ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಮನೆಯಲ್ಲಿ ಎಷ್ಟೇ ರುಚಿ ರುಚಿಯಾಗಿ ಮಾಡಿಕೊಟ್ಟರೂ, ಅದರಲ್ಲಿ ಇಲ್ಲದ ದೋಷ ಹುಡುಕಿ ಚೆನ್ನಾಗಿಲ್ಲ ಎನ್ನುವುದೇ ಮನೆಯವರ ಅಭ್ಯಾಸ. ಆದರೆ ಪರ ಊರಿಗೆ ಹೋದಾಗಲೇ, ನಮ್ಮೂರ ಊಟದ ರುಚಿ ಗೊತ್ತಾಗೋದು, ಅಲ್ವೇ……?

ಸಾಧಾರಣವಾಗಿ ನಮಗೆ ಅವಶ್ಯಕತೆ ಇರುವುದೆಲ್ಲ ಸುಲಭವಾಗಿ ಸಿಗುತ್ತಲೇ ಹೋದರೆ ಅದರ ಬೆಲೆ ಗೊತ್ತಾಗುವುದಿಲ್ಲ. ಇಲ್ಲಿ ಇದ್ದಾಗ ಅದರ ಬಗ್ಗೆಯೇ ಗೊಣಗುತ್ತಲೇ ಇರುವರು ಹೊರಗೆ ಹೋಗಿ ಬಂದ ನಂತರ ಇಲ್ಲಿನ ಮೌಲ್ಯದ ಅರ್ಥ ಮಾಡಿಕೊಳ್ಳುತ್ತೇವೆ. ಅದಕ್ಕೇ ಏನೋ, ಎರಡನೇ ಸೊಸೆ ಬಂದ ನಂತರವೇ ಮೊದಲ ಸೊಸೆಯ ಮಹತ್ವ ಗೊತ್ತಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ.

ನಮ್ಮಾಕೆ ಮನೆಯಲ್ಲಿ ಮಕ್ಕಳಿಗೆ ರುಚಿ ರುಚಿಯಾದ ಅಡುಗೆ ಮಾಡಿ ಹಾಕಿದರೂ, ಛೇ…. ದಿನ  ಅದೇ ಹುಳಿ, ಸಾರು, ಪಲ್ಯನಾ…. ಎಂದು ಗೊಣಗುತ್ತಾ ಆಗಾಗ್ಗೆ ಮಕ್ಕಳು ಸ್ನೇಹಿತರ ಜೊತೆಯಲ್ಲಿ ಜಂಕ್‌ ಫುಡ್‌ ತಿನ್ನುತ್ತಾರೆ. ಕಳೆದ ತಿಂಗಳು ಮಗಳು ಶೈಕ್ಷಣಿಕ ಪ್ರವಾಸಕ್ಕೆಂದು ಎರಡು ವಾರಗಳ ಕಾಲ ಉತ್ತರ ಭಾರತದ ಕೆಲವು ಪ್ರದೇಶಗಳಿಗೆ ಹೋಗುವಾಗ, ನಿಮ್ಮ ಊಟ ತಿಂದು ಸಾಕು ಸಾಕಾಗಿ ಹೋಗಿದೆ. ಅಬ್ಬಾ….! ಎರಡು ಆರಗಳ ಕಾಲ ರುಚಿ ರುಚಿಯಾಗಿ ಉತ್ತರ ಭಾರತೀಯ ತಿನಿಸುಗಳನ್ನು ತಿನ್ನಬಹುದು ಎಂದು ಅಮ್ಮನೊಂದಿಗೆ ಕೊಚ್ಚಿಕೊಂಡು ಹೋಗಿದ್ದ ನಮ್ಮ ಮಗಳು ಅಲ್ಲಿಗೆ ಹೋದಳು.

IB147727_147727163948953_SM378837

ಎರಡೇ ದಿನಗಳಲ್ಲಿ, `ಅಮ್ಮಾ… ಇಲ್ಲಿಯ ಊಟವೇ ಸರಿ ಇಲ್ಲ. ಬೆಳಗ್ಗೆ ತಿಂಡಿ, ಮಧ್ಯಾಹ್ನ  ಊಟ ಮತ್ತು ರಾತ್ರಿಯ ಊಟಕ್ಕೆ ಚಪಾತಿ/ರೋಟಿ ತಿಂದು ತಿಂದೂ ಸಾಕಾಗಿದೆ. ಅದೂ ಅಲ್ಲದೇ, ಒಂದು ತಿಂಡಿಗೆ 100-150 ಆದ್ರೆ ಇನ್ನು ಊಟ ಮಾಡಬೇಕಾದರೆ, 250-300 ರೂ. ಖರ್ಚಾಗುತ್ತದೆ,’ ಎಂದು ಗೋಳಾಡಿದ್ದಳು.

ಪ್ರವಾಸವೆಲ್ಲ ಮುಗಿದು ದೆಹಲಿಯಿಂದ ಬೆಂಗಳೂರಿನ ರೈಲು ಹತ್ತಿದ ಕೂಡಲೇ, `ಅಮ್ಮಾ, ನಾನು ಬಂದ ಕೂಡಲೇ ಅನ್ನ, ತಿಳಿಸಾರು ಮತ್ತು ಪಲ್ಯ ಮಾಡಿಡಿ. ನಾಲಿಗೆ ಎಲ್ಲಾ ಕೆಟ್ಟು ಹೋಗಿದೆ,’ ಎಂದು ಹೇಳಿದಳು. ಮನೆಗೆ ಬಂದ ಬಂದ ನಂತರ ಸ್ನಾನ ಮತ್ತು ನಿತ್ಯ ಕರ್ಮಗಳನ್ನೆಲ್ಲಾ ಮುಗಿಸಿ ಪಟ್ಟಾಗಿ ಒಂದು ಚೂರೂ ಚಕಾರವೆತ್ತದೇ, ಅಮ್ಮ ಮಾಡಿದ ಅಡುಗೆಯನ್ನೇ ಆಹಾ….ಓಹೋ… ಎಂದು ಸವಿಯುತ್ತಾ ಹೊಟ್ಟೆ ಭರ್ತಿ ಗಡದ್ದಾಗಿ ತಿಂದು ಡರ್‌ ಎಂದು ತೇಗಿ ಗೊರ್‌ ಎಂದು ನಿದ್ದೆ ಮಾಡಿ ಎದ್ದಾಗಲೇ ನಮ್ಮ ಮಗಳಿಗೆ ಮನೆಯ ಊಟದ ಮಹತ್ವ ಮತ್ತು ಅಮ್ಮನ ಕೈ ರುಚಿ  ಅದರ ಮೌಲ್ಯ ಗೊತ್ತಾದದ್ದು.

IB150646_150646154758047_SM373505

ದೆಹಲಿಗೆ ಪ್ರವಾಸ

ಈಗ ಅಂತಹದ್ದೇ ಅನುಭವ ನನಗೂ ಸಹ ಆಯಿತು. ಅದರ ಸುಂದರ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕಛೇರಿಯ ಕೆಲಸದ ನಿಮಿತ್ತ ಮೂರು ದಿನಗಳ ಹಿಂದೆ ಬೆಂಗಳೂರಿನಿಂದ ದೆಹಲಿಗೆ ಹೋಗಬೇಕಿತ್ತು. ವಿಮಾನ ಬೆಳಗ್ಗೆ 6.10ಕ್ಕೆ ಇದ್ದ ಕಾರಣ, ಹಿಂದಿನ ರಾತ್ರಿ ಸರಿಯಾಗಿ ನಿದ್ದೆಯೂ ಇರದೇ, ಬೆಳ್ಳಂಬೆಳಗ್ಗೆ 3.30ಕ್ಕೆಲ್ಲಾ ಎದ್ದು ಸ್ನಾನ, ಸಂಧ್ಯಾವಂದನೆ ಎಲ್ಲವನ್ನೂ ಮುಗಿಸಿ, ವಿಮಾನ ನಿಲ್ದಾಣಕ್ಕೆ ಬರುವಷ್ಟರಲ್ಲಿ 4.30 ಆಗಿತ್ತು. ನಂತರ ಅರ್ಧ ಮುಕ್ಕಾಲು ಗಂಟೆಯಲ್ಲಿ ಬ್ಯಾಗ್‌ ಚೆಕ್‌ ಇನ್‌ ಎಲ್ಲಾ ಮುಗಿಸಿ, ಇನ್ನೂ ಸಮಯ ಇದ್ದ ಕಾರಣ, ಹಾಗೇ ಸುಮ್ಮನೆ ತಮಾಷೆ ಮಾಡು ಸಲುವಾಗಿ ಹೀಗೆ ಮಾಡಿದೆ.

IB145962_145962173756470_SM373854

ವಿಮಾನದಲ್ಲೊಂದು ತಮಾಷೆ

ಶಿವಮೊಗ್ಗ ಟಿಕೆಟ್‌ ಗಾಗಿ ಹೈಕಮಾಂಡ್‌ ನಿಂದ ಕರೆ ಬಂದಿರುವ ಕಾರಣ, ದೆಹಲಿಗೆ ಹೋಗುತ್ತಿದ್ದೇನೆ ಎಂದು ಬೋರ್ಡಿಂಗ್‌ ಪಾಸ್‌ಜೊತೆ ನನ್ನದೊಂದು ಫೋಟೋವನ್ನು ಸ್ಟೇಟಸ್‌ ನಲ್ಲಿ ಹಾಕಿ ಅದರ ಕೆಳಗೆ ಸುಳ್ಸುದ್ದಿ ಎಂದು ಬರೆದಿದ್ದರೂ, ನನ್ನ ಮೇಲಿನ ನಂಬಿಕೆ ಮತ್ತು ವಿಶ್ವಾಸದಿಂದ ಅನೇಕ ಹಿತೈಷಿಗಳು ಮೇಲಿಂದ ಮೇಲೆ ಶುಭ ಕೋರಲು ಆರಂಭಿಸಿದರು.

ಇನ್ನು ವಿಮಾನದಲ್ಲಿ ಮೊಬೈಲ್ ‌ಸ್ವಿಚ್‌ ಆಫ್‌ ಮಾಡಿದ್ದರಿಂದ ಇನ್ನೂ ಅನೇಕರು, ನನ್ನ ಕುಟುಂಬದವರಿಗೂ ಕರೆ ಮಾಡಿ ಅಭಿನಂದನೆ ತಿಳಿಸಿದಾಗ, ಆಗಷ್ಟೇ ನಿದ್ದೆಯಿಂದ ಏಳುತ್ತಿದ್ದ ನನ್ನ ಕುಟುಂಬದವರಿಗೆ ಈ ಬಗ್ಗೆ ಏನೂ ತಿಳಿಯದೇ ಕಕ್ಕಾಬಿಕ್ಕಿಯಾಗಿ ನಂತರ ನನ್ನ ಸ್ಟೇಟಸ್‌ ನ್ನು ನೋಡಿದ ಮಗಳು ನನ್ನ ಕುಚೇಷ್ಟೆಯನ್ನು ತಿಳಿಸಿದಾಗಲೇ ಮನೆಯವರಿಗೆ ಒಂದು ಕಡೆ ಹುಸಿ ಕೋಪ, ಮತ್ತೊಂದೆಡೆ ನಗು ಬಂದಿತ್ತಂತೆ. ಅಯ್ಯೋ ಈ ವಯಸ್ಸಿನಲ್ಲೂ ನಿಮ್ಮಪ್ಪ ಹೀಗೆ ಆಡ್ತಾರೆ. ಇನ್ನು ವಯಸ್ಸಾದ ಮೇಲೆ ಇವರೊಂದಿಗೆ ಹೇಗಪ್ಪಾ ಏಗೋದು…? ಎಂದು ತನ್ನ ಮಕ್ಕಳೊಂದಿಗೆ ಅಳಲನ್ನು ತೋಡಿಕೊಂಡಳಂತೆ ನನ್ನಾಕೆ.

ಇದಾವುದರ ಅರಿವಿಲ್ಲದ ನಾನು, ದೆಹಲಿ ತಲುಪಿದ್ದಕ್ಕಾಗಿ ಮನೆಗೆ ಕರೆ ಮಾಡಿದಾಗ, ಮಡದಿಯಿಂದ ಈ ಎಲ್ಲಾ ಅವಾಂತರಗಳನ್ನು  ಕೇಳಿಸಿಕೊಂಡು ಅವಳಿಂದ ಫೋನ್‌ ನಲ್ಲೇ ಅಷ್ಟೋತ್ತರ ಶತನಾಮಾವಳಿಯನ್ನೂ ಮಾಡಿಸಿಕೊಂಡ ಪರಿಣಾಮ, ಬಡವಾ ನೀ ಮಡಗಿದ್ಹಾಗೆ ಇರು ಎನ್ನುವ ಹಾಗೆ.ರಾಜಕೀಯದ ಹಂಗೇಕೆ? ಹೊಟ್ಟೆಪಾಡಿಗೆ ಒಂದು ಕೆಲಸ ಮಾಡಿಕೊಂಡು ಚಟಕ್ಕಾಗಿ ಏನೋ ಸಣ್ಣ ಪುಟ್ಟ ಲೇಖನಗಳನ್ನು ಬರೆದುಕೊಂಡು ಸಂಸಾರ ಸಾಗಿಸುತ್ತಿರುವ ನಮ್ಮಂತಹರಿಗೆ ರಾಜಕೀಯ ಎಲ್ಲಾ ಬೇಡ, ರಾಜಕೀಯದಲ್ಲಿ ಗೆದ್ದವನು ಸೋತ, ಸೋತನು ಸತ್ತ ಎನ್ನುತ್ತಿದ್ದರು ನಮ್ಮ ತಂದೆಯವರು.

ಹಾಗಾಗಿ ನನಗೆ ಸಕ್ರಿಯ ರಾಜಕೀಯಕ್ಕೆ ಬರುವ ಯಾವುದೇ ಆಸೆ ಖಂಡಿತವಾಗಿಯೂ ಇಲ್ಲ. ಕಿಂಗ್‌ ಮೇಕರ್‌ ಈಸ್‌ ಮೋರ್‌ ಪವರ್‌ ಫುಲ್ ದೆನ್‌ ಎ ಕಿಂಗ್‌ ಎನ್ನುವಂತೆ ನಾನು ವಿವರಿಸಿ ಹೇಳಿದೆ.

ನಾವೆಲ್ಲರೂ ಜನಪ್ರತಿನಿಧಿ ಆಗುವುದಕ್ಕಿಂತಲೂ, ಒಳ್ಳೆಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಹ ಮತದಾರ ಪ್ರಭು ಆಗುವುದು ಉತ್ತಮ ಅಲ್ವೇ? ಎಂಬ ಸಂದೇಶವನ್ನು ಮತ್ತೆ ಎಲ್ಲರಿಗೂ ಕಳುಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ, ಮಳೆ ನಿಂತರೂ ಮರದ ಅಡಿಯಲ್ಲಿ ನೀರು ತೊಟ್ಟಿಕ್ಕು ಹಾಗೆ ಒಂದೆರಡು ದಿನಾ ಅದೇ ಸುದ್ದಿಯಾಗಿತ್ತು.
ಇಷ್ಟೆಲ್ಲಾ ಆಗುವಷ್ಟರಲ್ಲಿ ಮತ್ತೆ ಬಂದ ಹತ್ತಾರು ಕರೆಗಳನ್ನು ಸ್ವೀಕರಿಸಿ ಕಛೇರಿಯನ್ನು ತಲುಪುವಷ್ಟರಲ್ಲಿ ಗಂಟೆ 10.40 ಆಗಿತ್ತಲ್ಲದೇ, ಹೊಟ್ಟೆಯೂ ಸಹ ಕವಕವಗುಟ್ಟುತ್ತಿತ್ತು. ದೆಹಲಿಯಲ್ಲಿ ಊಟದ ಸಂಭ್ರಮ ಕೂಡಲೇ ನನ್ನ ಸಹೋದ್ಯೋಗಿಯೊಂದಿಗೆ ಅಲ್ಲೇ ಹತ್ತಿರದ ರಸ್ತೆ ಬದಿಯ ಸಣ್ಣ ಅಂಗಡಿಗೆ ಹೋಗಿ ತಿಂಡಿ ಏನಿದೆ ಎಂದು ಕೇಳಿದೆ, `ಸಮೋಸ, ಕಚೋರಿ, ಬ್ರೆಡ್‌ ಪಕೋಡ, ಚೋಲೆ ಬಟೂರೇ….’ ಎಂದರು. ಅವರೇ ನಮ್ಮ ಕಡೆ ಸಂಜೆ ಚಾಟ್ಸ್ ಎಂದು ತಿನ್ನುವುದು ಇಲ್ಲಿ ಬೆಳಗಿನ ತಿಂಡಿಯೇ ಎನಿಸಿದರೂ  ಚೋಲೆ ಬಟೂರೇ ತಿಂದೆ. ಮಧ್ಯಾಹ್ನ ಊಟಕ್ಕೆ ಕಛೇರಿಯಲ್ಲಿ ತರಿಸಿದ್ದೂ ಅದೇ ರೋಟಿ ನಾನ್‌, ಕುಲ್ಚಾ, ಪರೋಟ, ದಾಲ್ ಮಖನೀ, ರಾಜ್ಮಾ ಚಾವಲ್ ‌ಮತ್ತು ಜೀರಾ ರೈಸ್‌. ತವರೂರಿನ ನೆನಪು ಹೀಗೆ ಎರಡು ದಿನ ಮೂರು ಹೊತ್ತು ಅದನ್ನೇ ತಿನ್ನುವಷ್ಟರಲ್ಲಿ ಸಾಕು ಸಾಕಾಗಿ ಹೋಗಿತ್ತು. ನಮ್ಮ ಅನ್ನ, ಸಾರು, ಹುಳಿ, ಪಲ್ಯ ಯಾವಾಗ ತಿನ್ನುತ್ತೇವೋ ಎನಿಸಿತ್ತು. ಇದೇ ಮಾತನ್ನು ಮಗಳಿಗೆ ಹೇಳಿದಾಗ, ಅರೆ, ಅಪ್ಪಾ ನೀವೇ ನಮಗೆ ಆಂಧ್ರಭವನಕ್ಕೆ ಹೋಗಲು ಹೇಳಿದ್ರಿ. ಈಗ ನೀವೇ ಅಲ್ಲಿಗೆ ಹೋಗಬಹುದಲ್ಲಾ ಎಂದಳು.

ಹೀಗೆ ಕೆಲಸದ ಮೇಲೆ ದೆಹಲಿಗೆ ಹೋದಾಗೆಲ್ಲಾ ನಮ್ಮ ದಕ್ಷಿಣದ ಕಡೆಯ ಊಟ ಮಾಡಬೇಕು ಎನಿಸಿದಾಗೆಲ್ಲಾ ನಮಗೆ ನೆನಪಾಗುವುದೇ ನಂ.1, ಅಶೋಕ ರಸ್ತೆಯಲ್ಲಿರುವ ಆಂಧ್ರ ಪ್ರದೇಶ ಭವನದ ತೆಲಂಗಾಣ ಭವನ್‌ ಕ್ಯಾಂಟೀನ್‌. ದೆಹಲಿಯಲ್ಲಿ ಆಂಧ್ರ ಸ್ಟೈಲ್. ಇಲ್ಲಿ ಬೆಳಗ್ಗೆ 8 ರಿಂದ ದಕ್ಷಿಣ ಭಾರತದ ತಿಂಡಿಗಳು ಲಭ್ಯವಾದರೆ ಮಧ್ಯಾಹ್ನ 12 ರಿಂದ 3ರವರೆಗೆ ಊಟ ಮತ್ತು ಸಂಜೆ 7ರ ನಂತರ ಊಟದ ವ್ಯವಸ್ಥೆ ಇದೆ. ಮೂರು ದಿನಗಳಿಂದಲೂ ಬಾಯಿ ಕೆಟ್ಟಿದ್ದ ನಾನು ಮತ್ತಿಬ್ಬರು ಬೆಂಗಳೂರಿನಿಂದ ಬಂದ ಸಹೋದ್ಯೋಗಿಗಳು ಮತ್ತು ದೆಹಲಿಯ ನನ್ನ ತಂಡದ ಸಹೋದ್ಯೋಗಿಯೊಂದಿಗೆ ಆಂಧ್ರಭವನದ ಕ್ಯಾಂಟೀನ್‌ ಒಳಗೆ ಕಾಲು ಇಡುತ್ತಿದ್ದಂತೆಯೇ ಅಲ್ಲಿ ನಿಲ್ಲಲೂ ಅಸಾಧ್ಯವಾದಷ್ಟು ಜನಸಾಗರ. ಹಾಗೂ ಹೀಗೂ ನುಸುಳಿಕೊಂಡು ಟೋಕನ್‌ ತೆಗೆದುಕೊಂಡೆ. ಟೋಕನ್‌ ನಂಬರ್‌ ಕರೆಯುತ್ತಿದ್ದವರಿಗೆ, `ಏಮಂಡೀ ಬಾಗುನ್ನಾರಾ…. ಮೇಮು ನಲಗು ಮಂದಿ ಉನ್ನಾಮಂಡಿ,’ ಎಂದು ತೆಲುಗು ಭಾಷೆಯಲ್ಲಿ ಹೇಳುತ್ತಿದ್ದಂತೆಯೇ ಅವರು ಹಸನ್ಮುಖರಾಗಿ ನಮ್ಮನ್ನು ಸ್ವಾಗತಿಸಿದರು.

ಅತಿಥಿ ದೇವೋಭವ`ರೆಂಡು ನಿಮಿಷಾಲು ಉಂಡಂಡಿ,’ ಎಂದು ಹೇಳುತ್ತಾ, ಅಲ್ಲೊಂದು ಟೇಬಲ್ ಖಾಲಿ ಆಗುತ್ತಿದ್ದಂತೆಯೇ, `ಮೀರು ಇಕ್ಕಡ ರಂಡಿ,’ ಎಂದಾಗ, ಉದ್ದದ ಸಾಲಿನಲ್ಲಿ ನಿಂತು ಕೈತೊಳೆದುಕೊಂಡು ಬರುಷ್ಟರಲ್ಲಿ ಟೇಬಲ್ ಸಿಕ್ಕಿದ್ದನ್ನು ಕಂಡು ನನ್ನ ಜೊತೆಯಲ್ಲಿ ಬಂದಿದ್ದವರಿಗೆ ಆಶ್ಚರ್ಯವೋ ಆಶ್ಚರ್ಯ!  ಆಗ ಅವರಿಗೆ ಮಾತು ಬಲ್ಲನಿಗೆ ಜಗಳವಿಲ್ಲ, ಊಟ ಬಲ್ಲನಿಗೆ ರೋಗವಿಲ್ಲ ಎಂಬ ಗಾದೆಯನ್ನು ಹೇಳಿ ಎಲ್ಲಾ ನಮ್ಮ ಅಮ್ಮನ ಕೃಪೆ, ಸುಲಲಿತವಾಗಿ ಕನ್ನಡ, ತಮಿಳು, ತೆಲುಗು ಅಲ್ಲದೇ, ಇಂಗ್ಲಿಷ್‌ಮತ್ತು ಹಿಂದಿ ಭಾಷೆಯನ್ನೂ ಬಲ್ಲವರಾಗಿದ್ದ ಅಮ್ಮನಿಂದಾಗಿಯೇ ಆ ಎಲ್ಲಾ ಭಾಷೆಗಳನ್ನು ಕಲಿಯುವಂತಾಗಿದ್ದು. ಕಾಲ ಕಾಲಕ್ಕೆ ಅದೇ ಭಾಷಾ ಪಾಂಡಿತ್ಯದಿಂದಾಗಿ ಈ ರೀತಿಯ ಕೆಲಸಗಳು ಸುಗಮವಾಗಿ ನಡೆದುಕೊಂಡು ಹೋಗುತ್ತದೆ.

ಆಂಧ್ರ ಭವನದಲ್ಲಿ ಈ ಹಿಂದೆ 80/ ರೂ.ಗಳಿದ್ದ ಊಟ ಈಗ 190/ ರೂ.ಗಳಾಗಿದೆ. ದೆಹಲಿಯಂತಹ ನಗರದಲ್ಲಿ ಕೇವಲ 190/ ರೂ.ಗಳಿಗೆ ಅಮಿತವಾದ ರುಚಿ ರುಚಿಯಾದ ದಕ್ಷಿಣ ಭಾರತದ ಊಟ ಯಾರೂ ಸಹ ಕೊಡುವುದಿಲ್ಲ. ಸುಗ್ರಾಸ ಭೋಜನ ಟೇಬಲ್ ಬಳಿ ಕುಳಿತುಕೊಳ್ಳುತ್ತಿದ್ದಂತೆಯೇ ನಾಲ್ಕು ತಟ್ಟೆಗಳನ್ನು ತಂದಿರಿಸಿ ಅದಕ್ಕೆ ಬಿಸಿ ಬಿಸಿ ಪೂರಿಗಳನ್ನು ಬಡಿಸಿದರು. ತಟ್ಟೆಯಲ್ಲಿ ಕೇಸರಿಭಾತ್‌, ವೊಸರು, ಹಪ್ಪಳ, ಉಪ್ಪಿನಕಾಯಿ, ಪಪ್ಪು, ಎರಡು ರೀತಿಯ ಪಲ್ಯಗಳ ಜೊತೆ ಸ್ವಲ್ಪ ರೈಸ್‌ ಭಾತ್‌ ಇತ್ತು. ಕಣ್ಣಿಗೆ ಒತ್ತಿಕೊಂಡು ಪೂರಿಯ ಜೊತೆಗೆ ಆಲೂಗಡ್ಡೆ ಪಲ್ಯವನ್ನು ಬಾಯಿಗೆ ಇಡುತ್ತಿದ್ದಂತೆಯೇ ಆಹಾ….  ಸ್ವರ್ಗಕ್ಕೆ ಮೂರೇ ಗೇಣು. ನಂತರ ಪೂರಿಯನ್ನು ಉಳಿದ ಎರಡು ಪಲ್ಯ, ಪಪ್ಪು (ತೊವ್ವೆ) ಜೊತೆಗೆ ತಿಂದು ಮುಗಿಸಿದೆ.

ಆಗ `ಸರ್, ಪೂರೀ ಬೇಕೆ,’ ಎಂದು ಕೇಳಿದಾಗ, `ಬೇಡ ಅನ್ನ ಬಡಿಸಿ,’ ಎಂದೆ. ಅವರು ಬಡಿಸಿದ್ದೂ ಬಡಿಸಿದ್ದೇ…. ನಾವು ತಿಂದಿದ್ದೂ ತಿಂದಿದ್ದೇ!

ತಕ್ಷಣವೇ ಅಗಲವಾದ ಪಾತ್ರೆಯಲ್ಲಿ ಅನ್ನವನ್ನು ತಂದು ನಮ್ಮ ದಕ್ಷಿಣ ಕ್ಷೇತ್ರಗಳಾದ ಧರ್ಮಸ್ಥಳ, ಉಡುಪಿ, ಕೊಲ್ಲೂರು, ಶೃಂಗೇರಿ, ಹೊರನಾಡುಗಳಲ್ಲಿ ಬಡಿಸುವ ರೀತಿಯಲ್ಲಿ ಅನ್ನದ ಕೈಯಲ್ಲಿ ತಳ್ಳಿ ತಳ್ಳಿ ಬಡಿಸಲು ಮುಂದಾದರು.`ಕೊಂಚಂ ಒಡ್ಡೀಯಂಡೀ,’ ಎಂದೆ. ಆಗ ಆತ ಸ್ವಲ್ಪ ಅನ್ನವನ್ನು ಬಡಿಸಿದ. ಆ ಅನ್ನದಲ್ಲಿ ಸ್ವಲ್ಪ ಹುಳಿಯನ್ನು ಕಲಸಿಕೊಂಡು ಬಾಯಿಗೆ ಇಡುತ್ತಿದ್ದಂತೆಯೇ, ಅದರ ರುಚಿಗೆ ಕಳೆದು ಹೋಗುವಷ್ಟು ಚೆನ್ನಾಗಿತ್ತು.

ನಮ್ಮೂರಿನ ಊಟದಂತೆ ನಂತರ ಮತ್ತೆ ಸ್ವಲ್ಪ ಅನ್ನಕ್ಕೆ ಸಾರು, ನಂತರ ಪಪ್ಪು, ಅದಾದ ನಂತರ ಅಲ್ಲಿದ್ದ ಪುಡಿಯೊಂದಿಗೆ ತುಪ್ಪವನ್ನು ಬೆರೆಸಿಕೊಂಡು ಜೊತೆ ಜೊತೆಯಲ್ಲೇ ಪಲ್ಯವನ್ನು ನೆಂಚಿಕೊಂಡು ತಿನ್ನುವಷ್ಟರಲ್ಲಿ ಹೊಟ್ಟೆ ತುಂಬಿ ಗಂಟಲಿನವರೆಗೂ ಬಂದಿತ್ತು. ಮತ್ತೆ ಸ್ವಲ್ಪವೇ ಅನ್ನವನ್ನು ಹಾಕಿಸಿಕೊಂಡು, ಅದಕ್ಕೆ ಮೊಸರು ಬೆರೆಸಿಕೊಂಡು ಜೊತೆಗೆ ಆವಗಾಯಿ (ಮಾವಿನಕಾಯಿ ಉಪ್ಪಿನಕಾಯಿ) ನೆಂಚಿಕೊಂಡು ತಿಂದಿದ್ದಲ್ಲದೇ, ಕಡೆಗೆ ಅನ್ನ ಕಂಡು ಎಷ್ಟು ದಿನವಾಯಿತೋ ಎನ್ನುವಂತೆ ಎಲ್ಲಾ ಬೆರಳುಗಳನ್ನೂ ಚೀಪಿ ಸಣ್ಣಗೆ ಡರ್‌ ಎಂದು ತೇಗಿ ಕೈತೊಳೆದುಕೊಂಡೆ.

ಮತ್ತೆ ಅಲ್ಲಿಯೇ ರೂ.20/ಕ್ಕೆ ಒಂದರಂತೆ ಸಿಗುವ ಸ್ವೀಟ್‌ ಬೀಡಾ ತೆಗೆದುಕೊಂಡು ಬಾಯಿಗೆ ಹಾಕಿಕೊಂಡಾಗ, ಆಗುವ ಸುಖದ ಮುಂದೆ ಯಾವುದೇ ರೋಟೀ ನಾನ್‌, ಪನೀರ್‌ ಬಟರ್‌/ಮಟರ್‌ ಮಸಾಲಾ ಆಗಲೀ ಪರೋಟ ಇತ್ಯಾದಿ ತಿನ್ನುವಾಗ ಆಗುವುದಿಲ್ಲ ಎನ್ನುವುದರ ಅರಿವಾಯಿತು.

ನಮ್ಮ ಜೊತೆ ಬಂದಿದ್ದ ದೆಹಲಿಯ ಹುಡುಗನಿಗಂತೂ ಇದೊಂದು ದೊಡ್ಡ ಅಚ್ಚರಿ. `ಸರ್‌, ನನ್ನ ಜೀವಮಾನದಲ್ಲಿ ಎಂದೂ ಇಷ್ಟೊಂದು ಅನ್ನ ತಿಂದಿರಲೇ ಇಲ್ಲ. ಊಟ ತುಂಬಾ ಚೆನ್ನಾಗಿ ಇತ್ತು,’ ಎಂದ. ಇನ್ನು ಕಛೇರಿಯ ಕೆಲಸ ಮುಗಿಸಿಕೊಂಡು ಹೊರಗೆ ಬರುವಷ್ಟರಲ್ಲಿ  ದೆಹಲಿಯ ಸುಡು ಬೇಸಿಗೆಯಿಂದ ಬಳಲಿದ್ದವರಿಗೆ ತಂಪನ್ನು ಎರಚಲು ಸಣ್ಣದಾಗಿ ಮಳೆ ಬರುತ್ತಿತ್ತು. ಹಾಗೇ ಮೆಟ್ರೋ ಏರಿಕೊಂಡು ಹೊಟೇಲ್ ‌ರೂಮಿಗೆ ಹೋಗಿ ಬಟ್ಟೇ ಬದಲಿಸಿ, ಕೈ ಕಾಲು ತೊಳೆದುಕೊಳ್ಳುವಷ್ಟರಲ್ಲಿ ನನ್ನ ಪಕ್ಕದ ರೂಮಿನಲ್ಲೇ ಇದ್ದ ನನ್ನ ಬೆಂಗಳೂರು ಸಹೋದ್ಯೋಗಿ ಸರ್‌ ಊಟಕ್ಕೆ ಹೋಗೋಣವೇ ಎಂದರು ಕೇಳಿದರು.

ರಾತ್ರಿ ಊಟ ಬೇಡವಾಯಿತು. `ಅಯ್ಯೋ ರಾಮಾ… ನನ್ನ ಎರಡು ವಾರದ ಅನ್ನದ ಕೋಟಾವನ್ನು ಇವತ್ತು ಒಂದೇ ದಿನ ತಿಂದು ಮುಗಿಸಿದ್ದೇನೆ. ನಾನು ಮನೆಯಲ್ಲಿ ಇದ್ದರೆ ಅನ್ನಾನೇ ಮುಟ್ಟೋದಿಲ್ಲ,’ ಎಂದು ಜೋರಾಗಿ ನಗುತ್ತಾ ಹೇಳಿದೆ.

`ನಾನು ಈ ಪರಿಯಾಗಿ ಅನ್ನ ತಿಂದದ್ದು ನನ್ನ ಹೆಂಡತಿಗೆ ಗೊತ್ತಾದ್ರೇ, ಆಹಾ…. ಈ ಗಂಡಸರೇ ಇಷ್ಟು, ಮನೆಯಲ್ಲಿ ಮಾತ್ರ ಅನ್ನ ತಿನ್ನೋದಿಲ್ಲ. ಅದೇ ಬೇರೆ ಊರಿಗೆ ಹೋದ್ರೆ ಒಳ್ಳೆ ಬಕಾಸುರನ ತರಹ ತಿಂತಾರೆ ನೋಡಿ, ಎಂದು ಹೇಳುತ್ತಿದ್ದುದಂತೂ ಖಂಡಿತಾ,’ ಎಂದೆ. ಅದಕ್ಕವರು, ಹೌದೌದು ಅದಕ್ಕೇ ಅಲ್ವೇ, ಪರ ಊರಿಗೆ ಹೋದಾಗಲೇ, ನಮ್ಮೂರ ಊಟದ ರುಚಿ ಗೊತ್ತಾಗೋದು ಎಂದಿದ್ದು ಎಷ್ಟು ಸತ್ಯ ಅಲ್ವೇ? ನೀವೇನಂತೀರಿ……?

ಶ್ರೀಕಂಠ ಬಾಳಗಂಚಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ