ನಾವೆಲ್ಲರೂ ಅತ್ಯಾಧುನಿಕ ಜೀವನಶೈಲಿಗೆ ಬದಲಾಗುತ್ತಿದ್ದೇವೆ. ಆದರೆ ಈಗಲೂ ಸಹ ನಮ್ಮ ದೇಶದಲ್ಲಿ `ಕಾಂಡೋಂ’ ಎಂದು ಪಬ್ಲಿಕ್ ಆಗಿ ಹೇಳುವಂತಿಲ್ಲ, ಅದು ಟ್ಯಾಬೂ ಎನಿಸಿದೆ. ಇಂದೂ ಸಹ ಯುವಜನತೆ ಮೆಡಿಕಲ್ ಶಾಪ್ ಎದುರು ಹೋಗಿ `ಕಾಂಡೋಂ’ ಕೇಳಲು ಹಿಂಜರಿಯುತ್ತಾರೆ. ಆದರೆ `ಕಾಂಡೋಂ’ ಕೆಟ್ಟದ್ದೇನಲ್ಲ, ಇತರ ವಸ್ತುಗಳಂತೆಯೇ ಇದರ ಅಗತ್ಯ ಇದೆ. ನಮ್ಮ ಜನರ ಮನದಲ್ಲಿ ಜಾಗ್ರತೆ ಮೂಡಿಸಿ, ಕಾಂಡೋಂ ಕುರಿತ ಟ್ಯಾಬೂ ದೂರ ಮಾಡಲು ಬಂದಿರುವ ಚಿತ್ರವೇ `ಕಹಾನಿ ರಬ್ಬರ್ಬ್ಯಾಂಡ್ ಕೀ.`ಈ ಚಿತ್ರದ ಪ್ರಮುಖ ವೈಶಿಷ್ಟ್ಯ ಎಂದರೆ ಈ ಚಿತ್ರದ ಕಥೆ, ಕಿತ್ರಕಥೆ, ನಿರ್ದೇಶನದ ಜವಾಬ್ದಾರಿ ಯಾರೋ ಗಂಡಸರದ್ದಲ್ಲ, ಬದಲಿಗೆ ಒಬ್ಬ ಹೆಣ್ಣುಮಗಳದ್ದು! ಆಕೆಯೇ ಸಾರಿಕಾ ಸಂಜೋತ್. ಇದು ಈಕೆಯ ಮೊದಲ ಚಿತ್ರ ಎಂಬುದು ಇಲ್ಲಿನ ಪ್ಲಸ್ ಪಾಯಿಂಟ್. ಮೊದಲ ಬಾರಿಗೇ ನಮ್ಮ ಮಡಿವಂತ ಸಮಾಜಲ್ಲಿ ಟ್ಯಾಬೂ ಎನಿಸಿರುವ ಕಾಂಡೋಂ ವಿಷಯಕ್ಕೆ ಕೈ ಹಾಕಿದ್ದು ನಿಜಕ್ಕೂ ಸಾಹಸವೇ ಸರಿ, ಬೇರೆ ಗಂಡಸರು ಈ ವಿಷಯವನ್ನು ಇಷ್ಟು ಆಳವಾಗಿ ವಿಶ್ಲೇಷಿಸಿಲ್ಲ ಎಂಬುದೂ ನಿಜ.
ಈ ಚಿತ್ರದಲ್ಲಿ `ಸಸುರಾಲ್ ಸಿಮರ್’ ಧಾರಾವಾಹಿ ಖ್ಯಾತಿಯ ನಟ ಮನೀಶ್ ರಾಯ್ ಹಾಗೂ `ಬಾಲಿಕಾ ವಧು’ ಖ್ಯಾತಿಯ ಅವಿಕಾ ಗೌರವ್ ಜೊತೆ `ವ್ಯೂಹ 92′ ಚಿತ್ರದ ಪ್ರತೀಕ್ ಗಾಂಧಿ ಒಟ್ಟಾಗಿ ನಟಿಸಿರುವುದು ಹೆಚ್ಚಿನ ಕಳೆ ತಂದಿದೆ.
ಸಾರಿಕಾ ಜೊತೆ ಗೃಹಶೋಭಾ ನಡೆಸಿದ ಮಾತುಕಥೆಯ ಸಾರಾಂಶ :
ಇದುವರೆಗಿನ ನಿಮ್ಮ ಬಾಲಿವುಡ್ ಪ್ರಯಾಣ ಹೇಗೆ ಸಾಗಿದೆ? ಸಿನಿಮಾ ಕಡೆ ತಿರುಗಬೇಕೂಂತ ಯಾಕೆ ಅನ್ನಿಸಿತು?
ನನಗೆ ಸಿನಿಮಾ ಹಿನ್ನೆಲೆ ಇಲ್ಲವೇ ಇಲ್ಲ. ಬಾಲ್ಯದಿಂದಲೂ ವಿಪರೀತ ಸಿನಿಮಾ ನೋಡುವ ಹುಚ್ಚಿತ್ತು. ಪ್ರತಿ ಕುಟುಂಬದಲ್ಲೂ ತಾಯಿ ತಂದೆ ತಮ್ಮ ಮಕ್ಕಳನ್ನು ಡಾಕ್ಟರ್, ಎಂಜಿನಿಯರ್ ಮಾಡಬೇಕೆಂದೇ ಕನಸು ಕಾಣುತ್ತಾರೆ. ಆದರೆ ನನ್ನ ತಂದೆ ಮೊದಲಿನಿಂದಲೂ ನನ್ನನ್ನು ಚಿತ್ರ ನಿರ್ದೇಶಕಿಯಾಗಿ ಕಾಣಬೇಕೆಂದೇ ಬಯಸಿದ್ದರು. ಹಾಗೇಂತ ಅವರಿಗೂ ಬಾಲಿವುಡ್ ಗೂ ಯಾವ ಸಂಬಂಧವೂ ಇಲ್ಲ. ಅವರು ನನ್ನನ್ನು ಎಲ್ಲಾ ಬಗೆಯ ಚಿತ್ರಗಳಿಗೂ ಕರೆದೊಯ್ಯುತ್ತಿದ್ದರು. ನಾನು ಸಿಸ್ಟಂನಲ್ಲಿ ಹಿಂದಿಯ ಮೊದಲ ವಾಕ್ಚಿತ್ರ `ರಾಜ ಹರಿಶ್ಚಂದ್ರ’ ಸಹ ನೋಡಿದ್ದೇನೆ. ಹಾಗೆಯೇ ನಮ್ಮ ದೇಶದ ಬಹು ಭಾಷೆಗಳ, ದಕ್ಷಿಣದ, ವಿದೇಶೀ ಚಿತ್ರಗಳನ್ನೂ ಬೇಕಾದಷ್ಟು ನೋಡಿದ್ದೇನೆ. ಹೀಗಾಗಿ ನನಗೆ ಸಿನಿಮಾ ಅಂದ್ರೆ ಬದುಕಿನ ಭಾಗವೇ ಆಗಿಹೋಗಿದೆ.
ನನ್ನ ಡಿಗ್ರಿ ಕೋರ್ಸ್ ಜೊತೆ ಕ್ರಮೇಣ ನಾನು ಸಿನಿಮಾ ಶೂಟಿಂಗ್ ಕುರಿತಾದ ತಾಂತ್ರಿಕ ಅಂಶಗಳ ಬಗ್ಗೆಯೂ ಅಧ್ಯಯನ ಮಾಡಿ, ಪ್ರಾಕ್ಟಿಕಲ್ ಆಗಿಯೂ ಕಲಿಯ ತೊಡಗಿದೆ. ಹಾಗೆಯೇ ಸಿನಿಮಾಗೆ ಅಂತ್ಲೇ ಕಥೆ ಬರೆದೆ, ಚಿತ್ರಕಥೆ ಬರೆಯುವುದನ್ನು ರೂಢಿಸಿಕೊಂಡೆ. ಈ ರೀತಿ ನಾನೀಗ ಕಥೆ, ಚಿತ್ರಕಥೆ, ನಿರ್ದೇಶನಗಳ ಜವಾಬ್ದಾರಿ ವಹಿಸಿಕೊಂಡು `ರಬ್ಬರ್ ಬ್ಯಾಂಡ್’ ಚಿತ್ರ ರೆಡಿ ಮಾಡಿದ್ದೇನೆ. ಈ ಚಿತ್ರ ಖಂಡಿತವಾಗಿ ತೀರಾ ವಿಭಿನ್ನ ವಿಷಯಕ್ಕೆ ಸಂಬಂಧಿಸಿದ್ದು ಎನ್ನಬಹುದು. ಜನರಿಗೆ ಕೇವಲ ಮನರಂಜನೆ ಮಾತ್ರವಲ್ಲದೆ, ಒಂದು ಮೆಸೇಜ್ ಸಹ ನೀಡಲಿದೆ ಈ ಚಿತ್ರ.
ಈ `ರಬ್ಬರ್ ಬ್ಯಾಂಡ್’ ಚಿತ್ರಕ್ಕೆ ನಿಮಗೆ ಎಲ್ಲಿಂದ ಕಥೆ ದೊರಕಿತು?
ನೋಡಿ, ಸಿನಿಮಾಗಳನ್ನು ನೋಡನೋಡುತ್ತಾ ನನ್ನ ಮನದಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಆಧಾರಿತ ಕಥೆಗಳನ್ನು ಶೋಧಿಸುವ ಒಂದು ಅಭ್ಯಾಸ ಬೆಳೆಸಿಕೊಂಡೆ. ದೈನಂದಿನ ಜೀವನದಲ್ಲಿ ನಡೆಯುವ ಸಣ್ಣಪುಟ್ಟ ಘಟನೆಗಳನ್ನೇ ಆಧರಿಸಿ ಕಥೆ ಬರೆಯತೊಡಗಿದೆ. ಇದನ್ನು ಸಿನಿಮಾ ಮಾಡುವ ಪ್ರಕ್ರಿಯೆ ಕೆಲವು ವರ್ಷಗಳ ಹಿಂದಿನಿಂದಲೇ ನನ್ನನ್ನು ಕಾಡುತ್ತಿತ್ತು. ಇಂಥ ಹಲವಾರು ಕಾನ್ ಸೆಪ್ಟ್ಸ್ ಬಗ್ಗೆ ಕೆಲಸ ಮಾಡಿದ್ದೇನೆ. ಹೀಗಾಗಿ ನನ್ನ ಈ ಮೊದಲ ಚಿತ್ರ `ರಬ್ಬರ್ ಬ್ಯಾಂಡ್’ ಎಲ್ಲಕ್ಕಿಂತಲೂ ತುಸು ಭಿನ್ನವಾಗಿ ನಿಲ್ಲುತ್ತದೆ. ನಮ್ಮ ಸುತ್ತಮುತ್ತಲೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ ಇಂಥ ಕಥೆಗಳ ಭಂಡಾರವೇ ಸಿಗಲಿದೆ. ನನ್ನ ಫ್ರೆಂಡ್ ಒಬ್ಬಳು ಕಾಂಡೋಂ ಕುರಿತಾಗಿನ ತನ್ನ ಅನುಭವದ ಬಗ್ಗೆ ನನಗೆ ಹೇಳಿದಳು. ಅದರಿಂದ ಪ್ರೇರಿತಳಾಗಿಯೇ ನಾನು ಈ `ರಬ್ಬರ್ ಬ್ಯಾಂಡ್’ ಸಿನಿಮಾ ಮಾಡಲು ಮುಂದಾದೆ. ನನ್ನ ಅನುಭವಗಳಿಂದ ಹೇಗೆ ಸಾಮಾನ್ಯ ಘಟನೆಗಳನ್ನೂ ಒಂದು ಚಿತ್ರಕಥೆ ಆಗಿಸಬಹುದು ಎಂದು ಅರಿತಿದ್ದೇನೆ. ಇದೊಂದು ಕಾಮಿಡಿ ಮೂವಿ ಆಗಿದ್ದು, ಇದರಲ್ಲಿ ಒಂದು ಗಂಭೀರ ವಿಷಯದ ಚರ್ಚೆ ಮಾಡಿದ್ದೇವೆ.
ನೀವೇಕೆ ಈ ಚಿತ್ರಕ್ಕೆ `ರಬ್ಬರ್ ಬ್ಯಾಂಡ್’ ಎಂದು ಹೆಸರಿಟ್ಟಿರಿ?
ನಮ್ಮ ಚಿತ್ರದ ಮೂಲ ಕಥೆ, ನಮ್ಮ ಸಮಾಜದಲ್ಲಿ ಇಂದಿಗೂ ಟ್ಯಾಬೂ ಎನಿಸಿರುವ `ಕಾಂಡೋಂ’ ಕುರಿತಾದುದು. ಯಾರೇ ಕಾಂಡೋಂ ಖರೀದಿಸಲಿ, ಇಂದಿಗೂ ಜನ ಅವರನ್ನು ವಿಚಿತ್ರ ದೃಷ್ಟಿಯಿಂದ ಗಮನಿಸುತ್ತಾರೆ. ಆದರೆ ಇದು ಪ್ರತಿ ಜೋಡಿಗೂ ಅತ್ಯಗತ್ಯವಾದುದು. ಇದು ಕೇವಲ `ಫ್ಯಾಮಿಲಿ ಪ್ಲಾನಿಂಗ್’ ದೃಷ್ಟಿಯಿಂದ ಮಾತ್ರವಲ್ಲ, ಆಂತರಿಕ ಆರೋಗ್ಯದ ದೃಷ್ಟಿಯಿಂದಲೂ ಬಲು ಮುಖ್ಯ. ಆದರೆ ನಮ್ಮ ಜನ ಇಂದಿಗೂ ಮೆಡಿಕಲ್ ಶಾಪ್ ಗೆ ಹೋಗಿ ಕಾಂಡೋಂ ಕೇಳಲು ಹಿಂಜರಿಯುತ್ತಾರೆ. ಗಂಡಸರದೇ ಈ ಪವಾಡವಾದರೆ ಹೆಣ್ಣುಮಕ್ಕಳ ಬಗ್ಗೆ ಏನು ತಾನೇ ಹೇಳಲಾದೀತು? ಆ ದೃಷ್ಟಿಯಿಂದಲೇ ನಮ್ಮ ದೇಶದಲ್ಲಿ ಫೀಮೇಲ್ ಕಾಂಡೋಂ ಫೇಲ್ಯೂರ್ ಆಗಿದೆ ಎನ್ನಬಹುದು. ಗಂಡಸರು ಸಂಕೊಚ ಪಟ್ಟುಕೊಂಡಾದರೂ ಇದನ್ನು ಕೊಂಡು ಬಳಸುತ್ತಾರೆ, ಮಹಾನಗರಗಳ ಅತ್ಯಾಧುನಿಕ ಹೆಂಗಸರನ್ನು ಬಿಟ್ಟರೆ, ಬೇರೆ ಕಡೆ ಇದನ್ನು ಕೊಳ್ಳುವ ಬಳಸುವ ಹೆಂಗಸರೇ ನಮ್ಮಲ್ಲಿಲ್ಲ ಎನ್ನಬಹುದು.
ಜನ ಇದನ್ನು ಅಂಗಡಿಯಲ್ಲಿ ನೇರ ಈ ಹೆಸರಿನಿಂದ ಕೊಳ್ಳಲು ಹಿಂಜರಿದರೆ, ಸಾಮಾನ್ಯ ಪದ `ರಬ್ಬರ್ ಬ್ಯಾಂಡ್’ ಹೆಸರಿನಿಂದ ಕೇಳಿ ಪಡೆಯಲಿ ಎಂದೇ, ಬೇಕು ಅಂತಲೇ ಈ ಹೆಸರಿಟ್ಟಿದ್ದೇನೆ.
`ರಬ್ಬರ್ ಬ್ಯಾಂಡ್’ ಚಿತ್ರದ ಕಥೆಯ ಕುರಿತಾಗಿ ಏನು ಹೇಳ ಬಯಸುತ್ತೀರಿ?
ಯಾರಿಂದ ತಾನೇ ತಪ್ಪು ನಡೆಯುದಿಲ್ಲ? ನಮ್ಮ ಈ ಚಿತ್ರದ ನಾಯಕನೂ ಅಂಥದ್ದೇ ಒಂದು ತಪ್ಪು ಮಾಡುತ್ತಾನೆ. ಅವನು ಅಂಗಡಿಗೆ ಹೋದಾಗ, ಬಾಯಿ ಬಿಟ್ಟು ಕಾಂಡೋಂ ಎಂದು ಕೇಳಲಾರದೆ, `ಅದು ಬೇಕು…. ಅದು ಬೇಕು’ ಎಂದು ಸಂಜ್ಞೆ ಮೂಲಕ ಕೇಳುತ್ತಾನೆ. ಅಂಗಡಿಯವನು ಅದನ್ನು ಅರ್ಥ ಮಾಡಿಕೊಂಡು, ಒಂದು ಪೇಪರ್ ನಲ್ಲಿ ಆ ಪ್ಯಾಕೆಟ್ ಸುತ್ತಿ ಕೊಡುತ್ತಾನೆ. ಈತ ಅದರ ಎಕ್ಸ್ ಪೈರಿ ಡೇಟ್ ಅಥವಾ ಬೆಲೆಯನ್ನೂ ಕೇಳುವುದಿಲ್ಲ. ಅದನ್ನು ಕೊಂಡು ತೆಪ್ಪಗೆ ಮನೆಗೆ ಹೋದ. ಈ ತಪ್ಪಿನಿಂದ ಅವನ ಹೆಂಡತಿ ಏನೆಲ್ಲ ಸಮಸ್ಯೆ ಎದುರಿಸಬೇಕಾಯಿತು ಎಂಬುದೇ ಇದರ ಕಥೆ.
ಕಳ್ಳತನ ಮಾಡುವವನಿಗೆ ಶಿಕ್ಷೆ ಆಗುತ್ತದೆ. ಆದರೆ ಈ ಘಟನೆಯಲ್ಲಿ ಅಸಲಿಗೆ ತಪ್ಪು ಮಾಡಿದವರು ಯಾರು? ಕಳ್ಳ ಯಾರು? ಅಂಥವರ ತಪ್ಪನ್ನು ಸಾಬೀತು ಪಡಿಸುವುದು ಹೇಗೆ?
ನಮ್ಮ ನಾಯಕ ಖರೀದಿಸಿ ತಂದ ಈ ಕಾಂಡೋಂ ಬಳಕೆ ಮಧ್ಯೆ ಹರಿದು ಹೋಗುತ್ತದೆ. ಅಲ್ಲಿಂದ ಸಮಸ್ಯೆ ಶುರು. ಸೇಲ್ ಆದರೆ ಸಾಕೆಂಬ ಅಂಗಡಿಯವನು ಅಗ್ಗದ ಅಥವಾ ಎಕ್ಸ್ ಪೈರಿ ಆಗಿರುವಂಥ ಕಾಂಡೋಂ ಕೊಟ್ಟು ಕೈ ತೊಳೆದುಕೊಂಡಿದ್ದ. ಇದನ್ನು ಕೋರ್ಟಿನಲ್ಲಿ ಹೇಗೆ ತಾನೇ ಸಾಬೀತುಪಡಿಸುವುದು?
ಹೀಗೆ ಕಾಂಡೋಂ ಕುರಿತಾಗಿಯೇ `ಜನ್ ಹಿತ್ ಮೇ ಜಾರಿ‘ ಚಿತ್ರ ಬಂದಿತ್ತು. ಆದರೆ ವೀಕ್ಷಕರಿಗೆ ಯಾಕೋ ಅದು ರುಚಿಸಲಿಲ್ಲ…. ಗೊತ್ತಿದ್ದೂ ಅಂಥ ವಿಷಯಕ್ಕೆ ಕೈ ಹಾಕಿದ್ದೀರಲ್ಲ?
ಪ್ರತಿ ಚಿತ್ರದ ನಿರ್ಮಾಪಕ ನಿರ್ದೇಶಕರಿಗೂ ಗರಿಷ್ಠ ಮಂದಿ ತಮ್ಮ ಚಿತ್ರ ನೋಡಲಿ ಅಂತ ಆಸೆ ಇರುತ್ತದೆ. ಆದರೆ `ಜನ್ ಹಿತ್ ಮೇ ಜಾರಿ’ ಚಿತ್ರದ ಉದ್ದೇಶವೇ ಬೇರೆ ಇತ್ತು. ನಮ್ಮ ಚಿತ್ರದ ಸಂದೇಶವೇ ಬೇರೆ. ನಾವು ಗಂಡಸರನ್ನು ಮಾತ್ರ ಇಲ್ಲಿ ಟಾರ್ಗೆಟ್ ಮಾಡಿಲ್ಲ. ಕಾಂಡೋಂ ಕುರಿತಾಗಿ ಎಲ್ಲಾ ಜೋಡಿಗಳೂ ಸರಿಯಾಗಿ ತಿಳಿದುಕೊಳ್ಳಲಿ ಎಂಬುದೇ ನಮ್ಮ ಗುರಿ.
ಹಾಗೇಂತ ನಾವು ಹುಡುಗಿಯರನ್ನು ಮನೆ ಮನೆಗೂ ಕಾಂಡೋಂ ಮಾರಲು ಕಳಿಸಲಾದೀತೇ? ಅದರಿಂದ ನಮ್ಮ ಸಮಾಜ ಬದಲಾದೀತೇ?
ಖಂಡಿತಾ ಇಲ್ಲ!
ಈ ಟ್ಯಾಬೂ ಇಷ್ಟಕ್ಕೆ ನಿಲ್ಲುತ್ತದೆಯೇ?
ಇಲ್ಲ! ಪ್ರತಿ ಟೀನೇಜರ್ ಗೂ ಕಾಂಡೋಂ ಮಹತ್ವದ ಬಗ್ಗೆ ತಿಳಿಸಿ ಕೊಡಬೇಕು. ಅಂಥ ಟೀನೇಜರ್ಸ್ ಗೆ ನಾವು ಬೇಕೆಂದೇ `ಆ ಕಡೆ ನೋಡಬೇಡ…. ನಿನಗೇಕೆ ಬೇಕು ಇದರ ವಿರಗಳು?’ ಅಂತಿದ್ದರೆ ಈ ಟ್ಯಾಬೂ ಮುಗಿಯುವುದೇ ಇಲ್ಲ. ಕಾಂಡೋಂ, ಪಿಲ್ಸ್, ಸೆಕ್ಸ್ ಇತ್ಯಾದಿ ಮಾತುಗಳನ್ನು ತಾಯಿಮಗಳು, ತಂದೆಮಗ ಸಹಜವಾಗಿ ಮನೆಯಲ್ಲಿ ಮಾತನಾಡುವಂತಾದಾಗ, ಈ ಟ್ಯಾಬೂ ಕೊನೆಗೊಂಡೀತು.
ಬಳಸಿದ ಅಥವಾ ಬಳಸದ ಕಾಂಡೋಮ್ ನ್ನು ರಸ್ತೆ ಬದಿಗೆಸೆಯಿರಿ ಎಂದು ನಾವು ಇಲ್ಲಿ ಹೇಳುತ್ತಿಲ್ಲ. ಮನೆಯಲ್ಲಿ ಕಾಂಡೋಂ ಬಗ್ಗೆ ಟೀನೇಜರ್ಸ್ ಸೊಲ್ಲೆತ್ತಬಾರದು ಎಂಬುದು ಸರಿಯಲ್ಲ. ನಾವು ಈ ಚಿತ್ರದ ಮೂಲಕ ಇಂಥದ್ದನ್ನು ತೋರಿಸಿ, ಟೀನೇಜರ್ಸ್ ಗೆ ಈ ಬಗ್ಗೆ ಇರುವ ಅನಗತ್ಯ ಅವಾಂಚಿತ ಕುತೂಹಲ ತಣಿಸಲು ಯತ್ನಿಸಿದ್ದೇವೆ. ಆರೋಗ್ಯಕರ ಲೈಂಗಿಕ ಚರ್ಚೆ, ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ದಾರಿ!
ಕಾಂಡೋಂ ಎಂಬುದನ್ನು ಟ್ಯಾಬೂ ಅಂದುಕೊಳ್ಳುವುದರಿಂದ ಆಗುವ ಅನಾಹುತಗಳ ಬಗ್ಗೆ ಈ ಚಿತ್ರದಲ್ಲಿ ಚರ್ಚಿಸಿದ್ದೇವೆ. ಯಾವುದೋ ಹುಡುಗಿಯನ್ನು ಕಾಂಡೋಂ ಮಾರಲು ಕಳುಹಿಸಿ, ಹಣ ಸಂಪಾದನೆಗೆ ದಾರಿ ಎನ್ನುತ್ತಿಲ್ಲ. ಒಂದಷ್ಟು ಕಾಂಡೋಂ ಹೇಗೋ ಉಚಿತವಾಗಿ ಸಿಕ್ಕಾಗ, ಅದನ್ನು ಮಾರಿ ಹಣ ಮಾಡಿಕೊಳ್ಳುವ ಬಗೆಯನ್ನು ಇಲ್ಲಿ ಚರ್ಚಿಸಿಲ್ಲ.
`ಜನ್ ಹಿತ್ ಮೇ ಜಾರಿ’ ಚಿತ್ರ ತಂಡ ಹಾಗೇನೋ ಮಾಡಲು ಹೋಗಿ, ಅವರ ಉದ್ದೇಶ ಬೇರೆ ಏನೋ ಆಗಿತ್ತು. 14+ ಟೀನೇಜರ್ಸ್ ಯಾರೇ ಇರಲಿ, ಕಾಂಡೋಂ ಕುರಿತು ಅವರಿಗೇನೇ ಸಂದೇಹವಿದ್ದರೂ, ಈ ಚಿತ್ರ ನೋಡಿದ ಮೇಲೆ ಅದು ಪರಿಹಾರ ಆಗುತ್ತದೆ, ಸ್ವಸ್ಥ ಸಮಾಜಕ್ಕೆ ಇದು ದಾರಿ.
ಕಾಂಡೋಂ ಖರೀದಿಸಲು ಇರುವ ಸಂಕೋಚ ಒಂದೇ ದಿನಕ್ಕೆ ಹೋಗುವಂಥದ್ದಲ್ಲ. ಟೀನೇಜರ್ಸ್ ಗೆ ಇದು ಸರಿಯಾಗಿ ಕನ್ವೆ ಆದಾಗ ಮಾತ್ರ, ನಮ್ಮ ಸಮಾಜ ಈ ಕುರಿತಾಗಿ ನೋಡುವ ದೃಷ್ಟಿಕೋನ ಬದಲಾದೀತು.
ಈ ಚಿತ್ರದಿಂದ ನೀವೇನು ಬದಲಾವಣೆ ಕಾಣ ಬಯಸುತ್ತೀರಿ?
ಇದರಿಂದ ಮುಂದೆ ಕಾಂಡೋಂ ಟ್ಯಾಬೂ ಆಗಿ ಉಳಿಯವುದಿಲ್ಲ, ಅಟ್ ಲೀಸ್ಟ್ ಮುಂದಿನ ಪೀಳಿಗೆಗೆ ಇದರ ಕುರಿತಾಗಿ ಈಗಿನ ಮಡಿವಂತಿಕೆ ಇರುವುದಿಲ್ಲ. ಜನ ಸಹ ಮುಕ್ತವಾಗಿ ಈ ಕುರಿತು ಮಾತನಾಡುವಂತಾಗಬೇಕು. ಟೀನೇಜರ್ಸ್ ಇದರ ಪ್ರಾಮುಖ್ಯತೆ ತಿಳಿದಾಗ HIV ರೋಗಗಳು ಶಾಶ್ವತವಾಗಿ ತೊಲಗುತ್ತವೆ.
– ಪ್ರತಿನಿಧಿ