ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡುವ ಭರದಲ್ಲಿ ನೀವು ಖಿನ್ನತೆಗೆ ತುತ್ತಾಗಬೇಡಿ. ಅದಕ್ಕಾಗಿ ಕೆಲವು ಸಂಗತಿಗಳನ್ನು ಜೀವನದಲ್ಲಿ ಅವಶ್ಯವಾಗಿ ಅಳವಡಿಸಿಕೊಳ್ಳಿ.

ಪ್ರತಿಕ್ರಿಯೆ ಕೊಡಿ : ನಿಮ್ಮ ಸುತ್ತಮುತ್ತ ನಡೆಯುತ್ತಿರುವ ಆಗುಹೋಗುಗಳ ಬಗ್ಗೆ ಅವಶ್ಯವಾಗಿ ಪ್ರತಿಕ್ರಿಯೆ ಕೊಡಿ. ನೀವು ಎಲ್ಲವನ್ನು ರೋಬೋದ ಹಾಗೆ ಮೌನವಾಗಿ ಒಪ್ಪಲು ಹೋಗಬೇಡಿ. ಪರಿವರ್ತನೆಯ ಪ್ರಕ್ರಿಯೆಯಿಂದ ಹೊರಹೊಮ್ಮಿದ ಭಾವನೆಗಳನ್ನು ಅವಶ್ಯವಾಗಿ ಸ್ವೀಕರಿಸಿ. ಒಂದು ಸಂಗತಿ ಗಮನದಲ್ಲಿರಲಿ, ನಿಮ್ಮ ಭಾವನೆಗಳನ್ನು ನಿಮಗಿಂತ ಅತ್ಯುತ್ತಮ ರೀತಿಯಲ್ಲಿ ಬೇರೆ ಯಾರೂ ಅರಿಯಲು ಸಾಧ್ಯವಿಲ್ಲ.

ಸಾಮರ್ಥ್ಯಕ್ಕಿಂತ ಅಧಿಕ ಕೆಲಸ ಬೇಡ : ಮನೆ ಅಥವಾ ಆಫೀಸು ಆಗಿರಬಹುದು, ತೀರಾ ಒಳ್ಳೆಯರಾಗಲು ಹೋಗಬೇಡಿ. ಒಂದು ಸಂಗತಿ ನಿಮ್ಮ ಗಮನದಲ್ಲಿರಲಿ. ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಿದಲ್ಲಿ ನಿಮಗೆ ಪದಕವೇನೂ ಸಿಗದು. ಅದರ ಬದಲು ಜನರ ಅಪೇಕ್ಷೆ ನಿರೀಕ್ಷೆಗಳು ಹೆಚ್ಚಾಗುತ್ತವೆ ಅಷ್ಟೆ.

ಎರಡನೆಯದು, ತಪ್ಪಿನ ಹೊಣೆಯನ್ನೂ ಹೊರಬೇಕಾಗುತ್ತದೆ ಇಂದಿನ ಯುಗ ಟೀಮ್ ವರ್ಕ್‌ ನದು. ಇದರಿಂದ ಇನ್ನೊಬ್ಬರ ಬಗ್ಗೆ ತಿಳಿಯಲು ಅನುಕೂಲವಂತೂ ಆಗಿಯೇ ಆಗುತ್ತದೆ. ಜೊತೆಗೆ ದಣಿವು ಹಾಗೂ ಒತ್ತಡದಿಂದ ನಿರಾಳತೆ ದೊರೆಯುತ್ತದೆ. ಮನೆಯ ಕೆಲಸಗಳಲ್ಲಿ ಇತರ ಸದಸ್ಯರ ನೆರವು ಪಡೆದುಕೊಳ್ಳಿ.

ಸಕಾರಾತ್ಮಕ ಯೋಚನೆ : ತಪ್ಪುಗಳಿಗೆ ನಾನೇ ಹೊಣೆಗಾರ ಎಂಬ ಭಾವನೆಯನ್ನು ಮನಸ್ಸಿನಿಂದ ಕಿತ್ತು ಹಾಕಿ. ಯಾವುದಾದರೂ ಪ್ರಾಜೆಕ್ಟ್ ನಿಮ್ಮ ಕೈಯಿಂದ ತಪ್ಪಿಹೋಗಿದ್ದರೆ, `ಈ ಕೆಲಸ ನನ್ನಿಂದಾಗದು,’ ಅಥವಾ `ಈ ಕೆಲಸ ಮಾಡಲು ನಾನು ಅರ್ಹಳೇ ಅಲ್ಲ,’ ಎಂಬ ನಕಾರಾತ್ಮಕ ವಿಚಾರ ಮನಸ್ಸಿನಲ್ಲಿ ಬರದಿರಲಿ.

ಧೈರ್ಯಶಾಲಿಗಳಾಗಿ : ತಾಯಿ ತಂದೆಯರಿಂದ ಬಳುವಳಿಯಾಗಿ ದೊರೆತ ವರ್ತನೆಯ ಬೇರುಗಳು ಎಷ್ಟೊಂದು ಆಳವಾಗಿ ಬೇರೂರುತ್ತವೆ ಎಂದರೆ ವಯಸ್ಕರಾದ ಬಳಿಕ ಅದರಿಂದ ಮುಕ್ತಿ ಕಂಡುಕೊಳ್ಳುವುದು ಕಷ್ಟವಾಗುತ್ತದೆ. ಕೆಲವು ಮಹಿಳೆಯರು ಅತೃಪ್ತ ಸಂಬಂಧಗಳನ್ನು ಹಾಗೆಯೇ ಏಕೆ ಕಾಯ್ದುಕೊಂಡು ಹೋಗುತ್ತಾರೆಂದರೆ, ಅಂತಹ ಸಂಬಂಧಗಳನ್ನು ಮುರಿದುಕೊಂಡಾಗ ಸಮಾಜ ತಮ್ಮನ್ನು ಧಿಕ್ಕರಿಸುತ್ತದೆ ಎಂಬ ಭಯ ಅವರನ್ನು ಕಾಡುತ್ತಿರುತ್ತದೆ. ವಾಸ್ತವ ಸಂಗತಿ ಏನೆಂದರೆ, ಇಂದಿನ ಯಾಂತ್ರಿಕ ಯುಗದಲ್ಲಿ ಬೇರೆಯವರ ಬಗ್ಗೆ ಯೋಚಿಸಲು ಇತರರಿಗೆ ಸಮಯವಾದರೂ ಎಲ್ಲಿದೆ? ಎಲ್ಲರೂ ತಮ್ಮ ತಮ್ಮ ಲೋಕದಲ್ಲಿ ಮಗ್ನರಾಗಿರುತ್ತಾರೆ. ಅದೇ ರೀತಿ ಬಾಸ್‌ ಜೊತೆಗೆ ಕೆಲಸ ಮಾಡಲು ಸಾಧ್ಯ ಆಗದಿದ್ದಲ್ಲಿ ನೀವು ಬೇರೆ ಕಡೆ ವರ್ಗಾಯಿಸಿಕೊಳ್ಳಿ.

ಪರಿಸರದ ಜೊತೆ ಸ್ನೇಹ ಬೆಳೆಸಿ : ಮುಂಜಾನೆ ಬೇಗ ಎದ್ದು ಸ್ವಲ್ಪ ಹೊತ್ತು ಸುತ್ತಾಡಿ ಬನ್ನಿ. ನೀವು ಸುತ್ತಾಡಲು ಹೋಗುವ ಸ್ಥಳ ಹಸಿರಿನಿಂದ ಕೂಡಿರಲಿ, ಮಾಲಿನ್ಯಯುಕ್ತ ಹೊಗೆ, ಧೂಳು ಇರದಿರಲಿ.

ಪರಿಹಾರ ಹುಡುಕಿ : ಎಷ್ಟೇ ತೊಂದರೆ ತಾಪತ್ರಯಗಳಿದ್ದರೂ ಅದನ್ನು ಸಹಜವಾಗಿ ಸ್ವೀಕರಿಸಿ. ಅತಿಯಾದ ಆತುರದಿಂದ ತೊಂದರೆ ಇನ್ನಷ್ಟು ಹೆಚ್ಚುತ್ತದೆ. ಪ್ರತಿಕೂಲ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿ. ಯಾವುದರಿಂದ ನನ್ನ ಸಮಸ್ಯೆ ಬಗೆಹರಿಯುತ್ತದೆ ಎಂಬುದರ ಬಗ್ಗೆ ಯೋಚಿಸಿ.

ದಿನಚರಿ ಬದಲಿಸಿ : ದಿನ ಒಂದೇ ತೆರನಾದ ಕೆಲಸ ಮಾಡಿ ಮಾಡಿ ಬೇಸತ್ತು ಹೋಗಿದ್ದರೆ, ಆಫೀಸಿನಲ್ಲೂ ಬೇಸರದ ಅನುಭವ ಆಗುತ್ತಿದ್ದರೆ, ಕೆಲವು ದಿನ ಎಲ್ಲಿಯಾದರೂ ಸುತ್ತಾಡಲು ಹೋಗಿ ಬನ್ನಿ. ಸ್ಪಾ ಮಾಡಿಸಿಕೊಳ್ಳಿ, ಎಂದಾದರೊಮ್ಮೆ ಗೆಟ್‌ ಟು ಗೆದರ್ ಏರ್ಪಡಿಸಿ. ಇದರಿಂದ ಮನಸ್ಸಿಗೆ ನಿರಾಳತೆಯ ಅನುಭವವಾಗುತ್ತದೆ.

ಒಳ್ಳೆಯ ಶ್ರೋತೃ ಆಗಿ : ನೀವು ಬೇರೆಯವರ ವಿಚಾರಗಳನ್ನು ಒಪ್ಪದಿದ್ದರೂ ಕೂಡ ಯಾವುದೇ ನಿರ್ಣಯಕ್ಕೆ ಬರುವ ಮುನ್ನ ಅವಶ್ಯವಾಗಿ ಅವರ ಮಾತುಗಳನ್ನು ಗಮನವಿಟ್ಟು ಆಲಿಸಿ.

ಫಿಟ್ಆಗಿರಿ : ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ನಿಯಮಿತ ತಪಾಸಣೆಗಳಿಂದ ನೀವು ಹಲವು ಸಮಸ್ಯೆಗಳಿಂದ ದೂರ ಇರಬಹುದು.

ಎಲ್ಲ ಕೆಲಸಗಳನ್ನು ಮಾಡಬಹುದು, ಆದರೆ ಎಲ್ಲ ಕೆಲಸಗಳನ್ನು ಒಂದೇ ಸಲಕ್ಕೆ ಮಾಡಲು ಆಗುವುದಿಲ್ಲ. ಸ್ತ್ರೀ ಕುಟುಂಬದ ಕೇಂದ್ರಬಿಂದು ಅಷ್ಟೇ ಅಲ್ಲ, ಪರಿಧಿ ಕೂಡ. ಅವಳು ತಾಯಿ, ಹೆಂಡತಿ, ಉದ್ಯೋಗಸ್ಥೆ ಆಗುವ ಅವಶ್ಯಕತೆ ಇದೆ. ಆದರೆ ಸೂಪರ್‌ವುಮನ್‌ ಆಗುವ ಅವಶ್ಯಕತೆ ಇಲ್ಲ.

ಸಿ. ಪ್ರಿಯಾಂಕಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ