ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮತ್ತು ಕಾಲಿಂಪಾಂಗ್ ಬೆಟ್ಟಗಳಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಭೂಕುಸಿತ ಉಂಟಾಗಿ, ಮನೆಗಳು ಕೊಚ್ಚಿ ಹೋಗಿದ್ದು, ರಸ್ತೆಗಳ ಸಂಪರ್ಕ ಕಡಿತಗೊಂಡಿವೆ. ದುರಂತದ ಪರಿಣಾಮ 20 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಗುವ ಸಾಧ್ಯತೆ ಇದೆ ಎಂದು ಡಾರ್ಜಿಲಿಂಗ್ ಉಪ ವಿಭಾಗೀಯ ಅಧಿಕಾರಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಸಂತಾಪ ಸೂಚಿಸಿದ್ದು ಅಗತ್ಯ ಮೂಲಸೌಕರ್ಯ ಪೂರೈಸುವುದಾಗಿ ಭರವಸೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಮಿರಿಕ್ ಪಟ್ಟಣದ ಬೆಟ್ಟದ ತಪ್ಪಲಿನ ಪ್ರದೇಶ ಹಾಗೂ ಕುರ್ಸೆಯೊಂಗ್ ಪಟ್ಟಣದ ಹುಸೇನ್ ಕೋಲಾ ಪ್ರದೇಶ ಸೇರಿದಂತೆ ಕೆಲವು ಕಡೆ ನಿರಂತರ ಮಳೆಯಿಂದ ಭೂಕುಸಿತ ಸಂಭವಿಸಿದೆ. ದುರಂತದಲ್ಲಿ 20 ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಹಲವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.ನಾಪತ್ತೆಯಾಗಿರುವವರನ್ನು ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಜಿಲ್ಲಾಡಳಿತವು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ. ಈ ಮಧ್ಯೆ, ಧಾರ್ ಗಾಂವ್, ನಗರ್ಕಾಟಾ ಪ್ರದೇಶದಲ್ಲಿ40ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಪ್ರವಾಸಿಗರ ಸ್ವರ್ಗ ಎನಿಸಿರುವ ಮಿರಿಕ್ ಮತ್ತು ಕುರ್ಸೆಯೊಂಗ್ ಪಟ್ಟಣ ಮಧ್ಯೆ ಸಂಪರ್ಕ ಕಲ್ಪಿಸುವ ದುಡಿಯಾ ಉಕ್ಕಿನ ಸೇತುವೆ ಕುಸಿದಿದೆ.
ಸರ್ಸಾಲಿ, ಜಿಸ್ಬಿರ್ಗಾಂವ್, ಮಿರಿಕ್ ಬಸ್ತಿ, ಧಾರ್ ಗಾಂವ್ ಮತ್ತು ಮಿರಿಕ್ ಸರೋವರ ಪ್ರದೇಶ ಸೇರಿ ಹಲವು ಪ್ರದೇಶಗಳಲ್ಲಿಹೆಚ್ಚಿನ ಸಾವು-ನೋವು ಸಂಭವಿಸಿರುವುದು ವರದಿಯಾಗಿದೆ. ಮಿರಿಕ್ ಪ್ರದೇಶವೊಂದರಲ್ಲಿಯೇ ಭೂಕುಸಿತಕ್ಕೆ 11 ಮಂದಿ ಮೃತಪಟ್ಟಿರುವುದಾಗಿ ಎನ್ಡಿಆರ್ಎಫ್ ಹೇಳಿದೆ.
ಮಿರಿಕ್-ಸುಖಿಯಾಪೋಖ್ರಿ ರಸ್ತೆಯಂತಹ ಪ್ರಮುಖ ಮಾರ್ಗಗಳಲ್ಲಿ ಭೂಕುಸಿತದಿಂದ ಸಂಚಾರಕ್ಕೆ ತೊಂದರೆಯಾಗಿದೆ. ಬೆಟ್ಟದ ತುದಿಯಲ್ಲಿರುವ ಜನರ ಮನೆಗಳು ಕೊಚ್ಚಿ ಹೋಗಿವೆ. ಎನ್ಡಿಆರ್ಎಫ್ ತಂಡವು ಮಿರಿಕ್ ಸರೋವರ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ಡಾರ್ಜಿಲಿಂಗ್ ಉಪ ವಿಭಾಗೀಯ ಅಧಿಕಾರಿ (SDO) ರಿಚರ್ಡ್ ಲೆಪ್ಚಾ ಮಾಹಿತಿ ನೀಡಿದ್ದಾರೆ.
ಭಾರಿ ಭೂಕುಸಿತದಿಂದ ಫುಲ್ಬಜಾರ್ನಿಂದ ತಾನಾಲೈನ್ ನಡುವೆ ಸಂಪರ್ಕ ಸೇತುವೆ ಜಖಂಗೊಂಡಿದೆ. ಇನ್ನೊಂದೆಡೆ ತೀಸ್ತಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಿಲಿಗುರಿ ಮತ್ತು ಸಿಕ್ಕಿಂ ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 10ರ ಮಧ್ಯೆ ಸಂಪರ್ಕ ಬಂದ್ ಮಾಡಲಾಗಿದೆ. ಇದರಿಂದಾಗಿ, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ನಡುವಿನ ಸಂಪರ್ಕ ಕಡಿತಗೊಂಡಂತಾಗಿದೆ.