ಕಥೆ – ವಿದ್ಯಾ ಎಸ್. ನಾಯಕ್
ಕ್ಷಣಾರ್ಧದಲ್ಲಿ ತಾಯಿಯಾದವಳ ಹೃದಯ ಎಷ್ಟೆಲ್ಲಾ ತುಡಿಯಬಹುದು….? ಮಕ್ಕಳಿಗೆ ಏನಾದರೂ ಆಗಿಬಿಟ್ಟರೆ ಏನು ಗತಿ……?
ಏಪ್ರಿಲ್ ತಿಂಗಳ ಕೊನೆ, ಮಕ್ಕಳಿಗೆ ಬೇಸಿಗೆ ಕಾಲದ ರಜಾ ದಿನಗಳು. ಬೆಳಗಾದರೆ ಸಾಕು ಪುಟ್ಟನನ್ನು ಆಟಕ್ಕೆ ಕರೆಯಲು ಬಾಗಿಲು ತಟ್ಟುವ ಮಕ್ಕಳು, ಟಿವಿಯಲ್ಲಿ ಏನೋ ಕಾರ್ಟೂನ್ ನೋಡುತ್ತಾ ಆಗಷ್ಟೇ ತಿಂಡಿ ಮುಗಿಸಿದ್ದ ಪುಟ್ಟ, ತನ್ನ ಗೆಳೆಯರು ಬಾಗಿಲು ತಟ್ಟಿದಂತೆ ತಣ್ಣಗಾದ ಹಾಲನ್ನು ಗಟಗಟನೇ ಕುಡಿದು, ಬಾಯಿಯನ್ನು ಕೈಯಲ್ಲೇ ಒರೆಸಿ, ಸೈಕಲ್ ಕೀ ಹಿಡಿದು ಓಡಲು ಅಣಿಯಾದ.
“ಏನೋ ಅದು ಕೆಟ್ಟ ಅಭ್ಯಾಸ? ತಿಂಡಿ ತಿಂದು ಕೈ, ಬಾಯಿ ತೊಳೆಯದಷ್ಟು ಗಡಿಬಿಡಿಯಾ?” ಅವನು ತಿಂಡಿ ತಿಂದ ತಟ್ಟೆಯನ್ನು ಎತ್ತುತ್ತಾ ಕೇಳಿದೆ.
“ಅಮ್ಮಾ….. ನನ್ನ ಫ್ರೆಂಡ್ಸ್ ಕಾಯ್ತಾ ಇದ್ದಾರೆ, ಲೇಟ್ ಆಗುತ್ತೇ,” ಅವನು ಅಡ್ಡ ಮೋರೆ ಹಾಕುತ್ತಾ ಹೇಳಿದ.
“ಬಾ ಒಳಗೆ, ಕೈ ಬಾಯಿ ತೊಳೆದು ಟಿವಿ ಆರಿಸಿ ಹೋಗು,” ನಾನು ಜೋರಾಗಿ ಹೇಳಿದೆ. ಗೆಳೆಯರ ಮುಂದೆ ತನ್ನ ಮರ್ಯಾದೆ ಹೋದಂತಾಗಿ ಹೊರಗಡೆ ಕಾಯುತ್ತಿದ್ದ ಅವರ ಕಡೆಗೊಮ್ಮೆ ನೋಡಿ, ಕೀ ಇಟ್ಟು, `ಸಮ್ಮರ್ ಟೈಮ್ ನಲ್ಲೂ ನಂಗೆ ಫ್ರೀಡಂ ಇಲ್ಲ…..’ ಎಂದು ಗೊಣಗುತ್ತಾ ಸಿಂಕ್ ಹತ್ತಿರ ನಡೆದ.
ಕೈ, ಬಾಯಿ ತೊಳೆದುಕೊಂಡು, ತನ್ನ ಕೈಯಲ್ಲಿದ್ದ ನೀರನ್ನು ಎಲ್ಲೆಡೆ ಸಿಡಿಸುತ್ತಾ, ಟಿವಿಯನ್ನು ಆರಿಸದೇ, ಸೈಕಲ್ ಕೀಯನ್ನು ಎತ್ತಿಕೊಂಡು ಆಟಕ್ಕೆ ಓಡಿದ.
“ಬೇಸ್ಮೆಂಟ್ ನಲ್ಲಿಯೇ ಆಡಿ, ಹೊರಗಡೆ ಹೋಗಬೇಡಿ,” ನಾನು ಕಿರುಚಿದ್ದು ಅವರಿಗೆ ಕೇಳಿಸಿತೋ ಇಲ್ಲವೋ…ಇವತ್ತು ಶುಕ್ರವಾರ, ವರ್ಕಿಂಗ್ ಡೇ, ಪುಟ್ಟನಿಗೆ ಬೇಸಿಗೆ ರಜೆ ಇರುವ ಕಾರಣ ನಮ್ಮಿಬ್ಬರಲ್ಲಿ ಒಬ್ಬರು ವರ್ಕ್ ಫ್ರಂ ಹೋಮ್ ಮಾಡಬೇಕಾಗಿತ್ತು. ಹಾಗೆ ಇಂದು ನನ್ನ ಸರದಿ. ನಾನು ಆಫೀಸಿಗೆ ಹೋಗುವ ದಿನ ಅಡುಗೆ ಕೆಲಸ ಬೆಳಗ್ಗೆಯೇ ಮುಗಿಸಿದರೆ, ವರ್ಕ್ ಫ್ರಂ ಹೋಮ್ ಇದ್ದ ದಿನ ಆರಾಮವಾಗಿ ಮಾಡುತ್ತಿದ್ದೆ. ಇವತ್ತು ಏನು ಏಡುಗೆ ಮಾಡೋದು ಎಂದು ಯೋಚಿಸುತ್ತಲೇ ಟಿವಿ ಆರಿಸಿ ಅಡುಗೆ ಮನೆಗೆ ಹೋದೆ.
ತರಕಾರಿ ಬೇರೆ ಖಾಲಿಯಾಗಿದೆ. ಹನ್ನೊಂದು ಗಂಟೆಗೆ ಲಾಗ್ ಇನ್ ಆಗಬೇಕು ಎಂಬ ನೆನಪು ಬಂದಾಗ, ಇವತ್ತಿನ ಅಡುಗೆಗೆ `ಪಾಸ್ತಾ’ ಬೆಸ್ಟ್ ಚಾಯ್ಸ್ ಎನಿಸಿತು. ಮಾಡಲೂ ಸುಲಭ, ರುಚಿಯಾಗಿಯೂ ಇರುತ್ತೆ. ಅದು ಪುಟ್ಟನಿಗೆ ಇಷ್ಟ ಎಂದು ಮನಸ್ಸು ಸಮರ್ಥನೆ ಕೊಟ್ಟಿತು. ವಾರಕ್ಕಾಗುವಷ್ಟು ತರಕಾರಿ, ಹಣ್ಣುಗಳನ್ನು ವೀಕ್ ಎಂಡ್ ನಲ್ಲಿ ತಂದಿರಿಸುವ ಅನಿವಾರ್ಯತೆ ನಮಗಿತ್ತು.
ಆದ್ದರಿಂದ ಶುಕ್ರವಾರ ಫ್ರಿಜ್ ನಲ್ಲಿ ಒಣಗಿ ಹೋಗಿರುತ್ತಿದ್ದ ಆ ತರಕಾರಿಗಳ ದರ್ಶನ ಪಡೆದರೆ ಅಡುಗೆ ಮಾಡುವುದೇ ಬೇಡ ಎಂಬ ಭಾವನೆ ಬಲವಾಗುತ್ತಿದ್ದುರಿಂದ, ಆ ದಿನ ಬೇರೆ ಏನಾದರೂ ಸುಲಭದ ಅಡುಗೆ ಮಾಡುವುದು ರೂಢಿಯಾಗಿತ್ತು. ಅದಕ್ಕಾಗಿ ಪಾಸ್ತಾ, ಹೆಸರುಬೇಳೆ ಖಿಚಡಿ ಅಥವಾ ಪುಳಿಯೋಗರೆ ಹೀಗೆ ಏನಾದರೊಂದು ಮಾಡುತ್ತಿದ್ದೆ. ಮತ್ತೆ ವೀಕೆಂಡ್ ಬಂದಾಗ ಹೊರಗಡೆ ಹೋಗಿ ಮನೆಗೆ ಬೇಕಾದ ಸಾಮಗ್ರಿಗಳನ್ನು ತರುವ ನಮ್ಮದು ಬರೀ `ವೀಕೆಂಡ್ ಜೀವನ’ ಅಂತ ಕೆಲವೊಮ್ಮೆ ಅನಿಸಿದ್ದೂ ಇದೆ.
ಬೇಸ್ ಮೆಂಟಿನಲ್ಲಿ ಮಕ್ಕಳು ಓಡುವ, ಕಿರುಚುವ ಸದ್ದು, ಸೈಕಲ್ ಬೆಲ್ ಗಳ ಕಿಣಿಕಿಣಿ ಯಥೇಚ್ಛವಾಗಿ ಕೇಳಿಸುತ್ತಿತ್ತು. ಬೇಸಿಗೆ ರಜೆ ಬಂದರೆ ಸಾಕು `ಶಾಲೆ’ ಎಂಬುದೊಂದಿದೆ ಎಂಬುದನ್ನೇ ಮರೆತು ಆಡುವ ಮಕ್ಕಳನ್ನು ನೆನೆದು ತೆಳುವಾದ ನಗುವೊಂದು ನನ್ನ ಮೊಗದಲ್ಲಿ ಸುಳಿದು ಮಾಯವಾಯಿತು.
ನಾನು ಅಡುಗೆ ತಯಾರಿಯಲ್ಲಿದ್ದೆ. ನನ್ನದೇ ಗುಂಗಿನಲ್ಲಿ ಮುಳುಗಿರುವಾಗ ಅದೇನೋ ಸದ್ದಾಯಿತು! ಒಮ್ಮೆಲೇ ಬಿಚ್ಚಿಬಿದ್ದೆ. ಏನೋ ಬಿದ್ದ ಶಬ್ದ! ಅದರ ಹಿಂದೆ `ಅಮ್ಮಾ…..!’ ಎನ್ನುವ ಚೀತ್ಕಾರ ಕೇಳಿಸಿತು.
`ಇದು ಪುಟ್ಟನ ಧ್ವನಿ ಅಲ್ವಾ…..!’ ನನ್ನ ಅಂತರಂಗ ನುಡಿಯಿತು. ಜೊತೆಗೆ ಮಕ್ಕಳೆಲ್ಲಾ ಕಿರುಚುತ್ತಾ ಓಡಿ ಬರುವ ಸಪ್ಪಳ, ನನ್ನ ಕೈ ಕಾಲುಗಳು ನಡುಗತೊಡಗಿದವು, ತಕ್ಷಣ ಗ್ಯಾಸ್ ಒಲೆ ಆರಿಸಿದೆ.`ಏನಾಗಿರಬಹುದು……?’ ಎಂದು ಮನಸ್ಸು ತರ್ಕಿಸುತ್ತಿದ್ದಂತೆ ನನ್ನ ಕಾಲುಗಳು ಅಪ್ರಯತ್ನವಾಗಿ ಬೇಸ್ಮೆಂಟಿನತ್ತ ಓಡಿದವು.
ಮೊನ್ನೆ ಮೊನ್ನೆ ಪತ್ರಿಕೆಯಲ್ಲಿ ಓದಿದ ಘಟನೆ ನೆನಪಾಯಿತು, `ಬೇಸ್ಮೆಂಟಿನಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಹತ್ತಿದ ಕಾರು,’ ಅದನ್ನು ಓದಿಯೇ ನನ್ನ ಮನಸ್ಸು ಎರಡು ದಿನ ಸ್ಥಿಮಿತದಲ್ಲಿರಲಿಲ್ಲ. ಮೇಲು ಮನೆಯ ಹುಡುಗ ಅದೆಷ್ಟು ವೇಗವಾಗಿ ಕಾರು ಓಡಿಸುತ್ತಾನೆ! ರಸ್ತೆ ಅಂತಿಲ್ಲ, ಬೇಸ್ಮೆಂಟ್ ಅಂತಿಲ್ಲ….! ಹಣವಂತರಾದ ಅಪ್ಪ ಅಮ್ಮ ಕೊಡಿಸಿದ ಕಾರು, ಓಡಿಸುವ ಹುಡುಗರಿಗೆ ಕಣ್ಣು ನೆಲದ ಮೇಲೆ ಇರುದಿಲ್ಲ. ಈಗ ಹಾಗೇನಾದರೂ ಆಗಿದ್ದರೆ…..? ದೇವರೇ ಹಾಗಾಗದಿರಲಿ….. ಕಾಣದ ದೇವರಿಗೆ ಮೊರೆ ಇಟ್ಟೆ.
ಸೈಕಲ್ ಮೇಲಿನಿಂದ ಬಿದ್ದು ಕೈ ಅಥವಾ ಕಾಲು ಮುರಿದುಕೊಂಡಿರಬಹುದೇ…? ಪರಮಾತ್ಮಾ…. ಮೊನ್ನೆ ಸೈಕಲ್ ಹ್ಯಾಂಡ್ ಹಿಡಿಯದೆಯೇ ಬರೀ ಪೆಡಲ್ ತುಳಿಯುತ್ತಾ ಸೈಕಲ್ ಓಡಿಸುತ್ತಿದ್ದ ಪುಟ್ಟನನ್ನು ನೋಡಿ ಹೃದಯವೇ ಬಾಯಿಗೆ ಬಂದಂತೆ ಆಗಿತ್ತು. ಮಕ್ಕಳ ನಡುವೆ ಕೈ ಬಿಟ್ಟುಕೊಂಡು ಯಾರು ಎಷ್ಟು ದೂರ ಸೈಕಲ್ ಓಡಿಸುತ್ತಾರೆ ಎನ್ನುವ ಸ್ಪರ್ಧೆ ಬೇರೆ!
ಇನ್ನೂ ಹತ್ತು ವರ್ಷ ದಾಟದ ಅವನು ಕೈ ಬಿಟ್ಟು ಸೈಕಲ್ ಓಡಿಸುತ್ತಿದ್ದಾನೆ ಎನ್ನುವುದೇ ನನಗೆ ಅಚ್ಚರಿಯ ವಿಷಯವಾಗಿತ್ತು. ಪುಟ್ಟನ ಕಿವಿಯನ್ನು ಸರಿಯಾಗಿ ಹಿಂಡಿ ಬೈದಿದ್ದೆ.
ಅದಕ್ಕವನು, `ಹೋಗಮ್ಮಾ…. ನನ್ನ ಫ್ರೆಂಡ್ಸ್ ವೀಲಿಂಗ್ ಎಲ್ಲಾ ಮಾಡ್ತಾರೆ. ನನಗೆ ಇಂಥ ಚಿಕ್ಕಪುಟ್ಟದಕ್ಕೆಲ್ಲಾ ಬೈತೀಯಾ….’ ಎಂದಾಗ ಒಮ್ಮೆ ಎದೆ ಧಸಕ್ ಎಂದಿತ್ತು.
ಮೂರು ಹೊತ್ತು ಮಕ್ಕಳನ್ನೂ ಕಾಯೋಕೆ ಆಗುತ್ತಾ….? ಮನೆ, ಆಫೀಸ್ ಕೆಲಸದ ನಡುವೆ ಇವನನ್ನು ಗಮನಿಸುವುದು ಹೇಗೆ…? ಈಗ ಹಾಗೇನಾದರೂ ಆಗಿದ್ದರೆ ಏನಪ್ಪಾ ಮಾಡಲಿ…..? ಇವರು ಬೇರೆ ಆಫೀಸಿಗೆ ಹೋಗಿದ್ದಾರೆ. ಪಕ್ಕದ ಮನೆ ಅಂಕಲ್ ಕೂಡಾ ಕಾರು ಸರ್ವೀಸ್ ಗೆ ಬಿಟ್ಟಿದ್ದಾರಂತೆ, ಮೊನ್ನೆ ಯಾವುದೋ ಕಾರಣಕ್ಕೆ ಆಸ್ಪತ್ರೆಗೆ ಹೋಗಿದ್ದಾಗ ಕೈ ಕಾಲುಗಳಿಗೆ ಬ್ಯಾಂಡೇಜ್ ಕಟ್ಟಿದ ಮಕ್ಕಳನ್ನು ನೋಡಿ ತಲೆ ಭಾರ ಆಗಿತ್ತು. ಎಲ್ಲರೂ ಹೇಳುವುದು ಒಂದೇ, ಈ ಬೇಸಿಗೆಯ ರಜೆಯಲ್ಲಿ ಎಲ್ಲಾ ಮಕ್ಕಳದ್ದೂ ಇದೇ ಗೋಳು.
ನಮ್ಮ ಪ್ಲೇ ಏರಿಯಾದ ಜೋಕಾಲಿ ಬೇರೆ ಮುರಿಯುವ ಹಂತದಲ್ಲಿದೆ. ಆದರೆ ಈ ಹುಡುಗರು ಅದರಲ್ಲಿ ಕೂತು ಜೀಕುವುದನ್ನು ನೋಡಿದರೆ ಹೃದಯ ಬಡಿತ ನಿಂತಂತಾಗುತ್ತದೆ. ಎಷ್ಟು ಹೇಳಿದರೂ ಕೇಳುವುದಿಲ್ಲ. ಅಷ್ಟು ಜೊರಾಗಿ ಜೀಕುವಾಗ ಜೋಕಾಲಿ ತುಂಡಾದರೆ ಕಟ್ಟಡದ ಕಂಬಕ್ಕೆ ಬಡಿಯುವುದು ಖಂಡಿತಾ.
ಮೊನ್ನೆ ಮೊನ್ನೆ ನಡೆದ ಅಸೋಸಿಯೇಶನ್ ಮೀಟಿಂಗ್ ನಲ್ಲಿ ಇದರ ಪ್ರಸ್ತಾಪ ಮಾಡಿದ್ದೆ. ಆದರೆ ಇದುವರೆಗೂ ಯಾರೂ ಅದಕ್ಕೊಂದು ಗತಿ ಕಾಣಿಸಲಿಲ್ಲ. ಯಾರು ಎಷ್ಟೂಂತ ಫಾಲೋ ಅಪ್ ಮಾಡಬಹುದು….?!
ಬೇಸ್ಮೆಂಟ್ ಗೆ ತಲುಪುತ್ತಿದ್ದಂತೆ ದಿಗಿಲಿನಿಂದ, “ಪುಟ್ಟಾ ಪುಟ್ಟಾ…..” ಎಂದು ಜೋರಾಗಿ ಕೂಗಿದೆ. ಪ್ಲೇ ಏರಿಯಾದಲ್ಲಿ ಆಟವಾಡುತ್ತಿದ್ದ ಪುಟ್ಟ ಮತ್ತು ಅವನ ಸ್ನೇಹಿತರು ನನ್ನ ಜೋರು ಕರೆಗೆ ಗಾಬರಿಯಿಂದ ನನ್ನೆಡೆ ನೋಡತೊಡಗಿದರು. ಮಕ್ಕಳ ಜೊತೆ ಅಲ್ಲಿ ಆಡುತ್ತಿರುವ ಅವನನ್ನು ನೋಡಿ ಅತ್ಯಂತ ಸಮಾಧಾನವಾಯಿತು.
“ಯಾಕೋ ಅಷ್ಟು ಜೋರಾಗಿ ಅಮ್ಮಾ ಅಂತ ಕಿರುಚಿದೆ…..?” ಎಂದು ಆತಂಕದಿಂದ ಕೇಳಿದೆ.
“ಇಲ್ಲ ಅಮ್ಮಾ….. ಕ್ಯಾಚ್ಕ್ಯಾಚ್ಆಡ್ತಾ ಇದ್ವಿ. ಒಮ್ಮೆಲೆ ನನ್ನನ್ನು ಅವರು ಕ್ಯಾಚ್ ಮಾಡಲು ಬಂದಾಗ ಗಾಬರಿಯಿಂದ ಕಿರುಚಿ, ಸೈಕಲ್ ಬಿಟ್ಟು ಓಡಿದೆ. ಸೈಕಲ್ ಬಿತ್ತು. ಸೈಕಲ್ ಗೂ ನಂಗೂ ಏನೂ ಆಗಿಲ್ಲಮ್ಮಾ….” ಎಂದು ಕೂಲಾಗಿ ಹೇಳಿದ.
“ಸೈಕಲ್ಲೇನಾದರೂ ಆದರೆ ಬೇರೆ ತರಬಹುದು ಪುಟ್ಟಾ…. ಸದ್ಯ ನಿಂಗೇನಾಗಿಲ್ಲ ತಾನೇ…?” ಎಂದು ಪುಟ್ಟನನ್ನು ಬರಸೆಳೆದು ಮುದ್ದಿಸಿದೆ.
“ಸರಿ ಬೇಗ ಬಾ ಮನೆಗೆ, ನಿನ್ನ ಇಷ್ಟದ ಅಡುಗೆ ಮಾಡ್ತ ಇದೀನಿ,” ಎನ್ನುತ್ತಾ ನಾನು ಮನೆ ಕಡೆ ನಡೆದೆ. ಹೃದಯ ಹಗುರವಾಗಿತ್ತು. `ಆದರೆ ಸೈಕಲ್ ಬಿದ್ದ ಆ ಶಬ್ದಕ್ಕೆ ನನ್ನ ಮನಸ್ಸಿನಲ್ಲಿ ಎಷ್ಟೆಲ್ಲಾ ಯೋಚನೆಗಳು ಒಂದರ ಹಿಂದೆ ಒಂದರಂತೆ ರೀಲಿನಂತೆ ಬಂದು ಹೋದವು! ಅಂದಾಜು 2-3 ನಿಮಿಷಗಳಲ್ಲಿ ಮೂರು ಮಹಡಿ ಇಳಿದು ಬೇಸ್ಮೆಂಟ್ ಗೆ ಬಂದಿದ್ದೆ. ಅಷ್ಟರಲ್ಲಿ ನನ್ನ ತಲೆಯೊಳಗೆ ಇಷ್ಟೆಲ್ಲಾ ಓಡಿತ್ತು. ಬಹುಶಃ ಇಂತಹ ಯೋಚನೆಗಳು ಎಲ್ಲಾ ಅಮ್ಮಂದಿರ ತಲೆಯಲ್ಲೂ ಓಡುತ್ತವೆಯೋ ಏನೋ….’ ಯೋಚಿಸಿದೆ.
ಮಹಾಭಾರತದಲ್ಲಿ ಯಕ್ಷನು, `ಗಾಳಿಗಿಂತಲೂ ವೇಗವಾದದ್ದು ಏನು?’ ಎಂದು ಯುದಿಷ್ಠಿರನಲ್ಲಿ ಕೇಳಿದಾಗ ಅವನು `ಗಾಳಿಗಿಂತಲೂ ವೇಗವಾದದ್ದು ಮನಸ್ಸು,’ ಎಂದು ಉತ್ತರಿಸಿದ್ದು ನನಗೆ ಸರಿ ಕಾಣುವುದಿಲ್ಲ. ಬಹುಶಃ ಆ ಪ್ರಶ್ನೆಗೆ ಯುದಿಷ್ಠಿರನು `ಗಾಳಿಗಿಂತಲೂ ವೇಗವಾದದ್ದು ತಾಯಿಯೊಬ್ಬಳ ಮನುಸ್ಸು,’ ಎಂದಿದ್ದರೆ ಸರಿಯಾಗಿರುತ್ತಿತ್ತೇನೋ?





