ಇದು ತಾತಾ ಕೊಟ್ಟ ಬಳುವಳಿ, ಅಪ್ಪನೂ ಹಂಚಿಕೊಂಡ ನಂತರ ಮಕ್ಕಳಿಗೆ ಹರಿದುಬಂದ ವಾದ್ಯಗಾರಿಕೆ ಹಾಗೂ ಶಾಸ್ತ್ರೀಯ ಸಂಗೀತ. ಇವರ ಪ್ರತಿಭೆಗೆ ವಿದ್ಯೆಯೂ ಸಾಣೆ ಹಿಡಿದು ಮತ್ತಷ್ಟು ಗಟ್ಟಿ ಮಾಡಿದೆ.

ಸಂಗೀತ ಯಾರಿಗೆ ತಾನೆ ಇಷ್ಟ ಆಗುವುದಿಲ್ಲ ಹೇಳಿ. ನೊಂದ ಮನಸ್ಸಿಗೆ ಸಾಂತ್ವನ ನೀಡು, ಪುಟಿಯುವ ಯುವ ಮನಸ್ಸಿಗೆ ಮುದ ನೀಡುವ, ಆಸಕ್ತರಿಗೆ ಮತ್ತಷ್ಟು ಚೈತನ್ಯ ತುಂಬುವ ಸಂಗೀತಕ್ಕೆ ಶೃತಿ ಚಿಕ್ಕ ಪ್ರಾಯದಲ್ಲೇ ಮನಸ್ಸು ಒಪ್ಪಿಸಿ ಆಗಿತ್ತು.

ಸಂಗೀತವನ್ನೇ ಕೇಳುತ್ತಾ, ಹಾಡುತ್ತಾ ಅದರೊಂದಿಗೆ ಬದುಕುತ್ತಾ ಬೆಳೆದಂತೆ ಅದಕ್ಕಾಗಿಯೇ ಜೀವಿಸುವ ಆಸೆ ಬೆಳೆಸಿಕೊಂಡ ಆಕೆ, ಸಂಗೀತವಿಲ್ಲದೇ ಬಾಳಲಾರೆ ಎಂಬ ತೀರ್ಮಾನಕ್ಕೆ ಬಂದು ಅದನ್ನೇ ಬದುಕನ್ನಾಗಿಸಿಕೊಂಡ ಸಂಗೀತಪ್ರೇಮಿ ಶೃತಿ ರಂಜನಿ, ಸಂಗೀತ ಲಲಿತಕಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿಪಿಎ (ಬ್ಯಾಚುಲರ್‌ ಆಫ್‌ ಪವರ್‌ ಫಾರ್ಮಿಂಗ್‌ ಆರ್ಟ್ಸ್) ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ತಾತಾ ಶ್ರೀನಿವಾಸಯ್ಯ ವೃತ್ತಿಯಲ್ಲಿ ಅಭಿಯಂತರರಾಗಿದ್ದರೂ ಅದ್ಭುತ ಪಿಟೀಲು ವಾದಕರಂತೆ. ಅವರಿಂದ ತಂದೆಗೂ ಆ ಕಲೆ ಬಂತು. ತಂದೆ ತಾಂಡವಮೂರ್ತಿ ಕರ್ನಾಟಕ ಪೊಲೀಸ್‌ ಬ್ಯಾಂಡ್‌ನಲ್ಲಿದ್ದಾರೆ. ಅವರೂ ಉತ್ತಮ ಕಲಾವಿದರು. ಅವರಿಂದ ಶೃತಿಗೆ ಮಾತ್ರವಲ್ಲ, ಆಕೆಯ ತಂಗಿ ಬಿಂದು ಮಾಲಿನಿಗೂ ಸಂಗೀತ ರಕ್ತಗತವಾಗಿ ಹರಿದು ಬಂದಿದೆ.

ಶೃತಿ ಈಗ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯ ಅಂತಿಮ ಸೆಮಿಸ್ಟರ್‌ ಶಿಕ್ಷಣ ಪಡೆಯುತ್ತಿದ್ದಾರೆ.  ಅವರು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ಸಿಂಗಾಪುರಕ್ಕೆ ಹಾಗೂ ರಿಲಯನ್ಸ್ ಪ್ರಾಯೋಜಕತ್ವದಲ್ಲಿ ಬ್ಯಾಂಕಾಕ್‌ಗೆ ಹೋಗಿ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಕಚೇರಿ ನಡೆಸಿಕೊಟ್ಟಿದ್ದಾರೆ. ಸಿಂಗಾಪುರದಲ್ಲಿ ನಡೆದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಈಕೆಯೊಬ್ಬರೇ ಭಾಗವಹಿಸಿದ್ದರು.

ಶೃತಿಗೆ ಹಾಡುಗಾರಿಕೆಗಿಂತ ಸಂಗೀತ ಶಿಕ್ಷಕಿಯಾಗುವುದು ಬಹಳ ಇಷ್ಟವಂತೆ. ತಾನು ಸಂಗೀತದಲ್ಲಿ ಏನೇ ಸಾಧನೆ ಮಾಡಲು ಹೊರಟರೂ ಮೊದಲು ಶಿಕ್ಷಣಕ್ಕೆ ಆದ್ಯತೆ, ನಂತರ ನನ್ನ ಸಂಗೀತ ಪಯಣ ಮುಂದುವರಿಸುತ್ತೇನೆ ಎನ್ನುವ ಶೃತಿಯ ಸಾಧನೆಗೆ ತಾಯಿ ಎಸ್‌.ಆರ್‌. ಸುಜಾತಾ ಅವರ ಪ್ರೋತ್ಸಾಹ ಇದೆ.

ಶೃತಿ ರಂಜನಿ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಗಾಯಕಿ ಮಾತ್ರವಲ್ಲ, ಆಕೆ ಇಂಪಾಗಿ ಪಿಟೀಲು ಸಹ ನುಡಿಸಬಲ್ಲರು. ಮನೆಯಲ್ಲೇ ಅನೇಕ ಸಂಗೀತ ಆಸಕ್ತರಿಗೆ ಸಂಗೀತ ಹಾಗೂ ಪಿಟೀಲು ನುಡಿಸು ತರಬೇತಿಯನ್ನೂ ನೀಡುತ್ತಾರೆ.

ಮೈಸೂರು ನಗರದ ಗಾನಭಾರತಿ, ಜೆಎಸ್‌ಎಸ್‌ ಸಂಗೀತ ಸಭಾ, ಕಲಾಮಂದಿರ, ಜಗನ್ಮೋಹನ ಅರಮನೆ, ಅರಮನೆಯ ದರ್ಬಾರ್‌ ಹಾಲ್‌, ರೋಟರಿ ಭವನ, ಚಾಮುಂಡಿ ಬೆಟ್ಟ, ತ್ಯಾಗರಾಜ ಸಂಗೀತ ಸಭಾ ಮುಂತಾದೆಡೆಗಳಲ್ಲಿ ಶೃತಿ ಸಂಗೀತ ಕಾರ್ಯಕ್ರಮ ನೀಡಿ ಜನಪ್ರಿಯತೆ ಪಡೆದಿದ್ದಾರೆ.

ಶೃತಿಗೆ ಮೊದಲು ತಾನು ಶಾಸ್ತ್ರೀಯ ಸಂಗೀತದಲ್ಲಿ ಒಳ್ಳೆ ಸಾಧನೆ ಮಾಡಬೇಕು, ಆನಂತರ ಸಿನಿಮಾ ಕ್ಷೇತ್ರ ಎನ್ನುತ್ತಾರೆ. ಅಂದಮಾತ್ರಕ್ಕೆ ಸಿನಿಮಾ ಬೇಡ ಎನ್ನುವುದಿಲ್ಲ. ಜನಪ್ರಿಯತೆಗೆ ಸಿನಿಮಾ ಬೇಕೇಬೇಕು. ಆದರೆ, ಅಲ್ಲಿ ಉತ್ತಮ ಸಂಗೀತ ಆಸ್ವಾದಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ.

ಸಾಲೋಮನ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ