ನೃತ್ಯದಲ್ಲಿ ಆಸಕ್ತಿ, ಹಾಡು ಗೀಳು ಹಚ್ಚಿಕೊಂಡಿದ್ದ ತುಮಕೂರು ಮೂಲದ ರಜನಿ, ಗೆಳತಿಯರ ಒತ್ತಾಯಕ್ಕೆ ಕಟ್ಟುಬಿದ್ದು ಫೋಟೋ ಶೂಟ್‌ ಮಾಡಿಸಿಕೊಳ್ಳುತ್ತಾಳೆ. ಅನೇಕ ಕಡೆ ಆಡಿಶನ್‌ಗೂ ಹೋಗುತ್ತಾಳೆ. ಆದರೆ ಬಹುತೇಕ ಕಡೆ `ಫೇಲ್‌’ ಎಂಬ ಉತ್ತರವೇ ಆಕೆಗೆ ದೊರೆಯುತ್ತದೆ.

ಕೊನೆಗೊಮ್ಮೆ ಒಂದು ಧಾರಾವಾಹಿಗೆ ಆಕೆ ಆಯ್ಕೆಯಾಗುತ್ತಾಳೆ. ಅದೂ ಕೂಡ ಧಾರಾವಾಹಿಯೊಂದರ ಶೀರ್ಷಿಕೆ ಪಾತ್ರ. ಆ ಧಾರಾವಾಹಿಯೇ `ಅಮೃತವರ್ಷಿಣಿ.’ `ಅಮೃತಾ’ಳ ಪಾತ್ರ ಕೆಲವೇ ತಿಂಗಳಲ್ಲಿ ರಜನಿಯನ್ನು ಮನೆ ಮಾತಾಗುವಂತೆ ಮಾಡಿತು. ತಮ್ಮ ಪ್ರಥಮ ಧಾರಾವಾಹಿಯ ನೆನಪುಗಳನ್ನು ರಜನಿ ಇಲ್ಲಿ ಹಂಚಿಕೊಂಡಿದ್ದಾರೆ.

ಧಾರಾವಾಹಿಗೆ ಬರುವ ಮುನ್ನ ಅಭಿನಯದ ತರಬೇತಿಯನ್ನೇನಾದರೂ ಪಡೆದುಕೊಂಡಿದ್ದಿರಾ?

ನಾನು ಮುಂಚೆ ಕೆಲವು ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡಿದ್ದೆ. ಒಂದು ಸಲ ಜಾಹೀರಾತು ಚಿತ್ರೀಕರಣದ ಸಂದರ್ಭದಲ್ಲಿ ಆರ್‌.ಜಿ. ಮೀಡಿಯಾದ ಮೇಕಪ್‌ ಮ್ಯಾನ್‌ ಕುಮಾರ್‌ ಎಂಬುವವರು ಅಲ್ಲಿಗೆ ಬಂದಿದ್ದರು. ಅವರು ನನಗೆ `ರವಿ ಗರಣಿಯವರು ಹೊಸದೊಂದು ಧಾರಾವಾಹಿಗೆ ಸಿದ್ಧತೆ ನಡೆಸಿದ್ದಾರೆ. ನೀವು ಪ್ರಯತ್ನ ಮಾಡಿ,’ ಎಂದಿದ್ದರು. ನನ್ನ ಹಾಗೆ 15 ಜನ ಹುಡುಗಿಯರು ಕೂಡ ಪ್ರಯತ್ನ ಮಾಡಿದ್ದರು. ಅವರಲ್ಲಿ ನಾನೇ ಆಯ್ಕೆ ಆದೆ.

ನಾಯಕ ಅಜಾನುಬಾಹು. ನೀವು ಸ್ವಲ್ಪ ಕಡಿಮೆ ಎತ್ತರ ಎಂಬ ಮಾತು ಆರಂಭದಲ್ಲಿ ಕೇಳಿಬಂದಿತ್ತಲ್ಲ. ಆ ಸಮಸ್ಯೆ ಹೇಗೆ ಬಗೆಹರಿಯಿತು?

ರವಿ ಗರಣಿ ಸರ್‌ ನನ್ನಲ್ಲಿನ ಪ್ರತಿಭೆ ಗಮನಿಸಿ ಚಾನೆಲ್‌ನರನ್ನು ಒಪ್ಪಿಸಿ ನನ್ನನ್ನೇ `ಅಮೃತಾ’ಳನ್ನಾಗಿ ಮಾಡಿದರು. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

`ಅಮೃತರ್ಷಿಣಿ’ ಧಾರಾವಾಹಿಯ ಜೊತೆ ಜೊತೆಗೆ ನೀವು `ಸ್ಟಾರ್‌ ಸಿಂಗರ್‌’ನಲ್ಲೂ ಕಾಣಿಸಿಕೊಂಡಿದ್ದೀರಿ. ನಿಮ್ಮ ಗಾನ ಪ್ರತಿಭೆ ಹೊರಹೊಮ್ಮಿದ್ದು ಹೇಗೆ?

ಶಾಲಾ ಹಂತದಿಂದಲೇ ಹಾಡು, ನೃತ್ಯದ ಬಗ್ಗೆ ನನಗೆ ಆಸಕ್ತಿ ಇತ್ತು. ತರಬೇತಿ ಇಲ್ಲದೆಯೇ ನಾನು ಹಾಡು ಕೇಳಿ ಕೇಳಿಯೇ ಹಾಡುವುದನ್ನು ರೂಢಿಸಿಕೊಂಡೆ. ಸುವರ್ಣ `ಸ್ಟಾರ್‌ ಸಿಂಗರ್ಸ್ನಲ್ಲಿ ನಾನು ಟಾಪ್‌ 9 ತನಕ ಬಂದು ಕ್ವಿಟ್‌ ಮಾಡಿದೆ.

ಧಾರಾವಾಹಿಯ ನಟನೆಗೂ ಮುಂಚಿನ ರಜನಿಗೂ, ಅಮೃತಾಳ ಪಾತ್ರ ನಿರ್ವಹಿಸಿದ ನಂತರದ ರಜನಿಗೂ ಏನಾದರೂ ವ್ಯತ್ಯಾಸ ಆಗಿದೆಯಾ?

ಧಾರಾವಾಹಿಯಲ್ಲಿ ಅಭಿನಯಿಸುವ ಮುನ್ನ ರಜನಿ ತುಂಬಾ ಮಾತುಗಾತಿಯಾಗಿದ್ದಳು. ಅಮೃತಾಳ ಪಾತ್ರ ಮಾಡಿದ ನಂತರ ಈಗಿನ ರಜನಿಯಲ್ಲಿ ತುಂಬಾ ವ್ಯತ್ಯಾಸ ಆಗಿದೆ. ಆ ಪಾತ್ರ ಮಾಡಿದ ಬಳಿಕ ಮಾತು ಮಿತವಾಗಿದೆ. ಆಡುವ ಪ್ರತಿಯೊಂದು ಮಾತು ಹಿತವಾಗಿರಬೇಕು, ಯಾರಿಗೂ ನೋವುಂಟು ಮಾಡಬಾರದೆಂದು ಆಕೆ ಯೋಚಿಸುತ್ತಾಳೆ.

ಧಾರಾವಾಹಿಯಲ್ಲಿ ಸದಾ ಸೀರೆಯಲ್ಲಿಯೇ ಕಾಣಿಸಿಕೊಳ್ಳುವ ಅಮೃತಾ ಪಾತ್ರಧಾರಿ ವಾಸ್ತವ ಜೀವನದಲ್ಲೂ ಹೀಗೇನಾ?

ಛೇ! ಛೇ!! ಧಾರಾವಾಹಿಯಲ್ಲಿ ನನಗೆ ಪಕ್ಕಾ ಗೃಹಿಣಿಯ ಪಾತ್ರ ದೊರೆತಿರುವುದರಿಂದ ಸೀರೆಯೇ ನನ್ನ ದೈನಂದಿನ ಉಡುಗೆ. ಆದರೆ ವಾಸ್ತವ ಜೀವನದಲ್ಲಿ ನಾನು ಜೀನ್ಸ್, ಟೀಶರ್ಟ್ಸ್, ಚೂಡಿದಾರ್‌ ಧರಿಸಲು ಇಷ್ಟಪಡ್ತೀನಿ.

ಇದು ನಿಮ್ಮ ಪ್ರಥಮ ಧಾರಾವಾಹಿ. ಇದರಲ್ಲಿನ ಹಿರಿಯ ಕಲಾವಿದರು ನಿಮಗೆ ಹೇಗೆ ಪ್ರೋತ್ಸಾಹಿಸುತ್ತಾರೆ?

ಹಿರಿಯರಾದ ಹೇಮಾ ಚೌದರಿ, ಕಿಶೋರಿ ಬಲ್ಲಾಳ್‌, ಎನ್‌.ಜಿ.ಇ.ಎಫ್‌. ರಾಮಮೂರ್ತಿ, ಪೃಥ್ವಿರಾಜ್‌, ಕೃಷ್ಣ ಅಡಿಗ, ರಾಣಿ, ಸವಿತಾ ಇವರೆಲ್ಲ ನನಗೆ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಭಾವನಾತ್ಮಕ ಸನ್ನಿವೇಶದಲ್ಲಿ ನಾನು ಚೆನ್ನಾಗಿ ಅಭಿನಯಿಸಿದಾಗ ನನ್ನ ಬೆನ್ನುತಟ್ಟಿ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಸಾಹುಕಾರ ಜಾನಕಿ, ಬಿ. ಸರೋಜಾದೇವಿಯಂತಹ ದಿಗ್ಗಜ ನಟಿಯರು ನನ್ನ ಅಭಿನಯದ ಬಗ್ಗೆ ಹೊಗಳಿದ್ದಾರೆಂದೂ ಹೇಮಮ್ಮ ಅವರು ಹೇಳಿದಾಗ ನನಗೆ ಖುಷಿಯಿಂದ ಕಣ್ಣೀರು ಬಂದಿತ್ತು.

ನೀವು ಹೊರಗೆ ಹೋದಾಗ ಜನರ ಪ್ರತಿಕ್ರಿಯೆ ಹೇಗಿರುತ್ತದೆ?

ನನ್ನನ್ನು ನೋಡಿ, `ಏನಮ್ಮ, ನಿನಗೆ ಎಷ್ಟೊಂದು ಕಷ್ಟ ಕೊಡುತ್ತಾರೆ. ಆದರೂ ಎಷ್ಟೊಂದು ತಾಳ್ಮೆಯಿಂದ ಸಹಿಸಿಕೊಳ್ತಿಯಲ್ಲ,’ ಎಂದು ಅನೇಕರು ಕಣ್ಣೀರು ಕೂಡ ಹಾಕಿದ್ದಾರೆ. ಮತ್ತೆ ಕೆಲವರು `ನನಗೂ ನಿನ್ನಂತಹ ಸೊಸೆಯೇ ಸಿಗಬೇಕು,’ ಎಂದು ಹೇಳುತ್ತಾರೆ. ಜನರ ಈ ಪ್ರೀತಿ ವಿಶ್ವಾಸಕ್ಕೆ ನನಗೆ ಗೊತ್ತಿಲ್ಲದೆಯೇ ಒಮ್ಮೊಮ್ಮೆ ಕಣ್ಣೀರು ಬಂದುಬಿಡುತ್ತದೆ.

ಧಾರಾವಾಹಿಯಲ್ಲಿ ನಿಮ್ಮದು ಸದಾ ಅಳು ಪಾತ್ರ. ಅದ್ಹೇಗೆ ಅಳ್ತೀರಾ? ಕಷ್ಟ ಎನಿಸುವುದಿಲ್ಲವೇ?

ನಗುನಗುತ್ತಾ ನಟಿಸುವುದು ಸುಲಭ. ಆದರೆ ನಟನೆಗಾಗಿ ಅಳುವುದು ತುಂಬಾ ಕಷ್ಟ. ಅದು ಅತ್ಯಂತ ಸೂಕ್ಷ್ಮವಾದುದು ಕೂಡ. ನಾವು ಯಾವಾಗಲೂ ಹೆದರಿಕೆ ತುಂಬಿದ ಮುಖಭಾವದಿಂದಲೇ ನಟಿಸಬೇಕಾಗುತ್ತದೆ.

ಮನೆಯಲ್ಲಿದ್ದಾಗ ಅಮ್ಮನಿಗೆ ಸಹಾಯವೇನಾದರೂ

ನನಗೆ ಅಡುಗೆ ಮಾಡಲು ಬರುವುದಿಲ್ಲ. ಅಮ್ಮ ರುಚಿ ರುಚಿಯಾಗಿ ಮಾಡಿಟ್ಟ ಬಗೆಬಗೆಯ ತಿಂಡಿಗಳನ್ನು ತಿನ್ನಲು ಇಷ್ಟ. ಟೀ ಕಾಫಿ ಏನೂ ಕುಡಿಯುವುದಿಲ್ಲ. ಗ್ರೀನ್‌ ಟೀ ಮಾತ್ರ ಕುಡಿಯೋದು. ಅಮ್ಮ ಊರಲ್ಲಿ ಇಲ್ಲದಿದ್ದಾಗ ಬಗೆಬಗೆಯ ಹಣ್ಣುಗಳ ಸಲಾಡೇ ನನಗೆ ಮುಖ್ಯ ಆಹಾರವಾಗಿರುತ್ತದೆ.

– ಅಶೋಕ ಚಿಕ್ಕಪರಪ್ಪಾ 

ನಿಮ್ಮ ಅಭಿನಯದ ಬಗ್ಗೆ ಗೆಳತಿಯರು ಏನು ಹೇಳುತ್ತಾರೆ?

ಸದಾ ಚೂಟಿಯಾಗಿದ್ದು, ಅರಳು ಹುರಿದಂತೆ ಮಾತಾಡುತ್ತಿದ್ದ ನಾನು ಧಾರಾವಾಹಿಯಲ್ಲಿ `ಮೌನಗೌರಿ’ಯಂತಹ ಪಾತ್ರ ಮಾಡುತ್ತಿರುವುದನ್ನು ನೋಡಿ ಗೆಳತಿಯರು ನನ್ನನ್ನು ಗೇಲಿ ಮಾಡುತ್ತಾರೆ. “ಏನೇ ನೀನು ಸದಾ ಅಳ್ತಾ ಇರ್ತೀಯಲ್ಲ? ನಿನಗೆ ಕಷ್ಟ ಆಗೋದಿಲ್ವಾ?” ಎಂದು ಕೇಳುತ್ತಾರೆ. ನಾನು ಅವರಿಗೆ, `ಅದು ಧಾರಾವಾಹಿ. ನಾನು ಅಲ್ಲಿ ಅಮೃತಾ ಮಾತ್ರ. ಈ ರಜನಿ ಯಾವಾಗಲೂ ಖುಷಿಖುಷಿಯಿಂದ ಇರಲು ಬಯಸುತ್ತಾಳೆ,’ ಎಂದು ಉತ್ತರ ಕೊಡುತ್ತೇನೆ. ಆಗ ಅವರು ತೆಪ್ಪಗಾಗುತ್ತಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ