ಜಾಗೀರ್ದಾರ್*
ಅಭಿನಯ ಚತುರ ಸತೀಶ್ ನೀನಾಸಂ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ದಿ ರೈಸ್ ಆಫ್ ಅಶೋಕ. ಟೈಟಲ್ ಹಾಗೂ ಒಂದಷ್ಟು ಪೋಸ್ಟರ್ ಮೂಲಕವೇ ಕುತೂಹಲ ಹೆಚ್ಚಿಸಿರುವ ಚಿತ್ರದಿಂದ ಈಗ ಹೊಸ ಅಪ್ ಡೇಟ್ ಸಿಕ್ಕಿದೆ. ದಿ ರೈಸ್ ಆಫ್ ಅಶೋಕ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ.
ಶ್ರೀರಂಗಪಟ್ಟಣ, ನಂಜನಗೂಡು, ಗುಂಡ್ಲುಪೇಟೆ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರತಂಡ ಬಹಳ ಅದ್ಧೂರಿಯಾಗಿ ಶೂಟಿಂಗ್ ಮಾಡಿದೆ. ಸತೀಶ್ ನೀನಾಸಂ ದಿ ರೈಸ್ ಆಫ್ ಅಶೋಕ ಸಿನಿಮಾದಲ್ಲಿ ಕ್ರಾಂತಿಕಾರಿ ಯುವಕನ ಪಾತ್ರ ಪೋಷಣೆ ಮಾಡಿದ್ದಾರೆ. 70ರ ದಶಕದಲ್ಲಿ ನಡೆಯುವ ಕಥೆಯು ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಕುರಿತು ಬೆಳಕು ಚೆಲ್ಲಲಿದೆ.
ದಿ ರೈಸ್ ಆಫ್ ಅಶೋಕ ಚಿತ್ರದಲ್ಲಿ ಸತೀಶ್ ಗೆ ಜೋಡಿಯಾಗಿ ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ನಟಿಸಿದ್ದಾರೆ. ಬಿ.ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರಿಯಾ ಹಾಗೂ ಯಶ್ ಶೆಟ್ಟಿ, ಡ್ರಾಗನ್ ಮಂಜು, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ ತಾರಾಬಳಗದಲ್ಲಿದ್ದಾರೆ.
ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ನಂತರ ‘ಅಶೋಕ ಬ್ಲೇಡ್’ ಸಿನಿಮಾ ನಿಂತೇ ಹೋಯಿತು ಎಂದು ಸುದ್ದಿ ಹರಡಿತ್ತು. ಆದರೆ ನಟ ಸತೀಶ್ ನೀನಾಸಂ ಅವರು ‘ದಿ ರೈಸ್ ಆಫ್ ಅಶೋಕ’ ಹೆಸರಿನಲ್ಲಿ ಆ ಪ್ರಾಜೆಕ್ಟ್ ಅನ್ನು ಮತ್ತೆ ಕೈಗೆತ್ತಿಕೊಂಡು ಯಶಸ್ವಿಯಾಗಿ ಶೂಟಿಂಗ್ ಮುಗಿಸಿದ್ದಾರೆ. ಈಗಾಗಲೇ ರಿಲೀಸ್ ಆದ ಪೋಸ್ಟರ್ ನಲ್ಲಿ ಮಚ್ಚು ಹಿಡಿದು ತುಂಬ ರಗಡ್ ಆದಂತಹ ಲುಕ್ನಲ್ಲಿ ನೀನಾಸಂ ಸತೀಶ್ ಅವರು ಕಾಣಿಸಿಕೊಂಡಿದ್ದಾರೆ. ಅವರ ಸಿನಿಕರಿಯರನ ಅತಿದೊಡ್ಡ ಬಜೆಟ್ ಚಿತ್ರವಾಗಿರುವ ದಿ ರೈಸ್ ಆಫ್ ಅಶೋಕ ಸತೀಶ್ ವೃತ್ತಿ ಬದುಕಿಗೆ ಹೊಸ ಆಯಾಮಾ ನೀಡಲಿದೆ ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ.
ಅಂದ್ಹಾಗೆ ಈ ಸಿನಿಮಾವನ್ನು ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲೂ ಬಿಡುಗಡೆಯಾಗಲಿದೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ನಡಿ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ನೀನಾಸಂ ಸತೀಶ್ ಕೂಡ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ದಿ ರೈಸ್ ಆಫ್ ಆಫ್ ಅಶೋಕನಿಗೆ ದಯಾನಂದ್ ಟಿ.ಕೆ ಕಥೆ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಲವಿತ್ ಕ್ಯಾಮೆರಾ ಹಿಡಿದಿದ್ದು, ಮನು ಶೇಡ್ಗಾರ್ ಸಂಕಲನ, ರವಿವರ್ಮಾ ಹಾಗೂ ವಿಕ್ರಮ್ ಮೋರ್ ಅವರು ಸಾಹಸ ನಿರ್ದೇಶನ , ಸಂತೋಷ್ ಶೇಖರ್ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ