– ರಾಘವೇಂದ್ರ ಅಡಿಗ ಎಚ್ಚೆನ್.
ಸಂಗೀತ ಲೋಕದ ಕೋಗಿಲೆ ಎಂದು ಕರೆಸಿಕೊಳ್ಳುವ ಹಿರಿಯ ಗಾಯಕಿ ಎಸ್ ಜಾನಕಿ ಅವರ ಜೀವನದಲ್ಲಿ ಇಂದು ಆಘಾತಕಾರಿ ದುಃಖದ ದಿನ. ಅವರ ಏಕೈಕ ಪುತ್ರ ಮುರಳಿ ಕೃಷ್ಣ ಅವರು ಇಂದು (ಜನವರಿ 22) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 65 ವರ್ಷ ವಯಸ್ಸಿನ ಮುರಳಿ ಕೃಷ್ಣ ಅವರ ಅಕಾಲಿಕ ಮರಣ ಅಭಿಮಾನಿಗಳು ಮತ್ತು ಕಲಾ ಲೋಕವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ.
ಎಸ್ ಜಾನಕಿ ಅವರ ಹೆಸರು ಸಂಗೀತದೊಂದಿಗೆ ಅನಿವಾರ್ಯವಾಗಿ ಜೋಡಿಸಿಕೊಂಡಿರುವಂತೆ, ಅವರ ಪುತ್ರ ಮುರಳಿ ಕೃಷ್ಣ ಕೂಡ ಕಲೆಯೊಂದಿಗೆ ಆಳವಾದ ನಂಟು ಹೊಂದಿದ್ದರು. ಅವರು ಅತ್ಯುತ್ತಮ ಭರತನಾಟ್ಯ ಕಲಾವಿದರಾಗಿದ್ದು, ಹಲವು ಶೋಗಳನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು. ಕೆಲವು ಸಿನಿಮಾಗಳಿಗೆ ಭರತನಾಟ್ಯ ಕೊರಿಯೋಗ್ರಫಿ ಮಾಡಿ ತಮ್ಮದೇ ಆದ ಗುರುತು ಮೂಡಿಸಿದ್ದರು. ಭರತನಾಟ್ಯ ಮತ್ತು ಕುಚುಪುಡಿ ಪ್ರವೀಣೆಯಾಗಿದ್ದ ಉಮಾ ಅವರನ್ನು ವಿವಾಹವಾಗಿದ್ದ ಮುರಳಿ ಕೃಷ್ಣ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ.
ಆದರೆ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯದೆ, ಇಬ್ಬರೂ ವಿಚ್ಛೇದನ ಪಡೆದು ದೂರವಾಗಿದ್ದರು. ಕೆಲ ಕಾಲ ಮೈಸೂರಿನಲ್ಲಿ ವಾಸವಿದ್ದ ಮುರಳಿ ಕೃಷ್ಣ, ಈಗ ಹರಿದಾಡುತ್ತಿರುವ ಸುದ್ದಿಯಂತೆ ತಾಯಿಯ ಮನೆಯಾದ ಹೈದರಾಬಾದ್ನಲ್ಲಿ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಅನೇಕ ಗಾಯಕರು, ಸಂಗೀತ ನಿರ್ದೇಶಕರು ಮತ್ತು ಸಿನಿಮಾ ಕ್ಷೇತ್ರದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ. “ಜಾನಕಿ ಅಮ್ಮನಿಗೆ ಈ ದುಃಖವನ್ನು ತಾಳುವ ಶಕ್ತಿ ನೀಡಲಿ” ಎಂದು ಹಲವರು ಪ್ರಾರ್ಥಿಸಿದ್ದಾರೆ.
87 ವರ್ಷದ ಎಸ್ ಜಾನಕಿ ಅವರು ಈ ವಯಸ್ಸಿನಲ್ಲಿ ತಮ್ಮ ಏಕೈಕ ಪುತ್ರನನ್ನು ಕಳೆದುಕೊಂಡಿರುವುದು ದೇಶದ ಸಂಗೀತ ಲೋಕವನ್ನೇ ನೋವಿನಲ್ಲಿ ಮುಳುಗಿಸಿದೆ. ಮುರಳಿ ಕೃಷ್ಣ ಅವರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.





