ಒಂದು ಭೇಟಿ… ಒಂದು ಮಾತು… ಜೀವಮಾನವಿಡೀ ಉಳಿದ ನೆನಪು

ಅದು ಎಂಭತ್ತರ ದಶಕ. ಆಗ ತಾನೇ ಕಾಲೇಜು ಸೇರಿದ್ದ ವಿದ್ಯಾರ್ಥಿ ನಾನು. ನಮ್ಮ ಮನೆಯ ಆವರಣದಲ್ಲಿ ಒಂದು ಭಾವಿ ಇತ್ತು. ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಅದರಿಂದ 30 ಕೊಡ ನೀರು ಸೇದುವುದು ನನ್ನ ಪಾಲಿನ ಅಲಿಖಿತ ಜವಾಬ್ದಾರಿ. ಆದರೆ, ಆ ವಯಸ್ಸಿನ ಹುಡುಗನಿಗೆ ಕೆಲಸಕ್ಕಿಂತ ಮೈಗಳ್ಳತನವೇ ಹೆಚ್ಚು! “ಬೆಳಿಗ್ಗೆ ಸೇದುತ್ತೇನೆ” ಎಂದರೆ ಸಂಜೆ, “ಸಂಜೆ ಸೇದುತ್ತೇನೆ” ಎಂದರೆ ನಾಳೆ ಬೆಳಿಗ್ಗೆ ಎಂದು ಮುಂದೂಡುತ್ತಾ ತಪ್ಪಿಸಿಕೊಳ್ಳುತ್ತಿದ್ದ ದಿನಗಳು. ಅಂತಹದ್ದೇ ಒಂದು ದಿನ ನನ್ನ ಕಳ್ಳಾಟ ಮಿತಿ ಮೀರಿತು. ತಂದೆಯವರೊಂದಿಗೆ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆಯಿತು. ಕೊನೆಗೆ ಬೇಸರಗೊಂಡ ತಂದೆಯವರೇ ಕೋಪದಿಂದ ಭಾವಿಯಲ್ಲಿ ನೀರು ಸೇದುತ್ತಿದ್ದರು.

ಅಷ್ಟರಲ್ಲಿ ನಮ್ಮ ಕುಟುಂಬದ ಆತ್ಮೀಯರು ಹಾಗೂ ಹಿರಿಯ ಸ್ವಯಂಸೇವಕರಾದ ಶ್ರೀ ಲಕ್ಷ್ಮೀನರಸಿಂಹಯ್ಯನವರು ಮನೆಗೆ ಬಂದು, ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕೆ ಬರಬೇಕೆಂದು ತಂದೆಯವರನ್ನು ಕೇಳಿದರು. ಆಗಲೇ ಸಿಟ್ಟಿನಲ್ಲಿದ್ದ ತಂದೆಯವರು, ಅಯ್ಯೋ ಬಿಡ್ರಿ ನರಸಿಂಹಯ್ಯನವರೇ… ಯಾರು ಗೆದ್ದರೂಸೋತರೂ ನಮ್ಮ ಕಷ್ಟವೇನು ಕರಗೋದಿಲ್ಲಅದಲ್ಲದೆ ವ್ಯಕ್ತಿ ನನಗೆ ವೈಯಕ್ತಿಕವಾಗಿ ಪರಿಚಯವೇ ಇಲ್ಲ…” ಎಂದು ನೇರವಾಗಿ ಹೇಳಿ ಅವರನ್ನು ಕಳುಹಿಸಿದ್ದರು.

ಆ ಘಟನೆ ನಡೆದು ಕೇವಲ 24 ಗಂಟೆಗಳೂ ಕಳೆದಿರಲಿಲ್ಲ. ಮಾರನೇ ದಿನ ಸಂಜೆ ನಮ್ಮ ಮನೆಯ ಮುಂದೆ ಒಂದು ಬಜಾಜ್ ಚೇತಕ್ ಸ್ಕೂಟರ್ ಬಂದು ನಿಂತಿತು. ಅದರ ಮೇಲೆ ಶ್ರೀ ಲಕ್ಷ್ಮೀನರಸಿಂಹಯ್ಯನವರ ಜೊತೆ, ಎತ್ತರದ ಹಣೆಯ ಮೇಲೆ ದೊಡ್ಡ ಕುಂಕುಮದ ತಿಲಕವಿಟ್ಟಿದ್ದ, ಮುಗುಳ್ನಗೆಯ ಮುಖದ ವ್ಯಕ್ತಿಯೊಬ್ಬರು ಬಂದರು. ಅವರೇ ಶ್ರೀ ರಾಮಚಂದ್ರಗೌಡರು. ಕಾಂಪೌಂಡ್ ಒಳಗೆ ಕಾಲಿಟ್ಟು, ನಮಸ್ಕಾರ… ಚೆನ್ನಾಗಿದ್ದೀರಾ?” ಎಂದು ಅತ್ಯಂತ ಆತ್ಮೀಯವಾಗಿ ಮಾತು ಆರಂಭಿಸಿದರು. ಮೊದಲ ಬಾರಿಗೆ ಮನೆಗೆ ಬಂದ ಅತಿಥಿಗಳೆಂದು ಯಥಾಶಕ್ತಿ ಸತ್ಕರಿಸಿ ಕುಳ್ಳಿರಿಸಿದ್ದೆವು. ಮಾತು ಮಾತಿನಲ್ಲೇ ಅವರು ತಮ್ಮ ಮೂಲ ಊರು ಕುಣಿಗಲ್ ಸಮೀಪದ ಅಮೃತೂರು ಎಂದು ಹೇಳಿದರು. ನಮ್ಮ ಸೋದರತ್ತೆ ಕುಟುಂಬದ ಶ್ಯಾನುಭೋಗತನವೂ ಅದೇ ಭಾಗಕ್ಕೆ ಸೇರಿದ್ದರಿಂದ, ಕೆಲವೇ ನಿಮಿಷಗಳಲ್ಲಿ ಎರಡೂ ಕುಟುಂಬಗಳಿಗೆ ಪರಿಚಿತರಾದ ಹಲವರ ಹೆಸರುಗಳು ಒಂದರ ಹಿಂದೆ ಒಂದರಂತೆ ಹೊರಬಂದವು. ಅದರಲ್ಲೂ, ಮಲ್ಲೇಶ್ವರದಲ್ಲಿ ವಾಸವಾಗಿದ್ದ ನಮ್ಮ ಚಿಕ್ಕಪ್ಪನವರಿಗೆ ಅವರು ವೈಯಕ್ತಿಕವಾಗಿ ನೆರವಾದ ಘಟನೆಯನ್ನು ಹೇಳಿದಾಗ, ತಂದೆಯವರ ಮನಸ್ಸೇ ಬದಲಾಯಿತು. ಅವರ ಸರಳತೆ, ಆತ್ಮೀಯತೆ ಮತ್ತು ಯಾವುದೇ ಹಿಂಜರಿಕೆಯಿಲ್ಲದೆ ಒಬ್ಬ ಸಾಮಾನ್ಯ ಕಾರ್ಯಕರ್ತನ ಮನೆಗೆ ಬಂದು ಮಾತನಾಡಿದ ವಿನಯ—ಇವೆಲ್ಲವೂ ತಂದೆಯವರ ಮೇಲೆ ಅಪಾರ ಪ್ರಭಾವ ಬೀರಿದವು. ಅದರ ಫಲವೇನೆಂದರೆ, ಮಾರನೇ ದಿನದಿಂದ ಚುನಾವಣೆ ಮುಗಿಯುವವರೆಗೂ ತಂದೆಯವರು ಶ್ರೀ ರಾಮಚಂದ್ರಗೌಡರ ಪರ ಪ್ರಚಾರದಲ್ಲಿ ಸಂಪೂರ್ಣ ತೊಡಗಿಸಿಕೊಂಡರು.

ಇಂದು ರಾಜಕಾರಣದಲ್ಲಿ ನಾಯಕರನ್ನು ಭೇಟಿ ಮಾಡಲು ಸಾಮಾನ್ಯ ಕಾರ್ಯಕರ್ತನೇ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಆದರೆ, ಆಗ ಒಬ್ಬ ವಿಧಾನ ಪರಿಷತ್ ಅಭ್ಯರ್ಥಿಯೇ ಮತದಾರನ ಮನೆ ಬಾಗಿಲಿಗೆ ಬಂದು, ಸಂಬಂಧಗಳನ್ನು ಕಟ್ಟಿಕೊಂಡು, ವಿಶ್ವಾಸ ಗಳಿಸುತ್ತಿದ್ದ ಕಾಲವಿತ್ತು. ಅದೇ ಶ್ರೀ ರಾಮಚಂದ್ರಗೌಡರ ವ್ಯಕ್ತಿತ್ವ. ಸರಳತೆ ಅವರ ಅಲಂಕಾರವಾಗಿತ್ತು. ಸ್ನೇಹ ಅವರ ಸ್ವಭಾವವಾಗಿತ್ತು. ಕಾರ್ಯಕರ್ತರನ್ನು ಗೆಲ್ಲುವುದು ಭಾಷಣಗಳಿಂದಲ್ಲ, ಹೃದಯದಿಂದ ಎಂಬುದನ್ನು ಬದುಕಿನುದ್ದಕ್ಕೂ ತೋರಿಸಿದ ಅಪರೂಪದ ನಾಯಕರು ಅವರು. ಅಂತಹ ಸಜ್ಜನ, ಸಂಘಟನಾ ಶಿಲ್ಪಿ ಮತ್ತು ಆತ್ಮೀಯ ಹಿರಿಯರಾದ ಶ್ರೀ ರಾಮಚಂದ್ರಗೌಡರು ವಯೋಸಹಜ ಅನಾರೋಗ್ಯದ ಕಾರಣದಿಂದಾಗಿತಮ್ 87ನೇ ವಯಸ್ಸಿನಲ್ಲಿ 2026 ಜುಲೈ 14ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದ ಸುದ್ದಿ ಕೇಳಿ ನಿಜಕ್ಕೂ ಮನಸ್ಸಿಗೆ ತೀವ್ರ ಬೇಸರವನ್ನುಂಟು ಮಾಡಿದೆ.

ಕರ್ನಾಟಕ   ಬಿಜೆಪಿಯ ಭೀಷ್ಮ. ಜನಸಂಘದ ದಿನಗಳಿಂದಲೇ ಬೆಂಗಳೂರಿನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಭದ್ರ ಅಡಿಪಾಯ ಹಾಕಿದ ಸಂಘಟನಾ ಶಿಲ್ಪಿ. ಸಾವಿರಾರು ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದ ಅಪರೂಪದ ಹಿರಿಯ ನಾಯಕ.

ಜನಸಂಘದಿಂದ ಬಿಜೆಪಿ ಹೆಮ್ಮರದವರೆಗೆ

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ತಿಪ್ಪೂರಿನಲ್ಲಿ ಡಿಸೆಂಬರ್ 13, 1938 ರಂದು ಜನಿಸಿದ್ದ ರಾಮಚಂದ್ರ ಗೌಡರು ತಮ್ಮ ಶಾಲಾ ದಿನಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪ್ರೇರಿತರಾಗಿ ಸಾಮಾಜಿಕ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದು, ಅವರು ಪ್ರೌಢಶಾಲೆಯಲ್ಲಿದ್ದಾಗಲೇ ಗೋವಾ ವಿಮೋಚನಾ ಚಳವಳಿಯಲ್ಲಿ ಭಾಗವಹಿಸಿದ್ದರು. ತಮ್ಮ ಇಂಜೀನಿಯರಿಂಗ್ ಪದವಿ ಮುಗಿದ ನಂತರ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ, ಅಂದಿನ ಜನಸಂಘದ ನಾಯಕರುಗಳ ಪರಿಚಯವಾಗಿ ಸಕ್ರೀಯ ರಾಜಕೀಯದಲ್ಲೂ ತೊಡಗಿಕೊಂಡರು. ಇಂದು ಬೆಂಗಳೂರಿನಲ್ಲಿ ಭಾರತೀಯ ಜನತಾ ಪಕ್ಷ ಬೃಹತ್ ರಾಜಕೀಯ ಶಕ್ತಿಯಾಗಿ ಬೆಳೆದಿರುವುದನ್ನು ನೋಡುವವರಿಗೆ ಅದರ ಆರಂಭದ ದಿನಗಳ ಕಷ್ಟಗಳ ಅರಿವಿರಲಿಕ್ಕಿಲ್ಲ.

1970ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಬೆಂಗಳೂರು ಮಹಾನಗರ ಪಾಲಿಕೆಗೆ ಆಯ್ಕೆಯಾಗುವ ಮೂಲಕ ರಾಜಧಾನಿಯಲ್ಲಿ ಪಕ್ಷದ ಮೊದಲ ಹೆಜ್ಜೆ ಇಟ್ಟ ನಾಯಕರಲ್ಲಿ ಶ್ರೀ ರಾಮಚಂದ್ರೇಗೌಡರೂ ಒಬ್ಬರು. ಶ್ರೀನಿವಾಸ ಅಯ್ಯಂಗಾರ್ ಹಾಗೂ ಕೃಷ್ಣಯ್ಯನವರೊಂದಿಗೆ ಜನಸಂಘದಿಂದ ನಗರಸಭೆಗೆ ಪ್ರವೇಶಿಸಿದ ಮೊದಲ ಮೂವರು ನಾಯಕರ ಪೈಕಿ ಅವರ ಹೆಸರೂ ಶಾಶ್ವತವಾಗಿ ದಾಖಲಾಗಿದೆ. ಮುಂದೆ ಬಿಜೆಪಿ ರೂಪುಗೊಂಡ ನಂತರವೂ ಮೊದಲ ಕಾರ್ಪೊರೇಟರ್‌ಗಳಲ್ಲಿ ಒಬ್ಬರಾಗಿ ಪಕ್ಷದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದರು. ಇಂದು ಬೆಂಗಳೂರಿನಲ್ಲಿ ಬಿಜೆಪಿ ಹೆಮ್ಮರವಾಗಿ ಬೆಳೆದಿದ್ದರೆ, ಅದರ ಬೇರುಗಳಲ್ಲಿ ರಾಮಚಂದ್ರೇಗೌಡರಂತಹ ನೂರಾರು ನಿಸ್ವಾರ್ಥ ಕಾರ್ಯಕರ್ತರ ತ್ಯಾಗ, ಶ್ರಮ ಮತ್ತು ಸಂಘಟನಾ ನಿಷ್ಠೆ ಗಟ್ಟಿಯಾಗಿ ಬೆಸೆದುಕೊಂಡಿದೆ.

ಹುದ್ದೆಗಾಗಿ ಅಲ್ಲ… ಸಿದ್ಧಾಂತಕ್ಕಾಗಿ ಬದುಕಿದ ನಾಯಕ

1953ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಸಾರ್ವಜನಿಕ ಜೀವನ ಆರಂಭಿಸಿದ ಅವರು, ಜೀವನದ ಬಹುಭಾಗವನ್ನು ಸಂಘಟನೆಗಾಗಿ ಮುಡಿಪಾಗಿಟ್ಟರು.

ಗೋವಾ ವಿಮೋಚನಾ ಚಳುವಳಿಯಲ್ಲಿ ಯುವಕರಾಗಿಯೇ ಪಾಲ್ಗೊಂಡಿದ್ದ ಅವರು, ನಂತರ ಜನಸಂಘದ ಮೂಲಕ ರಾಜಕೀಯ ಪ್ರವೇಶಿಸಿದರು.

ತುರ್ತು ಪರಿಸ್ಥಿತಿ (Emergency) ಘೋಷಣೆಯಾದಾಗ ಅನೇಕ ನಾಯಕರು ಬಂಧನಕ್ಕೊಳಗಾಗುತ್ತಿದ್ದ ಸಂದರ್ಭದಲ್ಲಿ, ಪೊಲೀಸರು ಬಂಧಿಸದಂತೆ ಭೂಗತರಾಗಿ ಕಾರ್ಯನಿರ್ವಹಿಸಿದರು.

ಆ ದಿನಗಳಲ್ಲಿ ಅವರು,

  • ನಿಷೇಧಿತ ಸಾಹಿತ್ಯ ಹಂಚುವುದು,
  • ಸತ್ಯಾಗ್ರಹಿಗಳ ಕುಟುಂಬಗಳಿಗೆ ನೆರವು ನೀಡುವುದು,
  • ಭೂಗತ ಕಾರ್ಯಕರ್ತರ ಜಾಲವನ್ನು ಸಂಘಟಿಸುವುದು

ಇಂತಹ ಅಪಾಯಕಾರಿ ಕೆಲಸಗಳನ್ನು ನಿರಂತರವಾಗಿ ನಿರ್ವಹಿಸಿದ್ದರು.

ಸಿದ್ಧಾಂತಕ್ಕಾಗಿ ಬದುಕುವುದು ಎಂದರೆ ಏನು ಎಂಬುದನ್ನು ಅವರ ಜೀವನವೇ ಕಲಿಸುತ್ತದೆ.

ರಾಷ್ಟ್ರೀಯ ನಾಯಕರ ನಿಕಟ ಸಹವರ್ತಿ

ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿದಂತೆ ಜನಸಂಘ ಮತ್ತು ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಅವರಿಗೆ ಅತ್ಯಂತ ಆತ್ಮೀಯ ಒಡನಾಟವಿತ್ತು. ರಾಜ್ಯಕ್ಕೆ ರಾಷ್ಟ್ರೀಯ ನಾಯಕರು ಭೇಟಿ ನೀಡಿದಾಗ ಅವರ ಪ್ರವಾಸ, ಸಭೆಗಳು ಮತ್ತು ಸಂಘಟನಾ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ರಾಮಚಂದ್ರೇಗೌಡರ ಪರಿಶ್ರಮ ರಾಷ್ಟ್ರೀಯ ನಾಯಕರುಗಳ ಹಿಂದಿ ಭಾಷಣದ ಕನ್ನಡಾನುವಾದಕ್ಕೆ ರಾಮಚಂದ್ರ ಗೌಡರದ್ದೇ ಸಾರಥ್ಯವಿರುತ್ತಿತ್ತು. . ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ, ದಿವಂಗತ ಅನಂತ್ ಕುಮಾರ್, ಕೆ.ಎಸ್. ಈಶ್ವರಪ್ಪ, ದಿವಂಗತ ವಿ.ಎಸ್. ಆಚಾರ್ಯ ಸೇರಿದಂತೆ ಅನೇಕ ನಾಯಕರೊಂದಿಗೆ ದಶಕಗಳ ಕಾಲ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿದರು. ಭಾಷಣಕ್ಕೆ ನಿಂತಲ್ಲಿ, ಅವರ ಬಾಯಿಯಂದ ಪುಂಖಾನು ಪುಂಖವಾಗಿ ಬರುತ್ತಿದ್ದ ಸಂಸ್ಜೃತದ ಸುಭಾಷಿತಗಳನ್ನು ಕೇಳುವುದಕ್ಕೇ ಕರ್ಣಾನಂದವಾಗಿರುತ್ತಿತ್ತು. ಸ್ಪುಟವಾದ ಭಾಷೆ, ಸ್ಪಷ್ಟವಾದ ಉಚ್ಚಾರಗಳಿಂದ ಮುಂಚೆ ಕುಳಿತವರಿಗೆ ತಿಳಿಸ ಬೇಕಾದದ್ದನ್ನು ಅಚ್ಚುಕಟ್ಟಾಗಿ ತಿಳಿಸುವ ಪರಿ ಅವರಿಗೆ ಕರಗತವಾಗಿತ್ತು.

ಐದು ಬಾರಿ ವಿಧಾನ ಪರಿಷತ್ ಸದಸ್ಯ… ದರೆ ಅಧಿಕಾರದ ಅಹಂಕಾರವಿಲ್ಲ

ಪದವಿಧರರ ಕ್ಷೇತ್ರದಿಂದ ರಾಮಚಂದ್ರೇಗೌಡರು ಸತತ ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಅಪರೂಪದ ರಾಜಕಾರಣಿ.

ಜೆಡಿಎಸ್–ಬಿಜೆಪಿ ಮೈತ್ರಿ ಸರ್ಕಾರ ಹಾಗೂ ನಂತರ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಣ್ಣ ಉಳಿತಾಯ ಮತ್ತು ಲಾಟರಿ ಸಚಿವರಾಗಿ ಸೇವೆ ಸಲ್ಲಿಸಿದರು. ಆದರೆ ಅವರ ಬದುಕಿನ ಅತ್ಯಂತ ದೊಡ್ಡ ಗುರುತು ಸಚಿವ ಸ್ಥಾನವಲ್ಲ. ಅವರ ಸರಳತೆ. ಅವರ ಮನೆ ಸದಾ ಕಾರ್ಯಕರ್ತರಿಗೆ ತೆರೆದಿರುತ್ತಿತ್ತು. ಅಧಿಕಾರ ಎಷ್ಟೇ ಬಂದರೂ ಕಾರ್ಯಕರ್ತರನ್ನು ಮರೆಯಲಿಲ್ಲ. ಯಾರೇ ಬಂದರೂ ಸಮಯ ಕೊಟ್ಟು ಮಾತನಾಡುತ್ತಿದ್ದರು. 2007ರ ಕುಮಾರಸ್ವಾಮಿ ಮತ್ತು ಯಡೆಯೂರಪ್ಪನವರ ಸಮ್ಮಿಶ್ರ ಸರ್ಕಾರದಲ್ಲಿ ಕನ್ನಡಿಗರ ಮನೆಯನ್ನು ಹಾಳುಮಾಡುತ್ತಿದ್ದ online & daily ಹೀಗೆ ಎಲ್ಲಾ ರೀತಿಯ ಲಾಟರಿಗಳ ಮಾರಾಟವನ್ನು ನಿಷೇಥಿಸಬೇಕೆಂದು ನಿರ್ಧರಿಸಿದಾಗ, ಕರ್ನಾಟಕದಲ್ಲಿ ಲಾಟರಿಯನ್ನು ಯಶಸ್ವಿಯಾಗಿ ನಿಷೇಧಿಸಿದ ಕೀರ್ತಿ ಸಚಿವ ರಾಮಚಂದ್ರ ಗೌಡರದ್ದಾಗಿತ್ತು.

ಸಚಿವ ಸ್ಥಾನಕ್ಕಿಂತ ಸಿದ್ಧಾಂತ ದೊಡ್ಡದು

2010ರಲ್ಲಿ ವೈದ್ಯಕೀಯ ಕಾಲೇಜುಗಳ ನೇಮಕಾತಿ ಸಂಬಂಧ ವಿವಾದ ಎದುರಾದಾಗ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಹೈಕೋರ್ಟ್ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಸಂಪೂರ್ಣ ಕ್ಲೀನ್ ಚಿಟ್ ನೀಡಿತು. ಇಂದಿನ ರಾಜಕೀಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಯಾವುದೇ ಹಂತಕ್ಕೂ ಹೋಗುವವರನ್ನು ನೋಡುತ್ತಿರುವ ಸಂದರ್ಭದಲ್ಲಿ, ಆರೋಪ ಕೇಳಿಬಂದ ತಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ ಅವರಂತಹ ನಾಯಕರು ನಿಜಕ್ಕೂ ವಿರಳ.

ಅಯೋಧ್ಯೆಗಾಗಿ ಹೋರಾಡಿದ ಕಾರಸೇವಕ

ಅಯೋಧ್ಯೆ ರಾಮಜನ್ಮಭೂಮಿ ಹೋರಾಟದ ಆರಂಭದಿಂದಲೇ ಅವರು ಸಕ್ರಿಯರಾಗಿದ್ದರು. ಕಾರಸೇವಕರಾಗಿ ಅಯೋಧ್ಯೆಗೆ ತೆರಳಿ ಪೊಲೀಸರ ಬಂಧನವನ್ನೂ ಅನುಭವಿಸಿದರು. 32 ವರ್ಷಗಳ ಬಳಿಕ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಡೆದಾಗ ದೇಹ ನಿತ್ರಾಣವಾಗಿದ್ದರೂ ಮಕ್ಕಳ ಉತ್ಸಾಹದಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಕೊನೆಯ ದಿನಗಳಲ್ಲೂ ಸಂಘವೇ ಚಿಂತನೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ಹಿರಿಯ ಸ್ವಯಂಸೇವಕರ ಸಮ್ಮಿಲನ ಕಾರ್ಯಕ್ರಮವನ್ನು ತಮ್ಮ ಮನೆಯಲ್ಲೇ ಆಯೋಜಿಸಿದ್ದರು. ಆರೋಗ್ಯ ಹದಗೆಟ್ಟ ನಂತರವೂ ಅವರನ್ನು ಭೇಟಿಯಾದ ಸ್ವಯಂಸೇವಕರೊಂದಿಗೆ ಅವರು ನೆನಪಿಸಿಕೊಂಡಿದ್ದು ಸಂಘದ ಕಾರ್ಯಕ್ರಮಗಳನ್ನೇ. ಅದು ಅವರ ಬದುಕಿನ ಸಾರಾಂಶ.

ಅವರ ನಿಧನದ ಸುದ್ದಿ ಕೇಳಿದ ಕ್ಷಣದಲ್ಲಿ ಮನಸ್ಸಿಗೆ ತೀವ್ರ ಆಘಾತವಾಯಿತು ಭೇಟಿಯಾದಾಗಲೆಲ್ಲಾ ಪ್ರೀತಿಯಿಂದ ಹೆಗಲ ಮೇಲೆ ಕೈ ಹಾಕಿ ಮಾತನಾಡುತ್ತಿದ್ದ ಆ ಹಿರಿಯರ ಅಗಲಿಕೆ, ಪಕ್ಷವಷ್ಟೇ ಅಲ್ಲ, ನಮ್ಮಂತಹ ಅನೇಕ ಕಾರ್ಯಕರ್ತರಿಗೆ ಮನೆಯ ಹಿರಿಯರೊಬ್ಬರನ್ನು ಕಳೆದುಕೊಂಡ ನೋವನ್ನು ತಂದಿದೆ. ಇಂದು ಕರ್ನಾಟಕ ಬಿಜೆಪಿ ಒಬ್ಬ ಮಾಜಿ ಸಚಿವರನ್ನು ಮಾತ್ರ ಕಳೆದುಕೊಂಡಿಲ್ಲಒಂದು ಯುಗವನ್ನೇ ಳೆದುಕೊಂಡಿದೆ.

ಒಂದು ಯುಗದ ಅಂತ್ಯ

ಬಿಜೆಪಿ ಕೇವಲ ಒಬ್ಬ ಹಿರಿಯ ನಾಯಕನನ್ನು ಕಳೆದುಕೊಂಡಿಲ್ಲ. ಸಿದ್ಧಾಂತಕ್ಕಾಗಿ ಬದುಕಿದ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಿದೆ. ಸಂಘಟನೆಗಾಗಿ ಕುಟುಂಬಕ್ಕಿಂತ ಪಕ್ಷವನ್ನು ದೊಡ್ಡದಾಗಿ ಕಂಡ ವ್ಯಕ್ತಿಯನ್ನು ಕಳೆದುಕೊಂಡಿದೆ. ಅಧಿಕಾರಕ್ಕಿಂತ ಮೌಲ್ಯಗಳಿಗೆ ಬೆಲೆ ಕೊಟ್ಟ ರಾಜಕಾರಣದ ಪ್ರತಿನಿಧಿಯೊಬ್ಬರನ್ನು ಕಳೆದುಕೊಂಡಿದೆ. ರಾಮಚಂದ್ರೇಗೌಡರಂತಹ ನಾಯಕರು ಇತಿಹಾಸದ ಪುಟಗಳಲ್ಲಿ ಮಾತ್ರ ಉಳಿಯುವುದಿಲ್ಲ. ಅವರು ಕಟ್ಟಿದ ಸಂಘಟನೆ, ರೂಪಿಸಿದ ಕಾರ್ಯಕರ್ತರು ಮತ್ತು ಅವರು ಬಿತ್ತಿದ ಮೌಲ್ಯಗಳ ಮೂಲಕ ಸದಾ ಜೀವಂತವಾಗಿರುತ್ತಾರೆ. ಅವರಂತಹ ವ್ಯಕ್ತಿತ್ವಗಳು ಕೇವಲ ಇತಿಹಾಸದ ಪುಟಗಳಲ್ಲಿ ಉಳಿಯುವುದಿಲ್ಲ; ಅವರು ಸ್ಪರ್ಶಿಸಿದ ಸಾವಿರಾರು ಮನಸ್ಸುಗಳಲ್ಲಿ ಎಂದೆಂದಿಗೂ ಜೀವಂತವಾಗಿರುತ್ತಾರೆ

ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಕುಟುಂಬದವರಿಗೆ ಹಾಗೂ ಸಾವಿರಾರು ಕಾರ್ಯಕರ್ತರಿಗೆ  ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸೋಣ.

ಏನಂತೀರೀ?

ನಿಮ್ಮವನೇ

ಉಮಾಸುತ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ