ನೀವು ಸಹ ನಿಮ್ಮ ಆತ್ಮವಿಶ್ವಾಸವನ್ನು ಜಾಗರೂಕಗೊಳಿಸಿ, ಕನಸುಗಳ ಬೆನ್ನೇರಿ ಹೊರಡಲು ಬಯಸುವಿರಾ? ಹಾಗಾದರೆ ಇಲ್ಲಿನ ತಾಯಂದಿರ ಬಗ್ಗೆ ತಿಳಿದುಕೊಳ್ಳಿ, ತಮ್ಮ ಸ್ವಪ್ರಯತ್ನದಿಂದ ಇವರುಗಳು ಧೈರ್ಯದ ಮುನ್ನಡೆ ಇಟ್ಟಿದ್ದು ಹೇಗೆ ಅಂತ……!

ಜುಲೈ 2019ರ ಘಟನೆ. ಚಿಕ್ಕಮಗಳೂರಿನ ಕಾಫಿ ಕೆಫೆ ಡೇಯಂಥ ದೊಡ್ಡ ಕಂಪನಿಯ ಮಾಲೀಕರಾದ ವಿ.ಜಿ. ಸಿದ್ಧಾರ್ಥ್‌, ಬಿಸ್‌ನೆಸ್ ನಲ್ಲಿ ದೊಡ್ಡ ಲಾಸ್‌ ಆಯ್ತೆಂದು, ಅತಿ ದೊಡ್ಡ ಸಾಲ ಮಾಡಿಕೊಂಡಿದ್ದ ಅವರು ಆತ್ಮಹತ್ಯೆಗೆ ಶರಣಾದರು. ಅವರು ಬರೆದಿದ್ದ ಸುಯಿಸೈಡ್‌ ನೋಟಲ್ಲಿ, ತಮ್ಮ ಅಪಯಶಸ್ಸಿನಿಂದಾಗಿ ಹೀಗೆ ಮಾಡಿದೆನೆಂದು ಹೇಳಿದ್ದರು. ಪ್ರೈವೇಟ್‌ ಈಕ್ವಿಟಿ ಹೋಲ್ಡರ್ಸ್‌, ಆದಾಯ ತೆರಿಗೆ ವಿಭಾಗ ಹಾಗೂ ಇತರ ವಾಣಿಜ್ಯೋದ್ಯಮಿಗಳ ಅತಿ ಒತ್ತಡದಿಂದಾಗಿ ಅವರು ಹೀಗೆ ಮಾಡಿಕೊಂಡಿದ್ದರು.

ಸಿದ್ದಾರ್ಥ್‌ ರ ಈ ಆಕಸ್ಮಿಕ ಸಾವಿನ ನಂತರ ಇವರ ಪತ್ನಿ ಮಾಳವಿಕಾ ಸಂಪೂರ್ಣ ಕುಸಿದುಹೋಗಿದ್ದರು. ಅವರ ಸಂತಸದ ದಿನಗಳು ಇನ್ನಿಲ್ಲವಾಗಿತ್ತು. ಒಂದು ಕಡೆ ಪತಿಯ ದುರ್ಮರಣ, ಮತ್ತೊಂದೆಡೆ ಕೋಟ್ಯಂತರ ರೂ.ಗಳ ಸಾಲದಡಿ ಕಂಪನಿ! ಜೊತೆಗೆ ಇಬ್ಬರು ಗಂಡು ಮಕ್ಕಳ ಭವಿಷ್ಯದ ಚಿಂತೆ…. ಇಷ್ಟೆಲ್ಲ ಕಷ್ಟಗಳ ನಡುವೆಯೂ ಮಾಳವಿಕಾ ಹೆಗಡೆ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಧೈರ್ಯವಾಗಿ ಮುನ್ನಡೆದರು. ಕಂಪನಿಯ ಚುಕ್ಕಾಣಿ ತಾವೇ ಹಿಡಿದರು, ಎಲ್ಲವನ್ನೂ ಒಂದು ಕಡೆಯಿಂದ ಸರಿಪಡಿಸುತ್ತಾ ಬಂದರು. ಇದರ ಪರಿಶ್ರಮ ಫಲ ನೀಡಿತು, ಎರಡೇ ವರ್ಷಗಳಲ್ಲಿ ಕಂಪನಿ ಮತ್ತೆ ತಲೆ ಎತ್ತಿ ನಿಂತಿತು!

ಮಾರ್ಚ್‌ 2019ರ ಅಂಕಿ ಅಂಶಗಳ ಪ್ರಕಾರ ಕಂಪನಿಗೆ ಸುಮಾರು 7 ಸಾವಿರ ಕೋಟಿಗಳ ಸಾಲವಿತ್ತು. ಡಿಸೆಂಬರ್‌ 2020ರ ಹೊತ್ತಿಗೆ ಮಾಳವಿಕಾ ಹೆಗಡೆ ಈ ಕಂಪನಿಯ CEO ಆದರು. ಇವರು ಈ ಉದ್ಯಮದ ರಣರಂಗ ಎದುರಿಸುವ ಹೊತ್ತಿಗೆ, ಇವರ ಮುಂದೆ 3 ಸವಾಲುಗಳಿದ್ದವು ಪತಿಯ ದುರ್ಮರಣದಿಂದ ಹೊರಬಂದು ಕುಟುಂಬ ಸಂಭಾಳಿಸುವುದು, ಕಂಪನಿಯನ್ನು ಸಾಲ ಮುಕ್ತಗೊಳಿಸುವುದು, ಸಾವಿರಾರು ಸಿಬ್ಬಂದಿಯ ವೇತನ ಸಂಭಾಳಿಸುವುದು! ಇಂಥ ಹುಚ್ಚು ಹೊಳೆಯ ಎದುರು ಪ್ರವಾಹದಲ್ಲಿ ಪ್ರತಿಸ್ಪರ್ಧಿಗಳನ್ನು ಹಿಮ್ಮೆಟ್ಟಿಸುತ್ತಾ ಒಬ್ಬ ಮಹಿಳೆ ಏಕಾಂಗಿಯಾಗಿ ಗೆದ್ದು ನಿಲ್ಲುವುದು, ಖಂಡಿತಾ ಸಣ್ಣ ವಿಷಯವಲ್ಲ! ಒಬ್ಬ ತಾಯಿ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಎಂದು ಈಕೆ ಸಾಧಿಸಿ ತೋರಿಸಿದರು.

ಹೇಳಿದ್ದನ್ನು ಮಾಡಿ ತೋರಿಸಿದರು

ಒಂದು ವರದಿಯ ಪ್ರಕಾರ ಮಾರ್ಚ್‌ 2021ರ ಹೊತ್ತಿಗೆ ಕಂಪನಿ ಇನ್ನೂ 1,779 ಕೋಟಿ ರೂ.ಗಳ ಸಾಲ ಭರಿಸಬೇಕಿತ್ತು. ಇದರಲ್ಲಿ 1,263  ಕೋಟಿ ಲಾಂಗ್‌ ಟರ್ಮ್ ಲೋನ್‌ ಹಾಗೂ 5,16 ಕೋಟಿ ಶಾರ್ಟ್‌ ಟರ್ಮ್ ಲೋನ್‌ ಆಗಿತ್ತು. ಆ ಸಂದರ್ಭದಲ್ಲಿ ಈ ಕಂಪನಿ ಭಾರತದ 165 ನಗರಗಳಲ್ಲಿ 572 ಕೆಫೆಗಳನ್ನು ನಡೆಸುತ್ತಿತ್ತು. 36,326 ವೆಂಡಿಂಗ್‌ ಮೆಶೀನುಗಳ ಜೊತೆ ಇದು ರಾಷ್ಟ್ರದ ಅತಿ ಉನ್ನತ ಕಾಫಿ ಸರ್ವೀಸ್‌ ಬ್ರಾಂಡ್‌ ಗಳಲ್ಲಿ ಒಂದೆನಿಸಿದೆ. ಇಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಲೇಶ ಮಾತ್ರ ಹಿಮ್ಮೆಟ್ಟದೆ, ಮಾಳವಿಕಾ ಇಡೀ ಪರಿಸ್ಥಿತಿಯನ್ನು ಅತಿ ಯಶಸ್ವಿಯಾಗಿ ಸಂಭಾಳಿಸಿದ್ದು ಭಾರತೀಯ ನಾರಿಯ ಧೀಶಕ್ತಿಗೆ ಒಂದು ಆದರ್ಶ ಉದಾಹರಣೆಯೇ ಹೌದು!

ಈಕೆ ಕಂಪನಿಯ CEO ಆದನಂತರ ತಮ್ಮ ಸುಮಾರು 25 ಸಾವಿರ ಸಿಬ್ಬಂದಿಗೆ ಬರೆದಿದ್ದ ಒಂದು ಇಪತ್ರದಲ್ಲಿ ಹೇಳಿದ ವಿಷಯ ಅತಿ ಚರ್ಚಾಸ್ಪದ, ಗಂಭೀರವಾಗಿತ್ತು. ತಾನು ಈ ಕಂಪನಿಯ ಭವಿಷ್ಯದ ಪ್ರತಿನಿಧಿ, ಸಂಪೂರ್ಣ ಸಿಬ್ಬಂದಿಯ ಸಹಕಾರದಿಂದ ಖಂಡಿತಾ ಈ ಅಂಧಕಾರದಿಂದ ಹೊರ ಬರಬಹುದು ಎಂದಿದ್ದರು. ಇವರು ಹೇಳಿದ್ದನ್ನು ಮಾಡಿಯೂ ತೋರಿಸಿದರು. ಇದರಿಂದ ಸಿಬ್ಬಂದಿ ವಿಶ್ವಾಸ ಗೆದ್ದರಲ್ಲದೆ, ಭಾರತೀಯ ವಾಮಿಜ್ಯೋದ್ಯಮದಲ್ಲಿ ಒಬ್ಬ ಸದೃಢ ಮಹಿಳಾ ಉದ್ಯಮಿಯಾಗಿ ಬೆಳೆದು ನಿಂತರು. ಇಂಥ ನಾರೀಶಕ್ತಿಗೆ ಇಡೀ ದೇಶವೇ ತಲೆದೂಗಿತು!

ಪರಿಶ್ರಮದ ಕುರಿತಾಗಿ ವಿಶ್ವಾಸ

ನಾರೀಶಕ್ತಿಯ ಇಂಥದೇ ಮತ್ತೊಂದು ಉದಾ ಅಂದ್ರೆ ಉದ್ಯಮಿ ರಾಜಶ್ರೀ ಬಿ. ಜಾಧವ್. ಮಹಾರಾಷ್ಟ್ರದ ರಾಯಗಢ ಜಿಲ್ಲೆಯ 39 ವರ್ಷದ ರಾಜಶ್ರೀ, ಫೋಟೋಗ್ರಫಿ ಮಾಡುತ್ತಿದ್ದ ತಮ್ಮ ಪತಿ, ಇಬ್ಬರು ಹೆಣ್ಣುಮಕ್ಕಳು ಹಾಗೂ ಅತ್ತೆಯ ಜೊತೆ ವಾಸವಾಗಿದ್ದರು. ಒಬ್ಬ ಆದರ್ಶ ನರ್ಸ್‌ ಆಗಿದ್ದ ಈಕೆ, ಒಂದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮುಂದೆ ಆಕೆ ಗ್ರಾಮ ಪಂಚಾಯತ್‌ ಸೇರಿ ರಿಸೋರ್ಸ್‌ ಪರ್ಸನ್‌ ಎನಿಸಿದರು.

ಮುಂದೆ ರಾಜಶ್ರೀ ಪತಿಗೆ ಲಂಗ್ಸ್ ಕ್ಯಾನ್ಸರ್‌ ಆಗಿ ಸುದೀರ್ಘ ಕಾಲ ಹಾಸಿಗೆ ಹಿಡಿದರು. ಮನೆಗೆ ಬರುತ್ತಿದ್ದ ಮೂಲಾದಾಯ ತಪ್ಪಿಹೋಗಿ, ಈಕೆ ಕುಟುಂಬಕ್ಕಾಗಿ ಹೆಚ್ಚು ಹಣ ಗಳಿಸಲು ಪರದಾಡುವಂತಾಯಿತು. ಆಗ ತಾವೇ ದೃಢ ಮನಸ್ಸಿನಿಂದ ಮನೆ ಬಳಿ ಒಂದು ಸಣ್ಣ ಹೋಟೆಲ್ ‌ತೆರೆದು ಸವೋಸಾ, ಮಿಠಾಯಿ ಮಾರತೊಡಗಿದರು.

ಈಕೆಯ ಪತಿ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯಿತು. ಬರುತ್ತಿದ್ದ ಅಲ್ಪಾದಾಯದಲ್ಲಿ ಮನೆ ನಡೆಸಿ, ಪತಿಯ ಚಿಕಿತ್ಸೆಗೆ ದೊಡ್ಡ ಮೊತ್ತ ತೆರಬೇಕಾಗುತ್ತಿತ್ತು.

Lead

ಇತರರನ್ನೂ ಸ್ವಾವಲಂಬಿ ಆಗಿಸಿದರು

ನರ್ಸಿಂಗ್‌ ಕೆಲಸ ಬಿಟ್ಟು ಸಮಾಜ ಸೇವೆಗಾಗಿ ತಾನು ಗ್ರಾಮ ಪಂಚಾಯತ್‌ ಕೆಲಸಕ್ಕೆ ನಿಂತರೂ, ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಅದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಲಿಲ್ಲ ಎನ್ನುತ್ತಾರೆ. ಅದರ ಜೊತೆಗೆ ಪತಿಯ ಸ್ಟುಡಿಯೋ ಸಹ ಸಂಭಾಳಿಸಬೇಕಿತ್ತು. ತಮ್ಮ ಊರು ಗ್ರಾಮೀಣ ಕ್ಷೇತ್ರಕ್ಕೆ ಸಂಬಂಧಿಸಿದ್ದರಿಂದ, ಹತ್ತಿರದ ಹೋಬಳಿ, ತಾಲ್ಲೂಕುಗಳಿಗೆ ಆಗಾಗ  ಭೇಟಿ  ನೀಡಬೇಕಿತ್ತು.

ಈ ರೀತಿ ಗ್ರಾಮ ಪಂಚಾಯತ್‌ ಕೆಲಸ ಅಷ್ಟಿಷ್ಟು ಮುಂದುವರಿದಾಗ, ಅಲಿಬಾಗ್‌ ನಿಂದ ಗ್ರಾಮೀಣ ತರಬೇತಿ ಸಂಸ್ಥೆಯೊಂದು, ಅಲ್ಲಿನ ಹೆಂಗಸರಿಗೆ ದಿನಗೂಲಿ ಸಿಗುವಂಥ ತರಬೇತಿ ನೀಡಲು ಮುಂದಾಯಿತು. ಅದರಲ್ಲಿ ಜ್ಯೂವೆಲರಿ ಮೇಕಿಂಗ್‌ ತರಬೇತಿ ಪಡೆದು, 30 ಹೆಂಗಸರ ಒಂದೊಂದು ತಂಡವನ್ನು ತಾವೇ ಅಲ್ಲಿಗೆ ಸೇರಿಸಿ, ಎಲ್ಲರೂ ಸ್ವಾವಲಂಬಿಗಳಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.

2 ತಿಂಗಳ ತರಬೇತಿ ನಂತರ ಸರ್ಕಾರದ ಬಳಿ 2 ವರ್ಷ ಕೆಲಸ ಮಾಡಬೇಕಾಯಿತು. ಇದರಿಂದ ಗ್ರಾಮೀಣ ಮಹಿಳಾ ಅಭಿವೃದ್ಧಿ ಕುರಿತು ಸರ್ಕಾರಕ್ಕೆ ತಿಳಿಯುತ್ತಿತ್ತು. ಆ ಮಹಿಳೆಯರು ತಯಾರಿಸಿದ ಒಡವೆಗಳನ್ನು, ತಮ್ಮ ಪತಿಯ ಸ್ಟುಡಿಯೋ ಆವರಣದಲ್ಲೇ ಮಾರಾಟ ಮಾಡಿ, ಆ ಗ್ರಾಮೀಣ ಮಹಿಳೆಯರಿಗೂ ಪರ್ಸೆಂಟೇಜ್‌ ಕಮೀಶನ್‌ ಕೊಡಿಸಿದರು.

ಕೊರೋನಾದಿಂದ ಎಲ್ಲ ಸ್ತಬ್ಧ

ಮುಂದೆ ಕೊರೋನಾ ಕಾಟದಿಂದಾಗಿ ಈ ಗ್ರಾಮೀಣ ಹೆಂಗಸರ ಕೆಲಸ ನಿಂತೇ ಹೋಯಿತು. ಆದರೆ ಇವರು ಧೃತಿಗೆಡದೆ ಒಬ್ಬಂಟಿಯಾಗಿ ಮನೆಮಟ್ಟಿಗೇ ಆಭರಣ ತಯಾರಿ ಮುಂದುವರಿಸಿ ಮಾರಿದರು. ಹೇಗೋ ಆ ಕಷ್ಟದ ದಿನಗಳನ್ನು ಎದುರಿಸಿದರು. ಸುತ್ತಮುತ್ತಲ 16 ಹಳ್ಳಿಗಳಲ್ಲಿ ಆ ಸಮಯದಲ್ಲಿ ಇಂಥ ಆಭರಣ ದೊರೆಯದ ಕಾರಣ, ಇವರ ಬಿಸ್‌ ನೆಸ್‌ ಕುದುರಿತು. ಜೊತೆಗೆ ಹೆಣ್ಣಿಗೆ ಅತಿ ಅಗತ್ಯದ ಸ್ಯಾನಿಟರಿ ನ್ಯಾಪ್‌ ಕಿನ್‌, ಇನ್ನಿತರ ಟಾಯ್ಲೆಟರೀಸ್‌ ಸಹ ಒದಗಿಸತೊಡಗಿದರು. ಹೋಲ್ ಸೇಲ್ ‌ನಿಂದ ತಂದು ಮನೆಮನೆಗೂ ಇಂಥವನ್ನು ತಲುಪಿಸಿ, ಎಷ್ಟೋ ಹೆಣ್ಣುಮಕ್ಕಳಿಗೆ ಉದ್ಯೋಗ ಕಲ್ಪಿಸಿದರು.

ನಿಲ್ಲದ ಜಂಜಾಟ

ಪತಿಯ ಚಿಕಿತ್ಸೆ ಅತಿ ದುಬಾರಿ ಆಗಿಹೋಯಿತು. ಮನೆಯ ನಿರ್ವಹಣೆ, ಮಕ್ಕಳ ಓದಿನಿಂದಾಗಿ ಆರ್ಥಿಕ ಸ್ಥಿತಿ ಅಧೋಗತಿಗಿಳಿದು, ಹೋಟೆಲ್ ‌ಶುರು ಮಾಡುವುದು ಅನಿವಾರ್ಯವಾಯಿತು. ಅಡುಗೆ ತಯಾರಿಯಲ್ಲಿ ಎತ್ತಿದ ಕೈ ಎನಿಸಿದ ಇವರು, ಹೋಟಲ್ ವ್ಯಂಜನಗಳಿಂದ ಅಲ್ಲಿನ ಮನೆಯ ಮಾತಾದರು.

ಇದರಿಂದಾಗಿ ಪತಿಯ ಚಿಕಿತ್ಸೆಗೆ ಅನುಕೂಲವಾಯಿತು. ಮನೆಯವರೆಲ್ಲರೂ ಇವರ ಸಹಾಯಕ್ಕೆ ಮುಂದಾದರು. ಹೋಟೆಲ್ ‌ನಲ್ಲಿ ಗಳಿಸಿದ ಸಿಂಹಪಾಲು ಪತಿಯ ಕಿಮೋಥೆರಪಿ ಚಿಕಿತ್ಸೆಗೇ ಹೋಗುತ್ತಿತ್ತು. ಇದರೊಂದಿಗೆ ಇತರ ಸಾಲಗಳನ್ನೂ ತೀರಿಸಬೇಕಾಗಿತ್ತು.

ಸನ್ಮಾನಕ್ಕೆ ಅರ್ಹರಾದರು

ಒಬ್ಬಂಟಿ ಮಹಿಳೆ ಮನೆಗಾಗಿ ಮಾತ್ರವಲ್ಲದೆ, ಗ್ರಾಮೀಣ ಹೆಂಗಸರ ಸ್ವಾವಲಂಬನೆಗೂ ಕಾರಣಕರ್ತೆ ಆದುದರಿಂದ, ಸರ್ಕಾರ ಇವರಿಗೆ ತರಬೇತಿ ಪಡೆದು, ಗ್ರಾಮೀಣ ಮಹಿಳೆಯರು ತಯಾರಿಸಿದ ಒಡವೆ ಮಾರಿಸಿ, ಹೋಟೆಲ್ ಸಹ ನಿಭಾಯಿಸುತ್ತಿದ್ದುದರಿಂದ 2022ರಲ್ಲಿ ಪುರಸ್ಕಾರ ನೀಡಿತು.

ಸಮಾಜದಲ್ಲಿ ಇಂಥ ಕಷ್ಟಸಹಿಷ್ಣು ಹೆಂಗಸರಿಗೆ ಕೊರತೆ ಇಲ್ಲ. ಪತಿಯ ಅಕಾಲ ಮರಣ ಅಥವಾ ಸುದೀರ್ಘ ಕಾಯಿಲೆಯಿಂದಾಗಿ, ಮನೆಯ ಬೆನ್ನೆಲುಬಾಗಿ ನಿಲ್ಲುವ ಇಂಥವರು ಪ್ರಾತಃಸ್ಮರಣೀಯರು! ಒಬ್ಬ ಪತ್ನಿ, ತಾಯಿಯಾಗಿ ಹೆಣ್ಣು ಏನನ್ನಾದರೂ ಸಾಧಿಸಬಲ್ಲಳು ಎಂದು ನಿರೂಪಿಸಿದ್ದಾರೆ.

ತೊಟ್ಟಿಲ ತೂಗುವ ಕೈ ರಾಷ್ಟ್ರವನ್ನೇ ತೂಗಬಲ್ಲದು! ಇಂಥ ಹೆಂಗಸರು ತಮ್ಮ ಮನೆ ಮಾತ್ರವಲ್ಲದೆ, ಸಮಾಜದ ಇನ್ನಿತರ ಹೆಣ್ಣುಮಕ್ಕಳ ಕಷ್ಟಕ್ಕೂ ನೆರವಾಗುತ್ತಾ ಎಲ್ಲರಿಗೂ ಆದರ್ಶಪ್ರಾಯರಾಗುತ್ತಾರೆ. ಎಲ್ಲಾ ಕಷ್ಟಗಳನ್ನೂ ಸಂಭಾಳಿಸುತ್ತಾ ದೊಡ್ಡ ಕಂಪನಿಯನ್ನೇ ನಿರ್ವಹಿಸುತ್ತಾರೆ. ಎಂಥ ಸಂದರ್ಭ ಬಂದರೂ ಎದುರಿಸಲು ಸೈ, ತಾವು ನಡೆದದ್ದೇ ದಾರಿ ಎಂಬಂತೆ ಮುಂದುವರಿಯುತ್ತಾರೆ. ಇದಕ್ಕಾಗಿ ಕೆಲವು ಅಂಶಗಳನ್ನು ನೆನಪಿಡಬೇಕು :

ಸೂಕ್ತ ಪ್ಲಾನಿಂಗ್

ಜೀವನದ ಕಷ್ಟಗಳನ್ನು ಎದುರಿಸಲು ಸೂಕ್ತ ಪ್ಲಾನಿಂಗ್‌ ಅತ್ಯಗತ್ಯ. ಮನೆಯವರನ್ನು ಸುಧಾರಿಸುತ್ತಾ, ತನ್ನನ್ನು ತಾನು ನೋಡಿಕೊಳ್ಳುತ್ತಾ, ಜೊತೆಯಲ್ಲೇ ಬಿಸ್‌ ನೆಸ್‌ ಸಹ ವಿಚಾರಿಸಿಕೊಳ್ಳಬೇಕು. ಮನೆವಾರ್ತೆ ನೋಡಿಕೊಳ್ಳುವುದಷ್ಟೇ ಹಣ್ಣಿನ ಸೀಮಿತ ಕೆಲಸವಲ್ಲ, ಅಗತ್ಯಬಿದ್ದಾಗ ಎಂಥ ಕೆಲಸಕ್ಕೂ ರೆಡಿ ಎಂದು ನಿರೂಪಿಸಬೇಕು.

ತನ್ನ ಮನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಹೆಣ್ಣು ತನ್ನನ್ನು ಸಂಭಾಳಿಸಿಕೊಂಡು, ಇವೆಲ್ಲವನ್ನೂ ಯಶಸ್ವಿಯಾಗಿ ಖಂಡಿತಾ ನಿರ್ವಹಿಸಬಲ್ಲಳು. ಆಳವಾಗಿ ಚಿಂತಿಸಿ, ದೃಢವಾಗಿ ಮುಂದುವರಿಯುದೊಂದೇ ಬಾಕಿ. ಯಾವ ರೀತಿ ಮುಂದುವರಿಯಬೇಕು, ಯಾವಾಗ ಎಂಥ ಸಮಸ್ಯೆ ಬಂದರೆ ಅದನ್ನು ಹೇಗೆ ಎದುರಿಸುವುದು ಎಂದು ಮೊದಲೇ ವಿಚಾರಿಸಿ ಇಟ್ಟಿರಬೇಕು. ಇದನ್ನು ಹಂತ ಹಂತವಾಗಿ ನಿರ್ವಹಿಸುವುದೇ ಸೂಕ್ತ ಪ್ಲಾನಿಂಗ್‌. ಇದರಿಂದ ನಿಸ್ಸಂದೇಹವಾಗಿ ಇಂಥ ಹೆಂಗಸರ ಆತ್ಮವಿಶ್ವಾಸ ಹೆಚ್ಚುತ್ತದೆ!

ಜನರೊಂದಿಗೆ ಸಂಪರ್ಕ

ಬಿಸ್‌ ನೆಸ್‌ ನಲ್ಲಿ ನೀವು ಮುಂದುವರಿಯ ಬಯಸಿದರೆ ಅಪಾರ ಜನರ ಭೇಟಿ ಅನಿವಾರ್ಯ. ಅಂಥವರು ಸೀನಿಯರ್‌ ಸಿಬ್ಬಂದಿ, ಅಪರಿಚಿತ ಅಧಿಕಾರಿ, ಪ್ರತಿಸ್ಪರ್ಧಿ ಕಂಪನಿಯವರು…. ಹೀಗೆ ಯಾರೇ ಇರಲಿ, ಬಿಸ್‌ ನೆಸ್‌ ಅಭಿವೃದ್ಧಿ ಪಡಿಸುವುದೇ ನಿಮ್ಮ ಗುರಿಯಾಗಬೇಕು. ಹೀಗೆ ಅನೇಕ ಮಂದಿಯನ್ನು ಭೇಟಿ ಆಗುವುದರಿಂದ, ಈ ಫೀಲ್ಡ್ ನಲ್ಲಿ ನಿಮ್ಮ ಜ್ಞಾನ ಹೆಚ್ಚುತ್ತದೆ, ಹೊಸ ಹೊಸ ವಿಚಾರ ತಿಳಿಯುತ್ತದೆ, ಈ ರೀತಿ ಇತರರಿಂದ ಸಕಾಲಕ್ಕೆ ಸಹಾಯ ಸಹ ಪಡೆಯಬಹುದು. ಹೀಗೆ ನಿಮ್ಮ ಪರಿಚಿತರ ಸಂಖ್ಯೆ ಹೆಚ್ಚಿದಷ್ಟೂ ನಿಮಗೇ ಲಾಭ.

ಜ್ಞಾನ ಪ್ರಾಪ್ತಿ

ಜ್ಞಾನ ಪ್ರಾಪ್ತಿಗೆ ಇಂತಿಷ್ಟೇ ವಯಸ್ಸು ಎಂದೇನಿಲ್ಲ. ಅದೂ ಅಲ್ಲದೆ ನೀವು ಹೀಗೆ ಒಂದು ಮುಖ್ಯ ಪದವಿಯಲ್ಲಿದ್ದರೆ, ಆಗ ಅನುಕ್ಷಣ ನೀವು ಜಾಗೃತರಾಗಿರಲೇಬೇಕು. ಕೆಲಸದ ನಿರ್ವಹಣೆಯ ಹೊಸ ರೀತಿ ನೀತಿ, ಮಾರ್ಕೆಟ್‌ ಟ್ರೆಂಡ್ಸ್, ಎಲ್ಲವನ್ನೂ ನೋಟ್ ಮಾಡಿಕೊಳ್ಳುತ್ತಿರಬೇಕು. ಕೆಲಸ ಯಾವುದೇ ಇರಲಿ, ನೀವು ಅದನ್ನು ಸಮರ್ಪಕವಾಗಿ ನಿರ್ವಹಿಸಲು ಅದಕ್ಕೆ ಸಂಬಂಧಿಸಿದ ಎಲ್ಲಾ ಟೆಕ್ನಿಕ್ಸ್ ಅರಿತಿರಬೇಕು, ಹೊಸ ಉಪಕರಣ/ಸಾಧನಗಳ ಬಳಕೆ, ಸಂಶೋಧನೆಗಳ ಬಗ್ಗೆಯೂ ತಿಳಿದಿರಬೇಕು. ಇದರಿಂದ ಮಾರ್ಕೆಟ್‌ ನಲ್ಲಿ ನೀವು ಬೇಗ ಜನಪ್ರಿಯತೆ ಗಳಿಸುವಿರಿ.

ಎಲ್ಲರೊಂದಿಗೂ ಒಗ್ಗಟ್ಟಾಗಿರಿ

ಸಾಮಾನ್ಯವಾಗಿ ಹೆಂಗಸರು ಗೊತ್ತಿದ್ದೋ ಇಲ್ಲದೆಯೋ ಹೊಸ ಹೊಸ ಶತ್ರುಗಳನ್ನು ಹುಟ್ಟು ಹಾಕಿಕೊಳ್ಳುತ್ತಾರೆ. ಮುಂದೆ ಇದರಿಂದ ತೊಂದರೆ ತಪ್ಪದು. ಅದರಲ್ಲೂ ವಿಶೇಷವಾಗಿ ನೀವು ಹೊಸ ಫೀಲ್ಡ್ ನಲ್ಲಿ ಬಿಸ್‌ ನೆಸ್‌ ಶುರು ಮಾಡಿರುವಾಗ, ನೀವು ಯಾವುದೇ ರಿಸ್ಕ್ ತೆಗೆದುಕೊಳ್ಳುವಂತಿಲ್ಲ. ಹೀಗಾಗಿ ನಿಮ್ಮ ಕೆಲಸದ ಕಡೆ ಹೆಚ್ಚಿನ ನಿಗಾ ವಹಿಸಿರಿ. ಅನಗತ್ಯ ವಿವಾದಗಳಿಂದ ದೂರವಿರಿ, ಸಾಧ್ಯವಾದಷ್ಟೂ ನಸುನಗುತ್ತಾ ಮಾತನಾಡಿ, ಎಲ್ಲರೊಂದಿಗೆ ಒಗ್ಗಟ್ಟಾಗಿರಿ. ಅವರು ನಿಮ್ಮ ಪ್ರತಿಸ್ಪರ್ಧಿ, ವಿಮರ್ಶಕರೇ ಆಗಿದ್ದರೂ ಚಿಂತಿಸಬೇಡಿ.

ನಿಮ್ಮ ಸಿಬ್ಬಂದಿಯನ್ನು ಗಮನಿಸಿ

ಮಾಳವಿಕಾರ ಯಶೋಗಾಥೆಗೆ ಮುಖ್ಯ ಕಾರಣ, ಆಕೆ ತಮ್ಮ ಸಿಬ್ಬಂದಿಯನ್ನು ಮನೆಯವರಂತೆಯೇ ಪ್ರೀತಿ ವಿಶ್ವಾಸದಿಂದ ಗಮನಿಸಿಕೊಂಡಿದ್ದು. ಇದರಿಂದ ಅವರು ತಮ್ಮ ಸಿಬ್ಬಂದಿಯ ಮನದಲ್ಲಿ ವಿಶ್ವಾಸ ಮೂಡಿಸಿದರು, ಅವರ ಸಂತೃಪ್ತಿ, ನಿಮಗಾಗಿ ಆದರದ ಮನೋಭಾವ ಹೆಚ್ಚಿದಷ್ಟೂ ನಿಮ್ಮ ಅಭಿವೃದ್ಧಿ ಗ್ಯಾರಂಟಿ. ನಿಮ್ಮ ಬಿಸೆ ನೆಸ್‌ ಮುನ್ನೇರಬೇಕಾದರೆ, ನಿಮ್ಮ ಸಿಬ್ಬಂದಿಯ ಕಷ್ಟಸುಖ ಅರಿತು, ಅವರ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಸರಿಪಡಿಸಿರಿ.

ಪರಿಸ್ಥಿತಿ ಕೆಟ್ಟಾಗ ಹೆದರದಿರಿ

ಬಿಸ್‌ ನೆಸ್‌ ಎಂದ ಮೇಲೆ ಏರಿಳಿತ ಗ್ಯಾರಂಟಿ. ಹೀಗಾಗಿ ಯಾವುದೇ ಗಂಭೀರ ಕಷ್ಟ ನಷ್ಟ ಎದುರಾದಾಗ, ಏಕ್‌ ದಮ್ ಹೆದರಬೇಡಿ. ಹೆಣ್ಣು ಹೆಂಗಸಾದ ನಾನು ಇದನ್ನೆಲ್ಲ ಹೇಗೆ ತಾನೇ ಎದುರಿಸಿ ಯಶಸ್ವಿಯಾಗಬಲ್ಲೆ ಎಂಬ ಹಿಂಜರಿಕೆ ಬೇಡ. ನಿಮ್ಮ ಆತ್ಮವಿಶ್ವಾಸ ಎಂದೂ ತಗ್ಗದಿರಲಿ, ಮುಂದಿಟ್ಟ ಹೆಜ್ಜೆಯನ್ನು ಎಂದೂ ಹಿಂತೆಗೆಯಬೇಡಿ. ಹೀಗೆ ನೀವು ಮುನ್ನುಗ್ಗ ತೊಡಗಿದರೆ ಯಾರಿಂದಲೂ ನಿಮ್ಮನ್ನು ತಡೆಯಲಾಗದು. ನಿಮ್ಮ ಮನೋಬಲವನ್ನು ಎಂದೂ ದುರ್ಬಲ ಆಗಲು ಬಿಡಬೇಡಿ. ನಿಮ್ಮ ಆತ್ಮಬಲವೇ ನಿಮಗೆ ಶ್ರೀರಕ್ಷೆ, ಎಲ್ಲಾ ದಾರಿ ಮುಚ್ಚಿಹೋದರೂ ಎಲ್ಲೋ ಒಂದು ಆಶಾಕಿರಣ ಖಂಡಿತಾ ಗೋಚರಿಸುತ್ತದೆ.

ಎಲ್ಲವನ್ನೂ ಸಂಭಾಳಿಸಿ

ಬಿಸ್‌ ನೆಸ್‌ ನಲ್ಲಿ ಪ್ರಗತಿ ಹೊಂದಲು, ನಿಮ್ಮ ಜೊತೆಗೆ ದುಡಿಯುವವರನ್ನು ಅರ್ಥ ಮಾಡಿಕೊಂಡು, ಅವರು ಐಡಿಯಾಗಳನ್ನು ಸ್ವೀಕರಿಸಿ. ನಿಮ್ಮ ಸಿಬ್ಬಂದಿಯನ್ನು ಸದಾ ಪ್ರೋತ್ಸಾಹಿಸಿ, ಅವರು ಉತ್ತಮ ಕೆಲಸ ಮಾಡಿದಾಗ ಜಿಪುಣತನ ತೋರದೆ ಅವರನ್ನು ಪ್ರಶಂಸಿಸಿ. ನಿಮ್ಮ ಈ ಧೋರಣೆ ಅವರಲ್ಲಿ ಹೆಚ್ಚಿನ ಹುರುಪು ಮೂಡಿಸುತ್ತದೆ.

ತಪ್ಪುಗಳಿಂದ ಪಾಠ ಕಲಿಯಿರಿ

ಬಿಸ್‌ ನೆಸ್‌ ನಲ್ಲಿ ನೀವು ಹೊಸಬರಾಗಿರಿ ಅಥವಾ ಹಳಬರೇ ಇರಲಿ, ಆಗಾಗ ತಪ್ಪು ಆಗುತ್ತಿರುತ್ತದೆ. ಇವುಗಳಿಂದ ನೀವು ಹೆದರಿ ಕೈ ಚೆಲ್ಲುವಿರೋ ಅಥವಾ ಪಾಠ ಕಲಿತು ಸುಧಾರಿಸುವಿರೋ, ಇದು ನಿಮ್ಮ ಮನಸ್ಸಿನ ಧೋರಣೆಯನ್ನು ಅವಲಂಬಿಸಿದೆ. ತಪ್ಪು ಮಾಡುವುದು ಮಾನವ ಸಹಜ ಪ್ರಕ್ರಿಯೆ, ಅದನ್ನು ತಿದ್ದಿ ನಡೆಯುವವನೇ ಜಾಣ! ನಿಮ್ಮ ಇಂದಿನ ಸೋಲು, ನಾಳಿನ ಗೆಲುವಿಗೆ ಸೋಪಾನ ಎಂಬುದನ್ನು ಮರೆಯದಿರಿ.

ಯಶಸ್ವೀ ಬಿಸ್ನೆಸ್ಮಹಿಳೆ

ಮುಂದಿನ ತಲೆಮಾರು ನಿಮ್ಮನ್ನು ಹೀಗೆ ಗುರುತಿಸಬೇಕಾದರೆ, ನೀವು ಈಗಾಗಲೇ ಯಶಸ್ವೀ ಬಿಸ್‌ ನೆಸ್‌ ವುಮನ್‌ ಯಾರಿದ್ದಾರೆ, ಅವರನ್ನು ಅನುಸರಿಸಿ. ಸುಧಾ ಮೂರ್ತಿಯಂಥ ದಿಗ್ಗಜರು ಇಂಥ ನಿಟ್ಟಿನಲ್ಲಿ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ, ಅನುಕರಣೀಯ ಎನಿಸುತ್ತಾರೆ. ಹೀಗೆ ಇಂಥವರ ಬಗ್ಗೆ ಮಾಹಿತಿ ಸಂಗ್ರಹಿಸಿ, ಅವರು ಕಷ್ಟವನ್ನು ಹೇಗೆ ಎದುರಿಸಿದರು ಎಂದು ತಿಳಿದುಕೊಂಡು, ನಿಮ್ಮ ದಾರಿಯಲ್ಲಿ ಅದನ್ನು ಸೂಕ್ತವಾಗಿ ಅಳವಡಿಸಿಕೊಳ್ಳಿ.

ಗಿರಿಜಾ ಶಂಕರ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ