ಮೊದಲಿನಿಂದಲೂ ಕಷ್ಟದಲ್ಲಿಯೇ ಬೆಳೆದಿದ್ದ ರಶ್ಮಿ, ತಾನು ಬಯಸಿದ್ದನ್ನು ಪಡೆಯಲು ಆಗಲಿಲ್ಲ. ಮದುವೆಯಿಂದಲೂ ಸುಖ ಕಾಣಲಾರದೆ ಒಂಟಿಯಾದ ಅವಳು ಮುಂದೆ ತನ್ನ ಜೀವನವನ್ನು ಸಾರ್ಥಕಪಡಿಸಿಕೊಂಡದ್ದು ಹೇಗೆ…….?

ಉತ್ತಮ ಲೇಖಕರು, ಖ್ಯಾತ ವಿಮರ್ಶಕರು ಆದ ಶ್ರೀಮತಿ ರಶ್ಮಿಯರನ್ನು ಸನ್ಮಾನಿಸಲು ಸಂತೋಷವಾಗುತ್ತಿದೆ. ಇವರು ನಮ್ಮ ನಾಡಿನ ಹೆಮ್ಮೆಯ ಪುತ್ರಿ. ಇವರು ಕನ್ನಡ ನಾಡು ನುಡಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಇಂದು ಇವರಿಗೆ `ರಾಜ್ಯೋತ್ಸವ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುತ್ತಿದೆ. ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡಿಗರೆಲ್ಲರ ಪರವಾಗಿ ನಾನು ಇವರನ್ನು ಅಭಿನಂದಿಸುತ್ತೇನೆ. ಇವರ ಸೇವೆಯು ಕನ್ನಡ ನಾಡಿಗೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಲಭ್ಯವಾಗಲಿ ಎಂದು ಆಶಿಸುತ್ತೇನೆ, ಎಂದೆಲ್ಲಾ ಮಾನ್ಯ ಮುಖ್ಯ ಮಂತ್ರಿಗಳು ಮಾತನಾಡಿದ್ದರು.

ತನ್ನ ಮಗಳು ಒಂಟಿ ಬಾಳು ಬಾಳಬೇಕಾಯಿತಲ್ಲ ಎಂದು ಸದಾ ತಲ್ಲಣಿಸುವ ತಾಯಿ ಕೂಡ ಸಮಾರಂಭವನ್ನು ನೋಡಿ ಸಂಭ್ರಮಿಸಿದ್ದಳು. ನಿನ್ನಂಥ ಮಗಳನ್ನು ಪಡೆದದ್ದು ಸಾರ್ಥಕವಾಯಿತು, ಎಂದು ಅಪ್ಪ ಹೇಳಿದರು. ಅಭಿನಂದನೆ ತಿಳಿಸಿದ ಅಣ್ಣನಿಗೆ,  ನಾನೇನು ಸಾಧಿಸಿದ್ದರೂ ಅದು ನಿಮ್ಮೆಲ್ಲರ ಸಹಕಾರದಿಂದ ಎಂದು ವಿನಮ್ರವಾಗಿ ನುಡಿದಿದ್ದೆ.

ಸಮಾರಂಭದ ಗುಂಗಿನಲ್ಲಿಯೇ ಹಾಸಿಗೆ ಮೇಲುರುಳಿದವಳಿಗೆ ಗಂಟೆ ಹನ್ನೊಂದಾದರೂ ನಿದ್ರೆ ಬರತ್ತಿಲ್ಲ. ಎದ್ದು ಬಚ್ಚಲಿಗೆ ಹೋಗಿ ಬಂದು, ಒಂದು ಲೋಟ ನೀರು ಕುಡಿದು ಮಲಗಿದೆ. ಮನಸ್ಸು ಮೂವತ್ತಾರು ವರ್ಷಗಳ ಹಿಂದಕ್ಕೆ ಓಡಿತು. ಜುಲೈ ತಿಂಗಳ ಕೊನೆಯ ವಾರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಬಂದಿತ್ತು. ಮಾರ್ಚ್‌ ನಲ್ಲಿ ನಡೆದ ಪರೀಕ್ಷೆಯಲ್ಲಿ ಒಂದು ಸಬ್ಜೆಕ್ಟ್ ಫೇಲಾಗಿದ್ದರಿಂದ ಜುಲೈನಲ್ಲಿ ಮತ್ತೆ ಪರೀಕ್ಷೆ ಬರೆದಿದ್ದೆ. ಫಲಿತಾಂಶ ನೋಡಿ ಬಂದ ಅಣ್ಣ ಉತ್ತೀರ್ಣಳಾಗಿರುವುದಾಗಿ ತಿಳಿಸಿದ್ದ. ಆಗಲೇ ಡಿಗ್ರಿ ತರಗತಿಗಳು ಆರಂಭವಾಗಿದ್ದವು. ಪೂರಕ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳಿಗೆ ಮಾತ್ರ ದಾಖಲಾತಿಗೆ ಅವಕಾಶವಿತ್ತು. ನಾಳೆಯೇ ಹೋಗಿ ಕಾಲೇಜಿಗೆ ಸೇರಬೇಕು. ಸ್ನೇಹಿತೆಯರೆಲ್ಲ ಮಹಿಳಾ ಕಾಲೇಜಿಗೆ ಸೇರಿದ್ದಾರೆ. ನಾನು ಅಲ್ಲಿಯೇ ಸೇರಿಕೊಳ್ಳಬೇಕು ಎಂದೆಲ್ಲಾ ಕನಸುಗಳ ಸಾಮ್ರಾಜ್ಯದಲ್ಲಿ ಮುಳುಗಿದ್ದವಳಿಗೆ ನಿದ್ದೆ ಬಂದಿದ್ದೆ ಗೊತ್ತಾಗಿರಲಿಲ್ಲ.

ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ತಿಂಡಿ ತಿಂದು ಹಾಸನಕ್ಕೆ ಹೊರಟೆ. ಹಳೇ ಬಸ್‌ ನಿಲ್ದಾಣದಲ್ಲಿ ಇಳಿದಾಗ ಮೊದಲಿನ ಗಲಾಟೆ ಗಡಿಬಿಡಿ ಇಲ್ಲದೆ ಶಾಂತವಾಗಿದೆ ಎನಿಸಿತು. ಅಲ್ಲೊಂದು ಇಲ್ಲೊಂದು ಹಳ್ಳಿಗೆ ಹೋಗುವ ಬಸ್ಸುಗಳು ನಿಂತಿದ್ದವು. ಸರ್ರನೆ ಬಂದು ಜನರನ್ನು ಹತ್ತಿಸಿಕೊಂಡು ಭರ್ರನೆ ಸಾಗುವ ನವಯುವತಿಯರಂತೆ ಸಿಂಗಾರಗೊಂಡ ಹೊಸ ನಗರ ಸಾರಿಗೆ ಬಸ್ಸುಗಳು, ಟಿಕೆಟ್ ಕೊಡುವ ಮಿಷನ್‌ ಕೈಲಿ ಹಿಡಿದ ಕಂಡಕ್ಟರ್‌ ಗಳು, ಕಾಫಿ ಕುಡಿಯಲೆಂದೋ, ಸಿಗರೇಟ್‌ ಸೇದಲೆಂದೋ ಅಥವಾ ಅಡಕೆ ಪುಡಿ ಅಗಿಯಲೆಂದೋ ಬಸ್ಸಿನಿಂದ ಇಳಿದು ಹೋಗಿ ಬರುವ ಡ್ರೈವರ್‌ ಗಳು, ಬಸ್‌ ಸ್ಟಾಂಡ್‌ ನಿಂದ ಹೊರಬಂದರೆ ಅಲ್ಲಲ್ಲಿ ನಿಂತು ಬೀಡಿ ಸೇದುವವರು, ಬಸ್‌ ನಿಲ್ದಾಣದಲ್ಲಿ ಬೀಡಿ ಸೇದಿದರೆ ದಂಡ ವಿಧಿಸುತ್ತಾರೆಂದು ಬಸ್‌ ನಿಲ್ದಾಣದಿಂದ ಹೊರಗೆ ಬಂದು ಬೀಡಿ ಸೇದುವವರ ಬೀಡಿ ಹೊಗೆಯನ್ನು ದಾಟಿಕೊಂಡು ಮುಂದೆ ನಡೆದೆ. ಕ್ಯಾಂಟೀನ್‌ ಗಳಿಂದ ಬರುವ ಬಜ್ಜಿ, ಬೋಂಡಾಗಳ ಪರಿಮಳವನ್ನು ಆಸ್ವಾದಿಸುತ್ತಾ ಮಹಾವೀರ ವೃತ್ತದ ಬಳಿ ಬಂದೆ. ಶಾಲಾ ಕಾಲೇಜಿನ ಹಾಗೂ ಆಫೀಸಿನ ಸಮಯವಾದ್ದರಿಂದ ಬರ್ರೋ….. ಎಂದು ಸಾಗುವ ವಾಹನಗಳು.

ಕಾಲೇಜಿನ ದೊಡ್ಡ ಗೇಟಿನ ಬಳಿ ಬಂದಾಗ ಕಾಲೇಜು ಸುಣ್ಣ ಬಣ್ಣ ಬಳಿದುಕೊಂಡು ಕಂಗೊಳಿಸುತ್ತಿತ್ತು. ನಾವು ಪಿಯುಸಿ ಓದಿದ ಎರಡು ವರ್ಷಗಳು ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಸಿಮೆಂಟ್‌, ಮರಳು, ಧೂಳಿನಿಂದ ಕೂಡಿತ್ತು. ಈಗ ಎಷ್ಟು ಚೆನ್ನಾಗಿದೆ! ಇಡೀ ಕಟ್ಟಡವನ್ನು ಅವಲೋಕಿಸಿದೆ. ಏನೋ ಸಂತೋಷ, ಹೇಳಲಾರದ ಭಾವ…. ನಮ್ಮ ಕಾಲೇಜು, ನಮಗೆ ಪಾಠ ಹೇಳಿದ ಉಪನ್ಯಾಸಕರು, ಪ್ರಾಂಶುಪಾಲರು ಇನ್ನು ನನಗೆ ಈ ಕಾಲೇಜಿನ ಋಣ ಮುಗಿಯಿತು ಎಂದುಕೊಂಡಾಗ, ಒಂದು ಕ್ಷಣ ಭಾವುಕಳಾಗಿಬಿಟ್ಟೆ. ಮುಂದೆ ನಡೆದಾಗ `ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಎಂಬ ಬರಹ ಕಾಣಿಸಿತು. ಆದರೆ ಕಾಲೇಜು ಗಲಾಟೆ ಗದ್ದಲಗಳಿಲ್ಲದೆ ನಿಶ್ಶಬ್ದವಾಗಿ ಇರುವಂತೆ ಎನಿಸಿತು. ಗೇಟಿನಲ್ಲಿದ್ದ ಪೊಲೀಸ್‌ ಪೇದೆಯನ್ನು ಕೇಳಿದಾಗ, ಮೂರು ದಿನಗಳ ಕಾಲ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಪರೀಕ್ಷೆ ನಡೆಯುತ್ತಿರುವುದರಿಂದ ಕಾಲೇಜಿಗೆ ರಜೆ ಕೊಟ್ಟಿದ್ದಾರೆಂದು ತಿಳಿಯಿತು. ಸಪ್ಪೆ ಮೋರೆಯಿಂದ ಹಿಂತಿರುಗಿದೆ.

ಮನೆಗೆ ಹಿಂದಿರುಗುವಷ್ಟರಲ್ಲಿ ಅಪ್ಪ ಅಮ್ಮನ ನಡುವೆ ಏನೋ ಜಗಳ ನಡೆದಂತಿತ್ತು. ಅತ್ತು ಅತ್ತು ಕಣ್ಣು ಕೆಂಪಾಗಿದ್ದ ಅವ್ವ ಸೆರಗಿನಿಂದ ಮೂಗೊರೆಸಿಕೊಳ್ಳುತ್ತಿದ್ದಳು. ಅಪ್ಪ ಕಾಲೇಜಿಗೆ ಸೇರಿಕೊಂಡ್ಯಾ ಕೇಳಿದರು. ಇಲ್ಲ ಅಪ್ಪ ಕಾಲೇಜಿಗೆ ಮೂರು ದಿನ ರಜೆ ಕೊಟ್ಟಿದ್ದಾರೆ ಎಂದೆ. ಸರಿ ಬಿಡು ಒಳ್ಳೆದಾಯ್ತು ಕಾಲೇಜು ಬ್ಯಾಡ ಎಂತದ್ದು ಬ್ಯಾಡ ಅಂದರು. ತಲೆಬುಡ ತಿಳಿಯದೆ ಪೆಚ್ಚಾದರೂ ಅವರನ್ನು ಕೇಳುವ ಧೈರ್ಯ ಸಾಲದೆ ಸುಮ್ಮನಾದೆ. ಏಕೆಂದರೆ ಅಪ್ಪ ಯಾವಾಗಲೂ ಅಷ್ಟು ಕೋಪಗೊಂಡದ್ದನ್ನು ನಾನು ನೋಡಿರಲಿಲ್ಲ. ಅವ್ವನ ಹೆಸರಿನಲ್ಲಿ ಬ್ಯಾಂಕಿನಲ್ಲಿಟ್ಟಿದ್ದ ಹಣವನ್ನು ತನ್ನ ಅಣ್ಣನ ಮಗಳ ಮದುವೆಗೆಂದು ಅವ್ವ ಕೊಟ್ಟುಬಿಟ್ಟಿದ್ದಳು ಎಂದು ನಂತರ ತಿಳಿಯಿತು.

ಇದರಿಂದ ಅಪ್ಪನಿಗೆ ಕೋಪ ಬಂದಿತ್ತು. ಇದ್ದಕ್ಕಿದ್ದ ಹಾಗೆ ಚಿನ್ನದ ಬೆಲೆ ಏರಿದ್ದರಿಂದ ಚಿನ್ನ ಖರೀದಿಸಲು ಹಣ ಸಾಲದೆ ಮಾವ ಅವ್ವನಿಗೆ ಹಣ ಕೇಳಿದ್ದರು. ಮದುವೆ ಮುಗಿದ ನಂತರ, ಹೊಂದಿಸಿ ಬೇಗ ಹಿಂದಿರುಗಿಸುವುದಾಗಿ ಹೇಳಿದ್ದರಿಂದ ಅವ್ವ ಕೊಟ್ಟಿದ್ದಳು. ನಂತರ ಮನಸ್ಸು ತಡೆಯದೆ ಅಪ್ಪನಿಗೆ ಹೇಳಿದ್ದಳು. ಅದರ ಪರಿಣಾಮ ಇದು. ಗುಡುಗು, ಮಿಂಚು ಎಲ್ಲಾ ಕಳೆದು ಮಳೆ ಸುರಿದಾಗಿತ್ತು. ನಾನು ಬಂದಾಗ ಹನಿ ಮಾತ್ರ ಬೀಳ್ತಾ ಇತ್ತು.

ಕಾಲೇಜಿಗೆ ಸೇರಲು ಕಾಡಿ ಬೇಡಿ ಅಪ್ಪನನ್ನು ಒಪ್ಪಿಸಿ ಟಿ.ಸಿ ಪಡೆಯಲು ಕಾಲೇಜಿಗೆ ಹೋದೆ. ಅರ್ಜಿ ಕೊಟ್ಟು ಹೋಗಿ ಬರೆದು ಇಟ್ಟಿರ್ತೀನಿ. ನಾಳೆ ಬಂದು ತಗೊಂಡು ಹೋಗಿ ಎಂದರು ಗುಮಾಸ್ತರು. ಮೇಜಿನ ಮೇಲಿದ್ದ ನಾಮಫಲಕ ನೋಡಿದೆ. ಸುಂದರಮ್ಮ ಎಂ.ಎ.ಬಿ.ಇಡಿ., ಎಂದಿತ್ತು. ಹೆಸರು ಸುಂದರಮ್ಮ ಆದರೆ ಹೆಸರಿನಷ್ಟು ಮನಸ್ಸು ಸುಂದರವಾಗಿಲ್ಲ ಎನ್ನಿಸಿತು. ಆದರೇನು ಮಾಡುವುದು ಕಾರ್ಯವಾಸಿ ಕತ್ತೆ ಕಾಲು ಕಟ್ಟು ಎನ್ನುವ ಹಾಗೆ ಪ್ಲೀಸ್‌ ಮೇಡಮ್ ಕಾಲೇಜಿಗೆ ಸೇರಲು ಈಗಾಗಲೇ ತಡ ಆಗಿದೆ. ಈ ದಿನವೇ ಟಿ.ಸಿ ಕೊಟ್ಟರೆ ಉಪಕಾರವಾಗುತ್ತೆ ಅಂದೆ. ಎಷ್ಟೇ ಅಂಗಲಾಚಿ ಬೇಡಿಕೊಂಡರೂ ಅವರ ಮನಸ್ಸು ಕರಗಲೇ ಇಲ್ಲ. ಪಿ.ಯು ಬೋರ್ಡಿನವರು ಕಾಲೇಜಿನ ಯಾವುದೊ ಮಾಹಿತಿಯನ್ನು ಕೇಳಿದ್ದರಿಂದ ಅದನ್ನೆಲ್ಲ ಹುಡುಕಿ ಭರ್ತಿ ಮಾಡ್ತಾ ಇದ್ರು. ಮತ್ತೊಮ್ಮೆ ಮೇಡಮ್, ಅಂದೆ. ಲಾಸ್ಟ್ ಡೇಟಾದ್ರೆ ನಾನೇನಮ್ಮ ಮಾಡ್ಲಿ? ನೀವು ಮೊದಲೇ ಬಂದು ತಗೋಬೇಕಿತ್ತು. ರಿಸಲ್ಟ್ ಬಂದು ಒಂದು ವಾರವಾಯಿತು. ನೀವು ಮಾಡಿಕೊಳ್ಳುವ ತಪ್ಪಿಗೆ ನಾವು ಹೊಣೇನಾ? ನನ್ನ ಕೆಲಸ ಯಾರಿಗೆ ಹೇಳಲಿ ಇವತ್ತೆ ಇಷ್ಟೆಲ್ಲ ರೆಡಿ ಮಾಡಬೇಕು. ನಾಳೆ ಬಾ ಅಂದ್ನಲ್ಲ ದಯವಿಟ್ಟು ತೊಂದರೆ ಕೊಡಬೇಡ ಹೊರಡು ಎಂದು ತಮ್ಮ ಕೆಲಸದಲ್ಲಿ ಮುಳುಗಿಹೋದ್ರು.

ಸಪ್ಪೆ ಮೋರೆ ಹಾಕಿಕೊಂಡು ಹೊರಗೆ ಬಂದೆ. ಕನ್ನಡ ಉಪನ್ಯಾಸಕರು, `ಏನಮ್ಮ ರಶ್ಮಿ ಕಾಲೇಜಿಗೆ ಸೇರಿಕೊಂಡ್ಯಾ?’ ಎಂದು ವಿಚಾರಿಸಿದರು. ಟಿ.ಸಿ. ತಗೊಳ್ಳಕ್ಕೆ ಬಂದಿದ್ದೆ ಸಾರ್‌, ಮೇಡಮ್ ನಾಳೆ ಬಾ ಅಂದ್ರು. ಸಾರ್‌ ಈಗಲೇ ಲೇಟಾಗಿದೆ ಪ್ಲೀಸ್ ನೀವಾದ್ರೂ ಹೇಳಿ ಸಾರ್‌ ಎಂದು ಗೋಗರೆದೆ. ಅವರು, `ಮೇಡಮ್, ಒಂದು ಟಿ.ಸಿ ಯಂತೆ ಬರೆದು ಕೊಡಿ ಪಾಪ ಕಾಲೇಜಿಗೆ ಸೇರಬೇಕಂತೆ,’ ಎಂದರು.

jane-kyo-log-story2

ನನ್ನ ತಲೆ ಬಿಸಿ ನನಗೆ ಸಾರ್‌ ನನಗೆ ಸಹಾಯ ಮಾಡುವವರು ಯಾರೂ ಇಲ್ಲ. ನನ್ನ ಕೆಲಸವೇ ಬೇಕಾದಷ್ಟಿದೆ. ಒಂದೇ ದಿನದಲ್ಲಿ ಟಿ.ಸಿ ಕೊಡೋಕೆ ಆಗುತ್ತಾ ಸಾರ್‌ ನಾಳೆ ಬಾರಮ್ಮ ಎಂದು ಹೇಳಿದ್ದೇನೆ. ಒಂದ್ಸಾರಿ ಹೇಳಿದ್ರೆ ಅರ್ಥ ಆಗಲ್ವೇನಮ್ಮ ಅಂದಿದ್ದರಿಂದ ಅವರೂ ಸುಮ್ಮನೆ ಹೊರಟು ಹೋದರು.

ಮರುದಿನ ಬೇಗನೆ ಬಂದು ಟಿಸಿ ಪಡೆದು ಕಾಲೇಜಿಗೆ ಸೇರಲು ಹೋದರೆ, ನೋಡಮ್ಮ, ನಿನ್ನೇನೇ ಲಾಸ್ಟ್ ಡೇಟ್‌ ಆಯ್ತು. ನೀನು ಈಗ ಬಂದಿದ್ದೀಯಲ್ಲ ಎಂದುಬಿಟ್ಟರು. ನಿನ್ನೆ ಟಿ.ಸಿ ಸಿಗಲಿಲ್ಲ ಏನಾದ್ರೂ ಮಾಡಿ ಸೇರ್ಸಿಕೊಳ್ಳಿ ಎಂದು ಹೇಳುವ ವೇಳೆಗೆ ಕಣ್ಣಲ್ಲಿ ನೀರು ತುಂಬಿಕೊಂಡಿತು. ಏನ್ಮಾಡೋದಮ್ಮ ಅಳಬೇಡ ನೀನು ಬಂದಿದ್ದು ತಡ ಆಯ್ತು ಎಂದರು. ಬೇರೆ ದಾರಿ ಕಾಣದೆ ಮನೆಗೆ ಬಂದೆ. ಮುಂದಿನ ವರ್ಷವಾದರೂ ಕಾಲೇಜಿಗೆ ಸೇರಬೇಕೆಂದು ತೀರ್ಮಾನಿಸಿದೆ.

ಒಂದು ದಿನ ಅಪ್ಪನ ಪರಿಚಯದವರೊಬ್ಬರು ಪಕ್ಕದ ಮನೆ ಹುಡುಗೀನ ನೋಡೋಕೆ ಒಂದು ಹುಡುಗನನ್ನು ಕರೆತಂದಿದ್ದರು. ಅವನಿಗೆ ಆ ಹುಡುಗಿ ಇಷ್ಟ ಆಗಲಿಲ್ಲವಂತೆ. ಹಾಗೆ ನಮ್ಮ ಮನೆಗೆ ಬಂದ್ರು. ಅವನು ನನ್ನನ್ನು ನೋಡಿ ಒಪ್ಪಿಕೊಂಡಿದ್ದನಂತೆ. ಅಪ್ಪ ಈ ವರ್ಷ ಮದ್ವೆ ಮಾಡೋಕೆ ಆಗಲ್ಲ ಅಂದ್ರು ಕೇಳದೆ ಒತ್ತಾಯಿಸಿದ್ರು. `ವರದಕ್ಷಿಣೆ ಏನು ಬೇಡ. ನಿಮ್ಮ ಮಗಳಿಗೆ ನಿಮ್ಮ ಕೈಲಾದಷ್ಟು ಬಂಗಾರ ಹಾಕಿ. ಹುಡುಗ ಒಳ್ಳೆಯವನು, ಸರ್ಕಾರಿ ನೌಕರಿಯಲ್ಲಿದ್ದಾನೆ. ಇಂತಹ ಅವಕಾಶ ಸಿಕ್ಕಿದಾಗ ಇಲ್ಲ ಅನ್ನಬೇಡಿ……” ಎಂದು ಅಪ್ಪನನ್ನು ಒಪ್ಪಿಸಿದ್ದಾರೆ.

ನಾನು ಓದಬೇಕೆಂದು ಎಷ್ಟೇ ಗೋಗರೆದರು ಅಪ್ಪ ಮದುವೆ ಮಾಡಲು ನಿರ್ಧರಿಸಿಬಿಟ್ಟಿದ್ದರು. ಮಗನನ್ನು ಓದಿಸಿ ಕೆಲಸಕ್ಕೆ ಸೇರಿಸಿದ್ದ ಅವರಿಗೆ ಮಗಳನ್ನು ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವುದು ಮುಖ್ಯವಾಗಿತ್ತು. ಮದುವೆ ಬಗ್ಗೆ ಕನಸು ಕಾಣುವ ಮುನ್ನವೇ, ಮಾನಸಿಕ ಸಿದ್ಧತೆ ಮಾಡಿಕೊಳ್ಳುವ ಮೊದಲು ತಾಳಿ ಕಟ್ಟಿಸಿಕೊಂಡು ಸಂಸಾರ ಶುರು ಮಾಡಿದೆ. ಮೊದಮೊದಲು ಚೆನ್ನಾಗಿ ನಡೆದುಕೊಂಡ ಜಯಂತ ದಿನಕಳೆದಂತೆ ಸಣ್ಣ ಪುಟ್ಟ ಕಾರಣಗಳಿಗೂ ಸಿಡುಕಲಾರಂಭಿಸಿದ.

`ನೋಡು ರಶ್ಮಿ, ನಿನ್ನ ಗಂಡ ಯಾವುದೋ ಮದುವೆಯಾಗಿ ಗಂಡ ಬಿಟ್ಟಿರುವ ಹೆಂಗಸಿನ ಸಹವಾಸ ಮಾಡಿದ್ದಾನೆ. ನಾನು ಮೊದಲು ನಂಬಲಿಲ್ಲ. ಆದರೆ ಅದೇ ಸತ್ಯ. ಎಲ್ಲವನ್ನೂ ವಿಚಾರಿಸಿ ತಿಳಿದುಕೊಂಡಿದ್ದೇನೆ. ಅವನಿಗೆ ಒದ್ದು ಬುದ್ಧಿ ಕಲಿಸ್ತೀನಿ. ಅವ್ವನಿಗೂ ಹೇಳ್ತೀನಿ,’ ಎಂದು ಅಣ್ಣ ಕೂಗಾಡಿದ.

ನಾನು ಅಣ್ಣನ ಬಳಿ ಕುಳಿತು ಸಾಕಷ್ಟು ಅತ್ತೆ. ನಂತರ ಚೇತರಿಸಿಕೊಂಡು ಅದೆಲ್ಲಾ ಬೇಡ ಅಣ್ಣ. ಅವನು ಹೇಗಾದರೂ ಹಾಳಾಗಲಿ ಅವನ ಸಹವಾಸವೇ ಬೇಡ. ಇದನ್ನೆಲ್ಲಾ ಕೇಳಿಯೇ ನನಗೆ ಅವನ ಬಗ್ಗೆ ಅಸಹ್ಯ ಮೂಡುತ್ತಿದೆ. ನಾನು ಅವನನ್ನು ಎಷ್ಟು ನಂಬಿದ್ದೆ. ಆದರೆ ಅವನಿಗೆ ಅದನ್ನು ಅರ್ಥ ಮಾಡಿಕೊಳ್ಳುವ ಯೋಗ್ಯತೆ ಇಲ್ಲ.

ನನ್ನ ಗ್ರಹಚಾರ ನೋಡು ಇವರು ಒಂದು ಬಸ್ಸು ಪಂಕ್ಚರ್‌ ಆಗಿದ್ದರಿಂದ ಸೆಕೆಂಡ್‌ ಪಿ.ಯು.ಸಿ ಪರೀಕ್ಷೆ ಬರೆಯದೆ ಒಂದು ಸಬ್ಜೆಕ್ಟ್ ಫೇಲ್ ‌ಆಯ್ತು. ನಂತರ ಸಪ್ಲಿಮೆಂಟರಿ ಪರೀಕ್ಷೆ ಫಲಿತಾಂಶ ಬಂದಿದ್ದು ತಿಳಿಯದೆ ಟಿ.ಸಿ ತೆಗೆದುಕೊಳ್ಳುವುದು ತಡವಾಗಿದ್ದರಿಂದ ಡಿಗ್ರಿಗೆ ಸೇರದ ಹಾಗಾಯ್ತು. ಅದೇ ಸಮಯಕ್ಕೆ ಬಂದ ಗಂಡು ಒಪ್ಪಿಕೊಂಡನೆಂದು ಕಾರಣಕ್ಕೆ ಈ ಮದುವೆ ಆಯಿತು. ಉದ್ದಕ್ಕೂ ನನ್ನದಲ್ಲದ ತಪ್ಪಿಗೆ ನನಗೆ ಶಿಕ್ಷೆಯಾಗ್ತಿದೆಯಲ್ಲಣ್ಣ. ಪ್ಲೀಸ್‌ ನನ್ನನ್ನು ಮನೆಗೆ ಕರ್ಕೊಂಡು ಹೋಗು ಎಂದು ಅತ್ತಾಗ ಅಳಬೇಡ ಎಂದು ಸಮಾಧಾನಿಸಿ ಮನೆಗೆ ಕರೆದೊಯ್ದಿದ್ದ.

ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ಪ್ರತಿದಿನ ಊರಿನಿಂದ ಹಾಸನಕ್ಕೆ ಬಂದು ಹೋಗುತ್ತಿದ್ದ. ಇದಾದ ನಂತರ ಅವನ ಪರಿಚಯದವರ ಒಂದು ಪುಟ್ಟ ಮನೆಯೊಂದನ್ನು ಬಾಡಿಗೆಗೆ ನೋಡಿದ ನಾವಿಬ್ಬರು ಅಲ್ಲಿರುವುದೆಂದು ತೀರ್ಮಾನವಾಯಿತು. ನಾನು ಊರಿಗೆ ಬಂದ ಮರುದಿನವೇ ಜಯಂತ್‌ ನನ್ನನ್ನು ಕರೆಯಲು ಬಂದು ನಿರಾಸೆಯಿಂದ ಹಿಂದಿರುಗಿದ್ದ. ಒಂದು ವಾರ ಇಲ್ಲೇ ಇರು, ನಂತರ ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಹೋಗಿದ್ದ. ಈಗ ನಾವು ಹಾಸನದಲ್ಲಿ ಮನೆ ಮಾಡಿದ್ದು ತಿಳಿದು ಅಲ್ಲಿಗೆ ಕರೆಯಲು  ಬಂದ. ಮನೆಗೆ ಹೋಗೋಣ ಬಾ ಎಂದು ಕರೆದ. ನನಗೆ ವಿಪರೀತ ಕೋಪ ಬಂತು.

“ನನ್ನನ್ನು ಏಕೆ ಕರೀತಾ ಇದ್ದೀ…. ಇದ್ದಾಳಲ್ಲಾ ಅವಳು ಅಲ್ಲಿಗೆ ಹೋಗಿ ಇರು,’ ಎಂದು ಕೂಗಾಡಿದ್ದೆ. ಆಗ ಅವನಿಗೆ ನಮಗೆ ವಿಷಯ ತಿಳಿದಿದೆಯೆಂದು ಗೊತ್ತಾಯಿತು. ಆ ದಿನ ಸುಮ್ಮನೆ ಹಿಂದಿರುಗಿದನು ಮತ್ತೆ ಮತ್ತೆ ಅಣ್ಣನಿಲ್ಲದ ಸಮಯದಲ್ಲಿ ಬಂದು ಕರೆಯಲಾರಂಭಿಸಿದ. ನಾನು ಬರುವುದಿಲ್ಲವೆಂದು ಇನ್ನು ಮುಂದೆ ನೀನು ಇಲ್ಲಿಗೆ ಬರುವುದು ಬೇಡವೆಂದು ಖಡಾಖಂಡಿತವಾಗಿ ಹೇಳಿ ಕಳಿಸಿದೆ.

ಖಾಸಗಿಯಾಗಿ ಬಿ.ಎ ಪರೀಕ್ಷೆ ಕಟ್ಟಿದೆ. ಹಳೆಯ ಸ್ನೇಹಿತೆಯರ ಬಳಿ ನೋಟ್ಸ್ ಮತ್ತು ಇತರ ಮಾಹಿತಿಗಳನ್ನು ಪಡೆದುಕೊಂಡೆ. ಗುರುಗಳ ಸಹಾಯ ಪಡೆದು ಹಗಲು ರಾತ್ರಿ ಕಷ್ಟಪಟ್ಟು ಓದಲಾರಂಭಿಸಿದೆ.

ನಾವಿದ್ದ ಮನೆಯ ಮಾಲೀಕರಿಗೆ ಮನೆಯ ಬಳಿ ಇನ್ನೂ ಎರಡು ಸೈಟುಗಳಿದ್ದವು. ಅವರ ಮಗ ಸೊಸೆ ಬೇರೆ ಊರಿನಲ್ಲಿ ಉದ್ಯೋಗದಲ್ಲಿದ್ದರು. ನಾನು ಅವರನ್ನು ಪ್ರೀತಿಯಿಂದ ಕಾಣುತ್ತಿದ್ದುರಿಂದ ಅವರು ನನ್ನನ್ನು ಬಹಳವಾಗಿ ತಮ್ಮ ಮಗಳಂತೆಯೇ ಪ್ರೀತಿಸುತ್ತಿದ್ದರು. ಒಂದು ದಿನ ನಾನು ಅಣ್ಣನ ಖಾಲಿ ಸೈಟುಗಳಲ್ಲಿ ಗುಲಾಬಿ ಗಿಡಗಳನ್ನು ಬೆಳೆಸಬಹುದೆಂದು ಯೋಚಿಸಿ ಮನೆಯ ಮಾಲೀಕರ ಒಪ್ಪಿಗೆ ಕೇಳಿದೆ. ಅವರು ನಮ್ಮದೇನು ಅಭ್ಯಂತರವಿಲ್ಲ ಬೆಳೆಸಿ. ಆದರೆ ನಮ್ಮ ಮಗ ಮತ್ತು ಸೊಸೆಯನ್ನು ಒಂದು ಮಾತು ಕೇಳೋಣ ಎಂದರು. ಅವರು ಸಹ ಸಂತೋಷವಾಗಿಯೇ ಒಪ್ಪಿಕೊಂಡರು. ಆದರೆ ಕೊನೆಗೆ ಎಲ್ಲವನ್ನೂ ಕೀಳಿಸಿ ಸ್ವಚ್ಛ ಮಾಡಿಸಿಕೊಡಬೇಕೆಂಬ ಸಣ್ಣ ಕಂಡೀಷನ್‌ ಹಾಕಿದರು. ಅವರಿಗೆ ನಾವಿಲ್ಲದ ಸಂದರ್ಭದಲ್ಲಿ ತಮ್ಮ ತಾಯಿ ತಂದೆಯರಿಗೆ ಸಹಕಾರಿಯಾಗಿದ್ದೇನೆಂಬ ಅಭಿಮಾನ ಇತ್ತು. ಹೀಗಾಗಿ ಗುಲಾಬಿ ಗಿಡಗಳನ್ನು ಬೆಳೆಯುವುದೆಂದು ನಿರ್ಧಾರವಾಯಿತು.

ಸೈಟ್‌ ನ್ನು ಉತ್ತು ಹದ ಮಾಡಿ ಕೃಷಿ ಇಲಾಖೆಯ ನೆರವಿನಿಂದ ಗುಲಾಬಿ ಗಿಡಗಳನ್ನು ನೆಟ್ಟದ್ದಾಯಿತು. ಔಷಧಿ, ಗೊಬ್ಬರಗಳ ಬಳಕೆಯ ಬಗ್ಗೆ ಅಣ್ಣ ಅವರ ಇಲಾಖೆಯವರನ್ನು ಕರೆತಂದು ಸಹಾಯ ಮಾಡುತ್ತಿದ್ದ. ನೀರು ಹಾಕುವುದು, ಕಳೆ ತೆಗೆಯುವುದು ಮೊದಲಾದ ಕೆಲಸಗಳನ್ನು ನಾನೇ ಮಾಡುತ್ತಿದ್ದೆ. ಬಿಡುವಿನ ವೇಳೆ ಅಣ್ಣನೂ ನೋಡಿಕೊಳ್ಳುತ್ತಿದ್ದುದರಿಂದ ಹೆಚ್ಚು ಖರ್ಚೇನೂ ಬರುತ್ತಿರಲಿಲ್ಲ. ಒಳ್ಳೆಯ ಬೆಳೆ ಬಂದು ಉತ್ತಮ ಬೆಲೆಯೂ ಸಿಕ್ಕಿತು.

ಈ ನಡುವೆ ಜಯಂತ್‌ ಪದೇ ಪದೇ ಬಂದು ಕರೆಯಲಾರಂಭಿಸಿದ. ಅವರ ತಾಯಿ ತಂದೆಯನ್ನು ಕರೆತಂದು ಹೇಳಿಸಿದ. ಅವರ ಮನೆಯವರಿಗೂ ಈ ವಿಷಯ ಮೊದಲೇ ಗೊತ್ತಿದ್ದರೂ ಮದುವೆಯಾದ ನಂತರ ಸರಿ ಹೋಗುತ್ತಾನೆಂಬ ನಂಬಿಕೆಯಿಂದ ಮದುವೆ ಮಾಡಿದ್ದರು. ನನಗೆ ಮನಸ್ಸು ಮುರಿದು ಹೋಗಿತ್ತು. ಏಕೆಂದರೆ ಅಣ್ಣ ಆಗಾಗ ಬಂದು ಬೇಜಾರಿನಿಂದ ಹೇಳುತ್ತಿದ್ದ. ನಿನ್ನ ಗಂಡ ಯಾವಾಗಲೂ ಆ ಹೆಂಗಸಿನ ಮನೆಯಲ್ಲಿಯೇ ಇರುತ್ತಾನಂತೆ ಎಂದು. ಅದನ್ನು ಸಹಿಸಿಕೊಳ್ಳಲು ನನ್ನ ಮನಸ್ಸು ತಯಾರಿರಲಿಲ್ಲ.

ಉತ್ತಮ ಅಂಕಗಳೊಂದಿಗೆ ಬಿ.ಎ ಪರೀಕ್ಷೆ ಪಾಸಾಯಿತು. ಎಂ.ಎಗೆ ಸೇರುತ್ತೇನೆ ಎಂದಾಗ ಅಣ್ಣ ಪ್ರೋತ್ಸಾಹಿಸಿದ. ಮೊದಲಿನಿಂದಲೂ ಓದು ಅಭ್ಯಾಸವಿದ್ದುದರಿಂದ ಸಣ್ಣ ಪುಟ್ಟ ಲೇಖನಗಳನ್ನು ಬರೆಯಲಾರಂಭಿಸಿದೆ. ಅವುಗಳು ಪತ್ರಿಕೆಗಳಲ್ಲೂ ಪ್ರಕಟವಾದವು.

ಕನ್ನಡ ಎಂ.ಎ ಮುಗಿಸಿ ಬಿ.ಇಡಿ ಕೋರ್ಸಿಗೆ ಸೇರಿಕೊಂಡೆ. ಬಿ.ಇಡಿ ರಿಸಲ್ಟ್ ಬಂದ ಕೆಲವೇ ದಿನಗಳಲ್ಲಿ ಪಿ.ಯು ಕಾಲೇಜಿಗೆ ಉಪನ್ಯಾಸಕರ ಹುದ್ದೆಗೆ ಕಾಲ್ ಮಾಡಿದ್ದರು. ಅರ್ಜಿ ಸಲ್ಲಿಸಿದೆ. ಪರೀಕ್ಷೆ ಬರೆದು ಆಯ್ಕೆಯೂ ಆದೆ. ಅಲ್ಲಿ ಕೆಲಸ ಮಾಡುತ್ತಲೇ ಡಿಗ್ರಿ ಕಾಲೇಜಿಗೂ ಪ್ರಯತ್ನಿಸಿ ಸಫಲಳಾದೆ. ಮೈಸೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಕೆಲಸ ಸಿಕ್ಕಿ ಮೈಸೂರಿನಲ್ಲಿ ವರ್ಕಿಂಗ್‌ ವುಮನ್ಸ್  ಹಾಸ್ಟೆಲ್ ‌ನಲ್ಲಿ ಉಳಿದುಕೊಂಡೆ. ಅಣ್ಣನಿಗೂ ವಿವಾಹವಾಯಿತು.

ನಾನು ನನ್ನ ಕೆಲಸದ ಜೊತೆಗೆ ಬರೆಯುವ ಹವ್ಯಾಸವನ್ನು ಮುಂದುವರಿಸಿದೆ. ಉಪನ್ಯಾಸಕ ವೃತ್ತಿಯ ಜೊತೆಗೆ ಬರವಣಿಗೆ ಪ್ರವೃತ್ತಿಯಾಯಿತು. ಮೈಸೂರಿನಲ್ಲಿಯೇ ಇದ್ದುದರಿಂದ ಅನೇಕ ದೊಡ್ಡ ದೊಡ್ಡ ಸಾಹಿತಿಗಳು ಕವಿಗಳ ಪರಿಚಯ ಆಯಿತು. ಸಮಯ ಸಿಕ್ಕಾಗೆಲ್ಲಾ ಅವರುಗಳ ಮಾರ್ಗದರ್ಶನ ಪಡೆಯುತ್ತಿದ್ದೆವು. ಬರೆದು ಬರೆದು ಸಾಕಷ್ಟು ಹೆಸರು ಬಂತು. ಈಗ ರಾಜ್ಯೋತ್ಸವ ಪ್ರಶಸ್ತಿಯು ಬಂದಿದೆ. ಮನಸ್ಸು ಧನ್ಯತಾ ಭಾವದಿಂದ ಕೂಡಿದೆ. ನಾನು ಎಂದಿಗೂ ಒಂಟಿಯಲ್ಲ. ಇಡೀ ಕನ್ನಡ ನಾಡಿನ ಜನ ನನ್ನ ಲೇಖನಗಳನ್ನು ಓದುವ ಮೂಲಕ ನನ್ನೊಟ್ಟಿಗಿದ್ದಾರೆ. ನನ್ನಿಂದ ಮಾರ್ಗದರ್ಶನ ಪಡೆಯುವ ನೆಚ್ಚಿನ ಶಿಷ್ಯ ವರ್ಗವಿದೆ. ಜೀವನದಲ್ಲಿ ಇನ್ನೇನು ಬೇಕು…..ಹಿಂದಿನದನ್ನೆಲ್ಲಾ ಮೆಲುಕು ಹಾಕುತ್ತಾ ಹಾಗೆ ನಿದ್ದೆಯ ಮಂಪರಿಗೆ ಜಾರಿದೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ