ವೆಂಕಟೇಶ ಚವ್ಹಾಣ್
*ದಾಂಪತ್ಯ ಎಂದರೆ ಫೋಟೋಗಳಲ್ಲಿ ನಗುವ ಎರಡು ಮುಖಗಳ ಕಥೆಯಲ್ಲ. ಅದು ಒಂದೇ ಮನೆಯೊಳಗೆ ಸಾವಿರ ಬಾರಿ ಮುರಿದುಕೊಂಡರೂ, ಹೊರಗಿನವರಿಗೆ ಗೊತ್ತಾಗದಂತೆ ಮತ್ತೆ ಮತ್ತೆ ಜೋಡಿಸಿಕೊಳ್ಳುವ ಎರಡು ಜೀವಗಳ ಕಥೆ.*
ಗಂಡ–ಹೆಂಡತಿಯ ನಡುವೆ ಪ್ರೀತಿ ಮಾತ್ರ ಇರುವುದಿಲ್ಲ. ಕೋಪ ಇರುತ್ತದೆ. ಅಹಂಕಾರ ಇರುತ್ತದೆ. ಬೇಸರ ಇರುತ್ತದೆ. ದಿನಗಟ್ಟಲೆ ಮಾತಾಡದ ಮೌನ ಇರುತ್ತದೆ. “ಇವನು ಬದಲಾಗಲ್ಲ” ಎನ್ನುವ ಹೆಂಡತಿಯ ನೋವು ಇರುತ್ತದೆ. “ಇವಳು ನನ್ನನ್ನು ಅರ್ಥಮಾಡಿಕೊಳ್ಳಲ್ಲ” ಎನ್ನುವ ಗಂಡನ ಒಳತಾಪ ಇರುತ್ತದೆ.
ಆದರೂ ವಿಚಿತ್ರ ನೋಡಿ…
ಅದೇ ಹೆಂಡತಿ ಗಂಡ ತಡವಾಗಿ ಮನೆಗೆ ಬಂದರೆ ಬಾಗಿಲು ತೆರೆದ ಶಬ್ದಕ್ಕೆ ಎಚ್ಚರವಾಗುತ್ತಾಳೆ. ಅದೇ ಗಂಡ ಹೆಂಡತಿ ಊಟ ಮಾಡಿಲ್ಲವೆಂದು ತಿಳಿದರೆ, ಕೋಪದಲ್ಲಿದ್ದರೂ ತಟ್ಟೆ ಮುಂದೆ ಇಡುತ್ತಾನೆ.

ಇದನ್ನೇ ದಾಂಪತ್ಯ ಎನ್ನುತ್ತಾರೆ.
ಮಕ್ಕಳು ಚಿಕ್ಕವರಿದ್ದಾಗ ಮನೆ ತುಂಬಿರುತ್ತದೆ. ಅವರ ಓದು, ಮದುವೆ, ಕೆಲಸ, ಮಕ್ಕಳು ಎಲ್ಲದರಲ್ಲೂ ತಂದೆ-ತಾಯಿ ಕರಗಿಹೋಗುತ್ತಾರೆ. ಆದರೆ ಒಂದು ದಿನ ಮಕ್ಕಳು ತಮ್ಮ ತಮ್ಮ ಜೀವನದಲ್ಲಿ ಮುಂದಕ್ಕೆ ಹೋಗುತ್ತಾರೆ. ಮನೆ ನಿಧಾನವಾಗಿ ಖಾಲಿಯಾಗುತ್ತದೆ.
ಆಗ ಉಳಿಯುವುದು ಇಬ್ಬರೇ.
*ಅದೇ ಗೊರಕೆ, ಒಮ್ಮೆ ಕಿರಿಕಿರಿ ಆಗಿದ್ದದ್ದು, ಒಂದು ದಿನ ಕೇಳಿಸದೆ ಹೋದರೆ ಕಣ್ಣೀರು ಬರುತ್ತದೆ. ಅದೇ “ಬೇಡ ಅಷ್ಟು ಮಾತನಾಡಬೇಡ” ಎಂದು ಗದರಿಸಿದ್ದ ಧ್ವನಿ, ಒಂದು ದಿನ ಶಾಶ್ವತವಾಗಿ ನಿಂತುಹೋದರೆ, ಮನೆಯ ಗೋಡೆಗಳೇ ಖಾಲಿ ಎನಿಸುತ್ತವೆ.*
ಅಗಲಿದ ನಂತರ ಯಾರೋ ಬಂದು ಸಾಂತ್ವನ ಹೇಳುತ್ತಾರೆ. ಆದರೆ ರಾತ್ರಿ ಹಾಸಿಗೆಯ ಖಾಲಿ ಜಾಗವನ್ನು ಯಾರೂ ತುಂಬಲಾರರು. ಔಷಧಿ ಕೊಡುವ ಕೈಯನ್ನು, “ಊಟ ಆಯ್ತಾ?” ಎಂದು ಕೇಳುವ ಧ್ವನಿಯನ್ನು, ಕೋಪದಲ್ಲೂ ಕಾಳಜಿ ಮರೆಮಾಡಿದ ಆ ಕಣ್ಣುಗಳನ್ನು ಯಾರೂ ಮರಳಿ ತರಲಾರರು.

ಆದ್ದರಿಂದ ನೆನಪಿರಲಿ…
ಅತ್ಯುತ್ತಮ ಜೋಡಿ ಎನ್ನುವುದು ಜಗಳವಿಲ್ಲದ ಜೋಡಿ ಅಲ್ಲ.
ಜಗಳದ ನಂತರವೂ ಒಬ್ಬರನ್ನೊಬ್ಬರು ಬಿಟ್ಟು ಹೋಗದ ಜೋಡಿ.
ದಾಂಪತ್ಯದಲ್ಲಿ ಪ್ರೀತಿಗಿಂತ ದೊಡ್ಡದು ಹೊಂದಾಣಿಕೆ.
ಹೊಂದಾಣಿಕೆಗೆಿಂತ ದೊಡ್ಡದು ಸಹನೆ.
ಸಹನೆಗಿಂತ ದೊಡ್ಡದು… ಕೊನೆಯವರೆಗೂ ಜೊತೆಗಿರುವ ಮನಸ್ಸು.
*ಚೇಷ್ಟೆ, ನಾಚಿಕೆ, ಜಗಳ, ಮೌನ, ಕಷ್ಟ, ಸುಖ, ಕಣ್ಣೀರು, ನಗು, ಹೊಂದಾಣಿಕೆ ಇವೆಲ್ಲವೂ ಸೇರಿ ದಾಂಪತ್ಯವನ್ನು ಪವಿತ್ರವಾಗಿಸುತ್ತವೆ.*
*ಬದುಕಿರುವಾಗಲೇ ಸಂಗಾತಿಯ ಬೆಲೆ ಅರಿಯಿರಿ. ಏಕೆಂದರೆ ಸತ್ತ ಮೇಲೆ ಅಳುವ ಕಣ್ಣೀರಿಗಿಂತ, ಬದುಕಿರುವಾಗ ಕೊಡುವ ಗೌರವವೇ ಪವಿತ್ರ.*
ನೆನಪಿರಲಿ…
*ಜೀವನದಲ್ಲಿ ಪರಿಪೂರ್ಣ ಸಂಗಾತಿ ಸಿಗುವುದಿಲ್ಲ. ಆದರೆ ಅಪರಿಪೂರ್ಣತೆಯನ್ನು ಒಪ್ಪಿಕೊಂಡು ಕೊನೆಯವರೆಗೂ ಜೊತೆಗಿರುವ ಸಂಗಾತಿಗಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ.*





