60-80ರ ದಶಕದ ಬೆಂಗಳೂರಿಗರಿಗೆ ಟಿ ಆರ್ ಶಾಮಣ್ಣ ಅವರ ಹೆಸರು ಕೇಳಿದ ತಕ್ಷಣವೇ ಮೈ ಮನಗಳು ಪುಲಕಿತಗೊಳ್ಳುತ್ತವೆ. ರಾಜಕಾರಣಿಗಳು ಹೀಗೂ ಇರಬಹುದೇ ಎನ್ನುವಷ್ಟರ ಮಟ್ಟಿಗಿನ ಸರಳತೆ ಮತ್ತು ಸರಳ ಜೀವನಕ್ಕೆ ಹೆಸರುವಾಸಿಯಾಗಿದ್ದ ಕಾರಣ ಅವರನ್ನು ಕರ್ನಾಟಕದ ಗಾಂಧಿ ಎಂದು ಗೌರವಿಸಲಾಗಿತ್ತು. ಅವರ ನೆನಪಿನಾರ್ಥವಾಗಿ ಬೆಂಗಳೂರಿನಲ್ಲಿ ಟಿ ಆರ್ ಶಾಮಣ್ಣ ನಗರ ಮತ್ತು ಟಿ ಆರ್ ಶಾಮಣ್ಣ ಉದ್ಯಾನವನವು ಇದ್ದು ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

WhatsApp Image 2023-04-28 at 12.52.01

ಅದು 70ರ ದಶಕ. ಆಗೆಲ್ಲಾ ಇಂದಿನಂತೆ ಮೋಟಾರ್ ಚಾಲಿತ ದ್ವಿಚಕ್ರವಾಹನಗಳು ಇಲ್ಲದಿದ್ದ ಸಂದರ್ಭದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಸೈಕಲ್ ಒಂದೇ ಸಾಧನವಾಗಿತ್ತು. ಈಗ ಹೇಗೆ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುವ ಸವಾರರಿಗೆ ಟ್ರಾಫಿಕ್ ಪೋಲೀಸರು ಅಟಕಾಯಿಸಿಕೊಳ್ಳುತ್ತಿದ್ದರೋ ಹಾಗೆ ಅಂದಿನ ಕಾಲದಲ್ಲಿ ಪೌರಾಡಳಿತದವರು ಸೈಕಲ್ ಸವಾರರಿಗೆ ಅಟಕಾಯಿಸಿಕೊಳ್ತಿದ್ರು. ಬೆಂಗಳೂರು ನಗರದಲ್ಲಿ ಸೈಕಲ್ ಚಲಾಯಿಸುವ ಸವಾರರು, ವಾರ್ಷಿಕ 15 ರುಪಾಯಿಯ ಶುಲ್ಕವನ್ನು ಕೊಟ್ಟು ಒಂದು ಬಿಲ್ಲೆ(ಬ್ಯಾಡ್ಜ್) ಯನ್ನು ಸೈಕಲ್ಲಿನ ಹ್ಯಾಂಡೆಲ್ ಮೇಲೆ ಹಾಕಿಸಿಕೊಳ್ಳಬೇಕಿತ್ತು ಇಲ್ಲವೇ, ಆಗೊಮ್ಮೆ ಈಗೊಮ್ಮೆ ಸೈಕಲ್ ಚಲಾಯಿಸುವವರು, ನಗರಾದ್ಯಂತ ಇದ್ದ ಟೋಲ್ ಗೇಟಿನ ಬಳಿ ದಿನವೊಂದಕ್ಕೆ 15 ಪೈಸೆ ಕೊಟ್ಟು ಸೈಕಲ್ಲಿಗೆ ಒಂದು ಚೀಟಿ ಅಂಟಿಸಿಕೊಂಡು ಬರಬೇಕಿತ್ತು. ಆ ರೀತಿಯ ಪರವಾನಗಿ ಇಲ್ಲದೇ ಇದ್ದ ಸೈಕಲ್ಲುಗಳನ್ನು ಅಂದಿನ ಪೋಲೀಸರು ಹಿಡಿದು ದಂಡ ಹಾಕುತ್ತಿದ್ದ ಪರಿಣಾಮ, ಹಳ್ಳಿಯಿಂದ ಪೇಟೆಗೆ ಬರುವ ಅನೇಕ ಸೈಕಲ್ ಸವಾರರು, ಪೋಲಿಸರ ಕಣ್ಣು ತಪ್ಪಿಸಿ, ಸಂದಿ ಗೊಂದಿಗಳಲ್ಲಿ ಸೈಕಲ್ ತುಳಿದುಕೊಂಡು ಹೋಗಬೇಕಾದಂತಹ ಪರಿಸ್ಥಿತಿ ಇತ್ತು. ಅದೇ ರೀತಿಯಾಗಿ ರಾತ್ರಿಯಲ್ಲಿ ಡೈನಮೋ ಲೈಟ್ ಇಲ್ಲವೇ ಕಂದಿಲು ಇಲ್ಲದಿದ್ದ ಸೈಕಲ್ಲುಗಳನ್ನು ಸಹಾ ಪೋಲೀಸರು ಹಿಡಿಯುತ್ತಿದ್ದರು. ಆಗ ಸೈಕಲ್ ಮೇಲೆ ಇಬ್ಬರು ಕುಳಿತುಕೊಂಡು ಹೋದರೂ ಸಹಾ ಪೋಲೀಸರು ಹಿಡಿದು ದಂಡ ಕಟ್ಟಿಸಿಕೊಳ್ಳುತ್ತಿದ್ದರು.

shamanna3

ಸೈಕಲ್ ಒಂದು ಜನಸಾಮಾನ್ಯರ ಅವಿಭಾಜ್ಯ ಅಂಗವಾಗಿದ್ದು ಅದನ್ನು ಬಳಸುವ ಹೆಚ್ಚಿನವರರು ಬಡವರು ಇಲ್ಲವೇ ಬಡ ಮಧ್ಯಮವರ್ಗದವರೇ ಆಗಿದ್ದ ಕಾರಣ ಅಂದಿನ ಕಾಲದಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಹಣಕಟ್ಟಿ ಪರವಾನಗಿ ಪಡೆದುಕೊಳ್ಳಲಾಗದು. ಹಾಗಾಗಿ ಇಂತಹ ಅನಿಷ್ಟ ಪದ್ದತಿಯನ್ನು ರದ್ದುಗೊಳಿಸಬೇಕೆಂದು ಬಡವರ ಪರ ಹೋರಾಟಮಾಡಿ, ಜನರಿಗೆ ಸೈಕಲ್ ಪರವಾನಗಿಯಿಂದ ಮುಕ್ತಿಗೊಳಿಸಿದರೇ ಶ್ರೀ ಟಿ ಆರ್ ಶಾಮಣ್ಣನವರು.

ಶಾಮಣ್ಣನವರು ಮೂಲತಃ ಮಾಗಡಿಯವರಾಗಿದ್ದು, ತಿರುಮಲೆ ರಂಗನಾಥ ಶಾಮಣ್ಣ ಎಂಬುದು ಅವರ ಪೂರ್ಣ ಹೆಸರಾಗಿದ್ದು. 13 ಮಾರ್ಚ್ 1912ರಲ್ಲಿ ಮಾಗಡಿಯಲ್ಲಿ ಸಂಪ್ರದಾಯಸ್ಥ ಕುಟುಂಬವೊಂದರಲ್ಲಿ ಜನಿಸುತ್ತಾರೆ. ತಮ್ಮ ಬಾಲ್ಯದ ಶಿಕ್ಷಣವನ್ನೆಲ್ಲಾ ಹುಟ್ಟೂರಿನಲ್ಲಿಯೇ ಮುಗಿಸಿ, ಹೆಚ್ಚಿನ ವ್ಯಾಸಂಗಕ್ಕಾಗಿ ಬೆಂಗಳೂರಿನ ಬಸವನಗುಡಿಯ ಪ್ರಾಂತ್ಯದಲ್ಲಿ ನೆಲೆಸುತ್ತಾರೆ. ಡಿಪ್ಲೊಮಾ ಇನ್ ಕಾಮರ್ಸ್ ಜೊತೆಗೆ ಚಾರ್ಟರ್ಡ್ ಅಕೌಂಟೆನ್ಸಿ ಮುಗಿಸಿದ್ದರೂ, 1938 ರಲ್ಲಿ ತಮ್ಮ ಬದುಕನ್ನು ಶ್ರೀ ರಂಗನಾಥ್ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಎಂಬ ಟೈಪಿಂಗ್ ಇನಿಸ್ಟಿಟ್ಯೂಟ್ ಸಂಸ್ಥಾಪಕ ಪ್ರಾಂಶುಪಾಲರಾಗಿ ಕಟ್ಟಿಕೊಳ್ಳುವುದಲ್ಲದೇ ಅ ಸಂಸ್ಥೆಯ ಮೂಲಕ ಸಾವಿರಾರು ಉದಯೋನ್ಮುಖ ಉದ್ಯೋಗಿಗಳಿಗೆ ಟೈಪಿಂಗ್ ಮತ್ತು ಸ್ಟೆನೋಗ್ರಫಿ ಕೌಶಲ್ಯಗಳನ್ನು ಕಲಿಸಿಕೊಟ್ಟು ಅವರ ಬದುಕನ್ನೂ ರೂಪಿಸಿಕೊಳ್ಳಲು ಸಹಾಯ ಮಾಡುತ್ತಾರೆ.

ಸಣ್ಣ ವಯಸ್ಸಿನಲ್ಲಿಯೇ ಸ್ವಾತಂತ್ರ್ಯದ ಚಳುವಳಿಯತ್ತ ಆಕರ್ಷಿತರಾಗಿ, 1930ರಲ್ಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ, ಅನೇಕ ಸಂದರ್ಭಗಳಲ್ಲಿ ಸೆರೆಮನೆಯವಾಸವನ್ನು ಅನುಭವಿಸಿದದ್ದರು. ಮತ್ತೊಬ್ಬ ಹಿರಿಯ ಸ್ವಾತ್ರಂತ್ರ್ಯ ಹೋರಾಟಗಾರರಾದ ಡಾ. ಎನ್. ಎಸ್. ಹರ್ಡಿಕರ್ ಅವರು ಮುಖ್ಯಸ್ಥರಾಗಿದ್ದ, ಸೇವಾದಳದ ತರಬೇತಿಯನ್ನು ಪಡೆದು ದೇಶಾದ್ಯಂತ ಅದರ ಸೇವಾಕರ್ತರಾಗಿ ಓಡಾಟನಡೆಸಿದ್ದಲ್ಲದೇ, ಅಂದಿನ ಕರಾಚಿ (ಈಗ ಪಾಕಿಸ್ತಾನದ ಭಾಗವಾಗಿದೆ) ಅಮೇರಿಕಾ, ಇಂಗ್ಲೇಂಡ್ ಮತ್ತು ಪಶ್ಚಿಮ ಜರ್ಮನಿಯಂತಹ ವಿದೇಶಗಳನ್ನು ಒಳಗೊಂಡಂತೆ ದೇಶ ಮತ್ತು ವಿದೇಶದಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದರು.

ಉದ್ಯೋಗವನ್ನು ಅರಸಿಕೊಂಡು ಬೆಂಗಳೂರಿಗೆ ಬರುತ್ತಿದ್ದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದನ್ನು ಮನಗಂಡ ಶಾಮಣ್ಣನವರು ನಾಗರಿಕರ ವಸತಿ ಮತ್ತು ವಾಣಿಣ್ಯಗಳ ಉದ್ದೇಶಗಳಿಗಾಗಿ ನರರಾದ್ಯಂತ ಅನೇಕ ಬಡಾವಣೆಗಳನ್ನು ಆರಂಭಿಸುತ್ತಾರೆ. ಹಾಗೆ ಬಡಾವಣೆಯ ನಿವೇಶನಗಳನ್ನು ಖರೀದಿಸಲು ತಮ್ಮದೇ ಆದ ರಾಷ್ಟ್ರೀಯ ಸಹಕಾರಿ ಬ್ಯಾಂಕ್ ಒಂದುನ್ನು ಸ್ಥಾಪಿಸಿ ಆರಂಭಿಕ ಷೇರು ಬಂಡವಾಳವನ್ನು ಕ್ರೋಢೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿಸಿದ್ದಲ್ಲದೇ, ಅದರ ಮೂಲಕ ಜನರಿಗೆ ಅತ್ಯಂತ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ನೀಡಿ ಕಂತುಗಳಲ್ಲಿ ಸಾಲವನ್ನು ಹಿಂಪಡೆಯುತ್ತಾರೆ. ಇಂದು ಅವರ ಸಹಕಾರಿ ಬ್ಯಾಂಕ್ ಕರ್ನಾಟಕದ ಅತಿದೊಡ್ಡ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿದೆಯಲ್ಲದೇ ಮುಂದೇ ಅದೇ ನ್ಯಾಷಿನಲ್ ಕೋ-ಆಪರೇಟಿವ್ ಬ್ಯಾಂಕ್ ಎಂದೇ ಪ್ರಸಿದ್ಧಿಯಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಪರವಾನಗಿಯನ್ನು ಪಡೆಯುವ ಮೂಲಕ ಸೊಸೈಟಿಯನ್ನು ಬ್ಯಾಂಕ್ ಆಗಿ ನೋಂದಾಯಿಸಿಕೊಂಡ ಹೆಗ್ಗಳಿಯೂ ಶಾಮಣ್ಣನವರದ್ದಾಗಿದೆ.

shamanna4

ಅದೇ ರೀತಿಯಲ್ಲಿ ಶಾಮಣ್ಣನವರು ಬೆಂಗಳೂರಿನ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಚಾರ್ಯ ಪಾಠಶಾಲೆ ಮತ್ತು ವಿಜಯಾ ಕಾಲೇಜಿನ ಟ್ರಸ್ಟಿಯಾಗಿದ್ದಲ್ಲದೇ, ನ್ಯಾಷನಲ್ ಎಜುಕೇಶನ್ ಸೊಸೈಟಿ ಆಫ್ ಕರ್ನಾಟಕ (NES) ನಡೆಸುತ್ತಿದ್ದ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಆರಂಭದಲ್ಲಿ ಕಾರ್ಯದರ್ಶಿ, ನಂತರ ಖಜಾಂಚಿ ಹಾಗೂ ಅಂತಿಮವಾಗಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಕಾಲೇಜಿನಲ್ಲಿಯೂ ಸಹಾ ಸಂದರ್ಶಕರ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಬಸವನಗುಡಿಯಲ್ಲಿ ಬಿ.ಎಂ. ಶ್ರೀನಿವಾಸಯ್ಯನವರು ಬಿ.ಎಂ.ಎಸ್ ಇಂಜೀನಿಯರಿಂಗ್ ಕಾಲೇಜು ಸ್ಥಾಪನೆ ಮಾಡಲು ಮುಂದಾದಾಗ, ಆ ಸಂಸ್ಥೆಗೆ ಸರ್ಕಾರದಿಂದ ಭೂಮಿಯನ್ನು ಸಹಾ ಶಾಮಣ್ಣವರೇ ಕೊಡಿಸಿದ್ದರು.

ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದುದರಲ್ಲಿ ಶಾಮಣ್ಣನವದ್ದು ಎತ್ತಿದ ಕೈ. ಇಂದಿನ ರೀತಿ 70-80ರ ದಶಕದಲ್ಲಿ Photo Copy ( Xerox) ಇಲ್ಲದಿದ್ದ ಕಾರಣದಲ್ಲಿ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಮತ್ತು Character Certificateಗಳನ್ನು ಸಮಾಜದ ಗಣ್ಯರಿಂದ ಪಡೆದು ಉನ್ನದ ವಿದ್ಯಾಭ್ಯಾಸಕ್ಕಾಗಲೀ ಇಲ್ಲವೇ ಕೆಲಸ ಗಿಟ್ಟಿಸುವುದಕ್ಕೆ ಲಗತ್ತಿಸಬೇಕಾಗುತ್ತಿತ್ತು. ಅ ರೀತಿಯಾಗಿ ಶಾಮಣ್ಣನವರಿಗೆ ಪರಿಚಯವಿಲ್ಲದಿದ್ದರೂ ವಿದ್ಯಾರ್ಥಿಗಳು ಅವರ ಬಳಿ ಹೋದಾಗ, ಅವರು ಕೊಂಚವೂ ಬೇಸರಿಸಿಕೊಳ್ಳದೇ, ಚನ್ನಾಗಿ ಓದಿ ದೊಡ್ದವನಾಗಬೇಕಪ್ಪಾ ಎಂದು ಸಂತೋಷದಿಂದ ಮನಃಪೂರ್ವಕವಾಗಿ ಹಾರೈಸಿ ಸಹಕರಿಸುತ್ತಿದ್ದದ್ದನ್ನು ಅವರಿಂದ ಉಪಕೃತರಾದವರು ಇಂದಿಗೂ ನೆನೆಸಿಕೊಳ್ಳುತ್ತಾರೆ

ಶಾಮಣ್ಣನವರು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾಗಿದ್ದಾಗಲೇ, ಕರ್ನಾಟಕದ ವಿವಿಧ ಭಾಗಗಳಲ್ಲಿ ಭಿಕ್ಷುಕರ ಪರಿಹಾರ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಭಿಕ್ಷುಕರು ಮತ್ತು ಸಾಮಾಜಿಕವಾಗಿ ವಂಚಿತ ವರ್ಗವನ್ನು ಸಮಾಜದ ಮುಖ್ಯಸ್ಥರದಲ್ಲಿ ತರಲು ಶ್ರಮಿಸಿದ್ದರು. ಅದೇ ರೀತಿಯಲ್ಲಿ, ಮಹಿಳೆಯರು ಮತ್ತು ಹಿಂದುಳಿದವರ ಕಲ್ಯಾಣಕ್ಕಾಗಿ ಹಲವಾರು ಸಾಮಾಜಿಕ ಸಂಸ್ಥೆಗಳನ್ನು ಸ್ಥಾಪಿಸಿದರು. ಶಾಮಣ್ಣನವರು ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ಮತ್ತು ಸಂಬಂಧಿಕರಿಗೆ ಸಾರಿಗೆ ಸೌಕರ್ಯವನ್ನು ಪ್ರಾರಂಭಿಸಿ ಅದು ಜನಪ್ರಿಯವಾದ ಕೂಡಲೇ ಅದೇ ರೀತಿಯ ಸೇವೆಯನ್ನು ಕಿದ್ವಾಯಿ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸಹಾ ಆರಂಭಿಸಿದರು.

shamanna5

ಸ್ವಾತಂತ್ರ್ಯಾನಂತರ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಆಗಿ ತಮ್ಮ ರಾಜಕೀಯ ವೃತ್ತಿ ಜೀವನವನ್ನು ಆರಂಭಿಸಿದ ಶಾಮಣ್ಣನವರು, 1957 ರಿಂದ ಸತತವಾಗಿ ಸುಮಾರು ನಾಲ್ಕು ಬಾರಿ ಕರ್ನಾಟಕ ವಿಧಾನಸಭೆಗೆ ಸದಸ್ಯರಾಗಿ ಚುನಾಯಿತರಾಗಿದ್ದರು ಎಂದರ ಅವರ ಜನಪ್ರಿಯತೆ ಹೇಗಿತ್ತು ಎಂಬುದರ ಅರಿವಾಗುತ್ತದೆ. ತಮ್ಮ ರಾಜಕೀಯ ವೃತ್ತಿ ಜೀವನದುದ್ದಕ್ಕೂ ಕಾಂಗ್ರೇಸ್ ವಿರೋಧಿಯಾಗಿಯೇ ಗುರುತಿಸಿಕೊಂಡಿದ್ದ ಶಾಮಣ್ಣನವರು, ತಮ್ಮ ಬದುಕಿನುದ್ದಕ್ಕೂ ಅದೇ ತತ್ವವನ್ನು ಅಕ್ಷರಃ ಪಾಲಿಸಿದ್ದರುನಗರಸಭೆಯ ಪಿತಾಮಹ ಎಂದು ಸ್ಮರಿಸಿರುವ ಅವರು 1950 ರ ದಶಕದ ಆರಂಭದಲ್ಲಿ, ಬೆಂಗಳೂರು ತೀವ್ರ ನೀರು ಮತ್ತು ವಿದ್ಯುತ್ ಕೊರತೆಯನ್ನು ಕಂಡಾಗ, ನಗರದ ನಾಗರಿಕರಿಗೆ ಅಗತ್ಯ ಪ್ರಮಾಣದ ನೀರು ಮತ್ತು ವಿದ್ಯುತ್ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರದಕ್ಕೆ ಇದೇ ಶಾಮಣ್ಣವರು ಮನವಿ ಸಲ್ಲಿಸಿದರು. 1977ರ ತುರ್ತುಪರಿಸ್ಥಿತಿಯ ನಂತರ ಮೊರಾರ್ಜೀದೇಸಾಯಿಯವರ ಜನತಾ ಸರ್ಕಾರ ಬಂದು ನಂತರ ಅದು ಪತನವಾಗಿ 1980 ರಲ್ಲಿ ನಡೆದ ಚುನಾವಣೆಯಲ್ಲಿ ದೇಶಾದ್ಯಂತ ಇಂದಿರಾಗಾಂಧಿಯವರ ನೇತೃತ್ವದಲ್ಲಿ ಅಭೂತಪೂರ್ವವಾಗಿ ಜಯಗಳಿಸಿದ್ದರೆ, ರಾಜ್ಯದ 27 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಜನತಾಪಕ್ಷದಿಂದ ಸ್ಪರ್ಧಿಸಿದ್ದ ಶ್ರೀ ಟಿ.ಆರ್. ಶಾಮಣ್ಣ ಅವರು ಕಾಂಗ್ರೆಸ್ಸಿನ ಡಿ.ಪಿ. ಶರ್ಮಾ ಅವರನ್ನು 2,727 ಮತಗಳಿಂದ ವಿಜಯಿಶಾಲಿಗಳಾಗಿದ್ದು ಅವರ ಹೆಗ್ಗಳಿಕೆಯಾಗಿತ್ತು.

ಜೀವನದುದ್ದಕ್ಕೂ ಅತ್ಯಂತ ಸರಳತೆಗೆ ಹೆಸರುವಾಸಿಯಾಗಿದ್ದ ಶಾಮಣ್ಣನವರು ಹೆಚ್ಚಿನ ಬಾರಿ ಸೈಕಲ್ಲಿನ ಮೂಲಕವೇ ಸಂಚರಿಸುತ್ತಿದ್ದಲ್ಲದೇ, ಈ ಮೊದಲೇ ತಿಳಿಸಿದಂತೆ ಸೈಕಲ್ ತೆರಿಗೆ ಮತ್ತು ನೀರಿನ ಸೆಸ್ ರದ್ದುಪಡಿಸಲು ಮತ್ತು ಆಸ್ತಿ ತೆರಿಗೆಯ ಹೊರೆಯನ್ನು ತಗ್ಗಿಸಲು ಚಳುವಳಿಯ ನಡೆಸಿ, ಜನ ಸಾಮಾನ್ಯರಿಗೆ ಹತ್ತಿರವಾಗಿದ್ದ ಕಾರಣ ಜನಾ ಅವರನ್ನು ಸೈಕಲ್ ಶಾಮಣ್ಣ ಎಂದೇ ಕರೆಯುತ್ತಿದ್ದರು. ಬಹಳ ಸ್ವಾಭಿಮಾನಿಗಳಾಗಿದ್ದ ಶಾಮಣ್ಣನವರು ನಂತರದ ದಿನಗಳಲ್ಲಿ ತಮ್ಮ ಸರ್ಕಾರಿ ಕೆಲಸ ಮತ್ತು ಖಾಸಗೀ ಕೆಲಸಗಳಿಗೂ ಸಹಾ ತಮ್ಮದೇ ಆದ ತ್ರಿಚಕ್ರ ವಾಹನವನ್ನು ಬಳಸುತ್ತಾ ಅತ್ಯಂತ ಗಾಂಧಿಮಾರ್ಗದಿಂದ ಇದ್ದ ಕಾರಣ ಅವರನ್ನು ಕರ್ನಾಟಕ ಗಾಂಧಿ ಎಂದು ಸಹಾ ಗೌರವಿಸಲಗಿತ್ತು.

ಶ್ರೀಮತಿ ಮುತ್ತುಲಕ್ಷ್ಮಿ ಅವರ ಸಂಗಾತಿಯಾಗಿದ್ದು, ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ, ಐದು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು ಅವರಿಗೆ ಜನಿಸುತ್ತಾರೆ. ಇನ್ನು ಧಾರ್ಮಿಕವಾಗಿಯೂ ಅನೇಕ ಉತ್ತಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಶಾಮಣ್ಣನವರು, ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದ ಧರ್ಮದರ್ಶಿಯಾಗಿದ್ದಲ್ಲದೇ ಅದರ ಅಕ್ಕಪಕ್ಕದಲ್ಲೇ ಇರುವ ದೊಡ್ಡಬಸವಣ್ಣನ ಗುಡಿ, ಶ್ರೀ ರಾಮೇಶ್ವರ ದೇವಸ್ಥಾನಗಳ ಸಂಚಾಲಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಎನ್.ಆರ್. ಕಾಲೋನಿಯ ಶ್ರೀರಾಮ ಮಂದಿರದ ಅಧ್ಯಕ್ಷರಾಗಿದ್ದಲ್ಲದೇ ಬೆಂಗಳೂರಿನಾದ್ಯಂತ ಅನೇಕ ಹರಿಕಥಾ ಮತ್ತು ಭಜನಾ ಸಮಾಜಗಳನ್ನು ಆರಂಭಿಸಿದ ಕೀರ್ತಿಯೂ ಸಹಾ ಟಿ.ಆರ್. ಶಾಮಣ್ಣನವರಿಗೇ ಸಲ್ಲುತ್ತದೆ.

Shamanna_Park

ಸಮಾಜಕ್ಕೆ ಅದರಲ್ಲೂ ಬೆಂಗಳೂರಿನ ಪಿತಾಮಹರಾಗಿ ಮಾಡಿದ ಅಮೋಘ ಸೇವೆಗಳನ್ನು ಗುರುತಿಸಿ, ಮೈಸೂರು ರಸ್ತೆಯ ಗಾಳಿ ಆಂಜನೇಯ ಹತ್ತಿರದ ಬಡಾವಣೆಗೆ ಟಿ ಆರ್ ಶಾಮಣ್ಣ ನಗರ ಎಂದು ಹೆಸರಿಸಲಾಗಿದೆಯಲ್ಲದೇ, ಬಸವನಗುಡಿಯ ವ್ಯಾಪ್ತಿಯಲ್ಲೇ ಇರುವ ಕಹಳೆ ಬಂಡೆ (ಬ್ಯೂಗಲ್ ರಾಕ್‌) ಪಕ್ಕದ ಉದ್ಯಾನವನಕ್ಕೆ ಟಿ.ಆರ್. ಶಾಮಣ್ಣನವರ ಹೆಸರನ್ನು ಇಡುವ ಮೂಲಕ ಗೌರವಿಸಲಾಗಿದೆ. ಇಂತಹ ಶಾಮಣ್ಣನವರು ತಮ್ಮ 78ನೇ ವಯಸ್ಸಿನಲ್ಲಿ ವಯೋಸಹಜ ಖಾಯಿಲೆಗಳಿಂದ ಆಗಸ್ಟ್ 30, 1990ರಂದು ಬೆಂಗಳೂರಿನಲ್ಲಿ ನಿಧನರಾಗುವ ಮೂಲಕ, ಸರಳ ಸಜ್ಜನಿಕೆಯ, ಜನಾನುರಾಗಿ ನಾಯಕರರೊಬ್ಬರನ್ನು ಈ ನಾಡು ಕಳೆದುಕೊಂಡಿತಾದರೂ, ಬೆಂಗಳೂರಿನಲ್ಲಿ ಆಬಾಲವೃದ್ಧರಾದಿಯಾಗಿ ಸೈಕಲ್ ತುಳಿಯುವುದನ್ನು ನೋಡಿದಾಗ, ಸೈಕಲ್ ಇರುವವರೆಗೂ ಸೈಕಲ್ ಶಾಮಣ್ಣ ನವರ ನೆನಪು ಇದ್ದೇ ಇರುತ್ತದೆ ಅಲ್ವೇ?

ಏನಂತೀರೀ?

ಸೃಷ್ಟಿಕರ್ತ 

ಉಮಾಸುತ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ