ಅಪ್ರತಿಮ ಸಾಧಕಿ, ಲೇಖಕಿ, ಪತ್ರಕರ್ತೆ ಎನಿಸಿರುವ ಭಾರತಿ ಹೆಗಡೆಯವರ ಅನನ್ಯ, ಅಮೋಘ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ…..?

ಆಕರ್ಷಕ ಮುಗುಳ್ನಗೆ, ನೋಟದಲ್ಲಿ ದಿಟ್ಟತನ, ಎಲ್ಲನ್ನೂ ಸಾಧಿಸುವೆ ಎನ್ನುವ ಛಲದ ಮನೋಭಾವದ ಪ್ರತಿರೂಪ ಭಾರತಿ ಹೆಗಡೆ ಎನ್ನಬಹುದು. ಕನ್ನಡದ ಹಿರಿಯ ಪತ್ರಕರ್ತರು, ಕವಯಿತ್ರಿ, ಲೇಖಕಿ ಮತ್ತು ಕಥೆಗಾರ್ತಿ ಎನ್ನಿಸಿಕೊಂಡಿದ್ದಾರೆ. ಮೂಲತಃ ಉತ್ತರ ಕನ್ನಡದ ಸಿದ್ದಾಪುರದವರು. ಇವರ ಕೃತಿಗಳಲ್ಲಿ ಮಹಿಳಾ ಸಬಲೀಕರಣದ ವಿಚಾರಗಳೊಂದಿಗೆ ವಾಸ್ತವಕ್ಕೆ ಹತ್ತಿರವಾದ ವಿಚಾರಗಳನ್ನೂ ಕಾಣಬಹುದು.

ಚಿಕ್ಕಂದಿನಲ್ಲಿ ಓದು : ತಂದೆ ದಿವಂಗತ ಐನಕೈ ಗಜಾನನ ಶಾಸ್ತ್ರಿಗಳು ದೊಡ್ಡ ವಿದ್ವಾಂಸರು, ಸಂಸ್ಕೃತ ಶಿಕ್ಷಕರು, ಯಕ್ಷಗಾನದ ಅರ್ಥವನ್ನು ಹೇಳುತ್ತಿದ್ದರು. ಬಹಳ ಒಳ್ಳೆಯ ಓದುಗರಾಗಿದ್ದರು. ಸಂಸ್ಕೃತ, ಕನ್ನಡ, ಹಿಂದಿ ಮೂರೂ ಭಾಷೆ ಅರಿತವರಾಗಿದ್ದರು. ಅಕ್ಷರದ ಮಹತ್ವವನ್ನು ಅರಿತಿದ್ದ ಅವರು, ಕರೆಂಟ್‌ ಇಲ್ಲದ ಕಾಲದಲ್ಲೇ ಮಕ್ಕಳಿಗೆ ಓದಲು ಚಿತ್ರದ ಸಮೇತ ಇವರು ಕಾಮಿಕ್ಸ್ ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ಇದು ತಮಗೂ ಓದಲು ಪ್ರೇರೇಪಿಸಿತೆಂದು ತಂದೆಯ ಬಗ್ಗೆ ಬಹಳ ಹೆಮ್ಮೆಯಿಂದ ಹೇಳುತ್ತಾರೆ ಭಾರತಿ ಹೆಗಡೆ.

ಅಪ್ಪನ ಯಕ್ಷಗಾನದ ಹ್ಯಾಸದಿಂದಾಗಿ ಚಿಕ್ಕಂದಿನಲ್ಲಿ ಜ್ಞಾನದ ಕಿಟಕಿಯನ್ನು ತೆರೆಯಲು ಕಾರಣವಾಯಿತು ಎನ್ನುತ್ತಾರೆ. ದಟ್ಟ ಹಸಿರಿನ ಮಲೆನಾಡಿನ ಪರಿಸರ, ಚಿಕ್ಕಂದಿನಿಂದ ಓದುವ  ಅಭ್ಯಾಸ, ಇವೆಲ್ಲ ಅವರನ್ನು ಲೇಖಕಿಯನ್ನಾಗಿಸಲು ಸಾಧ್ಯವಾಯಿತು. ವಿದ್ಯಾರ್ಥಿ ಜೀವನದಲ್ಲೇ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದ ಹಿರಿಮೆ ಭಾರತಿ ಅವರದು. ಖ್ಯಾತ ನಾಟಕಕಾರ ಮೈಸೂರು ಹುಲಿ ಎನ್ನುವ ಬಿರುದನ್ನು ಪಡೆದ ಹುಲಿಮನೆ ಸೀತಾರಾಮ ಶಾಸ್ತ್ರೀಯವರ ಮೊಮ್ಮಗಳು. ಅವರ ಪ್ರಭಾವ ಇವರ ಮೇಲಿತ್ತು. ಮದುವೆ, ಮಗುವಾದ ನಂತರ ಓದು ಮುಂದುವರಿಸಿದರು.

ಸಾಮಾನ್ಯವಾಗಿ ಎಲ್ಲ ಹೆಣ್ಣು ಮಕ್ಕಳಿಗಾಗುವಂತೆ ಮದುವೆ, ನಂತರ ಮಗು, ಸಂಸಾರದ ಜಂಜಾಟದ ನಡುವೆಯೂ ಏನಾದರೂ ಮಾಡಬೇಕೆಂಬ ತುಡಿತ, ಪರಿಣಾಮ ಭಾರತೀಯ ವಿದ್ಯಾಭವನದಲ್ಲಿ ಕನ್ನಡ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಪಡೆದು ಪತ್ರಿಕೆಗಳಿಗೆ ಬರೆಯಲು ಪ್ರಾರಂಭಿಸಿದರು. ಅಣ್ಣನ ಜೊತೆ ಜೊತೆಗೆ ಬೆಳೆದದ್ದರಿಂದ ಹುಡುಗರು ಮಾಡುವುದನ್ನು ನಾನೂ ಮಾಡುವೆ ಎನ್ನುವ ಮನೋಭಾವ ಆಗಲೇ ಇತ್ತು. ನಂತರ ಪತ್ರಿಕೆಗಳ ಮುಖ್ಯ ವಾಹಿನಿಗೆ ಪ್ರವೇಶ, ಕನ್ನಡ ಖ್ಯಾತ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಇವರದು. ಹೆಚ್ಚಾಗಿ ಮಹಿಳಾ ಪುರವಣಿಗಳಲ್ಲಿ ಕೆಲಸ ಮಾಡಿದ ಹೆಗ್ಗಳಿಕೆ. ಮೊಟ್ಟ ಮೊದಲಿಗೆ ಮಹಿಳಾ ಕಂಡಕ್ಟರ್‌ ಗಳ ಬಗ್ಗೆ ಲೇಖನ ಬರೆದರು. ಮನೆಯಲ್ಲಿ ಎಲ್ಲರೂ ಓದುಗರು ಮತ್ತು ವಿಮರ್ಶಕರು. ಹೀಗಾಗಿ ಸಾಹಿತ್ಯ ಇವರ ಲೇಖನಿಯಲ್ಲಿ ಸರಾಗವಾಗಿ ಹರಿದು ಬಂದುದರಲ್ಲಿ ಯಾವುದೇ ಅಚ್ಚರಿ ಇಲ್ಲ. ಪತ್ರಕರ್ತೆಯಾಗಿ ಇಪ್ಪತ್ತು ವರ್ಷಗಳ ಅನುಭವದ ಮೂಸೆಯಿಂದ ಹರಿದು ಬಂದ ಲೇಖನಗಳು ಎಲ್ಲವೂ ಓದುಗರನ್ನೂ ಮುಟ್ಟುವಂತಹವು. ಪ್ರಸ್ತುತ ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯ ಹುದ್ದೆಯನ್ನು ಅಲಂಕರಿಸಿದ್ದಾರೆ.

ವಾಹಿನಿಗಳೊಂದಿಗೆ ನಂಟು : ವಾಹಿನಿಗಳಿಗೆ ಇವರು ಪರಿಚಿತರು. ಧಾರಾವಾಹಿಗಳಿಗೆ ಕಥೆ ಮತ್ತು ಸಂಭಾಷಣೆಗಳ ಬರಹ, ದೂರದರ್ಶನ ಚಂದನದಲ್ಲಿ ದೀಪಾವಳಿ ಕಾರ್ಯಕ್ರಮದ ರೂಪಕ ಮತ್ತು ಹಲವಾರು ಸಾಕ್ಷ್ಯ ಚಿತ್ರಗಳಿಗೆ ಸ್ಕ್ರಿಪ್ಟ್ ಮತ್ತು ಹಿನ್ನೆಲೆ ಧ್ವನಿ ಒದಗಿಸಿದ್ದಾರೆ.

ವೃತ್ತಿ ಅನುಭವ : 2001ರಲ್ಲಿ ಕನ್ನಡ ಪ್ರಭಾಕ್ಕೆ ಸೇರ್ಪಡೆ. ಅಲ್ಲಿ ನಾಲ್ಕೂವರೆ ವರ್ಷ ಕಾರ್ಯ ನಿರ್ವಹಿಸಿ ಉದಯವಾಣಿ ಬಳಗಕ್ಕೆ ಸೇರಿದರು. ಉದಯವಾಣಿಯಲ್ಲಿ 5 ಪುರವಣಿಗಳ ಉಸ್ತುವಾರಿ ನೋಡಿಕೊಳ್ಳುವಂತಾಯಿತು. ಅಲ್ಲಿ 3 ವರ್ಷದ ಅನುಭವ. ನಂತರ 1 ವರ್ಷ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಪತ್ರಿಕೋದ್ಯಮದ ಅತಿಥಿ ಉಪನ್ಯಾಸಕಿಯಾಗಿ ಮತ್ತು ದೂರದರ್ಶನದಲ್ಲಿ 8 ವರ್ಷ ಕಾರ್ಯಕ್ರಮ ನಿರೂಪಕಿಯಾಗಿಯೂ ಕೆಲಸ ಮಾಡಿದ ಅನುಭವ. ನಂತರ 1 ವರ್ಷ ಹೊಸದಿಗಂತದಲ್ಲಿ ಪುರವಣಿ ಮುಖ್ಯಸ್ಥೆಯಾಗಿಯೂ ಮತ್ತೆ ಉದಯವಾಣಿಯಲ್ಲಿ `ಅವಳು ಮತ್ತು ಚಿನ್ನಾರಿ’ ಎಂಬ ಮಹಿಳಾ ಮತ್ತು ಮಕ್ಕಳ ಪುರವಣಿ ಜವಾಬ್ದಾರಿಯ ನಿರ್ವಹಣೆ. ನಂತರ 8 ವರ್ಷಗಳ ಕಾಲ ವಿಜಯವಾಣಿಯ ಮಹಿಳಾ ಪುರವಣಿ, ಲಲಿತಾ ಹಾಗೂ ಪ್ರತಿದಿನ ಬರುವ ಮಹಿಳಾ ಪರ ಲೇಖನಗಳ ಗುಚ್ಛ ಲೇಡೀಸ್‌ ಡೈರಿ ಜವಾಬ್ದಾರಿ ನಿರ್ವಹಣೆ, ವಿಜಯವಾಣಿ ಪತ್ರಿಕೆಯ ಸುದ್ದಿ ಸಂಪಾದಕಿಯಾಗಿ ಕಾರ್ಯನಿರ್ವಹಣೆ. ಒಟ್ಟಾರೆ ವಿವಿಧ ಜನಪ್ರಿಯ ಪತ್ರಿಕೆಗಳಲ್ಲಿ ವಿಭಿನ್ನ ವಿಭಾಗಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಚ್ಚುಗಾರಿಕೆ ಇವರದು.

ಪ್ರಶಸ್ತಿಗಳು : ಇವರಿಗೆ ಒಟ್ಟು ರಾಜ್ಯಮಟ್ಟದ ಏಳು ಪ್ರಶಸ್ತಿಗಳು ಲಭಿಸಿವೆ.

2001ರ ಮಾಧ್ಯಮ ಅಕಾಡೆಮಿ ಪ್ರಶಸ್ತಿ.

ಅದೇ ವರ್ಷದ ಕಾರ್ಯನಿರತ ಪತ್ರಕರ್ತ ಸಂಘ ಕೊಡುವ ಯಜಮಾನ್‌ ನಾರಾಯಣಪ್ಪ ಕೃಷಿ ಪ್ರಶಸ್ತಿ.

ಸಿಡಿಎಲ್ ಸಂಸ್ಥೆ ಕೊಡ ಮಾಡುವ 2012ರ ಚರಕ ಪ್ರಶಸ್ತಿ.

ಅಮ್ಮ ಪ್ರಶಸ್ತಿ (2019).

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅತ್ಯುತ್ತಮ ಕೃಷಿ ಪುಸ್ತಕ ಪ್ರಶಸ್ತಿ (2020).

ಇದೇ ಪುಸ್ತಕಕ್ಕೆ ಕರ್ನಾಟಕ ವಿದ್ಯಾರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ.

ಅಡೋಣ ಬಾ ಎಂಬ ಕಥೆಗೆ ಉತ್ಥಾನ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ.

ಇದಲ್ಲದೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ ಅನುಭವ.

ಎರಡು ಬಾರಿ ಸೆನ್ಸಾರ್‌ ಮಂಡಳಿಯ ಸದಸ್ಯೆ.

2012ರ ಅಂತಾರಾಷ್ಟ್ರೀಯ ಸಿನಿಮೋತ್ಸವದ ಕನ್ನಡ ಸಿನಿಮಾಗಳ ಆಯ್ಕೆ ಸಮಿತಿಯ 6 ಜನ ಜ್ಯೂರಿಗಳಲ್ಲಿ ಇವರೂ ಒಬ್ಬರು.

ಸಾಹಿತ್ಯ : ಬಹಳಷ್ಟು ಕವನಗಳು ಮತ್ತು ಕಥೆಗಳು, ಲೇಖನಗಳು ಈಗಾಗಲೇ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಲ್ಲದೆ 4 ಪುಸ್ತಕಗಳು ಪ್ರಕಟವಾಗಿವೆ.

ಮೊದಲ ಪತ್ನಿಯ ದುಗುಡ (ಸಿನಿಮಾಗಳಲ್ಲಿ ಮಹಿಳೆಯ ಪಾತ್ರ, ಮಹಿಳಾ ಪ್ರಧಾನ ಸಿನಿಮಾಗಳು).

ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು (ಅಮ್ಮ ಪ್ರಶಸ್ತಿ) (ಬಾಲ್ಯದ ಅನುಭವಗಳ ಕಥಾ ಮಾಲಿಕೆ).

ಮಣ್ಣಿನ ಗೆಳತಿ (ಕೃಷಿ ಮಹಿಳೆಯರ ಅನುಭನ ಕಥನ). ಜಿ.ಕೆ.ವಿ.ಕೆಯಿಂದ ಅತ್ಯುತ್ತಮ ಕೃಷಿ ಪುಸ್ತಕ ಎನ್ನುವ ಪ್ರಶಸ್ತಿ ಮತ್ತು ಕರ್ನಾಟಕ ವಿದ್ಯಾರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ.

ಹರಿವ ನದಿ ತಾಯಿ ಮೀನಾಕ್ಷಿ ಭಟ್‌ ರವರ ಆತ್ಮ ಕಥೆ. (ತಾಯಿಯ ಜೀವನದ ಅನುಭವಗಳು).ಒಟ್ಟಾರೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ತಮ್ಮನ್ನು ತಾ ತೊಡಗಿಸಿಕೊಂಡ ಬಹುಮುಖ ಪ್ರತಿಭಾವಂತೆ ಭಾರತಿ ಹೆಗಡೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮಂಜುಳಾ ರಾಜ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ