ಪತಿಯನ್ನು ಕಳೆದುಕೊಂಡ ವನಿತಾ, ಒಬ್ಬಳೇ ಮಗಳನ್ನು ಸುಸಂಸ್ಕೃತೆಯಾಗಿ ಬೆಳೆಸಿದ್ದರು. ಆಕಸ್ಮಿಕ ಅಪಘಾತದಲ್ಲಿ ಕಣ್ಣು ಕಳೆದುಕೊಂಡ ಮಗಳ ಬಾಳಲ್ಲಿ ಮತ್ತೆ ಬೆಳಕು ಮೂಡುವುದೇ ಎಂದು ಕಾಯುತ್ತಿದ್ದ ಆ ತಾಯಿಯ ಕನಸು ನನಸಾಯಿತೇ…….?
ಸೂರ್ಯ ಸಿಟ್ಟಿನಿಂದಲೋ ಅಥವಾ ತನ್ನಲ್ಲಿಯ ಎಲ್ಲ ಶಕ್ತಿಯನ್ನು ಒಗ್ಗೂಡಿಸಿ ಪ್ರಖರವಾಗಿ ಉರಿಯುತ್ತಿದ್ದಾನೋ ಏನೋ, ಎಲ್ಲೆಡೆ ಸುಡುವ ಕಿರಣಗಳು, ಮಧ್ಯಾಹ್ನ 12ರ ಸಮಯ, ಇಂಥ ಬಿರು ಬಿಸಿಲಲ್ಲಿ ವನಿತಾಳ ಜೀವನ ಅಂಧಕಾರದಲ್ಲಿ ಮುಳುಗಿದೆ. ಇಷ್ಟೊಂದು ಬೆಳಕು ಇದ್ದರೂ ವನಿತಾರ ಕಣ್ಣಿಗೆ ಒಂದು ಬೆಳಕಿನ ಕಿರಣ ಕಾಣಿಸುತ್ತಿಲ್ಲ. ಜೀವನ ಹೇಗೆ? ಏನು? ಎನ್ನುವ ಚಿಂತೆ. ಕಣ್ಣಿಂದ ಒಂದೇ ಸಮನೆ ಕಂಬನಿ ಸುರಿಯುತ್ತಿತ್ತು.
ಮನೆಯ ಒಳಗಡೆಯಿಂದ, “ಅಮ್ಮಾ….” ಎಂದ ಶಬ್ದ ಕೇಳಿ ಒಂದೇ ಹೆಜ್ಜೆಗೆ ಓಡಿ ಹೋಗಿ ಮಗಳ ಕೈಯನ್ನು ಹಿಡಿದು, “ಹುಷಾರಾಗಿ ನಡೆಯಮ್ಮಾ….” ಎನ್ನುತ್ತಾ ಹೊರಗಡೆ ಕರೆತಂದು ಕೂಡಿಸಿದರು.
ತಮ್ಮ ಅಳು, ದುಃಖವನ್ನು ಮರೆ ಮಾಚಿದರೂ ಮಗಳ ಹೃದಯದ ಕಣ್ಣಿಗೆ ಅದು ಕಾಣುತ್ತದೆ. ಕಣ್ಣಿಲ್ಲದಿದ್ದರೆ ಏನಾಯಿತು? ತಾಯಿಯ ದುಃಖವನ್ನು ಅರಿಯಲು ಕಣ್ಣು ಬೇಕಿಲ್ಲ ಅಲ್ಲವೇ?
“ಅಮ್ಮಾ…. ನೀನು ಹೀಗೆ ಅಳುತ್ತಾ ಕುಳಿತರೆ, ನಾನೇನು ಮಾಡಲಿ? ಇರುವುದೇ ಇಬ್ಬರು. ನನಗೆ ನೀನು ಧೈರ್ಯ ಹೇಳಬೇಕು, ನಿನಗೆ ನಾನು ಧೈರ್ಯ ಹೇಳಬೇಕು. ಈ ಸಮಯದಲ್ಲಿ ನೀನು ಒಬ್ಬಂಟಿ. ನನ್ನಿಂದ ಎಷ್ಟೊಂದು ದುಃಖ, ಹಿಂಸೆ ಅನುಭವಿಸುತ್ತಿದ್ದೀಯಾ. ನಾನು ಅಸಹಾಯಕಳಾಗಿದ್ದೇನೆ. ನಿನ್ನ ಪರಿಸ್ಥಿತಿ ಯಾವ ತಾಯಿಗೂ ಬರಬಾರದು,” ಎಂದಳು.
ಒಮ್ಮೆಲೇ ವನಿತಾ, ಮಗಳ ಬಾಯಿಯನ್ನು ತನ್ನ ಕೈಯಿಂದ ಮುಚ್ಚಿ, ಮಗಳನ್ನು ಎದೆಗೆ ಅಪ್ಪಿಕೊಂಡು, “ಇಲ್ಲ ಮಗಳೇ, ನಿನ್ನ ತಂದೆ ಬಿಟ್ಟು ಹೋದಾಗ ನನಗೆ ಜೊತೆಯಾಗಿದ್ದೆ. ನಿನ್ನ ಮುಖವನ್ನು ನೋಡಿ, ನಿನ್ನ ನಗುವನ್ನು ನೋಡಿ ನನಗೆ ಜೀವನದಲ್ಲಿ ಸ್ಛೂರ್ತಿ ಸಿಕ್ಕಿತು. ಹೊಸ ಹುಮ್ಮಸ್ಸಿನಿಂದ ಬೆಳೆಸಿದೆ. ನೀನು ಆಳೆತ್ತರ ಬೆಳೆದ ಮೇಲೆ ಒಂದು ಗಂಡು ಹುಡುಗನ ಹಾಗೆ ನನ್ನ ಭಾರವನ್ನು ಹೊತ್ತುಕೊಂಡು, ಸಂಸಾರದ ನೊಗವನ್ನು, ತಾಯಿಯ ಜವಾಬ್ದಾರಿಯನ್ನು ತೂಗುತ್ತಾ ನಡೆದೆ. ಆದರೆ ಆ ಭಗವಂತನಿಗೆ ಅದು ಸರಿಬರಲಿಲ್ಲ ಅನಿಸುತ್ತೆ ಅದಕ್ಕೆ….” ಎಂದವರೇ ಗದ್ಗದಿತರಾದರು.
“ಅಮ್ಮಾ, ಮರೆತು ಬಿಟ್ಟೆಯಾ….? ನೀನೇ ಸದಾ ಹೇಳುತ್ತಿದ್ದೆ, ದೇವರು ಒಂದು ಬಾಗಿಲನ್ನು ಮುಚ್ಟಿದರೆ ಹತ್ತು ಬಾಗಿಲು ತೆರೆಯುತ್ತಾನೆ. ಮನಸ್ಸನ್ನು ಗಟ್ಟಿಯಾಗಿಸಿಕೊಳ್ಳಬೇಕು, ದೃಢವಾಗಿ ನಿಲ್ಲಬೇಕು ಅಂತ ನೀನೇ ಹೇಳುತ್ತಿ….. ಆದರೆ ಈಗ ಈ ರೀತಿ ಮಾತಾಡಿದರೆ ಹೇಗಮ್ಮಾ…..”
ಬೆಳೆದು ನಿಂತ ಮಗಳು ಅಪಘಾತದಲ್ಲಿ ಕಣ್ಣನ್ನು ಕಳೆದುಕೊಂಡಳೆಂದರೆ, ಆ ತಾಯಿಯ ಮೇಲಾಗುವ ಆಘಾತ, ಅದರ ಪರಿಣಾಮ ಅಷ್ಟಿಷ್ಟಲ್ಲ….
“ಹಾಗಲ್ಲ ಸಹನಾ….. ನಾನೇನೋ ನಾಳೆ ಉರುಳಿ ಹೋಗುವ ಮರ, ಮುಂದೆ ನಿನ್ನ ಭವಿಷ್ಯ ಹೇಗೆ….? ನಿನ್ನ ಜೀವನ ತುಂಬಾ ದೊಡ್ಡದು ಅಲ್ವಾ ಮಗು……” ಎನ್ನುತ್ತಾ ಮತ್ತೆ ಬಾಯಿಗೆ ಕೈಯಿಟ್ಟುಕೊಂಡು ಅತ್ತರು ವನಿತಾ.
“ಅಮ್ಮಾ…. ನಾನು ನನ್ನ ಜೀವನದ 22 ವಸಂತಗಳನ್ನು ನೋಡಿದ್ದೇನೆ. ನಿನ್ನನ್ನು, ಈ ಸುಂದರ ಪ್ರಕೃತಿ, ಗಿಡ ಮರ, ಪ್ರಾಣಿ, ಪಕ್ಷಿ, ದೇಗುಲದಲ್ಲಿ ಭಗವಂತನ ಸ್ವರೂಪ ಎಲ್ಲವನ್ನೂ ಕಣ್ಣಾರೆ ಕಂಡಿದ್ದೇನೆ. ಒಂದು ವಿಷಯ ಯೋಚಿಸು, ಹುಟ್ಟು ಕುರುಡರಾಗಿ ಹುಟ್ಟಿದ ಮಕ್ಕಳು ಏನನ್ನೂ ಕಾಣದೆ ತಮ್ಮ ಇಡೀ ಜೀವನವನ್ನು ಸವೆಸುತ್ತಿವೆ… ಆಗ ಅವರನ್ನು ಹೆತ್ತವರಿಗೆ ಅದೆಷ್ಟು ಆಘಾತವಾಗಿರುತ್ತದೆ? ನೀನು ನನ್ನನ್ನು ಹಾಗೆಲ್ಲ ಬೆಳೆಸಿಲ್ಲ. ಯಾವುದೇ ಗಂಡಂತಾರ ಬಂದರೂ, ಯಾವುದೇ ಸಮಸ್ಯೆ ಎದುರಾದರೂ ಎದೆ ತಟ್ಟಿ ನಿಲ್ಲುವ ಹಾಗೆ ಬೆಳೆಸಿದ್ದೀಯಾ…. ನಾನೂ ಕೂಡ ಹಾಗೇ ಬೆಳೆದಿದ್ದೇನೆ. ಈಗ ಇಷ್ಟೊಂದು ದುಃಖ ಯಾಕಮ್ಮಾ…..? ದೇವರು ಒಂದಲ್ಲ ಒಂದು ಹಾದಿಯನ್ನು ತೋರಿಸುತ್ತಾನೆ. ನನ್ನ ಮೇಲೆ ಭರವಸೆ ಇಡು,” ಎಂದು ನಿಧಾನವಾಗಿ ಹೇಳಿದಳು ಸಹನಾ.
“ನಿನ್ನ ಬಗ್ಗೆ ಭರವಸೆ ಇದೆ ಸಹನಾ…. ನೀನು ನನಗೆ ಆಸರೆ. ಆದರೆ ಸಾಯುವ ಮೊದಲು ನಿನ್ನ ಬಾಳದೋಣಿ ಒಂದು ಸುಂದರ ದಡ ಸೇರಲಿ ಎನ್ನುವುದೇ ಈ ತಾಯಿಯ ಆಸೆ.”
ಒಂದು ತಿಂಗಳ ಹಿಂದೆ ನಡೆದ ಕಾರು ಅಪಘಾತದಲ್ಲಿ ಸಹನಾ ತನ್ನೆರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಳು. ತಂದೆ ಇಲ್ಲದ ತಬ್ಬಲಿ, ತಾಯಿಯ ಆಸೆಯಂತೆ ಶಿಕ್ಷಣ ಪಡೆದು ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಹನಾಳಿಗೆ ಇದು ತುಂಬಲಾರದ ಆಘಾತವಾಗಿತ್ತು. ಆದರೂ ತನ್ನ ತಾಯಿಗೋಸ್ಕರ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಳು.
ಹೀಗೆ ದಿನಗಳು ಉರುಳುತ್ತಿದ್ದವು. ಒಂದು ದಿನ ಅವಳ ಗೆಳತಿ ರಶ್ಮಿ ಮನೆಗೆ ಬಂದಳು, ಸಹನಾಳ ಪರಿಸ್ಥಿತಿಯನ್ನು ನೋಡಿ ಕಣ್ಣೀರಾದಳು. ಗೆಳೆತಿಯ ಛಲ ಹಾಗೂ ಅವಳ ದೃಢ ನಿರ್ಧಾರದ ಸ್ವಭಾವವನ್ನು ಅರಿತಿದ್ದ ರಶ್ಮಿ ತನ್ನ ದುಃಖವನ್ನು ತಡೆದುಕೊಂಡು ಗೆಳತಿಯಲ್ಲಿ ಹುದುಗಿದ್ದ ಧೈರ್ಯವನ್ನು ಹೊರತೆಗೆಯಲು ಪ್ರಯತ್ನಿಸಿದ್ದಳು.
ಸಹನಾಳ ಕೈಗಳನ್ನು ತನ್ನ ಕೈಗಳಲ್ಲಿ ತೆಗೆದುಕೊಂಡ ರಶ್ಮಿ, “ಸಹನಾ, ನೀನು ಛಲಗಾರ್ತಿ. ಎರಡು ಕಣ್ಣುಗಳು ಇಲ್ಲದಿದ್ದರೆ ಏನಾಯಿತು? ನಿನಗೆ ಜೀವನದಲ್ಲಿ ಇನ್ನೂ ಕಲಿಯುವ ಆಸೆ ಇದೆ ಎಂದು ನೀನು ಯಾವಾಗಲೂ ನನ್ನ ಹತ್ರ ಹೇಳುತ್ತಿದ್ದೆಯಲ್ಲ….. ಈಗ ಆ ಅವಕಾಶ ಬಂದಿದೆ. ದೃಷ್ಟಿ ಇಲ್ಲದವರಿಗಾಗಿ `ಬ್ರೇಲ್ ಲಿಪಿ’ ಇದೆ. ಅದನ್ನು ನೀನು ಕಲಿ. ಅದೇ ರೀತಿ ನಿನ್ನ ಹವ್ಯಾಸವಾದ ಸಂಗೀತವನ್ನು ಮುಂದುವರಿಸು. ನಿನ್ನ ಸಂಗೀತನ್ನು ಇತರ ಮಕ್ಕಳಿಗೂ ಕಲಿಸು. ಇತರರೊಂದಿಗೆ ನಿನ್ನಲ್ಲೂ ಒಂದು ಹೊಸ ಚೈತನ್ಯ ಹುಟ್ಟುತ್ತದೆ,” ಎಂದು ಧೈರ್ಯ ತುಂಬಿದಳು.
ಸಹನಾ ಅವಳ ಮಾತನ್ನು ಗಂಭೀರವಾಗಿ ಕೇಳುತ್ತಿದ್ದಳು. ಅವಳಿಗೂ ಅದು ಹೌದೆನಿಸಿತು. `ತಾಯಿಯ ಮುಂದೆ ಕುಳಿತರೆ ಆಕೆಯ ದುಃಖ ಕಡಿಮೆಯಾಗಲ್ಲ. ಅದಕ್ಕೆ ತಾನು ಯಾವುದಾದರೂ ಒಂದು ಕೆಲಸದಲ್ಲಿ ನಿರತಳಾಗಲೇಬೇಕು. ಹೊಸ ಜೀವನ ಶೈಲಿಯನ್ನು ರೂಢಿಸಿಕೊಳ್ಳಲೇಬೇಕು. ಅಂಧಕಾರದಲ್ಲಿ ಬೆಳಕಿನೆಡೆಗೆ ಮೊದಲ ಹೆಜ್ಜೆ ಇಡಬೇಕು,’ ಎಂದು ದೃಢ ನಿರ್ಧಾರ ಮಾಡಿದಳು.
ಅಂದಿನಿಂದ ಬ್ರೇಲ್ ಲಿಪಿ ಕಲಿಯಲು ಹಾಗೂ ದಿನನಿತ್ಯದ ಕೆಲಸಗಳನ್ನು ತಾನೇ ಮಾಡಿಕೊಳ್ಳುವ ಹಾಗೆ ತನ್ನಲ್ಲಿ ಒಂದಷ್ಟು ಬದಲಾವಣೆಗಳನ್ನು ತಂದುಕೊಂಡಳು. ತನ್ನ ಹವ್ಯಾಸವಾದ ಸಂಗೀತವನ್ನು ಒಳ್ಳೆಯ ಸಂಗೀತ ಗುರುಗಳಿಂದ ಕಲಿಯಲು ಹೊರಟಳು.
ಹೀಗೆ ದಿನಗಳು ಉರುಳುತ್ತಿದ್ದವು. ಜಾಣೆಯೂ, ಬುದ್ಧಿವಂತೆಯೂ ಆದ, ಸಹನಾ ಸಂಗೀತ ಕಲಿತು, ತಾನೂ ಹತ್ತು ವಿದ್ಯಾರ್ಥಿಗಳನ್ನು ಗಳಿಸಿಕೊಂಡಳು. ದಿನೇ ದಿನೇ ಅದು 10-20 ಆಗಿ 20-30 ಆಗುತ್ತಿದ್ದಂತೆ ಅವಳ ತಾಯಿ ತಮ್ಮ ಸ್ವಂತ ಮನೆಯನ್ನೇ `ಆಶಾ ಕಿರಣ’ ಸಂಗೀತ ಶಾಲೆಯನ್ನಾಗಿ ಪರಿವರ್ತಿಸಿ, ಮಗಳಿಗಾಗಿ ಉಡುಗೊರೆ ಕೊಟ್ಟರು.
ಇನ್ನು ನನ್ನ ಜೀವನ ಮುಗಿಯಿತು. ತನ್ನಿಂದ ಏನೂ ಸಾಧ್ಯವಿಲ್ಲ. ತಾನು ನಿರುಪಯುಕ್ತ ಎನ್ನುವ ಮನಸ್ಥಿತಿಗೆ ಬಂದಂಥ ಎಷ್ಟೋ ಹೆಣ್ಣುಮಕ್ಕಳಿಗೆ ಸಹನಾ ಸ್ಛೂರ್ತಿದಾಯಕಳಾದಳು. ಅದೇ ಸ್ಛೂರ್ತಿಯ ಮಾತುಗಳನ್ನು ಎಲ್ಲರ ಹತ್ತಿರ ಹೇಳುತ್ತಿದ್ದಳು. ಹೀಗೆ ತಾನೇ `ಯೂ ಟ್ಯೂಬ್ ಚಾನೆಲ್’ನ್ನು ತೆರೆದು ಅದರಲ್ಲಿ ತನ್ನ ವಿಶ್ವಾಸದ ನುಡಿಗಳನ್ನು ಹೇಳುತ್ತಾ ಹೊರಟ ಸಹನಾ, ತನ್ನ ಜೀವನದ ಘಟನೆಗಳನ್ನು ವಿವರಿಸುತ್ತಿದ್ದಳು. ಸ್ಛೂರ್ತಿದಾಯಕ ಮಾತು, ಅವಳ ಲವಲವಿಕೆಯ ಜೀವನವನ್ನು ಕಂಡ ಅನೇಕ ಮಹಿಳೆಯರು ಅವಳ ಮನೆಗೆ ಬರುತ್ತಿದ್ದರು. ಅವಳಿಂದ ಸಲಹೆಗಳನ್ನು ಕೇಳುತ್ತಿದ್ದರು.
ಹೀಗೆ ಮೊದಲ ಹೆಜ್ಜೆಯೊಂದಿಗೆ ಒಂದೊಂದೇ ಹೆಜ್ಜೆ ಇಡುತ್ತಾ ಸಹನಾಳ ಜೀವನ ಸಾಗುತ್ತಿತ್ತು. ಒಂದು ದಿನ ಇವಳ ಸಂಗೀತ ಗುರುಗಳ ಮಗನಾದ ಅಭಿಷೇಕ್ ಅವಳನ್ನು ಹುಡುಕಿಕೊಂಡು ಮನೆಗೆ ಬಂದಿದ್ದ. ಸಹನಾ ಅವನನ್ನು ಆದರದಿಂದ ಬರಮಾಡಿಕೊಂಡಳು. ಅವನು ನಿತಾಗೆ ಕೈ ಮುಗಿದು, “ನಾನು ಶ್ರೀನಿವಾಸ ಶಾಸ್ತ್ರೀಯವರ ಮಗ. ನಿಮ್ಮ ಮಗಳು ನನ್ನ ತಂದೆಯ ಬಳಿ ಸಂಗೀತಾಭ್ಯಾಸಕ್ಕಾಗಿ ಬರುತ್ತಿದ್ದರು. ಆಗಿನಿಂದ ನಾನು ಅವರನ್ನು ನೋಡುತ್ತಿದ್ದೇನೆ. ಅವರಲ್ಲಿರುವ ಆತ್ಮವಿಶ್ವಾಸ, ಕಲಿಯಬೇಕೆನ್ನುವ ಛಲ ನನಗೆ ಬಹಳ ಇಷ್ಟವಾಯಿತು. ಅವರಿಗೆ ಕಣ್ಣಿನ ಬೆಳಕು ಇಲ್ಲದಿದ್ದರೂ, ಜೀವನದ ಕಡೆಗಿನ ಅವರ ಆಶಾಜ್ಯೋತಿ ಬಹಳ ದೊಡ್ಡದಿದೆ. ಅದು ಸಹನಾರ ಮೇಲೆ ಪ್ರೀತಿ ಹುಟ್ಟಲು ಕಾರಣವಾಯಿತು. ನಾನು ನನ್ನ ತಂದೆಗೆ ವಿಷಯ ತಿಳಿಸಿದೆ ಅವರು ಒಪ್ಪಿಕೊಂಡರು. ಆದ್ದರಿಂದ ಅಮ್ಮಾ….. ನಾನು ನಿಮ್ಮ ಮಗಳನ್ನು ನನ್ನ ಬಾಳ ಸಂಗಾತಿಯಾಗಿ ಮಾಡಿಕೊಳ್ಳಲು ಇಚ್ಛಿಸಿ ಇಂದು ನಿಮ್ಮ ಅನುಮತಿ ಕೇಳಲು ಬಂದಿದ್ದೇನೆ,“ ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ.
ವನಿತಾ ಆಶ್ಚರ್ಯ ಹಾಗೂ ಸಂತೋಷದಿಂದ ಸ್ತಂಭಿತರಾದರು. ಸಹನಾ ತನ್ನ ಕಿವಿಯನ್ನು ತಾನೇ ನಂಬದಾದಳು. “ದೃಷ್ಟಿ ಇಲ್ಲದ ಹುಡುಗಿಯೊಂದಿಗೆ ಹೇಗೆ ಜೀವನ ಕಳೆಯುತ್ತೀರಿ… ನನ್ನ ಮಗಳು ಬಹಳ ಒಳ್ಳೆಯಳೇ ಆದರೂ….” ಎಂದು ಮಾತು ನಿಲ್ಲಿಸಿದರು ವನಿತಾ.
“ಇಲ್ಲಮ್ಮಾ…. ನನ್ನ ದೃಷ್ಟಿಯೇ ಅವರ ದೃಷ್ಟಿ. ನಾನು ನೋಡು ಜೀವನವನ್ನೇ ಅವರಿಗೂ ತೋರಿಸುತ್ತೇನೆ. ನನಗೆ ಆಕೆಯ ವಿಚಾರಧಾರೆ, ಮನಸ್ಥೈರ್ಯ ತುಂಬಾ ಇಷ್ಟವಾಯಿತು. ಆಕೆಯೊಂದಿಗೆ ಜೀವನ ನಡೆಸಲು ನಾನು ಪುಣ್ಯ ಮಾಡಿದ್ದೇನೆ ಎಂದುಕೊಳ್ಳುತ್ತೇನೆ,” ಎಂದು ವಿನಮ್ರತೆಯಿಂದ ಹೇಳಿದ.
ವನಿತಾ ಮಗಳನ್ನು ಅಪ್ಪಿಕೊಂಡು ಆನಂದಬಾಷ್ಪ ಸುರಿಸಿದರು. ಸಹನಾ ನಾಚಿ ಮೌನ ಸಮ್ಮತಿ ಸೂಚಿಸಿದಳು. ಸಹನಾಳ ಬಾಳಲ್ಲಿ ಮತ್ತೆ ಬೆಳಕು ಮೂಡಿತು.