ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ ಅವರ ಗೆಳೆಯ, ಉದ್ಯಮಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಟಿಗೆ ಸೇರಿದ ಎಲಿಗೆಂಟ್ ಅಪಾರ್ಟ್ಮೆಂಟ್ನಲ್ಲೇ ವೈಶಾಕ್ ನೇಣಿಗೆ ಶರಣಾಗಿದ್ದಾನೆ. ಕೃಷಿ ತಾಪಂಡ ಮನೆಯಲ್ಲಿ ಇಲ್ಲದ ವೇಳೆ, ಕಳೆದ ರಾತ್ರಿ ಸುಮಾರು 8.30ರ ವೇಳೆಗೆ ನೇಣು ಹಾಕಿಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಳೆದ 20 ದಿನಗಳಿಂದ ಕೃಷಿ ತಾಪಂಡ ಅವರ ಫ್ಲಾಟ್ನಲ್ಲೇ ಇದ್ದ ವೈಶಾಕ್, ಇದೇ ಫ್ಲಾಟ್ನಿಂದ ನಿತ್ಯ ಕೆಲಸಕ್ಕೆ ಹೋಗಿ ಬರುತ್ತಿದ್ದ ಎನ್ನಲಾಗಿದೆ. ಗ್ಯಾರೇಜ್ ಹಾಗೂ ಹಾರ್ಡ್ವೇರ್ ಇಟ್ಟುಕೊಂಡಿದ್ದ ವೈಶಾಕ್, ಕೃಷಿ ತಾಪಂಡಗೆ ಅತ್ಯಂತ ಆತ್ಮೀಯ ಗೆಳೆಯನಾಗಿದ್ದ.
ಕಳೆದ 17 ವರ್ಷಗಳ ಹಿಂದೆ ಮದುವೆಯಾಗಿದ್ದ ವೈಶಾಕ್ಗೆ 15 ವರ್ಷದ ಮಗ ಕೂಡಾ ಇದ್ದಾನೆ. ಆದರೆ ಹೆಂಡತಿಯಿಂದ ದೂರವಿದ್ದ ವೈಶಾಕ್, ಕೃಷಿ ಜೊತೆಯೇ ಜೀವನದ ಕನಸು ಕಂಡಿದ್ದ. ಅದೇ ರೀತಿ ನಟಿ ಕೃಷಿ ತಾಪಂಡ ಸಹ ವೈಶಾಕ್ ಜೊತೆ ಆತ್ಮೀಯವಾಗಿದ್ದರು.
ಕಳೆದ ಮೂರು ದಿನಗಳ ಹಿಂದೆ ನೆಲಮಂಗಲದ ಕ್ಷೇಮವನಕ್ಕೆ ಹೋಗಿದ್ದ ಕೃಷಿ ತಾಪಂಡಗೆ ನಿನ್ನೆ ಸಂಜೆ ಕೊನೆಯ ಮೆಸೇಜ್ ಮಾಡಿದ್ದ ವೈಶಾಕ್, ನನಗೆ ಜೀವನದಲ್ಲಿ ನೆಮ್ಮದಿ ಇಲ್ಲ, ನಾನು ಬದುಕುವುದಿಲ್ಲ ಎಂದು ಮೆಸೇಜ್ ಮಾಡಿದ್ದ. ವೈಶಾಕ್ನನ್ನು ಸಮಾಧಾನ ಮಾಡಿದ್ದ ಕೃಷಿ ತಾಪಂಡ, ದುಡುಕಬೇಡ ಎಲ್ಲವೂ ಸರಿಹೋಗುತ್ತೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿಬರೋಣ. ಒಳ್ಳೆಯದಾಗುತ್ತೆ ಎಂದು ಮರು ಮೆಸೇಜ್ ಮಾಡಿದ್ದರು. ಆದರೆ, ಅದಾಗಿ ಕೆಲವೇ ಹೊತ್ತಲ್ಲಿ ವೈಶಾಕ್ ಸಾವಿಗೆ ಶರಣಾಗಿದ್ದ. ಅದಕ್ಕೂ ಮುನ್ನ ಗಾಬರಿಗೊಂಡಿದ್ದ ಕೃಷಿ ತಾಪಂಡ, ವೈಶಾಕ್ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ಕೃಷಿ ತಾಪಂಡ ಕಳೆದ ರಾತ್ರಿ 11 ಗಂಟೆಗೆ ಫ್ಲಾಟ್ಗೆ ವಾಪಾಸ್ಸಾದಾಗ, ವೈಶಾಕ್ ಸಾವಿನ ವಿಷಯ ಬೆಳಕಿಗೆ ಬಂದಿದೆ. ವೈಶಾಕ್ನನ್ನು ಉಳಿಸಲು ಕೊನೆ ಕ್ಷಣದಲ್ಲೂ ಮಾಡಿದ ಎಲ್ಲಾ ಪ್ರಯತ್ನ ವಿಫಲವಾಗಿದೆ.
ಕೃಷಿ ತಾಪಂಡ ಕಣ್ಣೀರು: ನೇಣಿಗೆ ಕೊರಳೊಡ್ಡಿದ್ದ ವೈಶಾಕ್ನ ಮೃತದೇಹವನ್ನು ಇಂದು ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಚಾಮರಾಜಪೇಟೆಯ ಟಿ ಆರ್ ಮಿಲ್ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು. ಈ ವೇಳೆ ವೈಶಾಕ್ನ ಅಂತಿಮ ದರ್ಶನ ಪಡೆಯಲು ಓಡೋಡಿ ಬಂದ ನಟಿ ಕೃಷಿ ತಾಪಂಡಾಗೆ ವೈಶಾಕ್ ಮಾವ ಅಡ್ಡಿಪಡಿಸಿದರು. ನೀವಿಲ್ಲಿ ಬರುವ ಅವಶ್ಯಕತೆ ಇಲ್ಲ. ಅವನನ್ನು ನೋಡಲೇಬೇಡಿ ಹೊರಟುಹೋಗಿ ಎಂದು ಗದರಿದರು. ಕೃಷಿ ತಾಪಂಡ ಕಣ್ಣೀರು ಹಾಕುತ್ತಲೇ ಕಾರಿನಲ್ಲಿ ಕುಳಿತು ಬಿಕ್ಕಿಬಿಕ್ಕಿ ಅತ್ತರು.





