ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್​ ರಾಣಾಗೆ (31) ಸುಪ್ರೀಂ ಕೋರ್ಟ್​ ಕೊನೆಗೂ ದಯಾಮರಣಕ್ಕೆ ಒಪ್ಪಿಗೆ ಸೂಚಿಸಿದೆ. ಭಾರತದ ಇತಿಹಾಸದಲ್ಲೇ ದಯಾಮರಣಕ್ಕೆ ತೀರ್ಪು ಕೊಟ್ಟ ಮೊದಲ ಪ್ರಕರಣ ಇದಾಗಿದೆ.

ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ಹರೀಶ್​ ರಾಣಾ ಮಿದುಳಿಗೆ ಗಂಭೀರವಾದ ಪೆಟ್ಟು ಬಿದ್ದಿತ್ತು. ಕಣ್ಣು ತೆರೆದು, ಉಸಿರಾಡುತ್ತಿದ್ದರೂ ಸಹ ತನ್ನ ಸುತ್ತಮುತ್ತ ಏನಾಗುತ್ತಿದೆ ಎಂಬ ಪರಿವೆಯೇ ಇಲ್ಲದಂತಾಗಿತ್ತು. ಕೋಮಾಗೆ ಹೋದ ರಾಣಾ ಬದುಕು ಅಕ್ಷರಶಃ ಜೀವಂತಶವ ಎನ್ನುವಂತಾಯಿತು. ಕಳೆದ 13 ವರ್ಷದಿಂದ ಮಗನನ್ನು ಉಳಿಸಿಕೊಳ್ಳಬಹುದು, ಮುಂಚಿತನಂತೆಯೇ ಅವನೊಂದಿಗೆ ಮಾತನಾಡಬಹುದು ಎಂಬ ಆಸೆಯಲ್ಲಿದ್ದ ಪೋಷಕರ ಭರವಸೆಗಳು ಕಡೆಗೂ ಇಲ್ಲದಂತಾಯಿತು.

ಈ ನಿಟ್ಟಿನಲ್ಲಿ, ಹರೀಶ್​ ಹೆತ್ತವರು ನ್ಯಾಯಾಲಯದ ಮೊರೆ ಹೋಗಿ, ಮಗನಿಗೆ ದಯಾಮರಣ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಬುಧವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್,​ ಅವರ ಮೇಲ್ಮನವಿಯನ್ನು ಪುರಸ್ಕರಿಸಿದೆ. ಈ ಮೂಲಕ ಭಾರತದ ಇತಿಹಾಸದಲ್ಲೇ ದಯಾಮರಣಕ್ಕೆ ತೀರ್ಪು ಕೊಟ್ಟ ಮೊದಲ ಪ್ರಕರಣ ಇದು ಎಂಬ ಪಟ್ಟಿಗೆ ಸೇರಿತು.

ಹರೀಶ್​ ರಾಣಾ ಉತ್ತರ ಪ್ರದೇಶದ ಗಾಜಿಯಾಬಾದ್​ನ ನಿವಾಸಿ. ಬಹಳ ಬುದ್ಧಿವಂತ ಹಾಗೂ ಚೂಟಿಯಾಗಿದ್ದ ರಾಣಾ, ಹೆತ್ತವರಿಗೆ ಮತ್ತು ಸ್ಥಳೀಯರ ಅಚ್ಚುಮೆಚ್ಚಿನ ಹುಡುಗ. 2013ರಲ್ಲಿ ಪಂಜಾಬ್​ನ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್​ ಎಂಜಿನಿಯರ್ ವ್ಯಾಸಂಗ ಮಾಡುತ್ತಿದ್ದ ಹರೀಶ್​, ಅಲ್ಲಿಯೇ ಇದ್ದ ಪಿಜಿಯೊಂದರಲ್ಲಿ ವಾಸ್ತವ್ಯ ಹೂಡಿದ್ದ. ಈ ವೇಳೆ, ಒಂದು ದಿನ ಕಟ್ಟಡದ ನಾಲ್ಕನೇ ಮಹಡಿಯಿಂದ ಹರೀಶ್​ ಆಯಾತಪ್ಪಿ ಕೆಳಗೆ ಬಿದ್ದರು. ತೀವ್ರ ರಕ್ತಸ್ರಾವವಾಗಿ ತಲೆಗೆ ಗಂಭೀರ ಪೆಟ್ಟು ಬಿದ್ದು, ಕೋಮಾಕ್ಕೆ ಜಾರಿದ್ದರು. ಅಂದಿನಿಂದ ಇಂದಿನವರೆಗೂ ದೇಹದಲ್ಲಿ ಉಸಿರಿದ್ದರೂ ಯಾವುದೇ ಚಲನವಲನ ಇಲ್ಲದಿರುವುದು ಪೋಷಕರ ಕಣ್ಣೀರಿಗೆ ಕಾರಣವಾಯಿತು.

ಕುಟುಂಬಸ್ಥರ ಮನವಿಗೆ ಸ್ಪಂದಿಸಿ, ತಮ್ಮಿಂದ ಏನೆಲ್ಲ ಸಾಧ್ಯವೋ, ಅದನ್ನೆಲ್ಲ ಪ್ರಯತ್ನಿಸಿದ ವೈದ್ಯರು ಹರೀಶ್​ನಲ್ಲಿ ಯಾವುದೇ ಚೇತರಿಕೆ  ಕಾಣಲೇ ಇಲ್ಲ. ಆತನಿಗೆ ಆಹಾರವನ್ನು ಫೀಡಿಂಗ್​ ಟ್ಯೂಬ್​ ಮೂಲಕ ನೀಡಲಾಗುತ್ತಿತ್ತು. ರಾಣಾನ ಯಾತನೆ ಕುಟುಂಬಸ್ಥರಿಗೆ ನೋಡಲು ಆಗುತ್ತಿರಲಿಲ್ಲ. ತೀರ ಮನನೊಂದ ರಾಣಾ ಪೋಷಕರು, ಮಗನ ಆರೋಗ್ಯ ಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿಯೇ ಮೊದಲು ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಈ ಮನವಿಗೆ ನ್ಯಾಯಾಲಯ ಒಪ್ಪಿಗೆ ಸೂಚಿಸಲಿಲ್ಲ.

ಅಖಿಲ ಭಾರತ ವಿಜ್ಞಾನ ಸಂಸ್ಥೆ (ಏಮ್ಸ್)​ ವೈದ್ಯಕೀಯ ವರದಿಯಲ್ಲಿ, ರಾಣಾ ಅವರು ವೈದ್ಯರು ನೀಡಿರುವ ಟೆಕ್ನಾಲಜಿ ಆಧಾರಗಳ ಮೇಲೆ ಅವಲಂಬಿತರಾಗದೆ ಇನ್ನೂ ಉಸಿರಾಡುತ್ತಿದ್ದಾರೆ. ಹೀಗಿರುವಾಗ, ಬದುಕುಳಿಯುವ ಸಾಧ್ಯತೆಗಳು ಹೆಚ್ಚಿವೆ ಎಂದು ತಿಳಿಸಿ, ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಇದು ದಯಾಮರಣದ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೋರ್ಟ್​ ಅರ್ಜಿಯನ್ನು ತಿರಸ್ಕರಿಸಿತ್ತು.

ದೆಹಲಿ ಕೋರ್ಟ್​ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ, 2024ರಲ್ಲಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಯಿತು. ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು, ರಾಣಾ ಸ್ಥಿತಿ ಕಳೆದ 13 ವರ್ಷದಿಂದ ಬದಲಾಗಿಲ್ಲ. ಆತನಿಗೆ ಉಸಿರಾಟಕ್ಕೆ ಯಾವುದೇ ಯಂತ್ರದ ಅವಶ್ಯಕತೆ ಇಲ್ಲ. ಆದರೆ, 24 ಗಂಟೆಯೂ ಅವರ ಚೇತರಿಕೆಗೆ ಜನರಿರಬೇಕು. 10 ವರ್ಷಕ್ಕೂ ಹೆಚ್ಚು ಕಾಲ ಈಗಾಗಲೇ ಕಳೆದಿದೆ. ನರವೈಜ್ಞಾನಿಕವಾಗಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ಶಾಶ್ವತ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದಾರೆ ಎಂಬ ವೈದ್ಯಕೀಯ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿತು.

ಈ ತೀರ್ಪು ಅತ್ಯಂತ ದುಃಖಕರವಾದದ್ದು. ಇಂತಹ ನರಕಯಾತನೆಯಲ್ಲಿ ಈ ಹುಡುಗ ಬದುಕುತ್ತಿದ್ದಾನೆ ಎಂಬುದನ್ನು ನೆನಪಿಸಿಕೊಳ್ಳುವುದು ಕಷ್ಟಕರ. ಅಂತಿಮ ನಿರ್ಧಾರ ಕೈಗೊಳ್ಳಬೇಕಾದ ಸಮಯ ಬಂದಿದೆ ಎಂದು ನ್ಯಾಯಾಧೀಶರು ಭಾವುಕರಾದರು. ಮುನ್ನೆಚ್ಚರಿಕಾ ಕ್ರಮಗಳ ಅನ್ವಯ ಚಿಕಿತ್ಸೆ ಹಿಂಪಡೆಯುವ ಬಗ್ಗೆ ವೈದ್ಯಕೀಯ ಮಂಡಳಿ ಸಮರ್ಥ ನಿರ್ಧಾರ ತೆಗೆದುಕೊಳ್ಳಬಹುದು ಎಂದು ತೀರ್ಪು ನೀಡಿತು.

ನ್ಯಾಯಧೀಶರ ಸಂದೇಶ: ನಿಮ್ಮ ಪುತ್ರನಿಂದ ನೀವೆಂದು ದೂರ ಉಳಿಯಲಿಲ್ಲ. ಅಪಘಾತ ಸಂಭವಿಸಿತು ಎಂದು ಆತನ ಕೈಬಿಡಲಿಲ್ಲ. ನೀವು ಹರೀಶ್​ಗೆ ಗೌರವಯುತವಾಗಿ ಈ ಲೋಕವನ್ನು ತೊರೆಯಲು ಪರವಾಗಿ ನಿಂತಿದ್ದೀರಿ. ಇದು ಕರುಣೆ ಮತ್ತು ಧೈರ್ಯಯುತವಾದ ಕೆಲಸ ಎಂದು ಜೆ.ಬಿ. ಪರ್ದಿವಾಲ ಅವರು ಗದ್ಗದಿತರಾದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ