ಪುನೀತ್ ರಾಜ್ ಕುಮಾರ್ ಕನ್ನಡಿಗರ ಆರಾಧ್ಯ ದೈವ, ಪುನೀತ್ ಅವರ ಆದರ್ಶಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ‘ಪುನೀತ್ ನಿವಾಸ’ ಕಟ್ಟಿದ ಬಡ ಅಭಿಮಾನಿಯೊಬ್ಬನ ಕಥೆಯನ್ನು ಹೇಳುವ ಚಿತ್ರ “ಪುನೀತ್ ನಿವಾಸ” ಏಪ್ರಿಲ್ 24ರಂದು ಡಾ|| ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ರಿಲೀಸಾಗುತ್ತಿದೆ.
ಶ್ರೀಪಂಚಮಿ ಸಿನಿ ಕ್ರಿಯೇಷನ್ಸ್ ಮೂಲಕ ಪುನೀತ್ ಅಪ್ಪಟ ಅಭಿಮಾನಿಯೂ ಆದ ಎಸ್.ಮೋಹನ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ರಾಜು ಅವರು ಇಡೀ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಪುನೀತ್ ಅವರ ಅಪ್ಪಟ ಅಭಿಮಾನಿ ಮಲ್ಲು ಅನಾಥ ಹುಡುಗ. ಕಟ್ಟಡ ಕೂಲಿ ಕೆಲಸ ಮಾಡಿಕೊಂಡಿದ್ದ, ಆತ ತನ್ನ ಮಾಲೀಕನ ಮನೆ ಸೇಲ್ ಮಾಡಿಸಿಕೊಡುತ್ತಾನೆ. ಆಗ ಮಾಲೀಕ ನೀಡಿದ 5 ಲಕ್ಷ ಕಮೀಷನ್ ಹಣದಲ್ಲಿ ಕನಸಿನ ಪುನೀತ್ ನಿವಾಸವನ್ನು ನಿರ್ಮಿಸುತ್ತಾನೆ. ನಂತರ ಆ ಪುನೀತ್ ನಿವಾಸದ ಒಳಗೆ ಬಂದಾಗ ಅಲ್ಲಿ ಆತನಿಗೆ ಪುನೀತ್ ಅವರೇ ಕಾಣಿಸ್ತಾರೆ. ಹೇಗೆ ಕಾಣಿಸುತ್ತಾರೆ ಅನ್ನೋದೇ ಚಿತ್ರದ ಕುತೂಹಲ.
ಅಲ್ಲೇ ತಾನೊಂದು ಸಿನಿಮಾ ಮಾಡಬೇಕೆಂದು ಹೊರಟ ಆತ ಸಿನಿಮಾ ಮಾಡಿದನೇ, ಇಲ್ಲವೇ, ಪುನೀತ್ರ ಆದರ್ಶಗಳನ್ನೇ ಪಾಲಿಸಿಕೊಂಡು ಬಂದ ಆತನ ಕನಸು ನನಸಾಯಿತೇ ಇಲ್ಲವೇ ಎಂಬುದನ್ನು ಈ ಚಿತ್ರದಲ್ಲಿ ನಿರ್ದೇಶಕರು ಹೇಳಿದ್ದಾರೆ.
ನಿರ್ಮಾಪಕ ಎಸ್. ಮೋಹನ್ ಕೂಡ ರಾಜ್ಕುಮಾರ್, ಪುನೀತ್ ಅವರ ಆದರ್ಶಗಳಿಂದ ಪ್ರೇರಿತರಾದವರು. ಟೈಟಲ್ ಗಾಗಿಯೇ ಅವರು 50 ಕಥೆಗಳನ್ನು ಮಾಡಿಕೊಂಡಿದ್ದಾರೆ, ಕೊನೆಗೆ ಈ ಕಥೆ ಸೂಕ್ತ ಎಂದು ಫೈನಲ್ ಮಾಡಿದ್ದಾರೆ.
ಪುನೀತ್ ನಿವಾಸದ ಒಳಗೆ ಬಂದಾಗ ಅಲ್ಲಿ ಪುನೀತ್ ಅವರೇ ಕಾಣಿಸುತ್ತಾರೆ.
ಹಣ ಕೂಡಿಟ್ಟುಕೊಂಡಿದ್ದ ಒಬ್ಬ ಬಡ ಹುಡುಗ ಕೊನೆಗೆ ತನ್ನ ಕನಸಿನ ಚಿತ್ರವನ್ನು ಹೇಗೆ ನಿರ್ಮಿಸುತ್ತಾನೆ ಅನ್ನೋದೇ ಕಥಾಹಂದರ, ಈ ಚಿತ್ರಕ್ಕಾಗಿ ಕೆಲವು ದೃಶ್ಯಗಳನ್ನು ಸೆಟ್ ನಲ್ಲೇ ನಾನು, ನಿರ್ದೇಶಕರು ಸೇರಿ ರೆಡಿ ಮಾಡಿಕೊಂಡಿದ್ದೆವು ಎಂದು ನಿರ್ಮಾಪಕ ಮೋಹನ್ ಹೇಳಿಕೊಂಡಿದ್ದಾರೆ,
ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಅಭಿಜಿತ್ ಕಾಣಿಸಿಕೊಂಡಿದ್ದಾರೆ.
ಪುನೀತ್ರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ನಿರ್ಮಾಪಕ ಮೋಹನ್ ಅವರು ಚಿತ್ರೀಕರಣಕ್ಕಾಗಿ ನಿಜವಾದ ಮನೆಯನ್ನೇ ಕಟ್ಟಿಸಿದ್ದಾರೆ.
ಮಲ್ಲು ಪಾತ್ರದಲ್ಲಿ ಮಾಸ್ಟರ್ ವಿಠ್ಠಲ್ ಕಾಣಿಸಿಕೊಂಡಿದ್ದಾರೆ, ಹಿರಿಯನಟ ಶಂಕರ್ ಭಟ್, ಗಂಡಸಿ ಸದಾನಂದಸ್ವಾಮಿ, ಕರಿಸುಬ್ಬು ಶ್ರೇಯಸ್, ಐಶ್ವರ್ಯ, ಎಂ.ಎಸ್. ಉಮೇಶ್, ಡಿಂಗ್ರಿ ನಾಗರಾಜ್, ಟೆನ್ನಿಸ್ ಕೃಷ್ಣ, ರೇಖಾದಾಸ್, ಗಣೇಶ್ರಾವ್ ಕೇಸರಕರ್ ಹಾಗೂ ಇತರರು ಪುನೀತ್ ನಿವಾಸ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಎಸ್, ಬಾಲು ಅವರ ಛಾಯಾಗ್ರಹಣ, ಎಂ.ಎನ್. ಕೃಪಾಕರ್ ಅವರ ಸಂಗೀತ ನಿರ್ದೇಶನ, ಜೆಮ್ ಶಿವು ಅವರ ಸಂಭಾಷಣೆ, ಮುತ್ತುರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ.





