ಸಂಜನಾ ಆನಂದ್
ಕನ್ನಡದ ಅಪ್ಪಟ ಪ್ರತಿಭೆ ಸಂಜನಾ ಆನಂದ್, ತೆಲುಗು ಚಿತ್ರರಂಗದಲ್ಲೂ ಮಿಂಚುತ್ತಾ, ಸ್ಯಾಂಡಲ್ ವುಡ್ ನಲ್ಲಿ ತಾನು ಬೆಳೆದು ಬಂದ ಬಗೆಯನ್ನು ವಿವರಿಸಿದ್ದು ಹೀಗೆ…..!
ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಬ್ಯುಸಿ ಆಗಿರುವ ನಾಯಕಿ ಅಂದ್ರೆ ಅದು ಸಂಜನಾ ಆನಂದ್. ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಹುಟ್ಟಿಸಿದ ನಾಯಕಿಯರಲ್ಲಿ ಇವರೂ ಒಬ್ಬರು. ಇವರ ಅಂದಕ್ಕೆ ಸಿನಿರಸಿಕರು ಫಿದಾ ಆಗಿರೋದು ನಿಜ. ಮೂಲತಃ ಕೊಡಗಿನವರಾದರೂ ಹುಟ್ಟಿದ್ದು ಬೆಳೆದಿದ್ದು ಬೆಂಗಳೂರು. ಪೋಷಕರ ಆಸೆಯಂತೆ ಕಂಪ್ಯೂಟರ್ ಸೈನ್ಸ್ ಮುಗಿಸಿಕೊಂಡು ಪ್ರತಿಷ್ಠಿತ ಡೆಲ್ ಕಂಪನಿಯಲ್ಲಿ ಸುಮಾರು 2 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. 2019ರಲ್ಲಿ `ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪ್ರವೇಶಿಸಿದರು.
ಮೊದಲ ಚಿತ್ರ
ಭರತನಾಟ್ಯ ಕಲಾವಿದೆಯೂ ಆಗಿದ್ದ ಈಕೆಗೆ ಆಕಸ್ಮಿಕವೆಂಬಂತೆ `ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದಲ್ಲಿ ಅವಕಾಶ ಸಿಕ್ಕಿತು. ನಂತರ ಪೂರ್ಣವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಬೇಕೆಂದು ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ಸದ್ಯ ಕನ್ನಡದ ಬೇಡಿಕೆಯ ಯುವನಟಿಯಾಗಿರುವ ಸಂಜನಾ ಆನಂದ್, ತೆಲುಗು ಚಿತ್ರರಂಗದಲ್ಲೂ ತೊಡಗಿಸಿಕೊಂಡಿದ್ದಾರೆ. ವಿರಾಟ್ಅಭಿನಯದ, ದಿನಕರ್ ತೂಗುದೀಪ ನಿರ್ದೇಶನದ `ರಾಯ್’ ಸಿನಿಮಾದಲ್ಲಿ ಸಂಜನಾ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು.

ಸಾಲು ಸಾಲು ಚಿತ್ರಗಳು
`ಕೆಮಿಸ್ಟ್ರಿ ಆಫ್ ಕರಿಯಪ್ಪ, ಕುಷ್ಕ, ಸಲಗ, ಕ್ಷತ್ರಿಯ, ಮಳೆಬಿಲ್ಲು, ವಿಂಡೋ ಸೀಟ್, ಶೋಕಿವಾಲ, ಸೂತ್ರಧಾರಿ, ರಾಯ್, ಹಯಗ್ರೀವ, ಮುಧೋಳ್, ಗೌರಿ, ಎಕ್ಕ’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಪೈಕಿ ಕೆಲವೊಂದು ಸಿನಿಮಾಗಳು ಇನ್ನಷ್ಟೇ ತೆರೆಗೆ ಬರಬೇಕಿವೆ. `ನೇನು ಮೀಕು ಬಾಗ ಕಾಲಿಸಿನಾಡಿನಿ, ಫುಲ್ ಬಾಟಲ್’ ಎನ್ನುವ ತೆಲುಗು ಸಿನಿಮಾಗಳಲ್ಲಿ ಸಹ ಸಂಜನಾ ಅಭಿನಯಿಸಿದ್ದಾರೆ. ಇದಷ್ಟೇ ಅಲ್ಲದೆ, ಕನ್ನಡದ ಮೊದಲ ಪರಿಪೂರ್ಣ ಪ್ರಮಾಣದ ವೆಬ್ ಸೀರೀಸ್ ಎನಿಸಿದ್ದ `ಹನಿಮೂನ್’ ವೆಬ್ ಸೀರೀಸ್ ನಲ್ಲಿ ಕೂಡ ಸಂಜನಾ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
ಮನದಾಳದ ಮಾತುಗಳು
“ನನ್ನ ಸ್ನೇಹಿತರೊಬ್ಬರು ನಿರ್ದೇಶಕರಾಗಲು ಕಿರು ಚಿತ್ರ ಮಾಡುವಾಗ, ಅದರಲ್ಲಿ ನನ್ನನ್ನು ನಾಯಕಿಯನ್ನಾಗಿ ಮಾಡಿಕೊಂಡರು. “ಈ ಚಿತ್ರಕ್ಕಾಗಿ ಶೂಟ್ ಮಾಡಿದ್ದ ಪ್ರೊಮೋ ಯೂಟ್ಯೂಬ್ ನಲ್ಲಿ ಹಾಕಿದ್ದರು. ಅದನ್ನು `ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ತಂಡ ನೋಡಿ ಆಡಿಷನ್ ಗೆ ಕರೆಯಿತು. ಹಾಗೆ ನಾನು ಸಿನಿಮಾ ಜಗತ್ತಿಗೆ ಬಂದೆ.
“ಚಿತ್ರರಂಗಕ್ಕೆ ಆಗತಾನೇ ಆಗಮಿಸಿದ ನನಗೆ `ಸಲಗ’ ಸಿನಿಮಾದ ಮೂಲಕ ಅದ್ಧೂರಿ ಸ್ವಾಗತ ದೊರಕಿತು. ಆದರೆ ಇದಾಗಿ ಕೆಲವೇ ದಿನಗಳಲ್ಲಿ ಕೊರೋನಾ ಬಂದು ಚಿತ್ರರಂಗದ ಚಟುವಟಿಕೆಗಳೆಲ್ಲಾ ಸ್ತಬ್ಧವಾಯಿತು.

ಕೊರೋನಾ ಕೊಟ್ಟ ಕಾಟ
“ಆಗೊಮ್ಮೆ ನಾನು ಕೆಲಸ ತೊರೆದು ಚಿತ್ರರಂಗಕ್ಕೆ ಬಂದ ನನ್ನ ನಿರ್ಧಾರದ ಕುರಿತು ಮರುಚಿಂತನೆ ಮಾಡಿಕೊಂಡಿದ್ದೂ ಉಂಟು,” ಎನ್ನುತ್ತಾರೆ ಸಂಜನಾ.
“ಆದರೆ ದುನಿಯಾ ವಿಜಯ್ ಜೊತೆ ನಾಯಕಿಯಾಗುವ ಅವಕಾಶ ನನ್ನ ಜೀವನದ ಸರ್ ಪ್ರೈಸ್ ಸಂಭ್ರಮ ಅಥವಾ ಅವಕಾಶ ಎನ್ನಬಹುದು.
ನಿರ್ದೇಶಕ ದುನಿಯಾ ವಿಜಯ್
“ಏಕೆಂದರೆ ನಟರಾಗಿ ದುನಿಯಾ ವಿಜಯ್ ತಮ್ಮ ಛಾಪು ಮೂಡಿಸಿದರು. ಅಂಥವರು ಮೊದಲ ಸಿನಿಮಾ ನಿರ್ದೇಶನ ಮಾಡಲು ಹೊರಟಿದ್ದರು. ಅವರ ಮೊದಲ ನಿರ್ದೇಶದಲ್ಲಿ ನಾನು ನಾಯಕಿ ಆಗಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ಆಕಸ್ಮಿಕವಾಗಿ ಬಂದಿತು,” ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.
ಅಚ್ಚುಮೆಚ್ಚಿನ ಹವ್ಯಾಸ
ಸಂಜನಾರಿಗೆ ಪ್ರವಾಸ ಎನ್ನುವುದು ಅಚ್ಚುಮೆಚ್ಚಿನ ಹವ್ಯಾಸವಾಗಿದೆ. “ಹಸಿರಿನ ವನಸಿರಿ ಎಂದರೆ ಇಷ್ಟ. ಸಿಕ್ಕಾಪಟ್ಟೆ ಟ್ರಾವೆಲ್ ಮಾಡುತ್ತೇನೆ. ಪ್ರವಾಸ ಮಾಡುವ ಕ್ರೇಜ್ ಮೊದಲಿನಿಂದಲೂ ಇದೆ.
“ಫ್ರೆಂಡ್ಸ್ ಜೊತೆ ನಾನಾ ರಾಜ್ಯಗಳಿಗೆ ಹೋಗುತ್ತಲೇ ಇರುತ್ತೇನೆ. ನನಗೆ ಸಾಹಸಮಯದಿಂದ ಕೂಡಿರುವ ಬೆಟ್ಟಗುಡ್ಡಗಳನ್ನು ಏರುವುದಕ್ಕೆ ಇಷ್ಟ,” ಎಂದು ಹೇಳುತ್ತಾರೆ.
ಗ್ಲಾಮರಸ್ ಪಾತ್ರಗಳು
`ರಾಯ್’ ಸಿನಿಮಾದಲ್ಲಿ ಸಂಜನಾ ಪಾತ್ರಕ್ಕೆ ಸಾಕಷ್ಟು ಸ್ಕೋಪ್ ಸಿಕ್ಕಿದೆ. ಆ ಪಾತ್ರ ಗ್ಲಾಮರಸ್ ಟಚ್ ಒಡನೆ ನಟಿಗೆ ಹೊಸ ಅವಕಾಶದ ಬಾಗಿಲು ತೆರೆದಿತ್ತು. ಇದಲ್ಲದೆ ಚಂದನ್ ಶೆಟ್ಟಿ, ಅಪೂರ್ವ ಅಭಿನಯದ `ಸೂತ್ರಧಾರಿ’ ಸಿನಿಮಾದ ಡ್ಯಾಶ್ ಸಾಂಗ್ ನಲ್ಲಿ ಸಂಜನಾ ಕಾಣಿಸಿಕೊಂಡಿದ್ದು, ಈ ಹಾಡು ಬಹು ಬೇಗನೆ ಜನಪ್ರಿಯವಾಗಿದೆ.
ಸೂತ್ರಧಾರಿಯಲ್ಲಿ ಪಾತ್ರಧಾರಿ
ಈಗ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಚಿತ್ರರಂಗದ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ನವರಸನ್ ನಿರ್ಮಾಣದ, ಕಿರಣ್ ಕುಮಾರ್ ಚೊಚ್ಚಲ ನಿರ್ದೇಶನದ ಹಾಗೂ ತಮ್ಮ ಗಾಯನ ಮೂಲಕ ಜನಪ್ರಿಯರಾಗಿರುವ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ `ಸೂತ್ರಧಾರಿ’ ಚಿತ್ರ ಈ ತಿಂಗಳು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
ಎಕ್ಕ ಚಿತ್ರದಲ್ಲಿ ಪಾತ್ರ
ಇದಲ್ಲದೆ ಯುವ ರಾಜ್ ಕುಮಾರ್ ರ ಎರಡನೇ ಸಿನಿಮಾ, ರೋಹಿತ್ ಪದಕಿ ನಿರ್ದೇಶನದ `ಎಕ್ಕ’ ಚಿತ್ರಕ್ಕೆ ಸಂಜನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಶ್ವಿನಿ ಪುನೀತ್ರಾಜ್ ಕುಮಾರ್ ರ ಪಿ.ಆರ್.ಕೆ. ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್ (ಜಯಣ್ಣ ಮತ್ತು ಭೋಗೇಂದ್ರ) ಮತ್ತು ಕೆ.ಆರ್.ಜಿ. ಸ್ಟುಡಿಯೋಸ್ (ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್) ಸೇರಿ ನಿರ್ಮಿಸುತ್ತಿರುವ ಈ ಚಿತ್ರ ಇದೇ ಜೂನ್ ನಲ್ಲಿ ತೆರೆಗೆ ಬರಲಿದೆ.
ಸಂಪದಾ ಜೊತೆ ಸಹನಾಯಕಿ
`ಎಕ್ಕ’ ಆರಂಭವಾದ ಹೊಸತರಲ್ಲಿ ಈ ಸಿನಿಮಾಗೆ ಇಬ್ಬರು ನಾಯಕಿಯರು ಎಂದು ನಿರ್ದೇಶಕರು ಹೇಳಿದ್ದರು. ಆರಂಭದಲ್ಲಿ ಒಬ್ಬ ನಾಯಕಿ ಸಂಪದಾರನ್ನು ಪರಿಚಯ ಕೂಡ ಮಾಡಿದ್ದರು. ಆ ಚಿತ್ರಕ್ಕೆ ಸಹನಾಯಕಿಯಾಗಿ ಸಂಜನಾ ಅಭಿನಯಿಸಿದ್ದಾರೆ.
– ರಾಘವೇಂದ್ರ ಅಡಿಗ ಎಚ್ಚೆನ್.





