ಅನಾರೋಗ್ಯದ ಆಸ್ಪತ್ರೆಗೆ ಹೋಗಿದ್ದ ಕಾವೇರಿಗೆ ತಪ್ಪು ರಿಪೋರ್ಟ್‌ ಕೈಗೆ ಬಂದು ಅವಳ ಜೀವನವೇ ಅಲ್ಲೋಲ ಕಲ್ಲೋಲವಾಗಿ ಹೋಯಿತು. ಅತ್ತೆ ಮನೆಯಲ್ಲಿ ಪ್ರೀತಿ ಹಾಗೂ ಆತ್ಮೀಯತೆಗಾಗಿ ಕಾತರಿಸುತ್ತಿದ್ದ ಕಾವೇರಿಗೆ ಒಂದು ದಿನ………

“ಇದೇ ಮನೆ ಮುಂದೆ ನಿಲ್ಲಿಸಪ್ಪ.”

ಕಾವೇರಿಯ ಸೂಚನೆಯ ಮೇರೆಗೆ ಡ್ರೈವರ್‌ ಕ್ಯಾಬ್‌ ನಿಲ್ಲಿಸಿದ. ಕ್ಯಾಬಿನಿಂದ ಇಳಿಯುತ್ತಿದ್ದಂತೆ ಕಾವೇರಿ ಬ್ಯಾಗ್‌ನ್ನು ಹೆಗಲಿಗೇರಿಸಿ ಭಾರವಾದ ಹೆಜ್ಜೆಗಳನ್ನಿಡುತ್ತಾ ಗೇಟ್‌ ತೆರೆದು ಬಾಗಿಲ ಮುಂದೆ ನಿಂತಳು. `ಕೆಲವು ದಿನ ಅಪ್ಪನ ಜೊತೆ ಕಳೆದು, ನೋವನ್ನೆಲ್ಲ ಮರೆತು, ಹೊಸ ಉತ್ಸಾಹದೊಂದಿಗೆ ವಾಪಸ್‌ ಹೋಗ್ತೀನಿ,’ ಎಂದು ಯೋಚಿಸುತ್ತಾ, ಮುಖದಲ್ಲಿ ಕೃತಕ ನಗು ತಂದುಕೊಂಡು ಡೋರ್‌ ಬೆಲ್ ಒತ್ತಿದಳು.

“ಅರೇ ಕಾವೇರಿ, ಬಾ….ಬಾ,” ಆಕಸ್ಮಿಕವಾಗಿ ಮಗಳು ಬಂದಿರುವುದನ್ನು ಕಂಡು ಸುಭಾಷ್‌ರ ಮುಖ ಅರಳಿತು.

“ಅಪ್ಪಾ, ನನ್ನ ಈ ಸರ್‌ಪ್ರೈಸ್‌ ಹೇಗನಿಸಿತು?” ಎಂದು ಕೇಳುತ್ತಾ ಕೃತಕ ನಗು ಜೋರಾದ ನಗುವಿನಲ್ಲಿ ಪರಿವರ್ತನೆಗೊಂಡಿತು. ಕೋಣೆಯಲ್ಲಿ ಕಾಲಿಟ್ಟು ಸೋಫಾಗೆ ಬೆನ್ನು ಆನಿಸಿ ಅವಳು ನಿರಾಳವಾಗಿ ಕುಳಿತಳು.

“ನಿನಗೆ ಬಹಳ ದಣಿವಾಗಿರಬೇಕು. ಈಗಲೇ ಶುಂಠಿ ಚಹಾ ಮಾಡಿಕೊಂಡು ಬರ್ತೀನಿ,” ಎಂದು ಹೇಳುತ್ತಾ ಸುಭಾಷ್‌ ಅಡುಗೆ ಮನೆ ಕಡೆ ಹೋದರು.

“ಅಪ್ಪಾ, ನೀವೇಕೆ ಅಡುಗೆ ಮನೆಗೆ ಹೋಗ್ತಿದ್ದೀರಿ, ನಿರ್ಮಲಾ ಆಂಟಿ ಇವತ್ತು ಕೆಲಸಕ್ಕೆ ಬಂದಿಲ್ಲವೇ…..?”

“ಕಾವೇರಿ, ನಾನು ತುರ್ತು ಕೆಲಸದ ನಿಮಿತ್ತ ಮುಂಬೈಗೆ ಹೋಗಬೇಕಿದೆ. ಹಾಗಾಗಿ ನಿರ್ಮಲಾ ಇವತ್ತು ಬೇಗನೇ ಕೆಲಸ ಮುಗಿಸಿಹೋದಳು. ನಾನೀಗ ಫ್ಲೈಟ್‌ ಟಿಕೆಟ್‌ ಕ್ಯಾನ್ಸಲ್ ಮಾಡ್ತೀನಿ…..”

“ಬೇಡ ಅಪ್ಪಾ, ನೀವು ಹೋಗಿ ಬೇಗ ಬರ್ತೀರಿ ಅಲ್ವಾ…..? ನಾನು ಕೆಲವು ದಿನ ಇಲ್ಲೇ ಇರ್ತೀನಿ,” ಕಾವೇರಿ ಖುಷಿಯಿಂದ ಇರುವ ಎಲ್ಲ ಪ್ರಯತ್ನ ನಡೆಸಿದಳು.

“ನಾನು 2 ದಿನದಲ್ಲಿ ವಾಪಸ್‌ ಬರ್ತೀನಿ. ನೀನು ಕೆಲವು ದಿನ ಇಲ್ಲಿರೋದು ಮೋಹನ್‌ಗೆ ಬೇಸರ ಆಗೋದಿಲ್ವಾ….? ನೀನು ಬೆಂಗಳೂರಿನಲ್ಲೇ ಇದ್ದೂ ಕೂಡ ಕೆಲವೊಮ್ಮೆ ಬೆಳಗ್ಗೆ ಬಂದು ಸಂಜೆ ಹೋಗ್ತಿದ್ದೆ. ಒಂದು ದಿನ ಹೆಚ್ಚಿಗೆ ಇರಲು ಎಲ್ಲಿ ಅವಕಾಶ ಕೊಡ್ತಾನೆ ಮೋಹನ್‌…..?” ಸುಭಾಷ್‌ ರ ಮನಸ್ಸಿನಲ್ಲಿ ಅಳಿಯನ ಬಗೆಗಿದ್ದ ತಕರಾರು ಮಾತಿನ ಮೂಲಕ ಹೊರಹೊಮ್ಮಿತು.

“ಆಫೀಸ್‌ ಕೆಲಸದ ನಿಮಿತ್ತ ಇತ್ತಷ್ಟೇ ಮೋಹನ್‌ ಸಿಡ್ನಿಗೆ ಹೋದರು. ಹೀಗಾಗಿ ನಾನು ಕೆಲವು ದಿನ ನಿಮ್ಮೊಂದಿಗೆ ಇರುವ ಪ್ರೋಗ್ರಾಂ ಹಾಕಿಕೊಂಡಿರುವೆ ಅಪ್ಪಾ…..” ಎಂದಳು ಕಾವೇರಿ.

“ಗುಡ್‌,” ಸುಭಾಷ್‌ರ ಮುಖದಲ್ಲಿ ಖುಷಿಯ ಮಿಂಚು ಕಾಣಿಸಿತು.

ಕಾವೇರಿ ಕೂಡ ಮುಗುಳ್ನಕ್ಕು ನಂತರ ಡ್ರಾಯಿಂಗ್‌ ರೂಮಿನಲ್ಲಿಟ್ಟಿದ್ದ ತನ್ನ ಬ್ಯಾಗನ್ನು ಕೋಣೆಗೆ ತೆಗೆದುಕೊಂಡು ಹೋಗಿ ಅದರಲ್ಲಿನ ತನ್ನ ಬಟ್ಟೆಗಳನ್ನು ತೆಗೆದು ಇಡತೊಡಗಿದಳು.

ಅಪ್ಪನ ಜೊತೆ ಮಾತಾಡಿ ಕಾವೇರಿಯ ಮನಸ್ಸು ಸಾಕಷ್ಟು ಹಗುರವಾಯಿತು. ಆದರೆ ಅಪ್ಪ ಹೊರಗೆ ಹೋಗುತ್ತಿದ್ದಂತೆ ಅವಳ ಮನಸ್ಸಿನಲ್ಲಿ ಉದಾಸತನ ಮತ್ತೆ ಆವರಿಸಿಕೊಂಡಿತು. ಮೆದುಳಿನಲ್ಲಿ ವಿಚಾರಗಳ ಚಕ್ರ ತಿರುಗತೊಡಗಿತು. ಶೂನ್ಯದತ್ತ ನಿರೀಕ್ಷಿಸುತ್ತಾ ತನಗೆ ತಾನೇ ಮಾತಾಡಿಕೊಳ್ಳತೊಡಗಿದಳು, `ಇಲ್ಲಿ ಎಷ್ಟೊಂದು ಆತ್ಮೀಯತೆ ಇದೆ. ಗೋಡೆಗಳು ಕೂಡ ಪ್ರೀತಿಯ ಹೊನಲನ್ನು ಹರಿಸುತ್ತವೆ. ಮನೆಯ ಏಕೈಕ ಸದಸ್ಯ ಅಪ್ಪ ಸ್ನೇಹದ ಮೂರ್ತಿಯೇ ಆಗಿದ್ದಾರೆ. ಅಮ್ಮ ಈ ಲೋಕದಿಂದ ಹೊರಟು ಹೋದನಂತರ ಅಪ್ಪನೇ ಅಮ್ಮನ ಪಾತ್ರ ನಿಭಾಯಿಸುತ್ತಾ ಮಮತೆಯ ನೆರಳಾಗಿ ತನ್ನನ್ನು ಚಿಂತೆಯಿಂದ ಮುಕ್ತರಾಗಿಸುತ್ತಿದ್ದಾರೆ. ತಾನು ಮನೆಯ ಏಕಮಾತ್ರ ಸಂತವಾನಾಗಿದ್ದರೂ ಅಪ್ಪ ಮಾತ್ರ ಯಾರೂ ಕೊಡದಷ್ಟು ಪ್ರೀತಿಯನ್ನು ನನ್ನ ಮೇಲೆ ಹರಿಸುತ್ತಿದ್ದಾರೆ.

`ಆದರೆ ಅಲ್ಲಿ….. ಅತ್ತೆ ಮನೆಯಲ್ಲಿ ನನ್ನ ಮನೆಯೆಂದು ಹೇಗೆ ತಾನೇ ಹೇಳಲಿ? ಅಮ್ಮನ ರೂಪದಲ್ಲಿ ಅತ್ತೆ ಇರುತ್ತಾಳೆ ಎಂದು ಭಾವಿಸಿದೆ. ಮಾವನಲ್ಲಿ ಅಪ್ಪನ ಸ್ನೇಹ ನಿರೀಕ್ಷಿಸಿದ್ದೆ. ಆದರೆ ಇಷ್ಟಪಟ್ಟ ಮಾತ್ರಕ್ಕೆ ಎಲ್ಲವೂ ಸಿಗುವುದಿಲ್ಲ. ಮತ್ತೆ ಯಾರ ಮೇಲೆ ಯಾವ ತಪ್ಪು ಹೊರಿಸಲಿ? ಸಂಗಾತಿಯೇ ನನ್ನ ಬಗ್ಗೆ ಅಕ್ಕರೆ ತೋರಿಸದಿದ್ದಾಗ…..`ಮದುವೆಯಾಗಿ 3 ವರ್ಷಗಳಾದರೂ ನಾನು ಪ್ರೀತಿ ಹಾಗೂ ಆತ್ಮೀಯತೆಗಾಗಿ ಹಂಬಲಿಸುತ್ತಿರುವೆ. ಹೊಸದೊಂದು ಜೀವ ಬಂದು ನನ್ನಲ್ಲಿ ಹೊಸ ಹರುಷ ಬರುತ್ತದೆಂದು ಅಂದುಕೊಂಡಿದ್ದೆ. ನಾನು ತಾಯಿಯಾಗದಿರುವುದಕ್ಕೆ ಅದೆಷ್ಟು ಜನರು ತನ್ನನ್ನು ಅಪರಾಧಿ ಎಂಬಂತೆ ಪರಿಗಣಿಸುತ್ತಿದ್ದಾರೆ.’

ಕಾವೇರಿ ಮತ್ತೊಮ್ಮೆ ಎಲ್ಲವನ್ನೂ ನೆನಪಿಸಿಕೊಂಡು ಖಿನ್ನಳಾದಳು. ಮದುವೆಯಾಗುತ್ತಿದ್ದಂತೆಯೇ ಅವಳು ನೌಕರಿಗೆ ರಾಜೀನಾಮೆ ಕೊಡಬೇಕಾಗಿ ಬಂದಿತ್ತು. ಇಡೀ ದಿನ ಮನೆಗೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡು ಪ್ರೀತಿಯ ಎರಡು ಮಾತುಗಳಿಗಾಗಿ ನಿರೀಕ್ಷಿಸುತ್ತಾ ಕುಳಿತುಬಿಡುತ್ತಿದ್ದಳು. ಪತಿ ಮೋಹನ್‌ ತನ್ನದೇ ಲೋಕದಲ್ಲಿ ಕಳೆದುಹೋಗುತ್ತಿದ್ದ. ರಾತ್ರಿ ಕೆಲವು ಸುಂದರ ಕ್ಷಣಗಳಿಗಾಗಿ ಅವಳು ಮೋಹನನ ಸಾಮೀಪ್ಯಕ್ಕೆ ಹೋದರೆ, ಅವನ ಧೋರಣೆ ಹೇಗಿರುತ್ತಿತ್ತೆಂದರೆ, ತಾನೇನೊ ಉಪಕಾರ ಮಾಡುತ್ತಿರುವಂತೆ ವರ್ತಿಸುತ್ತಿದ್ದ.

ಕಾವೇರಿ ಪುಟ್ಟ ಕಂದಮ್ಮನಿಗಾಗಿ ನಿರೀಕ್ಷಿಸುತ್ತಾ 3 ವರ್ಷಗಳೇ ಕಳೆದುಹೋದವು. ಆದರೆ ಅವಳ ಮಡಿಲು ಮಾತ್ರ ತುಂಬಲಿಲ್ಲ. ಮೋಹನನನ್ನು ಒಲಿಸಿಕೊಂಡು ಒಂದು ದಿನ ಅವಳು ಕ್ಲಿನಿಕ್‌ಗೆ ಹೋದಳು. ಡಾಕ್ಟರ್‌ ಇಬ್ಬರನ್ನೂ ಪರೀಕ್ಷೆಗೊಳಪಡಿಸಿದರು.

ಆ ದಿನ ರಾತ್ರಿ ಮೋಹನ್‌ ಆನ್‌ ಲೈನ್‌ನಲ್ಲಿ ರಿಪೋರ್ಟ್‌ಗಳನ್ನು ನೋಡುತ್ತಿದ್ದ. ಅವಳು ಹಾಸಿಗೆಯಲ್ಲಿ ಮೈಯೊಡ್ಡಿ ಮೋಹನ್‌ ಏನು ಹೇಳುತ್ತಾನೆಂದು ಕಾಯುತ್ತಿದ್ದಳು. ಮೋಹನ್‌ ಲ್ಯಾಪ್‌ ಟಾಪ್‌ ಶಟ್‌ ಡೌನ್‌ ಮಾಡಿ ಮುಖ ಕೆಳಗೆ ಮಾಡಿಕೊಂಡು, “ರಿಪೋರ್ಟ್ಸ್ ಗಮನಿಸಿದೆ. ನಾನು ನಿನಗೆ ಮೊದಲೇ ಹೇಳಿದ್ದೆ. ಆದರೇ ನೀನೇ ಟೆಸ್ಟ್ ಮಾಡಿಸಲೇಬೇಕೆಂದು ಹಠ ಹಿಡಿದೆ. ಆದರೆ ಈಗ ಸ್ಪಷ್ಟವಾಗಿರುವ ಸಂಗತಿಯೇನೆಂದರೆ, ನಿನ್ನ ವ್ಯವಸ್ಥೆಯಲ್ಲಿಯೇ ಯಾವುದೊ ದೋಷ ಇದೆ. ಹೀಗಾಗಿ ನೀನೆಂದೂ ತಾಯಿಯಾಗಲು ಸಾಧ್ಯವಿಲ್ಲ…..” ಎಂದು ಹೇಳಿದ.ಕಾವೇರಿಯ ಅಳು ಮೇರೆ ಮೀರಿತು. ತನ್ನನ್ನು ತಾನು ನಿಯಂತ್ರಣಕ್ಕೆ ತಂದುಕೊಂಡು ಧೈರ್ಯದಿಂದ, “ನಾಳೆ ನೀವು ರಿಪೋರ್ಟ್‌ನ ಪ್ರಿಂಟ್‌ ಔಟ್‌ ತೆಗೆದುಕೊಂಡು ಬನ್ನಿ. ಇಂತಹ ಸಮಸ್ಯೆಗಳಿಂದ ಬಹಳಷ್ಟು ಮಹಿಳೆಯರು ತೊಂದರೆಗೆ ಒಳಗಾಗುತ್ತಾರೆ. ನಾವು ನಾಳೆಯೇ ವೈದ್ಯರ ಬಳಿ ಹೋಗೋಣ,” ಎಂದಳು.

“ಇದನ್ನು ಮತ್ತೆ ತಮಾಷೆಯ ವಸ್ತುವಾಗಿಸುವ ಯಾವುದೇ ಅವಶ್ಯಕತೆ ಇಲ್ಲ. ಯಾರಾದರೂ ಕೇಳಿದರೆ ನಮಗೆ ಈಗಲೇ ಕುಟುಂಬ ವಿಸ್ತರಿಸುವ ವಿಚಾರವಿಲ್ಲವೆಂದು ಹೇಳಿಬಿಡು. ಇನ್ಮುಂದೆ ಈ ಬಗ್ಗೆ ಯಾವುದೇ ಪ್ರಸ್ತಾಪ ಮಾಡಬಾರದು,” ಎಂದು ಹಿಟ್ಲರ್‌ನ ಆದೇಶ ಕೊಟ್ಟು ಮಗ್ಗಲು ಬದಲಿಸಿ ಮಲಗಿದ.

ತಿರಸ್ಕೃತಳಾದವಳಂತೆ ಕಾವೇರಿ ಕಣ್ಣೀರು ಸುರಿಸುತ್ತಾ ಉಳಿದುಬಿಟ್ಟಳು. ಮರುದಿನ ಮೋಹನ್‌ ತನ್ನ ತಾಯಿಗೆ ರಿಪೋರ್ಟ್‌ ಬಗ್ಗೆ ತಿಳಿಸಿದ. ಆ ಬಳಿಕ ಆಕೆ ಹೆಜ್ಜೆ ಹೆಜ್ಜೆಗೂ ಕಾವೇರಿಯನ್ನು ಕುಟುಕತೊಡಗಿದರು. ತನ್ನ ಸಂಬಂಧಿಕರೊಬ್ಬರ ಮನೆಯಲ್ಲಿ ಸೊಸೆ ತಾಯಿಯಾಗದಿದ್ದಾಗ, ಅವಳಿಗೆ ವಿಚ್ಛೇದನ ನೀಡಿ ಮತ್ತೊಂದು ಮದುವೆ ಮಾಡಿದ ಪ್ರಸಂಗದ ಬಗ್ಗೆ ಅತ್ತೆ ಆಗಾಗ್ಗೆ ತನ್ನ ಮಗನಿಗೆ ಒತ್ತಿ ಒತ್ತಿ ಹೇಳುತ್ತಿದ್ದರು.

ನಿರ್ಲಕ್ಷ್ಯ ಹಾಗೂ ದೌರ್ಜನ್ಯದ ಕತ್ತಲೆಯ ಕೂಪದಿಂದ ಕೂಡಿದ ಒಂದು ಬೀದಿಯಲ್ಲಿ ತನ್ನನ್ನು ತಾನು ಕಂಡು ಕಾವೇರಿ ಏಕಾಂಗಿಯಾಗಿ ಹೋಗಿದ್ದಳು.

“ನೀನು ಯಾವಾಗಲೂ ಮುಖ ಊದಿಸಿಕೊಂಡು ಯಾಕೆ ಕೂತಿರ್ತಿಯಾ? ನನ್ನ ಮುಂದಾದರೂ ನಿನ್ನ ಈ ಉಬ್ಬಿದ ಮುಖ ಹೊತ್ತು ತಿರುಗದಿರು,” ಎಂದು ಹೇಳುತ್ತಿದ್ದ.

ಕಳೆದ ದಿನಗಳ ಅಪಮಾನದ ಕುಟುಕು ಅವಳನ್ನು ಇನ್ನೂ ಘಾಸಿಗೊಳಿಸುತ್ತಲೇ ಇತ್ತು. ಕೋಲಾರದಿಂದ ಗಂಡನ ದೊಡ್ಡಮ್ಮ ಭೇಟಿಯಾಗಲು ಬಂದಿದ್ದರು. ಆಗ ಕಾವೇರಿ ಅವರಿಗೆ ಗೌರವ ನೀಡಲೆಂದು ಅವರ ಪಾದ ಮುಟ್ಟಿ ನಮಸ್ಕರಿಸಿದಳು.

ಅವರು ಎಂದಿನಂತೆ ಕಾವೇರಿ ಬೇಗ ಮಗುವಿನ ತಾಯಿಯಾಗಲೆಂದು ಹಾರೈಸಿದರು. ಅಲ್ಲಿಯೇ ನಿಂತಿದ್ದ ಅತ್ತೆ, “ಇಲ್ಲ ಅಕ್ಕಾ, ಆ ಸುಖ ನಮ್ಮ ಪಾಲಿಗೆ ಎಲ್ಲಿದೆ? ನಮ್ಮ ಮನೆಯಂಗಳಕ್ಕೆ ಮಗುವಿನ ಆಟದ ಭಾಗ್ಯ ಇಲ್ಲ,” ಎಂದು ಕಟು ಧ್ವನಿಯಲ್ಲಿ ಹೇಳಿದರು.

ಅದನ್ನು ಕೇಳಿಸಿಕೊಂಡ ದೊಡ್ಡತ್ತೆ ಮುಖ ಸಿಂಡರಿಸುತ್ತ, “ನೀನು ಇದೇನು ಹೇಳ್ತಿರುವೆ? ಕಾವೇರಿಯ ಮುಖ ನೋಡಿದರೆ, ಅದರ ಚಿಂತೆ ಒಂದಿಷ್ಟೂ ಇದ್ದಂತೆ ಕಾಣ್ತಿಲ್ಲ. ಕುಟುಂಬಕ್ಕೆ ಒಂದು ಮಗುವನ್ನು ಕೊಡದವಳಿಗೆ ಈ ಶೃಂಗಾರವೆಲ್ಲಾ ಯಾಕೆ?” ಎಂದರು.

“ಈಗೇನು ಮಾಡೋಕೆ ಆಗುತ್ತೆ? ನನ್ನ ಮಗನ ಬದುಕಿನಲ್ಲಿ ಈ ಬಂಜೆ ಬರಬೇಕೆಂದು ಸೃಷ್ಟಿ ಬರೆದಿತ್ತೇನೊ…..” ವಿಷ ತುಂಬಿದ ವಾಗ್ಬಾಣಗಳಿಂದ ಕೂಡಿದ ಮಾತುಗಳು ಅಸಹನೀಯಾಗಿದ್ದವು. ಕಾವೇರಿ ಏನೂ ಮಾತನಾಡದೇ ಅಲ್ಲಿಂದ ಹೊರಟುಹೋದಳು. ಅಪಮಾನ ಹಾಗೂ ದುಃಖದಿಂದ ವಿಚಲಿತಳಾದ ಅವಳು ರಾತ್ರಿ ಗಂಡನಿಗೆ ವಿಷಯ ತಿಳಿಸಿದರೆ, ಅವನು ಅವಳ ಮೇಲೆಯೇ ಉರಿದ್ದೆದ್ದು, “ನೀನು ಯಾರ ಯಾರ ಬಾಯಿ ಮುಚ್ಚಿಸುತ್ತೀಯಾ? ಅಮ್ಮ, ದೊಡ್ಡಮ್ಮ ತಪ್ಪೇನು ಹೇಳಿಲ್ಲ ಅಲ್ವಾ….? ನಾಳೆ ನಾನು 8 ಗಂಟೆಗೆ ಸಿಡ್ನಿಗೆ ಹೋಗಬೇಕು. ಹೋಗುವ ಮುನ್ನ ನಿನ್ನನ್ನು ಖುಷಿಪಡಿಸಬೇಕೆಂದು ಯೋಚಿಸಿದ್ದೆ. ಆದರೆ ನೀನು ನನ್ನ ಮೂಡನ್ನು ಸಂಪೂರ್ಣ ಹಾಳು ಮಾಡಿಬಿಟ್ಟೆ. ದೀಪ ಆರಿಸಿ ಮಲಗು,” ಎಂದು ಹೇಳಿದ.

“ನಾನು ಕೂಡ ನಾಳೆ ಅಪ್ಪನ ಮನೆಗೆ ಹೋಗ್ತೀನಿ. ಅವರ ಆರೋಗ್ಯ ಸರಿಯಿಲ್ಲ ಎಂದು ಫೋನ್‌ ಮಾಡಿದ್ದರು,” ಮೊದಲ ಬಾರಿ ಕಾವೇರಿ ಸುಳ್ಳು ಹೇಳಿದ್ದಳು.

ಅಪ್ಪನ ಫೋನ್‌ ನೆಪ ಹೇಳಿ ಅವಳು ತವರಿಗೆ ಬಂದಿದ್ದಳು. ಬಾಲ್ಯದಲ್ಲಿ ಯಾವುದೇ ತೊಂದರೆ ತಾಪತ್ರಯ ಇದ್ದಾಗ ಅಪ್ಪ ಅವಳ ಬೆನ್ನು ತಟ್ಟುತ್ತಾ ಮಲಗಿಸುತ್ತಿದ್ದರೆ, ಅವಳ ಒತ್ತಡವೆಲ್ಲ ಹಾಗೆಯೇ ಮರೆಯಾಗಿ ಹೋಗುತ್ತಿತ್ತು. ಇವತ್ತು ಕೂಡ ಅದೇ ಅಪೇಕ್ಷೆಯಿಂದ ಅವಳು ತವರಿಗೆ ಬಂದಿದ್ದಳು.

ಏರ್‌ ಪೋರ್ಟ್‌ ತಲುಪಿ ಅಪ್ಪ ಸಂದೇಶ ಕಳಿಸಿದಾಗ ಕಾವೇರಿಯ ಯೋಚನೆಯ ಓಟಕ್ಕೆ ಕಡಿವಾಣ ಬಿತ್ತು. ಸಂದೇಶ ಓದಿ ಅವಳು ಅಡುಗೆ ಮನೆಗೆ ಹೋಗಿ ತನಗಾಗಿ ಉಪ್ಪಿಟ್ಟು ಹಾಗೂ ಕಾಫಿ ಮಾಡಿಕೊಂಡು ಬಂದಳು. ಬಳಿಕ ಟಿ.ವಿ ಆನ್‌ ಮಾಡಿ ಕುಳಿತಳು. ಯಾವುದೊ ಸಿನಿಮಾದಲ್ಲಿ ವಿವಾಹದ ದೃಶ್ಯ ಪ್ರಸಾರವಾಗುತ್ತಿತ್ತು. ವರನ ಹೆಗಲಿನ ಮೇಲಿದ್ದ ಬಟ್ಟೆಯ ತುದಿಗೆ ವಧುವಿನ ಸೀರೆಯ ಚುಂಗನ್ನು ಗಂಟು ಹಾಕಿದ್ದರು.

ಕಾವೇರಿಗೆ ಕೂಡ ಏಳು ಹೆಜ್ಜೆ ಇಡುವ ಮುನ್ನ ಇಂತಹದೇ ವಿಧಿವಿಧಾನಗಳನ್ನು ನೆರವೇರಿಸಲಾಗಿತ್ತು. ಆದರೆ ಆಗಿದ್ದೇನು? ಮೋಹನನ ಕೊರಳಿನಲ್ಲಿದ್ದ ಮದುವೆ ವಸ್ತ್ರ ಅದೆಷ್ಟು ತಿರುಚಾಗಿ ಹೋಯಿತೆಂದರೆ, ತಿರಸ್ಕಾರಕ್ಕೆ ಬದಲಾದದ್ದು ಅವಳ ಗಮನಕ್ಕೆ ಬರಲೇ ಇಲ್ಲ.

ಆಶೀರ್ವಾದಗಳು ಅವಳಿಗೆ ಸುಖಕರ ಜೀವನ ಕೊಡಲೇ ಇಲ್ಲ. ಅವು ಮುಳ್ಳಿನ ಗಿಡಗಳಂತೆ ಅವಳನ್ನು ಚುಚ್ಚುತ್ತಿದ್ದವು. ಅರಿಶಿನದ ಬಣ್ಣ ಅವಳ ಜೀವಕ್ಕೆ ಹೊಳಪು ಕೊಡುವ ಬದಲು ವಿಷಾದದ ರಂಗು ತುಂಬಿತು. ಹೂವಿನಂತಹ ಅವಳ ಮುಖ ಇನ್ನಷ್ಟು ಅರಳುವ ಮೊದಲೇ ಬಾಡಿಹೋದಂತೆ ಭಾಸವಾಯಿತು.

ಮಾನಸಿಕ ಶಾಂತಿಯಂತೂ ಈಗ ಅವಳಿಗೆ ಕನಸಿನಂತೆ ಭಾಸವಾಗುತ್ತಿತ್ತು. ಮದುವೆಯ ಬಂಧನ ಇಬ್ಬರ ಮನಸ್ಸನ್ನಂತೂ ಕೂಡಿಸಲೇ ಇಲ್ಲ. ಕಾವೇರಿಯ ಕಾಲುಗಳಿಗೆ ಕೋಳಗಳನ್ನು ತೊಡಿಸಿತ್ತು. ಅವನ್ನು ಅವಳು ಕಡಿದುಹಾಕಲು ಸಾಧ್ಯವಾಗುತ್ತಿರಲಿಲ್ಲ.

ಡೋರ್‌ ಬೆಲ್ ‌ಸದ್ದಾದುದರಿಂದ ಅವಳು ಯೋಚನೆಯ ಕೂಪದಿಂದ ಹೊರಗೆ ಬಂದಳು. ಬಾಗಿಲು ತೆರೆದಾಗ ಎದುರಿಗೆ ಶಮಂತನನ್ನು ನೋಡಿ ಅವಳ ಮುದುಡಿದ ಮನಸ್ಸು ಅರಳಿತು.

ಶಮಂತ್‌ ಅವಳ ಮನೆ ಪಕ್ಕದಲ್ಲಿಯೇ ವಾಸಿಸುತ್ತಿದ್ದ. ಇಬ್ಬರ ಸ್ನೇಹ ಹಳೆಯದು. ಅವರಿಬ್ಬರೂ ಒಂದೇ ಶಾಲೆಯಲ್ಲಿ ಓದಿದ್ದರು. ಅವನು ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ಹೋಗಿದ್ದ. ಎಂ.ಬಿ.ಎ ಮುಗಿಸಿದ ಬಳಿಕ ಬೆಂಗಳೂರಿನ ಒಂದು ಎಂಎನ್‌ಸಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಶಮಂತ್‌ನ ಒಂದು ಕಾಲು ಪೋಲಿಯೊ ಕಾರಣದಿಂದ ದುರ್ಬಲಗೊಂಡಿತ್ತು. ಆ ಕಾಲಿಗೆ ಅವನು ಕ್ಯಾಲಿಪರ್‌ ಹಾಕಿಕೊಂಡಿರುತ್ತಿದ್ದ.

ಶಮಂತ್‌ನ ಮನಸ್ಸಿನಲ್ಲಿ ಕಾವೇರಿಗಾಗಿ ವಿಶೇಷ ಸ್ಥಾನವಿತ್ತು. ಆದರೆ ಇದಕ್ಕೆ ಕಾರಣ ಕಾವೇರಿಯ ಸ್ನಿಗ್ಧ ಸೌಂದರ್ಯ ಅಥವಾ ಅವಳು ಓದಿನಲ್ಲಿ ಜಾಣೆಯಾಗಿದ್ದಳು ಎಂಬುದಕ್ಕಲ್ಲ. ಕಾರಣ ಕಾವೇರಿಯ ಮನಸ್ಸಿನ ಬಗೆಗಿನ ಗೌರವ ಹಾಗೂ ಸ್ನೇಹಮಯ ವರ್ತನೆಗಾಗಿ. ಅದು ಸಹಾನುಭೂತಿಯಿಂದಲ್ಲ, ಸ್ನೇಹದ ಸುವಾಸನೆಯಿಂದ ಘಮಘಮಿಸುತ್ತಿತ್ತು.

ಮದುವೆಯ ಬಳಿಕ ಕಾವೇರಿ ತವರಿಗೆ ಬರುವುದು ಕಡಿಮೆಯಾಗಿದ್ದರಿಂದ ಶಮಂತ್‌ ಜೊತೆಗೆ ಭೇಟಿ ಹೆಚ್ಚೂ ಕಡಿಮೆ ನಿಂತೇ ಹೋಗಿತ್ತು.  ಆದರೆ ಕಾವೇರಿಯ ಸ್ನೇಹದ ಶಕ್ತಿ ಅವನನ್ನು ಸದಾ ಕೈಹಿಡಿದು ಮುನ್ನಡೆಸುತ್ತಿತ್ತು.

ಶಮಂತನನ್ನು ನೋಡಿ ಅವಳ ಮುಖದಲ್ಲಿ ಒಂದು ವಿಶೇಷ ಕಳೆ ತುಂಬಿತು. ಅವರ ನಡುವಿನ ಮಾತುಕತೆ ನಿಲ್ಲುವ ಸ್ಥಿತಿಯಲ್ಲಿರಲಿಲ್ಲ. ಹಳೆಯ ಸ್ನೇಹಿತರು, ಶಾಲೆ ಕಾಲೇಜು, ಸಿನಿಮಾ, ಹವಾಮಾನ ಏರುಪೇರು ಎಲ್ಲ ಅವರ ಮಾತುಕತೆಯಲ್ಲಿ ಸೇರಿಕೊಂಡಿತ್ತು.

ಕಾವೇರಿ ತನ್ನ ಮನಸ್ಸಿನ ನೋವನ್ನು ಹೇಳಿಕೊಂಡು ಶಮಂತನ ಮನಸ್ಸಿಗೆ ನೋವುಂಟು ಮಾಡಲು ಇಷ್ಟಪಡಲಿಲ್ಲ. ಆದರೆ ತನ್ನ ಮನದ ಬೇಗುದಿ ಮಿತ್ರ ಶಮಂತನಿಗೆ ತಿಳಿಯುವುದಿಲ್ಲ ಎಂದವಳು ಭಾವಿಸಿದ್ದಳು. ಆದರೆ ಮೇಲ್ನೋಟಕ್ಕೆ ಕಾಣುವ ಅವಳ ನಗು ದುಃಖದ ಹೊದಿಕೆಯಿಂದ ಕೂಡಿದೆ ಎನ್ನುವುದು ಶಮಂತನಿಗೆ ಆಗಲೇ ಅರ್ಥವಾಗಿ ಹೋಗಿತ್ತು.

ಸ್ವಲ್ಪ ಹೊತ್ತಿನ ಮಾತುಕಥೆಯ ಬಳಿಕ ಶಮಂತ್‌ ಕೇಳಿಯೇಬಿಟ್ಟ, “ಕಾವೇರಿ, ನಾವು ಕೇವಲ ಹಳೆಯ ದಿನಗಳದ್ದಷ್ಟೇ ಮಾತನಾಡೋದಾ? ನಿನ್ನ ಹೊಸ ಜೀವನದ ಘಟನೆಗಳನ್ನು ಏಕೆ ಹಂಚಿಕೊಳ್ಳಬಾರದು?”

ತನ್ನ ಕಳ್ಳತನ ಪತ್ತೆಯಾಗಿ ಹೋಯಿತು ಎಂದು ಕಾವೇರಿಗೆ ಅನಿಸತೊಡಗಿತು. “ನನ್ನ ಜೀವನ ಕೂಡ ಸಾಮಾನ್ಯ ವಿವಾಹಿತ ಮಹಿಳೆಯ ಹಾಗೆಯೇ ನಡೆಯುತ್ತಿದೆ. ಅತ್ತೆ, ಮಾವ, ಗಂಡ, ಜವಾಬ್ದಾರಿಗಳು ಇಷ್ಟೇ….. ನೀನು ಕೂಡ ನಿನ್ನ ಬಗ್ಗೆ ಹೇಳು…..” ಎಂದು ಹೇಳುತ್ತಾ ಅವಳ ಕಣ್ರೆಪ್ಪೆಗಳು ನೆಲ ನೋಡತೊಡಗಿದವು.

“ನೀನು ಕ್ರಿಯಾಶೀಲ ವಿವಾಹಿತ ಮಹಿಳೆ. ಈಗ ಪತಿಯಿಂದ ದೂರ ಬಂದು ಇಲ್ಲಿ ಕುಳಿತಿದ್ದೀಯಾ. ಅವರ ಬಗ್ಗೆಯೂ ಒಂದಿಷ್ಟು ತಿಳಿಸಬಹುದಾಗಿತ್ತು. ಆದರೆ ನೀನು ಅವರ ಬಗ್ಗೆ ಏನ್ನನ್ನೋ ಬಚ್ಚಿಡುತ್ತಿದ್ದೀಯಾ ಅದಕ್ಕೆ ನನಗೆ ಆಶ್ಚರ್ಯ ಆಗ್ತಾ ಇದೆ. ನಿನ್ನ ಮನಸ್ಸಿನ ಪೊರೆಯನ್ನು ಸ್ವಲ್ಪ ಕಳಚು,” ಎಂದ.

ಶಮಂತನ ಸ್ನೇಹದ ಮನವಿ ಕಾವೇರಿಯ ಹೃದಯದ ಕಣ್ಣುಗಳ ತನಕ ತಲುಪಿ ಕಣ್ಣೀರಾಗಿ ಹನಿಯತೊಡಗಿತು. ತನ್ನ ಮನಸ್ಸಿನ ನೋವನ್ನು ಅವಳು ಒಂದೊಂದಾಗಿ ಬಿಚ್ಚಿಡತೊಡಗಿದಳು. ಶಮಂತವನ ಸಹಾನುಭೂತಿ ಗಾಯದ ಮೇಲೆ ಮುಲಾಮಿನ ತರಹ ಕೆಲಸ ಮಾಡತೊಡಗಿತು.

ಕಾವೇರಿಯ ಕರುಣಾಜನಕ ಕಥೆ ಕೇಳಿ ಶಮಂತ್‌, “ಕಾವೇರಿ, ನಿನ್ನ ಗಂಡ ಮೋಹನ್‌, ನಿಮ್ಮಿಬ್ಬರ ರಿಪೋರ್ಟ್ಸ್ ತೋರಿಸಿ ನಿನಗೆ ನಿಜ ಹೇಳುತ್ತಿದ್ದಾನೆಯೇ…..?”

“ಅಂದರೆ? ಮೋಹನ್‌ ಆನ್‌ ಲೈನ್‌ ನಲ್ಲಿಯೇ ರಿಪೋರ್ಟ್‌ ನೋಡಿ ಹೇಳಿದ್ದು.”

“ಅಂದರೆ ನೀನು ಅದನ್ನು ಕಣ್ಣಾರೆ ನೋಡಲಿಲ್ಲ. ಮೋಹನ್‌ ಅದರ ಪ್ರಿಂಟ್ಸ್ ಕೂಡ ತೆಗೆದಿರಲಿಲ್ಲ, ನೀನು ಅದರ ಬಗ್ಗೆ ಪರಿಶೀಲನೆ……”

ಶಮಂತನ ಮಾತನ್ನು ಅರ್ಧದಲ್ಲಿಯೇ ತುಂಡರಿಸಿದ ಕಾವೇರಿ, “ಮೋಹನ್‌ ಇಷ್ಟು ದೊಡ್ಡ ಸುಳ್ಳು ಹೇಗೆ ಹೇಳಲು ಸಾಧ್ಯ? ಅವನು ಕೋಪಿಷ್ಟ ನಿಜ. ಆದರೆ ಇಷ್ಟು ದೊಡ್ಡ ಮೋಸಗಾರ ಕೂಡ…….?” ಅವಳು ತಳಮಳಗೊಂಡು ಯೋಚನೆಯಲ್ಲಿ ಮುಳುಗಿದಳು.

ಕಾವೇರಿ ಚಿಂತಿತಳಾದುದನ್ನು ಕಂಡು ಅವಳ ಮನಸ್ಸನ್ನು ಬೇರೆಡೆ ತಿರುಗಿಸಲು ನಗೆಹನಿಗಳನ್ನು ಕೇಳಿಸತೊಡಗಿದ. ಆಗ ವಾತಾವರಣ ನಗುವಿನಲ್ಲಿ ಪರಿವರ್ತನೆಗೊಂಡಿತು. ಅಷ್ಟರಲ್ಲಿ ಕಾವೇರಿಗೆ ಅಪ್ಪನಿಂದ ಫೋನ್‌ ಬಂತು. ತಾವು ಈಗಷ್ಟೇ ಮುಂಬೈ ತಲುಪಿದ್ದಾಗಿ ಅವರು ಹೇಳಿದರು. ಕಾವೇರಿ ಮನೆಯಲ್ಲಿ ಏಕಾಂಗಿಯಾಗಿ ಇರುವಂತಾಯ್ತಲ್ಲ ಎಂದು ಚಿಂತಿಸಿದ ಅಪ್ಪನಿಗೆ, ಶಮಂತ್ ಮನೆಗೆ ಬಂದಿದ್ದಾನೆಂದು ತಿಳಿದು ಮನಸ್ಸಿಗೆ ನಿರಾಳವಾಯಿತು. ಆ ರಾತ್ರಿ ತಮ್ಮ ಮನೆಯಲ್ಲಿಯೇ ಉಳಿದುಕೊಳ್ಳುವಂತೆ ಅವರು ಶಮಂತನಿಗೆ ವಿನಂತಿಸಿದರು.

ರಾತ್ರಿ 1 ಗಂಟೆಯ ತನಕ ಸ್ನೇಹಿತರ ಮಾತುಕಥೆ ನಡೆದಿತ್ತು. ನಂತರ ಇಬ್ಬರಿಗೂ ನಿದ್ರೆ ಎಳೆಯುತ್ತಿತ್ತು. ಮಲಗಲು ಹೋಗುವ ಮೊದಲು ಶಮಂತ್‌ ಮುಗುಳ್ನಗುತ್ತಾ ಹೇಳಿದ, “ಕಾವೇರಿ ನಾನೊಂದು ವಿಷಯ ಹೇಳ್ತೀನಿ. ನಾವಿಬ್ಬರೂ ಅದೆಷ್ಟು ದಿನಗಳ ನಂತರ ಭೇಟಿಯಾಗಿದ್ದೇವೆ. ಇನ್ಮುಂದೆ ಯಾವಾಗ ಭೇಟಿಯಾಗುತ್ತೇವೋ ಏನೋ? ನಿನಗೆ ಏನೂ ತೊಂದರೆ ಇಲ್ಲವೆಂದರೆ ನಾವಿಬ್ಬರೂ ಒಂದೊಂದು ಕಪ್‌ ಕಾಫಿ ಕುಡಿಯೋಣ್ವಾ? ಆದರೆ ಕಾಫಿ ನಾನೇ ಮಾಡ್ತೀನಿ…..” ಕಾವೇರಿಗೆ ಮಿತ್ರನ ಆಗ್ರಹವನ್ನು ತಳ್ಳಿಹಾಕಲು ಆಗಲಿಲ್ಲ ಒಪ್ಪಿಕೊಂಡು, ತನ್ನ ಅಪ್ಪನ ಕೋಣೆಯಲ್ಲಿ ಶಮಂತನಿಗೆ ಮಲಗಲು ವ್ಯವಸ್ಥೆ ಮಾಡತೊಡಗಿದಳು. ಅಲ್ಲಿಂದ ಹೊರಗೆ ಬರುತ್ತಿದ್ದಂತೆ ಶಮಂತ್‌ ಕಾಫಿ ಕಪ್‌ ಹಿಡಿದುಕೊಂಡು ನಿಂತಿದ್ದ. ಕಪ್‌ ಕೈಗೆತ್ತಿಕೊಂಡ ಕಾವೇರಿ ಕಾಫಿ ಗುಟುಕರಿಸಿ, “ಶಮಂತ್‌, ನೀನು ಮಾಡಿದ ಕಾಫಿ ಬಹಳ ರುಚಿಯಾಗಿದೆ. ನಿನ್ನನ್ನು ವರಿಸಲಿರುವ ಹುಡುಗಿಯ ಬಗ್ಗೆ ನನಗೆ ಅಸೂಯೆಯಾಗುತ್ತಿದೆ,” ಎಂದು ಹೇಳುತ್ತಾ ಅಲ್ಲೇ ಹಾಸಿಗೆಯ ಮೇಲೆ ಕುಳಿತು ಕಿಲಕಿಲನೆ ನಕ್ಕಳು.

ಶಮಂತ್‌ ತನ್ನ ಮೊಬೈಲಿ‌ನಲ್ಲಿದ್ದ ಹುಡುಗಿಯರ ಫೋಟೋ ತೋರಿಸತೊಡಗಿದ. ಇತ್ತೀಚೆಗಷ್ಟೇ ಅವನಿಗಾಗಿ ಕೆಲವು ಸಂಬಂಧಗಳು ಹುಡುಕಿಕೊಂಡು ಬರುತ್ತಿದ್ದವು. ತನಗೆ ಯಾವ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳುತ್ತಾ, ಅವನು ವಾಷ್‌ ರೂಮ್ ಕಡೆಗೆ ಹೋದ.

ದಣಿದು ಹೋಗಿದ್ದ ಕಾವೇರಿ ಅಲ್ಲಿಯೇ ಹಾಸಿಗೆ ಮೇಲೆ ಮಲಗಿದಳು ಯಾವಾಗ ನಿದ್ರೆಗೆ ಜಾರಿದಳೊ ಗೊತ್ತೇ ಆಗಲಿಲ್ಲ.

ಮುಂಜಾನೆ ಅಲಾರ್ಮ್ ಆಗುತ್ತಿದ್ದಂತೆ ಕಾವೇರಿ ನಿದ್ರೆಯಿಂದ ಎಚ್ಚೆತ್ತಳು. ಅವಳು ಗಡಿಬಿಡಿಯಿಂದ ಹೊರಗೆ ಬಂದಳು. ಬಾಲ್ಕನಿಯಲ್ಲಿ ಶಮಂತ್‌ ಹೊಂಬಣ್ಣದ ಸೂರ್ಯನ ಕಿರಣಗಳನ್ನು ನೋಡುತ್ತಾ ಮೈಮರೆತು ನಿಂತಿದ್ದ. ರಾತ್ರಿಯ ಘಟನೆಯ ಬಗ್ಗೆ ಕಾವೇರಿ ಪ್ರಶ್ನಿಸುವ ಮೊದಲೇ ಅವನೇ ಹೇಳತೊಡಗಿದ ರಾತ್ರಿ ನಾನು ವಾಷ್‌ ರೂಮಿನಿಂದ ಬರುತ್ತಿದ್ದಂತೆ ನೀನು ಮಲಗಿಬಿಟ್ಟಿದ್ದೆ. ನಿನ್ನನ್ನು ಎಬ್ಬಿಸುವುದು ಸರಿಯೆನಿಸಲಿಲ್ಲ. ಹಾಗಾಗಿ ನಾನು ಹೋಗಿ ಮಲಗಿಕೊಂಡೆ.”

ಚಹಾ ಕುಡಿದು ಶಮಂತ್‌ ವಾಪಸ್‌ ಹೊರಟುಹೋದ. ಅಪ್ಪ ಮುಂಬೈನಿಂದ ವಾಪಸ್‌ ಆಗುವ ತನಕ ಶಮಂತ್‌ ಪ್ರತಿದಿನ ಕಾವೇರಿಯನ್ನು ಭೇಟಿಯಾಗಲು ಬರುತ್ತಿದ್ದ. ಅಪ್ಪ ವಾಪಸ್ಸಾದಾಗ ಕಾವೇರಿ ಚಿಕ್ಕ ಮಗುವಿನ ಹಾಗೆ ಖುಷಿಪಟ್ಟಳು. ಕೆಲವೇ ದಿನಗಳ ಮಟ್ಟಿಗೆ ಅವರು ಮುಂಬೈಗೆ ಹೋಗಿದ್ದರೂ ವಾಪಸ್‌ ಬರುವಾಗ ಕಾವೇರಿಗೆ ಇಷ್ಟವಾಗುವ ಬಟ್ಟೆಬರೆ, ತಿಂಡಿ ಮುಂತಾದವುಗಳನ್ನು ತಂದಿದ್ದರು. ಅವರು ಮಗಳನ್ನು ಯಾವಾಗಲೂ ಖುಷಿಯಿಂದ ಕಾಣಲು ಬಯಸುತ್ತಿದ್ದರು. ಅವಳಿಗೆ ಎಳ್ಳಷ್ಟೂ ದುಃಖ ಆಗಬಾರದು ಎಂದುಕೊಳ್ಳುತ್ತಿದ್ದರು. ಆದರೆ ಕಾವೇರಿ ಮಾತ್ರ ತನ್ನ ಮನದ ಮಾತನ್ನು ತಂದೆಗೆ ಹೇಳಲು ಆಗಲಿಲ್ಲ. ತಾನು ತಾಯಿ ಆಗದೇ ಇರುವ ಬಗ್ಗೆ ಅತ್ತೆ ಮನೆಯವರು ತನ್ನ ಮೇಲೆಯೇ ತಪ್ಪು ಹೊರಿಸುತ್ತಿರುವ ಬಗ್ಗೆ ಅವಳು ಅಪ್ಪನ ಮುಂದೆ ಹೇಳಿಕೊಳ್ಳಲಿಲ್ಲ. ತನ್ನ ನೋವನ್ನು ತನ್ನೊಳಗೆ ಹತ್ತಿಕ್ಕಿಕೊಂಡು ಅಪ್ಪನ ಸ್ನೇಹದ ಸವಿಯನ್ನು ಎಂದೆಂದಿಗೂ ಸವಿಯಬೇಕೆನ್ನುತ್ತಿದ್ದಳು. ಅಪ್ಪನ ಮನೆಗೆ ಬಂದು 10 ದಿನಗಳು ಹೇಗೆ ಕಳೆದುಹೋದವೋ ಅವಳಿಗೆ ಗೊತ್ತೇ ಆಗಲಿಲ್ಲ.

ತನ್ನ ಅತ್ತೆಯ ಮನೆಗೆ ವಾಪಾಸ್ಸಾಗುವ ದಿನ ತಿಂಡಿ ತಿಂದು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅವಳಿಗೆ ವಾಂತಿ ಬರುವಂತಾಯಿತು. ಜೊತೆಗೆ ತಲೆ ಸುತ್ತು ಕೂಡ ಆಗುತ್ತಿತ್ತು. ಅಪ್ಪ ಅವಳನ್ನು ತಕ್ಷಣವೇ ಡಾ. ಸುಜಾತಾ ಕ್ಲಿನಿಕ್‌ಗೆ ಕರೆದುಕೊಂಡುಹೋದರು.

ಡಾ. ಸುಜಾತಾ, ಅವಳನ್ನು ಪರೀಕ್ಷಿಸಿ ಔಷಧಿಯ ಜೊತೆಗೆ ಕೆಲವು ಟೆಸ್ಟ್ ಗಳನ್ನು ಬರೆದುಕೊಟ್ಟರು. ಟೆಸ್ಟ್ ಗಾಗಿ ಸ್ಯಾಂಪಲ್ ಕೊಟ್ಟು ಕಾವೇರಿ ಮನೆಗೆ ವಾಪಸ್‌ ಆದಳು. ಮಧ್ಯಾಹ್ನ ಶಮಂತ್‌ಅವಳನ್ನು ಭೇಟಿಯಾಗಲು ಬಂದಾಗ, ಅವಳಿಗೆ ಇಷ್ಟವಾಗುವ ಚಿರೋಟಿ ತಂದಿದ್ದ. ತನಗಿಷ್ಟವಾದ ಚಿರೋಟಿ, ಮೇಲಾಗಿ ಅಪ್ಪ ಹಾಗೂ ಶಮಂತನ ಜೊತೆ ಕಾವೇರಿ ತನ್ನ ಅನಾರೋಗ್ಯದ ವಿಷಯವನ್ನು ಮರೆತೇಬಿಟ್ಟಳು. ಮೂವರ ಮಾತು ಹಾಗೂ ನಗುವಿನಿಂದ ಮನೆಯಲ್ಲಿ ಖುಷಿ ಪ್ರತಿಧ್ವನಿಸುತ್ತಿತ್ತು.

ಸಂಜೆಯಾಗುತ್ತಿದಂತೆ ಕಾವೇರಿಗೆ ಸಂಪೂರ್ಣ ಸರಿಹೋಯಿತು. ಕಾವೇರಿ ಮರುದಿನದ ತನಕ ಉಳಿಯಬೇಕೆಂದು ಬಯಸುತ್ತಿದ್ದರೂ ಗಂಡನ ಮನಗೆ ಹೋಗುವುದೇ ಸೂಕ್ತ ಎಂದು ಕಾವೇರಿ ಬಯಸಿದಳು. ಏಕೆಂದರೆ ಬೆಳಗ್ಗೆಯಷ್ಟೇ ಮೋಹನ್ ಸಿಡ್ನಿಯಿಂದ ವಾಪಸ್ಸಾಗಿದ್ದ.

ಡಾ. ಸುಜಾತಾರ ಕ್ಲಿನಿಕ್‌ನಲ್ಲಿ ರಿಪೋರ್ಟ್ಸ್ ನ್ನು ಆನ್‌ ಲೈನ್‌ ನಲ್ಲಿ ನೋಡುವ ಸೌಲಭ್ಯ ಇರಲಿಲ್ಲ. ಜೊತೆಗೆ ಆರೋಗ್ಯ ಸುಧಾರಿಸಿದ ಕಾರಣ ಕಾವೇರಿಗೆ ರಿಪೋರ್ಟ್‌ ಪಡೆಯುವುದು ಅವಶ್ಯ ಎನಿಸಲಿಲ್ಲ. ಹೀಗಾಗಿ ಅವಳು ತನ್ನ ಮನೆಗೆ ಹೋಗಲು ಕ್ಯಾಬ್‌ ಬುಕ್ ಮಾಡಿದಳು.

ಸುಭಾಷ್‌ ಮತ್ತು ಶಮಂತ್‌ ರಿಗೆ ಮಾತ್ರ ಒಂದು ಸಲ ರಿಪೋರ್ಟ್‌ ನೋಡುವುದೇ ಸರಿ ಎನಿಸಿತು. ಕಾವೇರಿಗೆ ತನ್ನ ಮನೆಗೆ ಹೋಗಲು ತಡವಾಗಿದ್ದರಿಂದ ಶಮಂತ್‌ ತಾನೇ ಕ್ಲಿನಿಕ್‌ ನಿಂದ ರಿಪೋರ್ಟ್‌ ಪಡೆದು ಅದರ ಫೋಟೊ ತೆಗೆದು ಕಾವೇರಿಗೆ ವಾಟ್ಸ್ ಆ್ಯಪ್‌ ನಲ್ಲಿ ಕಳಿಸುವುದಾಗಿ  ಹೇಳಿದ. ಕ್ಯಾಬ್‌ ಬಂದ ಬಳಿಕ ಅಪ್ಪ ಹಾಗೂ ಶಮಂತ್‌ ರಿಂದ ವಿದಾಯ ಪಡೆದು ಕಾವೇರಿ ತನ್ನ ಮನೆಯ ಕಡೆ ಪ್ರಯಾಣ ಬೆಳೆಸಿದಳು.

ಕಾವೇರಿ ಇನ್ನೇನು ಮನೆ ತಲುಪಲಿದ್ದಳು. ಅಷ್ಟರಲ್ಲಿ ಶಮಂತ್‌ ಕಳಿಸಿದ ರಿಪೋರ್ಟ್‌ಫೋಟೋ ಸಿಕ್ಕಿತು. ಕಾವೇರಿ ಆ ಫೋಟೋ ಡೌನ್‌ ಲೋಡ್‌ ಮಾಡಿ ನೋಡುತ್ತಿದ್ದಂತೆ ಅವಳಿಗೆ ತನ್ನ ಕಣ್ಣನ್ನು ತಾನೇ ನಂಬಲು ಆಗಲಿಲ್ಲ. ರೀಪೋರ್ಟ್‌ ಅವಳು ಗರ್ಭಿಣಿ ಎಂದು ಹೇಳುತ್ತಿತ್ತು. ಕಾವೇರಿಯ ಮನಸ್ಸು ಕುಣಿದು ಕುಪ್ಪಳಿಸತೊಡಗಿತು. ಪತಿಯನ್ನು ಭೇಟಿಯಾಗಿ ಅವಳು ಆ ಖುಷಿಯ ಸುದ್ದಿಯನ್ನು ತಿಳಿಸಲು ಕಾತುರಳಾಗಿದ್ದಳು.

gathbandhan-story2

ಮನೆ ತಲುಪುತ್ತಿದ್ದಂತೆ ಅವಳು ವಿಶ್ರಾಂತಿ ಪಡೆಯುತ್ತಿದ್ದ ಗಂಡನ ಬಳಿ ಹೋಗಿ ಅವನಿಗೆ ಕಣ್ಣು ಮುಚ್ಚಲು ಹೇಳಿದಳು. ಅವನು ಕಣ್ಮುಚ್ಚುತ್ತಿದ್ದಂತೆ ಕಾವೇರಿ ಮೊಬೈಲ್ ‌ತೆಗೆದು ಗಂಡನ ಮುಂದೆ ಹಿಡಿದಳು.

ಮೋಹನ್‌ ಕಣ್ತೆರದು ಸ್ಕ್ರೀನ್‌ ಮೇಲೆ ಕಣ್ಣು ಹರಿಸಿದ. ಅದರಲ್ಲಿ `ಪ್ರೆಗ್ನೆನ್ಸಿ ಪಾಸಿಟಿವ್‌’ ಎಂದು ನೋಡುತ್ತಿದ್ದಂತೆಯೇ ಅವನ ಮುಖದ ಬಣ್ಣವೇ ಇಳಿದುಹೋಯಿತು. ಮರುಕ್ಷಣವೇ ಅವನು, “ಇದೇನು ನಿನ್ನ ತಮಾಷೆ?” ಎಂದು ಗುಡುಗಿದ.

“ಇದು ತಮಾಷೆಯಲ್ಲ ಸತ್ಯ ಮೋಹನ್‌,” ಕಾವೇರಿ ಖುಷಿಯಿಂದ ಹೇಳಿದಳು.

“ಆದರೆ ಹೀಗಾಗಲು ಹೇಗೆ ಸಾಧ್ಯ?” ಮೋಹನ್‌ ಸಂದೇಹದ ಸುಳಿಯಲ್ಲಿ ಸಿಲುಕಿದ.

“ಆಯ್ತು ಅಷ್ಟೇ. ಹೇಗೆಂದು ನನಗೂ ಗೊತ್ತಿಲ್ಲ,” ಎಂದು ಹೇಳುತ್ತಾ ಖುಷಿಯಲ್ಲಿ ತೇಲುತ್ತಾ ಅವನನ್ನು ಅಪ್ಪಿಕೊಂಡಳು.

ಕಾವೇರಿಯನ್ನು ತನ್ನಿಂದ ದೂರ ಸರಿಸುತ್ತಾ ಮೋಹನ್‌, “ಹೀಗಾಗಲು ಖಂಡಿತಾ ಸಾಧ್ಯವಿಲ್ಲ….. ಸಾಧ್ಯವಿಲ್ಲ…..” ಎಂದು ಆಕ್ರೋಶದ ಧ್ವನಿಯಲ್ಲಿ ಹೇಳಿದ.

“ನಿಮಗೇನಾಗಿದೆ…..?” ಈಗ ಕಾವೇರಿ ಸ್ವಲ್ಪ ಕೋಪದ ಧ್ವನಿಯಲ್ಲಿಯೇ ಕೇಳಿದಳು, “ಅದೇನು ಹೇಳುತ್ತಿದ್ದೀರಿ ನೀವು ಅಷ್ಟೊತ್ತಿನಿಂದ. ಈ ಖುಷಿ ಸುದ್ದಿ ಕೇಳಿ ನೀವು ಕುಣಿದು ಕುಪ್ಪಳಿಸುತ್ತೀರಿ ಎಂದುಕೊಂಡಿದ್ದೆ. ಆದರೆ…….?”

“ಎಂಥ ಖುಷಿ ಸುದ್ದಿ…..? ಎಂತಹ ಸುದ್ದಿ? ಇವತ್ತು ನೀನು ಕೇಳಿಸಿಕೋ. ನಾನು ತಂದೆಯಾಗಲು ಸಾಧ್ಯವೇ ಇಲ್ಲ…..” ಅವೇಶ ಹಾಗೂ ಸಿಟ್ಟಿನ ಭರದಲ್ಲಿ ಮೋಹನ್‌ ಬಾಯಿಂದ ಸತ್ಯ ಹೊರಬಂದಿತು.

ಕಾವೇರಿ ತಲೆ ಹಿಡಿದು ಕುಳಿತುಕೊಂಡಳು. ಅವಳಿಗೆ ತಲೆ ತಿರುಗಿ ತಾನು ಬಿದ್ದು ಬಿಡಬಹುದು ಎಂದೆನಿಸಿತು.

ಗಟ್ಟಿ ಧ್ವನಿಯಲ್ಲಿ ಮೋಹನ್‌ ಕಿರುಚಿದ, “ಈ ಮಗು ಯಾರದ್ದು ಎಂದು ನಾನು ಕೇಳಬಹುದಾ? ಬಹುಶಃ ಆ ಶಮಂತನದ್ದೇ ಇರಬೇಕು. ಅವನೇ ಈ ರಿಪೋರ್ಟ್‌ ಕಳಿಸಿದ್ದಾನಲ್ಲ ನಿನಗೆ…..”

ಕಾವೇರಿಗೆ ಅದನ್ನು ಸಹಿಸಿಕೊಳ್ಳಲು ಆಗಲಿಲ್ಲ. ಅವಳು ತಕ್ಷಣವೇ ಸಿಡಿದೆದ್ದಳು…..“ನೀವೇಕೆ ಟೆಸ್ಟ್ ರಿಪೋರ್ಟನ್ನು ನನಗೆ ತೋರಿಸಲಿಲ್ಲ ಎಂದು ಈಗ ಅರ್ಥವಾಯಿತು. ಮಹಾ ಮೋಸ……..”

ಒಳಗೊಳಗೇ ಕುದಿಯುತ್ತಿದ್ದ ಮೋಹನ್‌ ಏನನ್ನೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅವನು ಕೋಣೆಯೊಳಗೆ ಅತ್ತಿತ್ತ ಶತಪಥ ಹಾಕತೊಡಗಿದ. ಕಾವೇರಿ ಕೂಡ ಗೊಂದಲಕ್ಕೊಳಗಾಗಿ ತಲೆ ಮೇಲೆ ಕೈಯಿಟ್ಟುಕೊಂಡು ಹಾಸಿಗೆ ಮೇಲೆ ಕುಳಿತುಕೊಂಡಳು.

ಸ್ವಲ್ಪ ಹೊತ್ತಿನ ಬಳಿಕ ಕೋಣೆಯಲ್ಲಿನ ಮೌನವನ್ನು ಕಾವೇರಿಯ ಮೊಬೈಲ್ ‌ರಿಂಗ್‌ ಮುರಿಯಿತು. ಫೋನ್‌ ಶಮಂತನದಾಗಿತ್ತು. ಮೆಲ್ಲನೆಯ ಧ್ವನಿಯಲ್ಲಿ, “ಹಲೋ…” ಎನ್ನುತ್ತಾ ಕೋಣೆಗೆ ತಗುಲಿಕೊಂಡಿದ್ದ ಬಾಲ್ಕನಿಗೆ ಹೋಗಿ ನಿಂತಳು.

“ಮೋಹನ್‌ ರ ಸಿಡ್ನಿ ಟೂರ್‌ ಹೇಗಿತ್ತು? ಈಗ ನಿನ್ನ ಆರೋಗ್ಯ ಹೇಗಿದೆ? ಅಂದಹಾಗೆ ನಾನು ನಿನಗೆ ಒಂದು ಮುಖ್ಯ ವಿಷಯ ತಿಳಿಸಲು ಫೋನ್‌ ಮಾಡಿದೆ. ನಿನಗೆ ನಾನು ಕಳಿಸಿದ ಆ ರಿಪೋರ್ಟ್‌ ನಿನ್ನದಲ್ಲ. ಅದು ಬೇರೆ ಯಾರೋ ಕಾವೇರಿಯದಂತೆ. ಸ್ವಲ್ಪ ಹೊತ್ತಿಗೆ ಮೊದಲು ಕ್ಲಿನಿಕ್‌ ನಿಂದ ಫೋನ್‌ ಬಂದಿತ್ತು. ನಾನು ಪುನಃ ಕ್ಲಿನಿಕ್‌ಗೆ ಹೋಗಿ ನಿನ್ನ ರಿಪೋರ್ಟ್‌ ತೆಗೆದುಕೊಂಡು ಬಂದೆ. ಈಗ ನಿನಗೆ ಆ ರಿಪೋರ್ಟ್‌ ಕಳಿಸಿರುವೆ. ನಿನಗೆ ಬೇರೇನೂ ಸಮಸ್ಯೆ ಇಲ್ಲ. ಸ್ವಲ್ಪ ಇನ್‌ಫೆಕ್ಷನ್‌ ಆಗಿದೆ ಅಷ್ಟೆ,” ಎಂದು ಹೇಳಿದ.

“ಇದೆಲ್ಲ ಹೇಗಾಯ್ತು ಅಂತ ನಾನು ಗೊಂದಲದಲ್ಲಿದ್ದೆ. ಆದರೆ ಆ ತಪ್ಪು ರಿಪೋರ್ಟ್‌ ಮೋಹನರ ಮುಖವಾಡವನ್ನು ಕಳಚಿತು,” ಎಂದು ಹೇಳುತ್ತಾ ಇಡೀ ಘಟನೆಯನ್ನು ಸಂಕ್ಷಿಪ್ತವಾಗಿ ವಿವರಿಸಿದಳು ಕಾವೇರಿ.

“ಈಗ ಮೋಹನನಿಗೆ ರಿಪೋರ್ಟ್‌ನ ಸತ್ಯಾಸತ್ಯತೆಯನ್ನು ತಿಳಿಸು. ಎಲ್ಲ ಸರಿಹೋಗುತ್ತೆ,” ಎಂದು ಹೇಳುತ್ತಾ ಶಮಂತ್‌ ಫೋನ್ ಕಟ್‌ ಮಾಡಿದ. ಬಳಿಕ ಸರಿಯಾದ ರಿಪೋರ್ಟ್‌ನ್ನು ಕಾವೇರಿಗೆ ಕಳಿಸಿಕೊಟ್ಟ.

ಫೋನಿನಲ್ಲಿ ಕಾವೇರಿಯ ಹತಾಶೆಯಿಂದ ಕೂಡಿದ ಧ್ವನಿ ಕೇಳಿ ಶಮಂತ್‌ ಚಿಂತಿತನಾದ.  ಮೋಹನ್‌ಬಗೆಗಿದ್ದ ಅವನ ಸಂದೇಹ ನಿಜವೇ ಆಯಿತು. ಒಂದು ಸಣ್ಣ ಉಪಾಯ ಮಾಡಿ ಅವನ ಸುಳ್ಳಿನ ತೆರೆ ಸರಿಸಲು ಯಶಸ್ವಿಯೂ ಆದ.

ಆಗಿದ್ದು ಇಷ್ಟು, ಸಂಜೆ ಅವನು ಕಾವೇರಿಯ ರಿಪೋರ್ಟ್‌ ತರಲೆಂದು ಕ್ಲಿನಿಕ್‌ ಗೆ ಹೋದಾಗ ಅದರ ಮೇಲೆ ಪ್ರೆಗ್ನೆನ್ಸಿ ಪಾಸಿಟಿವ್ ನೋಡಿ ಅವನೂ ಚಕಿತನಾಗಿದ್ದ. ಬಳಿಕ ರಿಪೋರ್ಟ್‌ನ ಮೊಬೈಲ್ ‌ನಂಬರ್‌ ಹಾಗೂ ಮನೆಯ ವಿಳಾಸ ನೋಡಿದಾಗ ಅದು ಇನ್ಯಾರೋ ಕಾವೇರಿಯದ್ದಾಗಿತ್ತು.

ಅವನು ಕೌಂಟರ್‌ಗೆ ಹೋಗಿ ಸರಿಯಾದ ರಿಪೋರ್ಟ್‌ ತೆಗೆದುಕೊಳ್ಳುವ ಮೊದಲು  ಅದರ ವಿಳಾಸ, ಮೊಬೈಲ್ ‌ನಂಬರ್‌ ಕಾಣಿಸದಂತೆ ಫೋಟೋ ತೆಗೆದುಕೊಂಡ. ಬಳಿಕ ಶಮಂತ್‌ ಕಾವೇರಿಯ ನಿಜವಾದ ರಿಪೋರ್ಟ್‌ ತನ್ನ ಬಳಿ ಇಟ್ಟುಕೊಂಡ. ರಿಪೋರ್ಟ್‌ ನಾರ್ಮಲ್ ಆಗಿದ್ದರಿಂದ ಅವಳಿಗೆ ಅದನ್ನು ತುರ್ತಾಗಿ ಕಳುಹಿಸುವ ಅಗತ್ಯವಿಲ್ಲ  ಎನಿಸಿತು.

ತಪ್ಪು ವರದಿಯಿರುವ ಫೋಟೊವನ್ನು ಕಾವೇರಿಗೆ ಕಳಿಸಿ ಬಹಳಷ್ಟು ಹೊತ್ತಿನ ಬಳಿಕ ಸರಿಯಾದ ವರದಿಯನ್ನು ಕಳುಹಿಸಿಕೊಟ್ಟ. ಅಲ್ಲಿಯವರೆಗೆ ಕಾವೇರಿ ತಪ್ಪು ವರದಿಯನ್ನು ಗಂಡನಿಗೆ ತೋರಿಸಿ ಅವನ ಜೊತೆ ಮಾತಾಡುತ್ತಾಳೆ, ತಪ್ಪು ವರದಿಯನ್ನು ನೋಡಿ ಮೋಹನನ ಪ್ರತಿಕ್ರಿಯೆ ಹೇಗಿರುತ್ತೆ? ಅದರಿಂದ ಸತ್ಯಾಸತ್ಯತೆಯನ್ನು ಅರಿತುಕೊಳ್ಳುವುದು ಶಮಂತನ ಉದ್ದೇಶವಾಗಿತ್ತು.

ಸರಿಯಾದ ವರದಿ ನೋಡಿದ ಬಳಿಕ ಮುಜುಗರಕ್ಕೊಳಗಾದ ಮೋಹನ್‌ ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಕಾವೇರಿಯ ಕ್ಷಮೆ ಕೇಳುತ್ತಾನೆ. ಅವರಿಬ್ಬರ ವೈವಾಹಿಕ ಜೀವನ ಸುಖಾಂತ ತಿರುವು ಪಡೆದುಕೊಳ್ಳುತ್ತದೆಂದು ಶಮಂತ್‌ ಭಾವಿಸಿದ್ದ. ಆದರೆ ಅದು ಹಾಗಾಗಲಿಲ್ಲ.

ಪ್ರೆಗ್ನೆನ್ಸಿ ರಿಪೋರ್ಟ್‌ ತಪ್ಪಾಗಿತ್ತು ಎಂದು ಕಾವೇರಿ ಮೋಹನ್‌ ಗೆ ಹೇಳಿದಾಗ, ಅವನು ನಿರ್ಲಜ್ಜತೆಯಿಂದ ಕಾವೇರಿಯ ಮೇಲೆ ಇನ್ನೂ ಕೋಪಗೊಂಡು, “ನೀನು ನಿನ್ನ ಗೆಳೆಯನೊಂದಿಗೆ ಸೇರಿಕೊಂಡು ನನ್ನನ್ನು ತಮಾಷೆ ಮಾಡಲು ಶುರು ಮಾಡಿಕೊಂಡೆಯಾ? ನಿನ್ನನ್ನು ನೀನು ಏನಂತ ತಿಳಿದುಕೊಂಡಿರುವೆ? ನಾನು ಸಿಡ್ನಿಯಲ್ಲಿಯೇ ಖುಷಿಯಿಂದಿದ್ದೆ. ಎಲ್ಲ ಬಿಟ್ಟು ಅಲ್ಲಿಗೇ ಹೋಗಿಬಿಡೋದು ಸರಿ ಎನಿಸುತ್ತೆ…..” ಎಂದು ಕೂಗಾಡಿದ.

ಕಾವೇರಿಯ ಮನಸ್ಸು ದುಃಖಭರಿತವಾಗಿತ್ತು. ಮನಸ್ಸು ಚೂರು ಚೂರಾಗಿತ್ತು. ನೋವು ಅವಳಲ್ಲಿ ಸ್ವಷ್ಪವಾಗಿ ಎದ್ದು ಕಾಣುತ್ತಿತ್ತು. ಜೋರಾಗಿ ಚೀರಿ ಚೀರಿ ಹೇಳಬೇಕೆನ್ನಿಸಿತು. ಅವಳಿಗೆ ಗೊತ್ತಿಲ್ಲದಂತೆಯೇ ಧ್ವನಿ ಹೊರಹೊಮ್ಮಿತು, “ನೀವು ಮಾಡಿದ ತಪ್ಪಿಗೆ ಸಂಕೋಚಪಡುವ ಬದಲು ನನ್ನ ಹಾಗೂ ನನ್ನ ಸ್ನೇಹಿತನ ಮೇಲೆ ಗೂಬೆ ಕೂರಿಸುತ್ತಿದ್ದೀರಾ? ಈವರೆಗೆ ನಿಮ್ಮ ವರ್ತನೆಯನ್ನು ನಾನು ನಿಮ್ಮ ಸ್ವಭಾವವೆಂದು ಭಾವಿಸಿ ಸಹಿಸಿಕೊಂಡು ಬಂದಿದ್ದೆ. ಆದರೆ ನೀವು ಮೊದಲ ದಿನದಿಂದಲೇ ನನ್ನನ್ನು ಕಡೆಗಣಿಸುವ ಅವಕಾಶವನ್ನು ಹುಡುಕುತ್ತಲೇ ಬಂದಿರಿ.

“ಗಂಡ ಹೆಂಡತಿ ಇಬ್ಬರಲ್ಲಿ ಒಬ್ಬರು ಅಸಮರ್ಥರಾದರೆ ಏನಾಯ್ತು? ಅದು ನೀವಾಗಿರಬಹುದು ಅಥವಾ ನಾನು. ಅದನ್ನು ನೀವು ಮನಸಾರೆ ಒಪ್ಪಿಕೊಂಡು ಹೋಗಬೇಕಿತ್ತು. ಗಂಡ ಹೆಂಡತಿಯ ಸಂಬಂಧ ಪ್ರೀತಿಯನ್ನು ಅವಲಂಬಿಸಿರುತ್ತೆ. ಮೆದುಳಿನ ಆಟ ಇಲ್ಲಿ ನಡೆಯವುದು. ನೀವು ನನ್ನನ್ನೇನು ತೊರೆಯುತ್ತೀರಿ? ಗಂಡ ಹೆಂಡತಿಯ ಹೆಸರಿನ ಮೇಲೆ ಕಳಂಕವಾಗಿರುವ ಈ ಸಂಬಂಧವನ್ನು ನಾನು ಈಗಿಂದೀಗಲೇ ತೊರೆಯುತ್ತೇನೆ.” ಎಂದು ರೋಷದಿಂದ ಹೇಳಿದಳು.

ಮೋಹನ್‌ ಅವಳ ಮಾತುಗಳನ್ನು ಕೇಳಿಸಿಕೊಂಡು ದಂಗಾಗಿ ಹೋದ. ಅವಳು ಬ್ಯಾಗ್‌ ಹೆಗಲಿಗೇರಿಸಿಕೊಂಡು ತವರಿಗೆ ಹೊರಟು ಬಂದಳು.

ಅಷ್ಟೆಲ್ಲ ತಿಳಿದ ಬಳಿಕ ಸುಭಾಷ್‌ ಸಹ ಏನು ತಾನೇ ಮಾಡಲು ಸಾಧ್ಯವಿತ್ತು? ಕೆಲವು ದಿನಗಳ ಬಳಿಕ ಇಬ್ಬರ ಸಂಬಂಧಕ್ಕೆ ವಿಚ್ಛೇದನ ಸಿಕ್ಕಿತು.

ತನ್ನ ಅರ್ಹತೆಯ ಆಧಾರದ ಮೇಲೆ ಕಾವೇರಿಗೆ ಶಾಲೆಯೊಂದರಲ್ಲಿ ಶಿಕ್ಷಕಿಯ ಹುದ್ದೆ ದೊರಕಿತು. ಆದರೂ ಅವಳ ಮನಸ್ಸಿನಲ್ಲಿ ಒಂದು ಕೊರತೆಯ ಅನುಭವ ಭಾಸವಾಗುತ್ತಿತ್ತು. ಅವಳ ಖುಷಿಯನ್ನು ಕಿತ್ತುಕೊಳ್ಳುತ್ತಿತ್ತು. ಅಂದು ಶಮಂತ್‌ ಅವಳ ಮುಂದೆ ತನ್ನ ಮನದಿಂಗಿತವನ್ನು ಹೇಳಿಕೊಳ್ಳದೇ ಹೋಗಿದ್ದರೆ ಅವಳು ಖಿನ್ನತೆಗೆ ಜಾರುತ್ತಿದ್ದಳೇನೋ!

“ಕಾವೇರಿ, ನಿನ್ನ ಮುಂದೆ ಹೇಳಿಕೊಳ್ಳಲು ನಾನು ಎಂದೂ ಧೈರ್ಯ ತೋರಿಸಲಿಲ್ಲ. ನಿನ್ನೊಂದಿಗೆ ಇದ್ದಾಗ ಏನೊ ಒಂದು ರೀತಿಯ ಮಧುರು ಅನುಭೂತಿ ಉಂಟಾಗುತ್ತದೆ. ನಿನ್ನ ಮುಂದೆ ಏನೇನೊ ಹೇಳಿಕೊಳ್ಳಬೇಕು ಎನಿಸುತ್ತಿತ್ತು. ಆದರೆ ನನ್ನ ಊನ ಕಾಲು ನನ್ನ ಧೈರ್ಯವನ್ನು ಕಸಿದುಕೊಂಡಿತು. ನಿನ್ನ ಮದುವೆಯಾದ ಬಳಿಕ ನನ್ನನ್ನು ನಾನು ಸಮಾಧಾನಪಡಿಸಿಕೊಂಡೆ. ನೀನು ಸದಾ ಖುಷಿಯಾಗಿರಬೇಕೆಂದು ಅಪೇಕ್ಷಿಸಿದೆ.

“ನೀನು ಈಗಲೂ ಉದಾಸಳಾಗಿರುವುದನ್ನು ಕಂಡು ನನ್ನ ಮನಸ್ಸು ಖಿನ್ನವಾಗುತ್ತೆ. ಎಲ್ಲಿಂದಾದರೂ ಖುಷಿಯ ಮೂಟೆ ತಂದು ನಿನ್ನ ಮೇಲೆ ಅದನ್ನು ಸುರಿದುಬಿಡಬೇಕು ಅನಿಸುತ್ತೆ,” ಶಮಂತ್‌ ಹೇಳಿದ.

“ಊನ….. ಏನು ಹೇಳುತ್ತಿರುವೆ ಶಮಂತ್‌? ಮೋಹನನ ಯೋಚನೆ ಊನವಾಗಿತ್ತು. ನಿಜ ಅರ್ಥದಲ್ಲಿ ಭಾವನೆ ರಹಿತ ಊನ. ನೀನು ಕೆಲವು ವರ್ಷಗಳ ಮೊದಲೇ ಈ ಮಾತನ್ನೇಕೆ ಹೇಳಲಿಲ್ಲ?” ಎಂದ ಕಾವೇರಿಯ ಗಂಟಲು ತುಂಬಿಬಂತು.

“ಈಗಲೂ ಕಾಲ ಮಿಂಚಿಲ್ಲ ಕಾವೇರಿ, ನೀನು ನನ್ನ ಸಂಗಾತಿಯಾಗಿ ಖುಷಿಯಿಂದಿರಬಲ್ಲೆಯಾ….?”

ಕಾವೇರಿಯ ಕಣ್ಣುಗಳಷ್ಟೇ ಅಲ್ಲ, ಮನಸ್ಸು ಕೂಡ ತುಂಬಿ ಬಂತು. “ಇವತ್ತು ನಮ್ಮ ನಿಜವಾದ ಮೈತ್ರಿಯಾಯಿತು,” ಎಂದು ಹೇಳುತ್ತಾ ಕಾವೇರಿ ಶಮಂತನ ಭುಜಕ್ಕೆ ಒರಗಿದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ