ತುಮಕೂರಿನಂಥ ಅಚ್ಚಗನ್ನಡದ ನೆಲದಲ್ಲಿ ಪ್ರಗತಿ ಟಿವಿ ಚಾನೆಲ್ ಗೆ ಸಿಇಓ ಆಗಿ, ಅಪಾರ ಸಾಧನೆಗೈದು, ಪ್ರಗತಿಪರ ಕಾರ್ಯ ಸಾಧಿಸಿರುವ ಟಿ.ಎನ್. ಶಿಲ್ಪಶ್ರೀ ತಮ್ಮ ಮಾಧ್ಯಮದ ಕುರಿತು ನಮ್ಮ ಓದುಗರಿಗೆ ಹೀಗೆ ವಿವರಿಸುತ್ತಾರೆ…….!
ಮಹಿಳೆ ಇಂದಿನ ದಿನಗಳಲ್ಲಿ ಮಾಡದ ಸಾಧನೆಗಳಿಲ್ಲ, ತೋರದ ಸಾಹಸವಿಲ್ಲ ಎಂದರೆ ಅದು ಅತಿಶಯೋಕ್ತಿಯಂತೂ ಅಲ್ಲ. ಒಂದು ಕಾಲದಲ್ಲಿ ಮನೆ ನಡೆಸಿಕೊಂಡು ಹೋಗುತ್ತಿದ್ದ ಮಹಿಳೆ ಇಂದು ಒಂದಿಡೀ ಸಂಸ್ಥೆಯನ್ನು ಅಷ್ಟೇಕೆ ಒಂದು ದೇಶವನ್ನೇ ನಿಭಾಯಿಸಬಲ್ಲಳು. ಅಂತಹವರ ನಡುವೆ ನಮ್ಮ ರಾಜ್ಯದವರಾದ ಶಿಲ್ಪಶ್ರೀ ಟಿ.ಎನ್. ಸಹ ಒಬ್ಬರು. ಇವರು ತುಮಕೂರು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧವಾಗಿರುವ `ಪ್ರಗತಿ ಟಿವಿ’ ವಾಹಿನಿಯ ಸಿಇಓ. ಇವರು ಪ್ರಗತಿ ಟಿವಿ ಚಾನೆಲ್ ನ ಸಿಇಓ ಆಗಿ ಚಾನೆಲ್ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2015ರಲ್ಲಿ ಚಾನೆಲ್ ಪ್ರಾರಂಭ ಆದಾಗಿನಿಂದ ಚಾನೆಲ್ ಇನ್ನೂ ದಿನದಿನಕ್ಕೆ ಹೆಚ್ಚು ಜನಪ್ರಿಯ ಗೊಳಿಸಿಕೊಂಡು ಬಂದಿದ್ದಾರೆ. ಇಂತಹ ಸಾಧಕಿಯೊಬ್ಬರ ಕಿರು ಪರಿಚಯ ನಿಮ್ಮ ಮುಂದೆ…..
ವ್ಯಾಸಂಗ ಹಿನ್ನೆಲೆ
ಶಿಲ್ಪಶ್ರೀ ತುಮಕೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಸಾಕಷ್ಟು ಹೆಸರಾಗಿರುವ `ಪ್ರಜಾ ಪ್ರಗತಿ’ ದಿನಪತ್ರಿಕೆ ಸಂಪಾದಕರು, ಹಿರಿಯ ಪತ್ರಿಕೋದ್ಯಮಿಯಾದ ಎಸ್. ನಾಗಣ್ಣ ಮತ್ತು ಸಿ.ಎನ್. ಶಾರದಾರವರ ಪುತ್ರಿ. ವಿದ್ಯಾನಿಕೇತನದಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್, ಕಂಪ್ಯೂಟರ್ ಸೈನ್ಸ್ ಪದವಿ ವ್ಯಾಸಂಗ ಮಾಡಿರುವ ಇವರು ಬಿ.ಸಿ. ಸಂಜಯ್ ರನ್ನು ವಿವಾಹವಾಗಿದ್ದಾರೆ. ಇಶಿತಾ ಮತ್ತು ಇಶಾನ್ಇವರ ಮಕ್ಕಳು.
ಪ್ರಗತಿ ಟಿವಿಯು ಪ್ರಾರಂಭವಾಗುವುದಕ್ಕೆ ನಾಗಣ್ಣರ ಆಲೋಚನೆ ಮೂಲವಾಗಿತ್ತು. ತುಮಕೂರಿನ ಜನತೆಯ ಧ್ವನಿಯಾಗಿದ್ದ `ಪ್ರಜಾ ಪ್ರಗತಿ’ ಪತ್ರಿಕೆಯ ಜೊತೆಗೆ ತಮ್ಮದೇ ಆದ ಟಿವಿ ಚಾನೆಲ್ ಬೇಕೆನ್ನುವುದು ನಾಗಣ್ಣನವರ ಯೋಜನೆಯಾಗಿತ್ತು.
ಪ್ರಗತಿ ಟಿವಿ ಒಂದು ಆಕಸ್ಮಿಕ ಸನ್ನಿವೇಶದಲ್ಲಿ ಶಿಲ್ಪಶ್ರೀ ಇದರ ಭಾಗವಾಗಿದ್ದರು. ಶಿಲ್ಪಶ್ರೀಯವರ ಕಾರ್ಯತಂತ್ರ, ದೂರದೃಷ್ಟಿ ಹಾಗೂ ನಿಖರವಾದ ಕಾರ್ಯ ವೈಖರಿಯಿಂದ ಇಂದು ಪ್ರಗತಿ ಟಿವಿಯು ಕೇವಲ ತುಮಕೂರು ಮಾತ್ರವಲ್ಲದೆ, ರಾಜ್ಯದ ನಾನಾ ಭಾಗಗಳಲ್ಲಿ ವಿವಿಧ ನೆಟ್ ವರ್ಕ್ ಗಳ ಮೂಲಕ ಪ್ರಸಾರ ಕಾಣುತ್ತಿದೆ. ಈ ಬಗ್ಗೆ ಮಾತನಾಡಿರುವ ಶಿಲ್ಪಶ್ರೀ ಇಂದು ನಮ್ಮ ಪ್ರಗತಿ ಟಿವಿ ವ್ಯಾಪಕವಾಗಿ ಜನರನ್ನು ತಲುಪಿದೆ. ನಮ್ಮ ಟಿವಿ ಕಾರ್ಯಕ್ರಮಗಳನ್ನು ನೋಡಿದ ಜನತೆ ನಮಗೆ ಕರೆ ಮಾಡುತ್ತಾರೆ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಗಳಲ್ಲಿ ಅಡ್ಡಿಯಾದರೆ ಅದನ್ನೂ ಜನ ಪ್ರಶ್ನಿಸುತ್ತಾರೆ ಎಂದರು.
ಪ್ರಗತಿ ಟಿವಿ ಎನ್ನುವುದು ಒಂದು ಇನ್ ಫೈನ್ ಮೆಂಟ್ ಚಾನೆಲ್ ಆಗಿದೆ. ಇದು ಕೇವಲ ಸುದ್ದಿ ವಾಹಿನಿಯಷ್ಟೇ ಅಲ್ಲ, ಮನರಂಜನೆಯ ಜೊತೆ ಮಾಹಿತಿ ಪ್ರಸಾರ ಇದೆ. ದಿನಕ್ಕೆ ಮೂರು ಸುದ್ದಿ ಬುಲೆಟಿನ್ ಗಳನ್ನು ನೀಡುವ ಪ್ರಗತಿ ಟಿವಿಯಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ ಸುದ್ದಿಗಳೇ ಇರುತ್ತವೆ. ಆದರೆ ಮುಖ್ಯವಾದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಹ ಪ್ರಸಾರ ಮಾಡಲಾಗುತ್ತದೆ.
ರಾಗ ಮಂದಾರ
ಇದಲ್ಲದೆ, ಮನರಂಜನೆ ವಿಚಾರದಲ್ಲಿ ಸಹ ಪ್ರಗತಿ ಟಿವಿ ಎಂದೂ ಹಿಂದೆ ಬಿದ್ದಿಲ್ಲ. `ರಾಗ ಮಂದಾರ’ ಎನ್ನುವ ರಿಯಾಲಿಟಿ ಶೋ ನಡೆಸುವ ಮೂಲಕ ತುಮಕೂರು ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಗಾಯಕರಿಗೆ ಗಮನಾರ್ಹ ವೇದಿಕೆ ಒದಗಿಸಿದೆ. ಈ ಕಾರ್ಯಕ್ರಮದಿಂದಾಗಿ ಸ್ಥಳೀಯ ಗಾಯಕರು ಅದ್ಭುತ ಗಾನ ಪ್ರದರ್ಶನ ನೀಡಿದ್ದಾರೆ. ಈ ಸಂಬಂಧ ಮಾತನಾಡಿರುವ ಶಿಲ್ಪಶ್ರೀ, `ರಾಗ ಮಂದಾರ’ ಎನ್ನುವ ರಿಯಾಲಿಟಿ ಶೋ ಇದಾಗಲೇ ಮೂರು ಸೀಸನ್ ಮುಗಿಸಿದೆ. ಇದರಲ್ಲಿ ಚಿಕ್ಕ ಮಕ್ಕಳ ವಿಭಾಗದಲ್ಲಿ ಹಾಗೂ 18 ರಿಂದ 30 ವರ್ಷದೊಳಗಿನ ಹಿರಿಯರ ವಿಭಾಗಗಳಲ್ಲಿ ಸ್ಪರ್ಧೆ ಇತ್ತು. ಎಲ್ಲಾ ಜನರಿಗೆ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ನಡೆಯುವ ರಿಯಾಲಿಟಿ ಶೋಗಳಲ್ಲಿ ಭಾಗಹಿಸುವುದು ಸಾಧ್ಯವಿಲ್ಲ. ಅಲ್ಲಿ ದೊಡ್ಡ ಮಟ್ಟದಲ್ಲಿ ಸ್ಪರ್ಧೆ ನಡೆಯುವುದರಿಂದ ಇವರಿಗೆ ಅದು ಕಠಿಣ ಸಾಲವಾಗಿದೆ. ಆದರೆ ತುಮಕೂರಿನಲ್ಲಿ ನಾವು ನಡೆಸಿದ ರಿಯಾಲಿಟಿ ಶೋ ಇಂತಹವರಿಗೆ ವರದಾನವಾಗಿದೆ. ಇಲ್ಲಿ ನಾವು ಕೇವಲ ಸ್ಪರ್ಧೆ ನಡೆಸುವುದು ಮಾತ್ರವಲ್ಲ, ತರಬೇತಿಯನ್ನೂ ನೀಡಿದ್ದೇವೆ. ಇಲ್ಲಿ ತರಬೇತಿ ಪಡೆದವರು ರಾಜ್ಯ ಮಟ್ಟದ ರಿಯಾಲಿಟಿ ಶೋಗಳಲ್ಲಿ ಸಹ ಭಾಗಹಿಸಿದ್ದಾರೆ ಎಂದು ಸಂತಸ ಹಂಚಿಕೊಂಡರು.
ಎಜುಕೇಶನ್ ಎಕ್ಸ್ ಪೋ
ಪ್ರಗತಿ ಟಿವಿ ಕಡೆಯಿಂದ ತುಮಕೂರಿನಲ್ಲಿ ಎಜುಕೇಶನ್ ಎಕ್ಸ್ ಪೋಗಳನ್ನು ಸಹ ಆಯೋಜಿಸಿದ್ದಾರೆ. ತುಮಕೂರು ಹಳ್ಳಿಗಳಿಂದ ಕೂಡಿದ ಜಿಲ್ಲೆಯಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಲೇಜುಗಳ ಮಾಹಿತಿಯನ್ನು ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ. `ಎಜುಕೇಶನ್ ಎಕ್ಸ್ ಪೋ’ದಲ್ಲಿ ಬೆಂಗಳೂರಿನ ದೊಡ್ಡ ಕಾಲೇಜುಗಳ ಪ್ರತಿನಿಧಿಗಳೂ ಆಗಮಿಸುತ್ತಾರೆ. ಇದು ತುಮಕೂರಿನ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಅನುಕೂಲಕರವಾಗಿ ಇರುತ್ತದೆ. ಇದು ಉಚಿತವಾಗಿದ್ದು ವಿದ್ಯಾರ್ಥಿಗಳು ಯಾವೆಲ್ಲಾ ಉತ್ತಮ ಕಾಲೇಜುಗಳಲ್ಲಿ, ಯಾವ ಕೋರ್ಸ್ ಗೆ ಸೇರಬಹುದೆನ್ನುವ ಸ್ಪಷ್ಟ ಮಾಹಿತಿ ಇಲ್ಲಿ ಲಭ್ಯವಿರುತ್ತದೆ.
ಯೂಟ್ಯೂಬ್ ಚಾನೆಲ್ ಇದಲ್ಲದೆ ಪ್ರಗತಿ ಟಿವಿಯ ಯೂಟ್ಯೂಬ್ ಚಾನೆಲ್ ಸಹ ಇದ್ದು, ಇದು ಸುಮಾರು ಒಂದು ಲಕ್ಷ ಜನರ ವೀಕ್ಷಣೆಯನ್ನು ಕಂಡಿದೆ. ಈ ಸಂಬಂಧ ವಿವರಿಸಿದ ಶಿಲ್ಪಶ್ರೀ, ನಾವು ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತೇವೆ. ಜನರ ಸಮಸ್ಯೆಗಳ ಕುರಿತು ಸುದ್ದಿ ಪ್ರಸಾರ ಮಾಡುತ್ತೇವೆ. ಬೇರೆ ಚಾನೆಲ್ ಗಳಲ್ಲಿ ಬರದ ಜನರ ಸಮಸ್ಯೆಗಳನ್ನು ಫಲಶ್ರುತಿಯಾಗುವ ಕಾರ್ಯಕ್ರಮಗಳನ್ನು ನಾವು ಹೆಚ್ಚು ಹೆಚ್ಚಾಗಿ ಪ್ರಸಾರ ಮಾಡುತ್ತೇವೆ. ಜನರು ಸಮಸ್ಯೆಗಳಿದ್ದರೆ ನಮ್ಮ ಬಳಿ ಬರುತ್ತಾರೆ. ಇಂದು ನಾವು ನಮ್ಮ ಟಿವಿಯವರ ಬಳಿ ಸಮಸ್ಯೆ ಹೇಳಿಕೊಂಡರೆ, ಆ ಸಮಸ್ಯೆಗೆ ಪರಿಹಾರ ದೊರಕುತ್ತದೆ ಎನ್ನುವ ನಂಬಿಕೆಯನ್ನು ಜನರಲ್ಲಿ ಮೂಡಿಸಿದ್ದೇವೆ.
ಹಾಗಾಗಿ ಜನರು ವಾಟ್ಸ್ ಆ್ಯಪ್, ಇಮೇಲ್ ಸೇರಿ ನಾನಾ ವಿಧದ ಮಾಧ್ಯಮಗಳ ಮೂಲಕ ತಮ್ಮ ಸಮಸ್ಯೆಗಳನ್ನು ನಮ್ಮೊಡನೆ ಹಂಚಿಕೊಳ್ಳುತ್ತಾರೆ. ನಾವು ಅವುಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಜನರು ಇಂತಹ ಹೆಚ್ಚು ಹೆಚ್ಚು ಸ್ಪಂದನೆಗಳನ್ನು ಮಾಡುವುದರಿಂದ ಯೂಟ್ಯೂಬ್ ನಲ್ಲಿ ನಮಗೆ ನಮ್ಮನ್ನು ಎಷ್ಟು ಸಂಖ್ಯೆಯ ಜನ ವೀಕ್ಷಿಸುತ್ತಿದ್ದಾರೆ ಎನ್ನುವ ಅಂದಾಜು ಸಿಗುತ್ತದೆ ಎಂದರು.
ಮೂಲ ಪ್ರೇರಣೆ
ತಂದೆಯೇ ನನಗೆ ಇನ್ ಸ್ಪಿರೇಶನ್ ಎಂದಿರುವ ಶಿಲ್ಪಶ್ರೀ ನಾಗಣ್ಣ ಭಾನುವಾರ ಕಛೇರಿಗೆ ಆಗಮಿಸಿ ಕೆಲಸದಲ್ಲಿ ನಿರತರಾಗಿರುತ್ತಾರೆ. ಅವರಿಂದಲೇ ನಾವು ಪ್ರೇರಣೆ ಪಡೆದಿದ್ದು, ಅವರಿಗಿರುವ ಕೆಲಸದ ಮೇಲಿನ ಶ್ರದ್ಧೆಯೇ ನಮಗೆ ಕೆಲಸ ಮಾಡಲು ಉತ್ಸಾಹ ಮೂಡಿಸುತ್ತದೆ ಎನ್ನುತ್ತಾರೆ. ತಾಯಿ ಕೂಡ ನಮಗೆ ಸಹಾಯಕರಾಗಿ ಮನೆ ನೋಡಿಕೊಳ್ಳುವ ಮೂಲಕ ನೆರವಾಗಿರುತ್ತಾರೆ. ನನ್ನ ತಂದೆ ದೊಡ್ಡ ಪತ್ರಿಕೋದ್ಯಮಿ ಆಗಿರುವುದು ನನಗೆ ದೊಡ್ಡ ಹೆಮ್ಮೆ. ನಾನೆಲ್ಲಿ ಹೋದರೂ ನಾಗಣ್ಣನವರ ಪುತ್ರಿ ಎಂದು ಗುರುತಿಸುತ್ತಾರೆ. ಇದು ನನ್ನ ಜವಾಬ್ದಾರಿಯನ್ನು ಸಹ ಹೆಚ್ಚಿಸುತ್ತದೆ. ಅವರ ಹೆಸರಿನಲ್ಲಿಯೂ ಚ್ಯುತಿ ಬಾರದಂತೆ ಮುಂದುವರಿಯಬೇಕೆನ್ನುವ ಎಚ್ಚರ ನನಗಿದೆ. ಅವರು ಮಾಡಿದಷ್ಟು ದೊಡ್ಡ ಸಾಧನೆಯು ನನ್ನದಲ್ಲದಿದ್ದರೂ ನಾನೂ ಅವರಿಂದ ಕಲಿತು ಮುಂದುವರಿಯುತ್ತಿದ್ದೇನೆ. ನಾನು ಅವರಿಂದಲೇ ಎಲ್ಲವನ್ನೂ ಕಲಿತಿದ್ದೇನೆ. ಅದರಲ್ಲಿಯೂ ಜನರನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ನನ್ನ ತಂದೆ ನನಗೆ ಕಲಿಸಿದ್ದಾರೆ ಎಂದು ವಿವರಿಸಿದರು.
ಪ್ರಸಕ್ತ ಮಾಧ್ಯಮಗಳು
ಇಂದಿನ ಮಾಧ್ಯಮ, ಟವಿ ಚಾನೆಲ್ ನೋಡುವುದು ಬೇಸರ ತರಿಸಿದೆ. ಇಂದು ಏನಾಗುತ್ತಿದೆ ಎನ್ನುವುದನ್ನು ಪಾರದರ್ಶಕವಾಗಿ ತೋರಿಸಬೇಕು, ಯಾವುದೇ ಒಂದು ಪಕ್ಷ, ವ್ಯಕ್ತಿ ಅಥವಾ ಸಿದ್ಧಾಂತದ ಕಡೆ ಒಲವಿದ್ದು ಸುದ್ದಿ ಮಾಡುವುದು ಸರಿಯಲ್ಲ. ಜನರಿಗೆ ತಪ್ಪು ಮಾಹಿತಿ ದೊರಕಬಾರದು. ಮಾಧ್ಯಮಗಳು ಜನರಿಗೆ ಶಿಕ್ಷಣದ ಜೊತೆಗೆ ಮಾರ್ಗದರ್ಶನವನ್ನೂ ನೀಡಬೇಕಿದೆ. ಆದರೆ ಇಂದು ಮಾಧ್ಯಮಗಳಲ್ಲಿ ಕೇವಲ ನೆಗೆಟಿವ್ ಸುದ್ದಿಗಳೇ ವೈಭಯುತವಾಗಿ ಬರುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
ನವೋದ್ಯಮ
ನವೋದ್ಯಮದ ಕುರಿತು ಮಾತನಾಡಿದ ಶಿಲ್ಪಶ್ರೀ, ಸ್ಮಾರ್ಟ್ ಆ್ಯಪ್ ಗಳು ಅಥವಾ ನವೋದ್ಯಮಗಳು ಒಳ್ಳೆಯ ಬೆಳವಣಿಗೆ. ಇದರಿಂದ ಹೊಸ ಹೊಸ ಆಲೋಚನೆಗಳು ಹೊರಬರುತ್ತದೆ. ಇದರಿಂದ ಸ್ವ ಉದ್ಯೋಗ ಹೆಚ್ಚುತ್ತದೆ. ತುಮಕೂರಿನಲ್ಲಿ ಇಂತಹ ನವೋದ್ಯಮಕ್ಕೆ ನಾವು ಸಹ ನೆರವು ನೀಡುತ್ತೇವೆ. ಅವರಿಗೆ ಜಾಹೀರಾತು, ಪ್ರಚಾರವನ್ನು ನಾವು ನೀಡುತ್ತೇವೆ. ಇದರಿಂದ ಅವರು ಇನ್ನಷ್ಟು ಜನರಿಗೆ ಉದ್ಯೋಗ ನೀಡುತ್ತಾರೆ. ಇದು ಸಮಾಜದಲ್ಲಿ ನಿರುದ್ಯೋಗ ಸಮಸ್ಯೆ ತೊಡೆದುಹಾಕಲು ಅನುಕೂಲವಾಗಲಿದೆ. ಸರ್ಕಾರವೇ ಪ್ರತಿಯೊಬ್ಬರಿಗೆ ಉದ್ಯೋಗ ನೀಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಇಂತಹ ನವೋದ್ಯಮಗಳು ಬಂದು ಹೆಚ್ಚು ಹೆಚ್ಚು ಯುವಕರು ಸ್ವಾವಲಂಬಿಗಳಾಗಬೇಕು ಎಂದರು.
ಅಂತಿಮವಾಗಿ ಶಿಲ್ಪಶ್ರೀ ಮುಂಬರುವ ದಿನಗಳಲ್ಲಿ ಪ್ರಗತಿ ಟಿವಿಯನ್ನು ಬೆಂಗಳೂರು ನಗರದಲ್ಲಿ ಹೆಚ್ಚು ಜನಪ್ರಿಯಗೊಳಿಸುವ ಆಲೋಚನೆ ಇದೆ ಎಂದರು. ಅಲ್ಲದೆ ಪಬ್ಲಿಶಿಂಗ್ ಹೌಸ್ ಸ್ಥಾಪಿಸುವ ಆಲೋಚನೆಯನ್ನು ಹೊಂದಿರುವುದಾಗಿಯೂ ಹೇಳಿದ್ದಾರೆ. ಶಿಲ್ಪಶ್ರೀಯವರ ಈ ಎಲ್ಲಾ ಕನಸುಗಳು ನೆರವೇರಲಿ, ಪ್ರಗತಿ ಟಿವಿ ಮತ್ತಷ್ಟು ಲಕ್ಷ ಮಂದಿಯ ಮನೆಗಳನ್ನು ತಲುಪಲಿ ಎಂದು ಗೃಹಶೋಭಾ ಹಾರೈಸುತ್ತಾಳೆ!
– ರಾಘವೇಂದ್ರ ಅಡಿಗ ಎಚ್ಚೆನ್/ಎಚ್.ಎಂ. ಶಂಕರ್