ಬಾಲಿವುಡ್​ ನಟಿ ತನುಶ್ರೀ ದತ್ತ ಈಗ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಒಂದು ಕಾಲದಲ್ಲಿ ‘ಆಶಿಕ್ ಬನಾಯಾ ಆಪ್ನೆ’ ಸಿನಿಮಾದಿಂದ ಸಖತ್ ಜನಪ್ರಿಯತೆ ಗಳಿಸಿದ್ದವರು. ಸದಾ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದವರು.  ಈಗಲೂ ಅವರು ಸಿನಿಮಾಗಳ ಹೊರತಾಗಿಯೇ ಸುದ್ದಿಯಾಗುತ್ತಿದ್ದಾರೆ. ಅವರಿಗೆ ಬಿಗ್ ಬಾಸ್ ಶೋಗೆ ಹೋಗುವ ಆಫರ್ ಬಂದಿತ್ತಂತೆ. ಆದರೆ ಅವರು ಆ ಅವಕಾಶವನ್ನು ತಿರಸ್ಕರಿಸಿದ್ದಾರೆ. ಅಲ್ಲದೇ ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ.

ಹಿಂದಿಯಲ್ಲಿ ಬಿಗ್ ಬಾಸ್ ಶೋ ತುಂಬಾ ಬೋಲ್ಡ್ ಆಗಿ ನಡೆಯುತ್ತದೆ. ಮಹಿಳಾ ಸ್ಪರ್ಧಿಗಳು ಮತ್ತು ಪುರುಷ ಸ್ಪರ್ಧಿಗಳು ಒಂದೇ ಹಾಸಿಗೆಯಲ್ಲಿ ನಿದ್ರಿಸಿದ ಉದಾಹರಣೆಗಳೂ ಇವೆ. ಈ ಕಾರಣಕ್ಕೆ ತನುಶ್ರೀ ದತ್ತ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ಜರಿದಿದ್ದಾರೆ. ‘ನಾನು ಅಷ್ಟು ಚೀಪ್ ಅಲ್ಲ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.‘ಅಂತಹ ಕಾರ್ಯಕ್ರಮಕ್ಕೆ ನಾನು ಹೋಗುತ್ತೇನೆ ಎಂದು ನಿಮಗೆ ಅನಿಸುತ್ತದೆಯೇ? ಅಂತಹ ಜಾಗದಲ್ಲಿ ನಾನು ಇರಲಾರೆ. ಆ ರೀತಿ ನಾನು ನನ್ನ ಕುಟುಂಬದ ಜೊತೆಗೂ ನಾನು ಇರುವುದಿಲ್ಲ. ನನಗೆ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಎಂದಿಗೂ ಆಸಕ್ತಿ ಬಂದಿಲ್ಲ, ಬರುವುದೂ ಇಲ್ಲ. ಅವರು ನನಗೆ 1.65 ಕೋಟಿ ರೂಪಾಯಿ ಸಂಭಾವನೆ ಆಫರ್ ಮಾಡಿದ್ದರು. ನನ್ನ ಹಾಗೆ ಇರುವ ಇನ್ನೋರ್ವ ಸೆಲೆಬ್ರಿಟಿಗೂ ಅಷ್ಟೇ ಹಣ ನೀಡಿದರು’ ಎಂದಿದ್ದಾರೆ ತನುಶ್ರೀ.

‘ಬಿಗ್ ಬಾಸ್ ಕಾರ್ಯಕ್ರಮದ ಸ್ಟೈಲಿಸ್ಟ್ ಕಡೆಯಿಂದ ನನಗೆ ಕರೆ ಬಂದಿತ್ತು. ಅವರು ತಾನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ನನ್ನ ಡಯೆಟ್ ನೋಡಿಕೊಳ್ಳುವುದಾಗಿಯೂ ಹೇಳಿದರು. ಏನೇ ಕೊಟ್ಟರು ನಾನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಲ್ಲ ಅಂತ ಅವರಿಗೆ ಹೇಳಿದೆ’ ಎಂದಿದ್ದಾರೆ ತನುಶ್ರೀ ದತ್ತ.

‘ಗಂಡಸರು ಮತ್ತು ಹೆಂಗಸರು ಒಂದೇ ಕೋಣೆಯಲ್ಲಿ ಮಲಗುತ್ತಾರೆ. ಒಟ್ಟಿಗೆ ಫೈಟ್ ಮಾಡುತ್ತಾರೆ. ನಾನು ಅದನ್ನು ಮಾಡಲಾರೆ. ನನ್ನ ಡಯೆಟ್ ತುಂಬ ನಿಖರವಾಗಿದೆ. ಒಂದು ರಿಯಾಲಿಟಿ ಶೋಗಾಗಿ ಗಂಡಸರ ಜೊತೆ ಬೆಡ್ ಹಂಚಿಕೊಳ್ಳುವ ಮಹಿಳೆಯ ರೀತಿ ನಾನು ಕಾಣುತ್ತೇನಾ? ನಾನು ಅಷ್ಟು ಚೀಪ್ ಅಲ್ಲ. ನನ್ನ ಖಾಸಗಿತನ ಅಮೂಲ್ಯವಾದದ್ದು. ನನ್ನ ಪಾಡಿಗೆ ನೆಮ್ಮದಿಯಿಂದ ಕೆಲಸ ಮಾಡಲು ಬಿಟ್ಟರೆ ಅದಕ್ಕಿಂತ ಜಾಸ್ತಿ ಸಂಪಾದನೆ ಮಾಡುತ್ತೇನೆ ಎಂಬುದು ನನಗೆ ಗೊತ್ತು’ ಎಂದು ತನುಶ್ರೀ ದತ್ತ ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ