ಭಾರತದ ವಿಜ್ಞಾನವನ್ನು ಪರಕೀಯರು ಕದ್ದುಹೋದರಾ…?

ಅಥವಾ…

ನಮ್ಮದೇ ಇತಿಹಾಸವನ್ನ ನಾವೇ ಮರೆತುಬಿಟ್ಟೆವಾ…?

ಈ ಪ್ರಶ್ನೆಗೆ ಇವತ್ತು ಉತ್ತರ ದೊರೆಯಬಹುದು..

ಅವರ ಎರಡು ಪುಸ್ತಕಗಳು, ನೂರಾರು ವರ್ಷಗಳಿಂದ ಭಾರತವನ್ನು ಕೀಳಾಗಿ ನೋಡುತ್ತಿದ್ದ ಜಗತ್ತಿನ ಕಲ್ಪನೆಯನ್ನೇ ಬುಡಮೇಲು ಮಾಡಿದವು..

ಅವರನ್ನ ನಾವು ನಿರಂತರ ಆರಾಧಿಸಬೇಕಿತ್ತು..

ಆದರೆ‌ ಎಷ್ಟೋ ಜನಕ್ಕೆ ಅವರ ಹೆಸರೂ ನೆನಪಿಲ್ಲ..

ಆಚಾರ್ಯ ಪ್ರಫುಲ್ಲ ಚಂದ್ರ ರಾಯ್.

ಅಷ್ಟಕ್ಕೂ ಅವರು ಮಾಡಿದ್ದೇನು?

ಅದರಿಂದ ಭಾರತಕ್ಕೆ ಆಗುದ್ದೇನು..?

ಹೇಳ್ತೀನಿ ಕೇಳಿ..

ಅದು ಬ್ರಿಟಿಷರ ಆಳ್ವಿಕೆಯ ಕಾಲ.

“ಭಾರತ ಅಂದ್ರೆ ಮೂಢನಂಬಿಕೆ…

ಭಾರತೀಯರಿಗೆ ವಿಜ್ಞಾನವೇ ಗೊತ್ತಿರಲಿಲ್ಲ…

ರಸಾಯನಶಾಸ್ತ್ರ ಯುರೋಪ್ ಕೊಡುಗೆ…”

ಜಗತ್ತೇ ಹೀಗಂತ ನಂಬಿದ್ದ ಸಮಯ ಅದು.

ಆ ಸುಳ್ಳನ್ನ ಎದುರಿಸಲು ಆಚಾರ್ಯ ರಾಯ್ ಆಯುಧ ಹಿಡಿದೇ ರಣಾಂಗಣಕ್ಕೆ‌ ಧುಮುಕಿದರು.

ಆದರೆ ಹೋರಾಡಲು ಎತ್ತಿಕೊಂಡಿದ್ದು ಕತ್ತಿಯನ್ನಲ್ಲ, ಪುಸ್ತಕಗಳನ್ನ!!

ವರ್ಷಗಟ್ಟಲೆ ಸಂಶೋಧನೆ ಆರಂಭವಾಯಿತು.

ವೇದಗಳು…

ಉಪನಿಷತ್ತುಗಳು…

ಅರ್ಥಶಾಸ್ತ್ರ…

ಪುರಾತನ ಸಂಸ್ಕೃತ ಗ್ರಂಥಗಳು…

ಸಾವಿರಾರು ಪುಟಗಳನ್ನು ಓದಿದರು!!

ಅರ್ಥವಾಗದ ಹಸ್ತಪ್ರತಿಗಳನ್ನ ಅಧ್ಯಯನ ಮಾಡಿದರು.

ಸಂಸ್ಕೃತ ವಿದ್ವಾಂಸರ ನೆರವಿನಿಂದ ಪ್ರತಿಯೊಂದು ಮಾಹಿತಿಯನ್ನ ಇಂಗ್ಲಿಷ್‌ಗೆ ಅನುವಾದಿಸಿದರು..

ಅಷ್ಟೇ ಅಲ್ಲ,

ಮೂಲ ಸಂಸ್ಕೃತ ಶ್ಲೋಕಗಳನ್ನೂ ಜೊತೆಗೆ ಸೇರಿಸಿದರು.

ಯಾಕಂದ್ರೆ ಅವರು ಬರೆಯಲು ಹೊರಟಿದ್ದ ಭಾವನಾತ್ಮಕ ಪುಸ್ತಕವಲ್ಲ..

ಪುರಾವೆಯ ದಾಖಲೆ.

ಜಗತ್ತಿನ ವಿದ್ವಾಂಸರ ಎದುರು ನಿಲ್ಲುವ ವೈಜ್ಞಾನಿಕ ಸಾಕ್ಷ್ಯ!!

images (2)

1902..

ಮೊದಲ ಸಂಪುಟ ಬಿಡುಗಡೆಯಾಯಿತು.

1909…

ಎರಡನೇ ಸಂಪುಟವೂ ಪ್ರಕಟವಾಯಿತು.

ಪುಸ್ತಕದ ಹೆಸರು,

“A History of Hindu Chemistry.”

ಈ ಪುಸ್ತಕ ಹೊರಬಿದ್ದ ನಂತರವೇ ರಸಾಯನಶಾಸ್ತ್ರದ ಇತಿಹಾಸ ನಿಜಕ್ಕೂ ಯುರೋಪ್‌ನಿಂದಲೇ ಆರಂಭವಾಗಿತ್ತಾ ಅಂತ ಜಗತ್ತು ಅನುಮಾನ ಪಟ್ಟಿದ್ದು..

ಯುರೋಪಿಗೂ ಮುನ್ನವೇ,

ಶತಮಾನಗಳ ಮುಂಚೆಯೇ

ಭಾರತ  ಆ ಜ್ಞಾನವನ್ನು ಹೊಂದಿತ್ತು ಎಂಬುದು ಮನವರಿಕೆಯಾಗಿದ್ದು..

ಆಚಾರ್ಯ ರಾಯ್ ಜಗತ್ತಿನ ಕಣ್ತೆರಸಿದರು..

ಅಷ್ಟೇ ಅಲ್ಲ…

ಭಾರತ ತನ್ನ ಜ್ಞಾನವನ್ನು ಜಗತ್ತಿಗೆ ಹಂಚಿದ ದೇಶವೂ ಹೌದು ಎಂಬುದನ್ನು ನಿರೂಪಿಸಿದರು..

ಎಂಟನೇ ಶತಮಾನದಲ್ಲಿ ಬಾಗ್ದಾದ್‌ನ ಖಲೀಫರು ಆಯುರ್ವೇದ ಗ್ರಂಥಗಳನ್ನು ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳಿಗೆ ಅನುವಾದಿಸಲು ಆದೇಶಿಸಿದ್ದ ದಾಖಲೆಗಳನ್ನು ಅವರು ಮುಂದಿಟ್ಟರು..

ಆ ಜ್ಞಾನ ಅರಬ್ ದೇಶಗಳಿಗೆ ಹೋಯಿತು.

ಅಲ್ಲಿಂದ ಯುರೋಪ್ ತಲುಪಿತು.

ಅಂದರೆ,

ಪಾಶ್ಚಾತ್ಯ ಜಗತ್ತಿನ ಆರಂಭಿಕ ರಸಾಯನಶಾಸ್ತ್ರದ ಮೇಲೆ ಭಾರತದ ನೆರಳು ಇತ್ತೆಂದು ಅವರು ದಾಖಲೆಗಳ ಮೂಲಕ ತೋರಿಸಿದರು..

ಇದು ಮಾತ್ರವಲ್ಲ.

ಸುಶ್ರುತನ ಶಸ್ತ್ರಚಿಕಿತ್ಸೆ…

ಚರಕನ ವೈದ್ಯಶಾಸ್ತ್ರ…

ಭಾರತೀಯ ಗಣಿತಜ್ಞರ ಜ್ಯಾಮಿತಿ…

ಎಲ್ಲವನ್ನೂ ಜಗತ್ತಿನ ಮುಂದೆ ಮತ್ತೆ ಪರಿಚಯಿಸಿದರು.

ಬಹಳ ಜನರಿಗೆ ಇದು ಆಶ್ಚರ್ಯವಾಗಿರಬಹುದು.

ಆದರೆ ಜಗತ್ತಿನ ಪ್ರತಿಷ್ಠಿತ “ನೇಚರ್” ಪತ್ರಿಕೆಯೂ ಆಚಾರ್ಯ ರಾಯ್ ಅವರ ಸಂಶೋಧನೆಯನ್ನ ಮೆಚ್ಚಿಕೊಂಡಿತ್ತು..

ಪ್ರಾಚೀನ ಭಾರತದ ವೈಜ್ಞಾನಿಕ ಜ್ಞಾನ, ಜಗತ್ತು ಊಹಿಸಿದ್ದಕ್ಕಿಂತ ಬಹಳ ಮುಂದಿತ್ತು ಎನ್ನುವ ಅರ್ಥದಲ್ಲಿ ಅವರ ಕೆಲಸಕ್ಕೆ ಗೌರವ ಸಲ್ಲಿಸಿತು..

ಆಚಾರ್ಯ ರಾಯ್ ಇತಿಹಾಸವನ್ನು ಓದಿ ಸುಮ್ಮನೆ ಕುಳಿತವರಲ್ಲ..

ಪ್ರಯೋಗಾಲಯಕ್ಕೂ ತಂದರು.

ಪ್ರಾಚೀನ ಭಾರತದ ಲೋಹಶಾಸ್ತ್ರ…

ಔಷಧ ತಯಾರಿಕೆ…

ನೈಸರ್ಗಿಕ ಬಣ್ಣಗಳು…

ಇವೆಲ್ಲವನ್ನೂ ಆಧುನಿಕ ರಸಾಯನಶಾಸ್ತ್ರದ ಮೂಲಕ ಪರೀಕ್ಷಿಸಿದರು.

ಹಳೆಯ ಜ್ಞಾನ+ಹೊಸ ವಿಜ್ಞಾನ..

ಇವೆರಡರ ನಡುವೆ ಸೇತುವೆ ಕಟ್ಟಿದರು!

ಇದೇ ಮಹತ್ಸಾಧನೆ ಎಂದುಕೊಂಡರೆ, ಇದಕ್ಕಿಂತಾ ಮುಖ್ಯವಾದ ಇನ್ನೊಂದು ಕೆಲಸವನ್ನೂ ಮಾಡಿದರು..

ಪ್ರಾಚೀನ ಭಾರತದ ಪ್ರಸಿದ್ಧ ರಸವೈದ್ಯ “ನಾಗಾರ್ಜುನ”ರ ಹೆಸರನ್ನು ಮುಂದಿನ ತಲೆಮಾರಿಗೆ ಪರಿಚಯಿಸಬೇಕು ಅನ್ನೋ ಉದ್ದೇಶದಿಂದ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ₹10,000 ನಿಧಿ ಸ್ಥಾಪಿಸಿದರು!

ಅದೂ ಆ ಕಾಲಕ್ಕೇ!!!

ಪ್ರತಿವರ್ಷ ರಸಾಯನಶಾಸ್ತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ “ನಾಗಾರ್ಜುನ ಪ್ರಶಸ್ತಿ” ನೀಡುವ ವ್ಯವಸ್ಥೆಯನ್ನೇ ನಿರ್ಮಿಸಿದರು.

ಒಬ್ಬ ವಿಜ್ಞಾನಿ ಪ್ರಯೋಗಾಲಯದಲ್ಲಿ ಹೊಸ ಸಂಶೋಧನೆ ಮಾಡಬಹುದು.

ಆದರೆ ಒಬ್ಬ ನಿಜವಾದ ಆಚಾರ್ಯ ಒಂದು ದೇಶ ತನ್ನ ಇತಿಹಾಸದ ಮೇಲೆ ಕಳೆದುಕೊಂಡ ನಂಬಿಕೆಯನ್ನು ಮರಳಿ ಕಟ್ಟುತ್ತಾರೆ..

ಪ್ರಫುಲ್ಲ ಚಂದ್ರ ರಾಯ್ ಮಾಡಿದ್ದು ಅದನ್ನೇ..

ಅವರೇ ಇಲ್ಲದಿದ್ದರೆ,‌ಭಾರತದ ಆತ್ಮಾಭಿಮಾನ ಪುಟಿದೇಳುತ್ತಿರಲಿಲ್ಲ…

ಭಾರತೀಯರಿಗೆ ಪುರಾತನ ಗ್ರಂಥಗಳ ಮೇಲೆ ಈ ಪರಿ ಗೌರವ ಇರುತ್ತಿದ್ದದ್ದೂ ಅನುಮಾನವೇ..

ಅಂದ ಹಾಗೆ, ಆಚಾರ್ಯ ರಾಯ್ ಹುಟ್ಟಿದ್ದು‌ ಇದೇ ಆಗಸ್ಟ್ 2, 1861

ಅವರ ಅಸಾಧಾರಣ ಕೊಡುಗೆ ಬಗ್ಗೆ ನೀವು ಕೇಳೇ ಇರದ ಅನೇಕ ಸಂಗತಿಗಳಿವೆ..

ಮುಂದೊಂದು ದಿನ ಅವುಗಳ ಬಗ್ಗೆ ಖಂಡಿತಾ ಮಾತಾಡೋಣ..

ಏನಂತೀರಾ…

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ