ಮದುವೆಯಾದ 12 ವರ್ಷಗಳ ಬಳಿಕ ಹೆಂಡತಿ ಹತ್ತಿರ ಬಂದರೆ ನನಗೆ ಇರುಸುಮುರುಸು ಆಗುತ್ತಿತ್ತು. ಆದರೆ ಅದೊಂದು ದಿನ……

ನನಗೆ ಅವಳು ಈ ಮೂಲಕ ಅಷ್ಟೊಂದು ಸುಂದರವಾಗಿ ಎಂದೂ ಕಂಡು ಬಂದಿರಲಿಲ್ಲ. ಅವಳ ಭಾರಿ ದೇಹ ನನಗೆ ದಢೂತಿ ಎಂದೆನಿಸುತ್ತಿತ್ತು. ಕೂದಲಿಲ್ಲದ ಜಡೆ, ಮುಂಗುರುಳು ಕೆನ್ನೆಯ ಮೇಲೆ ಓಲಾಡುತ್ತಾ ನನಗವಳು ಕುರೂಪಿ ಎಂದೆನಿಸುತ್ತಿತ್ತು. ಈಗ ಅವಳ ಮುಂಗುರಳನ್ನು ನೇವರಿಸುವ ಇಚ್ಛೆ ನನಗಾಗುತ್ತಿದೆ. ಅವಳ ಸಾದಾಸೀದಾ ಉಡುಗೆ ಹಳ್ಳಿಯ ಪೆದ್ದು ಹುಡುಗಿ ಥರಾ ಅನಿಸುತ್ತಿತ್ತು. ಆದರೆ ಅದೇ ಈಗ ಅವಳ ಸರಳತೆ ಸಜ್ಜನಿಕೆಯ ಉಡುಗೆ ಅನಿಸುತ್ತದೆ. ಈಗವಳು ನನಗೆ ತೆಳ್ಳನೆಯ ಕಾಯದ ಸುಂದರಿ ಎನಿಸುತ್ತಾಳೆ.

ನನ್ನ ಯೋಚನೆಯ ಬಗೆಗೆ ನನಗೆ ಅಚ್ಚರಿಯಾಗುತ್ತಿತ್ತು. ನನ್ನ ಎರಡು ಮಕ್ಕಳ ತಾಯಿ, ನನ್ನ ಅರ್ಧಾಂಗಿ ಇಂದು ನನಗೆ ಬಹಳ ಮನೋಹರಿ ಅನಿಸತೊಡಗಿದ್ದಾಳೆ. ನನ್ನ ಈ ಮಾತುಗಳು ನಿಮಗೆ ಅತಿಶಯೋಕ್ತಿ ಎನಿಸಬಹುದು. ಆದರೆ ನನಗೆ ಮಾತ್ರ ಅದು ವಾಸ್ತವ ಅನಿಸುತ್ತಿದೆ. ಕವಿಯ ಕಲ್ಪನೆಯ ನಾಯಕಿಯ ಹಾಗೆ ನನ್ನೊಡತಿ ನನಗೆ ಅತ್ಯಂತ ಆಕರ್ಷಕವಾಗಿ ಕಂಡುಬರುತ್ತಿದ್ದಾಳೆ. ಅವಳ ರೂಪ ಲಾವಣ್ಯ ಋಷಿ ಮುನಿಗಳ ತಪಸ್ಸನ್ನು ಭಂಗ ಮಾಡುವಂಥದು ಎಂದೆನಿಸತೊಡಗಿದೆ. ಅವಳನ್ನು ಮನಸಾರೆ ಪ್ರೀತಿಸಬೇಕೆಂಬ ಅಭಿಲಾಷೆ ನನ್ನ ಅಂತರ್ಮನವನ್ನು ಕಲಕಿಬಿಟ್ಟಿದೆ.

ಹೆಂಡತಿಯ ಬಗೆಗಿನ ಈ ವಿಚಾರಗಳು ಮೊದಲ ಬಾರಿ ನನ್ನ ಹೃದಯದ ಮೇಲೆ ಸವಾರಿ ಮಾಡುತ್ತಿವೆ ಎಂದೇನಲ್ಲ. 12 ವರ್ಷಗಳ ಮುಂಚೆ ತೆಳ್ಳನೆಯ ಕಾಯದ ಸುಂದರಿ ನಂದಿನಿ ನನ್ನ ಅರ್ಧಾಂಗಿಯಾದಾಗ ನನ್ನ ಖುಷಿಗೆ ಮೇರೆಯೇ ಇರಲಿಲ್ಲ. ಚಿಕ್ಕಪ್ಪನ ಮಗಳ ಮದುವೆಯಲ್ಲಿ ನಂದಿನಿಯನ್ನು ನೋಡಿ ನಾನೇ ಸ್ವತಃ ಅಮ್ಮನಿಗೆ ಹೇಳಿ ಮದುವೆಯ ಬಗ್ಗೆ ಪ್ರಸ್ತಾಪ ಕಳಿಸಿಕೊಟ್ಟಿದ್ದೆ.

ಹೀಗೆಯೇ ನಮ್ಮ ಜೀವನದ ಪಯಣ ಶುರುವಾಗಿತ್ತು. ಎರಡು ಮಕ್ಕಳಾದ ಬಳಿಕ ಅವಳ ಆದ್ಯತೆಗಳು ಬದಲಾಗಿದ್ದವು. ನನ್ನ ಬದಲಿಗೆ ಅವಳು ಮಕ್ಕಳ ಬಗ್ಗೆಯೇ ಹೆಚ್ಚು ಗಮನ ಕೊಡಲು ಆರಂಭಿಸಿದ್ದಳು. ತನ್ನ ಬಗೆಗೂ ಅವಳು ಅಷ್ಟಾಗಿ ಗಮನ ಕೊಡುತ್ತಿರಲಿಲ್ಲ. ಸದಾ ಮನೆಗೆಲಸಗಳಲ್ಲಿಯೇ ಮಗ್ನಳಾಗಿರುತ್ತಿದ್ದಳು. ಕ್ರಮೇಣ ಅವಳ ದೇಹದಲ್ಲಾಗುತ್ತಿದ್ದ ಬದಲಾವಣೆಗಳು ನನ್ನನ್ನು ಅವಳ ಬಗ್ಗೆ ವಿರಕ್ತನನ್ನಾಗುವಂತೆ ಮಾಡಿಬಿಟ್ಟಿತು.

ನನ್ನೆಲ್ಲ ಕೆಲಸ ಕಾರ್ಯಗಳನ್ನು ಅವಳು ಈಗಲೂ ಅತ್ಯಂತ ವ್ಯವಸ್ಥಿತವಾಗಿ ಮಾಡಿ ಮುಗಿಸುತ್ತಿದ್ದಳು. ಆದರೆ ಅವಳ ಬಗ್ಗೆ ನನಗೆ ಯಾವ ಆಸಕ್ತಿಯೂ ಉಂಟಾಗುತ್ತಿರಲಿಲ್ಲ. ಅವಳ ಬಗ್ಗೆ ನಾನು ಸದಾ ಸಿಡಿದೇಳುತ್ತಿದ್ದೆ. ಮನೆಗೆಲಸಗಳಿಂದ ಬಿಡುವು ಪಡೆದು ರಾತ್ರಿ ಅವಳು ನನ್ನ ಸಮೀಪ ಬಯಸುತ್ತಿದ್ದಳು. ಆದರೆ ಅವಳ ಅಸ್ತವ್ಯಸ್ತ ಬಟ್ಟೆಗಳು, ಎಣ್ಣೆ ಮಸಾಲೆಗಳಲ್ಲಿ ಮುಳುಗಿಹೋಗಿದ್ದ ಅವಳ ದೇಹದ ವಾಸನೆಯಿಂದ ರೋಸಿಹೋಗಿ, ಅವಳ ಮೇಲೆ ಸಿಡುಕಿ ದೂರ ಸರಿಸಿಬಿಡುತ್ತಿದ್ದೆ.

ಯಾವುದಾದರೊಂದು ಕಾರ್ಯಕ್ರಮ, ಗೃಹಪ್ರವೇಶ, ನಾಮಕರಣ, ಮದುವೆ ಮುಂತಾದ ಕಡೆ ಅವಳನ್ನು ಕರೆದುಕೊಂಡು ಹೋಗುವುದನ್ನು ನಿಲ್ಲಿಸಿಬಿಟ್ಟಿದ್ದೆ. ಏಕೆಂದರೆ ನನ್ನ ಗೆಳೆಯರ ಫ್ಯಾಷನೆಬಲ್, ಬಳುಕು ಬಳ್ಳಿಯಂತಿರುವ ಪತ್ನಿಯರ ಮುಂದೆ ನನ್ನ ಹೆಂಡತಿ ಹಳ್ಳಿಯ ಪೆದ್ದು ಹುಡುಗಿ ಅನಿಸುತ್ತಿದ್ದಳು. ಅವಳಿಗೆ ಸರಿಯಾಗಿ ಬಟ್ಟೆ ಧರಿಸುವ, ಸಿಂಗಾರ ಮಾಡಿಕೊಳ್ಳುವ ಪ್ರಜ್ಞೆಯೇ ಇಲ್ಲ ಎಂದು ನನಗನಿಸುತ್ತಿತ್ತು.

“ಬೇರೆಯವರ ಹೆಂಡತಿಯರು ಹೇಗೆ ಅಲಂಕಾರ ಮಾಡಿಕೊಳ್ಳುತ್ತಾರೆ, ನೀಟಾಗಿ ಡ್ರೆಸ್‌ ಮಾಡಿಕೊಳ್ಳುತ್ತಾರೆ, ಅದನ್ನು ನೋಡಿ ನೀನು ಏಕೆ ಕಲಿತುಕೊಳ್ಳುವುದಿಲ್ಲ? ಅಂದಹಾಗೆ, ನೀನು ದಿನವಿಡೀ ಮನೆಯಲ್ಲಿ ಕುಳಿತು ಮಾಡುವುದಾದರೂ ಏನು?” ಎಂದು ಅವಳನ್ನು ಕೇಳುತ್ತಿದ್ದೆ.

ನೀನು ಇಷ್ಟೊಂದು ಸೋಮಾರಿ, ಆಲಸ್ಯ ಮನೋಭಾವದವಳು ಎಂದು ಮೊದಲೇ ನನಗೆ ಗೊತ್ತಿದ್ದರೆ ನಿನ್ನೊಂದಿಗೆ ಮದುವೆಯಾಗಿ ನಾನು ನನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರಲಿಲ್ಲ. ನನ್ನ ಸಿಡಿಮಿಡಿತನದ ಮಾತುಗಳಿಗೆ ಅವಳು ವಾದವಿವಾದ ಮಾಡುತ್ತಿರಲಿಲ್ಲ. ಆದರೆ ಅವಳ ಕಣ್ಣುಗಳಲ್ಲಿ ಮಾತ್ರ ಗಂಗೆ ಧಾರೆಯಾಗಿ ಚಿಮ್ಮುತ್ತಿದ್ದಳು. ಆಗ ನಾನು ಕೋಪದಿಂದ, ಕಾಲು ಅಪ್ಪಳಿಸುತ್ತ ಹೊರಗೆ ಹೆಜ್ಜೆ ಹಾಕುತ್ತಿದ್ದೆ. ನಾನು ವಾಪಸ್‌ ಆಗುತ್ತಿದ್ದದ್ದು ತಡ ರಾತ್ರಿಯೇ. ಆದರೂ ಅವಳು ಏನೂ ಬೇಸರ ಮಾಡಿಕೊಳ್ಳದೆ, ನನಗೆ ಏನೊಂದೂ ಪ್ರಶ್ನೆ ಮಾಡದೆ ಬಂದ ತಕ್ಷಣ ಊಟ ಬಿಸಿ ಮಾಡಿಕೊಂಡು ಬಂದು ತಟ್ಟೆಯನ್ನು ತಂದು ನನ್ನ ಕೈಗಿಡುತ್ತಿದ್ದಳು.

ನಾನು ಅವಳ ಬಗ್ಗೆ ಇಷ್ಟೆಲ್ಲ ನಿರ್ಲಕ್ಷ್ಯ ಮಾಡುತ್ತಿದ್ದರೂ ಅವಳು ಮಾತ್ರ ನನಗೆ ತಕ್ಕಂತೆ ಎಂದೂ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿರಲಿಲ್ಲ. ದಿನದಿಂದ ದಿನಕ್ಕೆ ಅವಳು ನನಗೆ ಹಳ್ಳಿಗಮಾರಿ ಥರ ಕಾಣುತ್ತಿದ್ದಳು. ಕ್ರಮೇಣ ಅವಳು ನನ್ನ ವರ್ತನೆಯಿಂದ ಬೇಸತ್ತು ತನ್ನನ್ನು ತಾನು ಮಕ್ಕಳ ಪಾಲನೆಪೋಷಣೆ ಹಾಗೂ ಮನೆಯ ಜವಾಬ್ದಾರಿಗಳಲ್ಲಿ ತೊಡಗಿಸಿಕೊಂಡಳು. ಅವಳೊಂದಿಗಿನ ಮದುವೆಯನ್ನು ನಾನು ನನ್ನ ಜೀವನದ ದುರದೃಷ್ಟಕರ ಘಟನೆ ಎಂದು ಹಳಿದುಕೊಳ್ಳುತ್ತಿದ್ದೆ.

ಕೊರೋನಾ ದಿನಗಳಲ್ಲಿ

ಈ ಮಧ್ಯೆ ಕೊರೋನಾದ ಅಟ್ಟಹಾಸಕ್ಕೆ ಇಡೀ ವಿಶ್ವದ ಅರ್ಥವ್ಯವಸ್ಥೆಯೇ ಅಸ್ತವ್ಯಸ್ತವಾಗಿ ಹೋಯಿತು. ಸಾಮಾನ್ಯ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಲಾಕ್‌ ಡೌನ್‌ ಘೋಷಣೆ ಮಾಡಿತು. ಇದನ್ನು ವಿಧಿಯ ಕೈವಾಡ ಎಂದು ನಾನು ಒಪ್ಪಿಕೊಂಡೆ. ಏಕೆಂದರೆ ನಾನು ದಿನದ 24 ಗಂಟೆಗಳ ಕಾಲ ನನ್ನ ಮೂರ್ಖ ಪತ್ನಿಯ ಜೊತೆ ಕಳೆಯಬೇಕಿತ್ತು. ಕೆಲವು ದಿನ ಹೀಗೆಯೇ ಕಳೆಯಿತು.

ಸ್ವಲ್ಪ ಹೊತ್ತು ಟಿವಿ ನೋಡಿ, ಇನ್ನೊಂದಿಷ್ಟು ಹೊತ್ತು ಮಕ್ಕಳ ಜೊತೆ ಮೋಜುಮಜಾದಿಂದ ಸಮಯ ಕಳೆದುಹೋಯಿತು. ಸ್ನೇಹಿತರ ಜೊತೆಗೂ ಫೋನ್‌ ನಲ್ಲಿ ಗಂಟೆಗಟ್ಟಲೆ ಮಾತನಾಡಿದೆ.

ಸಂಜೆ ಹೊತ್ತು ಅಮ್ಮನ ಜೊತೆ ಕಾಲಕಳೆಯುವುದು ನನಗೆ ಬಹಳ ಇಷ್ಟವಾಗುತ್ತಿತ್ತು. ಆದರೆ ಅವರ ಮೇಲೆ ನನ್ನ ಹೆಂಡತಿ ಏನು ಜಾದು ಮಾಡಿದ್ದಳೊ ಏನೊ, ಅವರು ನಂದಿನಿಯನ್ನು ಹೊಗಳದೆ ಇರುತ್ತಿರಲಿಲ್ಲ. ನಾನು ಕೋಪದಿಂದ ಕೋಣೆಗೆ ಹೋಗಿ ಕುಳಿತುಬಿಡುತ್ತಿದ್ದೆ. ನಂದಿನಿ ರಾತ್ರಿ ಕೆಲಸ ಕಾರ್ಯ ಮುಗಿಯದ ಹೊರತು ರೂಮಿಗೆ ಬರುತ್ತಲೇ ಇರುತ್ತಿರಲಿಲ್ಲ.

ಎರಡು ದಿನಗಳಿಂದ ನನ್ನ ಆರೋಗ್ಯ ಸ್ವಲ್ಪ ಏರುಪೇರಾಗಿತ್ತು. ಮೈಕೈ ನೋವು ಸಿಕ್ಕಾಪಟ್ಟೆ ಕಾಡುತ್ತಿತ್ತು. ರಾತ್ರಿ ಪೇನ್‌ ಕಿಲ್ಲರ್ ತಗೊಂಡೆ. ಜ್ವರವೇನೋ ಕಡಿಮೆಯಾಯಿತು. ಆದರೆ ತಲೆ ನೋವು ವಿಪರೀತವಾಗಿತ್ತು. ರಾತ್ರಿ ನಿದ್ದೆ ಸರಿಯಾಗಿ ಆಗದ್ದರಿಂದ ದೇಹದಲ್ಲಿ ಶಕ್ತಿಯೇ ಇಲ್ಲದಂತೆ ಆಗಿಬಿಟ್ಟಿತ್ತು.

ನಾನು ಫ್ರೆಶ್‌ ಆಗಿ ಚಹಾ ಕುಡಿದು ಒಂದಿಷ್ಟು ತಿಂಡಿ ತಿಂದೆ. ನನ್ನ ಆರೋಗ್ಯ ಹದಗೆಟ್ಟಿರುವುದನ್ನು ನೋಡಿ ನಂದಿನಿ ನನ್ನ ತಲೆದಿಂಬಿನ ಬಳಿ ಕುಳಿತು ನನ್ನ ತಲೆಯನ್ನು ಸವರತೊಡಗಿದಳು. ಅವಳ ಆ ಸ್ಪರ್ಶ ನನಗೆ ಹಿತ ಎನಿಸತೊಡಗಿತ್ತು. ಅವಳ ಬಗೆಗಿನ ನನ್ನ ದೃಷ್ಟಿಕೋನ ಬದಲಾಗತೊಡಗಿತು. ಅವಳ ಚಮತ್ಕಾರಿಕ ಸ್ಪರ್ಶದಿಂದ ನನ್ನ ತಲೆನೋವು ಸಾಕಷ್ಟು ಕಡಿಮೆಯಾಯಿತು. ನನಗೆ ನಿದ್ರೆ ಕೂಡ ಬಂದುಬಿಟ್ಟಿತು. ಈ ಅವಧಿಯಲ್ಲಿ ನಂದಿನಿ ನನ್ನ ಬಗ್ಗೆ ಹೆಚ್ಚಿನ ಗಮನ ಕೊಟ್ಟಳು. ಅವಳ ಸ್ನೇಹಭರಿತ ಸಾಮೀಪ್ಯದಿಂದ ನನ್ನಲ್ಲಿ ಹೊಸ ಸಂಚಲನವೇ ಉಂಟಾಗಿತ್ತು. ಅವಳು ತಲ್ಲೀನಳಾಗಿ ಮನೆ ಕೆಲಸ ಮಾಡುವುದನ್ನು ನೋಡಿ ನನಗೆ ಖುಷಿ ಆಗುತ್ತಿತ್ತು.

ನನ್ನ ಬಗ್ಗೆ ಸಂಕೋಚ

ಅಂದು ಸಂಜೆ ನಾನು ಅನೇಕ ಗೆಳೆಯರಿಗೆ ಫೋನ್‌ ಮಾಡಿದ್ದೆ. ಅವರಲ್ಲಿ ಬಹಳಷ್ಟು ಜನರು ತಮ್ಮ ಪತ್ನಿಯರ ಬಗ್ಗೆ ದುಃಖಿತರಾಗಿದ್ದರು. ಆದಷ್ಟು ಬೇಗ ಲಾಕ್‌ ಡೌನ್‌ ಮುಗಿದುಹೋದರೆ ಸಾಕಪ್ಪ ಸಾಕು ಎನ್ನುವುದು ಅವರ ಮನೋಭಾವವಾಗಿತ್ತು. ಪತ್ನಿಯರಿಂದ ಅವರಿಗೆ ಬಹಳ ಕಷ್ಟ ಎನಿಸತೊಡಗಿತ್ತು. ಮನೆಯ ಕೆಲಸ ಕಾರ್ಯಗಳನ್ನು ಗಂಡಂದಿರ ಹೆಗಲಿಗೆ ಹಾಕಿ ಅವರು ಟಿವಿಯಲ್ಲಿ ಮಗ್ನರಾಗಿಬಿಡುತ್ತಿದ್ದರು. ಊಟ ತಿಂಡಿಯ ಸಮಯ ನಿಗದಿಯಿರಲಿಲ್ಲ. ಮಕ್ಕಳ ಬಗೆಗಂತೂ ಅವರು ಗಮನವನ್ನೇ ಕೊಡುತ್ತಿರಲಿಲ್ಲ.

ಅವರೊಂದಿಗೆ ಮಾತನಾಡುತ್ತ ನನ್ನ ಗಮನ ಆಕಸ್ಮಿಕವಾಗಿ ನಂದಿನಿ ಕಡೆ ಹೋಯಿತು. ಆಕೆ ಅಮ್ಮ ಮತ್ತು ಮಕ್ಕಳ ಜೊತೆ ಆಟ ಆಡುತ್ತ ಖುಷಿಯಿಂದ ನಗುತ್ತಿದ್ದಳು. ಅವರೆಲ್ಲ ಆಟವಾಡುತ್ತಿದ್ದುದು ರಾಜ, ಮಂತ್ರಿ, ಕಳ್ಳ ಹಾಗೂ ಸೈನಿಕನ ಆಟ. ನಂದಿನಿ ಒಂದು ಸಲ ರಾಜನಂತೆ ಎಲ್ಲರ ಮೇಲೆ ಅಧಿಕಾರ ಚಲಾಯಿಸಿದರೆ, ಇನ್ನೊಮ್ಮೆ ಮಂತ್ರಿಯಾಗಿ ಕಳ್ಳನನ್ನು ಉಪಾಯದಿಂದ ಹಿಡಿಯುತ್ತಿದ್ದಳು. ಸೈನಿಕನಾಗಿ ರಾಜನ ಆದೇಶ ಸಿಗುತ್ತಿದ್ದಂತೆ ಅದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಳು. ಕಳ್ಳನಾದಾಗ ಮಂತ್ರಿಗೆ ಚಾಣಾಕ್ಷತನದಿಂದ ತನ್ನನ್ನು ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದಳು. ಎಲ್ಲರೂ ಖುಷಿಯಿಂದ ಆಟ ಆಡುವುದನ್ನು ನೋಡಿ ನನಗೆ ಬಹಳ ಖುಷಿಯಾಯಿತು.

ಸ್ವಲ್ಪ ಹೊತ್ತಿನ ಬಳಿಕ ಮಕ್ಕಳು ಅಜ್ಜಿಗೆ ಕಥೆ ಹೇಳಲು ಒತ್ತಾಯಿಸಿದಾಗ ಅವರು ಕಥೆ ಹೇಳಲಾರಂಭಿಸಿದರು. ಆಗ ನಂದಿನಿ ಅಡುಗೆ ಕೋಣೆಗೆ ಹೋಗಿ ಚಹಾ ಮಾಡತೊಡಗಿದಳು. ನನ್ನ ಗಮನ ಈಗ ಅವಳ ಮೇಲೆಯೇ ಕೇಂದ್ರೀಕರಿಸಲ್ಪಟ್ಟಿತ್ತು. ಅವಳ ತಪ್ಪಾದರೂ ಏನಿತ್ತು? ಅವಳು ತನ್ನನ್ನು ತಾನು ಮರೆತು ಮುಗ್ಧ ಹೆಣ್ಣಿನ ಹಾಗೆ ಕುಟುಂಬ ಹಾಗೂ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಳು. ಆ ಸಮಯದಲ್ಲಿ ನಾನು ಅವಳಿಗೆ ಒಂದಿಷ್ಟು ಪ್ರೋತ್ಸಾಹ ಕೊಟ್ಟಿದ್ದರೆ, ಅವಳು ತನ್ನ ಬಗ್ಗೆಯೂ ಒಂದಿಷ್ಟು ಗಮನ ಕೊಡುತ್ತಿದ್ದಳು. ನನ್ನ ಅಮ್ಮ ಅನಾರೋಗ್ಯದಿಂದ ಇದ್ದಾಗಲೂ ಕೂಡ ಆಕೆ ಬಹಳ ಮುತುವರ್ಜಿ ವಹಿಸಿ ಆರೈಕೆ ಮಾಡುತ್ತಾಳೆ. ಇಂದು ಅವಳು ಹಳದಿ ಬಣ್ಣದ ಡ್ರೆಸ್‌ ತೊಟ್ಟಿದ್ದಳು. ಅವಳ ಡ್ರೆಸ್‌ ನೋಡಿ ನನಗೆ ಬಾಲ್ಯದಲ್ಲಿ ಮನೆ ಎದುರು ನೆಟ್ಟಿದ್ದ ಸೂರ್ಯಕಾಂತಿ ಹೂವಿನ ನೆನಪು ಬಂತು. ಅದು ಆಗ ನನಗೆ ಬಹಳ ಇಷ್ಟದ ಹೂವೆನಿಸಿತ್ತು. ದಿನವಿಡೀ ನಾನು ಅದರ ಬಗ್ಗೆಯೇ ಚರ್ಚೆ ಮಾಡುತ್ತಿದ್ದೆ. ಈಗ ನಾನು ಅದೇ ಉತ್ಸುಕತೆಯನ್ನು ಹೆಂಡತಿಯ ಬಗೆಗೂ ತೋರಿಸತೊಡಗಿದೆ. ಆ ಬಗ್ಗೆ ವಿಚಾರ ಮಾಡುತ್ತ ನನ್ನ ತುಟಿಯಲ್ಲಿ ನಗು ಕೂಡ ತೇಲಿಬಂತು.

ಎಲ್ಲರ ಜೊತೆಗೆ ಚಹಾ ಕುಡಿಯಬೇಕೆಂಬ ಅಭಿಲಾಷೆಯಿಂದ ನಾನು ಹಾಲ್ ‌ಗೆ ಹೋದೆ. ನನ್ನ ಕಳ್ಳ ದೃಷ್ಟಿ ಈಗಲೂ ಅವಳನ್ನೇ  ಹಿಂಬಾಲಿಸುತ್ತಿತ್ತು. ಆಡಂಬರ ರಹಿತ ಅವಳ ಸರಳ ಸೌಂದರ್ಯ ನನ್ನ ಮನಸ್ಸನ್ನು ತುಂಬಿಕೊಂಡಿತು. ಅವಳ ಆಂತರಿಕ ಸೌಂದರ್ಯವನ್ನು ಗಮನಿಸದೇ ಇರುವ ನನ್ನ ಬಗ್ಗೆ ನನಗೇ ಸಂಕೋಚವಾಯಿತು.

ಇಂದು ಆ ಎಲ್ಲ ತಪ್ಪುಗಳಿಗೆ ಕ್ಷಮೆ ಯಾಚಿಸಬೇಕೆಂದು ನಾನು ಎದ್ದು ನಿಂತೆ. ಮುಂದಿನ ಎಲ್ಲ ಕ್ಷಣಗಳನ್ನು ಅವಳೊಂದಿಗೆ ಕಳೆಯಬೇಕೆಂದು ಮನಸಾರೆ ನಿರ್ಧರಿಸಿದೆ. ಲಾಕ್‌ ಡೌನ್‌ ನಲ್ಲಿ ದೊರೆತ ರಜೆಯ ಕ್ಷಣಗಳು ನನ್ನ ಸಂಗಾತಿಯನ್ನು ನನಗೆ ವಾಪಸ್ ಕೊಟ್ಟವು. ನಾನು ಅವಳ ತುಟಿಯಲ್ಲಿ ಮುಗುಳ್ನಗೆ ವಾಪಸ್‌ ತರಲು ಆ ಕ್ಷಣದಲ್ಲಿಯೇ ನಿರ್ಧರಿಸಿಬಿಟ್ಟೆ.

ಚಂದ್ರಕಾಂತ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ