ಅವಳು ಕಲೆ, ವಿದ್ಯಾಭ್ಯಾಸ ಹಾಗೂ ಇತರೆ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಚಟುವಟಿಕೆಯ ಬಾಲೆ. ಸಂತೋಷ ಹಾಗೂ ಸಂತೃಪ್ತಿಯಿಂದ ಕೂಡಿದ ಸಬಲೆ. ಆದರೆ, ಜೀವನದ ಹಾದಿ ಯಾವಾಗಲೂ ಅಂದುಕೊಂಡಂತೆ ಸರಳವಾಗಿರುವುದಿಲ್ಲವಲ್ಲ? ಒಂದು ಸುಂದರ ಸಂದರ್ಭ ನಮಗೆ ದಿನದ ಮಟ್ಟಿಗೆ ಸಂತೋಷ ನೀಡಿದರೆ, ಎದುರಾಗುವ ಕಷ್ಟದ ಪರಿಸ್ಥಿತಿಯು ಇಡೀ ಜೀವಮಾನಕ್ಕೆ ಬೇಕಾಗುವಷ್ಟು ಆತ್ಮಸ್ಥೈರ್ಯವನ್ನು ಮೂಡಿಸುತ್ತದೆ ಎನ್ನುವುದಕ್ಕೆ ಈಕೆಯ ಜೀವನವೇ ಸಾಕ್ಷಿ.

​ವೇದಿಕೆಯ ಮೇಲೊಂದು ಆಘಾತನಡೆದದ್ದು ಇಡೀ ಜೀವನವನ್ನೇ ಬದಲಿಸಿತು, ​ಪದವಿ ವ್ಯಾಸಂಗ ಮಾಡುತ್ತಿದ್ದ ಆಕೆಗೆ ಅಂದು ನೃತ್ಯ ವೇದಿಕೆಯ ಬಳಿ ಕಾದಿತ್ತು ದೊಡ್ಡದೊಂದು ಆಘಾತ. ಅವಳ ಕಲಾ ಪ್ರದರ್ಶನವನ್ನು ನೋಡಬೇಕಾಗಿದ್ದ ತಾಯಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಯಿತು. ಅಲ್ಲಿಯವರೆಗೆ ನೆಮ್ಮದಿಯಾಗಿದ್ದ ಆ ಪುಟ್ಟ ಸಂಸಾರಕ್ಕೆ ಸಿಡಿಲು ಬಡಿದಂತಾಯಿತು. ಇಂದಿನ ಡಿಜಿಟಲ್ ಜಗತ್ತಿನ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರವಾಗಲಿ, ಹಣದ ಸಕಾಲಿಕ ವಹಿವಾಟಾಗಲಿ ತಿಳಿಯದ ಆ ಮುಗ್ಧ ಹೆಣ್ಣುಮಗಳಿಗೆ, ತಾಯಿಯನ್ನು ತಕ್ಷಣವೇ ಉಳಿಸಿಕೊಳ್ಳುವ ಮತ್ತು ಆಸ್ಪತ್ರೆಯ ದುಬಾರಿ ಖರ್ಚುಗಳನ್ನು ನಿಭಾಯಿಸುವ ಧೈರ್ಯವೇ ಇಲ್ಲದಂತಾಯಿತು.

​ಆದರೆ, ಕಷ್ಟಗಳು ಮನುಷ್ಯನನ್ನು ಕುಗ್ಗಿಸುವುದಿಲ್ಲ, ಬದಲಾಗಿ ಮತ್ತೊಂದು ರೂಪದಲ್ಲಿ ಜಾಗೃತಗೊಳಿಸುತ್ತವೆ. ಆಕೆಯಲ್ಲೂ ಬದಲಾವಣೆಯ ಹೊಸ ಚಿಲುಮೆ ಆರಂಭವಾಯಿತು.

​ಕಷ್ಟಗಳ ನಡುವೆ ಅರಳಿದ ಧೈರ್ಯ

​ತನ್ನ ವಿದ್ಯಾಭ್ಯಾಸದ ಜೊತೆಜೊತೆಗೇ ತಾಯಿಯ ವೈದ್ಯಕೀಯ ವೆಚ್ಚಕ್ಕಾಗಿ ಆಕೆ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಲು ಮುಂದಾದಳು. ಪಾಂಪ್ಲೆಟ್‌ಗಳನ್ನು ಹಂಚುವುದು, ವಿಶೇಷ ಸುದ್ದಿ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವುದು, ಡೇಟಾ ಕಲೆಕ್ಷನ್ ಮಾಡುವುದು, ಪರೀಕ್ಷಾ ಕೇಂದ್ರಗಳಲ್ಲಿ ದಿನಗೂಲಿ ಕೆಲಸ ಮಾಡುವುದು ಹೀಗೆ ಸಿಕ್ಕ ಯಾವುದೇ ಕೆಲಸವನ್ನು ಆಕೆ ಮುಜುಗರವಿಲ್ಲದೆ ಸ್ವೀಕರಿಸಿದಳು.

IMG-20260604-WA0071

​ಅಲ್ಲಿಯವರೆಗೆ ದಿನದ ಖರ್ಚಿಗೆ 50 ಅಥವಾ 100 ರೂಪಾಯಿ ಸಿಕ್ಕರೆ ಸಾಕೆಂದು ತಿನ್ನಲು ಹಂಬಲಿಸುತ್ತಿದ್ದ ಆ ಬಾಲ್ಯದ ಮನಸ್ಸು, ಈಗ ಜವಾಬ್ದಾರಿಯ ಭಾರವನ್ನು ಅರಿತಿತ್ತು. ಹಣವನ್ನು ಸಂಗ್ರಹಿಸುವ, ತಂದೆ-ತಾಯಿಯ ಆರೋಗ್ಯವನ್ನು ಕಾಪಾಡುವ ವಿಶ್ವಾಸ ಅವಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯಿತು.

​ಆಸ್ಪತ್ರೆಯ ಆ ದಿನಗಳು ಆ ಕುಟುಂಬದ ನಿಜವಾದ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಮಾಡಿದ್ದವು. ಅಲ್ಲಿಯವರೆಗೆ ಆಸ್ಪತ್ರೆಯ ಮುಖವನ್ನೇ ನೋಡದ, ತನ್ನ ಪುಟ್ಟ ತಮ್ಮ ಶಾಲನ್ನು ಒದ್ದು ಮೂಲೆಯಲ್ಲಿ ಕುಳಿತಿದ್ದರೆ, ಕಾಯಿಲೆಯನ್ನೇ ಕಾಣದ ಧೈರ್ಯವಂತ ತಾಯಿ ಇಂದು ಐಸಿಯು ಕೊಠಡಿಯ ಎಸಿ ಗಾಳಿಯ ನಡುವೆ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಳು. ಇತ್ತ ಹೊರಗಡೆ, ಅದೆಷ್ಟೇ ಗಟ್ಟಿ ಮನಸ್ಸು ಹೊಂದಿದ್ದ ಪುರುಷ, ಆಕೆಯ ತಂದೆ ಮಲ್ಲಪ್ಪನವರು, ಕುಟುಂಬದ ಪರಿಸ್ಥಿತಿಗೆ ಕರಗಿ ಮಗುವಿನಂತೆ ಕಣ್ಣೀರು ಹಾಕುತ್ತಾ ಕುಳಿತಿದ್ದರು. ಇಂತಹ ಸಂದರ್ಭದಲ್ಲಿ ಆ ಹೆಣ್ಣುಮಗಳು ಇಡೀ ಕುಟುಂಬಕ್ಕೆ ಆಸರೆಯಾಗಿ ನಿಂತಳು.

​ಪೋಷಕರೇ, ಓದುಗ ಮಿತ್ರರೇ ಗಮನಿಸಿ…

​ಈ ಘಟನೆಯನ್ನು ಇಲ್ಲಿ ಹಂಚಿಕೊಳ್ಳಲು ಒಂದು ಬಲವಾದ ಕಾರಣವಿದೆ. ಇಂದು ನಾವು ಮಕ್ಕಳಿಗೆ ಕೇವಲ ಅಂಕಗಳ ಆಧಾರಿತ ವಿದ್ಯಾಭ್ಯಾಸವನ್ನು ಮಾತ್ರ ನೀಡುತ್ತಿದ್ದೇವೆ. ಆದರೆ ನೆನಪಿರಲಿ, ಜೀವನವೆಂಬುದು ಕೇವಲ ಪರೀಕ್ಷೆಯ ಅಂಕಪಟ್ಟಿ ಅಲ್ಲ, ಅದೊಂದು ವಿಶಾಲವಾದ ಸಮುದ್ರ.

​ಇಲ್ಲಿ ನಾವು ಕಲಿಯಬೇಕಾದ ಮತ್ತು ಕಲಿಸಬೇಕಾದ ಪಾಠಗಳು ಸಾಕಷ್ಟಿವೆ:

​ಸಮಯಕ್ಕೆ ಆದ್ಯತೆ ನೀಡಿ: ನಿಮ್ಮ ಮಕ್ಕಳಿಗೆ ಇತರೆ ಅನಗತ್ಯ ವಿಷಯಗಳಿಗಿಂತ, ಪೋಷಕರೊಂದಿಗೆ ಕಳೆಯುವ ಅಮೂಲ್ಯ ಸಮಯದ ಮಹತ್ವವನ್ನು ತಿಳಿಸಿಕೊಡಿ.

​ಹಣಕಾಸಿನ ಸ್ವಾತಂತ್ರ್ಯ ನೀಡಿ: ಬೇರೆಯವರಿಗಾಗಿ ಅಲ್ಲದಿದ್ದರೂ, ಸ್ವಂತ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮತ್ತು ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಹಣವನ್ನು ಸೂಕ್ತ ರೀತಿಯಲ್ಲಿ ಹೇಗೆ ಉಳಿಸಬೇಕು, ಹೇಗೆ ಬಳಸಬೇಕು ಎಂಬುದರ ಪ್ರಾಯೋಗಿಕ ಜ್ಞಾನ ಮತ್ತು ಸ್ವಾತಂತ್ರ್ಯವನ್ನು ಮಕ್ಕಳಿಗೆ (ವಿಶೇಷವಾಗಿ ಹೆಣ್ಣುಮಕ್ಕಳಿಗೆ) ಚಿಕ್ಕ ವಯಸ್ಸಿನಿಂದಲೇ ಕಲಿಸಿ.

​ಕಷ್ಟಗಳನ್ನು ಎದುರಿಸಲು ಕಲಿಸಿ: “ನಮಗಿದ್ದ ಕಷ್ಟ ನಮ್ಮ ಮಕ್ಕಳಿಗೆ ಬಾರದಿರಲಿ” ಎಂದು ಅವರನ್ನು ಅತಿಯಾದ ಮುದ್ದಿನಿಂದ ಬೆಳೆಸಬೇಡಿ. ಬದಲಾಗಿ, ಜೀವನದಲ್ಲಿ ಕಷ್ಟಗಳು ಎದುರಾದಾಗ ಧೃತಿಗೆಡದೆ ಅದನ್ನು ಹೇಗೆ ಎದುರಿಸಬೇಕೆಂಬ ಮಾನಸಿಕ ಸ್ಥೈರ್ಯವನ್ನು ತುಂಬಿ.

ಸಮಾಜದ ಹೇಳಿಕೆಗೆ ಮತ್ತು ದೈಹಿಕ ರಚನೆಗೆ ಮಾತ್ರ ಹೆಣ್ಣು-ಗಂಡು ಎಂಬ ವ್ಯತ್ಯಾಸವಿದೆಯೇ ಹೊರತು, ಜೀವ ಮತ್ತು ಜೀವನದ ಹೋರಾಟಕ್ಕೆ ಯಾವುದೇ ಲಿಂಗಭೇದವಿಲ್ಲ. ಕಷ್ಟದ ಪರಿಸ್ಥಿತಿಯಲ್ಲಿ ಇಬ್ಬರ ನೋವೂ ಒಂದೇ ಆಗಿರುತ್ತದೆ. ಎಂದಾದರೂ ಜೀವನದಲ್ಲಿ ಸೋತಿದ್ದೇವೆ ಎನಿಸಿದಾಗ, ಒಂದೊಮ್ಮೆ ನಿಮ್ಮ ಹಳೆಯ ದಿನಗಳನ್ನು ತಿರುಗಿ ನೋಡಿ. ನೀವು ದಾಟಿ ಬಂದ ಸವಾಲುಗಳೇ ಮುಂದೆ ಗೆಲ್ಲಲು ನಿಮಗೆ ದಾರಿದೀಪವಾಗುತ್ತವೆ.

ಭಾರ್ಗವಿ, ಜಿ, ಆರ್

ಪತ್ರಿಕೋದ್ಯಮ ವಿದ್ಯಾರ್ಥಿ

ಕುವೆಂಪು ವಿವಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ