ಕಥೆ ಸುಮತಿ ಭಟ್

ಕಿರಿಯ ವಯಸ್ಸಿನ ಚಿನ್ಮಯಿ ತನ್ನ ಅಜ್ಜಿಯ ಜೊತೆ ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳುತ್ತಿದ್ದಳು. ಅದೊಂದು ದಿನ ಅವಳು ಅಜ್ಜಿಯ ಬಳಿ ಅಂಥದ್ದೇನು ವಿಷಯ ತಿಳಿಸಿದಳು? ಅದನ್ನು ಕೇಳಿ ಅಜ್ಜಿ ಏಕೆ ಚಕಿತರಾದರು…..?

ಅದೊಂದು ದಿನ ಚಿನ್ಮಯಿ ನನ್ನ ಹತ್ತಿರ ಕುಳಿತು ಹೋಮ್ ವರ್ಕ್‌ ಮಾಡುತ್ತಿದ್ದಳು. ಅವಳು ಒಮ್ಮೆಲೇ ಹೇಳತೊಡಗಿದಳು, “ಅಜ್ಜಿ, ನಿಮ್ಮದೇ ಮಜಾ ನೋಡಿ!”

“ಏಕೆ ಯಾವುದರ ಮಜಾ….?” ನಾನು ಅವಳಿಂದ ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದೆ.

“ನಿಮಗೆ ಯಾವುದೇ ಕೆಲಸ ಮಾಡಬೇಕಾಗಿ ಬರುವುದಿಲ್ಲ…..” ಇದು ಅವಳ ಉತ್ತರವಾಗಿತ್ತು.

“ಏಕೆ? ನಾನು ನಿಮಗೆ ಮ್ಯಾಗಿ ತಯಾರಿಸಿ ಕೊಡ್ತೀನಿ. ಸೂಪ್‌ ಮಾಡಿಕೊಡ್ತೀನಿ. ನಿನ್ನ ಫೋನ್‌ ಚಾರ್ಜ್‌ ಮಾಡಿಕೊಡ್ತೀನಿ, ನೀನು ಅಲ್ಲಿ ಇಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ಹೋದ ಪುಸ್ತಕಗಳನ್ನು ಸರಿಯಾಗಿ ಇಡ್ತೀನಿ. ಹೀಗೆ ಅದೆಷ್ಟು ಕೆಲಸಗಳು ಇರುತ್ತವೆ. ಅಂದಹಾಗೆ ನಿನಗೇನು ಕೆಲಸಗಳಿರುತ್ತವೆ?” ಎಂದು ಕೇಳಿದಿ.

“ಏನ್‌ ಹೇಳ್ತಿ ಅಜ್ಜಿ…..  ನನಗಂತೂ  ಕೆಲಸವೇ ಕೆಲಸ…..” ಎಂದು ಹೇಳಿ ಅವಳು ತಲೆ ಮೇಲೆ ಕೈ ಹೊತ್ತುಕೊಂಡು ಬಹಳ ದುಃಖದ ಧ್ವನಿಯಲ್ಲಿ ಹೇಳಿದಳು.

ಅದೇನು ಕೆಲಸ? ನನಗೂ ಗೊತ್ತಾಗಲೇಬೇಕಲ್ಲ?” ನಾನು ಕೇಳಿದೆ.

“ಕ್ಲಾಸ್‌ ಅಟೆಂಡ್‌ ಮಾಡುವುದು, ಹೋಮ್ ವರ್ಕ್‌ ಮುಗಿಸಬೇಕು. ಟೆಸ್ಟ್ ಗೆ ತಯಾರಿ ಮಾಡಿಕೊಳ್ಳುವುದು, ಪ್ರಾಜೆಕ್ಟ್ ಗಾಗಿ ಸಿದ್ಧತೆ ಹೀಗೆ ಮಕ್ಕಳಿಗೆ ಎಷ್ಟೊಂದು ಕೆಲಸಗಳಿರುತ್ತವೆ ಅಜ್ಜಿ…..”  ಅವಳು ಒಂದೇ ಸಮನೆ ಮಳೆ ಸುರಿದಂತೆ ಮಾತನಾಡುತ್ತಿದ್ದಳು. ಅವಳ ಎಳೆ ಮನಸ್ಸನ್ನು ಯಾರೋ ನೋಯಿಸಿರುವ ರೀತಿಯಲ್ಲಿತ್ತು ಅವಳ ಮಾತಿನ ಧಾಟಿ.

“ಅದಕ್ಕೆ ಇನ್ನಷ್ಟು ಉಪ್ಪು ಖಾರ ಸವರಿದಂತೆ ಈ ಆನ್‌ ಲೈನ್‌ ಕ್ಲಾಸ್‌ ಗಳು. ಸದಾ ಲ್ಯಾಪ್‌ ಟಾಪ್‌ ಮುಂದೆ ಕುಳಿತಿರಬೇಕಾಗುತ್ತದೆ. ಕಣ್ಣು ಪಿಳುಕಿಸದೆ ಅದ್ಹೇಗೆ ಕುಳಿತಿರಬೇಕೆಂದರೆ, ಅತ್ತಿತ್ತ ಕಣ್ಣು ತಿರುಗಿಸಿದರೆ ಸಾಕು, ಮ್ಯಾಮ್ ಕಿರುಚಾಡಲು ಶುರು ಮಾಡುತ್ತಾರೆ.

“ಅದೆಷ್ಟು ಜೋರಾಗಿ ಚೀರುತ್ತಾರೆಂದರೆ, ಮನೆಯ ಎಲ್ಲರಿಗೂ ಈ ವಿಷಯ ತಿಳಿದುಬಿಡುತ್ತದೆ. `ಶ್ರದ್ಧಾ, ನೀನು ಹೋಮ್ ವರ್ಕ್‌ ಏಕೆ ಮಾಡಿಲ್ಲ?’

`ರಾಹುಲ್ ‌ನಿನ್ನ ರೈಟಿಂಗ್‌ ಒಂಚೂರು ಚೆನ್ನಾಗಿಲ್ಲ,’ `ಮನು, ನಿನ್ನ ಗಮನ ಎಲ್ಲಿದೆ?’ ಹೀಗೆ ಎಲ್ಲರನ್ನೂ ಗದರಿಸುತ್ತಲೇ ಇರುತ್ತಾರೆ,” ಎಂದು ಅವಳು ಬಂಡಾಯದ ಧ್ವನಿ ಎತ್ತಿದಳು.

ನಾನು ಮೌನವಾಗಿ ಕುಳಿತುಕೊಂಡು ಅವಳ ಮಾತನ್ನು ಆಲಿಸುತ್ತಿದ್ದೆ. ಆ ಬಳಿಕ ನಾನು ನಗುತ್ತಾ, “ಮೊದಲು ಶಾಲೆಯಲ್ಲಿ ಮ್ಯಾಮ್ ನಿಮ್ಮನ್ನು ಗದರಿಸುತ್ತಿರಲಿಲ್ಲವೇ?” ಎಂದು ಕೇಳಿದೆ.

“ಅಜ್ಜಿ ಇದೇನು ಹೀಗೆ ಕೇಳ್ತಿದೀರಾ? ಅವರೂ ಅಲ್ಲೂ ಗದರುತ್ತಾರೆ, ಇಲ್ಲೂ ಗದರುತ್ತಾರೆ. ಮೇಡಂಗಳ ಕೆಲಸ ಸದಾ ಗದರಿಸುವುದೇ ಅಲ್ವೇ?”

“ಮತ್ತೆ?” ನನ್ನ ಮುಂದಿನ ಪ್ರಶ್ನೆ.

“ಅಜ್ಜಿ, ನಿಮಗೆ ಗೊತ್ತಾಗುತ್ತಿಲ್ಲವೇ?” ಅವಳು ಅತ್ಯಂತ ಮುಗ್ಧಳೆಂಬಂತೆ ಕೇಳಿದಳು.

“ಅದೇನು, ವಿಷಯ ನನಗೆ ಅರ್ಥ ಆಗದಿರುವುದು? ನೀನು ಹೇಳಿದರೆ ತಾನೇ ನನಗೆ ಗೊತ್ತಾಗೋದು…..”

“ನಿಲ್ಲಿ ಅಜ್ಜಿ, ನಾನು ನಿಮಗೆ ತಿಳಿಸಿಹೇಳ್ತೀನಿ. ಶಾಲೆಯಲ್ಲಿ ಮೇಡಂ ಗದರಿಸುತ್ತಾರೆ. ಆದರೆ ಅದು ನಮಗೆ ಅಷ್ಟೇನೂ ಕೆಟ್ಟದ್ದೆನಿಸುವುದಿಲ್ಲ. ಏಕೆಂದರೆ ಅಲ್ಲಿ ಎಲ್ಲರಿಗೂ ಗದರಿಕೆ ಕೇಳಬೇಕಾಗಿ ಬರುತ್ತದೆ. ಕ್ಲಾಸಿನಲ್ಲಿ ಎಲ್ಲರೂ ಸರಿಸಮಾನರು. ಒಮ್ಮೊಮ್ಮೆ ಕೆಲವರಿಗೆ ಶಿಕ್ಷೆಯೂ ಸಿಗುತ್ತದೆ. ಆದರೆ ಅದರ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಇಲ್ಲಿ ಯಾರಿಗೆ ಗದರಿದರೂ ಅದು ಅವರ ಮನೆಯಲ್ಲಿರುವ ಪಾಲಕರಿಗೂ ಹಾಗೂ ಫ್ರೆಂಡ್ಸ್ ಮನೆಯವರಿಗೂ ಕ್ಷಣಾರ್ಧದಲ್ಲಿ ಗೊತ್ತಾಗಿಬಿಡುತ್ತದೆ. ಇದು ನಮಗಾಗುವ ಅಪಮಾನ ಅಲ್ವೇ….?”

“ಹೌದು, ನೀನು ಹೇಳುವುದು ಸರಿ. ನಮಗೂ ಶಾಲೆಯಲ್ಲಿ ಮೇಡಂಗಳಿಂದ ಗದರಿಕೆ ಕೇಳಬೇಕಾಗಿ ಬರುತ್ತಿತ್ತು. ಈ ವಿಷಯ ಮನೆಯಲ್ಲಿ ಯಾರಿಗೂ ಗೊತ್ತಾಗಬಾರದು,” ನಾನು ಮುಗುಳ್ನಗುತ್ತಲೇ ಅವಳ ಮಾತನ್ನು ಸಮರ್ಥಿಸಿಕೊಂಡೆ.

ನನ್ನ ಸಮರ್ಥನೆಯನ್ನು ಕೇಳಿ ಅವಳು ಬಹಳ ಖುಷಿಯಾದಳು. ಬಹುಶಃ ಬಾಲ್ಯದಿಂದಲೇ ನಮ್ಮ ಮನಸ್ಸಿನಲ್ಲಿ ಒಂದು ವಿಷಯ ಗಟ್ಟಿಯಾಗಿ ಕುಳಿತುಬಿಡುತ್ತದೆ. ಅದೇನೆಂದರೆ ನಮ್ಮ ತಪ್ಪುಗಳು ಯಾರಿಗೂ ಗೊತ್ತಾಗಬಾರದು ಎನ್ನುವುದಾಗಿರುತ್ತದೆ.

ಈಗ ಅವಳು ಪರಿಪೂರ್ಣವಾಗಿ ನನ್ನನ್ನು ನಂಬಿಕಸ್ತೆ ಎಂದು ಭಾವಿಸಿದ್ದಳು. ಅವಳು ನನ್ನನ್ನು ತನ್ನ ರಹಸ್ಯ ತಿಳಿದುಕೊಳ್ಳುವ ಅರ್ಹ ವ್ಯಕ್ತಿ ಎಂದು ಭಾವಿಸಿ ನನಗೆ, “ಅಜ್ಜಿ, ನಾನು ನಿಮಗೆ ಒಂದು ಸ್ವಾರಸ್ಯಕರ ವಿಷಯ ತಿಳಿಸಲಾ? ನೀವು ಈ ವಿಷಯವನ್ನು ಯಾರಿಗೂ ತಿಳಿಸಬಾರದು,” ಎಂದಳು.

“ಇಲ್ಲ…. ನಾನು ಈ ವಿಷಯ ಯಾರಿಗೂ ತಿಳಿಸುವುದಿಲ್ಲ. ನೀನು ನಿಶ್ಚಯವಾಗಿ ಹೇಳು,” ಎಂದೆ.

ನನ್ನ ಉತ್ತರ ಕೇಳಿಸಿಕೊಂಡ ಅವಳು, “ಯಾವುದೇ ಮಕ್ಕಳ ಉತ್ತರ ಕೇಳಿಸಿಕೊಂಡು ಅವರಿಗೆ ಬೇಸರ ಉಂಟಾದರೆ ಎಲ್ಲ ಮಕ್ಕಳು ಮುಖ ಕೆಳಗೆ ಮಾಡಿಕೊಂಡು ಬಾಯಿಯ ಮೇಲೆ ಕೈ ಇಟ್ಟುಕೊಂಡು ನಗಲು ಶುರು ಮಾಡುತ್ತಾರೆ,” ಎಂದು ಹೇಳಿದಳು.

“ನಿಮ್ಮ ಮ್ಯಾಮ್ ಗೆ ಅದು ಬೇಸರ ಉಂಟು ಮಾಡುವುದಿಲ್ಲವೇ?”

“ಅದು ಮ್ಯಾಮ್ ಗೆ ಗೊತ್ತೇ ಆಗುವುದಿಲ್ಲ.”

“ಮತ್ತೆ ಆ ಸ್ಟೂಡೆಂಟ್ಸ್?”

“ಸ್ಟೂಡೆಂಟ್‌ ಗಳಿಗೆ ಏನೂ ವ್ಯತ್ಯಾಸವಾಗುತ್ತದೆ? ಮ್ಯಾಮ್ ಪ್ರತಿದಿನ ಯಾವುದಾದರೂ ಸ್ಟೂಡೆಂಟ್‌ ಮೇಲೆ ಕೋಪ ಮಾಡಿಯೇ ಮಾಡಿಕೊಳ್ತಾರೆ.”

ಅವಳ ಮಾತು ಕೇಳಿಸಿಕೊಂಡು ನನಗೆ ನಗು ಬಂತು. ಸತ್ಯವಾದ ಮಾತು. ಸ್ನಾನದ ಮನೆಯಲ್ಲಿ ಎಲ್ಲರೂ ನಗ್ನರೇ!

“ಮತ್ತೊಂದು ತಮಾಷೆಯ ಮಾತು ಹೇಳಲಾ ಅಜ್ಜಿ….?” ಈಗ ಅವಳು ಬಹಳ ಖುಷಿಯಿಂದಿದ್ದಳು.

“ಅವಶ್ಯವಾಗಿ ತಿಳಿಸು.”

“ಮ್ಯಾಮ್ ಬ್ಲ್ಯಾಕ್‌ ಬೋರ್ಡ್‌ ಮೇಲೆ ಬರೆಯುತ್ತಿರುವಾಗ, ಕ್ಲಾಸಿನತ್ತ ಅವರ ಬೆನ್ನು ಕಾಣುತ್ತಿರುತ್ತದೆ. ಆಗ ನಾವು ಬಹಳ ಮೋಜು ಮಜ ಮಾಡುತ್ತೇವೆ. ಕೆಲವು ಹುಡುಗರಂತೂ ಸೀಟಿನಿಂದ ಎದ್ದು ಕುಣಿಯುತ್ತಿರುತ್ತಾರೆ. ಟೀಚರ್ಸ್‌ ನಮ್ಮ ಕಡೆ ಮುಖ ತಿರುಗಿಸುವುದರೊಳಗೆ ಅವರು ಪುನಃ ಸೀಟಿನಲ್ಲಿ ಕುಳಿತಿರುತ್ತಾರೆ. ಅದು ಮ್ಯಾಮ್ ಗೆ ಗೊತ್ತೇ ಆಗುವುದಿಲ್ಲ. ನಾವು ಶಾಲೆಯಲ್ಲಿದ್ದಾಗ ಬಹಳ ಮಜ ಮಾಡುತ್ತೇವೆ. ಆದರೆ ಮನೆಯಲ್ಲಿದ್ದಾಗ ಬಹಳ ಬೋರ್‌ ಆಗುತ್ತದೆ,” ಅವಳು ನಿರಾಶೆಯಿಂದ ಮತ್ತೂ ಹೇಳಿದಳು, “ಯಾವಾಗಲೂ ಮನೆಯಲ್ಲಿಯೇ ಕುಳಿತಿರಬೇಕಾಗುತ್ತದೆ. ಕೊರೋನಾ ಕಾಲದಲ್ಲಂತೂ ಅದು ನಮ್ಮನ್ನು ಹುಚ್ಚರನ್ನಾಗಿಸಿಬಿಟ್ಟಿತು.”

“ಬೆಳಬೆಳಗ್ಗೆ ಒಳ್ಳೆಯ ನಿದ್ರೆ ಬರುತ್ತಿರಬೇಕಾದರೆ ಮಮ್ಮಿ ನಮ್ಮನ್ನು ಬಲವಂತವಾಗಿ ಎಬ್ಬಿಸುತ್ತಾರೆ. ಮಧ್ಯಾಹ್ನ ನನಗೆ ನಿದ್ರೆ ಬರದೇ ಇರುವಾಗ ಈಗ ಸ್ವಲ್ಪ ಮಲಗು ಎನ್ನುತ್ತಾರೆ.”

“ಮೊದಲೂ ಹೀಗೆಯೇ ಆಗುತ್ತಿತ್ತಲ್ಲವೇ?” ನಾನು ಕೇಳಿದೆ.

“ಅಜ್ಜಿ, ನಿಮಗೆ ಅರ್ಥ ಆಗುತ್ತಿಲ್ಲ. ಮೊದಲು ನಾನು ಶಾಲೆಗೆ ಹೋಗ್ತಿದ್ದೆ. ಹೀಗಾಗಿ ದಣಿವಾಗುತ್ತಿತ್ತು. ಈಗ ಹಗಲು ಹೊತ್ತು ನಿದ್ರೆ ಮಾಡ್ತೀನಿ. ರಾತ್ರಿ ನಿದ್ರೆ ಬರುವುದಿಲ್ಲ. ಆದರೆ ಬೆಳಗ್ಗೆ ಬೇಗ ಏಳಬೇಕಾಗಿ ಬರುತ್ತಲ್ಲ? ಮತ್ತು ಈ ಅಪ್ಪ ಮೇಲಿಂದ ಮೇಲೆ `ಪುಸ್ತಕ ಓದು, ಬರೀತಾ ಇರು,’ ಎಂದು ಹೇಳಿ ನನಗೆ ತಲೆನೋವು ತರುತ್ತಾರೆ,” ಅವಳು ದುಃಖದಿಂದ ಹೇಳಿದಳು.

ಸ್ವಲ್ಪ ಹೊತ್ತು ಯೋಚಿಸಿದ ಬಳಿಕ ಅವಳು ಪುನಃ, “ಅಜ್ಜಿ, ನಾನು ಯಾವಾಗ ದೊಡ್ಡವಳಾಗ್ತೀನಿ?” ಎಂದು ಕೇಳಿದಳು.

ಚಿನ್ಮಯಿಯ ಪ್ರಶ್ನೆ ಕೇಳಿ ನಾನು ದಂಗಾಗಿ ಅವಳತ್ತ ನೋಡಿದೆ. ನನ್ನ ಮನಸ್ಸು ಯೋಚನೆಯಲ್ಲಿ ಮುಳುಗಿತು. ಸಾಮಾನ್ಯವಾಗಿ ಬಾಲ್ಯದಲ್ಲಿ ನಾವು ಬೇಗ ದೊಡ್ಡವರಾಗಬೇಕೆಂದು ಇಚ್ಛಿಸುತ್ತೇವೆ. ಆದರೆ ದೊಡ್ಡವರಾದ ಬಳಿಕ ಸಂಸಾರದ ಜಂಜಾಟದಲ್ಲಿ ಸಿಲುಕಿ ನಮ್ಮ ಬಾಲ್ಯದ ಮುಗ್ಧತೆ, ನಿಶ್ಚಿಂತತೆ, ಸ್ಥಿರತೆ ಎಲ್ಲಿ ಕಾಣೆಯಾಗಿ ಹೋಗುತ್ತಿದ್ದೆವೋ ಗೊತ್ತೇ ಆಗುತ್ತಿರಲಿಲ್ಲ. ವಯಸ್ಸು ಹೆಚ್ಚುತ್ತಾ ಹೋದಂತೆ ಜವಾಬ್ದಾರಿಗಳಡಿ ಸಿಲುಕಿ ನಜ್ಜುಗುಜ್ಜಾಗಿ ಹೋಗುತ್ತೇವೆ.

ಕ್ರಮೇಣ ಜವಾಬ್ದಾರಿಗಳನ್ನು ನಿಭಾಯಿಸುತ್ತ ನಾವು ಸ್ವತಃ ದೈಹಿಕವಾಗಿ ಮಾನಸಿಕವಾಗಿ ಮತ್ತು ಭಾವನಾತ್ಮಕ ರೂಪದಲ್ಲಿ ದುರ್ಬಲರಾಗಿಬಿಡುತ್ತೇವೆ. ಬೇರೆಯವರ ಹೊರೆಯನ್ನು ಎತ್ತಿ ನಾವೇ ಇನ್ನೊಬ್ಬರಿಗೆ ಹೊರೆಯಾಗಿ ಪರಿಣಮಿಸುತ್ತೇವೆ. ಆಗ ನಮಗೆ ಕಳೆದುಹೋದ ದಿನಗಳು ಮತ್ತೆ ವಾಪಸ್ಸು ಬರುವುದಿಲ್ಲವೆಂದು ನೆನಪಾಗುತ್ತದೆ.

ಆದರೆ ಚಿನ್ಮಯಿಗೇನು ಗೊತ್ತು, ನಾವು ಈ ಹಂತದ ತನಕ ತಲುಪಲು ಅದೆಷ್ಟು ಸಂಘರ್ಷ ಮಾಡಬೇಕಾಗುತ್ತದೆ ಎಂದು. ಅವಳು ಮಾತ್ರ ಬಹುಬೇಗ ಬೊಡ್ಡವಳಾಗಬೇಕು ಎನ್ನುತ್ತಾಳೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ