– ರಾಘವೇಂದ್ರ ಅಡಿಗ ಎಚ್ಚೆನ್.

‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೂ ಮುನ್ನವೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದೆ. ಈ ಬಾರಿ ಕಾರ್ಯಕ್ರಮದ ಪ್ರಮುಖ ವಿಶೇಷತೆ ಎಂದರೆ, ಕೇವಲ ಸೆಲೆಬ್ರಿಟಿಗಳಷ್ಟೇ ಅಲ್ಲದೆ ಸಾಮಾನ್ಯ ಜನರಿಗೂ ಸ್ಪರ್ಧಿಸುವ ಅವಕಾಶ ಕಲ್ಪಿಸಲಾಗಿದೆ.

ಪ್ರತಿ ಸೀಸನ್‌ನಲ್ಲೂ ಹೊಸತನದೊಂದಿಗೆ ಬರುವ ‘ಬಿಗ್ ಬಾಸ್ ಕನ್ನಡ’, ಈ ಬಾರಿ ಜನಸಾಮಾನ್ಯರ ಕನಸಿಗೆ ವೇದಿಕೆ ಕಲ್ಪಿಸಲು ಮುಂದಾಗಿದೆ. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಬಯಸುವವರಿಗೆ ಆಡಿಷನ್ ಮೂಲಕ ಮನೆ ಪ್ರವೇಶಿಸುವ ಅವಕಾಶ ನೀಡಲಾಗುತ್ತಿದೆ.

‘ಕೈ ತಟ್ಟಿ ಹುರಿದುಂಬಿಸಿದ್ದು ಸಾಕು, ತೊಡೆ ತಟ್ಟಿ ಅಖಾಡಕ್ಕೆ ಇಳಿಯಲು ಸಿದ್ಧವೇ?’ ಎಂಬ ಸಂದೇಶದೊಂದಿಗೆ ‘ಕಲರ್ಸ್ ಕನ್ನಡ’ ವಾಹಿನಿ ಹೊಸ ಪ್ರೋಮೋ ಬಿಡುಗಡೆ ಮಾಡಿದೆ. ಪ್ರೋಮೋದಲ್ಲಿ ಸಾಮಾನ್ಯ ಜನರನ್ನು ನೇರವಾಗಿ ಆಹ್ವಾನಿಸಲಾಗಿದ್ದು, ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಕನಸು ನನಸಾಗುವ ಸಾಧ್ಯತೆ ಹೆಚ್ಚಿದೆ.

ಆಸಕ್ತರು ತಮ್ಮ ಪ್ರತಿಭೆಯನ್ನು ಪರಿಚಯಿಸುವ ಮೂರು ನಿಮಿಷಗಳ ವಿಡಿಯೋವನ್ನು ಅಪ್ಲೋಡ್ ಮಾಡಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಯಶಸ್ವಿಯಾದವರಿಗೆ ‘ಬಿಗ್ ಬಾಸ್ ಕನ್ನಡ 13’ರಲ್ಲಿ ಸ್ಪರ್ಧಿಸುವ ಅವಕಾಶ ದೊರೆಯಲಿದೆ.

ಈವರೆಗೆ 12 ಯಶಸ್ವಿ ಸೀಸನ್‌ಗಳನ್ನು ಪೂರೈಸಿರುವ ‘ಬಿಗ್ ಬಾಸ್ ಕನ್ನಡ’ ಇದೀಗ ಮತ್ತೊಂದು ಹೊಸ ಅಧ್ಯಾಯಕ್ಕೆ ಸಜ್ಜಾಗಿದೆ. ಈ ಬಾರಿ ಕೂಡ ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಮುಂದುವರಿಯಲಿದ್ದು, ಹೊಸ ಸ್ಪರ್ಧಿಗಳು ಮತ್ತು ಹೊಸ ಟಾಸ್ಕ್‌ಗಳೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ