ಮೊದಲಿನಿಂದಲೂ ಹಿರಿಯರಿಂದ ಅಥವಾ ಬೇರೆಯವರಿಂದ ಯಾವುದೋ ಒಂದು ವಿಧದಲ್ಲಿ ನಾವೆಲ್ಲರೂ ಶಟ್ಅಪ್ಅನ್ನಿಸಿಕೊಂಡಿರುತ್ತೇವೆ. ಇದಕ್ಕೆ ಬೇಸರವೇಕೆ? ಇಂದು ನಮಗೆ….. ಅದು ನಾಳೆ ಬೇರೆಯವರಿಗೆ…..!

ಶಟ್‌ ಅಪ್‌ ಅಂದ್ರೆ ಬಾಯಿ ಮುಚ್ಚು! ಅಂತ ಕನ್ನಡ ಕ್ಲಾಸಿನಲ್ಲಿ ಹೇಳಿ ಕೊಟ್ಟಿದ್ದೇನೋ ಆಯ್ತು. ಆದರೆ ನಮ್ಮ ವಿದ್ಯಾರ್ಥಿಗಳು ಅದನ್ನು ತುಂಬಾ ರೂಡ್‌ ಅಂದ್ರು. ಆಗ ನಾವು ಶಟ್‌ ಅಪ್‌ ಅಲ್ಲ. ಕ್ಲೋಸ್‌ ದ ಮೌತ್‌ ಅಂತ ಬದಲಾವಣೆ ಮಾಡಿದ್ದೇನೋ ಆಯ್ತು. ಅದ್ರೂ ನಿಜವಾಗಲೂ ಬಾಯಿ ಮುಚ್ಚಿಕೊಂಡಿರೋದು ಬಹಳ ಕಷ್ಟ. ಆದ್ರೆ ಒಂದಲ್ಲ ಒಂದು ದಿನ ಬಾಯಿ ಮುಚ್ಚಿಕೊಂಡಿರೋ ಸಮಯ ಬಂದೇ ಬರುತ್ತೆ. ಬಾಯಿ ಮುಚ್ಚೋದು ಅಂದ್ರೆ ಕಣ್ಣು ಮುಚ್ಚೋದು ಅಲ್ಲ. ಕಣ್ಣು ಬಿಟ್ಟುಕೊಂಡು, ಜೀವ ಬಿಗಿ ಇಟ್ಟುಕೊಂಡು, ಬಾಯಿ ಮಾತ್ರ ಮುಚ್ಚಿಕೊಂಡಿರೋದು. ಅದು ನಿಜಕ್ಕೂ ಬಹಳ ಕಷ್ಟ.

ಬೆಳಗ್ಗೆ ಎದ್ದಾಗಲಿಂದ ರಾತ್ರಿ ಮಲಗಿಕೊಳ್ಳುವವರೆಗೂ ಬಾಯಿ ಮುಚ್ಚಿಕೊಂಡಿರೋದು ಸ್ವಲ್ಪ ಕಷ್ಟವಾದ್ರೂ ಕ್ಷೇಮ ಅಲ್ವೇ? ಬೆಳಗ್ಗೆ ಎದ್ದು ಬಂದಾಗ ಸೊಸೆ ಜೊತೆ ನಮ್ಮ ಅಸಿಸ್ಟೆಂಟ್‌ ಕುಕ್‌ ಏನಾದ್ರೂ ಮಾಡ್ತಾ ಇರ್ತಾಳೆ. ಅವಳದು ಎಂತಾ ಗತ್ತು ಗೊತ್ತಾ? ಅವ್ಳು ಏನೂ ತಪ್ಪು ಮಾಡೋಲ್ಲಾ ಅನ್ನೋದೇ ಅವಳ ನಂಬಿಕೆ. ನನಗೆ ಬೇರೆ ಕೆಲ್ಸ ಇರೋಲ್ವಾ…. ಮಾಡಿದ ತಪ್ಪು ಎದ್ದು ಕಾಣಿಸಿಬಿಡುತ್ತೆ. ಅವಳಿಗೇನಾದ್ರೂ ಹೇಳಿದ್ರೆ, ಒಂದು ದೊಡ್ಡ ಭಾಷಣ ಮಾಡಿಬಿಡ್ತಾಳೆ. ಅವಳಿಗೆ ಎಲ್ಲಿಲ್ಲದ ಸ್ವಾಭಿಮಾನ. ಅವಳು ತನ್ನ ತಪ್ಪನ್ನು ಒಪ್ಪಿಕೊಂಡು ಬಿಡ್ತಾಳಾ….. ಅದು ನಿಮ್ಮ ಕನಸೇ ಸರಿ. ಅದರ ಜೊತೆ ಅಲ್ಲೇ ಕಾಫಿ ಕುಡಿತಿರೋ ಮಗ, “ಅಮ್ಮಾ, ಅವರು ಮಾಡಿಕೊಳ್ತಾರೆ. ನೀನ್ಯಾಕೆ ತಲೆ ಕೆಡಿಸಿಕೊಳ್ತೀಯಾ? ನೀನು ಸ್ವಲ್ಪ ಸುಮ್ಮನೆ ಇರಬಾರದಾ,” ಎಂದು ಭರತ ವಾಕ್ಯ ನುಡಿಯುತ್ತಾನೆ.

ಪಡಸಾಲೆಯಲ್ಲಿ ಅಲ್ಲೇ ಪೇಪರ್‌ ಓದ್ತಾ ಇರ್ತೀನಿ. ಫ್ರಿಜ್‌ ಬಾಗಿಲು ಹಾರು ಹೊಡೆದಿರುತ್ತೆ. ಒಗ್ಗರಣೆಗೆ ಬೇಕಾದ ಕರಿಬೇವು ತೆಗೆದುಕೊಳ್ಳೋಕೆ ತೆರೆದದ್ದು. ಒಗ್ಗರಣೆ ಹಾಕಿ ಎಲ್ಲಾ ಮುಗಿಯುವ ತನಕ ಅದು ತೆರೆದೇ ಇರುತ್ತದೆ. ಆದ್ರೆ ಏನೂ ಅನ್ನುವ ಹಾಗಿಲ್ಲ. ಅಂದರೆ ಕೇಳೋದು ಇಲ್ಲ. ಅವರ ಉತ್ತರ ಏನಿರಬಹುದೆಂದು ಗೊತ್ತೇ ಇರುತ್ತಲ್ಲಾ. ಆದ್ದರಿಂದ ಸುಮ್ಮನೆ ಬಾಯಿ ಮುಚ್ಚಿಕೊಂಡಿರೋದು ವಾಸಿ.

ತಯಾರಿಸುವ ಅಡುಗೆ ಯಾವಾಗಲೂ ಹೆಚ್ಚಾಗಿರುತ್ತೆ. ಹೋಗಲಿ ಉಳಿದ ಆಹಾರವನ್ನು ಯಾರಿಗಾದರೂ ಸರಿಯಾದ ರೀತಿಯಲ್ಲಿ ವಿತರಣೆ ಮಾಡಿದರೆ, ಒಟ್ಟಾರೆ ಅದರ ಉಪಯೋಗವಾದ್ರೂ ಆಗುತ್ತೆ. ಆದರೆ ನಮ್ಮ ಮನೆಯ ಕೆಲಸದವರು ನಮಗಿಂತ ಸ್ಪೆಷಲ್. ಅವರು ತೆಗೆದುಕೊಂಡು ಹೋಗಬೇಕಾದರೆ ನಮಗೇ ಉಪಕಾರ ಮಾಡಿದಂತೆ. ಒಂದು ರೀತಿಯಲ್ಲಿ ನಮಗೆ ಉಪಕಾರವೇ. ಆಹಾರವನ್ನು ಹಾಳು ಮಾಡಿದರೆ ಅದರ ಪಾಪ ನಮಗೇ ಸುತ್ತಿಕೊಳ್ಳುತ್ತಲ್ಲ.

ಮನೆಯಲ್ಲಿ ಎಲ್ಲಾ ಲೈಟುಗಳನ್ನು ಹಾಕುವುದು ರೂಢಿ. ಯಾರಿದ್ದರೂ ಅಷ್ಟೇ ಅಥವಾ ಇಲ್ಲದಿದ್ದರೂ ಅಷ್ಟೇ. ಎಲ್ಲಾ ಲೈಟುಗಳನ್ನು ಹಾಕೇ ಇರಬೇಕು, ಫ್ಯಾನ್‌ ಓಡುತ್ತಲೇ ಇರಬೇಕು. ಆದರೂ ಏನೂ ಅನ್ನುವ ಹಾಗಿಲ್ಲ. ಕರೆಂಟ್‌ ಬಿಲ್ ‌ಎಷ್ಟು ಬಂದರೂ ಸರಿ. ಆದ್ರೂ ಮಾತಾಡೋ ಹಾಗಿಲ್ಲ.

ಬೆಳಗ್ಗೆ ಪಾರ್ಕಿಗೆ ಹೋಗುವುದಾಗುತ್ತೆ. ದಾರಿಯಲ್ಲಿ ಉದ್ದಕ್ಕೂ ಪೈಪ್‌ ನಲ್ಲಿ ನೀರು ಬಿಟ್ಟುಕೊಂಡು ಕಾರುಗಳನ್ನು ತೊಳೆಯುತ್ತಿರುತ್ತಾರೆ. ಆದ್ರೂ ಅವರಿಗೆ ಏನಾದರೂ ಹೇಳುವುದುಂಟೆ? ಹೇಳಿದರೆ ನಾವು ನೀರಿಗೆ ದುಡ್ಡು ಕೊಡ್ತೀವಿ. ನಿಮಗೇನು? ನಮ್ಮದು ಬೋರ್ ವೆಲ್ ‌ಎನ್ನುವ ಉತ್ತರಗಳು, ಹೀಗಾಗಿ ಬಾಯಿ ಮುಚ್ಚಿಕೊಂಡು ಸುಮ್ಮನೆ ಮುಂದೆ ಸಾಗುವುದಷ್ಟೇ. ಏಕೆಂದರೆ ಅವರು ಕೊಡುವ ಉತ್ತರ ಏನೆಂದು ನಾವು ಬಾಯಿ ಬಿಚ್ಚುವ ಮೊದಲೇ ಗೊತ್ತಿರುತ್ತದೆ.

ಪಾರ್ಕಿಗೆ ಹೋದ ಮೇಲೆ ನಾವೊಂದಷ್ಟು ಜನ ಒಟ್ಟಿಗೆ ಕೆಲವು ವ್ಯಾಯಾಮಗಳನ್ನು ಮಾಡುತ್ತೇವೆ. ಅಲ್ಲಿಯೂ ಅಷ್ಟೇ, ಮಾಡುವವರು ಯಾರಾದರೂ ತಪ್ಪು ಮಾಡಿದರೆ ಅವರಿಗೆ ಹೇಳಿದರೆ ಸಿಟ್ಟು ಬಂದು ಬಿಡುತ್ತದೆ.

`ಏನು ಇವರೊಬ್ಬರಿಗೇ ಗೊತ್ತಿರೋದಾ?’ ಎನ್ನುವ ಸಿಟ್ಟಿನ ಮುಖಭಾವ. ಆದ್ದರಿಂದ ಹೇಗೆ ಮಾಡಿದರೂ ಸುಮ್ಮನಿರುವುದಾಗುತ್ತೆ.

ಮನೆಗೆ ಬಂದ ಮೇಲೆ ಕೋಣೆಯೊಳಗೆ ಸೇರಿಕೊಂಡು ನಮ್ಮ ಕೆಲಸ ನಾವು ಮಾಡಿಕೊಂಡರೆ ಒಂದು ರೀತಿಯ ಕ್ಷೇಮ. ಯಾಕಂದ್ರೆ ಕೆಲಸ ಮಾಡುವವರಿಗಿಂತ ಸುಮ್ಮನೆ ಕುಳಿತವರಿಗೆ ತಪ್ಪು ಕಾಣಿಸುವುದು ಹೆಚ್ಚು ಎನ್ನುತ್ತಾರೆ ಕಿರಿಯರು.

ಸಂಜೆಯಾದರೆ ಪ್ರತಿದಿನ ಏಳು ಗಂಟೆಯಿಂದ ಏಳೂವರೆ ಗಂಟೆಯವರೆಗೆ ನಮ್ಮ ಪ್ರಾರ್ಥನಾ ತರಗತಿ ಪ್ರಾರಂಭವಾಗುತ್ತೆ. ಭಗದ್ಗೀತೆ, ಲಲಿತಾ ಸಹಸ್ರನಾಮ ಇತ್ಯಾದಿ ಹೇಳ್ತೇವೆ. ಎಲ್ಲರೂ ದೊಡ್ಡವರೇ, ಯಾರಿಗೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳೋಕೆ ಇಷ್ಟವಾಗೋಲ್ಲಾ. ಅವಮಾನ, ಯಾರಾದರೂ ತಪ್ಪು ಮಾಡಿ ಅದನ್ನು ತಿದ್ದಲು ಹೋದರೆ, ಅವರಿಗೆ ಸಿಟ್ಟು ಬಂದುಬಿಡುತ್ತದೆ. ನಮ್ಮ ಪುಸ್ತಕದಲ್ಲಿ ಇರೋದೇ ಹಾಗೆ. ನಮ್ಮ ಮೊದಲಿನ ಮೇಷ್ಟರು ಹೇಳಿ ಕೊಟ್ಟಿರೋದೇ ಹಾಗೆ ಎನ್ನುವ ಉತ್ತರ ಸಿದ್ಧವಾಗಿರುತ್ತೆ. ಅಲ್ಲಿಯೂ ಬಾಯಿ ಮುಚ್ಚಿಕೊಂಡಿರೋದೆ ವಾಸಿ ಅಲ್ವಾ.

ಒಟ್ಟಾರೆ ಒಂದು ವಯಸ್ಸಾಗಿ, ನಮಗೆ ಅಡುಗೆಮನೆಯಿಂದ ನಿವೃತ್ತಿಯಾದ ಮೇಲೆ ಯಾವುದನ್ನೇ ಆದರೂ ನೋಡಿಯೂ ನೋಡದಂತೆ ಸುಮ್ಮನಿರುವುದೇ ವಾಸಿ. ಆಗ ಮನೆಯ ವಾತಾವರಣ ಶಾಂತಿಯುತವಾಗಿರುತ್ತದೆ. ಇಲ್ಲವಾದಲ್ಲಿ ನಾವು ಹೇಳಿದ್ದು ಕೇಳಲಿಲ್ಲ ಎನ್ನುವ ಬೇಸರ, ಅವಮಾನ ಎಲ್ಲವೂ ನಿಮ್ಮ ಮೇಲೆ ಏರಲು ಕಾದುಕೊಂಡಿರುತ್ತದೆ. ಆದ್ದರಿಂದ ನನ್ನ ಗೆಳತಿಯೊಬ್ಬಳು ಹೇಳುತ್ತಿದ್ದುದು ಹೀಗೆ. ನಿನಗೆ ಮಾತನಾಡುವುದನ್ನು ತಡೆಯಲು ಆಗದಿದ್ದರೆ ಬಾಯಿಗೆ ಒಂದು ಪ್ಲಾಸ್ಟರ್‌ ಹಾಕಿಕೊಂಡು ಬಿಡು ಅಂತ. ಅದು ಒಂದು ಥರಾ ಸರೀನೆ ಅಲ್ಲವೇ?

ಕೆಲವು ಹಿರಿಯರು ನಾವು ಯಾವಾಗಲೂ ಮೌನವಾಗಿರಬೇಕೆಂದು ಹೇಳುತ್ತಾರೆ. ಮಾತು ಬೆಳ್ಳಿ, ಮೌನ ಬಂಗಾರ ಅಲ್ಲವೇ? ನಮ್ಮ ಮಾತು ಎದುರಿಗಿರುವವರಿಗೆ ಯಾವಾಗ ಅರ್ಥವಾಗುವುದಿಲ್ಲವೋ ಆಗ ನಾವು ಮೌನಕ್ಕೆ ಶರಣು ಹೋಗುವುದು ಲೇಸು. ಏಕೆಂದರೆ ಅರ್ಥವಾಗದಿದ್ದಾಗ ಹೇಳಿದ್ದು ವ್ಯರ್ಥ ಅಲ್ಲವೇ? ಅಲ್ಲದೆ ನಾವು ಯಾರಿಗಾದರೂ ಏನನ್ನಾದರೂ ಹೇಳಿದಾಗ ಅವರು ದಬಾಯಿಸಿದರೆ ನಮಗೇ ಅವಮಾನ. ಆದ್ದರಿಂದ ಸುಮ್ಮನಿರುವುದು ಯಾವಾಗಲೂ ಕ್ಷೇಮವೇ! ಇದು ನಿಜಕ್ಕೂ ಬೇಸರವೇ….. ಆದರೆ ಮೊಮ್ಮಗಳು ಸೊಸೆಗೆ, ಏನಮ್ಮಾ ಹೇಳಿದ್ದನ್ನೇ ಎಷ್ಟು ಸಲ ಹೇಳ್ತೀಯಾ ಸುಮ್ಮನಿರಬಾರದಾ? ಎಂದಾಗ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಹೌದಲ್ವಾ ಒಂದು ದಿನ ಎಲ್ಲರೂ ಸುಮ್ಮನಿರಲೇ ಬೇಕು. ಇಂದು ನಾವು, ನಾಳೆ ಅವರು…. ಅಲ್ಲವೇ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ