ಕಾಲೇಜಿನ ಬ್ಯೂಟಿ ಕ್ವೀನ್‌ ದಿವ್ಯಾ ಸದಾ ಕೊಚ್ಚಿಕೊಳ್ಳುತ್ತಿದ್ದುದು ಎಂದರೆ, ತಾನು ಮುಂದೆ ಸೂಪರ್‌ ಮಾಡೆಲ್ ‌ಆಗ್ತೀನಿ ಅಂತ.

ಎಷ್ಟೋ ವರ್ಷಗಳ ನಂತರ ಮಂಡ್ಯದಲ್ಲಿ ಅವಳನ್ನು ಕಂಡ ಗುಂಡ ದಂಗಾದ. ಬೆಲೂನು ಮಾರುವವನ ಹತ್ತಿರ ಅವಳು, “ನೋಡಪ್ಪಾ 10/ ರೂ.ಗೆ 3 ಬೆಲೂನು ಕೊಟ್ಟರೆ ಮಾತ್ರ ನನ್ನ ಮೂವರು ಮಕ್ಕಳಿಗೂ ಅದನ್ನು ಕೊಡಿಸ್ತೀನಿ,” ಅಂತ ಹೇಳುತ್ತಿದ್ದಳು.

 

ಈ ಜನ ನಿಜಕ್ಕೂ ಎಷ್ಟು ನಿರ್ದಯಿಗಳು! ನಿನ್ನೆ ತಾನೇ ನಾನು ಹೈಸ್ಕೂಲಿನಿಂದ ಪ್ರೇಮಿಸುತ್ತಿದ್ದ ಹುಡುಗಿ, ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಂಡು ಹೊರಟು ನಿಂತಿದ್ದಳು. ದುಃಖ ಮರೆತು ನಾನು ಎಲ್ಲರಿಗೂ ಬಡಿಸಲು ನಿಂತರೆ, `ಇನ್ನಷ್ಟು ಮೃದುವಾದ ಪೂರಿ ತಗೊಂಬಾರಪ್ಪ,’ ಎಂದು ನನ್ನನ್ನೇ ಗದರುವುದೇ?

 

ಪೊಲೀಸ್‌ : ಈ ಸಲ ಪಾಪ ಅಂತ ನಿನ್ನನ್ನು ಬಿಟ್ಟುಬಿಡ್ತೀನಿ, ಮುಂದೆ ಎಂದೂ ಇಂಥ ಜೇಬು ಕತ್ತರಿ ಕೆಲಸ ಮಾಡಲ್ಲ ಅಂತ ಪ್ರಾಮಿಸ್‌ ಮಾಡು!

ಕಳ್ಳ : ನಾನು ಖಂಡಿತಾ ಪ್ರಾಮಿಸ್‌ ಮಾಡ್ತೀನಿ, ಮುಂದೆ ನಿಂತು ಇಂಥ ಕೆಲಸ ಮಾಡಲ್ಲ, ಜನರ ಹಿಂದೆ ನಿಂತೇ ಈ ರೀತಿ ಮಾಡ್ತೀನಿ!

 

ವಧುವರನ ಜಾತಕ ಹೊಂದಾಣಿಕೆ ಆಗಿ ಬಂತು. ಶಾಸ್ತ್ರೀಗಳು ಮದುವೆ ಲಗ್ನ ಕುದುರಿಸಿ, 36 ಗುಣಗಳು ಕೂಡಿ ಬಂದಿವೆ ಎಂದರು. ಆದರೆ ಮಾರನೇ ದಿನ ವರನ ಕಡೆಯಿಂದ ಈ ಮದುವೆ ಬೇಡ ಅಂತ ನಿರಾಕರಣೆ ಬರುವುದೇ?

ವಧು ತಂದೆ : 36 ಗುಣಗಳು ಕೂಡಿ ಬರುತ್ತಿವೆ ಅಂತ ಶಾಸ್ತ್ರೀಗಳು ಖಚಿತವಾಗಿ ಹೇಳಿದ ಮೇಲೂ ಇದೇಕೆ ಮದುವೆ ಕ್ಯಾನ್ಸಲ್ ಮಾಡಿದಿರಿ?

ವರನ ತಂದೆ : ನಮ್ಮ ಮಗನಿಗೆ ಎಂಥ ಲೋಫರ್‌ ಬುದ್ಧಿ ಇದೆ ಎಂದು ನಮಗೆ ಗೊತ್ತು. ಸೊಸೆಯೂ ಹಾಗೇ ಆಗಿಹೋದರೆ ಮುಂದೆ ನಮ್ಮ ಗತಿ…..?

 

ಪುಟ್ಟ ಮಲ್ಲಿಕಾ ಅಂಗಡಿಗೆ ಹೋಗಿ ಹೇಳಿದಳು, “ಏನ್ರಿ, ಮುಂದೆ ನಾನು ದೊಡ್ಡವಳಾದ ಮೇಲೆ ನನ್ನನ್ನು ನಿಮ್ಮ ಮಗನಿಗೆ ಮದುವೆ ಮಾಡಿಕೊಳ್ತೀರಾ?”

ಅಂಗಡಿಯವನು ಅದಕ್ಕೆ, “ಅಷ್ಟೇ ತಾನೆ…. ನೀನೇ ನಮ್ಮ ಮನೆ ಸೊಸೆ ಕಣಮ್ಮ!” ಎಂದ.

“ಹಾಗಾದರೆ ನಿಮ್ಮ ಭಾವಿ ಸೊಸೆ ಬಳಿ ಕಾಸು ಯಾಕೆ ಕೇಳ್ತೀರಾ? ನನಗೆ 2 ಚಾಕಲೇಟ್‌ ಕೊಡಿ,” ಎನ್ನುವುದೇ?

 

ನಾಣಿ ಹೋಗಿ ಎಕ್ಸ್-ರೇ ಮಾಡಿಸಿಕೊಂಡು ಬಂದ.

ಡಾಕ್ಟರ್‌ : ಈ ಎಕ್ಸ್-ರೇನಲ್ಲಿ ನಿಮ್ಮ ಕಾಲಿನ ಒಂದು ಮೂಳೆ ಮುರಿದಿದೆ ಅಂತ ಕಂಡು ಬರುತ್ತಿದೆ.

ನಾಣಿ : ಸಧ್ಯ! ಎಕ್ಸ್-ರೇನಲ್ಲಿ ತಾನೇ….? ಅಸಲಿಗೆ ನನ್ನ ಕಾಲು ಮುರಿದಿಲ್ಲ ತಾನೇ?

 

ಪತ್ನಿ : ಕಾಲೇಜಿನಲ್ಲೆಲ್ಲ ನನಗೆ ಏನು ಹೇಳ್ತಿದ್ದರು ಗೊತ್ತಾ? ಆ ಭಗವಂತ ನನ್ನನ್ನು ಪುರಸತ್ತಾಗಿದ್ದಾಗ ಸೃಷ್ಟಿಸಿದನಂತೆ!

ಪತಿ : ಅದು ನಿಜ ಬಿಡು! ಪುರಸತ್ತಾಗಿದ್ದಾಗ ತಾನೇ ಅನಗತ್ಯ ಕೆಲಸ ಮಾಡಲು ತೋಚೋದು?

 

ಕೆಲಸದ ನಿಂಗಿ : ಮೇಡಂ ಬೇಗ ಬನ್ನಿ, ನಿಮ್ಮ ಮಗು ಸೊಳ್ಳೆಗಳನ್ನು ನುಂಗಿಬಿಟ್ಟಿದ್ದಾನೆ!

ಕವಿತಾ : ಇನ್ನು ಅರ್ಧ ಗಂಟೇಲಿ ಬಂದುಬಿಡ್ತೀನಿ, ಮಗೂನಾ ಸ್ವಲ್ಪ ಹುಷಾರಾಗಿ ನೋಡಿಕೋ! ಬೇಗ ಡಾಕ್ಟರಿಗೆ ಫೋನ್‌ ಮಾಡಿ ಮನೆಗೆ ಕರೆಸು.

ನಿಂಗಿ : ಪರವಾಗಿಲ್ಲ, ನಿಧಾನವಾಗಿಯೇ ಬನ್ನಿ. ಅಲ್ಲಿಯತನಕ ನಾನು ಮಗುವಿಗೆ ಸೊಳ್ಳೆ ನಿವಾರಣೆಯ ಕ್ರೀಂ ತಿನ್ನಿಸುವೆ, ಅದು ಹೊಟ್ಟೆಯಲ್ಲಿನ ಸೊಳ್ಳೆಗಳನ್ನು ವಿಚಾರಿಸಿಕೊಳ್ಳುತ್ತದೆ.

 

ರಾಜೇಶ್‌ : ನೋಡೋ ಗುರು ನನಗೂ, ನನ್ನ ಗರ್ಲ್ ಫ್ರೆಂಡ್‌ ಗೂ ಮುಂದಿನ ತಿಂಗಳು ಮದುವೆ!

ಸುರೇಶ್‌ : ಕಂಗ್ರಾಟ್ಸ್ ಗುರು! ಯಾವಾಗ ಡೇಟ್‌ ಫಿಕ್ಸ್ ಆಯ್ತು?

ರಾಜೇಶ್‌ : ನನ್ನದು ಮುಂದಿನ ಜೂನ್‌ 15, ಅವಳದು ಅದೇ ಜೂನ್‌ 25.

 

ನವವಿವಾಹಿತ ಜೋಡಿಯೊಂದು ಹನಿಮೂನಿಗಾಗಿ ಊಟಿಯ ಗಿರಿಧಾಮ ತಲುಪಿದರು. ಆ ಹೋಟೆಲಿನ ಮ್ಯಾನೇಜರ್‌ ಈ ವರಮಹಾಶಯನನ್ನು ನೋಡಿದ್ದೇ, ಏನೂ ಪ್ರಶ್ನಿಸದೆ ಸರಸರ ರೆಜಿಸ್ಟರ್‌ ನಲ್ಲಿ ಹೆಸರು, ವಿಳಾಸ ಇತ್ಯಾದಿ ನಮೂದಿಸಿಕೊಂಡ.

ನವ ವಧು (ನಾಚುತ್ತಾ) : ಓಹ್‌…. ನನ್ನ ಪತಿ ಎಷ್ಟು ಫೇಮಸ್‌ ಅಂದ್ರೆ ಏನೂ ವಿಚಾರಿಸದೆಯೇ ಅವರನ್ನು ನೋಡುತ್ತಲೇ ಎಲ್ಲಾ ತಿಳಿದುಕೊಂಡು ಬಿಟ್ರಲ್ಲಾ…..

ಮ್ಯಾನೇಜರ್‌ : ನನ್ನ ಕರ್ಮ! ಈ ವಯ್ಯ ಪ್ರತಿ ವರ್ಷ ಇದೇ ಸೀಸನ್‌ ನಲ್ಲಿ ನಮ್ಮ ಹೋಟೆಲ್ ಗೆ ಹೊಸ ಹೊಸ ನವ ವಧುಗಳ ಜೊತೆ ಹನೀಮೂನಿಗೆ ಬರ್ತಾ ಇರ್ತಾರೆ ಅಂತೀನಿ.

 

ಮದುವೆಯಾದ ಮೊದಲ ವರ್ಷ ಪೂರ್ತಿ ಗಂಡ ಹಾಡುತ್ತಿದ್ದ ಹಾಡು…. `ನಿನ್ನಿಂದಲೇ…. ನಿನ್ನಿಂದಲೇ…. ಕನಸೊಂದು ಶುರುವಾಗಿದೆ!’

ಮದುವೆಯಾಗಿ 4 ವರ್ಷ ಕಳೆಯುವ ಹೊತ್ತಿಗೆ ಗಂಡ ಕೇಳುತ್ತಿದ್ದ ಹಾಡು…. `ನಾನೊಂದು ತೀರ…. ನೀನೊಂದು ತೀರ…..’

`ಇದನ್ನು ಹಾಡುವುದಕ್ಕೂ ಪುಣ್ಯ ಮಾಡಿರಬೇಕು. ಹ್ಞೂಂ ನನಗೆಲ್ಲಿ ಆ ಭಾಗ್ಯ!’ ಎಂದು ಗೊಣಗುವುದೇ?

 

ಜೈಲರ್‌ : ಏನಪ್ಪ, ಇಷ್ಟು ದಿನ ಆದ್ರೂ ನಿಮ್ಮ ಮನೆಯವರು ಅಂತ ಒಬ್ಬರಾದರೂ ನಿನ್ನ ನೋಡೋಕ್ಕೆ ಬರೋದು ಬೇಡವೇ?

ಖೈದಿ : ಎಲ್ಲಿಂದ ಬರ್ತಾರೆ? ಎಲ್ಲರೂ ಇಲ್ಲೇ ಇದ್ದಾರಲ್ಲ!

 

ಮಗು ಒಂದೇ ಸಮನೆ ಅಳುತ್ತಿತ್ತು. ಅದರ ಅಳು ನಿಲ್ಲುವ ಸೂಚನೆಯೇ ಇರಲಿಲ್ಲ.

ಪತ್ನಿ : ಇದನ್ನು ರವಷ್ಟು ಸುಧಾರಿಸಿ ಸುಮ್ಮನಾಗಿಸಬಾರದೇ? ನಾನೇನು ಇದನ್ನು ವರದಕ್ಷಿಣೆ ಜೊತೆ ಹೊತ್ತುಕೊಂಡು ಬಂದಿದ್ದೆನೇ? ಎಲ್ಲದಕ್ಕೂ ನಾನೇ ಹೊಣೆ ಅನ್ನೋದಿಕ್ಕೆ….

ಪತಿ : ನಾನು ಮದುವೆಗೆ ದಿಬ್ಬಣದ ಸಮೇತ ಇದನ್ನು ಹೊತ್ತುಕೊಂಡು ಬಂದಿರಲಿಲ್ಲ….

ಪತ್ನಿ : ……….

ಪತಿ : ……….

ಇವರಿಬ್ಬರ ಕಚ್ಚಾಟ ಕೇಳಿ ಕೇಳಿ ಸಾಕಾಗಿ ಮಗು ತಾನೇ ಸುಮ್ಮನಾಗಿ ಹೋಯಿತು.

 

ಪಿಂಕಿ : ಅದು ಸರಿ, ಪೊಲೀಸರೇಕೆ ನಿಮ್ಮಣ್ಣನನ್ನು ಬೀದಿಯುದ್ದಕ್ಕೂ ಹಾಗೇ ಕಾಲರ್‌ ಪಟ್ಟಿ ಹಿಡಿದು ದರ ದರ ಎಳೆದುಕೊಂಡು ಹೋದರಲ್ಲ…….?

ರಿಂಕಿ : ಓ ಅದಾ…. ನಿನ್ನೆ ಸಂಜೆ ನಮ್ಮಣ್ಣ ಅಂಗಡಿ ಬಾಗಿಲು ತೆರೆದಿದ್ದ.

ಪಿಂಕಿ : ಅಂಗಡಿ ಬಾಗಿಲು ತೆರೆದರೆ ಪೊಲೀಸರೇಕೆ ಬರಬೇಕು?

ರಿಂಕಿ : ಓ ಅದಾ…. ಅದು ಕಂಡೋರ ಅಂಗಡಿ ಬಾಗಿಲು, ಅದು ಸುತ್ತಿಗೆಯಿಂದ ಬೀಗ ಒಡೆದು ತೆರೆದದ್ದು!

 

ಪತಿ : ಅಲ್ಲ…. ನೀನು ಹೇಳಿದ್ದೇನು? ಡಿನ್ನರ್‌ ಗೆ ನೀನು 2 ಚಾಯ್ಸ್ ಕೊಡುವುದಾಗಿ ಹೇಳಿದ್ದೆ. ಇಲ್ಲಿ ನೋಡಿದರೆ ಚಪಾತಿ ಜೊತೆ ಕೇವಲ ಹಾಗಲಕಾಯಿ ಪಲ್ಯ ಮಾತ್ರ ಇದೆ….

ಪತ್ನಿ : ಈಗಲೂ 2 ಚಾಯ್ಸ್ ಇದ್ದೇ ಇದೆ.

ಪತಿ : ಅದೇ ಏನೂಂ…..ತ?

ಪತ್ನಿ : ಒಂದು ಹಾಗಲಕಾಯಿ ಪಲ್ಯ, ಇನ್ನೊಂದು ರೊಟ್ಟಿ ಜೊತೆಗೆ ನೀರು!

 

ವಾಣಿ : ಸಣ್ಣ,….. ಅತಿ ಸಣ್ಣ ವಸ್ತುವನ್ನೂ ನಾವು ನಿರ್ಲಕ್ಷ್ಯ ಮಾಡಬಾರದು ಗೊತ್ತಾ?

ರಾಣಿ : ಉದಾಹರಣೆ ಕೊಡು ನೋಡೋಣ.

ವಾಣಿ : ದೊಡ್ಡ ಕಲ್ಲು ಬಂಡೆ ಮೇಲೆ ಆರಾಮಾಗಿ ಕೂರಬಹುದು, ಆದರೆ ಅದರ ಮೇಲೊಂದು ಸೂಜಿ ನೆಟ್ಟಗೆ ನಿಂತಿದ್ದರೆ, ಸಲೀಸಾಗಿ ಅದರ ಮೇಲೆ ಕೂರೋದಿಕ್ಕೆ ಆಗೋದಿಲ್ಲ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ