಲಾಸಿಕ್ ಡ್ಯಾನ್ಸರ್, ನಾಯಕಿ ಕೂಡಾ ಆಗಿದ್ದೀನಿ. ಹಿಂದೂಸ್ಥಾನಿ ಮ್ಯೂಸಿಕ್ ಜ್ಯೂನಿಯರ್ ಕೂಡಾ ಮುಗಿದಿದೆ. ಕಲ್ಚರ್ ಆ್ಯಕ್ಟಿವಿಟೀಸ್ ಮೊದಲಿನಿಂದಲೂ ಸ್ವಲ್ಪ ಜಾಸ್ತೀನೆ. ಬೆಂಗಳೂರಿಗೆ ಬಂದ ಮೇಲೆ ಡ್ಯಾನ್ಸ್ ಟ್ರೂಪ್ನಲ್ಲಿ ಸಾಕಷ್ಟು ಪ್ರೋಗ್ರಾಮ್ ಕೊಟ್ಟಿದ್ದೆ. ಇದೇ ಸಮಯದಲ್ಲಿ ಸೀರಿಯಲ್ನಲ್ಲಿ ನಟಿಸಲು ಕರೆ ಬಂತು. `ಶ್ರೀಮತಿ ಭಾಗ್ಯಲಕ್ಷ್ಮಿ’ ಎನ್ನುವ ಸೀರಿಯಲ್ನಲ್ಲಿ ನಟಿಸಿದೆ. ಸಿನಿಮಾಗೆ ಡಿಸೈನಿಂಗ್ ಮಾಡಬೇಕು ಅಂತ ಬಂದ ನನಗೆ ನಟಿಸುವ ಅವಕಾಶ ಸಿಕ್ಕಿತು. ಚಿಕ್ಕಂದಿನಿಂದಲೂ ನನಗೇನು ಸ್ಕೂಲಲ್ಲಿ ಡ್ರಾಮಾ ಮಾಡಿ ಅಭ್ಯಾಸವಿರಲಿಲ್ಲ. ಡ್ಯಾನ್ಸ್ ಮಾತ್ರ ಮಾಡಿದ್ದೇ ಅಷ್ಟೆ. ನಟನಾ ವೃತ್ತಿಗೆ ಬಹಳ ಬೇಗ ಹೊಂದಿಕೊಂಡೆ. ನನಗೇನೇ ಅವಕಾಶ ಸಿಕ್ಕರೂ ಬಹಳ ಆಸಕ್ತಿಯಿಂದ ಆ ಕೆಲಸವನ್ನು ಮಾಡೋದ್ರಿಂದ ನಟನೆಯನ್ನು ಕಲಿತುಕೊಂಡೆ.
ಆದರ್ಶ್ ಹೆಗ್ಡೆ ಅನ್ನೋರು ನನ್ನ ಮೊದಲ ಸೀರಿಯಲ್ ನಿರ್ದೇಶಕರು. ಅವರಿಂದ ಸಾಕಷ್ಟು ಕಲಿತೆ. ತುಂಬಾ ಚೆನ್ನಾಗಿ ಹೇಳಿಕೊಡುತ್ತಿದ್ದರು. ಹಿರಿಯ ಕಲಾವಿದರಿಂದಲೂ ಸಾಕಷ್ಟು ಅಭಿನಯದ ಪಾಠ ಕಲಿತುಕೊಂಡೆ. ಹೀಗೆ ಸಾಕಷ್ಟು ಧಾರಾವಾಹಿಗಳು ನನ್ನನ್ನು ಒಬ್ಬ ನಟಿಯಾಗಿ ಮಾಡಿತು. ಅನುಪ್ರಭಾಕರ್, ರಾಜೇಶ್ ಅವರೊಂದಿಗೆ `ತ್ರಿವೇಣಿ ಸಂಗಮ’ ಎನ್ನುವ ಸೀರಿಯಲ್ನಲ್ಲಿ ನಟಿಸಿದೆ. ತಮಿಳು ಸೀರಿಯಲ್ನಲ್ಲೂ ನಟಿಸಿದೆ, `ಕೇಳಡಿ ಕಣ್ಮಣಿ’ ಅಂತ. ಅಲ್ಲೂ ಕೂಡಾ ಒಳ್ಳೆ ಹೆಸರು ಬಂತು.
ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಹೇಗೆ…..?
ನನ್ನ ಅಮ್ಮ ಟಿ.ಎನ್. ಸೀತಾರಾಮ್ ರವರ ಧಾರಾವಾಹಿಗಳ ಅಭಿಮಾನಿ ಅವರಿಗೆ ನಾನು ಟಿ.ಎನ್. ಸಾರ್ರರ ಜೊತೆ ಕೆಲಸ ಮಾಡಬೇಕೆಂಬ ಆಸೆ. ಆದರೆ ಅವರ ಪರಿಚಯವಿರಲಿಲ್ಲ. ನಾನೇ ಹೋಗಿ ಭೇಟಿ ಮಾಡಿ ಅಪ್ರೋಚ್ ಮಾಡಿದ್ದೆ. ಯಾವುದಾದರೂ ಸೀರಿಯಲ್ನಲ್ಲಿ ನನಗೊಂದು ಅವಕಾಶವಿದ್ದರೆ ಕೊಡಿ ಸಾರ್ ಅಂತ. ಭೇಟಿಯಾದ ಎರಡು ವರ್ಷಗಳ ನಂತರ ಅವರಿಂದ ಕರೆಬಂತು. ಸೀರಿಯಲ್ಗಲ್ಲ, `ಕಾಫಿತೋಟ’ ಸಿನಿಮಾಗೆ. ಸರ್ರವರನ್ನು ಭೇಟಿ ಮಾಡಿದಾಗ ಸ್ಪಷ್ಟವಾಯಿತು. ಅದೊಂದು ಮೇನ್ ಕ್ಯಾರೆಕ್ಟರ್ ಅಂತ. ಸೆಟ್ನಲ್ಲಿ ಸೀತಾರಾಮ್ ಸಾರ್ ನನ್ನನ್ನು ಒಬ್ಬ ಆರ್ಟಿಸ್ಟ್ ಗಿಂತ ಹೆಚ್ಚಾಗಿ ಮಗಳಂತೆ ಕಾಣುತ್ತಿದ್ದರು. ಬಹಳ ಕೇರ್ ಮಾಡುತ್ತಿದ್ದರು. ಅವರ ಡೈರೆಕ್ಷನ್ನಿಂದಲೇ ನನ್ನ ಸಿನಿಮಾ ವೃತ್ತಿ ಶುರುವಾಗಿದ್ದು ನಿಜಕ್ಕೂ ನನ್ನ ಅದೃಷ್ಟ.
`ಕಾಫಿತೋಟ’ದಲ್ಲಿನ ನನ್ನ ಅಭಿನಯಕ್ಕೆ ಸೈಮಾ ಅವಾರ್ಡ್ ಕೂಡಾ ಬಂದಿತು. ನೆಗಟಿವ್ ಶೇಡ್ ಇರೋ ಈ ಪಾತ್ರವನ್ನು ನೀವು ಹೇಗೆ ಮಾಡಿದಿರಿ ಆಶ್ಚರ್ಯವಾಗುತ್ತೆ ಎಂದು ಎಲ್ಲರೂ ಕಾಂಪ್ಲಿಮೆಂಟ್ ಕೊಟ್ಟಿದ್ದೇ ಕೊಟ್ಟಿದ್ದು. ಪುನೀತ್ ರಾಜ್ಕುಮಾರ್ ಕೂಡಾ ವಿಶ್ ಮಾಡಿದರು. `ಕಾಫಿತೋಟ’ ನಂತರ `ಕಿನಾರೆ’ ಚಿತ್ರ ಮಾಡಿದೆ. ಈಗ `ಸಾಗುತ ದೂರ ದೂರ’ ರೆಡಿಯಾಗಿದೆ.
ಪವನ್ ಒಡೆಯರ್ ಸಿಕ್ಕಿದ್ದೆಲ್ಲಿ…. ನಿಮ್ಮದು ಲವ್ ಮ್ಯಾರೇಜಾ?
`ಕಾಫಿತೋಟ’ ಪ್ರಮೋಶನ್ ಟೈಮ್ ನಲ್ಲಿ ಪವನ್ ನನ್ನನ್ನು ನೋಡಿದ್ದರಂತೆ. ಅಷ್ಟರಲ್ಲಾಗಲೇ ಸೀತಾರಾಮ್ ಸರ್ರವರಿಗೆ ಸಾಕಷ್ಟು ನಿರ್ದೇಶಕರು ನನ್ನ ಬಗ್ಗೆ ಕೇಳಿದರಂತೆ. ಪವನ್ ನನ್ನನ್ನು ಭೇಟಿಯಾಗಲು ಬಂದದ್ದು ಅವರ ಸಿನಿಮಾವೊಂದಕ್ಕೆ ಅಪ್ರೋಚ್ ಮಾಡುವ ಸಲುವಾಗಿ. ಆದರೆ ರಿಯಲ್ ಲೈಫ್ಗೆ ಕನೆಕ್ಟ್ ಆಗಿಬಿಟ್ಟೆ. ಇಬ್ಬರ ಮನೆಯವರು ಒಪ್ಪಿಕೊಂಡರು. ನಮ್ಮದು ಒಂಥರಾ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅಂತಾನೇ ಹೇಳಬಹುದು.
ಪವನ್ ಸಿನಿಮಾಗಳಲ್ಲಿ ಏಕೆ ನಟಿಸುತ್ತಿಲ್ಲ ಅಂತಾನೂ ಕೇಳುತ್ತಾರೆ. ನನಗೆ ಸೂಟ್ ಆಗುವಂಥ ಪಾತ್ರವಿದ್ದರೆ ಖಂಡಿತಾ ಹೇಳುತ್ತಾರೆ. ಮದುವೆ ನಂತರ ನಾನು ನಟಿಯಾಗಿ ಡಿಸೈನರ್ ಆಗಿ ಬಿಝಿಯಾಗಿದ್ದೀನಿ. ನನಗಿಷ್ಟವಾದ ಪಾತ್ರ ಬಂದರೆ ಮಾತ್ರ ಒಪ್ಪಿಕೊಳ್ಳುವುದು. ನಾನೀಗ ಪವನ್ರವರ ಹೊಸ ಚಿತ್ರ ರೇಮೋಗಾಗಿ ಸ್ಟೈಲ್ ಡಿಸೈನರ್ ಅಂದರೆ ಇಡೀ ಚಿತ್ರಕ್ಕೆ ಡಿಸೈನರ್ ಆಗಿ ಕೆಲಸ ಮಾಡಲಿದ್ದೇನೆ. ಮುಂದೊಂದು ದಿನ ನನಗೂ ನಿರ್ದೇಶಕಿಯಾಗುವ ಆಸೆ ಇದೆ ಎನ್ನುತ್ತಾರೆ ಅಪೇಕ್ಷಾ.
– ಜಾಗೀರ್ದಾರ್