– ರಾಘವೇಂದ್ರ ಅಡಿಗ ಎಚ್ಚೆನ್.
ವಿಷ್ಣುವರ್ಧನ್ ಅಭಿಮಾನಿಗಳ ಬಹು ವರ್ಷದ ಬೇಡಿಕೆಗೆ ಸಿದ್ದರಾಮಯ್ಯ ಸರ್ಕಾರ ಸ್ಪಂದಿಸಿದೆ. ಇತ್ತೀಚೆಗಷ್ಟೆ ವಿಷ್ಣುವರ್ಧನ್ ಅವರ ಅಭಿಮಾನ್ ಸ್ಟುಡಿಯೋ ನೆಲಸಮವಾಗಿದ್ದು ಅವರ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿತ್ತು. ಆದರೆ ಇದೀಗ ಸಿದ್ದರಾಮಯ್ಯ ಸರ್ಕಾರ, ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ನೀಡಿದ್ದು, ಗಾಯಕ್ಕೆ ಮುಲಾಮು ಹಚ್ಚಿದಂತಾಗಿದೆ. ವಿಷ್ಣುವರ್ಧನ್ ಮಾತ್ರವೇ ಅಲ್ಲದೆ ಕನ್ನಡದ ಮತ್ತೊಬ್ಬ ಲಿಜೆಂಡರಿ ನಟಿ ಬಿ ಸರೋಜಾ ದೇವಿ ಅವರಿಗೂ ಸಹ ಕರ್ನಾಟಕ ರತ್ನವನ್ನು ಘೋಷಣೆ ಮಾಡಲಾಗಿದೆ. ಇಬ್ಬರು ಮೇರು ನಟರಿಗೆ ಒಂದೇ ದಿನ ಕರ್ನಾಟಕ ರತ್ನ ಘೋಷಣೆ ಆಗಿದೆ. ವಿಶೇಷವೆಂದರೆ ಈ ಇಬ್ಬರು ಒಟ್ಟಿಗೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು.
ವಿಷ್ಣುವರ್ಧನ್ ಅವರ ‘ಭಾಗ್ಯ ಜೋತಿ’ ಸಿನಿಮಾನಲ್ಲಿ ಬಿ ಸರೋಜಾ ದೇವಿ ನಟಿಸಿದ್ದರು. ಆದರೆ ನಾಯಕಿ ಆಗಲ್ಲ. ಈ ಸಿನಿಮಾದ ನಾಯಕಿ ಭಾರತಿ ವಿಷ್ಣುವರ್ಧನ್, ಆದರೆ ಸರೋಜಾ ದೇವಿ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ 1975 ರಲ್ಲಿ ಬಿಡುಗಡೆ ಆಗಿತ್ತು.
1977 ರಲ್ಲಿ ಬಿಡುಗಡೆ ಆದ ವಿಷ್ಣುವರ್ಧನ್, ಉದಯ್ ಕುಮಾರ್ ನಟನೆಯ ‘ಶನಿ ಪ್ರಭಾವ’ ಸಿನಿಮಾನಲ್ಲಿ ಸರೋಜಾ ದೇವಿ ನಟಿಸಿದರು. ಅಲ್ಲಿಯೂ ಸಹ ಸರೋಜಾ ದೇವಿ ಅವರದ್ದು ವಿಶೇಷ ಪಾತ್ರವೇ ಆಗಿತ್ತು. 1983 ರಲ್ಲಿ ಬಿಡುಗಡೆ ಆದ ‘ರುದ್ರಾಂಗ’ ಸಿನಿಮಾನಲ್ಲಿಯೂ ಬಿ ಸರೋಜಾ ದೇವಿ ಮತ್ತು ವಿಷ್ಣುವರ್ಧನ್ ಒಟ್ಟಿಗೆ ನಟಿಸಿದರು. ‘ರುದ್ರಾಂಗ’ ಸಿನಿಮಾನಲ್ಲಿ ಮಾಧವಿ ಅವರು ನಾಯಕಿಯಾಗಿ ನಟಿಸಿದ್ದರು. ಬಳಿಕ 1997 ರಲ್ಲಿ ಬಿಡುಗಡೆ ಆದ ‘ಜನನಿ ಜನ್ಮಭೂಮಿ’ ಸಿನಿಮಾನಲ್ಲಿಯೂ ಸರೋಜಾ ದೇವಿ ಮತ್ತು ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾನಲ್ಲಿ ಸರೋಜಾ ದೇವಿ ಅವರು ವಿಷ್ಣುವರ್ಧನ್ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು