ಮೊದಲಿನಿಂದ ಅತಿ ಮುದ್ದಿಗೆ ಸಿಲುಕಿ ಹಠಮಾರಿಯಾದ ವಾಣಿ, ಒಪ್ಪವಾಗಿದ್ದ ತನ್ನ ಅಣ್ಣಅತ್ತಿಗೆಯರ ಸಂಸಾರದಲ್ಲಿ ಧೂಮಕೇತುವಾಗಿದ್ದಳು. ಅವಳ ತಾಯಿಯ ಯಾವ ನಿರ್ಧಾರ ವಾಣಿಯನ್ನು ಬದಲಾಯಿಸಿತು……..?
ಸುಮಾ, ಎಂದಿಗಿಂತಲೂ ಅಂದು ಎರಡು ಗಂಟೆ ಬೇಗನೆ ಎದ್ದು, ಮನೆಗೆಲಸ ಪೂರೈಸಿ, ಅಡುಗೆ ಮಾಡಿ, ಒಂದಿಷ್ಟು ಲಾಡು ಹಾಗೂ ಅವಲಕ್ಕಿ ಚೂಡಾ ಮುಂತಾದವುಗಳನ್ನು ತುಂಬಾ ಖುಷಿ ಖುಷಿಯಿಂದ ರೆಡಿ ಮಾಡುತ್ತಿದ್ದಳು. ಕಾರಣ ಇಷ್ಟೇ, ಬರೋಬ್ಬರಿ ಐದು ವರ್ಷಗಳ ಅವಧಿ ನಂತರ ಆಕೆ ತನ್ನ ತವರು ಮನೆಗೆ ಹೊರಟು ನಿಂತಿದ್ದಳು. ಮುಖ್ಯವಾಗಿ ಅದಕ್ಕೆ ಅವಳ ಅತ್ತೆಯ ಹಾಗೂ ಪತಿಯ ಸಮ್ಮತಿ ದೊರಕಿತ್ತು.
ಹದಿನೈದು ದಿನಗಳ ತನ್ನ ಅನುಪಸ್ಥಿತಿಯಲ್ಲಿ ಅತ್ತೆಗೆ ಹಾಗೂ ಪತಿಗೆ ಯಾವ ರೀತಿಯ ತೊಂದರೆ ಆಗದಿರಲಿ ಎಂದು ಕಳೆದ ಎರಡು ಮೂರು ದಿನಗಳಿಂದ ಆಕೆ ಮನೆಗೆ ಬೇಕಾಗುವ ಸಾರಿನ ಪುಡಿ, ಸಾಂಬಾರ್ ಪುಡಿ, ಚಟ್ನಿ ಪುಡಿ ಅಲ್ಲದೇ ಗೊಜ್ಜು, ಉಪ್ಪಿನಕಾಯಿ ಎಲ್ಲವನ್ನೂ ಉಮೇದಿನಿಂದ ರೆಡಿ ಮಾಡಿ, ಆಯಾ ಡಬ್ಬಿಗಳಿಗೆ ತುಂಬಿ ಇಟ್ಟಿದ್ದಲ್ಲದೇ, ಅದನ್ನು ಅತ್ತೆಯ ಗಮನಕ್ಕೆ ತರಲು ಮರೆತಿರಲಿಲ್ಲ.
ಪೂರ್ವ ಯೋಜನೆಯಂತೆ ಸುಮಾಳ ಪತಿ ಅರುಣ್ ಆಕೆಗೆ ರೈಲು ಟಿಕೆಟ್ ಕೂಡ ರಿಸರ್ವ್ ಮಾಡಿಸಿದ್ದ. ಆ ದಿನ ಮಧ್ಯಾಹ್ನ ಸುಮಾ, ತನ್ನ ಬಟ್ಟೆ ಬರೆ ಇತ್ಯಾದಿಗಳನ್ನು ಸೂಟ್ ಕೇಸ್ ನೊಳಗೆ ನೀಟಾಗಿ ಜೋಡಿಸಿಕೊಳ್ಳುತ್ತಿದ್ದಾಗ, ಆಕೆಯ ನಾದಿನಿ ವಾಣಿಯ ಆಗಮನವಾಯಿತು. ಅವಳನ್ನು ನೋಡುತ್ತಿದ್ದಂತೆ ಸುಮಾಳ ಮನದಲ್ಲಿ, `ಆಯ್ತು….. ನಾ ಇನ್ನು ನನ್ನ ತವರಿಗೆ ಹೋದಹಾಗೆ ಅನ್ಸುತ್ತೆ,’ ಎನ್ನುವ ಸಂಶಯದ ಅಲೆಗಳು ಒಂದರ ಹಿಂದೆ ಒಂದರಂತೆ ಏಳಲಾರಂಭಿಸಿದವು.
ಈ ಎಂಟು ವರ್ಷಗಳ ಹಿಂದೆ, ಸುಮಾ ಅರುಣ್ ನ ಕೈ ಹಿಡಿದು ಈ ಮನೆಗೆ ಬಂದಾಗ ಅವಳ ಏಕೈಕ ನಾದಿನಿ ವಾಣಿ, ಕಾಲೇಜಿನ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮನೆಯಲ್ಲಿ ಅವಳು ಎಲ್ಲರಿಗಿಂತ ಕಿರಿಯವಳಾಗಿದ್ದರಿಂದ ಅವಳಿಗೆ ಮುದ್ದು ತುಸು ಹೆಚ್ಚಾಗಿಯೇ ಇತ್ತು. ಹೀಗಾಗಿ ಅದನ್ನೇ ಬಂಡವಾಳಾಗಿಸಿಕೊಂಡ, ವಾಣಿ ಎಲ್ಲರ ಮೇಲೂ ವಿನಾಕಾರಣ ರೇಗಾಡುವುದು, ಸಿಡುಕಾಡುವುದು, ಹಕ್ಕು ಚಲಾಯಿಸುವುದು, ಎದುರು ವಾದಿಸುವುದು ಮುಂತಾದವುಗಳನ್ನು ಎಗ್ಗಿಲ್ಲದೇ ಮಾಡುತ್ತಿದ್ದಳು.
ಹೊಸದಾಗಿ ಮದುವೆ ಆಗಿ ಬಂದಿದ್ದ ಸುಮಾಳಿಗಂತೂ ಈ ವಾಣಿಯ ನಡೆ ನುಡಿಯ ಬಗ್ಗೆ ಒಂದೇ ವಾರದಲ್ಲಿ ತಲೆ ಚಿಟ್ಟು ಹಿಡಿಯುವಂತಾಗಿತ್ತು. ಮನೆಯಲ್ಲಿ ಪತಿಯಾಗಲಿ, ಅತ್ತೆಯಾಗಲಿ ಅವಳಿಗೆ ತಿಳಿಹೇಳುವ ಮಾತೇ ಇಲ್ಲವಾದಾಗ, ಇನ್ನೂ ತಾನು ಯಾವ ಧೈರ್ಯದಿಂದ ತಾನೆ ಹೇಳಿಯಾಳು? ಹೀಗಾಗಿ ಎಲ್ಲವನ್ನೂ ಸಹಿಸಿಕೊಂಡು ಇರತೊಡಗಿದಳು. ಆದರೆ ಬರಬರುತ್ತಾ ಇದು ಅತಿ ಆದಾಗ ಆಕೆಗೆ ಒಂದೊಂದು ದಿನ ಒಂದು ಯುಗ ಕಳೆದಂತೆ ಭಾಸವಾಗತೊಡಗಿತು.
ವಾಣಿಯ ಈ ಗುಣ ಕಂಡ ಅವಳ ಅಮ್ಮನಾಗಲಿ, ಅಣ್ಣನಾದ ಅರುಣ್ ಆಗಲಿ ಪ್ರತಿಯಾಗಿ ಮಾತನಾಡಲು ಹಿಂದೇಟು ಹಾಕುತ್ತಿದ್ದರು. ಪ್ರಾಯಶಃ ಅವರ ಮನದಲ್ಲಿ… `ಇವಳು ಇನ್ನೆಷ್ಟು ದಿನ ಈ ಮನೆಯಲ್ಲಿದ್ದಾಳು…? ಅಬ್ಬಬ್ಬಾ ಅಂದರೆ ಒಂದೆರಡು ವರ್ಷ. ಆನಂತರ ಮದುವೆಯಾಗಿ ಗಂಡನ ಮನೆಗೆ ಸೇರಿದ ಮೇಲೆ, ಅಲ್ಲಿ ಈ ರೀತಿ ವರ್ತಿಸಾಗಲ್ಲ,’ ಎನ್ನುವುದು ಇತ್ತೇನೋ…? ಇಂತಹ ದಿನಗಳಲ್ಲಿ ವಾಣಿಗೆ ಕಂಕಣ ಬಲ ಕೂಡಿ ಬಂದಿದ್ದರಿಂದ ಅರುಣ್ ತನ್ನ ಶಕ್ತ್ಯಾನುಸಾರವಾಗಿ ಅವಳಿಗೆ ಧಾರೆ ಎರೆದು ಕೊಟ್ಟಿದ್ದ. ವಾಣಿಯ ಪತಿ ಮನೆ ಅದೇ ಊರಲ್ಲಿತ್ತು. ಅವಳ ಪತಿ ತುಂಬಾ ಭೋಳೆ ಸ್ವಭಾವದವನಾಗಿದ್ದ. ಹೀಗಾಗಿ ವಾಣಿಗೆ ನೆನಪಾದಗೆಲ್ಲ ತಾಯಿಯ ಮನೆಗೆ ಬಂದವಳು ಎರಡು ಮೂರು ದಿನವಾದರೂ ಇರುತ್ತಿದ್ದಳು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅವಳ ಪತಿ ಆರಂಭದಲ್ಲಿ ಆಕ್ಷೇಪಣೆ ಮಾಡಿದಾಗೆಲ್ಲ ವಾಣಿ, ಅತ್ತೂ ಕರೆದು ಆತನ ಮನಸ್ಸನ್ನು ಮೆಂಡ್ ಮಾಡಿ ಬಿಡುತ್ತಿದ್ದಳು. ಮುಂದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಆತ ಮೌನವಾಗಿರುವುದನ್ನೇ ಬಂಡವಾಳ ಮಾಡಿಕೊಂಡ ವಾಣಿ, ಯಾವ ಮುಲಾಜಿಲ್ಲದೆ ಅಮ್ಮನ ಮನೆಗೆ ಬಂದು ಹೋಗುವುದನ್ನು ರೂಢಿಸಿಕೊಂಡಿದ್ದಳು.
ಇತ್ತ ಅರುಣ್ ನ ಮನೆಯವರಿಗೆ ಅವಳು ಮದುವೆಯಾಗಿ ಹೋದ ನಂತರ ತಾವು ಕೊಂಚ ನೆಮ್ಮದಿಯಿಂದ ಇರಬಹುದೆಂದು ಹಾಕಿಕೊಂಡಿದ್ದ ಲೆಕ್ಕಾಚಾರವೆಲ್ಲಾ ಉಲ್ಟಾ ಆಗಿತ್ತು. ಎರಡೇ ದಿನ ಅಂತ ತವರಿಗೆ ಬಂದಿದ್ದರೂ ಅವಳು ತನ್ನ ಹಳೆ ಚಾಳಿ ಬಿಟ್ಟಿರಲಿಲ್ಲ. ಅಂತಹ ದಿನಗಳಲ್ಲಿ ಒಂದು ಬಾರಿ, ಸುಮಾ ಅತಿ ಆಸೆಯಿಂದ ತನ್ನ ತಮ್ಮನ ಮದುವೆಗೆ ಹೊರಟು ನಿಂತ ಸಂದರ್ಭದಲ್ಲಿ ಈ ವಾಣಿ ತನ್ನ ಕುತಂತ್ರ ಬುದ್ಧಿ ಉಪಯೋಗಿಸಿ, ಆಕೆಯನ್ನು ಹೋಗದಂತೆ ತಡೆದಿದ್ದಳು. ಆಗಲಂತೂ ಸುಮಾಳಿಗೆ ಮೈಯೆಲ್ಲಾ ಪರಚಿಕೊಳ್ಳುವಂತಾಗಿ ಎರಡು ಮೂರು ದಿನ ಪತಿ ಎದುರು ಕಂಬನಿ ಹರಿಸಿದ್ದೇ ಆಗಿತ್ತು.
ಈ ತರಹದ ಸ್ವಭಾವದ ನಾದಿನಿ, ತಾನು ತವರಿಗೆ ಹೊರಟ ದಿನದಂದೇ ಬಂದಿರುವುದನ್ನು ಕಂಡ ಸುಮಾಳ ಮನದಲ್ಲಿ, `ಇನಳು ಇನ್ನೇನು ಮಸಲತ್ತು ಮಾಡುವಳೋ…’ ಎನ್ನುವ ಆತಂಕ ಸಹಜವಾಗಿ ಶುರುವಾಗಿತ್ತು. ಆದರೆ ಆಕೆ ಸಹನಾಮೂರ್ತಿಯಾಗಿದ್ದರಿಂದ ಯಾವುದನ್ನೂ ತೋರ್ಪಡಿಸಿರಲಿಲ್ಲ. ಆ ದಿನ ಎಲ್ಲರೂ ಸೇರಿ ಊಟ ಮಾಡಿದ ನಂತರ, ಸುಮಾಳ ಅತ್ತೆ, “ಎಲ್ಲಾ ಪ್ಯಾಕ್ ಮಾಡಿಕೊಂಡೆಯಾ…..? ಹೋದ ಮೇಲೆ ಫೋನ್ ಮಾಡು,” ಎಂದು ಕಕ್ಕುಲಾತಿಯಿಂದ ಹೇಳಿ ಮುಗಿಸುವಷ್ಟರಲ್ಲಿ ಇಬ್ಬರ ನಡುವೆ ನುಸುಳಿದ ವಾಣಿ, “ಇದೇನು ಅತ್ತಿಗೆ, ನೀವು ಹೋಗೋದು ನನಗೆ ಹೇಳಲೇ ಇಲ್ಲಾ…. ನೀವು ಅಷ್ಟು ದಿನ ಹೋದರೆ ಅಮ್ಮ, ಅಣ್ಣನ ಪಾಡು…..? ಅಲ್ಲಾ ನನಗೊಂದು ಮಾತು ಮೊದಲೇ ಹೇಳಿದ್ರೆ ನಾನೇನು ಬೇಡಾ ಅಂತಿದ್ನಾ…..?” ಎಂದು ಹತ್ತಾರು ಪ್ರಶ್ನೆ ಕೇಳಿ, “ಈಗ ಹೋಗ್ತಿರೋದು ಯಾಕೆ?” ಎಂದು ಕೇಳಿದಳು.
ಸುಮಾ ಅಷ್ಟೇ ಸಮಾಧಾನದಿಂದ, “ನನ್ನ ತಮ್ಮನ ಹೆಂಡತಿಗೆ ಗಂಡು ಮಗು ಆಗಿದೆ. ಮಗುವನ್ನು ನೋಡಿಕೊಂಡು, ನಾಮಕರಣ ಕಾರ್ಯ ಮುಗಿಸಿಕೊಂಡು ಬರುತ್ತೇನೆ. ಅತ್ತೇನೆ ಹೋಗಿ ಹತ್ತು ಹದಿನೈದು ದಿನ ಇದ್ದು ಬಾ ಅಂತ ಹೇಳಿದ್ದಾರೆ,” ಎಂದು ಹೇಳಿ ಮುಗಿಸಿದಳು.
ಇದನ್ನು ಕೇಳಿ ವಾಣಿ ತನ್ನ ಅಮ್ಮನ ಮುಖ ನೋಡಿದಳು. ಆಗ ಅವರು, “ಹೌದು ನಾನೇ ಹೇಳಿದೆ….” ಎಂದು ಮಗಳಿಗೆ ಹೇಳಿ, ಮಗನತ್ತ ತಿರುಗಿ, “ಏಯ್ ಅರುಣ್…. ಟೈಂ ಆಗ್ತಿದೆ, ಹೋಗಿ ರಿಕ್ಷಾ ತಗೊಂಡು ಬಾ,” ಎಂದು ಅರೆಕ್ಷಣ ಆಗಿರಲಿಲ್ಲ. ವಾಣಿ ತನ್ನ ತಾಯಿಗೆ, “ಅಲ್ಲಮ್ಮಾ….. ನಾನು ನಾಳೆ ಚೆಕಪ್ ಗೆ ಹೋಗೋಣಾಂತ ಬಂದೆ…..” ಎಂದು ಮತ್ತೇನನ್ನೋ ಹೇಳ ಹೊರಟವಳನ್ನು ಅರ್ಧಕ್ಕೆ ತಡೆದ ತಾಯಿ, “ಯಾಕೆ ಚೆಕಪ್ ಗೆ ಕರೆದೊಯ್ಯಲು ನಾನಿಲ್ವಾ……? ಅರುಣ್ ಇಲ್ವಾ…..? ನಿನ್ನ ಗಂಡ ಇಲ್ವಾ…..? ಮತ್ತೀನ್ನೇನು ನಿನ್ನ ಅಪಸ್ವರ…..” ಎಂದು ಕಟುವಾಗಿ ನುಡಿದಾಗ ವಾಣಿ ಮುಖ ಊದಿಸಿಕೊಂಡು ಕುಳಿತಳು.
ವಾಸ್ತವದಲ್ಲಿ, ಸುಮಾ ಇವರ ಮನೆಗೆ ಸೊಸೆಯಾಗಿ ಬಂದಾಗಿನಿಂದ ಅವಳ ನಡೆ, ನುಡಿ, ಅಕ್ಕಪಕ್ಕದವರೊಂದಿಗೆ ಪ್ರೀತಿ, ವಿಶ್ವಾಸ, ಸ್ನೇಹದಿಂದ ಇರುವುದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸುಮಾಳ ಅತ್ತೆಯ ಖಾಸಾ ಗೆಳತಿ ಹಾಗೂ ಹಿತೈಷಿಯಾಗಿದ್ದ ರಮಾಬಾಯಿ, “ನೋಡು ಪದ್ದು, (ರಮಾಳ ಅತ್ತೆ) ನಮಗೆ ವಯಸ್ಸಾದ ಮೇಲೆ ಕೊನೆಗಾಲದಲ್ಲಿ ಆಶ್ರಯ ನೀಡುವ ಮಗ ಸೊಸೆಯನ್ನು ಎಂದೂ ಎದುರು ಹಾಕಿಕೊಳ್ಳಬಾರದು, ಆದಷ್ಟೂ ಅವರೊಂದಿಗೆ ಪ್ರೀತಿ, ವಿಶ್ವಾಸದಿಂದ ಇದ್ದರೆ ನಮಗೆ ಕ್ಷೇಮ. ಇವರನ್ನು ಬಿಟ್ಟು ಕೊನೆಗಾಲದಲ್ಲಿ ಆಗೋರೂ ಯಾರೂ ಇಲ್ಲ…..” ಎಂದು ಹೇಳಿದ್ದ ಮಾತುಗಳು ಅವರ ಮನದಾಳದಲ್ಲಿ ನಾಟಿದ್ದವು.
ಅಂದಿನಿಂದ ಅವರು ತಮ್ಮ ಮಗ ಮತ್ತು ಸೊಸೆಯೊಂದಿಗೆ ಮೊದಲಿಗಿಂತ ಉತ್ತಮ ಬಾಂಧವ್ಯದಲ್ಲಿದ್ದರು. ಈ ಒಂದು ಸಂದರ್ಭದಲ್ಲಿ ತವರಿನಿಂದ ಸುಮಾಳ ತಮ್ಮನ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡಿದ ವಿಚಾರ ತಿಳಿಸಿ, ಒಂದು ಹದಿನೈದು ದಿನಗಳ ಮಟ್ಟಿಗೆ ಸುಮಾಳನ್ನು ತಮ್ಮಲ್ಲಿಗೆ ಕಳುಹಿಸಿ ಕೊಡಬೇಕೆಂದು ಫೋನ್ ಬಂದಾಗ, ಅವರು ಮನಸಾರೆ ಸೊಸೆಗೆ ಒಪ್ಪಿಗೆ ನೀಡಿದ್ದರಲ್ಲದೇ, ಮಗನಿಗೆ ಸೊಸೆಯ ಪ್ರಯಾಣದ ಎಲ್ಲ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿದ್ದರು.
ಮನೆಯ ಎದುರು ಆಟೋ ಬಂದು ನಿಂತಾಗ, ಅರುಣ್ ತನ್ನ ಪತ್ನಿಯ ಲಗೇಜ್ ನ್ನು ರಿಕ್ಷಾದಲ್ಲಿ ಇರಿಸಿದ. ಸುಮಾ ಅತ್ತೆಗೆ ಹಾಗೂ ಅರುಣ್ ಗೂ ನಮಸ್ಕರಿಸಿ, ಅಲ್ಲಿಯೇ ನಿಂತಿದ್ದ ನಾದಿನಿ ವಾಣಿಗೂ ಒಂದು ಮಾತು ಹೇಳಿ ಹೊರಟಳು. ವಾಣಿಯ ಮನದಲ್ಲಿ ಅಸೂಯೆ ಕೊತ ಕೊತ ಕುದಿಯುತ್ತಿದ್ದರೂ, ಅದನ್ನು ತೋರ್ಪಡಿಸದೇ ಮೊಗದಲ್ಲಿ ಕೃತಕ ನಗೆ ತರಿಸಿಕೊಂಡು, ಅತ್ತಿಗೆಗೆ ಬೈ ಹೇಳಿ ಬೀಳ್ಕೊಟ್ಟು ಒಳಗೆ ಬಂದಳು.
ನಂತರ ಅಮ್ಮನ ಬಳಿ ಬಂದು, “ಅದ್ಹೇಗಮ್ಮಾ…. ಹದಿನೈದು ದಿನ ಹೇಗಿರುತ್ತೀ….? ನಿನ್ನ ಕೈಯಲ್ಲಿ ಆಗುತ್ತಾ…..? ಸ್ವಲ್ಪನೂ ಯೋಚನೆ ಮಾಡದೇ ಅತ್ತಿಗೇನ ಕಳಿಸೋಕೆ ಒಪ್ಕೊಂಡು ಬಿಟ್ಯಲ್ಲ….. ಈಗ ಅನುಭವಿಸು…. ಹಾಗೆ ಹೀಗೆ…..” ಎಂದು ತನ್ನ ಮಾಮೂಲಿ ಮಾತಿನ ವರಸೆ ತೆಗೆದಳು.
ಅವಳ ಅಮ್ಮ ಸ್ವಲ್ಪ ಏರು ಧ್ವನಿಯಲ್ಲಿ, “ನೋಡೇ ವಾಣಿ….. ಇದು ನನ್ನ ಮನೆ, ನಾನು ಯಾರನ್ನೂ ಹೇಳಿ ಕೇಳಿ ನಿರ್ಧಾರ ತೆಗೆದುಕೊಳ್ಳುವವಳು ಅಲ್ಲ…. ಇಷ್ಟಕ್ಕೂ ಇದಕ್ಕೂ ನಿನಗೂ ಸಂಬಂಧ ಇಲ್ಲ ತಿಳೀತಾ…..? ಎಲ್ಲದಕ್ಕೂ ಬಾಯಿ ಹಾಕ್ಕೊಂಡು ಬರಬೇಡಾ…. ಇದೇ ಕೊನೆ,” ಎಂದು ತಮ್ಮ ಕಠೋರ ನಿರ್ಧಾರವನ್ನು ಸ್ಪಷ್ಟಪಡಿಸಿದರು.
ಇದನ್ನು ಕೇಳುತ್ತಿದ್ದಂತೆ ವಾಣಿಯ ಮುಖ ಕಳೆಗುಂದಿತು. ತವರಿನಲ್ಲಿ ಇನ್ನು ತನ್ನ ಆಟ ಏನೂ ನಡೆಯದು ಎಂಬುದನ್ನು ಅರಿತ ವಾಣಿ ದೂಸರಾ ಮಾತನಾಡದೇ ಮೌನಕ್ಕೆ ಜಾರಿ, ತೆಪ್ಪಗೆ ಗಂಡನ ಮನೆಗೆ ಹೊರಟಳು.