ಮೈಸೂರಿನ ಗಣ್ಯ ಸಮಾಜ ಸೇವಕಿಯಾಗಿ ಪ್ರೇಮಾ ರವಿಯವರ ಸಮಾಜ ಸೇವೆಯ ಕಾರ್ಯಗಳು ಅನಂತ, ಅನನ್ಯ, ಅಮೋಘ! ಇವರ ಕುರಿತು ಹೆಚ್ಚಿನ ವಿವರ ತಿಳಿಯೋಣವೇ……?

ಬೆಂಗಳೂರಿನ ಚಿಕ್ಕಣ್ಣ ಮತ್ತು ನಂಜಮ್ಮ ದಂಪತಿಯರ ಸುಪುತ್ರಿಯಾಗಿ ಪ್ರೇಮಾ ಜನಿಸಿದರು. ಇವರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಮಾಥ್ಯೂ ಎಂಬ ಗುರುಗಳು ಇವರಿಗೆ ಮಾರ್ಗದರ್ಶಕರಾಗಿದ್ದರು. ಪ್ರೇಮಾ 2023ರಲ್ಲಿ ಪತಿ ರವೀಂದ್ರನಾಥ್‌ ರ ಉದ್ಯೋಗದ ವರ್ಗಾವಣೆಯಿಂದಾಗಿ ಮೈಸೂರಿಗೆ ಬಂದು ನೆಲೆಸಿದರು. ಪ್ರೇಮಾ ರವಿ 2024ರಲ್ಲಿ ಇನ್ನರ್‌ ವೀಲ್ ‌ಕ್ಲಬ್‌ ಆಫ್‌ ಮೈಸೂರು ಗೋಲ್ಡ್ ನ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಮಾಜಸೇವೆಯ ಆರಂಭ

2008ರಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಪ್ರೇಮಾ, 2023ರಲ್ಲಿ ಮೈಸೂರಿನ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ವಿಕಲಚೇತನ ಗಂಡು ಹೆಣ್ಣು ಮಕ್ಕಳಿಗೆ ಆಟೋಟ, ಪೇಂಟಿಂಗ್‌, ಪೇಪರ್‌ ಕಟಿಂಗ್‌ ಇತ್ಯಾದಿ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟು, ಊಟ, ಗಿಫ್ಟ್ ಕೊಟ್ಟು, ಅವರುಗಳು ಸಂತೋಷದಿಂದ ಮನೆಗೆ ತೆರಳುವಂತೆ ನೋಡಿಕೊಂಡರು.

2019ರಲ್ಲಿ ಕೊರೋನಾ ಸಂದರ್ಭದಲ್ಲಿ 15 ಜನ ಸ್ನೇಹಿತರನ್ನು ಉಜಿರೆಯ ಎಸ್‌.ಡಿ.ಎಂ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ 15 ದಿನಗಳ ಕಾಲ ತಂಗುವಂಥ ವ್ಯವಸ್ಥೆ ಮಾಡಿ, ಅವರುಗಳ ಬಿ.ಪಿ, ಶುಗರ್‌, ಥೈರಾಯ್ಡ್, ಅಸಿಡಿಟಿಗಳಿಂದ ಗುಣಮುಖರಾಗಲು ಧಾರಾಳವಾಗಿ ಹಣ ಖರ್ಚು ಮಾಡಿ, ಅವರಿಗೆ ಚಿಕಿತ್ಸೆ ದೊರಕಿಸಿಕೊಟ್ಟರು.

ವೃದ್ಧರ ಸೇವೆ

2020ರಲ್ಲಿ ಮೈಸೂರಿನ ನಜರ್‌ ಬಾದ್‌ ಮೊಹಲ್ಲಾದಲ್ಲಿರುವ ವೃದ್ಧಾಶ್ರಮದ 15 ಮಂದಿಗೆ ವಾಕಿಂಗ್‌ ಸ್ಟಿಕ್‌ ನೀಡಿ ಅವರ ಯೋಗಕ್ಷೇಮ ವಿಚಾರಿಸಿಕೊಂಡರು. ಜೊತೆಗೆ ಕೊರೋನಾ ಸಂದರ್ಭದಲ್ಲಿ ಪ್ರೇಮಾ, ಮಾಸ್ಕ್ ಧರಿಸಿ ಮೈಸೂರಿನ ವಿವಿಧ ಕಡೆ ನೆಲೆಸಿದ್ದ ವೃದ್ಧರಿಗೆ ಊಟ ಮತ್ತು ಮಾತ್ರೆಗಳನ್ನು ನೀಡಿದರು. ವಿದೇಶದಲ್ಲಿ ನೆಲೆಸಿದ್ದರ ಜೊತೆ ಸಂಪರ್ಕ ಸಾಧಿಸಿ, ಕುಟುಂಬದವರೊಡನೆ ಅವರು ಮಾತನಾಡಿ, ಸಂತೋಷಪಡುವೆತೆ ನೋಡಿಕೊಂಡರು.

2021ರಲ್ಲಿ 50 ಮಂದಿ ಮಂಗಳಮುಖಿಯರಿಗೆ 1 ತಿಂಗಳಿಗೆ ಆಗುವಷ್ಟು ಫುಡ್‌ ಕಿಟ್‌ ನೀಡಿದ್ದಾರೆ. ಇದೇ ಸಂದರ್ಭ 50 ಜನ ಮಂಗಳಮುಖಿಯರಿಗೆ ಕೌನ್ಸೆಲಿಂಗ್‌ ನೀಡಿ, ಊಟ ಕೊಟ್ಟಿದ್ದಾರೆ.

ವಿಕಲಚೇತನರ ಸೇವೆ

2022ರಲ್ಲಿ 60 ಮಂದಿ ವಿಕಲಚೇತನ ಮಕ್ಕಳಿಗೆ, ಮಣ್ಣಿನಿಂದ ಆಟಿಕೆ ತಯಾರಿಸಲು, ಸಂಗೀತ, ಆಟೋಟಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಲ್ಲದೆ, ಅವರಿಗೆಲ್ಲ ವೆಲ್ ‌ಕಂ ಡ್ರಿಂಕ್ಸ್, ಮತ್ತು ಸ್ವಾದಿಷ್ಟಭರಿತ ಊಟ ನೀಡಿ, ಗಿಫ್ಟ್ ಕೊಟ್ಟು ಅವರನ್ನು ಸಂತೋಷಪಡಿಸಿದ್ದಾರೆ. ಈ 60 ಮಂದಿ ವಿಕಲಚೇತನ ಮಕ್ಕಳ ತಾಯಂದಿರಿಗೂ ಪುಸ್ತಕಗಳನ್ನು ವಿತರಿಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ 2024ರಲ್ಲಿ `ತಾಯಿಯ ಮಡಿಲು’ ಎಂಬ ಕೊಠಡಿಯನ್ನು ನಿರ್ಮಿಸಿರುವ ಪ್ರೇಮಾ ರವಿ, ತಾಯಂದಿರು ಮಕ್ಕಳಿಗೆ ಹಾಲುಣಿಸಲು ಮತ್ತು ತಾಯಂದಿರು ವಸ್ತ್ರ ಬದಲಾಯಿಸಲು ಈ ಕೊಠಡಿ ಸಹಾಯಕವಾಗಿದೆ.

ಡಾಗ್ಶೋ

2024ರಲ್ಲಿ ಮೈಸೂರಿನ ಸಿದ್ಧಾರ್ಥ ಲೇಔಟ್‌ ನಲ್ಲಿ ಶ್ವಾನಗಳ ಪ್ರದರ್ಶನವನ್ನು ಪ್ರೇಮಾ ರವಿ ಏರ್ಪಡಿಸಿದ್ದರು. ಬೀದಿ ನಾಯಿಗಳನ್ನು ನೋಡಿಕೊಳ್ಳುವವರಿಗೆ ಬೀದಿ ನಾಯಿಗಳ ಲಾಲನೆ ಪಾಲನೆ ಮಾಡುತ್ತಿರುವವರನ್ನು ಹುಡುಕಿ, ಗುರುತಿಸಿ ಅಂತಹ 4 ಮಂದಿಗೆ ಸನ್ಮಾನ ನೀಡಿ, ಧನ ಸಹಾಯ ಮಾಡಿದ್ದಾರೆ. ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ್ದ 75 ಮಂದಿಯ ಊಟೋಪಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಮೈಸೂರಿನ ಜೆ.ಪಿ ನಗರದಲ್ಲಿರುವ 15 ಮಂದಿ ಪೌರ ಕಾರ್ಮಿಕ ಮಹಿಳೆಯರಿಗೆ ಫುಡ್‌ ಕಿಟ್‌ ನೀಡಿ, ಭೇದಭಾವ ಎಣಿಸದೆ ಅವರೊಂದಿಗೆ ಸಹಪಂಕ್ತಿ ಭೋಜನ ಮಾಡಿ ಪೌರ ಕಾರ್ಮಿಕ ಮಹಿಳೆಯರನ್ನು ಸತ್ಕರಿಸಿದ್ದಾರೆ.

31838179-3700-48a4-8b55-b985f0e3e045

ಆಟೋ ಚಾಲಕಿಯರ ಸನ್ಮಾನ

2024ರಲ್ಲಿ ಮಹಿಳಾ ಆಟೋ ಚಾಲಕಿಯೊಬ್ಬರಿಗೆ ಸನ್ಮಾನ ಮಾಡಿ, ಫುಡ್‌ ಕಿಟ್‌ ನೀಡಿದ್ದಾರೆ. ಮೈಸೂರಿನ ಪಾರು ಎಂಬ ಪೌರ ಕಾರ್ಮಿಕ ಮಹಿಳೆಯನ್ನು ವಿದೇಶಿಯೊಬ್ಬರು ಗುರುತಿಸಿ ಸ್ವಿಡ್ಜರ್ಲೆಂಡ್‌ ಗೆ ಕರೆದುಕೊಂಡು ಹೋಗಿ ಸ್ವಚ್ಛತೆ ಪಾಠವನ್ನು ಕಲಿಸಿ, ಪುನಃ ಮೈಸೂರಿಗೆ ಕಲಿಸಿಕೊಟ್ಟಿದ್ದರು. ಆ ಪೌರ ಕಾರ್ಮಿಕ ಮಹಿಳೆಯನ್ನು ಪ್ರೇಮಾ ಗುರುತಿಸಿ, ಅವರಿಗೆ ಫುಡ್‌ ಕಿಟ್‌ ನೀಡಿ ಸನ್ಮಾನಿಸಿದ್ದಾರೆ.

ಎಚ್‌..ವಿ ಪೀಡಿತರ ಸೇವೆ

2025ರ ಜನರಿಯಲ್ಲಿ 35 ಜನ ಎಚ್‌.ಐ.ವಿ ಪೀಡಿತ ಮಹಿಳೆಯರನ್ನು ಗುರುತಿಸಿ, ಅವರುಗಳಿಗೆ ಸೀರೆ ರವಿಕೆ, ಪ್ಯಾಡ್‌ ವಿತರಿಸಿ ಅವರಿಗೆ ಕೌನ್ಸೆಲಿಂಗ್‌ ನೀಡಿದ್ದಾರೆ. ಎಚ್‌.ಐ.ವಿ ಪೀಡಿತ ತಾಯಿ ತಂದೆ ಇಲ್ಲದ 20 ವರ್ಷದ ಹೆಣ್ಣುಮಗಳಿಗೆ ಸೀಮಂತ ಮಾಡಿ ಸೀರೆ ರವಿಕೆ, ಬಳೆ, ಅರಿಶಿನ, ಕುಂಕುಮ, ಹೂ ಇತ್ಯಾದಿ ನೀಡಿ ಆಕೆಗೆ ಮಡಿಲು ತುಂಬಿ ಕಳುಹಿಸಿಕೊಟ್ಟಿದ್ದಾರೆ.

ಬುದ್ಧಿಮಾಂಧ್ಯರ ಸೇವೆ

2024ರಲ್ಲಿ ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ನಿರಾಶ್ರಿತ ಆಶ್ರಮದಲ್ಲಿರುವ 60 ಮಂದಿಗೆ ಊಟೋಪಚಾರದ ಜೊತೆಗೆ ಕಷ್ಟದಲ್ಲಿರುವ ಇಬ್ಬರಿಗೆ ವೀಲ್ ‌ಚೇರ್‌ ವಿತರಿಸಿದ್ದಾರೆ. ಬುದ್ಧಿಮಾಂಧ್ಯರ ಶ್ರೇಯೋಭಿವೃದ್ಧಿಗಾಗಿ ಇರುವ ಚಿಗುರು ಎಂಬ ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ಒಬ್ಬ ವ್ಯಕ್ತಿಗೆ ಒಂದು ಫೋಲ್ಡಿಂಗ್‌ ಮಂಚ ನೀಡಿ, ಅಲ್ಲಿನ ಎಲ್ಲರಿಗೂ ಸ್ವಾದಿಷ್ಟ ಊಟ ವಿತರಿಸಿದರು. ಜೊತೆಗೆ  ಬ್ಯೂಟೀಶನ್‌ ಒಬ್ಬರನ್ನು ಆಶ್ರಮಕ್ಕೆ ಕರೆದುಕೊಂಡು ಹೋಗಿ ಎಲ್ಲಾ ಬುದ್ಧಿಮಾಂಧ್ಯ ಹೆಣ್ಣುಮಕ್ಕಳಿಗೆ ಹೇರ್‌ ಕಟ್‌, ಮೇಕಪ್ ಮಾಡಿಸಿ, ಕೆಲಕಾಲ ಅವರೊಂದಿಗೆ ಸಂತೋಷದಿಂದ ಕಾಲಕಳೆದು ಹಿಂತಿರುಗಿದರು.

2025ರ ಹೊಸ ವರ್ಷಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ಹೆಲ್ತ್ ಅಂಡ್‌ ಹೈಜೀನ್‌ ಸ್ಪೀಚ್‌ ಕೊಟ್ಟು ಅಲ್ಲಿರುವ ಶಾಲೆಯ 400 ಹೆಣ್ಣುಮಕ್ಕಳಿಗೆ ಪ್ಯಾಡ್ಸ್ ಗಳನ್ನು ವಿತರಿಸಿದ್ದಾರೆ.

2024ರ ಅಕ್ಟೋಬರ್‌ ನಲ್ಲಿ ಮೈಸೂರಿನ ಸಿದ್ಧಾರ್ಥ ಲೇಔಟ್‌ ನಲ್ಲಿರುವ ಕೊಡಗು ಮಾಡೆಲ್ ‌ಶಾಲೆಯ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಅಭಿಯಾನ ಮಾಡಿಸಿ, ಅದರ ವಿವರಣೆ ನೀಡಿ, ಅವರಲ್ಲಿ ಅರಿವು ಮೂಡಿಸಿದ್ದಾರೆ.

ಪ್ರೇಮಾರಿಗೆ ಸಂದ ಪ್ರಶಸ್ತಿಗಳು

2019ರಲ್ಲಿ ಮೈಸೂರಿನ ಭಾವೈಕ್ಯ ಬಳಗದವರು ಪ್ರೇಮಾ ರವಿಯವರ ಸಮಾಜ ಸೇವೆಯನ್ನು ಗುರುತಿಸಿ ಅವರಿಗೆ `ಕರುನಾಡ ಸೇವಾ ಚೇತನ’ ಪ್ರಶಸ್ತಿ ನೀಡಿದ್ದಾರೆ.

2024ರಲ್ಲಿ ರೇಡಿಯೋ ಜಾಕಿ ಆರ್‌.ಜೆ. ಅವಿನಾಶ್‌ ಮಹಿಳೆಯರಿಗಾಗಿ ಸ್ಯಾರಿ ಕಾರ್ಯಕ್ರಮವನ್ನು ಮೈಸೂರು ಪುರಭವನದಲ್ಲಿ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಪ್ರೇಮಾ ರವಿಗೆ ಅವರ ಸಾಧನೆಗಾಗಿ ಉನ್ನತ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 2025ರ ಫೆಬ್ರವರಿಯಲ್ಲಿ ಮೈಸೂರಿನ ಹೋಟೆಲೊಂದರಲ್ಲಿ ನಡೆದ ಫ್ಯಾಷನ್‌ ಶೋ ಕಾರ್ಯಕ್ರಮದ ರೂವಾರಿಗಳಾದ ಶೋಭಾರಾಣಿ ಅವರು ಪ್ರೇಮಾ ರವಿಯವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿದ್ದರು. ಕಾರ್ಯಕ್ರಮದಲ್ಲಿ ಪ್ರೇಮಾರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಮಾನವೀಯ ಅಂತಃಕರಣವುಳ್ಳ ಮೈಸೂರಿನ ಹೆಮ್ಮೆಯ ಸುಪುತ್ರಿ, ಸಮಾಜ ಸೇವಕಿ ಪ್ರೇಮಾ ರವಿ ತಮ್ಮ ಉಸಿರು ಇರುವವರೆಗೆ ನಿರ್ಗತಿಕರ ಸೇವೆಗಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇವರಿಂದ ಅನಂತ ಸೇವಾ ಕಾರ್ಯಕ್ರಮ ಹೀಗೆ ನಡೆಯುತ್ತಿರಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.

ಬಿ. ಬಸವರಾಜು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ