ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡದ ವರ ನಟ ಡಾ. ರಾಜ್‌ಕುಮಾರ್ ಅವರ ಅಪಹರಣ ಪ್ರಕರಣದಲ್ಲಿ 9 ಮಂದಿಯನ್ನು ಖುಲಾಸೆಗೊಳಿಸಿ ಗೋಪಿಚೆಟ್ಟಿಪಾಳಯಂ ಸೆಷನ್ಸ್ ನ್ಯಾಯಾಲಯ ನೀಡಿದ ಆದೇಶವನ್ನು ಮದ್ರಾಸ್ ಉಚ್ಚ ನ್ಯಾಯಾಲಯ ಬುಧವಾರ ಎತ್ತಿ ಹಿಡಿದಿದೆ.

ಈರೋಡ್ ಜಿಲ್ಲೆಯ ತಲವಾಡಿ ಸಮೀಪದ ದೊಡ್ಡಗಾಜನೂರುನಲ್ಲಿರುವ ತೋಟದ ಮನೆಯಿಂದ ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಹಾಗೂ ಅವನ ಸಹಚರರು 2000 ಜುಲೈ 30ರಂದು ಅಪಹರಣಗೈದಿದ್ದರು.

ರಾಜ್‌ಕುಮಾರ್ ಅವರ ಬಿಡುಗಡೆಗೆ ವೀರಪ್ಪನ್‌ನೊಂದಿಗೆ ಮಾತುಕತೆ ನಡೆಸಲು ತಮಿಳುನಾಡು ಹಾಗೂ ಕರ್ನಾಟಕ ಸರಕಾರ ಎರಡು ತಂಡಗಳನ್ನು ಕಾಡಿಗೆ ಕಳುಹಿಸಿತ್ತು. ಹಲವು ಸುತ್ತಿನ ಮಾತುಕತೆಗಳ ನಂತರ ರಾಜ್‌ಕುಮಾರ್ ಅವರನ್ನು 108 ದಿನಗಳ ಬಳಿಕ ಬಿಡುಗಡೆ ಮಾಡಲಾಗಿತ್ತು.
ಈ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಈರೋಡ್ ಜಿಲ್ಲೆಯ ತಲವಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ವೀರಪ್ಪನ್ ಹಾಗೂ ಅವರ ಸಹಚರ ಸೇತುಕುಳಿ ಗೋವಿಂದನ್, ಚಂದ್ರಗೌಡ, ಮಲ್ಲು, ರಮೇಶ್, ಗೋವಿಂದರಾಜ್, ಆಂಡ್ರಿಲ್ ಪಸುವಣ್ಣ, ಪುಟ್ಟುಸಾಮಿ, ಕಲ್ಮಂಡಿ ರಾಮನ್, ಮಾರನ್, ಸೆಲ್ವನ್, ಅಮರ್ತಲಿಂಗಂ, ನಾಗರಾಜ್ ಸೇರಿದಂತೆ 14 ಮಂದಿಯನ್ನು ಆರೋಪಿಗಳು ಎಂದು ಹೆಸರಿಸಿದ್ದರು ಹಾಗೂ ಬಂಧಿಸಿದ್ದರು. ಅನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಪ್ರಕರಣದ ವಿಚಾರಣೆ ಗೋಪಿಚೆಟ್ಟಿಪಾಳಯಂನ 3ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

2004ರಲ್ಲಿ ಆರೋಪ ಪಟ್ಟಿ ಸಲ್ಲಿಸುವ ಮುನ್ನ ವೀರಪ್ಪನ್ ಹಾಗೂ ಆತನ ಇಬ್ಬರು ಸಹಚರರಾದ ಸೇಥುಕುಳಿ ಗೋವಿಂದನ್ ಹಾಗೂ ಚಂದ್ರಗೌಡನನ್ನು ವಿಶೇಷ ಕಾರ್ಯ ಪಡೆ ಎನ್‌ಕೌಂಟರ್‌ನಲ್ಲಿ ಗುಂಡು ಹಾರಿಸಿ ಹತ್ಯೆಗೈದಿತ್ತು. ಇನ್ನೋರ್ವ ಸಹಚರ ಮಲ್ಲು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದ. ರಮೇಶ್ ನಾಪತ್ತೆಯಾಗಿದ್ದ. ಉಳಿದ 9 ಮಂದಿ ಪ್ರಕರಣದ ವಿಚಾರಣೆಗಾಗಿ 18 ವರ್ಷಗಳಿಂದ ಗೋಪಿಚೆಟ್ಟಿಪಾಳಯಂ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದರು.

2018 ಸೆಪ್ಟಂಬರ್ 25ರಂದು ಈ ಪ್ರಕರಣದ ತೀರ್ಪು ಪ್ರಕಟಿಸಲಾಗಿತ್ತು. ಗೋಪಿಚೆಟ್ಟಿಪಾಳಯಂ ನ್ಯಾಯಾಲಯದ ನ್ಯಾಯಮೂರ್ತಿ ಮಣಿ ಅವರು ವೀರಪ್ಪನ್‌ನ 9 ಮಂದಿ ಸಹಚರರಾದ ಗೋವಿಂದರಾಜ್, ಆಂಡ್ರಿಲ್, ಪಸುವಣ್ಣ, ಪುಟ್ಟುಸಾಮಿ, ಕಲ್ಮಾಂದಿರಾಮನ್, ಮಾರನ್, ಸೆಲ್ವಂ, ಅಮರ್ತಲಿಂಗಂ ಹಾಗೂ ನಾಗರಾಜ್‌ನನ್ನು ಖುಲಾಸೆಗೊಳಿಸಿದರು.

ಈ ತೀರ್ಪಿನ ವಿರುದ್ಧ ತಮಿಳುನಾಡು ಪೊಲೀಸರು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣವನ್ನು ನ್ಯಾಯಮೂರ್ತಿಗಳಾದ ವೇಲ್ಮುರುಗನ್ ಹಾಗೂ ಎಂ. ಜ್ಯೋತಿರಾಮನ್ ವಿಚಾರಣೆ ನಡೆಸಿದರು. ಎರಡೂ ಕಡೆಯ ವಾದ ಪ್ರತಿವಾದವನ್ನು ಆಲಿಸಿದ ಬಳಿಕ ಪೀಠ ಇಂದು ತೀರ್ಪು ನೀಡಿತು. ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿ ಹಿಡಿಯಿತು. ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪೊಲೀಸರು ಸಾಕಷ್ಟು ಸಾಕ್ಷ್ಯಗಳನ್ನು ಸಲ್ಲಿಸಿಲ್ಲ ಎಂದು ಹೇಳಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ