ಭವಿಷ್ಯವನ್ನು ಸುರಕ್ಷಿತವಾಗಿಡಲು ಹಣದ ಹೂಡಿಕೆಯಂತೂ ಸರಿ. ಆದರೆ ಸಂಬಂಧದ ಜೀವಂತಿಕೆ ಕಾಯ್ದುಕೊಂಡು ಹೋಗಲು ಏನನ್ನು ಹೂಡಿಕೆ ಮಾಡಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳಿ…!

ಇಂದಿನ ಧಾವಂತದ ಯುಗದಲ್ಲಿ ಮನುಷ್ಯನ ಜೀವನ ತಮ್ಮಷ್ಟಕ್ಕೆ ತಾವು ಎಂಬಂತಾಗಿ ಬಿಟ್ಟಿದೆ. ಅವಿಭಕ್ತ ಕುಟುಂಬಗಳು ವಿರಳಗೊಂಡು ಗಂಡ, ಹೆಂಡತಿ, ಮಗು ಎಂಬವಷ್ಟರ ಮಟ್ಟಿಗೆ ಸೀಮಿತವಾಗಿದೆ. ಉದ್ಯೋಗಸ್ಥ ದಂಪತಿಗಳು ತಮ್ಮ ಬಿಡುವಿನ ವೇಳೆಯಲ್ಲಿ, ರಜೆಯ ದಿನಗಳಂದು ಸಂಬಂಧಿಕರ ಮನೆಗಳಿಗೆ ಹೋಗದೆ ಹೊರಗಡೆ ಸುತ್ತಾಡಲು ಹೋಗುವುದನ್ನು ಇಷ್ಟಪಡುತ್ತಾರೆ. ಇದರ ದುಷ್ಪರಿಣಾಮ ಏನಾಗುತ್ತದೆ ಎಂದರೆ, ಅವರ ಮಕ್ಕಳಿಗೆ ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ, ಅಜ್ಜಿ-ತಾತಾ ಇಂತಹ ಮಹತ್ವದ ಸಂಬಂಧಗಳ ಬಗ್ಗೆ ಅಪರಿಚಿತರಾಗಿ ಉಳಿದುಬಿಡುತ್ತಾರೆ. ಒಂದು ಕಟು ಸತ್ಯವೇನೆಂದರೆ, ಮನುಷ್ಯ ಎಷ್ಟೇ ಹಣ ಗಳಿಸಲಿ, ಹೊರಗಡೆ ಸುತ್ತಾಡಿ ಬರಲಿ, ಆದರೆ ಕುಟುಂಬ ದರ ಹಾಗೂ ಸಂಬಂಧಿಕರ ನಂಟಿನ ಹೊರತಾಗಿ ಈ ಖುಷಿ ಅಪೂರ್ಣ ಎಂದೇ ಹೇಳಬೇಕು. ತಂದೆ ತಾಯಿ, ಅಣ್ಣ ತಮ್ಮ, ಸ್ನೇಹಿತರ ಕೊರತೆಯನ್ನು ಯಾರೊಬ್ಬರೂ ಭರ್ತಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ನಮ್ಮ ಸಂಬಂಧಗಳನ್ನು ಕಾಯ್ದುಕೊಂಡು ಹೋಗುವುದು ಅತ್ಯವಶ್ಯಕ.

ನಮ್ಮ ಭವಿಷ್ಯವನ್ನು ಉಜ್ವಲಗೊಳಿಸಿ ಕೊಳ್ಳಲು ನಾವು ಹಣವನ್ನು ವಿನಿಯೋಗಿಸುತ್ತೇವೆ. ಅದೇ ರೀತಿ ಸಂಬಂಧಗಳ ಜೀವಂತಿಕೆಯನ್ನು ಕಾಪಾಡಿಕೊಂಡು ಹೋಗಲು ಸಮಯ, ಪ್ರೀತಿ, ಪರಸ್ಪರ ಆಗಮನ, ನಿರ್ಗಮನ ಹಾಗೂ ಸಮ್ಮಿಲನದ ಇನ್ ವೆಸ್ಟ್ ಮೆಂಟ್‌ ಮಾಡುವುದು ಅತ್ಯವಶ್ಯಕ. ಇವುಗಳ ಕೊರತೆಯಲ್ಲಿ ಸಂಬಂಧ ಎಷ್ಟೇ ನಿಕಟವಾಗಿದ್ದರೂ ಒಂದಿಲ್ಲೊಂದು ದಿನ ಅದು ಕೊನೆಯುಸಿರು ಎಳೆಯುತ್ತದೆ. ಒಂದು ನಿರ್ಜೀವ ವಸ್ತು ಚಾಕುವಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅದನ್ನು ಬಹಳ ದಿನಗಳ ಕಾಲ ಬಳಸದೇ ಹೋದರೆ ಅದು ತನ್ನ ಹರಿತವನ್ನು ಕಳೆದುಕೊಳ್ಳುತ್ತದೆ. ಇನ್ನು ಸಂಬಂಧಗಳಂತೂ ಜೀವಂತ ಜನರೊಂದಿಗೆ ಆಗುತ್ತವೆ. ಅವುಗಳ ಹರಿತವನ್ನು ಕಾಯ್ದುಕೊಂಡು ಹೋಗಲು ಅಗತ್ಯ ಪ್ರಯತ್ನವನ್ನು ಮಾಡಬೇಕು.

ಪರಸ್ಪರ ಹೋಗಿಬರುವಿಕೆ ಅಗತ್ಯ

ರೇಣುಕಾ ಹಾಗೂ ಆಕೆಯ ಏಕೈಕ ಸೋದರಿ ಈ ವರ್ಷ ಹೇಗಾದರೂ ಮಾಡಿ 1 ಸಲ ಭೇಟಿ ಆಗುವುದಾಗಿ ನಿರ್ಧರಿಸಿದರು. ಅದಕ್ಕೂ ಒಂದು ಒಳ್ಳೆಯ ಉಪಾಯವೆಂಬಂತೆ ಇಬ್ಬರೂ ಸೇರಿಕೊಂಡು ಮಕ್ಕಳೊಂದಿಗೆ ಹೊರಗೆ ಸುತ್ತಾಡುವ ಯೋಜನೆ ಹಾಕಿದರು. ಇದರಿಂದಾಗಿ ಅವರ ನಡುವಿನ ಸಂಬಂಧ ಗಾಢವಾಗಿದೆ. ಇದಕ್ಕೆ ತದ್ವಿರುದ್ಧ ಎಂಬಂತೆ ಶೀಲಾ ಹಾಗೂ ಆಕೆಯ ಸೋದರಿ ಕಳೆದ 5 ವರ್ಷದಿಂದ ಒಂದೇ ಒಂದು ಸಲ ಭೇಟಿಯಾಗಿಲ್ಲ. ಇದರ ಪರಿಣಾಮ ಏನಾಯಿತೆಂದರೆ ಇಬ್ಬರ ಮಕ್ಕಳು ಪರಸ್ಪರ ಒಡನಾಟ ಹೊಂದಿಲ್ಲ. ವಾಸ್ತವದಲ್ಲಿ ಸಂಬಂಧದ ಮಾಧುರ್ಯವನ್ನು ಕಾಪಾಡಿಕೊಳ್ಳಲು ಆಗಾಗ ಪರಸ್ಪರ ಭೇಟಿಯಾಗುವುದು ಅತ್ಯವಶ್ಯ. ಯಾರಾದರೂ ಸಂಬಂಧಿಕರನ್ನು ಭೇಟಿಯಾಗಲು ಹೋದಾಗ ಅವರಿಗೆ ಉಪಯುಕ್ತವಾಗುವಂತಹ ಯಾವುದಾದರೊಂದು ಉಡುಗೊರೆಯೊಂದನ್ನು ತೆಗೆದುಕೊಂಡು ಹೋಗಿ. ಇದು ಪರಸ್ಪರ ಪ್ರೀತಿ ವಿಶ್ವಾಸವನ್ನು ಹೆಚ್ಚಿಸಲು  ನೆರವಾಗುತ್ತದೆ.

ಸಮತೋಲಿತ ಭಾಷೆಯ ಬಳಕೆ

`ಬಿತ್ತಿದಂತೆ ಬೆಳೆ’ ಎಂಬ ಗಾದೆ ಮಾತಿನ ಪ್ರಕಾರ, ನೀವು ಜನರ ಜೊತೆ ಹೇಗೆ ವರ್ತಿಸುವಿರೊ, ಅವರು ಕೂಡ ನಿಮ್ಮೊಂದಿಗೆ ಹಾಗೆಯೇ ವರ್ತಿಸುವರು. ಶಾಲಿನಿಯವರು ಯಾರನ್ನಾದರೂ ಭೇಟಿಯಾದಾಗ ಮಾತನಾಡುವ ರೀತಿಯೇ ವಿಚಿತ್ರವಾಗಿರುತ್ತದೆ. “ಏನ್ರಿ ಸುಷ್ಮಾ, ನಿಮಗೆ ಎಂದೂ ಬಿಡುವೇ ಸಿಗಲ್ವೇ? ಆಗಾಗ ನಮ್ಮ ಕಡೆಯೂ ಸ್ವಲ್ಪ ಗಮನ ಕೊಡ್ತಾ ಇರಿ.” ಇನ್ನೊಬ್ಬರಿದ್ದಾರೆ ಅವರು ನಳಿನಿ. ಗೆಳತಿ ಅಪರೂಪಕ್ಕೆ ಫೋನ್‌ ಮಾಡಿದರೆ, ಅವರಿಗೆ ವ್ಯಂಗ್ಯ ಬಾಣ ಬಿಡುತ್ತಾರೆ, “ಇವತ್ತು ನಿಮಗೆ ನಮ್ಮ ನೆನಪಾಯಿತೋ?”

ಅದೊಂದು ದಿನ ಪ್ರತಿಭಾ ತನ್ನ ಚಿಕ್ಕಮ್ಮನ ಮನೆಗೆ ಹೋದಳು. ಗೇಟ್‌ ತೆರೆಯುತ್ತಿದ್ದಂತೆ ಆಂಟಿಯ ಜೋರು ಧ್ವನಿ, “ಏನ್‌ಪ್ರತಿಭಾ, ಈ ಚಿಕ್ಕಮ್ಮನ ಮನೆ ದಾರಿ ಮರೆತೇ ಹೋಗಿತ್ತಾ?” ಅವರ ಚುಚ್ಚು ಮಾತು ಕೇಳಿ ಪ್ರತಿಭಾಳಿಗೆ ಹೋದ ಉತ್ಸಾಹವೇ ಇಳಿದುಹೋಯಿತು. ಚಿಕ್ಕಮ್ಮ ತುಂಬಾ ಹತ್ತಿರವಿದ್ದರೂ ಒಂದು ದಿನ ಫೋನ್‌ ಮಾಡುವುದಿಲ್ಲ. ಇನ್ನು ಮನೆಗೆ ಬರುವುದಂತೂ ದೂರವೇ ಉಳಿಯಿತು. ಈ ರೀತಿಯ ವ್ಯಂಗ್ಯದ ಬಾಣಗಳ ಮಾತುಗಳನ್ನು ಬದಿಗಿಟ್ಟು ಪ್ರೀತಿ, ವಿಶ್ವಾಸ ಹೆಚ್ಚಿಸುವ ನಯವಿನಯದ ಮಾತುಗಳಿಂದ ಅವರ ಮನಸ್ಸನ್ನು ಗೆಲ್ಲಿ.

ಸಂಬಂಧ ನಿಭಾಯಿಸಿ

ನಂದಿನಿ ಹಾಗೂ ಮೋಹನ್‌ ದಂಪತಿಗಳಿಗೆ ಯಾರಿಂದಾದರೂ ಆಮಂತ್ರಣ ಬಂದರೆ ಸಾಕು. 10 ನಿಮಿಷಗಳ ಮಟ್ಟಿಗಾದರೂ ಅವಶ್ಯವಾಗಿ ಹೋಗಿ ಬರುತ್ತಾರೆ. ಎಷ್ಟೋ ಸಲ ಸಂಬಂಧಿಕರು ಪರಿಚಿತರ ಯಾವುದಾದರೂ ಕಾರ್ಯಕ್ರಮವಿದ್ದರೆ ನಾವು ನೆಪ ಹೇಳುತ್ತೇವೆ. ನೀವು ಒಂದು ಕಾರ್ಯಕ್ರಮಕ್ಕೆ ಹೋದರೂ, ಹೋಗದೇ ಇದ್ದರೂ ವ್ಯತ್ಯಾಸ ಏನೂ ಆಗದು. ಆದರೆ ನೀವು ಹೋಗದೇ ಇದ್ದರೆ ಸಂಬಂಧಗಳ ಬಗೆಗಿನ ನಿಮ್ಮ ಉದಾಸೀನತೆಯನ್ನು ತೋರಿಸುತ್ತದೆ. ಯಾವುದೋ ಕಾರಣದಿಂದ ನಿಮಗೆ ಹೋಗಲು ಆಗದೇ ಇದ್ದರೆ ನೀವು ಮತ್ತೊಂದು ದಿನ ಹೋಗಿ ಬನ್ನಿ. ಯಾವುದೇ ಒಂದು ಶುಭ ಸಮಾರಂಭಕ್ಕೆ ಹೋಗುವುದೆಂದರೆ ಹತ್ತು ಹಲವು ಪರಿಚಿತ ಮುಖಗಳನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಅದರಿಂದಾಗಿ ಸಂಬಂಧಗಳ ಜೀವಂತಿಕೆ ಕಾಯ್ದುಕೊಂಡು ಹೋಗಲು ಸಾಧ್ಯವಾಗುತ್ತದೆ.

aise-sambhalain-riston-ke

ಹೊಸ ತಂತ್ರಜ್ಞಾನ ಬಳಕೆ ಮಾಡಿ

“ನನ್ನ ಮಾಲೀಕರು ತುಂಬಾ ಆತ್ಮೀಯ ಸ್ವಭಾವದವರು. ಅವರು ದೇಶದಲ್ಲಿಯೇ ಇರಲಿ, ವಿದೇಶದಲ್ಲಿಯೇ ಇರಲಿ, ನಮ್ಮ ಮನೆಯ ಎಲ್ಲರ ಬರ್ಥ್‌ ಡೇ ಹಾಗೂ ವಿವಾಹ ವಾರ್ಷಿಕೋತ್ಸವದ ಶುಭ ಹಾರೈಕೆ ಹೇಳುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ಅದರ ಫಲಶ್ರುತಿಯೆಂಬಂತೆ ನಾವು ಅವರ ಮನೆಬಿಟ್ಟು 6 ವರ್ಷವಾದರೂ ನಮ್ಮ ಸಂಬಂಧ ಈಗಲೂ ಅಷ್ಟೇ ಮಧುರವಾಗಿದೆ. ಇಂದಿನದು ತಂತ್ರಜ್ಞಾನ ಯುಗ. ವಾಟ್ಸ್ ಆ್ಯಪ್‌, ಫೇಸ್‌ ಬುಕ್‌, ಟ್ವಿಟರ್‌, ಇನ್‌ ಸ್ಟಾಗ್ರಾಮ್, ವಿಡಿಯೋ ಕಾಲಿಂಗ್‌ ಮುಂತಾದವುಗಳ ಮುಖಾಂತರ ಎಷ್ಟೇ ದೂರದಲ್ಲಿರುವ ಸ್ನೇಹಿತರನ್ನು ಕ್ಷಣಾರ್ಧದಲ್ಲಿ ಸಂಪರ್ಕಿಸಬಹುದು.

ಸ್ವಾಗತ ಕೋರಿ ಮನೆಗೆ ಬರುವ ಅತಿಥಿಗಳನ್ನು ತುಂಬು ಹೃದಯದಿಂದ ಸ್ವಾಗತಿಸಿ. ಅತಿಥಿಗಳು ಬಂದಿರುವುದು ನಿಮಗೆ ಖುಷಿಯಾಗಿದೆ ಎನ್ನುವುದನ್ನು ಇದು ತೋರಿಸುತ್ತದೆ. ಶೋಭಾಳ ಮನೆಗೆ ಹೋದಾಗ ನಮಗೆ ಖುಷಿಯಾಗುವುದಿರಲಿ, ನಾವು ಇಲ್ಲಿಗೆ ಏಕೆ ಬಂದಿದ್ದೇವೆ ಎಂದೆನಿಸುತ್ತದೆ. ಮುಗುಳ್ನಗೆಯ ಸ್ವಾಗತವಿಲ್ಲ. ಖುಷಿಯ ಮಾತುಕತೆಯಿಲ್ಲ, ಉದಾಸೀನ ಮನಸ್ಸಿನಿಂದ ಚಹಾ ತಿಂಡಿ ತಂದು ಟೇಬಲ್ ಮೇಲಿಡುತ್ತಾಳೆ. ನೀವು ತಿಂದರೆ ತಿನ್ನಿ ಬಿಟ್ಟರೆ ಬಿಡಿ ಎಂಬರ್ಥದಲ್ಲಿ. ಇದಕ್ಕೆ ತದ್ವಿರುದ್ಧ ಎಂಬಂತೆ ನಾವು ಯಾವಾಗಲಾದರೂ ಶಾರದಾ ನಾಗೇಶ್‌ ಅವರ ಮನೆಗೆ ಹೋದಾಗ ಅವರ ಖುಷಿ ನೋಡಬೇಕು! ಪ್ರೀತಿಯ ಸ್ವಾಗತ ನೋಡಿದರೆ ನಮ್ಮ ಆಗಮನ ಅವರಿಗೆಷ್ಟು ಖುಷಿ ಕೊಟ್ಟಿದೆ ಎನ್ನುವುದನ್ನು ತೋರಿಸುತ್ತದೆ. ನಿಮ್ಮ ವರ್ತನೆಯನ್ನು ನೋಡಿಯೇ ಅತಿಥಿ ಮತ್ತೊಮ್ಮೆ ಬರುವ ಬಗ್ಗೆ ಯೋಚಿಸುತ್ತಾರೆ.

ಚಿಕ್ಕಪುಟ್ಟ ಸಂಗತಿ ನಿರ್ಲಕ್ಷಿಸದಿರಿ

ನಮ್ರತಾಳ ಮಾವನ ತಮ್ಮ ಬಂದಿದ್ದರು. ಅವರು ಮಧುಮೇಹಿ ಎನ್ನುವುದು ಅವಳಿಗೆ ಗೊತ್ತಿತ್ತು. ಹೀಗಾಗಿ ಆಕೆ ಅವರಿಗಾಗಿ ಸಕ್ಕರೆ ರಹಿತ ಚಹಾ ಮಾಡಿಕೊಂಡು ತಂದುಕೊಟ್ಟಳು. ತನ್ನ ಬಗ್ಗೆ ನಮ್ರತಾ ಅದೆಷ್ಟು ಸೂಕ್ಷ್ಮವಾಗಿ ಗಮನಿಸಿದ್ದಾಳೆ ಎನ್ನುವುದು ಅವರಿಗೆ ಖುಷಿಯಾಯಿತು. ಸ್ಮಿತಾಳ ಹಿರಿಯ ನಾದಿನಿಯ ಗಂಡ ಬಂದಿದ್ದರು. ಅವರು ಕೀಲುನೋವಿನಿಂದ ಬಳಲುತ್ತಿದ್ದರು. ಅವರಿಗೆ ಬಾಥ್ ರೂಮಿನಲ್ಲಿ ಕುಳಿತುಕೊಳ್ಳಲು ಎತ್ತರದ ಸ್ಟೂಲ್ ‌ನಂಥದು ಬೇಕಾಗಿತ್ತು. ಮಾರುಕಟ್ಟೆಗೆ ಹೋಗಿ ಅದನ್ನು ತಂದಿಟ್ಟಿದ್ದಳು. ಆತ ಅದನ್ನು ನೋಡಿ ಖುಷಿಪಟ್ಟರು. ಅರ್ಚನಾಳ ಮನೆಗೆ ಯಾರೇ ಬಂದರೂ ಆಕೆ ಪ್ರತಿಯೊಬ್ಬ ಸದಸ್ಯರ ಬಗ್ಗೆ ಗಮನಹರಿಸುತ್ತಾಳೆ. ಅವರಿಗೆ ಇಷ್ಟವಾಗುವ ತಿಂಡಿ ತೀರ್ಥ ಸಿದ್ಧಪಡಿಸುತ್ತಾಳೆ.

ಸಮಯ ಕೊಡಿ

ಮನೆಗೆ ಯಾರೇ ಅತಿಥಿಗಳು ಬರಲಿ ಅವರಿಗೆ ಸಾಕಷ್ಟು ಸಮಯ ಕೊಡಿ. ನಿಮ್ಮ ಮನೆಗೆ ಬಂದ ಅತಿಥಿಗಳು ಕೂಡ ತಮ್ಮ ಅಮೂಲ್ಯ ಸಮಯ ಮೀಸಲಿಟ್ಟು ಬಂದಿದ್ದಾರೆ. ಅನಿತಾ ತನ್ನ ಅಣ್ಣನ ಮನೆಗೆ ಹೋದಾಗ, ಅಣ್ಣ ಆಫೀಸಿಗೆ ಹೊರಟುಹೋದ. ಅತ್ತಿಗೆ ತನ್ನ ಅಡುಗೆಮನೆ ಹಾಗೂ ಮಗನ ಯೋಗಕ್ಷೇಮ ನೋಡಿಕೊಳ್ಳುವುದರಲ್ಲಿ ಮಗ್ನಳಾಗಿಬಿಟ್ಟಳು. ಅವಳಿಗೆ ಕಾಲಕಾಲಕ್ಕೆ ತಿಂಡಿ, ಊಟ, ಚಹಾ ಏನೆಲ್ಲ ಬರುತ್ತಲಿತ್ತು. ಹೋಟೆಲ್ ‌ನಲ್ಲಿ ತಂಗಿದ ಅತಿಥಿಗಳಂತೆ ತನ್ನ ಸ್ಥಿತಿಯಾಯಿತು. ಅನಿತಾಳೊಂದಿಗೆ ಕುಳಿತು ಸ್ವಲ್ಪ ಹೊತ್ತು ಮಾತನಾಡುವಷ್ಟು ಸಮಯ, ತಾಳ್ಮೆ ಯಾರಿಗೂ ಇರಲಿಲ್ಲ. 1-2 ದಿನಗಳ ಬಳಿಕ ಆಕೆ ತನ್ನ ಊರಿಗೆ ಹೊರಟಳು. ಇನ್ನೆಂದೂ ಅಣ್ಣನ ಮನೆಗೆ ಹೋಗಬಾರದೆಂದು ಆಕೆ ಆಗಲೇ ನಿರ್ಧರಿಸಿದಳು.

ಎಷ್ಟೋ ಸಲ ನಮಗೆ ತೀರಾ ಬೇಕಾದರೇ ತೋರಿದ ದುರ್ವರ್ತನೆ ನಮಗೆ ಸಾಕಷ್ಟು ನೋವನ್ನುಂಟು ಮಾಡುತ್ತದೆ. ನಮ್ಮೊಂದಿಗೆ ಅವರು ನಡೆದುಕೊಂಡ ಸದ್ವರ್ತನೆಯನ್ನು ಸದಾ ನೆನಪಲ್ಲಿಟ್ಟುಕೊಂಡು, ಮನಸ್ಸಿಗೆ ದುಃಖವನ್ನುಂಟು ಮಾಡುವ ವರ್ತನೆಯನ್ನು ಕ್ಷಣಿಕ ಆವೇಶವೆಂದು ಭಾವಿಸಿ ಅದನ್ನು ಮರೆಯಲು ಕಲಿತುಕೊಳ್ಳಿ. ಏಕೆಂದರೆ ಜೀವನವೆನ್ನುವುದು ಮುಂದುವರಿಯುವುದರ ಸಂಕೇತವಾಗಿದೆ.

ಪ್ರತಿಭಾ ಹೆಗಡೆ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ