ಏಕ್‌ ಥಾ ಟೈಗರ್‌, ಆಶಿಕಿ-2, ಕಿಕ್‌, ಪ್ರೇಮ್ ರತನ್‌ ಧನ್‌ ಪಾಲೋ, ಲವ್ ಯಾತ್ರಿ…..’ ಮುಂತಾದ ಚಿತ್ರಗಳ ಸಾವಿರಾರು ಹಾಡುಗಳ ಮೂಲಕ ಬಾಲಿವುಡ್‌ನ ಅತಿ ಯಶಸ್ವಿ ಹಿನ್ನೆಲೆ ಗಾಯಕಿ ಎನಿಸಿರುವ ಪಲಕ್‌ ಮುಛಲ್, ಹೃದ್ರೋಗದ ಮಕ್ಕಳಿಗೆ ದೇವತೆಯೇ ಆಗಿದ್ದಾರೆ. ತನ್ನ ಸಂಗೀತ ರಸಸಂಜೆಗಳಿಂದ ಗಳಿಸಿದ ಸಂಪೂರ್ಣ ಸಂಭಾವನೆಯನ್ನು ಇಂಥ ಹೃದ್ರೋಗಿ ಮಕ್ಕಳ ಹೃದಯದ ಆಪರೇಶನ್‌ಗಾಗಿ ಬಳಸುತ್ತಾರೆ. ಈ ರೀತಿ 2,368 ಮಕ್ಕಳು ಇವರಿಂದ ಜೀವದಾನ ಪಡೆದಿದ್ದಾರೆ. ಇಂಥ ಹೃದ್ರೋಗಿ ಮಕ್ಕಳಿಗಾಗಿ ಜೀವನವಿಡೀ ಹಾಡುವುದೇ ತನ್ನ ಪರಮ ಗುರಿ ಎನ್ನುವ ಪಲಕ್‌, ಕಳೆದ 21 ವರ್ಷಗಳಿಂದ ಈ ದಿಸೆಯಲ್ಲಿ ಸಕಾರಾತ್ಮಕ ಕೆಲಸ ಮಾಡುತ್ತಾ ಹಲವು ರಾಷ್ಟ್ರೀಯ ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದಾರೆ. ಹಲವು ವರ್ಷಗಳ ಹಿಂದೆ ಅತಿ ಕಡಿಮೆ ವಯಸ್ಸಿನಲ್ಲೇ ಈಕೆಯ ಹೆಸರು `ಗಿನ್ನೆಸ್‌’ ದಾಖಲೆ ಸೇರಿತ್ತು.

ನಿಮ್ಮ ಮತ್ತು ಪರಿವಾರದ ಪರಿಚಯ ಮಾಡಿಕೊಡ್ತೀರಾ?

ನಾನು 1992ರಲ್ಲಿ ಇಂದೋರಿನಲ್ಲಿ ಹುಟ್ಟಿದೆ. ನನ್ನ ತಂದೆ ಅಕೌಂಟೆಂಟ್‌ ಹಾಗೂ ತಾಯಿ ಗೃಹಿಣಿ. ನಾನು 8 ವರ್ಷದವಳಿದ್ದಾಗಿನಿಂದಲೇ ಈ ರೀತಿ ಚಾರಿಟಿ ಶೋ ನಡೆಸಿ, ಹಣ ಸಂಗ್ರಹಿಸಿ ಬಡ ಮಕ್ಕಳ ಆಪರೇಶನ್‌ಗೆ ನೆರವಾಗುತ್ತಿದ್ದೇನೆ. ಅಂದಿನಿಂದ ಇಂದಿನವರೆಗೂ 2,368 ಮಕ್ಕಳಿಗೆ ಇದು ಯಶಸ್ವಿ ಎನಿಸಿದೆ. ಇವರೆಲ್ಲ ಈಗ ಸಮಾಜದಲ್ಲಿ ಸುಖಿಗಳು. ಇನ್ನೂ ಸಾವಿರಾರು ಮಕ್ಕಳು ನನ್ನ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಪಟ್ಟಿಯಲ್ಲಿ ಯಾರು ಮೊದಲಿಗರೋ ಅವರಿಗೆ ಆಪರೇಶನ್‌ ಅಂತಲ್ಲ, ಯಾರ ಜೀವ ಅತಿ ಅಪಾಯದಲ್ಲಿದೆಯೋ ಅಂಥವರ ಆಪರೇಶನ್‌ಗೆ ಆದ್ಯತೆ.

ನನಗಾಗಿ ಕಾಯುತ್ತಿರುವ ಇತರ ಮಕ್ಕಳ ಖರ್ಚಿಗಾಗಿ ಇನ್ನೂ ಅತ್ಯಧಿಕ ಕಾರ್ಯಕ್ರಮ ನಡೆಸಲು ಯತ್ನಿಸುತ್ತಿರುವೆ. 4 ವರ್ಷದವಳಿದ್ದಾಗಲೇ ನಾನು ದಿವಂಗತ ಪಂ.ಸತ್ಯನಾರಾಯಣ ಮಿಶ್ರಾರಿಂದ ಶಾಸ್ತ್ರೀಯ ಸಂಗೀತ ಕಲಿತಿದ್ದೆ.

ಅಸಹಾಯಕ ಮಕ್ಕಳಿಗೆ ಹೀಗೆ ಸಹಾಯ ಮಾಡಬೇಕೆಂಬ ವಿಚಾರ ನಿಮಗೆ ಬಂದದ್ದು ಹೇಗೆ?

ನನಗೆ ನೆನಪಿರುವಂತೆ 6 ವರ್ಷದವಳಿದ್ದಾಗ ಅಂಧ ಮಕ್ಕಳಿಗಾಗಿ ಹೀಗೆ ಹಾಡಿ ಹಣ ಸಂಗ್ರಹಿಸಿದ್ದೆ. ಅದಾದ ಮೇಲೆ ನಮ್ಮ ಕಾರ್ಗಿಲ್ ‌ವೀರ ಯೋಧರಿಗಾಗಿ ಬೀದಿ ಬೀದಿಗಳ ಪ್ರತಿ ಅಂಗಡಿಗೂ ಹೋಗಿ `ಏ ಮೇರೆ ತನ್‌ ಕೇ ಲೋಗೋ…..’ ಹಾಡಿ ಸುಮಾರು 25 ಸಾವಿರ ಸಂಗ್ರಹಿಸಿದ್ದೆ. ಹೀಗೆ ಮೊದಲಿನಿಂದಲೇ ಈ ಸೇವಾ ಕಾರ್ಯ ನಡೆದಿದೆ. ನಾನು ಹಿಂದೆಲ್ಲ ರೈಲಿನಲ್ಲಿ ಹಿರಿಯರ ಜೊತೆ ಪ್ರಯಾಣಿಸುವಾಗ ಅಲ್ಲಿಗೆ ಭಿಕ್ಷೆ ಬೇಡಲು ಬರುವ ಮಕ್ಕಳು, ಬರಿ ಮೈಯಲ್ಲಿ ಕೆಲಸ ಮಾಡುವ ಹುಡುಗರನ್ನು ಕಂಡು ಕರಗಿಹೋಗುತ್ತಿದ್ದೆ. ಆಗಿನಿಂದ ಇಂಥವರಿಗಾಗಿ ಸಹಾಯ ಮಾಡಲೇಬೇಕೆಂದು ನಿರ್ಧರಿಸಿದೆ.

ಬಡ ಹೃದ್ರೋಗಿ ಮಕ್ಕಳ ಆಪರೇಶನ್‌ ಎಂದಿನಿಂದ ಮಾಡಿಸುತ್ತಿದ್ದೀರಿ?

ಆಗ ಮಾರ್ಚ್‌ 2000. ಒಮ್ಮೆ ರಾಧೇಶ್ಯಾಂ ಎಂಬುವರು ನಮ್ಮ ಮನೆಗೆ ಈ ರೀತಿಯ ಸಹಾಯ ಕೇಳಿಕೊಂಡು ಬಂದಿದ್ದರು. ಅವರ 6 ವರ್ಷದ ಮಗ ಲೋಕೇಶನ ಹೃದಯದಲ್ಲಿ 2 ರಂಧ್ರ ಇತ್ತು. ಅವರಿಗೆ ದಿನಗೂಲಿ 75/ ರೂ. ಸಿಗುತ್ತಿತ್ತಷ್ಟೆ….. ಹೀಗಾಗಿ ಆಪರೇಶನ್‌ ಹೇಗೆ ಮಾಡಿಸ್ತಾರೆ? ಆ ದಿನ ಸಂಜೆ ನನ್ನ ಸಂಗೀತ ರಸಸಂಜೆ ಏರ್ಪಡಿಸಿ ಆ ಮಗುವಿಗಾಗಿ 51 ಸಾವಿರ ಸಂಗ್ರಹಿಸಿದೆ! ಮೀಡಿಯಾ ಇದಕ್ಕೆ ಪ್ರಚಾರ ನೀಡಿತು. ಬೆಂಗಳೂರಿನ `ಮಣಿಪಾಲ್ ‌ಹಾರ್ಟ್‌ ಫೌಂಡೇಶನ್‌’ನಲ್ಲಿ ಕಾರ್ಯನಿರತ ಡಾ. ದೇವಿ ಶೆಟ್ಟಿಯವರನ್ನು ಸಂಪರ್ಕಿಸಿದಾಗ ಅವರು ಫೀಸ್‌ ಪಡೆಯದೆ ಆಪರೇಶನ್‌ ಮಾಡಿದರು. ಆ ಆಸ್ಪತ್ರೆ ನನ್ನ ಕಥೆ ಕೇಳಿ, ಒಂದು ಪೈಸೆಯನ್ನೂ ಕೇಳಲಿಲ್ಲ! ಆ ಹಣ ಲೋಕೇಶ್‌ಗೆ ಕೊಡಲು ಹೋದಾಗ ಅವರು ಬೇಡವೆಂದರು. ಹೀಗೆ ಸಂಗ್ರಹಗೊಂಡ ಹಣ ಸದ್ವಿನಿಯೋಗವಾಗಲಿ ಎಂದು ಪೇಪರ್‌ನಲ್ಲಿ ಬಡ ಹೃದ್ರೋಗಿ ಮಕ್ಕಳು ಸಂಪರ್ಕಿಸಲಿ ಎಂದು ಜಾಹೀರಾತು ನೀಡಿದೆ. ಒಂದು ವಾರದಲ್ಲಿ ನೂರಾರು ಮಕ್ಕಳ ಪಾಲಕರು ನಮ್ಮನ್ನು ಸಂಪರ್ಕಿಸಿದರು. ಇಷ್ಟು ಮಕ್ಕಳು ಅಸಹಾಯಕರೇ ಎಂದು ಅವರಿಗಾಗಿ ಆಪರೇಶನ್‌ ಮಾಡಿಸುತ್ತಾ, ಈ ನಿಧಿ ಸಂಗ್ರಹಣೆ ಮುಂದುವರಿಸಿದೆ. ಇಂದೋರ್‌ನ ಭಂಡಾರಿ ಆಸ್ಪತ್ರೆಯಲ್ಲಿ ಒಟ್ಟಿಗೆ 7 ಮಕ್ಕಳಿಗೆ ಆಪರೇಶನ್‌ ಮಾಡಿಸಿದೆ. ಹೀಗೆ ನನ್ನ ಸಮಾಜಸೇವೆ ನಿರಂತರ ನಡೆಯುತ್ತಿದೆ.

ಅಂದ್ರೆ ನೀವು ಕೇವಲ ನಮ್ಮ ದೇಶದ ಮಕ್ಕಳಿಗಷ್ಟೇ ಸಹಾಯ ಮಾಡ್ತೀರಾ?

ಇಲ್ಲ…. ಇಲ್ಲ…… ಇದನ್ನು ಇಲ್ಲಿಗೆ ಸೀಮಿತಗೊಳಿಸದೆ ಹಲವು ವಿದೇಶೀ ಮಕ್ಕಳಿಗೂ ನಮ್ಮ ದೇಶದಲ್ಲೇ ಆಪರೇಶನ್‌ ಮಾಡಿಸಿದ್ದೇನೆ. 2003ರಲ್ಲಿ ಪಾಕಿಸ್ತಾನದ ನದೀಮ್ ದಂಪತಿ ತಮ್ಮ ಮಗಳು ನೂರ್‌ಗಾಗಿ ಬೆಂಗಳೂರಿಗೆ ಬಂದಿದ್ದಾಗ, ಆ ಖರ್ಚನ್ನು ನಾನೇ ವಹಿಸಿಕೊಂಡೆ. `ಪರೋಪಕಾರಾರ್ಥಂ ಇದಂ ಶರೀರಂ……’ ಎಂದು ನಮ್ಮ ಸಂಸ್ಕತಿ ಸಾರುವಾಗ ಅದಕ್ಕೆ ದೇಶ, ಭಾಷೆ, ಧರ್ಮಗಳ ಅಡ್ಡಿಯಿಲ್ಲ.

ನಿಮ್ಮ ಈ ಆದರ್ಶ ಕೆಲಸಕ್ಕೆ ಯಾರ ಸಹಾಯವಿದೆ?

ನನ್ನ ತಾಯಿ ತಂದೆ, ತಮ್ಮ ಪಾಶ್‌,  ದೇಶದ ಹಲವು ಆಸ್ಪತ್ರೆಗಳ ವೈದ್ಯರು ನನಗೆ ಸಹಾಯ ಮಾಡುತ್ತಿದ್ದಾರೆ. ಗಿಟಾರಿಸ್ಟ್ ತಮ್ಮ  ನನ್ನ `ಸಂಗೀತ ಸಂಜೆ’ಗೆ ಬೆನ್ನೆಲುಬು. ಸಂಗೀತ ನಿರ್ದೇಶಕನಾಗಿ ಯಶಸ್ವೀ ಎನಿಸಿ ಈಗಾಗಲೇ 14 ಚಿತ್ರಗಳಿಗೆ ಸಂಗೀತ ಒದಗಿಸಿದ್ದಾನೆ, ಅಲ್ಲೆಲ್ಲ ನಾನು ಹಾಡಿದ್ದೇನೆ.

ಕೊರೋನಾ ಲಾಕ್‌ಡೌನ್‌ನಲ್ಲಿ ನಿಮ್ಮ ಕೆಲಸ ಸ್ವಲ್ಪ ನಿಂತಿತೇ?

ನನ್ನದೇ ಮ್ಯೂಸಿಕ್‌ ಸ್ಟುಡಿಯೋ ಇದೆ. ನಾನು ಹಾಡು ಬರೆಯುತ್ತೇನೆ. ತಮ್ಮನ ಜೊತೆ ಸ್ಟುಡಿಯೋದಲ್ಲಿ ಕುಳಿತು ವಾಕ್‌ ಡೌನ್‌ನಲ್ಲಿ ಬೇಕಾದಷ್ಟು ಚಿತ್ರಗಳಿಗೆ ಸಂಗೀತ ರೆಡಿ ಮಾಡಿದೆ. ನಮ್ಮದೇ `ಪರ್ಲ್ ಮ್ಯೂಸಿಕ್‌’ ಎಂಬ ಸಂಗೀತ ಕಂಪನಿ, ಯೂಟ್ಯೂಬ್‌ಚಾನೆಲ್ ‌ನಡೆಸುತ್ತಿದ್ದೇವೆ.

ಲಾಕ್‌ ಡೌನ್‌ನಲ್ಲಿ ಕಾರ್ಯಕ್ರಮ ಇಲ್ಲದೆ ನಮ್ಮ ಆರ್ಕೆಸ್ಟ್ರಾ ಸಿಬ್ಬಂದಿ ಕಂಗಾಲಾದರು. ಇಂಥ ಅನೇಕ ಆರ್ಕೆಸ್ಟ್ರಾದವರಿಗಾಗಿ ನಾನು ನನ್ನ `ಡಾಲ್ಸ್’ ಕಂಪನಿ ಮಾರಿ, ಮಧ್ಯ ಪ್ರದೇಶದ ಸುಮಾರು 400 ಸಿಬ್ಬಂದಿಗೆ ಇಡೀ 5 ತಿಂಗಳು ರೇಶನ್‌ ಪೂರೈಸಿದೆ.

ನೀವು ಯಾವ ಯಾವ ಭಾಷೆಯಲ್ಲಿ ಹಾಡಿದ್ದೀರಿ?

ನಾನು ಈಗಾಗಲೇ 13 ಭಾಷೆಗಳಲ್ಲಿ ಹಾಡಿದ್ದೇನೆ. ಶಾಸ್ತ್ರೀಯ ಗಾಯನ ನನ್ನ ಮೊದಲ ಆಯ್ಕೆ. ಲತಾಜಿ, ಶಂಶಾದ್‌ ಬೇಗಂ, ನೂರ್‌ ಜಹಾನ್‌, ಸುನಿಧಿ ಚೌಹಾನ್‌ರ ಹಾಡುಗಳನ್ನು ಮತ್ತೆ ಮತ್ತೆ ಹಾಡುತ್ತೇನೆ. ಪ್ರತಿ ಸಲ `ಏ ಮೇರೆ ತನ್‌ಕೆ ಲೋಗೋ…..’ ಮರೆಯದೆ ಹಾಡುವೆ!

– ಶಾಂತಾ ತ್ರಿಪಾಠಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ