ಯುಗಾಂತರದ ದಿವ್ಯಾ ಕಾರಂತ್
`ಯುಗಾಂತರ’ ಧಾರಾವಾಹಿ ನೋಡಿರುವ ಪ್ರಿಯ ವೀಕ್ಷಕರಿಗೆ ಅರುಂಧತಿ ಪಾತ್ರ ಮರೆಯಲು ಸಾಧ್ಯವೇ? ಡಿ.ಸಿ. ಹೇಗಿರಬೇಕೋ ಅದೇ ರೀತಿ ತನ್ಮಯತೆ ತೋರಿದ ಅರುಂಧತಿ ಪಾತ್ರಧಾರಿ ದಿವ್ಯಾ ಕಾರಂತ್ ಅದ್ಭುತ ನಟಿ, ಎಲ್ಲಾ ವಿದ್ಯೆಗಳನ್ನೂ ಅರೆದು ಕುಡಿದಿರುವಂತಹ ಕಲಾವಿದೆ. ಈಕೆಯ ಪ್ರೊಫೈಲ್ ತಿರುವಿ ನೋಡಿದಾಗ ಒಂದು ಕ್ಷಣ ದಂಗಾಗೋದು ಗ್ಯಾರಂಟಿ. ದಿವ್ಯಾ ಕಾರಂತ್ ಮಲೆನಾಡಿನ ಪರಿಸರದಿಂದ ಬಂದವರು. ಬಸರಿಕಟ್ಟೆ ಗ್ರಾಮ, ಸೇಕ್ರೆಡ್ ಹಾರ್ಟ್ಶಾಲೆಯಲ್ಲಿ ಪ್ರೈಮರಿ, ಸದ್ಗುರು ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ಕಾಲೇಜು ವಿದ್ಯಾಭ್ಯಾಸಕ್ಕೆ ಮೆಟ್ಟಿಲು ಹತ್ತಿದ್ದು ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜ್, ಬೆಂಗಳೂರು ವಿವಿಯಲ್ಲಿ ಇಂಗ್ಲಿಷ್ ನಲ್ಲಿ ಎಂ.ಎ. ಇದೆಲ್ಲದರ ಜೊತೆಗೆ ಹವ್ಯಾಸಿ ರಂಗಭೂಮಿ ಚಟುವಟಿಕೆ, FM 93.5 ಬೆಂಗಳೂರಿನಲ್ಲಿ ರೇಡಿಯೋ ಜಾಕಿ… ಕಥೆ, ಕವನಗಳನ್ನೂ ಸಹ ಬರೆದಿದ್ದಾರೆ. ನಿಜ ಹೇಳಬೇಕೆಂದರೆ ಇಷ್ಟೆಲ್ಲಾ ಸಾಧನೆ ಮಾಡಿರುವ ದಿವ್ಯಾ ಕಾರಂತ್ ಪಬ್ಲಿಸಿಟಿ ಗಿಮಿಕ್ ಎಲ್ಲಿಯೂ ಮಾಡಿಲ್ಲ ಎಂದೇ ಹೇಳಬಹುದು.
ದಿವ್ಯಾರನ್ನು ಪತ್ರಿಕೆ ಸಲುವಾಗಿ ಮಾತನಾಡಿಸಿದಾಗ ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು.
ಯುಗಾಂತರ ಧಾರಾವಾಹಿಯಲ್ಲಿನ ಅರುಂಧತಿ ಪಾತ್ರ ನಿಮ್ಮ ಮೇಲೆ ಎಷ್ಟು ಪ್ರಭಾವ ಬೀರಿದೆ?
ಧಾರಾವಾಹಿಗಳಿಂದ ಒಂದಷ್ಟು ವರ್ಷ ಬ್ರೇಕ್ ತಗೊಂಡು ಬೇರೆ ಹವ್ಯಾಸಗಳತ್ತ ಗಮನ ಹರಿಸಿದ್ದಾಗ, ನಿರ್ದೇಶಕ ಸೇತುರಾಂ ಯುಗಾಂತರ ಸಬ್ಜೆಕ್ಟ್ ಕುರಿತು ಹೇಳಿದರು. ಆಗ ಅರುಂಧತಿ ಪಾತ್ರ ನನ್ನನ್ನು ಆರಿಸಿಕೊಂಡು ಬಿಡ್ತು. ಒಪ್ಪಿಕೊಂಡೆ, ಜೊತೆಗೆ ಸ್ಕ್ರಿಪ್ಟ್ ವರ್ಕ್, ಡೈರೆಕ್ಷನ್ ಡಿಪಾರ್ಟ್ ಮೆಂಟ್ ನಲ್ಲೂ ವರ್ಕ್ ಮಾಡಿದೆ. ಈ ಪಾತ್ರ ಜನರಿಗೆ ಇಷ್ಟವಾಗಲು ನಾನು ಮಾಡಿಕೊಂಡಂತಹ ಪ್ರಿಪರೇಷನ್ ಕೂಡ ಮುಖ್ಯ ಇರಬಹುದು.
ಯಾವ ತರಹದ ತಯಾರಿ?
ನಾನು ಡಿ.ಸಿ. ಪಾತ್ರ ಮಾಡಬೇಕಾದರೆ ನನ್ನ ಲುಕ್, ವೇಷ ಭೂಷಣ, ಮಾತನಾಡುವ ಶೈಲಿ ಎಲ್ಲವನ್ನೂ ದೊಡ್ಡ ದೊಡ್ಡ ಮಹಿಳಾ ಅಧಿಕಾರಿಗಳನ್ನು ನೋಡಿ ಕಲಿತೆ. ವಿಧಾನಸೌಧಕ್ಕೂ ಹೋಗಿ ಅಲ್ಲಿ ನಡೆಯುವ ಮೀಟಿಂಗ್ ನಲ್ಲಿ ಅಧಿಕಾರಿಗಳು ಮಂತ್ರಿಗಳ ಜೊತೆ ಹೇಗೆಲ್ಲಾ ಚರ್ಚೆ ಮಾಡುತ್ತಾರೆ ಎಂದೆಲ್ಲಾ ಗಮನಿಸಿದ್ದೆವು. ನಾನು ಮೊದಲಿನಿಂದಲೂ ಹಾಗೆ, ಏನೇ ಕೆಲಸ ಮಾಡಿದರೂ ಅದು ನಮ್ಮ ಆತ್ಮಕ್ಕೆ ತೃಪ್ತಿ ಕೊಡಬೇಕು. ಹಾಗಾಗಿ ಅರುಂಧತಿ ಪಾತ್ರ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗಿ ನಿಂತಿತ್ತು.
ವೇಷ ಭೂಷಣ ಅಂದಾಕ್ಷಣ ಈ ಧಾರಾವಾಹಿಯಲ್ಲಿ ನಿಮ್ಮ ಸೀರೆಗಳು ತುಂಬಾನೇ ಫೇಮಸ್ ಆಗಿಬಿಟ್ಟಿವೆ. ಕಾಸ್ಟ್ಯೂಮ್ ಡಿಸೈನರ್ನೀವೇನಾ…..?
ಹೌದು. ಈ ಧಾರಾವಾಹಿಯಲ್ಲಿ ಉಟ್ಟಿರುವ ಸೀರೆಗಳೆಲ್ಲಾ ನನ್ನವೇ. ಅದಕ್ಕೆ ತಕ್ಕಂತೆ ಬ್ಲೌಸ್ ಡಿಸೈನ್ ಮಾಡಿದೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ ನಾನೆಲ್ಲೂ ಸೀರೆ ರಿಪೀಟ್ ಮಾಡಿಲ್ಲ. ಮನೆಯಲ್ಲಿ ನನ್ನ ವಾರ್ಡ್ ರೋಬ್ ಅಲ್ಲದೆ ಅಪ್ಪ ಅಮ್ಮನ ಬೀರುವಿನಲ್ಲಿ ಕೂಡ ನನ್ನ ಸೀರೆಗಳು ತುಂಬಿಕೊಂಡಿವೆ. ಹ್ಹಾ….ಹ್ಹಾ…..
ಯುಗಾಂತರ ನಂತರ ವಾಟ್ ನೆಕ್ಟ್?
ಈ ಧಾರಾವಾಹಿ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ. ಎಲ್ಲೇ ಹೋದರೂ ಜನ ನನ್ನನ್ನು ಅರುಂಧತಿ ಎಂದೇ ಗುರುತಿಸುತ್ತಾರೆ. ನನ್ನ ಡ್ರೆಸ್ ಬಗ್ಗೆ ಕೇಳ್ತಾರೆ, ಖುಷಿಯಾಗುತ್ತೆ. ಸಾಕಷ್ಟು ಆಫರ್ಸ್ ಬರುತ್ತಿವೆ, ಆದರೆ ಅವೆಲ್ಲ ಅರುಂಧತಿ ಪಾತ್ರಕ್ಕೆ ಹೋಲುವಂಥದ್ದು. ಒಂದೇ ತರಹ ಬ್ರಾಂಡ್ ಗೆ ಒಗ್ಗಿಹೋಗಲು ನನಗೆ ಇಷ್ಟವಿಲ್ಲ. ಹಾಗಾಗಿ ನಾನು ಒಪ್ಪಿಕೊಳ್ಳುತ್ತಿಲ್ಲ.
ಸಿನಿಮಾ ರಂಗದಿಂದ ಕರೆ ಬಂದಿದ್ಯಾ….?
ಈ ಮೊದಲೇ ನಾನು `ಅಮರಾವತಿ’ ಎಂಬ ಚಿತ್ರದಲ್ಲಿ ನಟಿಸಿದ್ದೇನೆ. ಇದೀಗ ಮಲಯಾಳಂ ಚಿತ್ರವೊಂದಕ್ಕೆ ಸ್ಕ್ರಿಪ್ಟ್ ಮಾಡ್ತಿದ್ದೀನಿ. ಇಂಗ್ಲಿಷ್ ನಲ್ಲಿ ಬರೋದು. ನನ್ನ ಹಳೇ ಸ್ನೇಹಿತ ಎಂ.ಜಿ. ಶ್ರೀನಿವಾಸ್ ಒಂದು ಹೊಸ ಕನ್ನಡ ಸಿನಿಮಾ ಮಾಡುತ್ತಿದ್ದು, ಶಿವರಾಜ್ ಕುಮಾರ್ ನಾಯಕ ನಟ. ಒಂದು ಪ್ರಮುಖ ಪಾತ್ರಕ್ಕಾಗಿ ನನ್ನ ಆಯ್ಕೆ ಮಾಡಿದ್ದಾರೆ. ನಾನು ಶಿರಾಜ್ ಕುಮಾರ್ ಗೆ ಸಹೋದರಿಯಾಗಿ ನಟಿಸಲಿದ್ದೇನೆ.
ಕನ್ನಡ ಧಾರಾವಾಹಿಗಳ ಬಗ್ಗೆ ನಿಮ್ಮ ಅಭಿಪ್ರಾಯ….?
ದೆವ್ವ, ದೇವಿ ಪಾತ್ರಗಳ ಕಥೆಗಳೇ ಬಹಳ ಆಗಿವೆ. ಬದಲಾವಣೆ ತರಬೇಕು. ಹೆಚ್ಚು ಹೆಚ್ಚು ಕನ್ನಡದ ನಮ್ಮ ನೆಲೆಗಟ್ಟಿನ ಸಂಸ್ಕೃತಿಯ ಕಥೆಗಳನ್ನು ತಿಳಿಸೋ ಪ್ರಯತ್ನವಾಗಬೇಕು. ವೆಬ್ ಸೀರೀಸ್ ಗಳು ಬರಬೇಕು. ನಾನು ಸಾಕಷ್ಟು ಪುಸ್ತಕಗಳನ್ನು ಓದುತ್ತೇನೆ ಅಂದ್ರೆ ವಿಮರ್ಶೆ ಕೂಡ ಆಗುತ್ತೆ. ಎಸ್.ಎಲ್. ಭೈರಪ್ಪನವರ ಕಾದಂಬರಿಗಳು, ಪೂರ್ಣಚಂದ್ರ ತೇಜಸ್ವಿರವರ ಕಥೆಗಳು ನನಗಿಷ್ಟ.
ಫ್ರೀ ಟೈಮ್ ನಲ್ಲಿ ಏನು ಮಾಡ್ತೀರಾ…..?
ಹವ್ಯಾಸ ಅಂತ ಹೇಳೋದಾದರೆ ನಂಗೆ ಭಾರತೀಯ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಮತ್ತು ಪುರಾತನ ದೇವಾಲಯ, ಅದರ ವಾಸ್ತುಶಿಲ್ಪದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆ.
ಮಹಾ ಪರ್ವ ಧಾರಾವಾಹಿಯಲ್ಲಿನ ನಿಮ್ಮ ಪಾತ್ರ ಕೂಡ ವಿಭಿನ್ನವಾಗಿತ್ತು ಅಲ್ವಾ….?
ಅಂದು ಆ ಪಾತ್ರ ತುಂಬಾನೇ ಮಾಡರ್ನ್. ಚಾರುಲತಾ ಎಂಬ ಹೆಸರಿನ ನನ್ನ ಪಾತ್ರವನ್ನು ನಾನು ತುಂಬಾ ಇಷ್ಟಪಟ್ಟಿದ್ದೆ.
ಸಿನಿಮಾ ನಟರಲ್ಲಿ ಯಾರು ಫೇವರಿಟ್?
ದಕ್ಷಿಣ ಭಾರತದ ಎಲ್ಲಾ ನಾಯಕರೂ ಇಷ್ಟ. ಆದರೆ ಧನುಷ್ ಮೆಚ್ಚಿನ ನಟ. ನಾಯಕಿಯರಲ್ಲಿ ನಿತ್ಯಾ ಮೆನನ್ ತುಂಬಾ ಇಷ್ಟ.
– ಸರಸ್ವತಿ ಜಾಗೀರ್ದಾರ್