ಮೆಥನಾಲ್ ಮಿಶ್ರಿತ ನಕಲಿ ಮದ್ಯ ಸೇವಿಸಿ ಕಳೆದ 48 ಗಂಟೆಗಳಲ್ಲಿ 18 ಜನ ಪ್ರಾಣ ಕಳೆದುಕೊಂಡಿದ್ದು, 10ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಹಾರಾಷ್ಟ್ರದ ಪುಣೆ ಮತ್ತು ಪಿಂಪ್ರಿ-ಚಂಚವಾಡದ ಪುಗೇವಾಡಿ ಭಾಗದಲ್ಲಿ ನಡೆದಿದೆ.
ಈ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಪಿಂಪ್ರಿ ಚಿಂಚವಾಡದ ಫುಗೇವಾಡಿ ಮತ್ತು ದಾಪೋಡಿ ಪ್ರದೇಶಗಳಲ್ಲಿ 13 ಮಂದಿ ಮೃತಪಟ್ಟಿದ್ದರೆ, ಪುಣೆಯ ಹಡಪ್ಸರ್ ಮತ್ತು ಕಾಳೇಪದಲ್ ಭಾಗದಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ.
ಯಾವುದೋ ಕಾಯಿಲೆಗಳಿಂದ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಮೊದಲು ಭಾವಿಸಿದ್ದರು. ಆದರೆ, ಮೃತಪಟ್ಟವರೆಲ್ಲರೂ ತೀವ್ರ ತಲೆಸುತ್ತು ಹಾಗೂ ಹೊಟ್ಟೆನೋವಿನಂತಹ ಲಕ್ಷಣಗಳಿಂದ ಮೃತಪಟ್ಟಿದ್ದು, ಇದು ವಿಷಪೂರಿತ ಮದ್ಯ ಸೇವನೆಯಿಂದ ಸಂಭವಿಸಿರುವುದು ಪ್ರಾಥಮಿಕ ಲಕ್ಷಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಎಚ್ಛೆತ್ತ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105 (ಕೊಲೆಗೆ ಸಮಾನವಲ್ಲದ ಅಪರಾಧ ಪ್ರೇರಿತ ನರಹತ್ಯೆ), ಸೆಕ್ಷನ್ 123 (ಅಪರಾಧ ಎಸಗುವ ಉದ್ದೇಶದಿಂದ ಹಾನಿಕಾರ ಪದಾರ್ಥಗಳ ಮೂಲಕ ಗಾಯಗೊಳಿಸುವುದು) ಹಾಗೂ ಮಹಾರಾಷ್ಟ್ರ ಮದ್ಯಪಾನ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಈ ಜಾಲದ ಪ್ರಮುಖ ಆರೋಪಿ , ನಕಲಿ ಮದ್ಯ ಪೂರೈಕೆ ದಂಧೆ ನಡೆಸುತ್ತಿದ್ದ ಯೋಗೇಶ್ ವಾಂಖೇಡೆ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ವಾಂಖೇಡೆ ವಿರುದ್ಧ ಹಿಂದೆಯೂ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಪುಣೆ ನಗರ ಹಾಗೂ ಪಿಂಪ್ರಿ ಚಿಂಚವಡ ಪ್ರದೇಶಗಳಿಗೆ ತಾನೇ ಈ ರಾಸಾಯನಿಕ ಮಿಶ್ರಿತ ಮದ್ಯವನ್ನು ಸರಬರಾಜು ಮಾಡಿರುವುದಾಗಿ ಯೋಗೇಶ್ ವಾಂಖೇಡೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಮದ್ಯಕ್ಕೆ ಅತ್ಯಂತ ವಿಷಕಾರಿಯಾದ ಮೆಥನಾಲ್ ರಾಸಾಯನಿಕ ಬೆರೆಸಿದ್ದೇ ಈ ಸರಣಿ ಸಾವುಗಳಿಗೆ ಕಾರಣ ಎಂದು ರಾಜ್ಯ ಅಬಕಾರಿ ಇಲಾಖೆ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಕಾನಡೆ ತಿಳಿಸಿದ್ದಾರೆ.





