- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ತಿಮ್ಮನ ಮೊಟ್ಟೆಗಳು
ನಿರ್ಮಾಣ: ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್
ನಿರ್ದೇಶನ: . ರಕ್ಷಿತ್ ತೀರ್ಥಹಳ್ಳಿ
ತಾರಾಂಗಣ: ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಕರ್, ಶೃಂಗೇರಿ ರಾಮಣ್ಣ, ಪ್ರಗತಿ ಪ್ರಭು, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ, ಪೃಥ್ವಿರಾಜ್ ಕೊಪ್ಪ, ಪ್ರಾಣೇಶ್ ಕೂಳೆಗದ್ದೆ ಮುಂತಾದವರು
ರೇಟಿಂಗ್: 3.5/5
ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ ಹಾಗೂ ಕೇಶವ್ ಗುತ್ತಳಿಕೆ ನಟನೆಯ ಮಲೆನಾಡ ಸುತ್ತ ಮುತ್ತ ಚಿತ್ರೀಕರಿಸಿದ ಸುಂದರ ಕತೆಯುಳ್ಳ "ತಿಮ್ಮನ ಮೊಟ್ಟೆಗಳು" ಚಲನಚಿತ್ರ ಇಂದು 27th ಬಿಡುಗಡೆ ಆಗಿದೆ. ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ನಿರ್ಮಾಣಕ್ಕೆ ಆದರ್ಶ್ ಅಯ್ಯಂಗಾರ್ ಬಂಡವಾಳ ಹೂಡಿದ್ದಾರೆ. ರಕ್ಷಿತ್ ತೀರ್ಥಹಳ್ಳಿಯವರೇ ಬರೆದ “ಕಾಡಿನ ನೆಂಟರು” ಕಥಾ ಸಂಕಲನದಿಂದ ಆಯ್ದ ಒಂದು ಕಥೆ ತಿಮ್ಮನ ಮೊಟ್ಟೆಗಳು ಸಿನಿಮಾವಾಗಿದೆ.
ಅಮೇರಿಕಾದ ಡಾಲಸ್ ನಲ್ಲಿ ಪ್ರಿಮೀಯರ್ ಶೋ ಮಾಡಿಕೊಂಡಿದ್ದ ಚಿತ್ರತಂಡಕ್ಕೆ ಉತ್ತಮ ಅಭಿಪ್ರಾಯಗಳು ದೊರಕಿತ್ತು. ಕಾಳಿಂಗ ಹಾವು ಚಿತ್ರದ ಕಥಾವಸ್ತುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಾನವ ಸಂಬಂಧ ಮತ್ತು ಪ್ರಾಣಿಸಂಬಂಧದ ಸಣ್ಣ ಎಳೆಯ ಭಾವುಕತೆ ಎಲ್ಲರ ಗಮನ ಸೆಳೆದು ಚಿತ್ರತಂಡ ಮೆಚ್ಚುಗೆಗೆ ಪಾತ್ರವಾಗಿತ್ತು. ಇದಕ್ಕೂ ಮುನ್ನ ಕೋಲ್ಕತ್ತ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ಚಿತ್ರ ದೆಹಲಿಯಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಸ್ಪೆಷಲ್ ಜೂರಿ ಮೆನ್ಸನ್ ಅವಾರ್ಡ್ ಕೂಡ ಪಡೆದುಕೊಂಡಿತ್ತು. ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಕರ್, ಶೃಂಗೇರಿ ರಾಮಣ್ಣ, ಪ್ರಗತಿ ಪ್ರಭು, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ, ಪೃಥ್ವಿರಾಜ್ ಕೊಪ್ಪ, ಪ್ರಾಣೇಶ್ ಕೂಳೆಗದ್ದೆ ಮುಂತಾದವರಿದ್ದಾರೆ. ಚಿತ್ರಕ್ಕೆ ಪ್ರವೀಣ್ ಎಸ್ ಅವರ ಸುಂದರ ಛಾಯಾಗ್ರಹಣ, ಕೆಂಪರಾಜು ಬಿ ಎಸ್ ಅವರ ಸಂಕಲನ ಹಾಗೂ ಹೇಮಂತ್ ಜೋಯಿಷ್ ಅವರ ಸಂಗೀತವಿದೆ.
ಮಲೆನಾಡ ಸುಂದರ ಹಳ್ಳಿಯೊಂದರಲ್ಲಿ ವಾಸಿಸುವ ತಿಮ್ಮ ಶ್ರೀಮಂತರ ಅಡಿಕೆ ತೋಟದಲ್ಲಿ ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸುವ ಕಾಯಕ ಮಾಡುತ್ತಾ ಜೀವಿಸುತ್ತಾನೆ. ಪತ್ನಿ ಹಗೂ ಮಗನೊಂದಿಗೆ ವಾಸವಿರುವ ಅವನಿಗೆ ಸರಿಯಾದ ಗುಡಿಸಲಿಲ್ಲದೆ ಗುಡಿಸಲ ದುರಸ್ತಿಗಾಗಿ ಪರಿತಪಿಸುತ್ತಿರುತ್ತಾನೆ. ಅದೇ ವೇಳೆ ಊರಿಗೆ ಕಾಳಿಂಗ ಸರ್ಪದ ಸಂತತಿ ಉಳಿಸುವ ಸಲುವಾಗಿ ಅದರ ಸಂರಕ್ಷಣೆ ಸಂಶೋಧನೆಗೆಂದು ಒಂದು ತಂಡ ಬರುತ್ತದೆ. ಅವರಿಗೆ ಈ ತಿಮ್ಮನ ಸಹಾಯ ದೊರಕುತ್ತದೆ ಅವರಿಗೆ ಸಹಾಯ ಮಾಡುತ್ತಾ ಅವನ ಜೀವನ ಸಹ ಹೇಗೆಲ್ಲಾ ತಿರುವು ಪಡೆಯುತ್ತದೆ ಎನ್ನುವುದನ್ನು ನೋಡಲು ನೀವು ಚಿತ್ರವನ್ನು ಸಿನಿಮಾ ಮಂದಿರದಲ್ಲಿ ನೋಡಬೇಕು.
ಪಾತ್ರವರ್ಗದ ಕುರಿತಂತೆ ಹೇಳುವುದಾದರೆ ತಿಮ್ಮನ ಪಾತ್ರದಲ್ಲಿ ಕೇಶವ್ ಗುತ್ತಳಿಕೆ ಗಮನ ಸೆಳೆಯುತ್ತಾರೆ. ಪ್ರಮುಖ ಮಹಿಳಾ ಪಾತ್ರದಲ್ಲಿ ಆಶಿಕಾ ಸೋಮಶೇಕರ್ಸಹ ಮೆಚ್ಚುವಂತೆ ನಟಿಸಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್, ಶೃಂಗೇರಿ ರಾಮಣ್ಣ, ಪ್ರಗತಿ ಪ್ರಭು, ರಘು ರಾಮನಕೊಪ್ಪ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಚಿತ್ರದ ಹಿನ್ನೆಲೆ ಸಂಗೀತ ಕಥೆಗೆ ತಕ್ಕಂತಿದ್ದು ಹಾಡು ಸಹ ಕಥೆಯ ಹಿನ್ನೆಲೆಯಲ್ಲಿ ಹೀಗೆ ಬಂದು ಹಾಗೆ ಹೋಗುವಂತಿದೆ. ಛಾಯಾಗ್ರಹಣ ಚಿತ್ರದ ಮತ್ತೊಂದು ಮುಖ್ಯ ಹೈಲೈಟ್ ಆಗಿದೆ ಎನ್ನುವುದು ಗಮನಾರ್ಹ.
ಅವಶ್ಯಕತೆ ಮತ್ತು ಅನಿವಾರ್ಯತೆ ಮನುಷ್ಯನನ್ನು ತನ್ನ ಜೀವನದ ಹಾದಿಯಲ್ಲಿ ಎಂತಹುದೇ ಅಪಾಯ ಬಂದರೂ ಅದನ್ನು ಎದುರಿಸುವ ಧೈರ್ಯ ನೀಡುತ್ತದೆ. ಜೀವನದ ಬಂಡಿ ಸಾಗಿಸುವಲ್ಲಿ ಅದು ಅನಿವಾರ್ಯ ಅನಿಸಿಬಿಡುತ್ತದೆ. ಮನಸ್ಸು ತಪ್ಪು ಒಪ್ಪುಗಳನ್ನು ನಿರ್ಧರಿಸುವ ಗೋಜಿಗೆ ಹೋಗದೆ ಆ ಕ್ಷಣದ ಅವಶ್ಯಕತೆಗೆ ತಲೆದೂಗುತ್ತದೆ - ಇದು "ತಿಮ್ಮನ ಮೊಟ್ಟೆಗಳು" ನೋಡಿದಾಗ ಉಂಟಾದ ಭಾವ. ಒಟ್ಟಾರೆ "ತಿಮ್ಮನ ಮೊಟ್ಟೆಗಳು" ಒಂದು ವಿಭಿನ್ನ ಕಥಾ ಚಿತ್ರವಾಗಿದ್ದು ಪರಿಸರ ಪ್ರೇಮಿಗಳು, ಕಾಡು, ವನಸಿರಿಯನ್ನು ಇಷ್ಟಪಡುವವರು ಈ ಚಿತ್ರವನ್ನೊಮ್ಮೆ ನೋಡಬೇಕು.