ಡಾ. ಕಿರುಬಾ ಮುನಿಸ್ವಾಮಿ
ಡಾ. ಕಿರುಬಾ ಮುನಿಸ್ವಾಮಿ 1986ರಲ್ಲಿ ತಮಿಳುನಾಡಿನ ಒಂದು ದಲಿತ ಕುಟುಂಬದಲ್ಲಿ ಹುಟ್ಟಿದವರು. ಅನಾದಿ ಕಾಲದಿಂದ ಶೋಷಣೆ ಸಹಿಸುತ್ತಲೇ ಬಾಳಿದ ಸಮಾಜದಲ್ಲಿ ಹುಟ್ಟಿದ ದಲಿತರಿಗೆ ಮಾತ್ರ ಆ ನೋವು ಗೊತ್ತು. ಅದರಲ್ಲೂ ಹೆಣ್ಣಾಗಿ ಹುಟ್ಟಿದರೆ ಆ ಕಷ್ಟಗಳು ಸಾವಿರ ಪಟ್ಟು ಹೆಚ್ಚುತ್ತವೆ.
ಕಿರುಬಾ ಬಾಲ್ಯದಿಂದಲೇ ದಲಿತರ ಜೊತೆ ಉಚ್ಚ ಜಾತಿಯವರು ನಡೆಸುವ ಅನಾದರ ಕಂಡವರು. ದಲಿತ ಸಮಾಜದಲ್ಲಿ ಹೆಣ್ಣಿನ ನೋವನ್ನು ಗುರುತಿಸಿದರು. ಈ ಕಾರಣದಿಂದಲೇ ಈಕೆ ಕಾನೂನಿನ ಕ್ಷೇತ್ರದಲ್ಲಿ ತನ್ನ ಕೆರಿಯರ್ ಕಂಡುಕೊಳ್ಳುತ್ತಾ ಮುನ್ನಡೆದರು. ಆದರೆ ದಲಿತಳಾದ ಒಬ್ಬ ಹೆಣ್ಣು ಇಂಥ ದೊಡ್ಡ ಕನಸು ಕಂಡರೆ ಅದು ಸುಲಭಕ್ಕೆ ನನಸಾದೀತೇ? ಇದಕ್ಕಾಗಿ ಆಕೆ ಅನೇಕ ಸಾಮಾಜಿಕ, ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಯಿತು.
ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಬದ್ಧತೆ
ಈಕೆ ಶಾಲೆಯಿಂದ ಕಾಲೇಜುವರೆಗೆ ಜಾತಿ ಕಿರುಕುಳ ಸಹಿಸಬೇಕಾಯಿತು. ಪ್ರತಿ ಹೆಜ್ಜೆಯಲ್ಲೂ ಸಿಗುತ್ತಿದ್ದ ತಿರಸ್ಕಾರ, ಅಪಮಾನಗಳನ್ನೇ ತನ್ನ ಶಕ್ತಿ ಆಗಿಸಿಕೊಂಡರು. ಇಂದು ಆಕೆ ಮಾನವ ಹಕ್ಕುಗಳ ಒಬ್ಬ ಪ್ರತಿಷ್ಠಿತ ವಕೀಲೆ ಹಾಗೂ ಅಂಬೇಡ್ಕರ್ ವಾದಿ ಕಾರ್ಯಕರ್ತೆ. ಸಾಮಾಜಿಕ ನ್ಯಾಯಕ್ಕಾಗಿ ತನ್ನ ಕಡು ಪ್ರತಿಬದ್ಧತೆಯನ್ನು ವಿಶ್ವಾದ್ಯಂತ ತನ್ನ ಐಡೆಂಟಿಟಿ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಜಾಗತಿಕ ಭೇದಭಾವ ಹಾಗೂ ಲೈಂಗಿಕ ಹಿಂಸೆಯ ವಿರುದ್ಧ ಒಂದು ದೊಡ್ಡ ಹೋರಾಟವನ್ನೇ ನಡೆಸಿಕೊಂಡು ಬಂದಿದ್ದಾರೆ. ಇಂದೂ ಈ ಹೋರಾಟ ಮುಂದುವರಿದಿದೆ.
ಈಕೆ ಭಾರತದ ಸುಪ್ರೀಂ ಕೋರ್ಟಿನಲ್ಲಿ ಒಬ್ಬ ಸ್ವತಂತ್ರ ವಕೀಲೆ. ಈಕೆ ಜಾಗತಿಕ ಶೋಷಣೆ, ಲಿಂಗಾಧಾರಿತ ಹಿಂಸೆ, ಸಾಮಾಜಿಕ ಅನ್ಯಾಯಗಳಂಥ ಪ್ರಕರಣಗಳನ್ನೇ ಮೇಲೆತ್ತಿ ಹಿಡಿದು ಹೋರಾಡುತ್ತಾರೆ.
ಈಕೆ `ಲೀಗಲ್ ಇನಿಶಿಯೇಟಿವ್ ಫಾರ್ ಈಕ್ವಾಲಿಟಿ’ಯ ಸಂಸ್ಥಾಪಕರು ಹಾಗೂ ಕಾರ್ಯಕಾರಿ ನಿರ್ದೇಶಕರು. ಈಕೆಯ ಈ ಸಂಸ್ಥೆ ಹತಾಶರಾದ ಮಂದಿಗೆ ಕಾನೂನಿನ ತೆರವು ನೀಡುವ ಕೆಲಸ ಮಾಡುತ್ತದೆ. ಈಕೆ ಸಹಿತ ವಿಭಿನ್ನ ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಜಾಗತಿಕ ಭೇದಭಾವ ಮತ್ತು ಮಾನವಹಕ್ಕುಗಳಿಗಾಗಿ ಧ್ವನಿಯಾಗಿದ್ದಾರೆ.
ಸಮರ್ಪಣೆ ಮತ್ತು ಸಂಘರ್ಷ
ಈಕೆ `ಆನರ್ ಕಿಲ್ಲಿಂಗ್’ನ ಹೈಪ್ರೊಫೈಲ್ ಪ್ರಕರಣಗಳಲ್ಲಿ ದೋಷಿಗಳಿಗೆ ಶಿಕ್ಷೆ ಕೊಡಿಸಿದ್ದಾರೆ, ಜೊತೆಗೆ ಟ್ರಾನ್ಸ್ ಜೆಂಡರ್ಸ್ ವಿರುದ್ಧ ನಡೆಯುವ ಅಪರಾಧಗಳಲ್ಲಿಯೂ ಸಹ, ಶೋಷಿತರ ಪರ ವಕಾಲತ್ತು ವಹಿಸುತ್ತಾರೆ.
ಈಕೆ 2017ರಲ್ಲಿ ನೆದರ್ ಲ್ಯಾಂಡಿನ ನಿಜ ಮ್ಯಾಗೆಝನ್ ನಲ್ಲಿ ಆಯೋಜಿಸಲಾಗಿದ್ದ ಹ್ಯೂಮನ್ ರೈಟ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೋಗ್ ಇಂಡಿಯಾ ಸಹಿತ ವಿಭಿನ್ನ ಮೀಡಿಯಾ ಔಟ್ ಲೆಟ್ ಗಳಲ್ಲಿ ತನ್ನ ಸಾಹಸಿ ಕಾರ್ಯಗಳಿಗಾಗಿ ಸನ್ಮಾನ ಪಡೆದರು.
ನ್ಯಾಯಸಮಾನತೆಗಾಗಿ ಸಮರ್ಪಣೆ ಹಾಗೂ ಅನ್ಯಾಯದ ವಿರುದ್ಧ ನಿರಂತರ ಸಂಘರ್ಷಕ್ಕಾಗಿಯೇ ಈಕೆಗೆ ಭಾರತ ಮಾತ್ರವಲ್ಲದೆ, ವಿಶ್ವವಿಡೀ ತಮ್ಮ ಐಡೆಂಟಿಟಿ ಸ್ಥಾಪಿಸಿಕೊಂಡರು. ಈಕೆಯನ್ನು ನಾವು ಇಂದಿನ `ಫೀಮೇಲ್ ಅಂಬೇಡ್ಕರ್’ ಎಂದರೆ ಖಂಡಿತಾ ಅದು ಉತ್ಪ್ರೇಕ್ಷೆಯಲ್ಲ! ಈಕೆ ಸಾಮಾಜಿಕ ನ್ಯಾಯಗಳಿಗಾಗಿ ಹೋರಾಡಿದ ಪರಿಯನ್ನು ಕಂಡೇ ಗೃಹಶೋಭಾ ಇವರನ್ನು ಇನ್ ಸ್ಪೈರ್ ಅವಾರ್ಡ್ಸ್ ಗಾಗಿ ಆರಿಸಿತು.
ಸದಾ ಸರ್ವದಾ ಧೈರ್ಯ
ಈಕೆ ಇದುವರೆಗೂ ಮಾಡಿರುವ ಯಾವುದೇ ಕೆಲಸವಿರಲಿ, ಅದನ್ನು ಸಾಧಿಸಲು, ಒಬ್ಬ ಹೆಣ್ಣಿರಲಿ, ಗಂಡಿಗೂ ಸಹ ಎಷ್ಟೋ ಧೈರ್ಯ ಬೇಕಾಗುತ್ತದೆ. ಒಬ್ಬ ಹೆಣ್ಣಾಗಿ ಈಕೆ ಸಾಮಾಜಿಕ ಕುರೀತಿಗಳನ್ನು ಚಾಲೆಂಜ್ ಮಾಡಿರುವ ಪರಿ ಸುಲಭದ ಮಾತಲ್ಲ. ಆನರ್ ಕಿಲ್ಲಿಂಗ್ ನಂಥ ಕೇಸ್ ಬಲು ಖತರ್ ನಾಕ್. ಜನ ಇಂಥ ಕೇಸುಗಳಲ್ಲಿ ತೆಪ್ಪಗಿರುವುದೇ ಲೇಸು ಅಂತಾರೆ. ಆದರೆ ಈಕೆ ಈ ಎಲ್ಲಾ ವಿಷಯ ಬದಿಗೊತ್ತಿ, ಎಷ್ಟೋ ಅಪರಾಧಿಗಳನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ. ಆದಿವಾಸಿ ಮಹಿಳೆಯರ ಜೀವನಮಟ್ಟ ಸುಧಾರಿಸಲು ಇವರು ಪಟ್ಟ ಪ್ರಯಾಸ, ಎಂಥವರಾದರೂ ಮೆಚ್ಚುಂಥದ್ದು!
ಈಕೆ ಇಂದಿನ ಆಧುನಿಕ ಯುವತಿಯರಿಗೆ ಯಾವ ಆದರ್ಶ ನಾರಿಗೂ ಕಡಿಮೆಯಲ್ಲ. ಹೆಂಗಸರು ತಮ್ಮ ಸಂಪೂರ್ಣ ಶಕ್ತಿಯನ್ನು ಬಳಸಿದ್ದೇ ಆದಲ್ಲಿ, ತಮ್ಮನ್ನು ಮಾತ್ರವಲ್ಲದೆ, ಇತರ ಹೆಂಗಸರನ್ನೂ ಉದ್ಧರಿಸಬಲ್ಲರು ಎಂಬುದಕ್ಕೆ ಕಿರುಬಾ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.
– ಶಕೀಲ್





