ರಶ್ಮಿ ಹಾಗೂ ಶಶಿಧರ್‌ ಅವರ ಮದುವೆ ಆಗಿ 3 ವರ್ಷಗಳಾಗಿವೆ. ಗಂಡ ಹೆಂಡತಿ ಇಬ್ಬರೂ ಉದ್ಯೋಗಸ್ಥರು. ಆಫೀಸ್‌ ಕೆಲಸದ ನಿಮಿತ್ತ ಆಗಾಗ ಹೊರಗೆ ಹೋಗುತ್ತಿರಬೇಕಾಗುತ್ತದೆ. ಈವರೆಗೂ ಎಲ್ಲ ಸರಿಯಾಗಿಯೇ ನಡೆದಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದ ರಶ್ಮಿಗೆ ದಣಿವು, ತಳಮಳ, ನಿದ್ರೆ ಬರದೇ ಇರುವ ಸಮಸ್ಯೆ ಶುರುವಾಯಿತು. ಡಾಕ್ಟರ್‌ ಹತ್ತಿರ ಹೋಗಿ ತೋರಿಸಿದಾಗ ಅವಳು ತೀವ್ರ ಒತ್ತಡದಲ್ಲಿದ್ದಾಳೆ ಎಂಬುದು ತಿಳಿದುಬಂತು. ಉದ್ಯೋಗದ ಪ್ರಯುಕ್ತ ಗಂಡ ಹೆಂಡತಿ ಅನೇಕ ದಿನಗಳ ಕಾಲ ಬೇರೆಬೇರೆಯಾಗಿ ಇರಬೇಕಾಗಿ ಬರುತ್ತಿತ್ತು. ಎಲ್ಲಿಯವರೆಗೆ ಗಂಡ ಜೊತೆಗಿರುತ್ತಿದ್ದನೊ, ಅಲ್ಲಿಯವರೆಗೆ ಎಲ್ಲವೂ ಸುಸೂತ್ರವಾಗಿ ಇರುತ್ತಿತ್ತು. ಆದರೆ ಅವಳು ಏಕಾಂಗಿಯಾಗಿ ಇರಬೇಕಾಗಿ ಬಂದಾಗ ಮಾತ್ರ ಮನೆ ಹಾಗೂ ನೌಕರಿಯ ನಡುವೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗಿ ಪರಿಣಮಿಸುತ್ತಿತ್ತು. ರಶ್ಮಿ ಇನ್ನು ಮುಂದೆ ತಾನು ಮನೆ ಸಂಭಾಳಿಸಬೇಕು, ಕುಟುಂಬ ಹೆಚ್ಚಿಸ ಬೇಕೆಂದು ಬಯಸುತ್ತಿದ್ದಳು. ಆದರೆ ಅವಳ ಪತಿ ಮಾತ್ರ ಇನ್ನಷ್ಟು ದಿನ ನಿರೀಕ್ಷಿಸಲು ಹೇಳುತ್ತಿದ್ದ. ಇದರಿಂದ ಅವಳು ಒತ್ತಡದಲ್ಲಿ ಇರತೊಡಗಿದ್ದಳು.

ಒತ್ತಡಕ್ಕೇನು ಕಾರಣ?

ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಓಡಾಟ ಆಫೀಸಿಗೆ ಹೋಗಿಬರುವ ಚಿಂತೆ, ಮಕ್ಕಳ ನಿರ್ವಹಣೆ, ಅವರ ಓದಿನ ಚಿಂತೆ, ಕುಟುಂಬದ ಖರ್ಚುಗಳು ಇವುಉ ಎಂತಹ ಕೆಲವು ಕಾರಣಗಳೆಂದರೆ, ಅವು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರನ್ನೇ ಮಾನಸಿಕವಾಗಿ  ಗೊಂದಲಕ್ಕೀಡು ಮಾಡುತ್ತವೆ. ಇದರ ಹೊರತಾಗಿ ಹಾರ್ಮೋನಿನಲ್ಲಿ ಏರುಪೇರು (ಮುಟ್ಟಿನ ಸಂದರ್ಭದಲ್ಲಿ ಇಲ್ಲಿ ನಿಲ್ಲುವ ಸಮಯದಲ್ಲಿ) ಹವಾಮಾನದಲ್ಲಿ ಬದಲಾವಣೆ ಕೂಡ ಮಹಿಳೆಯರ ಜೀವನದಲ್ಲಿ  ಖಿನ್ನತೆಗೆ ಕಾರಣವಾಗಬಹುದು.

ಗರ್ಭಧಾರಣೆಯ ಸಂದರ್ಭದಲ್ಲೂ ಕೂಡ ಮಹಿಳೆಯರ ಮೆದುಳಿನಲ್ಲಿ ತನಗೆ ಗಂಡಾಗುತ್ತದೋ, ಹೆಣ್ಣಾಗುತ್ತದೋ ಎಂಬ ಚಿಂತೆ ಕಾಡುತ್ತಿರುತ್ತದೆ. ಕುಟುಂಬದ ಹಿರಿಯರು ಮೇಲಿಂದ ಮೇಲೆ ಗಂಡು ಮಗು ಎಂದು ಹೇಳುವುದರ ಮೂಲಕ ಅವಳ ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಆದರೆ ವೈಜ್ಞಾನಿಕ ಸತ್ಯ ಏನೆಂದರೆ, ಹುಟ್ಟುವ ಸಂತಾನ ಹೆಣ್ಣಾಗಿರಬಹುದು ಅಥವಾ ಗಂಡು, ಅದಕ್ಕೆ ಹೆಣ್ಣು ಖಂಡಿತ ಕಾರಣ ಅಲ್ಲ. ಆದರೆ ನಮ್ಮ ಸಮಾಜದಲ್ಲಿ ಅನಕ್ಷರಸ್ಥರಷ್ಟೇ ಅಲ್ಲ, ವಿದ್ಯಾವಂತರು ಕೂಡ ಹೆಣ್ಣು ಹುಟ್ಟಿದರೆ ಅದಕ್ಕೆ ಅಮ್ಮನೇ ಹೊಣೆ ಎಂದು ಗೂಬೆ ಕೂರಿಸುತ್ತಾರೆ.

ನಿಜ ಹೇಳಬೇಕೆಂದರೆ, ಹೆಣ್ಣು ಹುಟ್ಟುತ್ತಿದ್ದಂತೆ ಒತ್ತಡ ಶುರುವಾಗಿ, ಅವಳು ಬೆಳೆಯುತ್ತ ಹೋದಂತೆ ಅದು ಹೆಚ್ಚುತ್ತ ಹೋಗುತ್ತದೆ.

ಬಹಳಷ್ಟು ಓದಿದವರಾಗಿದ್ದರೂ ತಮಗಿಷ್ಟವಾದ ನೌಕರಿ ದೊರೆಯದೇ ಇರುವುದು, ನೌಕರಿ ದೊರೆತರೂ ಸಕಾಲಕ್ಕೆ ಪ್ರಮೋಶನ್ ದೊರಕದಿರುವುದು ಇತ್ಯಾದಿಗಳಿಂದ ವಿದ್ಯಾವಂತ ಯುವತಿಯರನ್ನು ಒತ್ತಡ ಸುತ್ತುವರಿಯುತ್ತದೆ.

ಮನೋವೈಜ್ಞಾನಿಕ ಸಂಶೋಧನೆಗಳಿಂದ ತಿಳಿದುಬಂದ ಸಂಗತಿಯೆಂದರೆ, ಯಾವುದಾದರೂ ಸ್ಪರ್ಧೆಯಲ್ಲಿ ಯಶಸ್ಸು ಕಾಣದೇ ಇದ್ದಾಗ ಮಹಿಳೆಯರು ಬಹುಬೇಗ ನಿರಾಶೆಗೊಳಗಾಗುತ್ತಾರೆ. ಅದೇ ಕಾರಣದಿಂದ ಅವರು ಒತ್ತಡದಿಂದ ಸುತ್ತುವರಿಯುತ್ತಾರೆ.

ಚಿಂತೆ, ತೊಂದರೆ ಹಾಗೂ ಒತ್ತಡ ಕೂಡ ಖಿನ್ನತೆಗೆ ಕಾರಣವಾಗುತ್ತದೆ. ಇದೇನು ರೋಗವಲ್ಲ. ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದಿರುವುದು, ಅತ್ಯಗತ್ಯ ಸಂದರ್ಭದಲ್ಲಿ ಕುಟುಂಬದವರು ಹಾಗೂ ಸ್ನೇಹಿತರಿಂದ ನೆರವು ದೊರೆಯದಿರುವುದು, ಮುಟ್ಟಂತ್ಯದ ಸಂದರ್ಭದಲ್ಲಿ ಹಾರ್ಮೋನುಗಳ ಸಮತೋಲನ ತಪ್ಪುವುದು ಈ ಎಲ್ಲ ಮಹಿಳೆಯೊಬ್ಬಳ ಜೀವನದಲ್ಲಿ ಒತ್ತಡಕ್ಕೆ ಕಾರಣವಾಗಬಹುದು. ಮದ್ಯ ಅಥವಾ ಇತರೆ ಅಮಲು, ತಮ್ಮ ಯಾವುದೇ ರೋಗಕ್ಕೆ ಸರಿಯಾದ ಚಿಕಿತ್ಸೆ ದೊರೆಯದಿರುವುದು ಕೂಡ ಒತ್ತಡಕ್ಕೆ ಕಾರಣವಾಗಬಹುದು. ಎಷ್ಟೋ ಸಲ ಮಹಿಳೆಯರ ನಿವೃತ್ತಿಯ ಬಳಿಕ ಈ ಸ್ಥಿತಿ ಉಂಟಾಗಬಹುದು.

ಲಕ್ಷಣಗಳು

ನೆನಪಿನ ಶಕ್ತಿ ಕುಂದಿರುವುದು, ವಾಂತಿ ಬರುವಂತೆ ಅನಿಸುವುದು, ಉಸಿರು ತೆಗೆದುಕೊಳ್ಳುವಲ್ಲಿ ತೊಂದರೆ, ಹಸಿವು ಆಗದೇ ಇರುವುದು, ಕೆಲಸದಲ್ಲಿ ಗಮನ ಇಲ್ಲದೇ ಇರುವುದು, ತಲೆನೋವು, ಅತಿಯಾಗಿ ಬೆವರು ಬರುವುದು, ಬಾಯಿ ಒಣಗುವಿಕೆ, ಮೇಲಿಂದ ಮೇಲೆ ಮೂತ್ರಕ್ಕೆ ಹೋಗಬೇಕೆನ್ನಿಸುವುದು. ಇವೆಲ್ಲ ಲಕ್ಷಣಗಳ ಕಪಿಮುಷ್ಟಿಯಲ್ಲಿ ಸಿಲುಕುವ ವ್ಯಕ್ತಿ ತನ್ನನ್ನು ತಾನು ಸಮಾಜಕ್ಕೆ ಹೊರೆ ಎಂದು ಭಾವಿಸುತ್ತಾರೆ. ಅವರು ಸಾಕಷ್ಟು ಪ್ರಯತ್ನದ ಬಳಿಕ ಸಮಸ್ಯೆಯ ಬುಡದತನಕ ತಲುಪಲು ಆಗುವುದಿಲ್ಲ. ಅಷ್ಟೇ ಅಲ್ಲ, ತಮ್ಮ ಆತ್ಮವಿಶ್ವಾಸವನ್ನು ಕಳೆದು ಕೊಂಡುಬಿಡುತ್ತಾರೆ. ಆ ಬಳಿಕ ಕ್ರಮೇಣ ನಿರಾಶೆಯತ್ತ ಸಾಗುತ್ತಾರೆ.

ಒತ್ತಡವನ್ನು ಹೇಗೆ ದೂರಗೊಳಿಸುವುದು?

ಜೀವನದಲ್ಲಿ ಅದೆಷ್ಟೋ ಪ್ರಸಂಗಗಳು ಉದ್ಭವಿಸುತ್ತವೆ. ಆಗ ನಿರಾಶೆಯ ಜೊತೆ ಸಂಘರ್ಷ ನಡೆಸಬೇಕಾಗಿ ಬರುತ್ತದೆ. ಕಷ್ಟದ ಸಂದರ್ಭಗಳನ್ನು ದಿಟ್ಟತನದಿಂದ ಎದುರಿಸಿ, ಗುರಿಯತ್ತ ತಲಪುವುದೇ ಜೀವನದ ಮಹತ್ವಾಕಾಂಕ್ಷೆ ಆಗಬೇಕು. ನೀವು ಕೆಲಸ ಹೇಗೆ ಮಾಡಬೇಕೆಂದರೆ, ದಣಿವಾಗುವ ಮುಂಚೆಯೇ ನಿಮಗೆ ವಿಶ್ರಾಂತಿ ದೊರಕಬೇಕು. ಉದಾಸವಾಗಿರುವುದು, ದಣಿವಾಗಿರುವಂತೆ ಇರುವುದು ಅಥವಾ ಆ ರೀತಿ ತೋರಿಸಿಕೊಳ್ಳುವುದು ವ್ಯಕ್ತಿಯಲ್ಲಿ ಒತ್ತಡ ಅಥವಾ ಅಪರಾಧದ ಭಾವನೆಯನ್ನು ಹುಟ್ಟುಹಾಕುತ್ತದೆ.

ಒಳ್ಳೆಯ ನಿದ್ರೆ ಬರದಿರುವುದು ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ. ಗಾಢನಿದ್ರೆಗೆ ಸಂಗೀತ ಆಲಿಸುವುದು ಪ್ರಯೋಜನ ಆಗಬಹುದು. ಮಲಗುವ ಮುನ್ನ ಓದುವುದು ಕೂಡ ಒಳ್ಳೆಯ ಅಭ್ಯಾಸ. ಅದರಿಂದ ಒಳ್ಳೆಯ ನಿದ್ರೆ ಲಭಿಸುತ್ತದೆ.

ಅತಿಯಾದ ಅಪನಂಬಿಕೆ ಕೂಡ ಕೀಳರಿಮೆಗೆ ದೂಡುತ್ತದೆ. ನಿಮ್ಮ ಯೋಚನೆ ನಕಾರಾತ್ಮಕವಾಗಿರಲಿ. ಯಾವುದು ನಿಮ್ಮ ಕೈಯಲ್ಲಿ ಇಲ್ಲವೋ, ಯಾವುದು ನಿಮ್ಮಿಂದ ಅಸಾಧ್ಯವೋ, ಅದರ ಬಗ್ಗೆ ಚಿಂತಿಸಬೇಡಿ. ನಿಮ್ಮಲ್ಲಿ ಏನಿದೆಯೋ, ಅದರ ಬಗ್ಗೆ ಖುಷಿಯಿಂದಿರಿ.

ಆಹಾರದ ಬಗೆಗೂ ಗಮನಕೊಡಿ. ಹಣ್ಣುಗಳು ಹಾಗೂ ತರಕಾರಿಗಳ ಸೇವನೆ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮುಟ್ಟು ನಿಲ್ಲುವ ಹಂತದಲ್ಲಿ ಕ್ಯಾಲ್ಶಿಯಂ ಪ್ರಮಾಣ ಕಡಿಮೆಯಾಗುತ್ತದೆ. ಅದರಿಂದ ಆಸ್ಟೋಪೊರೊಸಿಸ್‌ ಅಂದರೆ ಮೂಳೆಗಳ ರೋಗ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಹೀಗಾಗಿ ಕ್ಯಾಲ್ಶಿಯಂ ಮತ್ತು ವಿಟಮಿನ್‌ `ಡಿ’ಯನ್ನು ನಿಮ್ಮ ಡಯೆಟ್‌ ನಲ್ಲಿ ಸೇರಿಸಿಕೊಳ್ಳಿ. ಪ್ರತಿನಿತ್ಯ ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

ಜಿ. ಕುಮುದಾ  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ